ಪುಟ:Chirasmarane-Niranjana.pdf/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೩೪

ಚಿರಸ್ಮರಣೆ

'ಮಾತೃಭೂಮಿ' ದಿನಪತ್ರಿಕೆಯನ್ನು ಹೊರತೆಗೆದ.
"ಪತ್ರಿಕೆ ಓದುವುದೊಂದು ಹಿರಿತನವೆಂದು ಭಾವಿಸಿದ್ದ ಅಪ್ಪು ಹೇಳಿದ:
"ನಮಗೆ ಪತ್ರಿಕೆ ಓದಿ ಅಭ್ಯಾಸವಿಲ್ಲ."
ಆದರೆ, ಮಾಸ್ತರು ಪತ್ರಿಕೆಯೋದುವುದನ್ನು ದಿನವೂ ಕಾಣುತ್ತಿದ್ದ ಚಿರುಕಂಡನಿಗೆ ತಮಗೆ ಆ ಅಭಾಸವಿಲ್ಲವೆಂದು ಒಪ್ಪಿಕೊಳ್ಳುವುದು ಅಭಿಮಾನದ ವಿಷಯವಾಗಿ ತೋರಲಿಲ್ಲ.
ಅಂಗಡಿಯವನು ಮುಂದುವರಿಸಿದ: "ಒಳ್ಳೆಯವರು ನೀವು! ಶಾಲೆಗೆ ಹೋಗಿ ವಿದ್ಯೆ ಕಲಿತದ್ದಾದರೂ ಯಾಕೆ? ಪತ್ರಿಕೆಯೋ ಪುಸ್ತಕವೋ ಓದ್ತಾ ಇದ್ದರೆ ಅಕ್ಷರಜ್ಞಾನವಾದರೂ ಉಳೀತದೆ. ಇಲ್ದಿದ್ರೆ ಮರೆತುಬಿಡ್ತೀರಾ!"
ಅಪ್ಪುವಿಗೂ ಅದು ಹೌದೆನಿಸಿ ಆತ ಖಿನ್ನನಾದ. ಮಾತು ಮುಗಿಸಿ ಅಂಗಡಿಯವನು ಪತ್ರಿಕೆಯನ್ನು ಮುಂದಕ್ಕೆ ಚಾಚಿದಾಗ, ಚಿರುಕಂಡ ಅದನ್ನು ಪಡೆದುಕೊ೦ಡ.
"ಚಿರುಕಂಡ ಅಂದರೆ ನೀನೇ ಅಲ್ವಾ?"
ಅಂಗಡಿಯವನ ಈ ಪ್ರಶ್ನೆ ಕೇಳಿ ಚಿರುಕಂಡನಿಗೂ ಆಶ್ಚರ್ಯವಾಯಿತು. ಅಪ್ಪುವಿಗೂ ಆಶ್ಚರ್ಯವಾಯಿತು.
“ಹ್ಯಾಗೆ ತಿಳೀತು ನಿಮಗೆ?"
ಅಂಗಡಿಯವನು ನಕ್ಕ.
"ಊಹಿಸಿ ಹೇಳ್ದೆ. ದಪ್ಪಗಿರೋನು ಅಪ್ಪು, ತೆಳ್ಳಗಿರೋನು ಚಿರುಕಂಡ ಇರಬಹುದೂ೦ತ."
"ಸರಿ! ಸರಿ!"
ಅಂಗಡಿಯವನ ತಮಾಷೆಯ ಪ್ರವೃತ್ತಿ ಕಂಡು ಹುಡುಗರಿಗೆ ಖುಷಿಯಾಯಿತು. ಚಿರುಕಂಡ ತೆರೆದು ನೋಡುತ್ತಿದ್ದ ಪತ್ರಿಕೆಯತ್ತ ಅಪ್ಪುವೂ ದೃಷ್ಟಿ ಹಾಯಿಸಿದ. ಓದುವುದು ಸುಲಭವಾಗಿತ್ತು.ಆದರೆ ಆ ಪದಗಳೆಲ್ಲ ವಿಚಿತ್ರವಾಗಿದ್ದುವು.ಓದಿದಾಗ ಯಾವ ಅರ್ಥವೂ ಅಪ್ಪುವಿಗೆ ಆಗಲಿಲ್ಲ. ಆತ ದೃಷ್ಟಿಯನ್ನು ಪತ್ರಿಕೆಯಿಂದ ತೆಗೆದು ಅಂಗಡಿಯಾಚೆ ಹೊರಗೆ-ನೋಡಿದ. ಅಲ್ಲೇ ಸ್ವಲ್ಪ ಆಚೆಗೆ, ಗೇರುಬೀಜದ ಗೋಡ೦ಬಿಯ-ಮರಗಳು, ಒ೦ದೆರಡು ಮಾವು,ಕಾಡುಮರಗಳು ಕೆಲವು, ಅವುಗಳನ್ನು ಬಳಸಿಕೊ೦ಡು ಪೊದೆ ಪೊದರುಗಳನ್ನು ಹಾದು ಏರಿ ಇಳಿದು ಹೊಗುತ್ತಿದ್ದ ಕಾಲು ಹಾದಿ… ಅದನ್ನೆಲ್ಲ ನೋಡಿದ ಬಳಿಕ ಅಪ್ಪು ಮತ್ತೆ ಪತ್ರಿಕೆಯನ್ನು ದಿಟ್ಟಿಸಿದ. ಚಿರುಕಂಡ ಪತ್ರಿಕೆಯನ್ನೋದುವುದರಲ್ಲೆ ಮನಸ್ಸು