ತಿರುಕನ ಕನಸು
- ಮುಪ್ಪಿನ ಷಡಕ್ಷರಿ : ಮುಪ್ಪಿನ ಷಡಕ್ಷರಿ: ಇವರು ಕ್ರಿಶ ೧೫೦೦ರ ಸುಮಾರಿಗೆ ಜೀವಿಸಿದ್ದರು. ಕಾವೇರಿ ತೀರದ ಶಂಭುಲಿಂಗ ಬೆಟ್ಟದಲ್ಲಿ ಇವರು ತಪಸ್ಸು ಮಾಡಿದ್ದಾಗಿ ಹೇಳಲಾಗುತ್ತಿದೆ. ಇವರು ಕೊಳ್ಳೆಗಾಲದವರು, ಸ್ವರವಚನಗಳ ಸಂಗ್ರಹವಾದ ಸುಭೋದ ಸಾರ ಇವರ ಕೃತಿ. ಇವರು ನಿಜಗುಣ ಶಿವಯೋಗಿಗಳ ಸಮಕಾಲೀನರೆಂದು ವಿದ್ವಜ್ಜನರ ಅಭಿಪ್ರಾಯ
ತಿರುಕನ ಕನಸು[ಸಂಪಾದಿಸಿ]
ತಿರುಕನೋರ್ವನೂರ ಮುಂದೆ
ಮುರುಕು ಧರ್ಮಶಾಲೆಯಲ್ಲಿ
ಒರಗಿರುತ್ತಲೊಂದು ಕನಸ ಕಂಡನೆಂತೆನೆ |
ಪುರದ ರಾಜ ಸತ್ತರವಗೆ
ವರಕುಮಾರರಿಲ್ಲದಿರಲು
ಕರಿಯ ಕೈಗೆ ಕುಸುಮಮಾಲೆಯಿತ್ತು ಪುರದೊಳು || ೧ ||
ನಡೆದು ಯಾರ ಕೊರಳಿನಲ್ಲಿ
ತೊಡರಿಸುವದೊ ಅವರ ಪಟ್ಟ
ಕೊಡೆಯರನ್ನು ಮಾಳ್ಪೆವೆಂದು ಬಿಟ್ಟರಲ್ಲಿಯೆ |
ಒಡನೆ ತನ್ನ ಕೊರಳಿನಲ್ಲಿ
ತೊಡರಿಸಲ್ಕೆ ಕಂಡು ತಿರುಕ
ಪೊಡವಿಯಾಣ್ಮ ನಾದೆನೆಂದು ಹಿಗ್ಗುತಿರ್ದನು || ೨ ||
ಪಟ್ಟವನ್ನು ಕಟ್ಟಿ ನೃಪರು
ಕೊಟ್ಟರವಗೆ ಕನ್ಯೆಯರನು
ನೆಟ್ಟನವನು ರಾಜ್ಯವಾಳ್ದ ಕನಸಿನಲ್ಲಿಯೇ |
ಭಟ್ಟನಿಗಳ ಕೂಡಿ ನಲ್ಲ
ನಿಷ್ಟ ಸುಖದೊಳಿರಲವನ್ಗೆ
ಹುಟ್ಟಿ ಹೆಣ್ಣು ಗಂಡು ಮಕ್ಕಳಾದುವಾಗಲೇ || ೩ ||
ಓಲಗದಲಿರುತ್ತ ತೊಡೆಯ
ಮೇಲೆ ಮಕ್ಕಳಾಡುತಿರಲು
ಲೀಲೆಯಿಂದ ಚಾತುರಂಗ ಬಲವ ನೋಡುತ |
ಲೋಲನಾಗಿ ನುಡಿದನಿನಿತು
ಕೇಳು ಮಂತ್ರಿ ಸುತರುಗಳಿಗೆ
ಬಾಲೆಯರನು ನೋಡಿ ಮಾಡುವೆ ಮಾಡಬೇಕೆಲೆ || ೪ ||
ನೋಡಿ ಬನ್ನಿರೆನಲು ಜೀಯ
ನೋಡಿ ಬಂದೆವೆನಲು ಬೇಗ
ಮಾಡು ಮದುವೆ ಮಂಟಪದೊಳು ಸಕಲ ಕಾರ್ಯವ |
ಗಾಢವಾಗೆ ಸಂಭ್ರಮಗಳು
ಮಾಡುತಿದ್ದ ಮದುವೆಗಳನು
ಕೂಡಿದಖಿಳ ರಾಜರೆಲ್ಲ ಮೆಚ್ಚುವಂದದಿ || ೫ ||
ಧನದ ಮದವು ರಾಜ್ಯ ಮದವು
ತನುಜಮದವು ಯುವತಿಮದವು
ಜನಿತಮಾಗಿ ಕನಸಿನಲ್ಲಿ ಹಿಗ್ಗುತಿರ್ದನು |
ಅನಿತರೊಳಗೆ ಮುನಿದ ನೃಪರ ದಂಡು
ಮನೆಯ ಮುತ್ತಿದಂತೆಯಾಗೆ
ಕನಸ ಕಾಣುತಿರ್ದ ತಿರುಕ ಹೆದರಿ ಕಣ್ಣ ತೆರೆದನು ||೬ ||
ಮೆರೆಯುತಿದ್ದ ರಾಜ್ಯವೆಲ್ಲ
ಹರಿದು ಹೋಯಿತೆನುತ ತಿರುಕ
ಮರಳಿ ನಾಚಿ ಬೇಡುತಿದ್ದ ಹಿಂದಿನಂತೆಯೇ ||೭||[೧]
ನೋಡಿ[ಸಂಪಾದಿಸಿ]
ಪರಿವಿಡಿ[ಸಂಪಾದಿಸಿ]
ಕನ್ನಡ ವಿಕಿಸೋರ್ಸ್[ಸಂಪಾದಿಸಿ]
ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ |
ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ
ಉಲ್ಲೇಖ[ಸಂಪಾದಿಸಿ]
- ↑ "ಸುಬೋಧಸಾರ" ಕೃತಿ; ಕವಿ-ಮುಪ್ಪಿನ ಷಡಕ್ಷರಿ