ಪುಟ:Kannadigara Karma Kathe.pdf/೨೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೭೬

ಕನ್ನಡಿಗರ ಕರ್ಮಕಥೆ

ತೋರಿಸುತ್ತೇನೆಂದು ಹೇಳಿ, ಬಂಡಿಗಳನ್ನು ಸಾಗಿಸಿಕೊಂಡು ಹೋದನು. ಮುಂದೆ ತಾಸೆರಡು ತಾಸು. ಬಂಡಿಗಳು ಹೋಗಿರಬಹುದು, ಅಷ್ಟರಲ್ಲಿ ಬಂಡಿಗಳನ್ನು ಸಾಗಿಸಿಕೊಂಡು ಹೋಗುವವನು ಸಿಳ್ಳುಹೊಡೆದನು. ಮುಂದೆ ಸ್ವಲ್ಪ ಹೊತ್ತಿನಲ್ಲಿ ಇಪ್ಪತ್ತು ಇಪ್ಪತ್ತೈದು ಜನರು ಬಂಡಿಯನ್ನು ಸುತ್ತುಗಟ್ಟಿದರು. ಅವರ ಮಾತುಗಳು ನನಗೆ ತಿಳಿಯಲಿಲ್ಲ. ಅವೇನೋ ಕನ್ನಡ ಮಾತುಗಳಂತೆ ! ಮುಂದೆ ಸ್ವಲ್ಪ ಹೊತ್ತಿನಲ್ಲಿ ಮತ್ತೆ ಇಪ್ಪತ್ತು ಇಪ್ಪತ್ತೈದು ಜನರು ಬಂದರು. ಅವರು, ವಿಜಯನಗರದ ದಂಡಾಳುಗಳೆಂದು ಗೊತ್ತಾಯಿತು. ಅವರಲ್ಲಿ ಇಪ್ಪತ್ತು ಇಪ್ಪತ್ತೈದು ಜನರು ನಮ್ಮ ಬಂಡಿಗಳನ್ನು ಕಾಯಲಿಕ್ಕೆ ನಿಂತು, ಉಳಿದವರು ಎತ್ತ ಕಡೆಗೋ ಹೋದರು. ನಮ್ಮವರು ಸ್ವಲ್ಪಜನರು. ಮೇಲೆ ಮುದುಕರು; ಆದ್ದರಿಂದ ವಿಜಯನಗರದ ದಂಡಾಳುಗಳ ಮುಂದೆ ಅವರಾಟ ನಡೆಯಲಿಲ್ಲ. ಜನರ ಈ ಗದ್ದಲವನ್ನು ನೋಡಿ ನಾನು ಬಂಡಿಯಲ್ಲಿ ಸುಮ್ಮನೆ ಮಲಗಿ ಬಿಟ್ಟೆನು. ಬಂಡಿಯ ಒಂದೊಂದು ಮಗ್ಗಲಿಗೆ ಒಬ್ಬೊಬ್ಬರಂತೆ ಅವರು ಕಾಯಲಿಕ್ಕೆ ನಿಂತಿದ್ದರಿಂದ ನನಗೆ ಮಿಸುಕಾಡಲಿಕ್ಕೆ ಸಹ ಆಸ್ಪದ ದೊರೆಯಲಿಲ್ಲ. ಹೀಗೆ ನಾನು ಬಗೆಹರಿಯದ ಚಿಂತೆಯಿಂದ ಮಲಗಿರುಲು. ಬೆಳ್ಳಗೆ ಬೆಳಗಾಯಿತು.

ಬೆಳಗಾದ ಕೂಡಲೆ ವಿಜಯನಗರದ ದಂಡಿನವರು ಬಂಡಿಗಳನ್ನು ಶೋಧಿಸಲುಪಕ್ರಮಿಸಿದರು. ಆಗ ನಾನು ಮೇಲಕ್ಕೆ ಎದ್ದುನಿಂತುಕೊಳ್ಳಲು ಅವರೆಲ್ಲರ ದೃಷ್ಟಿಯು ನನ್ನ ಕಡೆಗೆ ತಿರುಗಿ, ಅವರು ನನ್ನ ಸುತ್ತುಮುತ್ತು ನೆರೆದು ಚೇಷ್ಟೆಮಾಡಹತ್ತಿದರು. ಅವರ ಕನ್ನಡ ಮಾತುಗಳು ನನಗೆ ಸರ್ವಥಾ ತಿಳಿಯುತ್ತಿದ್ದಿಲ್ಲ. ಅಂಥ ಮಾತುಗಳನ್ನು ನಾನು ಹಿಂದಕ್ಕೆ ವಿಜಯನಗರದ ದರ್ಬಾರದಲ್ಲಿ ರಾಮರಾಜನ ಮುಂದೆ ನಿಂತಾಗೂ, ನನ್ನನ್ನು ಆತನು ದಂಡಾಳುಗಳು ಹಿಡಕೊಂಡು ಹೋಗುತ್ತಿರುವಾಗೂ ಮಾತ್ರ ಒಮ್ಮೆ ಕೇಳಿದ್ದೆನು. ನನ್ನನ್ನು ನೋಡಿ ಅವರು “ಈತನು ಹೆಂಗಸಿರಬಹುದೆಂದು ಶಂಕಿಸುತ್ತಲಿದ್ದರು. ಅಷ್ಟರಲ್ಲಿ ನನ್ನ ತೆಲಯ ಮುಂಡಾಸುವು ಕೆಳಗೆ ಬಿದ್ದು, ನನ್ನ ತಲೆಕೂದಲುಗಳು ಬೆನ್ನಮೇಲೆ ಹರವಲು, ಅವರು ನಿಶ್ಯಂಕರಾಗಿ ಮನಸ್ಸಿಗೆ ಬಂದಂತೆ ನನಗೆ ಚೇಷ್ಟೆಮಾಡಿ ನಗಹತ್ತಿದರು. ಮುಂದೆ ಅವರು ನನ್ನನ್ನು ರಾಮರಾಜನ ಮುಂದೆ ನಿಲ್ಲಿಸಲು, ರಾಮರಾಜನು ಕೂಡಲೆ ನನ್ನ ಗುರುತು ಹಿಡಿದನು. ಆಗ ಆ ದುಷ್ಟನು ನನ್ನನ್ನು ಎಷ್ಟು ಹಂಗಿಸಿ ಉಪಹಾಸ ಮಾಡಿ ಮಾತಾಡಿರಬಹುದೆಂಬುದನ್ನು ನೀನೇ ತರ್ಕಿಸು. ಅದನ್ನೆಲ್ಲ ನಾನು ಹೇಳಲಾರೆನು. ಕಡೆಗೆ ಆತನು ಯುದ್ಧ ಮುಗಿದ ಬಳಿಕ ನನ್ನನ್ನು ರಣಮಸ್ತಖಾನನನಿಗೆ ಲಗ್ನ ಮಾಡಿಕೊಡಬೇಕಾಗಿದೆಯೆಂದು ಹೇಳಿ, ನನ್ನನ್ನು