ಪುಟ:Vyshakha.pdf/೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

1

ಓಣೀಲಿ ಸಣ್ಣ ಕಲ್ಲೊಂದ್ನ ವದೀತ ಬತ್ತಾ ಇದ್ದ ಲಕ್ಕನ ತಲೇಲಿ ಎದ್ದೊತ್ನಿಂದ ಒಂದೇ ಇಚಾರ ಚಕ್ಕಲುಬಕ್ಕಲು ಆಕಿತ್ತು. ಬೊಡ್ಡಿ ಮಕ್ಕಳು ಉದ್ದಕ್ಕೂ ನಮ್ಮ ಲಗ್ಗೆ ಚಂಡು ಮಾಡ್ಕಂಡುಬುಟ್ರಲ್ಲ ಅಂತ ಕ್ವಾಪದಿಂದ ಕ್ಯಾಕರ್ಸಿ ಪಕ್ಕದ ಬೇಲಿಗೆ ಉಗುಳ್ದ. ಪಂಚಾತಿಯೋರು ಮಾಡೋ ನ್ಯಾಯದ ದಾಳ ಉಳ್ಳೋದು ಕೊನೀಕೆ ಉತ್ತಮರ ಕಡೀಕೇಯ... ತುಸು ಗಟ್ಯಾಗೆ ಗೋಣಗ್ದ...

ಗೌಡಯ್ಯ ಗಂಗಪ್ನ ಅಟ್ಟೀಲಿ ಇನ್ನೂರು ರೂಪಾಯಿ ಸಾಲಕಾಗಿ ಜೀತಕಿದ್ದ ಬುಂಡನ ಹೈದ, ಆವಯ್ಯ ಗೋಳುಕಿಚ್ಚು ಉಯ್ಯಿಕಾಳಾದ ತಡೀನಾರ್ದೆ, ತಿಂಗಳೊಪ್ಪತ್ನಲ್ಲಿ ಇಂದಕೇ ವಾಪಸು ಬಂದಿದ್ದ... ಜಟಜಟ್ನೆ ಗಂಗಪ್ಪ ಪಂಚಾತಿ ಸೇರ್ಸಿ, ಬುಂಡನ ಹೈದ ತಮ್ಮಟ್ಟೀಗೇ ಜೀತಕೆ ಬರಬೋಕೂಂತ ತಗಾದೆ ಮಾಡ್ದ...

ಪುನಾ ಅರವಟ್ಟಿಗೆ ಬಿಲ್ಕುಲ್ ನಾ ವೋಗಕ್ಕಿಲ್ಲ. ಜಲುಮೆ ಮಾಡಿದ್ರೆ ನ್ಯಾಣು ಆಕತ್ತೀನಿ-ಮುಸ್ಕರ ಊಡ್ತು ಹೈದ... ಮಗನ ಪಟ್ಟು ಬುಂಡನ್ಗೆ ಆಕಾಸ ಬೂಮಿ ಏಡ್ನೂ ಒಂದು ಮಾಡ್ತು. ಚಿಂತೆ ಆತ್ತಿ ಸುಮ್ಕೆ ಕುಂತ.

ಆಗ ಕ್ವಾಟೆ ಬುಳ್ಳಪ್ಪ ಎದೆ ಚಾಚಿಗೊಂಬಂದು ಚೌಕಾಸಿ ಮಾಡಿ ಕ್ವಡಬೇಕಾಗಿದ್ದ ಅರ್ದ ಅಣಕೇ ಹೈದ್ನ ವಸಕ್ಕೆ ತಕ್ಕಂಡಿದ್ದ... ಆ ಕ್ಸಣಕೆ ಉರುದು ಉಪ್ಪಾದರೂವೆ ಗಂಗಪ್ಪ ಜೋಗಿ ಅಂಗೆ ಕಯ್ಯ ಜಾಡಿಸಿ ತೆಪ್ಪಗಾದ...

ಎತ್ತಾಗಿ ವೊಂಟೆ ಮೊಗ?- ಯಾರೋ ಕೇಳಿದ್ದಕೆ, ಇಂಗೇ ವೊಂಟೆ ಅಂದ ಲಕ್ಕ ಓಣೀಲಿ ಬಲಚೂರಿ ತಿರುಗ್ದಾಗ ವೊಲಗೇರಿ ಇಂದ್ಕೇ ಉಳೀತು. ಲಕ್ಕನ ಯೋಚ್ಣೆ ನಡೀತಾನೆ ಇತ್ತು...

ಗೌಡಯ್ನ ಗಂಗಪ್ಪ, ಕ್ವಾಟೆ ಬುಳ್ಳಪ್ಪ ಏಡು ಆಳೂವೆ ವಬ್ಬರಿಗೊಬ್ರು ಮಚ್ಚರಿಸೋದ ಕಂಡು- ಇವ್ರು ಪಾಂಡವರ ಕೌರವ್ರ ವಂಸದೋರೆ ಇರಬೇಕು ಅಂತಿದ್ರು ಊರಿನೋರು!

ಜೀತದ ಆಳ ಹಾರ್ಸಿ ಬುಳ್ಳಪ್ಪ ಉರಿಯೊ ಕೊಳ್ಳೀಗೆ ಮತ್ತೊಂದು ಕೊಳ್ಳೀನೆ ಒಟ್ಟಿದ್ದ. ಆದ್ರೆ ಕೊಳ್ಳೀ ಉರಿ ಘಾಟಿ ಬುಳ್ಳಪ್ಪನ್ನೇನೂ ತಟ್ಟೂವಂಗೇ ಇರ್ನಿಲ್ಲ. ಅದ್ಕೆ ಗುರಿಯಾದೋನು ಮಾತ್ರ ಬುಂಡನ ಹೈದ್ನೇಯ!... ಹಿಂದ್ನ ಸ್ವಾಮಾರ