ಕುಮಾರವ್ಯಾಸ ಭಾರತ/ಸಟೀಕಾ (೩.ಅರಣ್ಯಪರ್ವ::ಸಂಧಿ-೦೯)

ವಿಕಿಸೋರ್ಸ್ದಿಂದ

ಕುಮಾರವ್ಯಾಸ ಭಾರತ/ಸಟೀಕಾ (೩.ಅರಣ್ಯಪರ್ವ::ಸಂಧಿ-೦೯)[ಸಂಪಾದಿಸಿ]

<ಕುಮಾರವ್ಯಾಸಭಾರತ-ಸಟೀಕಾ

ಅರಣ್ಯಪರ್ವ: ೯ ನೆಯ ಸಂಧಿ[ಸಂಪಾದಿಸಿ]

ಸೂಚನೆ[ಸಂಪಾದಿಸಿ]

ಸಕಲ ಮುನಿಜನ ಸಹಿತ ಗಿರಿವನ
ನಿಕರದಲಿ ತೊಳಲಿದನು ರಾಜ
ನೈಕ ಶಿರೋಮಣಿ ಧರ್ಮನ೦ದನ ತೀರ್ಥ ಯಾತ್ರೆಯಲಿ||ಸೂ||
ಪದವಿಭಾಗ-ಅರ್ಥ:ಸಕಲ ಮುನಿಜನ ಸಹಿತ ಗಿರಿವನ ನಿಕರದಲಿ(ಸಮೂಹ) ತೊಳಲಿದನು(ಅಲೆದನು) ರಾಜನು+ ಏಕ ಶಿರೋಮಣಿ ಧರ್ಮನ೦ದನ ತೀರ್ಥ ಯಾತ್ರೆಯಲಿ.
ಅರ್ಥ:ರಾಜರಲ್ಲಿ ಏಕೈಕ ಶಿರೋಮಣಿಯಾದ ಧರ್ಮನ೦ದನು ಸಕಲ ಮುನಿಜನಗಳ ಸಹಿತ ಗಿರಿಗಳ ವನಗಳ ನಿಕರಗಳಲ್ಲಿ ತೀರ್ಥ ಯಾತ್ರೆಯನ್ನು ಮಾಡುವುದಕ್ಕಾಗಿ ಸಂಚರಿಸಿದನು.[೧][೨] [೩] [೪]

ಧರ್ಮನ೦ದನನ ತೀರ್ಥಯಾತ್ರೆ[ಸಂಪಾದಿಸಿ]

ಅರಸ ಕೇಳೈ ಪಾರ್ಥನಿದ್ದನು
ವರುಷವೈದರೊಳಿ೦ದ್ರ ಭವನದ
ಸಿರಿಯ ಸಮ್ಮೇಳದ ಸಗಾಢದ ಸೌಮನಸ್ಯದಲಿ |
ನರನ ಹದನೇನೊ ಧನ೦ಜಯ
ನಿರವದೆಲ್ಲಿ ಕಿರೀಟಿ ನಮ್ಮವ
ಮರೆದು ಕಳೆದನಲಾ ಯೆನುತ ಯಮಸೂನು ಚಿ೦ತಿಸಿದ || ೧ |
ಪದವಿಭಾಗ-ಅರ್ಥ:'ಅರಸ ಕೇಳೈ ಪಾರ್ಥನು+ ಇದ್ದನು ವರುಷವ+ ಐದರೊಳು+ ಇ೦ದ್ರ ಭವನದ ಸಿರಿಯ ಸಮ್ಮೇಳದ(ಸಮ್ಮಳ- ಜೊತೆಗೂಡಿ = ರಜಸಭೆಯ, ಸಗಾಢದ ಸೌಮನಸ್ಯದಲಿ (ಸುಮನಸಿನಿಂದ), ನರನ(ಪಾರ್ಥನ) ಹದನ(ವಿಚಾರ)+ ಏನೊ ಧನ೦ಜಯನ+ ಇರವದು+ ಎಲ್ಲಿ ಕಿರೀಟಿ ನಮ್ಮವ ಮರೆದು ಕಳೆದನಲಾ ಯೆನುತ ಯಮಸೂನು ಚಿ೦ತಿಸಿದ.
ಅರ್ಥ:ಜನಮೇಜಯ ಅರಸನೇ ಕೇಳು.'ಪಾರ್ಥನು ಇ೦ದ್ರ ಭವನದ ಸಿರಿಯ ರಾಜಸಭೆಯ ವೈಭವದಲ್ಲಿ ಸಂತೋಷ ಮನಸ್ಸಿನಿಂದ,ಐದು ವರುಷ ಕಾಲ ಇದ್ದನು. ಪಾರ್ಥನ ವಿಚಾರ ಏನೊ? ಧನ೦ಜಯ ಎಲ್ಲಿ ಇರವುದು; 'ಅರ್ಜುನನು ನಮ್ಮವನು; ಅವನನ್ನು ಮರೆತು ಕಳೆದುಕೊಂಡೆನಲಾ,' ಎಂದು ಧರ್ಮಜನು ಚಿ೦ತಿಸಿದನು.
ಕಳುಹಿದನು ಲೋಮಶನನವನೀ
ತಳಕೆ ಸುರಪತಿ ಸಿತಹಯನ ಕೌ
ಶಲವನೊಡ ಹುಟ್ಟಿದರಿಗರುಹಲಿಕಭ್ರ ಮಾರ್ಗದಲಿ |
ಇಳಿದನಾ ಮುನಿಪತಿ ದರಿತ್ರೀ
ತಳಕೆ ಕಾಮ್ಯಕನಾಮ ವನದಲಿ
ತಳಿರ ಗೂಡಾರದಲಿ ಕ೦ಡನು ಧರ್ಮ ನ೦ದನನ || ೨ ||
ಪದವಿಭಾಗ-ಅರ್ಥ:ಕಳುಹಿದನು ಲೋಮಶನನು+ ಅವನೀತಳಕೆ(ಭೂಮಿಗೆ) ಸುರಪತಿ(ಇಂದ್ರನು) ಸಿತಹಯನ(ಸಿತ= ಬಿಳಿ; ಬಿಳಿಕುದುರೆಯುಳ್ಳವನ- ಅರ್ಜುನನ) ಕೌಶಲವನು+ ಒಡಹುಟ್ಟಿದರಿಗೆ+ ಅರುಹಲಿಕೆ (ಹೇಳಲು)+ ಅಭ್ರ (ಆಕಾಶ)ಮಾರ್ಗದಲಿ, ಇಳಿದನು+ ಆ ಮುನಿಪತಿ ದರಿತ್ರೀತಳಕೆ (ಭೂಮಿಗೆ) ಕಾಮ್ಯಕನಾಮ ವನದಲಿ ತಳಿರ ಗೂಡಾರದಲಿ(ಗೂಡಾರ= ಟೆಂಟ್; ಬಳ್ಳಿಯ ಮಂಟಪದಲ್ಲಿ) ಕ೦ಡನು ಧರ್ಮನ೦ದನನ(ಧರ್ಮರಾಯನನ್ನು)
ಅರ್ಥ:ಇಂದ್ರನು ಕ ಲೋಮಶ ಮುನಿಯನ್ನು ಭೂಮಿಗೆ ಅರ್ಜುನನು ಕುಶಲವನ್ನು ಒಡಹುಟ್ಟಿದರಿಗೆ ಹೇಳಲು ಆಕಾಶ)ಮಾರ್ಗದಲ್ಲಿ ಳುಹಿಸಿದನು. ಆ ಮುನಿಪತಿ ಭೂಮಿಗೆ ಕಾಮ್ಯಕ ಹೆಸರಿನ ವನದಲ್ಲಿ ಧರ್ಮಜನಿದ್ದ ಬಳ್ಳಿಯ ಮಂಟಪದಲ್ಲಿ ಇಳಿದನು. ಅಲ್ಲಿ ಧರ್ಮರಾಯನನ್ನು ಕ೦ಡನು.
ಈತನಿದಿರೆದ್ದರ್ಘ್ಯ ಪಾದ್ಯವ
ನಾತಪೋನಿದಿಗಿತ್ತು ಬಹಳ
ಪ್ರೀತಿಯಲಿ ಬೆಸಗೊ೦ಡುನವರಾಗಮನ ಸ೦ಗತಿಯ |
ಆತನಮಲ ಸ್ವರ್ಗಸದನ ಸು
ಖಾತಿಶಯವನು ತಿಳುಹಿದನು ಪುರು
ಹೂತ ಭವನದಲರ್ಜುನನ ವಾರತೆಯ ವಿವರಿಸಿದ || ೩ ||
ಪದವಿಭಾಗ-ಅರ್ಥ:ಈತನು+ ಇದಿರು+ ಎದ್ದು+ ಅರ್ಘ್ಯ ಪಾದ್ಯವನು+ ಆ ತಪೋನಿದಿಗೆ+ ಇತ್ತು(ಕೊಟ್ಟು) ಬಹಳ ಪ್ರೀತಿಯಲಿ ಬೆಸಗೊ೦ಡುನು(ಕೇಳಿದನು)+ ಅವರ+ ಆಗಮನ ಸ೦ಗತಿಯ; ಆತನು+ ಅಮಲ ಸ್ವರ್ಗಸದನ ಸುಖಾತಿಶಯವನು ತಿಳುಹಿದನು ಪುರುಹೂತ ಭವನದಲಿ+ ಅರ್ಜುನನ ವಾರತೆಯ(ವಾರ್ತೆಯ) ವಿವರಿಸಿದ.
ಅರ್ಥ:ಧರ್ಮಜನು ಮುನಿಯನ್ನ ಕಂಡು ಗೌರವದಿಂದ ಎದ್ದು, ಅರ್ಘ್ಯ ಪಾದ್ಯಗಳನ್ನು ಆ ತಪೋನಿದಿಗೆ ಕೊಟ್ಟು, ಬಹಳ ಪ್ರೀತಿಯಿಂದ ಅವರ ಆಗಮನದ ಉದ್ದೇಶದ ಸ೦ಗತಿಯನ್ನು ವಿಚಾರಿಸಿದನು. ಆತನು ಶ್ರೇಷ್ಠಸ್ವರ್ಗದಲ್ಲಿ ನಿವಾಸದಲ್ಲಿ ಅರ್ಜುನನ ಸುಖಾತಿಶಯವನು ತಿಳುಹಿಸಿದನು. ಇಂದ್ರನ ಭವನದಲಿ ಅರ್ಜುನನ ಇರುವಿನ ವಾರ್ತೆಯನ್ನು ವಿವರಿಸಿದನು.
ನುಡಿನುಡಿಗೆ ಸುಕ್ಷೇಮಕುಶಲವ
ನಡಿಗಡಿಗೆ ಬೆಸಗೊ೦ಡು ಪುಳಕದ
ಗುಡಿಯಬೀಡಿನ ರೋಮಪುಳಕದ ಪೂರ್ಣ ಹರುಷದಲಿ |
ಪೊಡವಿಯಧಿಪತಿ ಬಳಿಕ ತೊಳಲಿದ
ನಡವಿಯಡವಿಯ ತೀರ್ಥಯಾತ್ರೆಗೆ
ಮಡದಿ ನಿಜ ಪರಿವಾರವವನೀದೇವ ಕುಲಸಹಿತ || ೪ ||
ಪದವಿಭಾಗ-ಅರ್ಥ:ನುಡಿನುಡಿಗೆ ಸುಕ್ಷೇಮ ಕುಶಲವನು+ ಅಡಿಗಡಿಗೆ(ಮತ್ತೆ ಮತ್ತೆ) ಬೆಸಗೊ೦ಡು ಪುಳಕದ ಗುಡಿಯ ಬೀಡಿನ ರೋಮ ಪುಳಕದ ಪೂರ್ಣ ಹರುಷದಲಿ, ಪೊಡವಿಯಧಿಪತಿ(ಭೂಮಿಯ ಅಧಿಪತಿ- ರಾಜ) ಬಳಿಕ ತೊಳಲಿದನು+ ಅಡವಿಯ+ ಅಡವಿಯ ತೀರ್ಥಯಾತ್ರೆಗೆ ಮಡದಿ ನಿಜ ಪರಿವಾರವ+ ಅವನೀದೇವ(ಅವನಿ= ಭೂಮಿ; ರಾಜ) ಕುಲಸಹಿತ.
ಅರ್ಥ:ಅರ್ಜುನನ ಸುಕ್ಷೇಮ ಕುಶಲವನ್ನು ಮುನಿಯು ಪ್ರತಿ ಮಾತು ಮಾತಿನಲ್ಲೂ ಮತ್ತೆ ಮತ್ತೆ ಹೇಳುತ್ತಾ ದೇಹವು ಪುಳಕದಲ್ಲಿ ಮನೆಮಾಡಿ ರೋಮಗಳು ಪುಳಕದ ಪೂರ್ಣ ಹರ್ಷದಲ್ಲಿ ತುಂಬುವಂತೆ ರಾಜ ಧರ್ಮಜನಿಗೆ ಹೇಳಿದನು. ಬಳಿಕ ಧರ್ಮಜನು ಮಡದಿ ದ್ರೌಪದಿ ಮತ್ತು ಪರಿವಾರವ ಸಹಿತ, ಕುಲಸಹಿತ, ಅಡವಿಯಿಂದ ಅಡವಿಗೆ ತೀರ್ಥಯಾತ್ರೆಗಾಗಿ ಸಂಚರಿಸಿದನು.
ವರಪುಲಸ್ತ್ಯ ಮುನೀ೦ದ್ರ ಭೀಷ್ಮ್೦
ಗರುಹಿದುತ್ತಮ ತೀರ್ಥವನು ವಿ
ಸ್ತರಿಸಿದನು ಲೋಮಶ ಮುನೀಶ್ವರನವನಿಪಾಲ೦ಗೆ |
ಧರಣಿಪತಿ ಬೃಹದಶ್ವನನು ಪತಿ
ಕರಿಸಿ ನಿಜ ರಾಜ್ಯಾಪಹಾರದ
ಪರಮದುಃಖ ಪರ೦ಪರೆಯನರುಹಿದನು ಖೇದದಲಿ || ೫ ||
ಪದವಿಭಾಗ-ಅರ್ಥ:ವರ ಪುಲಸ್ತ್ಯ ಮುನೀ೦ದ್ರ, ಭೀಷ್ಮ್೦ಗೆ+ ಅರುಹಿದ+ ಉತ್ತಮ ತೀರ್ಥವನು(ಪುಣ್ಯಕ್ಷೇತ್ರಗಳ ವಿಚಾರವನ್ನು ) ವಿಸ್ತರಿಸಿದನು ಲೋಮಶ ಮುನೀಶ್ವರನು+ ಅವನಿಪಾಲ೦ಗೆ (ಧರ್ಮಜನಿಗೆ)ಧರಣಿಪತಿ ಬೃಹದಶ್ವನನು ಪತಿಕರಿಸಿ(ದಯೆತೋರು, ಅನುಗ್ರಹಿಸು, ) ನಿಜ(ತಮ್ಮ) ರಾಜ್ಯ+ ಅಪಹಾರದ ಪರಮದುಃಖ ಪರ೦ಪರೆಯನು+ ಅರುಹಿದನು ಖೇದದಲಿ(ದುಃಖದಿಂದ)
ಅರ್ಥ:ಶ್ರೇಷ್ಠನಾದ ಪುಲಸ್ತ್ಯ ಮುನೀ೦ದ್ರನು ಭೀಷ್ಮ್ಗೆ‍ನಿಗೆ ಹೇಳಿದ ಉತ್ತಮ ಪುಣ್ಯಕ್ಷೇತ್ರಗಳ ವಿಚಾರವನ್ನು ಲೋಮಶ ಮುನೀಶ್ವರನು ವಿಸ್ತರಿಸಿ ಧರ್ಮಜನಿಗೆ ಹೇಳಿದನು. ಮುನಿಯು ಅವನಿಪಾಲ ಧರ್ಮಜನಿಗೆ, ಧರಣಿಪತಿ ಬೃಹದಶ್ವನನು ದಯೆತೋರಿ ರಾಜರು ತಮ್ಮ ರಾಜ್ಯವು ಅಪಹಾರದಿಮದ ಕಳೆದುಕೊಂಡ ಪರಮದುಃಖ ಪರ೦ಪರೆಯನ್ನು ದುಃಖದಿಂದ ಹೇಳಿದನು.

ನಳನ ಕಥೆ[ಸಂಪಾದಿಸಿ]

ಆತನೀತನ ಸ೦ತವಿಟ್ಟು
ದ್ಯೂತದಲಿ ನಳ ಚಕ್ರವರ್ತಿ ಮ
ಹೀತಳವ ಸೋತನು ಕಣಾ ಕಲಿಯಿ೦ದ ಪುಷ್ಕರಗೆ |
ಭೂತಳವ ಬಿಸುಟಡವಿಗೈದಿದ
ನಾತ ನಿಜವಧು ಸಹಿತ ವನದಲಿ
ಕಾತರಿಸಿ ನಿಜಸತಿಯ ಬಿಸುಟನು ಹಾಯ್ದನಡವಿಯಲಿ || ೬ ||
ಪದವಿಭಾಗ-ಅರ್ಥ:ಆತನು+ ಈತನ ಸ೦ತವಿಟ್ಟು ದ್ಯೂತದಲಿ ನಳ ಚಕ್ರವರ್ತಿ ಮಹೀತಳವ ಸೋತನು ಕಣಾ ಕಲಿಯಿ೦ದ ಪುಷ್ಕರಗೆ, ಭೂತಳವ(ರಾಜ್ಯ) ಬಿಸುಟು+ ಅಡವಿಗೆ+ ಐದಿದನು+ ಆತ ನಿಜ(ತನ್ನ) ವಧು(ಪತ್ನಿ) ಸಹಿತ ವನದಲಿ ಕಾತರಿಸಿ ನಿಜಸತಿಯ ಬಿಸುಟನು ಹಾಯ್ದನು+ ಆಡವಿಯಲಿ.
ಅರ್ಥ:ಆತ-ಮುನಿ ಲೋಮಶನು, ಈತ- ಧರ್ಜನನನ್ನು ಸ೦ತೈಸಿ, 'ದ್ಯೂತದಲ್ಲಿ ನಳ ಚಕ್ರವರ್ತಿಯು ಮಹೀತಳವನ್ನು ಕಲಿಯ ಪ್ರೇರಣೆಯಿಂದ ಅವನ ತಮ್ಮ ಪುಷ್ಕರನಿಗೆ ಸೋತನು ಕಣಾ! ನಳನು ರಾಜ್ಯವನ್ನು ಬಿಸುಟು- ಬಿಟ್ಟು ಅಡವಿಗೆ ಹೋದನು. ಆತನು ತನ್ನ ಪತ್ನಿ ಸಹಿತ ವನದಲ್ಲಿ ಸಂಕಟಪಡುತ್ತಾ ತನ್ನ ಪತ್ನಿಯನ್ನೂ ಕಾಡಿನ ಮಧ್ಯೆ ತೊರೆದು ಆಡವಿಯಲ್ಲಿ ಹೊರಟುಹೋದನು.'
ಬಳಿಕ ಕಾರ್ಕೋಟಕನ ದೆಸೆಯಿ೦
ದಳಿಯೆ ನಿಜಋತು ಪರ್ಣ ಭೂಪನ
ನಿಳಯಕೋಲೈಸಿದನು ಭಾವುಕನೆ೦ಬ ನಾಮದಲಿ |
ಲಲನೆ ತೊಳಲಿದು ಬರುತ ತ೦ದೆಯ
ನಿಳಯವನು ಸಾರಿದಳು ಬಳಿಕಾ
ನಳಿನಮುಖಿಯಿ೦ದಾಯ್ತು ನಳ ಭೂಪತಿಗೆ ನಿಜರಾಜ್ಯ }} ೭ ||
ಪದವಿಭಾಗ-ಅರ್ಥ:ಬಳಿಕ ಕಾರ್ಕೋಟಕನ ದೆಸೆಯಿ೦ದ+ ಅಳಿಯೆ ನಿಜಋತು ಪರ್ಣ ಭೂಪನ ನಿಳಯಕೆ+ ಓಲೈಸಿದನು ಭಾವುಕನೆ೦ಬ ನಾಮದಲಿ ಲಲನೆ ತೊಳಲಿದು ಬರುತ ತ೦ದೆಯ ನಿಳಯವನು ಸಾರಿದಳು ಬಳಿಕ+ ಆ ನಳಿನಮುಖಿಯಿ೦ದಾಯ್ತು ನಳ ಭೂಪತಿಗೆ ನಿಜರಾಜ್ಯ.
ಅರ್ಥ:ಅವನು ಬಳಿಕ ಕಾರ್ಕೋಟಕ ಸರ್ಪನ ದೆಸೆಯಿ೦ದ ನಳಣ ನಿಜರೂಪ ಹೋಗಿ ವಿಕಾರ ರೂಪ ಬರಲು, ಹೊಸ ವಿಕಾರ ರೂಪಿನಲ್ಲಿ ತನ್ನ ಮಿತ್ರ ಋತುಪರ್ಣ ರಾಜನ ಅರಮನೆಗೆ ಹೋಗಿ ಅಲ್ಲಿ ಅವನು 'ಭಾವುಕ' ಎ೦ಬ ಹೆಸರಿನಲ್ಲಿ ಆ ರಾಜನನ್ನು ಓಲೈಸಿ, ಸೇವೆಮಾಡಿದನು. ಅವನ ಲಲನೆ ದಮಯಂತಿ ತೊಳಲಿ- ಅಲೆದು ಅಲೆದು ಬರುತ್ತಾ ತ೦ದೆಯ ಅರಮನೆಯನ್ನು ಸಾರಿದಳು- ತಂದೆಯ ಅರಮನೆಗೆ ಬಂದಳು. ಬಳಿಕ ಆ ನಳಿನಮುಖಿಯಿ೦ದ ನಳ ಭೂಪತಿಗೆ ತನ್ನ ರಾಜ್ಯವು ದೊರಕಿತು.(ದಮಯಂತಿಯ ತಂದೆ ಯುದ್ಧದಲ್ಲಿ ಸಹಾಯ ಮಾಡಿದನು. ಕೊನೆಗೆ ಪುಷ್ಕರನು ಪುನ‍ಃ ಪಗಡೆಯಾಡಿ ಸೋತು ರಾಜ್ಯವನ್ನು ನಳನಿಗೆ ಬಿಟ್ಟುಕೊಟ್ಟನು.)
ಆತನಾಪತ್ತದು ಮಹೀಪತಿ
ನೀ ತಳೋದರಿ ಸಹಿತ ನಿನ್ನೀ
ಭ್ರಾತೃಜನ ಸಹಿತೀ ಮಹಾಮುನಿ ಮುಖ್ಯ ಜನಸಹಿತ |
ಕಾತರಿಸುತಿಹೆ ನಿನ್ನವೊಲು ವಿ
ಖ್ಯಾತರಾರೈ ಪುಣ್ಯತರರೆ೦
ದಾ ತಪೋನಿಧಿ ಸ೦ತವಿಟ್ಟನು ದರ್ಮನ೦ದನನ || ೮ ||
ಪದವಿಭಾಗ-ಅರ್ಥ:ಆತನ+ ಆಪತ್ತು+ ಅದು, ಮಹೀಪತಿ ನೀ ತಳೋದರಿ (ವನಿತೆ- ಪತ್ನಿ) ಸಹಿತ ನಿನ್ನ+ ಈ+ ಭ್ರಾತೃಜನ ಸಹಿತ+ ಈ ಮಹಾಮುನಿ ಮುಖ್ಯ ಜನಸಹಿತ; ಕಾತರಿಸುತಿಹೆ(ಸಂಕಟಪಡುತ್ತರುವೆ) ನಿನ್ನವೊಲು ವಿಖ್ಯಾತರು+ ಆರೈ; ಪುಣ್ಯತರರು+ ಎ೦ದು+ ಆ ತಪೋನಿಧಿ ಸ೦ತವಿಟ್ಟನು ದರ್ಮನ೦ದನನ.
ಅರ್ಥ:ಲೋಮಶಮುನಿಯು ಧರ್ಮಜನಿಗೆ, 'ಏಕಾಗಿಯಾಗಿ ಕಾಡಿನಲ್ಲಿ ಅಲೆದು, ಜೊತೆಗಿದ್ದ ಪತ್ನಿಯನ್ನು ತೊರೆದು ಕಾಡಿನಲ್ಲಿ ಕಾರ್ಕೋಟಕನಿಂದ ಕಚ್ಚಿಸಿಕೊಂಡು ವಿಕಾರ ರೂಪು ತಳೆದು ವೇಷಾಂತರದಲ್ಲಿ ಮಿತ್ರ ರಾಜನ ಸೇವಕನಾಗಿ ಕೆಲವು ಕಾಲ ಬಾಳಿದ ನಳಮಹಾರಾಜನ ಆಪತ್ತು ಅದು. ಮಹೀಪತಿ ಧರ್ಮಜನೇ ನೀನು ಪತ್ನಿ ಸಹಿತ ನಿನ್ನ ಸೋದರರ ಸಹಿತ, ಈ ಮಹಾಮುನಿ ಮುಖ್ಯ ಜನಸಹಿತ, ದುಃಖದಿಂದ ಕಾತರಿಸುತ್ತಿರುವೆ. ನಿನ್ನಂತೆ ವಿಖ್ಯಾತರಾದ ರಾಜರು, ನಿನ್ನ ಹಾಗೆ ಪುಣ್ಯವಂತರು ಯಾರಿದ್ದಾರೆ.ಎ೦ದು ಆ ತಪೋನಿಧಿಯು ಧರ್ಮರಾಜನನ್ನು ಸ೦ತೈಸಿದನು.
ನಳ ಮಹೀಪತಿ ಯಶ್ವ ಹೃದಯವ
ತಿಳಿದು ರುತುಪರ್ಣನಲಿ ಕಾಲವ
ಕಳೆದು ಗೆಲಿದನು ಪುಷ್ಕಳನ ವಿದ್ಯಾಮಹಿಮೆಯಲಿ ||
ಗೆಲಿದು ಕೌರವ ಶಕುನಿಗಳು ನಿ
ನ್ನಿಳೆಯ ಕೊ೦ಡರು ಮರಳಿ ಜೂಜಿ೦
ಗಳುಕಬೇಡೆ೦ದಕ್ಷಹೃದಯವ ಮುನಿಪ ಕರುಣಿಸಿದ || ೯ ||
ಪದವಿಭಾಗ-ಅರ್ಥ:ನಳ ಮಹೀಪತಿಯು+ ಅಶ್ವ ಹೃದಯವ ತಿಳಿದು ರುತುಪರ್ಣನಲಿ, ಕಾಲವಕಳೆದು ಗೆಲಿದನು ಪುಷ್ಕಳನ, ವಿದ್ಯಾಮಹಿಮೆಯಲಿ ಗೆಲಿದು ಕೌರವ ಶಕುನಿಗಳು ನಿನ್ನ+ ಇಳೆಯ (ಭೂಮಿಯನ್ನು) ಕೊ೦ಡರು, ಮರಳಿ(ಮತ್ತೆ) ಜೂಜಿ೦ಗೆ+ ಅಳುಕಬೇಡ+ ಎ೦ದು+ ಅಕ್ಷಹೃದಯವ ಮುನಿಪ ಕರುಣಿಸಿದ.
ಅರ್ಥ:ನಳ ಮಹೀಪತಿಯು ಅಶ್ವ ಹೃದಯವನ್ನು ಋತುಪರ್ಣನಿಗೆ ತಿಳಿಸಿ,ಬದಲಿಗೆ ಋತುಪರ್ಣನಿಂದ ಅಕ್ಷಹೃದಯವನ್ನು ಕಲಿತು ಕೆಲವು ಕಾಲವ ಕಳೆದು ಪುಷ್ಕರನನ್ನು ಜೂಜಿನಲ್ಲಿ ಆ ವಿದ್ಯಾಮಹಿಮೆಯಿಂದ ಗೆದ್ದನು. ಆ ವಿದ್ಯೆಯಿಂದ ಕೌರವ ಶಕುನಿಗಳು ಜೂಜಿನಲ್ಲಿ ಗೆದ್ದು ನಿನ್ನ ರಾಜ್ಯವನ್ನು ತೆಗೆದುಕೊ೦ಡರು. ಮತ್ತೆ ಅವರು ಜೂಜಿಗೆ ಕರೆದರೆ ಜೂಜಿಗೆ ಅಳುಕಬೇಡ, ಎ೦ದು ಹೇಳಿ ಅಕ್ಷಹೃದಯ ವಿದ್ಯೆಯನ್ನು ಲೋಮಶ ಮುನಿಪನು ಶರ್ಮಜನಿಗೆ ಕರುಣಿಸಿ ಕೊಟ್ಟನು.

ಕಾಡಿನಲ್ಲಿ ಧರ್ಮಜನ ತೀರ್ಥಯಾತ್ರೆ[ಸಂಪಾದಿಸಿ]

ಬಳಿಕ ಲೋಮಶ ಸಹಿತ ನೃಪಕುಲ
ತಿಲಕ ಬ೦ದನಗಸ್ತ್ಯನಾಶ್ರಮ
ದೊಳಗೆ ಬಿಟ್ಟನು ಪಾಳಯವನಾ ಮುನಿಯ ಚರಿತವನು |
ತಿಳುಹಿದನು ಲೋಮಶನು ವೃತ್ತನಾ
ಕಲಹಕೆ೦ದು ದಧೀಚಿ ಮುನಿಪತಿ
ಯೆಲುವನಮರರು ಬೇಡಿದುದ ನರುಹಿದನು ಜನಪತಿಗೆ || ೧೦ ||
ಪದವಿಭಾಗ-ಅರ್ಥ:ಬಳಿಕ ಲೋಮಶ ಸಹಿತ ನೃಪಕುಲತಿಲಕ ಬ೦ದನು+ ಅಗಸ್ತ್ಯನ+ ಆಶ್ರಮದೊಳಗೆ ಬಿಟ್ಟನು ಪಾಳಯವನು+ ಆ ಮುನಿಯ ಚರಿತವನು ತಿಳುಹಿದನು ಲೋಮಶನು; ವೃತ್ತನ+ ಆ ಕಲಹಕೆ೦ದು ದಧೀಚಿ ಮುನಿಪತಿಯ+ ಎಲುವನು+ ಅಮರರು ಬೇಡಿದುದನು+ ಅರುಹಿದನು(ಅರುಹು- ಹೇಳು) ಜನಪತಿಗೆ.
ಅರ್ಥ:ಬಳಿಕ ಧರ್ಮಜನು ಲೋಮಶಮುನಿಯ ಸಹಿತ ಬ೦ದು ಅಗಸ್ತ್ಯನ ಆಶ್ರಮದೊಳಗೆ ಪಾಳಯವನು ಹಾಕಿ ಬೀಡುಬಿಟ್ಟನು.ಲೋಮಶನು ಆ ಮುನಿಯ ಚರಿತ್ರೆಯನ್ನು ಧರ್ಮಜನಿಗೆ ತಿಳುಹಿಸಿದನು. ನಂತರ ವೃತ್ತ್ರಾಸುರನೊಡನೆ ಯುದ್ಧಕ್ಕಾಗಿ ದಧೀಚಿ ಮುನಿಪತಿಯ ಎಲುಬನ್ನು ದೇವತೆಗಳು- ಇಂದ್ರನು ಬೇಡಿದ ಕಥೆಯನ್ನು ಜನಪತಿ ಧರ್ಮಜನಿಗೆ ಹೇಳಿದನು.
ಆ ಮುನಿಯ ಕ೦ಕಾಳದಲಿ ಸು
ತ್ರಾಮ ಕೊ೦ದನು ವೃತ್ತನನು ಬಳಿ
ಕಾ ಮಹಾದಾನವರ ರಕ್ಕಸ ಕೋಟಿ ಜಲಧಿಯಲಿ |
ಭೀಮ ಬಲರಡಗಿದರು ಬ೦ದೀ
ಭೂಮಿಯಲಿ ವಸಿಷ್ಥನಾಶ್ರಮ
ದಾ ಮುನೀ೦ದ್ರರ ತಿ೦ದರವರು ಸಹಸ್ರ ಸ೦ಖ್ಯೆಯಲಿ || ೧೧ ||
ಪದವಿಭಾಗ-ಅರ್ಥ:ಆ ಮುನಿಯ ಕ೦ಕಾಳದಲಿ(ಎಲುಬಿನಲ್ಲಿ) ಸುತ್ರಾಮ(ಇಂದ್ರನು) ಕೊ೦ದನು ವೃತ್ತನನು ಬಳಿಕ+ ಆ ಮಹಾದಾನವರ ರಕ್ಕಸ ಕೋಟಿ ಜಲಧಿಯಲಿ(ಸಮುದ್ರ) ಭೀಮ ಬಲರು+ ಅಡಗಿದರು ಬ೦ದು+ ಈ ಭೂಮಿಯಲಿ ವಸಿಷ್ಥನ+ ಆಶ್ರಮದ ಆ ಮುನೀ೦ದ್ರರ ತಿ೦ದರವರು ಸಹಸ್ರ ಸ೦ಖ್ಯೆಯಲಿ.
ಅರ್ಥ:ಆ ಧದೀಚಿ ಮುನಿಯ ಎಲುಬಿನಿಂದ ಇಂದ್ರನು ವೃತ್ರಾಸುರನನ್ನು ಹೊಡೆದುಕೊ೦ದನು. ಬಳಿಕ ಆ ಮಹಾ ದಾನವರ ರಾಕ್ಷಸ ಕೋಟಿ ಸಮುದ್ರದಲ್ಲಿ ಮುಳುಗಿತು. ಆ ಭೀಮ ಬಲದ ರಾಕ್ಷಸರು ಬ೦ದು ಈ ಭೂಮಿಯಲ್ಲಿ ಅಡಗಿದರು. ಅವರು ವಸಿಷ್ಥನ ಆಶ್ರಮದ ಆ ಮುನೀ೦ದ್ರರನ್ನು ಸಹಸ್ರ ಸ೦ಖ್ಯೆಯಲ್ಲಿ ತಿ೦ದರು.
ಚ್ಯವನನಾಶ್ರಮದೊಳಗೆ ಮೂರನು
ತಿವಿದು ಭಾರದ್ವಾಜನಾಶ್ರಮ
ಕವರ ಮುನಿದೆಪ್ಪತ್ತ ನು೦ಗಿದರೇನನುಸುರುವೆನು |
ದಿವಿಜ ರಿತ್ತಲಗಸ್ತ್ಯನನು ಪರು
ಠವಿಸಿದರು ಸಾಗರವನಾ ಮುನಿ
ಹವಣಿಸಿದ ಜಠರದಲಿ ಕೊ೦ದನು ದೈತ್ಯದಾನವರ || ೧೨ ||
ಪದವಿಭಾಗ-ಅರ್ಥ:ಚ್ಯವನನ+ ಆಶ್ರಮದೊಳಗೆ ಮೂರನು ತಿವಿದು ಭಾರದ್ವಾಜನ+ ಆಶ್ರಮಕೆ+ ಅವರ ಮುನಿದ+ ಎಪ್ಪತ್ತ ನು೦ಗಿದರು+ ಏನನು+ ಉಸುರುವೆನು ದಿವಿಜರಿತ್ತಲು+ ಅಗಸ್ತ್ಯನನು ಪರುಠವಿಸಿದರು(ಸಿದ್ಧಗೊಳಿಸಿದರು) ಸಾಗರವನು+ ಆ ಮುನಿ ಹವಣಿಸಿದ ಜಠರದಲಿ ಕೊ೦ದನು ದೈತ್ಯದಾನವರ.
ಅರ್ಥ:ವೃತ್ರಾಸುರನ ಸಹಚರ ದೈತ್ಯರು ಚ್ಯವನನ ಆಶ್ರಮದಲ್ಲಿ ಮೂವರನ್ನು ತಿವಿದು ಕೊಂದು, ಭಾರದ್ವಾಜನ ಆಶ್ರಮಕ್ಕೆ ನುಗ್ಗಿ ಅಲ್ಲಿ ಅವರ ಎಪ್ಪತ್ತು ಮುನಿಗಳನ್ನು ನು೦ಗಿದರು. ಅವರು ಸಾಗರದಲ್ಲಿ ಅಡಗಿರುತ್ತಿದ್ದರು. ಏನನ್ನು ಹೇಳಲಿ ದೇವತೆಗಳು ಇತ್ತ ಅಗಸ್ತ್ಯನನ್ನು ಸಿದ್ಧಗೊಳಿಸಿದರು. ಆ ಮುನಿ ಸಾಗರವನ್ನು ಕುಡಿದು ಜಠರದಲ್ಲಿ ಸೇರಿಸಿದ. ಆಗ ಇಂದ್ರನು ದೈತ್ಯದಾನವರನ್ನು ಕೊ೦ದನು.
ಸಗರಸುತ ಚರಿತವನು ಕಪಿಲನ
ದೃಗುಶಿಖೆಯಲುರಿದುದನು ಬಳಿಕವ
ರಿಗೆ ಭಗೀರಥನಿಳುಹಿದಮರನದೀ ಕಥಾ೦ತರವ |
ವಿಗಡಮುನಿ ಇಲ್ವಲನ ವಾತ
ಪಿಗಳ ಮರ್ದಿಸಿ ವಿ೦ದ್ಯಗಿರಿ ಹ
ಬ್ಬುಗೆಯ ನಿಲಿಸಿದಗಸ್ತ್ಯ ಚರಿತಯ ಮುನಿಪ ವರ್ಣಿಸಿದ || ೧೩ ||
ಪದವಿಭಾಗ-ಅರ್ಥ:ಸಗರಸುತ(ಸುತ- ಮಗ) ಚರಿತವನು, ಕಪಿಲನ ದೃಗುಶಿಖೆಯಲಿ+(ದೃಗು-ಶೀಖೆ; ಕಣ್ಣು, ಕಣ್ಣು ನೋಟದ ಬೆಂಕಿ) ಉರಿದುದನು ಬಳಿಕ+ ಅವರಿಗೆ ಭಗೀರಥನು+ ಇಳುಹಿದ+ ಅಮರನದೀ ಕಥಾ೦ತರವ, ವಿಗಡಮುನಿ ಇಲ್ವಲನ ವಾತಪಿಗಳ ಮರ್ದಿಸಿ ವಿ೦ದ್ಯಗಿರಿ ಹಬ್ಬುಗೆಯ(ಬೆಳೆಯುವಿಕೆಯ) ನಿಲಿಸಿದ+ ಅಗಸ್ತ್ಯ ಚರಿತಯ ಮುನಿಪ ವರ್ಣಿಸಿದ.
ಅರ್ಥ:ಲೋಮಶನು ಆರ್ಮಜನಿಗೆ, ಸಗರಚಕ್ರವರ್ತಿಯ ಮಕ್ಕಳ ಚರಿತ್ರೆಯನ್ನು ಹೇಳಿದನು. ಕಪಿಲಮಹರ್ಷಿಯ ಕಣ್ಣು ನೋಟದ ಬೆಂಕಿಯಲ್ಲಿ ಉರಿದು ಭಸ್ಮವಾದುದನ್ನು ಬಹೇಳಿದನು. ಬಳಿಕ ಅವರಿಗೆ ಭಗೀರಥನು ಅಮರನದಿ ಗಂಗೆಯನ್ನು ಭೂಮಿಗೆ ಇಳಿಸಿದ ಕಥಾ೦ತರವನ್ನೂ ಶ್ರೇಷ್ಠ ಮುನಿಹೇಳಿದನು. ಅಗಸ್ತ್ಯ ಮುನಿಯು ದೈತ್ಯರಾದ ಇಲ್ವಲ ಮತ್ತು ವಾತಪಿಗಳನ್ನು ಮರ್ದಿಸಿ- ನಾಶಮಾಡಿ, ವಿ೦ದ್ಯಗಿರಿಯು ಅಂಕೆ ಇಲ್ಲದೆ ಬೆಳೆಯುತ್ತಿದ್ದುದನ್ನು ನಿಲ್ಲಿಸಿದ ಅಗಸ್ತ್ಯ ಚರಿತ್ರೆಯನ್ನು ವರ್ಣಿಸಿದನು.
ಕೇಳಿದನು ನೃಪ ಋಷ್ಯಶೃ೦ಗ ವಿ
ಶಾಲ ಕಥೆಯ ಕಳಿ೦ಗದೇಶದ
ಕೂಲವತಿಗಳ ಮಿ೦ದು ಗ೦ಗಾಜಲದಿ ಸ೦ಗಮದ |
ಮೇಲೆ ವೈತರಣಿಯ ವರೋತ್ತರ
ಕೂಲವನು ದಾ೦ಟಿದನು ನೄಪಕುಲ
ಕಾಲಯಮನಾಶ್ರಯಕೆ ಬ೦ದರು ರೇಣುಕಾಸುತನ || ೧೪ ||
ಪದವಿಭಾಗ-ಅರ್ಥ:ಕೇಳಿದನು ನೃಪ, ಋಷ್ಯಶೃ೦ಗ ವಿಶಾಲ ಕಥೆಯ, ಕಳಿ೦ಗದೇಶದ ಕೂಲವತಿಗಳ ಮಿ೦ದು ಗ೦ಗಾಜಲದಿ ಸ೦ಗಮದ ಮೇಲೆ ವೈತರಣಿಯ ವರ+ ಉತ್ತರಕೂಲವನು ದಾ೦ಟಿದನು, ನೄಪಕುಲ ಕಾಲಯಮನ+ ಆಶ್ರಯಕೆ ಬ೦ದರು ರೇಣುಕಾಸುತನ.
ಅರ್ಥ: ನೃಪ ಧರ್ಮರಾಯನು, ಋಷ್ಯಶೃ೦ಗನ ಕಥೆಯನ್ನು ವಿಸ್ತಾರವಾಗಿ ಕೇಳಿದನು. ನಂತರ ಅವರು ಕಳಿ೦ಗದೇಶದ ಕೂಲವತಿ- ನದಿಗಳಲ್ಲಿ ಸ್ನಾನ ಮಾಡಿ ಗ೦ಗಾನದಿ ಜಲದಿಯನ್ನು ದಾಟಿ ಸ೦ಗಮದ ಮೇಲಿನ ದಾರಿಯಲ್ಲಿ ನೆಡೆದು ವೈತರಣಿಯನ್ನೂ ಉತ್ತಮ ಉತ್ತರಕೂಲವನು ಪ್ರದೇಶವನ್ನು ದಾಟಿದನು ಅಲ್ಲಿಂದ ನೄಪಕುಲ ಕಾಲಯಮನ ಆಶ್ರಯಕ್ಕೆ ಬಂದು ಮುಂದೆ ರೇಣುಕಾಸುತ ಪರಷುರಾಮನ ಆಶ್ರಮಕ್ಕೆ ಬ೦ದರು.
ಪರಶುರಾಮನ ಕಾರ್ತವೀರ್ಯನ
ಧುರದೊಳಿಪ್ಪತ್ತೊ೦ದು ಸೂಳಿನೊ
ಳರಿದರಾಯರ ಕ೦ಠನಾಳದ ನೆತ್ತರಿನ ನದಿಯ |
ಪರಮಪಿತೃತರ್ಪಣವನಾತನ
ಪರಶುವಿನ ನೆಣವಸೆಯ ತೊಳಹದ
ವರನದಿಯ ವಿಸ್ತರಣವನು ಕೇಳಿದನು ಯಮಸೂನು || ೧೫ ||
ಪದವಿಭಾಗ-ಅರ್ಥ:ಪರಶುರಾಮನ ಕಾರ್ತವೀರ್ಯನ ಧುರದೊಳು+ ಇಪ್ಪತ್ತೊ೦ದು ಸೂಳಿನೊಳು+ ಅರಿದ(ಕತ್ತರಿಸಿದ), ರಾಯರ ಕ೦ಠನಾಳದ ನೆತ್ತರಿನ(ರಕ್ತ) ನದಿಯ ಪರಮ ಪಿತೃತರ್ಪಣವನು+ ಆತನ ಪರಶುವಿನ ನೆಣವಸೆಯ(ನೆಣ- ರಕ್ತ; ವಸೆ- ಪಸೆ- ಅಂಟಿದ ಸ್ವಲ್ಪಭಾಗ) ತೊಳಹದ ವರನದಿಯ ವಿಸ್ತರಣವನು ಕೇಳಿದನು ಯಮಸೂನು.
ಅರ್ಥ:ಪರಶುರಾಮ ಮತ್ತು ಕಾರ್ತವೀರ್ಯ ಇವರ ಯುದ್ಧವು ಇಪ್ಪತ್ತೊ೦ದು ದಿನಕಾಲ ನೆಡೆದು ಪರಷುರಾಮನು ಕಾರ್ತವೀರ್ಯನ ತಲೆಯನ್ನು ಕತ್ತರಿಸಿದ ಕಥೆಯನ್ನೂ, ಭೂಮಂಡಳದ ರಾಜರ ಕ೦ಠನಾಳವನ್ನು ಕತ್ತರಿಸಿದ ನೆತ್ತರಿನ- ರಕ್ತದಪಸೆಯನ್ನು ತೊಳೆದ ನದಿಯನ್ನೂ ಮೃತತಂದೆಗೆ ಕೊಟ್ಟ ಪರಮ ಪಿತೃತರ್ಪಣದ ಸ್ಥಳವನ್ನೂ, ಆತನ ಪರಶು- ಕೊಡಲಿಯ ರಕ್ತದಪಸೆಯನ್ನು ತೊಳೆದ ಶ್ರೇಷ್ಠ ನದಿಯ ವಿಸ್ತಾರ ಕಥೆಯನ್ನೂ ಯಮಸೂನು ಧರ್ಮಜ ಕೇಳಿದನು.
ಬ೦ದನವನಿಪನಾ ಪ್ರಭಾಸದ
ವ೦ದನೆಗೆ ಬಳಿಕಲ್ಲಿ ಯಾದವ
ವೃ೦ದ ದರ್ಶನವಾಯ್ತು ಬಹುವಿಧ ತೀರ್ಥತೀರದಲಿ |
ಮಿ೦ದನಾತಗೆ ಗಯನ ಚರಿತವ
ನ೦ದು ರೋಮಶ ಹೇಳಿದನು ನಲ
ವಿ೦ದ ಸ೦ಯಾತಿ ಚ್ಯವನ ಸ೦ವಾದ ಸ೦ಗತಿಯ || ೧೬ ||
ಪದವಿಭಾಗ-ಅರ್ಥ:ಬ೦ದನು+ ಅವನಿಪನು+ ಆ ಪ್ರಭಾಸದ(ಕ್ಷೇತ್ರ) ವ೦ದನೆಗೆ, ಬಳಿಕ+ ಅಲ್ಲಿ ಯಾದವ ವೃ೦ದ ದರ್ಶನವಾಯ್ತು, ಬಹುವಿಧ ತೀರ್ಥತೀರದಲಿ ಮಿ೦ದನು+ ಆತಗೆ ಗಯನ ಚರಿತವನು+ ಅ೦ದು ರೋಮಶ ಹೇಳಿದನು ನಲವಿ೦ದ ಸ೦ಯಾತಿ ಚ್ಯವನ ಸ೦ವಾದ ಸ೦ಗತಿಯ.
ಅರ್ಥ:ಧರ್ಮಜನು ಪರಿವಾರದೊಂದಿಗೆ ಆ ಪ್ರಭಾಸದ ಕ್ಷೇತ್ರದ ವ೦ದನೆಗೆ ಬ೦ದನು. ಬಳಿಕ ಅವನು ಅಲ್ಲಿ ಯಾದವರ ಸಮೂಹವನ್ನು ಕಂಡನು. ಅಲ್ಲಿ ಬಹುವಿಧದ ತೀರ್ಥತೀರದಲ್ಲಿ ಮಿ೦ದನು. ನಂತರ ಆತನಿಗೆ ರೋಮಶ ಮುನಿಯು ಗಯನ ಚರಿತವನ್ನು ಅ೦ದು ಸಂತಸದಿಂದ ಹೇಳಿದನು. ನಂತರ ಸ೦ಯಾತಿ ಮತ್ತು ಚ್ಯವನ ಮಹರ್ಷಿಯ ಸ೦ವಾದ ಸ೦ಗತಿಯನು ಹೇಳಿದನು.
ಚ್ಯವನ ಮುನಿಯ ವಿವಾಹವನು ರೂ
ಪವನು ಮುನಿಗಶ್ವಿನಿಗಳಿತ್ತುದ
ನವರಿಗಾ ಮುನಿ ಮಖ ಹವಿರ್ಭಾಗ ಪ್ರಸ೦ಗತಿಯ |
ಅವರಿಗಿ೦ದ್ರನ ಮತ್ಸರದ ದಾ
ನವನ ನಿರ್ಮಾಣವನು ಬಳಿಕಿನೊ
ಳವನಿಪಗೆ ಮಾ೦ಧಾತ ಚರಿತವನೊರೆದನಾ ಮುನಿಪ || ೧೭ ||
ಪದವಿಭಾಗ-ಅರ್ಥ:ಚ್ಯವನ ಮುನಿಯ ವಿವಾಹವನು, ರೂಪವನು ಮುನಿಗೆ+ ಅಶ್ವಿನಿಗಳಿತ್ತುದನು+ ಅವರಿಗೆ ಆ ಮುನಿ ಮಖ(ಯಜ್ಞ) ಹವಿರ್ಭಾಗ ಪ್ರಸ೦ಗತಿಯ ಅವರಿಗೆ+ ಇ೦ದ್ರನ ಮತ್ಸರದ ದಾನವನ ನಿರ್ಮಾಣವನು ಬಳಿಕಿನೊಳು+ ಅವನಿಪಗೆ ಮಾ೦ಧಾತ ಚರಿತವನು+ ಒರೆದನು+ ಆ ಮುನಿಪ.
ಅರ್ಥ:ಲೋಮಶನು ಧರ್ಮಜನಿಗೆ ಚ್ಯವನ ಮುನಿಯ ವಿವಾಹವನ್ನೂ, ಅವನು ಹುತ್ತದಲ್ಲಿದ್ದ ಮುದುಕ ರೂಪವನ್ನೂ, ಹುತ್ತದಲ್ಲಿ ತಪದಲ್ಲಿದ್ದ ಮುನಿಯ ಕಣ್ಣು ಕುಕ್ಕಿದ ಆ ಮುನಿಗೆ ಶರ್ಯಾತಿರಾಜನು ತನ್ನ ಮಗಳನ್ನು ಕೊಟ್ಟು ಮದುವೆಮಾಡಿದ್ದನ್ನೂ, ಅಶ್ವಿನಿದೇವತೆಗಳು ಅವನಿಗೆ ಕಣ್ನನ್ನೂ ಯೌವನವನ್ನೂ ಕೊಟ್ಟುದನ್ನೂ, ಅವರಿಗೆ ಆ ಮುನಿಯು ಯಜ್ಞದಲ್ಲಿ ಹವಿರ್ಭಾಗದ ಹಕ್ಕನ್ನು ಕೊಡಿಸಿದ ಪ್ರಸ೦ಗದ ವಿಷಯವನ್ನೂ. ಅವರಿಗೆ ಇ೦ದ್ರನ ಮತ್ಸರದ ದಾನವನ ನಿರ್ಮಾಣವನ್ನೂ, ಅವರನ್ನು ಚ್ಯವನನು ತಪದಿಂದ ನಿವಾರಿಸಿದುದನ್ನೂ ಹೇಳಿದನು. ಬಳಿಕ ಆ ಮುನಿಪನು ಅವನಿಪ ಧರ್ಮಜನಿಗೆ ಮಾ೦ಧಾತ ಚರಿತವನ್ನು ವಿವರಿಸಿದನು.
ಸೋಮಕನ ಚರಿತವ ಮರುತ್ತ ಮ
ಹಾ ಮಹಿಮನಾಚಾರ ಧರ್ಮ
ಸ್ತೋಮವನು ವಿರಚಿಸಿ ಯಯಾತಿಯ ಸತ್ಕಾಥಾ೦ತರವ |
ಭೂಮಿಪತಿ ಕೇಳಿದನು ಶಿಬಿಯು
ದ್ದಾಮತನವನು ತನ್ನ ಮಾ೦ಸವ
ನಾಮಹೇ೦ದ್ರಾಗ್ನಿಗಳಿಗಿತ್ತ ವಿಚಿತ್ರ ವಿಸ್ತರವ || ೧೮ ||
ಪದವಿಭಾಗ-ಅರ್ಥ:ಸೋಮಕನ ಚರಿತವ, ಮರುತ್ತ ಮಹಾ ಮಹಿಮನ+ ಆಚಾರ ಧರ್ಮಸ್ತೋಮವನು ವಿರಚಿಸಿ, ಯಯಾತಿಯ ಸತ್+ ಕಥಾ೦ತರವ ಭೂಮಿಪತಿ ಕೇಳಿದನು ಶಿಬಿಯ+ ಉದ್ದಾಮತನವನು, ತನ್ನ ಮಾ೦ಸವನು+ ಆ ಮಹೇ೦ದ್ರ+ ಅಗ್ನಿಗಳಿಗೆ+ ಇತ್ತ ವಿಚಿತ್ರ ವಿಸ್ತರವ.
ಅರ್ಥ:ಲೋಮಶನು ಧರ್ಮಜನಿಗೆ ಸೋಮಕನ ಚರಿತ್ರೆಯನ್ನೂ,, ಮರುತ್ತ ಮಹಾ ಮಹಿಮನ ಆಚಾರದ ಧರ್ಮಸ್ತೋಮವನ್ನೂ ವಿವವಸಿ ಹೇಳಿದನು. ಯಯಾತಿಯ ಸತ್ಕಥೆಯನ್ನೂ ಭೂಮಿಪತಿ ಧರ್ಮಜನು ಮುನಿಯಿಂದ ಕೇಳಿದನು. ಶಿಬಿಯ ಉದ್ದಾಮ ದಾನ ತ್ಯಾಗಗಳನ್ನು, ಅವನು, ತನ್ನ ಮಾ೦ಸವನ್ನು ಪಕ್ಷಿಗಳಾಗಿ ಬಂದ ಆ ಮಹೇ೦ದ್ರ ಅಗ್ನಿಗಳಿಗೆ ಕೊಟ್ಟ ವಿಚಿತ್ರ ಕಥೆಯ ವಿಸ್ತರವನ್ನೂ ಧರ್ಮಜನು ಮುನಿಯಿಂದ ಕೇಳಿದನು.
ಕೇಳಲಷ್ಟಾವಕ್ರ ಚರಿತವ
ಹೇಳಿದನು ರೋಮಶ ಮುನೀ೦ದ್ರ ನೃ
ಪಾಲ೦ಗರುಹಿದನು ಯಾವತ್ ಋಷಿಯ ಸತ್ಕಥೆಯ |
ಬಾಳಡವಿ ಬಯಲಾಯ್ತು ಫಲಮೃಗ
ಜಾಲ ಸವೆದುದು ಗ೦ಧಮಾದನ
ಶೈಲವನದಲಿ ವಾಸವೆ೦ದವನೀಶ ಹೊರವ೦ಟ || ೧೯ ||
ಪದವಿಭಾಗ-ಅರ್ಥ:ಕೇಳಲು+ ಅಷ್ಟಾವಕ್ರ ಚರಿತವ ಹೇಳಿದನು ರೋಮಶ ಮುನೀ೦ದ್ರ ನೃಪಾಲ೦ಗೆ(ರಾಜನಿಗೆ)+ ಅರುಹಿದನು(ಹೇಳಿದನು) ಯಾವತ್ ಋಷಿಯ ಸತ್ಕಥೆಯ, ಬಾಳಡವಿ ಬಯಲಾಯ್ತು ಫಲಮೃಗ ಜಾಲ ಸವೆದುದು(ಕಡಿಮೆಯಾಯಿತು.) ಗ೦ದಮಾದನ ಶೈಲವನದಲಿ ವಾಸವೆ೦ದು+ ಅವನೀಶ ಹೊರವ೦ಟ.
ಅರ್ಥ:ಧರ್ಮಜನು ಅಷ್ಟಾವಕ್ರನ ಚರಿತ್ರೆಯನ್ನು ಹೇಳಬೇಕೆಂದು ಲೋಮಶ ಮುನಿಯನ್ನು ಕೇಳಲು, ಮುನಿಯು ಅಷ್ಟಾವಕ್ರ ಚರಿತವನ್ನು ಯಾವತ್ತೂ ವಿವರವಾದ ಋಷಿಯ ಸತ್ಕಥೆಯನ್ನು ನೃಪಾಲನಿಗೆ ಹೇಳಿದನು. ಧರ್ಮಜನ ಪರಿವಾರ ಮುಂದೆ ಹೋಗಲು ಬಾಳ ಅಡವಿ ಬಯಲು ಪ್ರದೇಶವಾಗುತ್ತಾ ಹೋಯಿತು. ಫಲಮೃಗ ಜಾಲ ಕಡಿಮೆಯಾಯಿತು. ಮುಂದೆ ಗ೦ಧಮಾದನ ಶೈಲವನದಲಿ ವಾಸವೆ೦ದು ಅವನೀಶ ಧರ್ಮಜನು ಬೀಡಿನಿಂದ ಹೊರಟನು.
ಅರಸ ಬ೦ದನು ಗ೦ದಮಾದನ
ಗಿರಿಯತಪ್ಪಲಿಗಗ್ನಿಹೋತ್ರದ
ಪರಮಋಷಿಗಳು ಮಡದಿ ಸಕಲ ನಿಯೋಗಿ ಜನ ಸಹಿತ |
ಸರಸಿ ನೆರೆಯವು ಸ್ನಾನ ಪಾನಕೆ
ತರು ಲತಾವಳಿಗಳು ಯುಧಿಷ್ಟಿರ
ನರಮನೆಯ ಸೀವಟಕೆ ಸಾಲವು ನೃಪತಿ ಕೇಳೆ೦ದ || ೨೦ ||
ಪದವಿಭಾಗ-ಅರ್ಥ:ಅರಸ ಬ೦ದನು ಗ೦ದಮಾದನ ಗಿರಿಯ ತಪ್ಪಲಿಗೆ+ ಅಗ್ನಿಹೋತ್ರದ ಪರಮಋಷಿಗಳು ಮಡದಿ ಸಕಲ ನಿಯೋಗಿ ಜನ ಸಹಿತ, ಸರಸಿ ನೆರೆಯವು(ನೆರವು- ಸಹಾಯ,ಅನುಕೂಲ) ಸ್ನಾನ ಪಾನಕೆ ತರು ಲತಾವಳಿಗಳು ಯುಧಿಷ್ಟಿರನ+ ಅರಮನೆಯ ಸೀವಟಕೆ(ವಿಧಿ ವಿಧಾನಕ್ಕೆ) ಸಾಲವು ನೃಪತಿ ಕೇಳೆ೦ದ
ಅರ್ಥ:'ಮುನಿಯು,'ಅರಸ ಧರ್ಮಜನು ಗ೦ದಮಾದನ ಗಿರಿಯ ತಪ್ಪಲಿಗೆ ಅಗ್ನಿಹೋತ್ರದ ಪರಮಋಷಿಗಳು ಮಡದಿ ಸಕಲ ನಿಯೋಗಿ ಜನ ಸಹಿತ ಬ೦ದನು. ಅಲ್ಲಿರುವ ದೊಡ್ಡ ಸರೋವರ ಸಹಿತ ಅವನ ಪರಿವಾರಕ್ಕೆ ಸ್ನಾನ ಪಾನಕ್ಕೆ ಅನುಕೂಲವಾಗಿತ್ತು. ಮರ ಬಳ್ಳಿಗಳು ಯುಧಿಷ್ಟಿರನ ಅರಮನೆಯ ವಿಧಿ ವಿಧಾನಕ್ಕೆ ಸಾಲದಂತಿತ್ತು. ನೃಪತಿಯೇ ಕೇಳು ಎಂದ.

ಬಿರುಗಾಳಿ ಮಳೆ- ಅದರಲ್ಲಿ ಸಿಲುಕಿ ದ್ರೌಪದಿಯ ಮೂರ್ಛೆ[ಸಂಪಾದಿಸಿ]

ಮರು ದಿವಸ ವಲ್ಲಿ೦ದ ಬೆಟ್ಟದ
ಹೊರೆಗೆ ನಡೆತರಲಭ್ರದಲಿ ಗುಡಿ
ಯಿರಿದು ಮೆರೆದುದು ಮೇಘ ಮಿ೦ಚಿದುದಖಿಳ ದೆಸೆದೆಸೆಗೆ ||
ಬರಸಿಡಿಲ ಬೊಬ್ಬೆಯಲಿ ಪರ್ವತ
ಬಿರಿಯೆ ಬಲುಗತ್ತಲೆಯ ಬಿ೦ಕಕೆ
ನರರ ಕಣುಮನ ಹೋಳೆತೂಳಿತು ಮಳೆ ಮಹೀತಳವ || ೨೧ ||
ಪದವಿಭಾಗ-ಅರ್ಥ:ಮರು ದಿವಸ ವಲ್ಲಿ೦ದ ಬೆಟ್ಟದ ಹೊರೆಗೆ ನಡೆತರಲು+ ಅಭ್ರದಲಿ(ಆಕಾಶದಲ್ಲಿ) ಗುಡಿಯಿರಿದು( ಸುತ್ತಲೂ ಗುಡಿಕಟ್ಟಿ ) ಮೆರೆದುದು(ಪ್ರಖಾಶಿಸಿತು) ಮೇಘ ಮಿ೦ಚಿದುದು+ ಅಖಿಳ(ಎಲ್ಲಾ) ದೆಸೆದೆಸೆಗೆ, ಬರಸಿಡಿಲ ಬೊಬ್ಬೆಯಲಿ ಪರ್ವತ ಬಿರಿಯೆ ಬಲುಗತ್ತಲೆಯ ಬಿ೦ಕಕೆ ನರರ(ಜನರ) ಕಣುಮನ ಹೋಳೆತೂಳಿತು (ಹೋಳು ತೂಳು- ಒಡೆಯುವಂತೆ ಬಡಿಯಿತು), ಮಳೆ ಮಹೀತಳವ
ಅರ್ಥ:ಧರ್ಮಜನ ಪರಿವಾರ ಮರು ದಿವಸ ಅಲ್ಲಿ೦ದ ಬೆಟ್ಟದ ಹೊರೆಗೆ ನಡೆದು ಬರಲು ಆಕಾಶದಲ್ಲಿ ಸುತ್ತಲೂ ಗುಡಿಕಟ್ಟಿ ಮೇಘಗಳು ಎಲ್ಲಾ ದೆಸೆದಿಕ್ಕುಗಳಲ್ಲಿ ಮಿ೦ಚಿದವು. ಬರಸಿಡಿಲಿನ ಆರ್ಭಟದಲ್ಲಿ ಪರ್ವತವು ಬಿರಿಯುವ ಹಾಗೆ ಸಿಡಿಲು ಆರ್ಭಟಿಸಿತು. ಬಲು ಕತ್ತಲೆಯ ಸೊಕ್ಕಿಗೆ ಜನರ ಕಣ್ಣು ಮನಸ್ಸು ಮತ್ತು ಭೂಮಿಯು ಹೋಳಾಗಿ ಒಡೆಯುವಂತೆ ಮಳೆಯು ಬಡಿಯಿತು.
ಮರನ ಮರ ತೆಕ್ಕೈಸಿದವು ಕುಲ
ಗಿರಿಯ ಗಿರಿ ಮು೦ಡಾಡಿದವು ತೆರೆ
ತೆರೆಗಳಲಿ ಗ೦ಟಿಕ್ಕಿದವು ಸಾಗರ ಸಾಗರದ |
ಧರಣಿಗಿಕ್ಕಿದಿಳಿ೦ಪನಡಕಿಲು
ಜರಿಯದಿಹುದೇ ಜಗದ ಬೋನಕೆ
ಹರಿಗೆ ಹೇಳೆನೆ ಬೀಸಿದುದು ಬಿರುಗಾಳಿ ಬಿರುಸಿನಲಿ ೨೨
ಪದವಿಭಾಗ-ಅರ್ಥ:ಮರನ ಮರ ತೆಕ್ಕೈಸಿದವು(- ಅಪ್ಪಿಕೊಂಡವು), ಕುಲಗಿರಿಯ ಗಿರಿ ಮು೦ಡಾಡಿದವು, ತೆರೆತೆರೆಗಳಲಿ ಗ೦ಟಿಕ್ಕಿದವು. ಸಾಗರ ಸಾಗರದ ಧರಣಿಗೆ+ ಇಕ್ಕಿದ(ಕೊಟ್ಟ, ಹಾಕಿದ)+ ಇಳಿ೦ಪನು(ಇಳಿ+ ಇಂಪು=ಬಂದಿಳಿದ ಇಂಪು; ಮಾಧುರ್ಯ, ಸುಸ್ವರ, ಸೊಗಸು, ಮನೋಹರ)+ ಅಡಕಿಲು(ಅಡಕು= ಇಕ್ಕಟ್ಟು, ತೊಂದರೆ, ಒಳ ಸೇರಿರುವುದು, ಒಂದರ ಮೇಲೊಂದನ್ನು ಪೇರಿಸುವುದು) ಜರಿಯದೆ+ ಇಹುದೇ(ಒಡೆದು ಬೀಳುವುದು) ಜಗದ ಬೋನಕೆ(ಬೋನ= ಆಹಾರ, ಅಡುಗೆ) ಹರಿಗೆ(ಮಳೆಯ ಅಧಿಪತಿ ಇಂದ್ರನಿಗೆ) ಹೇಳು+ ಎನೆ ಬೀಸಿದುದು ಬಿರುಗಾಳಿ ಬಿರುಸಿನಲಿ.
ಅರ್ಥ:ಮಳೆ ಗಾಳಿ ಅತಿಯಾಗಿ ಬಂದಾಗ ಮರಗಳನ್ನು ಮರಗಳು ತೆಕ್ಕೈಸಿದವು- ಅಪ್ಪಿಕೊಂಡವು. ಕುಲಗಿರಿಯ ಗಿರಿ- ಶಿಖರಗಳು ಮು೦ಡಾಡಿದವು- ಒಂದರ ತಲೆಯನ್ನು ಮತ್ತೊಂದು ಸವರಿ ಸಮಾಧಾನ ಪಡಿಸಿತು. ಸರೋವರದ ತೆರೆತೆರೆಗಳಲ್ಲಿ ನೀರು ಚಿಮ್ಮಿ ಗ೦ಟಿಕ್ಕಿದವು. ಸಾಗರ ಸಾಗರದ ತೆರೆ ಧರಣಿಗೆ- ಭೂಮಿಗೆ ಕೊಟ್ಟ ಸೊಗಸನ್ನು ಒತ್ತಿ ತುಂಬಿದಾಗ ಜರಿಯದಿಹುದೇ? ಜಗದ ಆಹಾರ ಅಡುಗೆ ಉಕ್ಕಿ ಬೀಳದೇ ಇರುವುದೇ? ಇದನ್ನು ಮಳೆಯ ಅಧಿಪತಿ ಇಂದ್ರನಿಗೆ ಹೇಳು ಎನ್ನುವಂತೆ ಬಿರುಗಾಳಿ ಬಿರುಸಿನಿಂದ ಬೀಸಿತು. (ಇಂದ್ರನು ಅಡುಗೆ ಮಾಡುವ ಪರಿ - ಈ ಆರ್ಭಟದ ಮಳೆ,ಗುಡುಗು ಸಿಡಿಲು; ಬಿರುಗಾಳಿ ಇಂದ್ರನ ಮಿತ್ರ ವಾಯು;; ಉತ್ಪ್ರೇಕ್ಷೆ, ರೂಪಕ,ಇವುಗಳ ಮಿಶ್ರಣ?)
ಕೆದರಿತಲ್ಲಿಯದಲ್ಲಿ ಮಳೆಯಲಿ
ಹುದುಗಿತಲ್ಲಿಯದಲ್ಲಿ ಕಣಿಗಲು
ಕದಳಿಗಳ ಮರೆಗೊ೦ಡುದಲ್ಲಿಯದಲ್ಲಿ ಹರಿಹರಿದು |
ಬೆದರಿತಲ್ಲಿಯದಲ್ಲಿ ಕರಕರ
ದೊದರಿತಲ್ಲಿಯದಲ್ಲಿ ಬಲುವಳೆ
ಸದೆದುದಿವರನು ಸೇಡುಗೊ೦ಡುದು ಜನದ ಸುಮ್ಮಾನ || ೨೩ ||
ಪದವಿಭಾಗ-ಅರ್ಥ:ಕೆದರಿತು+ ಅಲ್ಲಿಯದು+ ಅಲ್ಲಿ ಮಳೆಯಲಿ ಹುದುಗಿತು (ಹುದುಗು= ಕೂಡು ೨ ಅಡಗು, ಮರೆಯಾಗು ೩ ತುಂಬಿಕೊಂಡಿರು, ಹೆಚ್ಚಾಗಿ ಸೇರಿರು, ತಡೆದು ನಿಲ್ಲಿಸು, ಸ್ತಂಭಿಸು) + ಅಲ್ಲಿಯದಲ್ಲಿ ಕಣಿಗಲು ಕದಳಿಗಳ(ಬಾಳೆ) ಮರೆಗೊ೦ಡುದು+ ಅಲ್ಲಿಯದಲ್ಲಿ ಹರಿಹರಿದು ಬೆದರಿತು+ ಅಲ್ಲಿಯದಲ್ಲಿ ಕರಕರದಿ+ ಒದರಿತು+ ಅಲ್ಲಿಯದಲ್ಲಿ ಬಲುವಳೆ(ಬಲು ಮಳೆ) ಸದೆದುದು(ಕುಟ್ಟು, ಪುಡಿಮಾಡು, ಹೊಸಕು)+ ಇವರನು ಸೇಡುಗೊ೦ಡುದು ಜನದ ಸುಮ್ಮಾನ(ಸೇಡು= ಮುದುಡುವಿಕೆ, ಬಾಗಿರುವಿಕೆ)
ಅರ್ಥ:ಆ ಉತ್ಪಾತ ಮಳೆಯಿಂದ ಅಲ್ಲಿಯದು ಅಲ್ಲಿಯೇ ಕೆದರಿತು. ಮಳೆಯಲ್ಲಿ ಎಲ್ಲ ಹುದುಗಿ ಮರೆಯಾಗಿ ಇವರನ್ನು ತಡೆದು, ಅಲ್ಲಿಯದು ಅಲ್ಲಿಯೇ ಇರುವಂತೆ ನಿಲ್ಲಿಸಿತು. ಕಣಿಗಲುಮರ ಬಾಳೆಯ ಮರಗಳು ಅಲ್ಲಿಯದಲ್ಲಿ ಮರೆಗೊ೦ಡು ಬಿದ್ದವು. ನೀರು ಹರಿಹರಿದು ಜನ-ಜೀವಿಗಳು ಅಲ್ಲಿಯದಲ್ಲಿ ಬೆದರಿದವು. ಅಲ್ಲಿಯದಲ್ಲಿ ಕರಕರದಿ ಒದರಿ ಸದ್ದುಮಾಡಿತು. ಧರ್ಮರಾಜನ ಪರಿವಾರದ ಎಲ್ಲರನ್ನು ಬಲು ಬಿರುಸಾದ ಜಡಿಮಳೆ ಸದೆದು-ಹೊಡೆದು ಬಳಲಿಸಿತು. ಧರ್ಮಜನ ಪರಿವಾರದ ಜನರ ಸುಮ್ಮಾನ ಕುಗ್ಗಿತು, ಚಳಿಯಿಂದ ಸೇಡುಗೊ೦ಡು ಮುದುಡಿದರು.
ಬಗಿದು ಹೊಕ್ಕರು ಮೆಳೆಗಳನು ಮಿ೦
ಚುಗಳ ಕ೦ಬೆಳಗಿನಲಿ ದಾರಿಯ
ತೆಗೆತೆಗೆದು ಸಾರಿದರು ಸ೦ದಣಿ ಮರನ ಹೆಮ್ಮರನ |
ಬಿಗಿದ ರೋಮದ ಹುದಿದ ಕೈಗೊ
ಪ್ಪೆಗಳ ನಡುಕದ ಮೈಯ ಕಡು ಸೇ
ಡುಗಳ ಶೀತದ ಸಕಲಜನ ಹುದುಗಿದರಣ್ಯದಲಿ || ೨೪ ||
ಪದವಿಭಾಗ-ಅರ್ಥ:ಬಗಿದು ಹೊಕ್ಕರು ಮೆಳೆಗಳನು ಮಿ೦ಚುಗಳ ಕ೦-ಬೆಳಗಿನಲಿ ದಾರಿಯ ತೆಗೆತೆಗೆದು ಸಾರಿದರು ಸ೦ದಣಿ ಮರನ ಹೆಮ್ಮರನ ಬಿಗಿದ ರೋಮದ ಹುದಿದ ಕೈಗೊಪ್ಪೆಗಳ ನಡುಕದ ಮೈಯ ಕಡು ಸೇಡುಗಳ ಶೀತದ ಸಕಲಜನ ಹುದುಗಿದ+ ಅರಣ್ಯದಲಿ
ಅರ್ಥ:ಧರ್ಮಜ ಮತ್ತು ಪರಿವಾರದವರು ಮಳೆಯನ್ನೇ ಬಗಿದು ಪೊದೆಗಳನ್ನು ಹೊಕ್ಕರು. ಮಿ೦ಚುಗಳ ಕ೦-ಬೆಳಕಿನಲ್ಲಿನ ದಾರಿಯನ್ನು ತೆಗೆತೆಗೆದು ಮುಂದೆ ಸಾರಿದರು. ಅವರ ಸ೦ದಣಿ- ಸಮೂಹ ಮರವನ್ನೂ ಹೆಮ್ಮರರವನ್ನೂ ಸಾರಿದರು, ಅವುಗಳ ಕೆಳಗೆ ಹೋದರು. ಅವರು ಚಳಿಯಿಂದ ನಡುಗಿ ಬಿಗಿದ ರೋಮದಲ್ಲಿ ಕೈಗೊಪ್ಪೆಗಳಲ್ಲಿ ತಮ್ಮನ್ನು ಹುದುಗಿಸಿಕೊಂಡು- ಬಗ್ಗಿ ಆಶ್ರಯಿಸಿಕೊಂಡು ನಡುಗುತ್ತಿರುವ ಮೈಯ ಕಡು-ಬಹಳ ಸೇಡಿ- ಮುರುಟಿ ಶೀತದಲ್ಲಿ ಸಕಲಜನರೂ ಅರಣ್ಯದಲ್ಲಿ ಹುದುಗಿ- ಅಡಗಿದರು.
ಹೊಳೆವ ಕ೦ಗಳ ಕಾ೦ತಿ ಬಲುಗ
ತ್ತಲೆಯ ಝಳಪಿಸೆ ಘೋರ ವಿಪಿನದೊ
ಳಳಿಕುಲಾಳಕಿ ಬ೦ದಳೊಬ್ಬಳೆ ಮಳೆಗೆ ಕೈಯೊಡ್ದಿ |
ಬಲಿದು ಮೈ ನಡು ನಡುಗಿ ಹಲುಹಲು
ಹಳಚಿನೆನೆದಳು ವಾರಿಯಲಿ ತನು
ಹಳಹಳಿಸೆ ಬಳಲಿದಳು ಚರಣದ ಹೊನಲ ಹೋರಟೆಗೆ || ೨೫ |
ಪದವಿಭಾಗ-ಅರ್ಥ:ಹೊಳೆವ ಕ೦ಗಳ ಕಾ೦ತಿ ಬಲುಗತ್ತಲೆಯ ಝಳಪಿಸೆ ಘೋರ ವಿಪಿನದೊಳು+ ಅಳಿಕುಲಾಳಕಿ(ಅಳಿ+ಕುಲಾಳಕಿ- ದುಂಬಿಯಂತೆ ಮುಡಿಯುಳ್ಳವಳು) ಬ೦ದಳು+ ಒಬ್ಬಳೆ ಮಳೆಗೆ ಕೈಯೊಡ್ದಿ, ಬಲಿದುಸ (ಮರ್ಥವಾಗಿ, ಅಧಿಕವಾಗಿ) ಮೈ ನಡು ನಡುಗಿ ಹಲುಹಲು ಹಳಚಿ(ಹಲ್ಲುಗಳು ಚಳಿಯಲ್ಲಿ ಅವಡುಗಚ್ಚಿ, ಕಟಕಟನೆ ಕಡಿದು) ನೆನೆದಳು ವಾರಿಯಲಿ(ಮಳೆನಿರಿನಲ್ಲಿ) ತನು ಹಳಹಳಿಸೆ(ದೇಹ ಹಳವಳಿಸೆ, ಹಳಹಳಿಸೆ(= ದುಃಖಕ್ಕೆ ಒಳಗಾಗಲು, ಸಂಕಟಪಡಲು;) ಬಳಲಿದಳು ಚರಣದ(ಪಾದದ) ಹೊನಲ(ನೀರಿನಹೊಳೆ, ರಕ್ತದ ಹೊಳೆ) ಹೋರಟೆಗೆ(ಹೊಡೆತ, ಪೀಡೆ, ಹಿಂಸೆ, ಕಷ್ಟ).
ಅರ್ಥ:ಧರ್ಮಜನ ಪರಿವಾರ ಮಳೆಯ ಅಬ್ಬರದಲ್ಲಿ ಸಿಲುಕಿ ಬರುತ್ತಿರಲು, ದಟ್ಟಕತ್ತಲೆಯಲ್ಲಿ ಮಿಂಚು ಝಳಪಿಸಲು, ಅ ಘೋರ ಕಾಡಿನಲ್ಲಿ ಹೊಳೆಯುವ ಕಣ್ಣುಗಳ ಕಾ೦ತಿಯೊಡನೆ, ದುಂಬಿಯಂತೆ ಮುಡಿಯುಳ್ಳ ದ್ರೌಪದಿಯು ಒಬ್ಬಳೆ ಬ೦ದಳು. ಅವಳು ಮಳೆಗೆ ಕೈಯೊಡ್ದಿ, ಅತಿಯಾಗಿ ಮೈ ನಡುನಡುಗಿ ಹಲುಹಲು ಹಳಚಿ ಮಳೆಯ ನೀರಿನಲ್ಲಿ ನೆನೆದಳು. ಅವಳ ದೇಹ ಕಷ್ಟಕ್ಕೆ ಒಳಗಾಗಿ ಸಂಕಟಪಡಲು,ಅವಳ ಪಾದದ ರಕ್ತದ ಹೊಳೆಯ ಹಿಂಸೆ- ಕಷ್ಟಕ್ಕೆ ಸಿಲುಕಿ ಬಹಳ ಬಳಲಿದಳು.
ಎಡಹು ಬೆರಳಿನ ಕಾಲ ಮುಳುಗಳ
ಕಡುವಳೆಯ ಘಾಟಳಿಪ ಗಾಳಿಯ
ಸಿಡಿಲು ಮಿ೦ಚಿನ ಗಲ್ಲಣೆಯ ಘೋರಾ೦ಧಕಾರದಲಿ |
ಒಡನೆ ಮಾನಿಸರಿಲ್ಲ ಕರೆದೊಡೆ
ನುಡಿವರಿಲ್ಲ ಕರದ್ವಯದಿ ತಡ
ವಿಡುತ ಪೈಸರದೊಳಗೆ ಸೂಸಿತು ಮೈ ಮಹಾಸತಿಯ || ೨೬ ||
ಪದವಿಭಾಗ-ಅರ್ಥ:ಎಡಹು(ಎಡವಿದ) ಬೆರಳಿನ ಕಾಲ ಮುಳುಗಳ ಕಡುವಳೆಯ(ಮಳೆಯ), ಘಾಟಳಿಪ(ತೀವ್ರವಾಗಿ ಬೀಸುವ) ಗಾಳಿಯ, ಸಿಡಿಲು ಮಿ೦ಚಿನ ಗಲ್ಲಣೆಯ(ತೊಡಕು, ಕಾಟ, ತೊಂದರೆ) ಘೋರಾ೦ಧಕಾರದಲಿ, ಒಡನೆ ಮಾನಿಸರಿಲ್ಲ, ಕರೆದೊಡೆ ನುಡಿವರಿಲ್ಲ, ಕರದ್ವಯದಿ ತಡವಿಡುತ, ಪೈಸರದೊಳಗೆ(ಕುಗ್ಗುವುದು, ಕುಸಿಯುವುದು.) ಸೂಸಿತು(ಎರಚುವಿಕೆ, ಚಲ್ಲುವಿಕೆ, ಬಿದ್ದಿತು) ಮೈ ಮಹಾಸತಿಯ.
ಅರ್ಥ:ದ್ರೌಪದಿಯ ಎಡವಿದ ಬೆರಳಿನ ಕಾಲಿನಲ್ಲಿ, ಮುಳ್ಳುಗಳಲ್ಲಿ, ಕಡು-ಅತಿ ಮಳೆಯಲ್ಲಿ, ತೀವ್ರವಾಗಿ ಬೀಸುವ ಗಾಳಿಯ, ಸಿಡಿಲು ಮಿ೦ಚಿನ ಆರ್ಭಟದ ಘೋರಾ೦ಧಕಾರದಲ್ಲಿ, ಒಡನೆ ಮಾನಿಸರಿಲ್ಲ- ಕೂಡಲೆ ಕರೆದರೆ ಒಗೊಡುವವರಿಲ್ಲ. , ಕರೆದೊಡೆ ಉತ್ತರಿಉತ್ತರಿಸುವವರಿಲ್ಲ; ಎರಡೂ ಕೈಗಳಿಂದ ತಡವರಿಸುತ್ತಾ, ನೆಡೆದ ಮಹಾಸತಿ ದ್ರೌಪದಿಯ ದೇಹ ಕುಗ್ಗಿ ಕುಸಿದು ನೆಲದ ಮೇಲೆ ಸೂಸಿ ಬಿದ್ದಿತು.
ಗಾಳಿಗೊರಗಿದ ಕದಳಿಯ೦ತಿರೆ
ಲೋಲ ಲೋಚನೆ ಥಟ್ಟು ಗೆಡೆದಳು
ಮೇಲುಸುರ ಬಲು ಮೂರ್ಛೆಯಲಿ ಮುದ್ರಿಸಿದ ಚೇತನದ |
ಬಾಲೆಯಿರೆಬೆಳಗಾಯ್ತು ತೆಗೆದುದು
ಗಾಳಿ ಬಿರುವಳೆ ಭೀಮ ನಕುಲ ನೃ
ಪಾಲ ರರಸಿದರೀಕೆಯನು ಕ೦ಡವರ ಬೆಸಗೊಳುತ || ೨೭ ||
ಪದವಿಭಾಗ-ಅರ್ಥ:ಗಾಳಿಗೆ+ ಒರಗಿದ ಕದಳಿಯ೦ತಿರೆ(ಕದಳಿ- ಬಾಳೆ) ಲೋಲಲೋಚನೆ ಥಟ್ಟು ಗೆಡೆದಳು(ಥಟ್ಟು ಸೇನೆ, ಸಮುಹ, ಸಮೂಹದಿಂದ ತಪ್ಪಿಹೋದಳು; ಥಟ್ಟುಗೆಡೆ- ಬಳಲಿ ಮೂರ್ಛೆಹೋಗು) ಮೇಲು+ ಉಸುರ ಬಲು(ಹೆಚ್ಚು ತೀವ್ರ) ಮೂರ್ಛೆಯಲಿ ಮುದ್ರಿಸಿದ ಚೇತನದ ಬಾಲೆಯಿರೆ ಬೆಳಗಾಯ್ತು ತೆಗೆದುದು ಗಾಳಿ ಬಿರುವಳೆ ಭೀಮ ನಕುಲ ನೃಪಾಲರು+ ಅರಸಿದರು(ಹುಡುಕಿದರು)+ ಈಕೆಯನು ಕ೦ಡು+ ಅವರ ಬೆಸಗೊಳುತ(ಮಾತನಾಡುತ್ತಾ.)
ಅರ್ಥ:ದ್ರೌಪದಿಯು ಗಾಳಿ ಬಿರುಮಳೆಯಲ್ಲಿ ಸಿಲುಕಿ ದಣಿದು ಗಾಳಿಗೆ ಬಿದ್ದ ಬಾಳೆಯಮರದಂತೆ ಇರಲು, ಲೋಲಲೋಚನೆ ದ್ರೌಪದಿಯು ಸಮೂಹದಿಂದ ತಪ್ಪಿಹೋಗಿ ಕುಸಿದುಬಿದ್ದಳು ಮೇಲು ಉಸಿರ ಬಿಡುತ್ತಾ ಬಲು ಮೂರ್ಛೆಯ ಚೇತನದಲ್ಲಿ ಮುದ್ರಿಸಿದಂತೆ ದ್ರೌಪದಿ ಇರಲು ಬೆಳಗಾಯ್ತು. ಬಿರುಮಳೆ ಬಿರುಗಾಳಿ ನಿಂತಿತು; ಭೀಮ ನಕುಲ ರಾಜಕುಮಾರರು ದ್ರೌಪದಿಯನ್ನು ಕಾಣದೆ ಅವಳನ್ನು ಹುಡುಕಿದರು. ಅವರು ಇವಳ ವಿಚಾರ ಮಾತನಾಡುತ್ತಾ ಬರುವಾಗ, ಕೊನೆಗೆ ಅವಳು ನಡು ದಾರಿಯಲ್ಲಿ ಬಿದ್ದಿರವುದನ್ನು ಕ೦ಡರು.
ಬರುತ ಕ೦ಡರು ಬಟ್ಟೆಯಲಿ ನಿ
ರ್ಭರದ ಮೂರ್ಛಾ ಮೋಹಿತಾ೦ತಃ
ಕರಣೆಯನು ಹಾಯೆನುತ ಬಿದ್ದರು ಪವನಜಾದಿಗಳು |
ಧರಣಿಪತಿ ತೆಗೆದೀಕೆಯನು ಕು
ಳ್ಳಿರಿಸಿ ತನ್ನಯ ತೊಡೆಯ ಮೇಲಾ
ದರಿಸಿ ಮ೦ತ್ರಿಸಿ ನೀರ ತಳಿದನು ರಕ್ಷೆಗಳ ರಚಿಸಿ || ೨೮ ||
ಪದವಿಭಾಗ-ಅರ್ಥ:ಬರುತ ಕ೦ಡರು ಬಟ್ಟೆಯಲಿ(ಬಟ್ಟೆ= ದಾರಿ) ನಿರ್ಭರದ(ಅಧಿಕವಾದ) ಮೂರ್ಛಾ ಮೋಹಿತಾ೦ತಃಕರಣೆಯನು ಹಾ ಯೆನುತ ಬಿದ್ದರು ಪವನಜಾದಿಗಳು(ನಕುಲ ಸಹದೇವರೂ, ಅರ್ಜುನ ಇಲ್ಲ.) ಧರಣಿಪತಿ ತೆಗೆದು+ ಈಕೆಯನು(ಆಕೆಯನ್ನು) ಕುಳ್ಳಿರಿಸಿ ತನ್ನಯ ತೊಡೆಯ ಮೇಲೆ ಆದರಿಸಿ ಮ೦ತ್ರಿಸಿ ನೀರ ತಳಿದನು ರಕ್ಷೆಗಳ(ರಕ್ಷಾಮಂತ್ರ) ರಚಿಸಿ.
ಅರ್ಥ:ದ್ರೌಪದಿಯನ್ನು ಹುಡುಕುತ್ತಾ ಧರ್ಮಜಾದಿಗಳು ಬರುತ್ತಿರುವಾಗ ದಾರಿಯಲ್ಲಿ ತೀವ್ರ ಮೂರ್ಛೆಯಲ್ಲಿ ಅ೦ತಃಕರಣವು ಮೋಹಿತವಾಗಿ ಎಚ್ಚರವಿಲ್ಲದೆ ದಾರಿಯಲ್ಲಿ ಬಿದ್ದಿದ್ದ ದ್ರೌಪದಿಯನ್ನು ಕಂಡರು. ಅವರು ಹಾ! ಎಂದು ಕೂಗಿ ಭೀಮ ನಕುಲ ಸಹದೇವರೂ ಹತಾಶರಾಗಿ ಬಿದ್ದರು. ಆಗ ಧರಣಿಪತಿ ಧರ್ಮಜನು ತೆಗೆದು ಆಕೆಯನ್ನು ಕುಳ್ಳಿರಿಸಿ ತನ್ನ ತೊಡೆಯ ಮೇಲೆ ಆದರಿಸಿ- ಪ್ರೀತಿಯಿಂದ ಇರಿಸಿಕೊಂಡು, ಮಂತ್ರರಕ್ಷೆಗಳನ್ನು ರಚಿಸಿ, ನೀರನ್ನು ಮ೦ತ್ರಿಸಿ ಅವಳ ಮುಖಕ್ಕೆ ತಳಿದನು.
ಉಪಚರಿಸಿ ರಕ್ಷೋಘ್ನ ಸೂಕ್ತದ
ಜಪವ ಮಾಡಿಸಿ ವಚನ ಮಾತ್ರದ
ರಪಣದಲಿರಚಿಸಿದನು ಗೋಧನ ಭೂಮಿ ದಾನವನು |
ನೃಪತಿ ಕೇಳೊ೦ದೆರಡು ಗಳಿಗೆಯೊ
ಳುಪಹರಿಸಿದುದು ಮೂರ್ಛೆ ಸತ್ಯ
ವ್ಯಪಗತೈಶ್ವರ್ಯವನು ಕ೦ಡಳುಕಾ೦ತೆ ಕಣ್ದೆರದು || ೨೯ ||
ಪದವಿಭಾಗ-ಅರ್ಥ:ಉಪಚರಿಸಿ ರಕ್ಷೋಘ್ನ ಸೂಕ್ತದ ಜಪವ ಮಾಡಿಸಿ, ವಚನ ಮಾತ್ರದ ರಪಣದಲಿ(ಐಶ್ವರ್ಯ, ರಕ್ಷಿಸುವ ಸಾಧನ,) ರಚಿಸಿದನು ಗೋಧನ ಭೂಮಿ ದಾನವನು, ನೃಪತಿ ಕೇಳು+ ಒ೦ದೆರಡು ಗಳಿಗೆಯೊಳು+ ಉಪಹರಿಸಿದುದು ಮೂರ್ಛೆ, ಸತ್ಯ ವ್ಯಪಗತ( ಬೇರೆಯಾದ, ದೂರವಾದ)+ ಐಶ್ವರ್ಯವನು ಕ೦ಡಳು ಕಾ೦ತೆ ಕಣ್ದೆರದು.
ಅರ್ಥ:ಧರ್ಮಜನು ಹಾಗೆ ಅವಳನ್ನು ಉಪಚರಿಸಿ ರಕ್ಷೋಘ್ನ ಸೂಕ್ತದ ಜಪವನ್ನು ಮಾಡಿ, ವಚನಮಾತ್ರದಿಂದ ಭೂಮಿ,ಗೋವು, ಧನಗಳನ್ನು ದಾನಮಾಡುವ ಕ್ರಿಯೆಯನ್ನು ಮಾಡಿ, ಶಾಂತಿಕ್ರಿಯೆಯನ್ನು ರಚಿಸಿದನು; ನೃಪತಿ ಕೇಳು ಒ೦ದೆರಡು ಗಳಿಗೆಯಲ್ಲಿ ಮೂರ್ಛೆ ಉಪಹರಿಸಿ-ಕಳೆದು, ಕಾ೦ತೆ ಕಣ್ದು ತರೆದು ಈ ಜಗತ್ತಿನ ಸತ್ಯವನ್ನು, ಮೈಮರವೆಗಿಂತ ಬೇರೆಯಾದ ಹೊರಜಗತ್ತಿನ ಐಶ್ವರ್ಯವನ್ನು ಕ೦ಡಳು.
ನೆಲೆವನೆಯ ಮಾಡದಲಿ ರತ್ನಾ
ವಳಿಯ ನುಣ್ಬೆಳಗಿನಲಿ ಹ೦ಸೆಯ
ತುಳಿಯ ಮೇಲ್ವಾಸಿನಲಿ ಪವಡಿಸುವೀಕೆಗಿ೦ದೀಗ |
ಹಳುವದಲಿ ಘೋರಾ೦ಧಕಾರದ
ಮಳೆಯೊಬ್ಬಳೆ ನಡೆದು ನೆನದೀ
ಕಲುನೆಲದೊಳೊರಗಿದಳೆನುತ ಮರುಗಿದನು ಧರಣೀಶ || ೩೦ ||
ಪದವಿಭಾಗ-ಅರ್ಥ:ನೆಲೆವನೆಯ(ಉಪ್ಪರಿಗೆಯ ಮನೆ, ಮಹಡಿಮನೆ) ಮಾಡದಲಿ(ಮಾಳಿಗೆ,ಸೂರು,ಛಾವಣಿ,) ರತ್ನಾವಳಿಯ(ರತ್ನಗಳ) ನುಣ್ಬೆಳಗಿನಲಿ(ತಂಪು ಬೆಳಕಿನಲ್ಲಿ) ಹ೦ಸೆಯ ತುಳಿಯ ಮೇಲ್ವಾಸಿನಲಿ(ಹಂಸತೂಲಿಕಾ ತಲ್ಪದಲ್ಲಿ- ಹಂಸದಾಕಾರದ ತೂಗು ಮಂಚದ ಮೃದು ಹಾಸಿಗೆಯಲ್ಲಿ) ಪವಡಿಸುವ(ಮಲಗುವ)+ ಈಕೆಗೆ+ ಇ೦ದು+ ಈಗ ಹಳುವದಲಿ(ಕಾಡಿನಲ್ಲಿ- ಪೊದೆಯಲ್ಲಿ) ಘೋರಾ೦ಧಕಾರದ ಮಳೆಯ(ಲ್ಲಿ)+ ಒಬ್ಬಳೆ ನಡೆದು ನೆನದು+ ಈ ಕಲುನೆಲದೊಳು+ ಒರಗಿದಳೆ+ ಎನುತ ಮರುಗಿದನು ಧರಣೀಶ.
ಅರ್ಥ:ಧರ್ಜನು ಅವಳ ಸ್ಥತಿಯನ್ನು ಕಂಡು ತಾನೇ ಅದಕ್ಕೆ ಕಾರಣ ಎಂದು ಭಾವಿಸಿ,'ಉಪ್ಪರಿಗೆಯ ಮನೆಯ ಮಾಳಿಗೆಯಲ್ಲಿ ರತ್ನಾವಳಿಯ ತಂಪು ಬೆಳಕಿನಲ್ಲಿ ಹಂಸತೂಲಿಕಾ ತಲ್ಪದಲ್ಲಿ- ಮೃದು ಹಾಸಿಗೆಯಲ್ಲಿ ಮಲಗುವ ಈಕೆಗೆ ಇ೦ದು ಈಗ ಕಾಡಿನಲ್ಲಿ ಘೋರಾ೦ಧಕಾರದ ಮಳೆಯಲ್ಲಿ ಒಬ್ಬಳೆ ನಡೆದು, ನೆನದು ಈ ಕಲ್ಲು ನೆಲದಮೇಲೆ ಬಿದ್ದಳೆ!' ಎನ್ನುತ್ತಾ ಮರುಗಿದನು- ಶೋಕಿಸಿದನು.
ಹರೆದುದುಬ್ಬಿದ ಮೂರ್ಛೆ ಕರಣೋ
ತ್ಕರದ ಕಳವಳವಡಗಿತರಸನ
ನರಸಿ ಸ೦ತೈಸಿದಳು ತಪ್ಪೇನಿದು ಪುರಾಕೃತದ |
ಪರುಠವಣೆಗೇಕಳಲು ಮು೦ದಣ
ಗಿರಿಯ ಗಮನೋಪಾಯವನು ಗೋ
ಚರಿಸಿದರೆ ಸಾಕೆ೦ದಬುಜಮುಖಿ ಮಹೀಪತಿಗೆ || ೩೧ ||
ಪದವಿಭಾಗ-ಅರ್ಥ:ಹರೆದುದು+ ಉಬ್ಬಿದ ಮೂರ್ಛೆ ಕರಣೋತ್ಕರದ ಕಳವಳವು+ ಅಡಗಿತು+ ಅರಸನನು+ ಅರಸಿ(ರಾಣಿ) ಸ೦ತೈಸಿದಳು; ತಪ್ಪೇನು+ ಇದು ಪುರಾಕೃತದ ಪರುಠವಣೆಗೆ(ಹರಡುವಿಕೆ, ಸಾಮೀಪ್ಯ)+ ಏಕೆ+ ಅಳಲು ಮು೦ದಣ ಗಿರಿಯ ಗಮನ(ಗಮಿಸು, ಹೋಗುವುದು)+ ಉಪಾಯವನು ಗೋಚರಿಸಿದರೆ ಸಾಕೆ೦ದು+ ಅಬುಜಮುಖಿ ಮಹೀಪತಿಗೆ(ಸಂತೈಸಿದಳು).
ಅರ್ಥ:ದ್ರೌಪದಿಗೆ ಉಬ್ಬಿದ ಮೂರ್ಛೆ ಹರೆದು, ಚೆನ್ನಾಗಿ ಎಚ್ಚರಾಯಿತು. ಅವಳ ಕರಣಾಜನಕ ಸ್ಥಿತಿ ಕಳೆದು ಕಳವಳವು-ಚಿಂತೆ ಅಡಗಿತು. ಅವಳು ದುಃಖಿಸುತ್ತಿದ್ದ ಅರಸನನ್ನು ರಾಣಿದ್ರೌಪದಿ ಸ೦ತೈಸಿದಳು; ಇದರಲ್ಲಿ ತಪ್ಪೇನು. ಇದು ಪುರಾಕೃತದ ಕರ್ಮಫಲವನ್ನು ಈಗ ಅನುಭವಿಸುವುದಕ್ಕೆ ಏಕೆ ದುಃಖ? ಮು೦ದೆ ಹೋಗಬೇಕಾದ ಗಿರಿಯಕಡೆ ಹೋಗುವ ಉಪಾಯವು ನಮಗೆ ಗೋಚರಿಸಿದರೆ ಸಾಕು.' ಎ೦ದು ಕಮಲಮುಖಿ ದ್ರೌಪದಿ ಮಹೀಪತಿ ಧರ್ಮಜನಿಗೆ(ಸಂತೈಸಿದಳು.
ಇದೆ ಮುನಿವ್ರಜವಗ್ನಿ ಹೋತ್ರಿಗ
ಳಿದೆ ಕುಟು೦ಬಿಗಳಾಪ್ತ ಪರಿಜನ
ವಿದೆ ವರಸ್ತ್ರೀ೦ ಬಾಲವೃದ್ದ ನಿಯೋಗಿಜನ ಸಹಿತ |
ಇದೆ ಮಹಾಕಾ೦ತಾರವಿನಿಬರ
ಪದಕೆ ವನ ಮಾರ್ಗದಲಿ ಸೇರುವ
ಹದನ ಕಾಣೆನು ಶಿವ ಶಿವೆ೦ದಳು ಕಾ೦ತೆ ಭೂಪತಿಗೆ || ೩೨ ||
ಪದವಿಭಾಗ-ಅರ್ಥ:ಇದೆ ಮುನಿವ್ರಜವು (ವೃಜ= ಸಮೂಹ, ಗುಂಪು )+ ಅಗ್ನಿ ಹೋತ್ರಿಗಳಿದೆ ಕುಟು೦ಬಿಗಳಾಪ್ತ ಪರಿಜನವಿದೆ ವರ(ಉತ್ತಮ) ಸ್ತ್ರೀ೦ ಬಾಲವೃದ್ದ ನಿಯೋಗಿಜನ (ಊಳಿಗ, ಸೇವೆ ೩ ಅನುಷ್ಠಾನ, ಆಚರಣೆ ೪ ಅಧಿ ಕಾರಿಗಳ - ಸಮಿತಿ, ಮಂಡಳಿ) ಸಹಿತಇದೆ ಮಹಾಕಾ೦ತಾರವು( ದೊಡ್ಡಕಾಡು)+ ಇನಿಬರ(ಇವರ) ಪದಕೆ-ನೆಡೆಯಲು ವನ ಮಾರ್ಗದಲಿ ಸೇರುವಹದನ ಕಾಣೆನು ಶಿವ ಶಿವೆ೦ದಳು ಕಾ೦ತೆ ಭೂಪತಿಗೆ
ಅರ್ಥ:ಭೂಪತಿ ಧರ್ಮಜನಿಗೆ ದ್ರೌಪದಿಯು,'ರಾಜನೇ, ನಮ್ಮೊಡನೆ ಮುನಿಗಳ ಸಮೂಹ ಇದೆ. ಅಗ್ನಿ ಹೋತ್ರಿಗಳು ಇದ್ದಾರೆ. ಕುಟು೦ಬಿಗಳ ಆಪ್ತ ಪರಿಜನರಿದ್ದಾರೆ. ಉತ್ತಮ ಸ್ತ್ರೀಯರೂ, ಬಾಲವೃದ್ದರೂ, ನಮ್ಮ ಜೊತೆಬಂದ ಸೇವಕರು, ಅನುಷ್ಠಾನಪರರು, ಇತರ ಕೆಲಸದಜನ ಸಹಿತ ಇದೆ. ಈಗ ನಾವಿರುವುದು ಮಹಾಕಾ೦ತಾರವು- ದೊಡ್ಡಕಾಡು. ಇವರೆಲ್ಲರ ನೆಡೆಗೆ ವನಮಾರ್ಗದಲ್ಲಿ ಸೇರುವ ಉಪಾಯವನ್ನು ಕಾಣೆನು, ಶಿವ ಶಿವ!' ಎ೦ದಳು.

ಘಟೋತ್ಕಚನ ಸಹಾಯದಿಂದ ನರನಾರಾಯಣಾಶ್ರಮಕ್ಕೆ ಗಮನ[ಸಂಪಾದಿಸಿ]

ಆಯತಾಕ್ಷಿಯ ನುಡಿಗೆ ಪಾ೦ಡವ
ರಾಯ ಮೆಚ್ಚಿದನಿನ್ನು ಗಮನೋ
ಪಾಯವೆ೦ತೆಂದೆನುತ ಚಿ೦ತಿಸಿದನು ಘಟೋತ್ಕಚನ |
ರಾಯ ಕೇಳೈ ಕಮಲ ನಾಭನ
ಮಾಯೆಯೋ ನಾವರಿಯೆ ವಾಕ್ಷಣ
ವಾಯುವೇಗದಲಭ್ರದಿ೦ದಿಳಿತ೦ದನಮರಾರಿ || ೩೩ ||
ಪದವಿಭಾಗ-ಅರ್ಥ:ಆಯತಾಕ್ಷಿಯ(ಅಗಲಕಣ್ಣಿನ ದ್ರೌಪದಿಯ) ನುಡಿಗೆ ಪಾ೦ಡವರಾಯ ಮೆಚ್ಚಿದನು+ ಇನ್ನು ಗಮನ+ ಉಪಾಯವು+ ಎಂತು+ ಎಂದು+ ಎನುತ ಚಿ೦ತಿಸಿದನು ಘಟೋತ್ಕಚನ. ರಾಯ ಕೇಳೈ ಕಮಲ ನಾಭನ ಮಾಯೆಯೋ ನಾವು+ ಅರಿಯೆವು(ತಿಳಿಯೆವು) ಆಕ್ಷಣ ವಾಯುವೇಗದಲಿ+ ಅಭ್ರದಿ೦ದ+ ಇಳಿತ೦ದನು+ ಅಮರಾರಿ(ಅಮರರ+ ಅರಿ= ದೈತ್ಯ= ಘಟೋತ್ಕಚ)
ಅರ್ಥ:ದ್ರೌಪದಿಯ ಮಾತಿಗೆ ಪಾ೦ಡವರಾಯ ಧರ್ಮಜನು ಮೆಚ್ಚಿದನು. ಇನ್ನು ಮುಂದೆ ಹೊಗುವ ಉಪಾಯವು ಏನು ಎಂದು ಹೇಳುತ್ತಾ ಭಿಮನ ಮಗ ಘಟೋತ್ಕಚನನ್ನು ನೆನೆದನು. ರಾಜನೇ ಕೇಳು, ಕಮಲ ನಾಭನ- ಕೃಷ್ಣನ ಮಾಯೆಯೋ- ಏನೋ ನಾವು ತಿಳಿಯೆವು. ಆ ಕ್ಷಣದಲ್ಲಿ ವಾಯುವೇಗದಲ್ಲಿ ಅಕಾಸದಿ೦ದ ಭೀಮನ ಮಗ ಅಮರಾರಿ ಘಟೋತ್ಕಚನು ಇಳಿದು ಬ೦ದನು.
ವೀರದೈತ್ಯನ ಬಹಳ ದುಷ್ಪರಿ
ವಾರವದನಾರೆಣಿಸುವರು ಮು೦
ಗಾರಿರುಳ ತನಿಯರಕ ನೀಲಾಚಲದ ಖ೦ಡರಣೆ |
ಘೋರ ರಾಹುವ್ಯೂಹವೆನೆ ಸುರ
ವೈರಿಗಳ ಮೈ ಗಾ೦ತಿ ಲಹರಿಯ
ಪೂರದಲಿ ಜಗ ಮುಳುಗೆ ಬ೦ದುದು ಲಕ್ಷ ಸ೦ಖ್ಯೆಯಲಿ || ೩೪ ||
ಪದವಿಭಾಗ-ಅರ್ಥ:ವೀರದೈತ್ಯನ ಬಹಳ ದುಷ್+ ಪರಿವಾರವ+ ಅದನಾರು+ ಎಣಿಸುವರು ಮು೦ಗಾರ್+ ಇರುಳ- ಕತ್ತಲೆಯ ತನಿಯರಕ(ದೇಹದಬಣ್ಣ) ನೀಲಾಚಲದ ಖ೦ಡರಣೆ ಘೋರ ರಾಹುವ್ಯೂಹವು+ ಎನೆ ಸುರವೈರಿಗಳ ಮೈ ಗಾ೦ತಿ ಲಹರಿಯ ಪೂರದಲಿ ಜಗ ಮುಳುಗೆ(ಮುಚ್ಚಿಹೋಗುವಂತೆ) ಬ೦ದುದು ಲಕ್ಷ ಸ೦ಖ್ಯೆಯಲಿ.
ಅರ್ಥ:ಭೀಮ ಹಿಡಿಂಬೆಯರ ಮಗ ವೀರದೈತ್ಯ ಘಟೋತ್ಕಚನ ಬಹಳ ದೊಡ್ಡ ಕೄರ ಪರಿವಾರವು ಬಂದಿತು. ಅದನ್ನು ಯಾರು ಎಣಿಸಲು ಸಾಧ್ಯ! ಮು೦ಗಾರು ರಾತ್ರಿಯ ದೇಹದಬಣ್ಣದ ನೀಲಬೆಟ್ಟದ ಖ೦ಡರಣೆ ಘೋರ ರಾಹುವ್ಯೂಹವೋ ಎನ್ನುವಂತೆ ದೇವತೆಗಳ ವೈರಿಗಳಾದ ದಾನವರ ಕಪ್ಪು ಮೈಕಾ೦ತಿ- ಬಣ್ಣದ ಲಹರಿಯನ್ನು ತುಂಬಿದ ಆ ಪರಿವಾರ ಜಗತ್ತು ಮುಚ್ಚಿಹೋಗುವಂತೆ ಲಕ್ಷ ಸ೦ಖ್ಯೆಯಲ್ಲಿ ಬ೦ದಿತು.
ದೇವ ಬೆಸಸಾ ನಮ್ಮ ಬರಸಿದು
ದಾವ ಹದನು ನವೀನ ಭಟರಿದೆ
ದೇವರಿಪುಗಳು ಹೇಳು ನೆನಹಿನ ರಾಜಕಾರಿಯವ |
ಆವುದೆನಗುದ್ಯೋಗವೆನೆ ಸ೦
ಭಾವಿಸಿದನಸುರನನು ಜಾರುವ
ಜೀವಮರುತನ ಮರಳಿನಿಲಿಸಿತು ನಿನ್ನನುಡಿಯೆ೦ದ || ೩೫ ||
ಪದವಿಭಾಗ-ಅರ್ಥ:ದೇವ ಬೆಸಸು(ಹೇಳು)+ ಆ ನಮ್ಮ ಬರಸಿದುದು+ ಆವ ಹದನು?(ಯಾವ ಕಾರ್ಯ) ನವೀನ ಭಟರು+ ಇದೆ ದೇವರಿಪುಗಳು(ದಾನವರು)- ಹೇಳು, ನೆನಹಿನ ರಾಜಕಾರಿಯವ; ಆವುದು+ ಎನಗೆ+ ಉದ್ಯೋಗವು+ ಎನೆ ಸ೦ಭಾವಿಸಿದನು+ ಅಸುರನನು ಜಾರುವ ಜೀವ+ ಮರುತನ(ಪ್ರಾಣವಾಯು) ಮರಳಿ ನಿಲಿಸಿತು ನಿನ್ನ ನುಡಿಯೆ೦ದ.
ಅರ್ಥ:ಘಟೋತ್ಕಚನು ಧರ್ಮಜನನ್ನು ಕುರಿತು, 'ದೇವ ದೊಡ್ಡಪ್ಪಾ ಆ ನಮ್ಮನ್ನು ಬರಮಾಡಿಕೊಂಡದ್ದು ಯಾವ ಕಾರ್ಯಕ್ಕೆ?? ನವೀನರಾದ ಯುವಕ ದಾನವ ಭಟರು ಇದ್ದಾರೆ; ಹೇಳು, ನೀವು ನನ್ನನ್ನು ನೆನಪಿಸಿಕೊಂಡ ರಾಜಕಾರ್ಯವು ಯಾವುದು? ನನಗೆ ಹೇಳಬೇಕೆಂದಿರುವ ಉದ್ಯೋಗವು- ಕೆಲಸವೇನು?' ಎನ್ನಲು, ಧರ್ಮಜನು ಅಸುರನನ್ನು ಉಪಚರಿಸಿದನು. ಅವನು ಘಟೋತ್ಕಚನಿಗೆ,'ನಮ್ಮ ಪ್ರಾಣವಾಯು ಜಾರುವ ಸಮಯ ಬಂದಿತ್ತು, ನಿನ್ನ ಮಾತಿನಿಂದ ನಮ್ಮ ಜೀವ ಮರಳಿ ಬಂದಿತು,'ಎಂದನು.
ದುರ್ಗವಿದೆ ನಮ್ಮ೦ಘ್ರಿ ಶಕ್ತಿಯ
ನುಗ್ಗಿ ಬೀತುದು ಸಾಹಸಿಗ ನೀ
ನಗ್ಗಳೆಯರಿದೆ ನಿನ್ನವರು ಪಡಿಗಿರಿಗಳಾಗಿರಿಗೆ |
ಹುಗ್ಗಿಗರ ಹೆಗಲೇರಿಸೊ೦ದೇ
ಲಗ್ಗೆಯಲಿ ನೆಡೆಸೆನೆ ಹಸಾದದ
ಮೊಗ್ಗೆಗೈಗಳ ದನುಜ ತಗ್ಗಿದನರಸನಿದಿರಿನಲಿ || ೩೬ ||
ಪದವಿಭಾಗ-ಅರ್ಥ:ದುರ್ಗವಿದೆ ನಮ್ಮ+ ಅ೦ಘ್ರಿ ಶಕ್ತಿಯ ನುಗ್ಗಿ ಬೀತುದು(ಇಲ್ಲವಾಯಿತು), ಸಾಹಸಿಗ ನೀನು+ ಅಗ್ಗಳೆಯರಿದೆ(ದೊಡ್ಡವರು, ಗಟ್ಟಿಗರು) ನಿನ್ನವರು, ಪಡಿಗಿರಿಗಳು(ಸಣ್ಣಬೆಟ್ಟ)+ ಆ ಗಿರಿಗೆ ಹುಗ್ಗಿಗರ(ತಾವು ಗಟ್ಟಿಗರೆಂಬ ಹೆಮ್ಮಯವರು) ಹೆಗಲ+ ಏರಿಸು+ ಒ೦ದೇ ಲಗ್ಗೆಯಲಿ(ಹೊಡೆತಕ್ಕೆ, ವೇಗ ಓಟ) ನೆಡೆಸು+ ಎನೆ ಹಸಾದದ(ಅಪ್ಪಣೆ) ಮೊಗ್ಗೆ+ ಗೈ+ ಕೈಗಳ ದನುಜ ತಗ್ಗಿದನು+ ಅರಸನ+ ಇದಿರಿನಲಿ.
ಅರ್ಥ:ಅದಕ್ಕೆ ಧರ್ಮಜನು ಮಗನಿಗೆ,'ಮುಂದೆ ಕಠಿಣವಾದ ಬೆಟ್ಟವಿದೆ, ನಾವೆಲ್ಲರೂ ನಾರಾಯಣ ಆಶ್ರಮಕ್ಕೆ ಹೋಗಬೇಕು. ನಮ್ಮ ಪಾದದ- ಶಕ್ತಿಯು ನೆಡೆದು ನುಗ್ಗಿ- ಪೆಟ್ಟಾಗಿ ಇಲ್ಲವಾಯಿತು, ಸಾಹಸಿಗನು ನೀನು ಮತ್ತು ನಿನ್ನವರು ದೊಡ್ಡವರು, ಗಟ್ಟಿಗರು. ಅವರು ಪಡಿಗಿರಿಗಳಂತೆ ಇದ್ದಾರೆ, ಆ ಬೆಟ್ಟದಂತಿರುವ ಹುಗ್ಗಿಗರ ಹೆಗಲ ಮೇಲೆ ನಮ್ಮ ಪರಿವಾರದವರನ್ನು ಏರಿಸು. ಒ೦ದೇ ಹೊಡೆತಕ್ಕೆ, ವೇಗವಾಗಿ ನಮ್ಮನ್ನು ಬೆಟ್ಟದಾಚೆ ನೆಡೆಸು,' ಎನ್ನಲು, ಅವನು 'ಅಪ್ಪಣೆ' ಎಂದು, ಅರಸ ಧರ್ಮಜನ ಎದಿರಿನಲ್ಲಿ ಕೈಗಳನ್ನು ಮೊಗ್ಗೆಯಂತೆ ಮಾಡಿ ತಗ್ಗಿ ನಮಸ್ಕರಿಸಿದನು.
ಹೊತ್ತನರಸನನರಸನನುಜರ
ನೆತ್ತಿದನು ನೃಪನರಸಿಯನು ಬಳಿ
ಕೆತ್ತಿಕೈವೀಸಿದನು ಭಟರಿಗೆ ತೋರಿ ಪರಿಜನವ |
ಹೊತ್ತರನಿಬರನಸುರ ಬಟರೋ
ತ್ತೊತ್ತೆಯಾದುದು ಬೆನ್ನಿನಲಿ ಬಿಗಿ
ದೆತ್ತಿ ಹಾಯ್ದರು ಮುಗಿಲ ಥಟ್ಟಿನ ಪರಿಯ ಜೋಡಿನಲಿ || ೩೭ ||
ಪದವಿಭಾಗ-ಅರ್ಥ:ಹೊತ್ತನು+ ಅರಸನನು+ ಅರಸನ+ ಅನುಜರನು(ತಮ್ಮಂದಿರು)+ ಎತ್ತಿದನು ನೃಪನ+ ಅರಸಿಯನು, ಬಳಿಕ+ ಎತ್ತಿ ಕೈವೀಸಿದನು ಭಟರಿಗೆ ತೋರಿ ಪರಿಜನವ ಹೊತ್ತರು+ ಅನಿಬರನು(ಅವರಲ್ಲರನ್ನೂ)+ ಅಸುರ ಬಟರು+ ಒತ್ತೊತ್ತೆಯಾದುದು ಬೆನ್ನಿನಲಿ, ಬಿಗಿದೆತ್ತಿ(ಬಲವಾಗಿ ಎತ್ತಿ) ಹಾಯ್ದರು ಮುಗಿಲ ಥಟ್ಟಿನ ಪರಿಯ(ಹಾಗೆ) ಜೋಡಿನಲಿ(ಜೊತೆ).
ಅರ್ಥ:ಘಟೋತ್ಕಚನು ಎತ್ತರವಾಗಿ ಬೆಳೆದು, ಧರ್ಮಜನ ಅಪ್ಪಣೆಯಂತೆ, ಅರಸ ಧರ್ಮಜನನ್ನು ಹೊತ್ತುಕೊಂಡನು, ನಂತರ ಅವನ ತಮ್ಮಂದಿರು ಭೀಮ ನಕುಲ ಸಹದೇವರನ್ನು ಹೊತ್ತನು. ಆಮೇಲೆ ಅರಸನ ಅರಸಿ ದ್ರೌಪದಿಯನ್ನು ಎತ್ತಿದನು. ಎಲ್ಲರನ್ನೂ ಬೆನ್ನು ಮೇಲೆ ಕೂರಿಸಿಕೊಂಡನು. ಬಳಿಕ ಕೈ ಎತ್ತಿ ತನ್ನ ಭಟರಿಗೆ ಸೂಚನೆ ಕೊಟ್ಟು, ಅವರಿಗೆ ಪರಿಜನರನ್ನು ತೋರಿಸಿ ತನ್ನನ್ನು ಅನುಸರಿಸಲು ಕೈ ಬೀಸಿದನು. ಅವರು- ಅಸುರ ಬಟರು ಅವರೆಲ್ಲರನ್ನೂ ಹೊತ್ತರು. ಅಸುರಭಟರ ಬೆನ್ನಿನ ಮೇಲೆ ಜನರು ಒತ್ತೊತ್ತೆಯಾಗಿ ಕುಳಿತರು. ಹೀಗೆ ಅವರನ್ನು ಬಾಹುಗಳಿಂದ ಬಿಗಿದೆತ್ತಿ ಬೆನ್ನಿನ ಮೇಲೆ ಕೂರಿಸಿಕೊಂಡು ಆಕಾಶ ಮಾರ್ಗದಲ್ಲಿ ಮುಗಿಲುಗಳ ರಾಶಿಯ ಜೋತೆಗೆ ಧರ್ಮಜನ ಪರಿವಾರವನ್ನು ಹೊತ್ತು ಹಾಯ್ದರು- ವೇಗವಾಗಿ ಹೋದರು.
ಅಸುರ ದೇಹ ಸ್ಪರ್ಶವಸಮ೦
ಜಸವಲಾ ತನಗೆನುತ ಮುನಿ ರೋ
ಮಶನು ಗಗನೇಚರರ ಗತಿಯಲಿ ಬ೦ದನಿವರೊಡನೆ |
ವಿಷಮ ಗಿರಿ ಕಾನನಕದದ್ವ
ಪ್ರಸರವನು ಹಿ೦ದಿಕ್ಕಿ ಹೊದ್ದಿದ
ರೆಸೆವ ನರನಾರಯಣಾಶ್ರಮ ವರತಪೋವನವ || ೩೮ ||
ಪದವಿಭಾಗ-ಅರ್ಥ:ಅಸುರ ದೇಹ ಸ್ಪರ್ಶವು+ ಅಸಮ೦ಜಸವಲಾ(ತಕ್ಕುದಲ್ಲ) ತನಗೆ+ ಎನುತ ಮುನಿ ರೋಮಶನು ಗಗನೇಚರರ(ಆಕಾಶ ಗಮನಿಗಳಾದ ಖೇಚರರ- ಆಕಾಶಗಮನಿಗಳ) ಗತಿಯಲಿ ಬ೦ದನು ಅವರೊಡನೆ, ವಿಷಮ(ಕಷ್ಟಕರ) ಗಿರಿ ಕಾನನ ಕದದ್ವ ಪ್ರಸರವನು(ಬೆಟ್ಟ ಕಾಡಿನ ದಟ್ಟ ಮರಗಳ) ಹಿ೦ದಿಕ್ಕಿ ಹೊದ್ದಿದರು (ಹೊದ್ದಿದರು- ಸೇರಿದರು) ಎಸೆವ ನರನಾರಯಣಾಶ್ರಮ ವರ ತಪೋವನವ.
ಅರ್ಥ:ಧರ್ಮಜನ ಪರಿವಾರದಲ್ಲಿದ್ದ, ದೇವಲೋಕದಿಂದ ಅರ್ಜುನನ ವಿಚಾರ ತಿಳಿಸಲು ಬಂದಿದ್ದ ಲೋಮಶ ಮುನಿಯು ಮಾತ್ರಾ ಅಸುರದೇಹ ಸ್ಪರ್ಶವು ತನಗೆ ತಕ್ಕುದಲ್ಲ ಎಂದುಕೊಂಡು ಅವರೊಡನೆ, ಆ ಮುನಿ ರೋಮಶನು ಗಗನೇಚರರ ಗತಿಯಲಿ- ಆಕ್ರಮದಲ್ಲಿ ಸ್ವತಃ ಆಕಾಶಮಾರ್ಗದಲ್ಲಿ ಅವರ ಜೊತೆ ಬ೦ದನು. ಕಷ್ಟಕರ ಗಿರಿಗಳನ್ಊ, ಕಾಡಿನ ದಟ್ಟ ಮರಗಳ ಪ್ರದೇಶವನ್ನೂ ಹಿ೦ದಿಕ್ಕಿ ಶೋಭಿಸುವ ನರನಾರಯಣಾಶ್ರಮವನ್ನು,ಶ್ರೇಷ್ಠ ತಪೋವನವನ್ನು. ಸೇರಿದರು.
ಅಲ್ಲಿಯಖಿಳ ಋಷಿವ್ರಜವು ಭೂ
ವಲ್ಲಭನನಾತಿಥ್ಯ ಪೂಜಾ
ಸಲ್ಲಲಿತ ಸ೦ಭಾವನಾ ಮಧುರೋಕ್ತಿ ರಚನೆಯಲಿ |
ಅಲ್ಲಿಗಲ್ಲಿಗೆ ಸಕಲ ಮುನಿ ಜನ
ವೆಲ್ಲವನು ಮನ್ನಿಸಿದನಾ ವನ
ದಲ್ಲಿ ನೂಕಿದನೆ೦ಟು ದಿನವನು ನೄಪತಿ ಕೇಳೆ೦ದ || ೩೯ ||
ಪದವಿಭಾಗ-ಅರ್ಥ:ಅಲ್ಲಿಯ+ ಆಖಿಳ ಋಷಿವ್ರಜವು( ಋಷಿಸಮೂಹ) ಭೂವಲ್ಲಭನನು(ರಾಜನನ್ನು)+ ಅತಿಥ್ಯ ಪೂಜಾ ಸಲ್ಲಲಿತ ( ಹಿತವಾದ, ಇಂಪಾದ ೩ ಶ್ರೇಷ್ಠವಾದ, ಒಳ್ಳೆಯ)ಸ೦ಭಾವನಾ (ಗೌರವ) ಮಧುರೋಕ್ತಿ ರಚನೆಯಲಿ ಅಲ್ಲಿಗಲ್ಲಿಗೆ ಸಕಲ ಮುನಿ ಜನವೆಲ್ಲವನು ಮನ್ನಿಸಿದನು+ ಆ ವನದಲ್ಲಿ ನೂಕಿದನು+ ಎ೦ಟು ದಿನವನು ನೄಪತಿ ಕೇಳೆ೦ದ.
ಅರ್ಥ:'ವೈಶಂಪಾಯನ ಮುನಿಯು ಜನಮೇಜಯನನ್ನು ಕುರಿತು,'ಅಲ್ಲಿ ನಾರಾಯಣ ಆಶ್ರಮದ ಆಖಿಲ ಋಷಿ ಸಮೂಹವೂ ರಾಜ ಯುಧಿಷ್ಠಿರನನ್ನು ಅತಿಥ್ಯ ಮತ್ತು ಪೂಜೆ ಮೊದಲಾದ ಹಿತವಾದ ಗೌರವ ಮತ್ತು ಮಧುರೋಕ್ತಿಯ ನೆಡವಳಿಕೆಯಿಂದ ಗೌರವಿಸಿದರು. ಅಲ್ಲಿಗಲ್ಲಿಗೆ ತಕ್ಕಂತೆ ಧರ್ಮಜನು ಸಕಲ ಮುನಿ ಜನವೆಲ್ಲವನ್ನೂ ಮನ್ನಿಸಿ ಗೌರವಿಸಿದನು. ನಂತರ ಆ ವನದ ಆಶ್ರಮದಲ್ಲಿ ಎ೦ಟು ದಿನಗಳ ಕಾಲ ವಸತಿ ಮಾಡಿದನು,'ನೄಪತಿಯೇ ಕೇಳು ಎಂದ.
♠♠♠

ನೋಡಿ[ಸಂಪಾದಿಸಿ]

  1. ಕುಮಾರವ್ಯಾಸ ಭಾರತ/ಸಟೀಕಾ (೩.ಅರಣ್ಯಪರ್ವ::ಸಂಧಿ-೦೭)
  2. ಕುಮಾರವ್ಯಾಸ ಭಾರತ/ಸಟೀಕಾ (೩.ಅರಣ್ಯಪರ್ವ::ಸಂಧಿ-೦೮)
  3. ಕುಮಾರವ್ಯಾಸ ಭಾರತ/ಸಟೀಕಾ (೩.ಅರಣ್ಯಪರ್ವ::ಸಂಧಿ-೦೯)

ಪರಿವಿಡಿ[ಸಂಪಾದಿಸಿ]

ಕನ್ನಡ ವಿಕಿಸೋರ್ಸ್[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ


ಉಲ್ಲೇಖ[ಸಂಪಾದಿಸಿ]

  1. ಕರ್ನಾಟ ಭಾರತ ಕಥಾಮಂಜರಿ- ಕುವೆಂಪು ಮತ್ತು ಮಾಸ್ತಿವೆಂಕಟೇಶ ಐಯಂಗಾರ್ ಸಂಪಾದಿತ. ಇಂದ:ಮೈಸೂರು ಸಂಸ್ಥಾನದ ಸಾಹಿತ್ಯ ಮತ್ತು ಸಂಸ್ಕೃತಿ ಇಲಾಖೆ.
  2. ಕನ್ನಡದ ಪದಗಳಿಗೆ ಅರ್ಥ -ಕನ್ನಡ ಸಾಹಿತ್ಯ ಪರಿಷತ್ ನಿಘಂಟು,
  3. ಪ್ರೊ. ಜಿ. ವೆಂಕಟಸುಬ್ಬಯ್ಯ ಕನ್ನಡ-ಕನ್ನಡ ನಿಘಂಟು
  4. ದಾಸ ಸಾಹಿತ್ಯ ನಿಘಂಟು