ಪುಟ:Chirasmarane-Niranjana.pdf/೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೯೨

ಚಿರಸ್ಮರಣೆ

ಚೆಲ್ಲಾಟವಾಡಿ ಮೊಳೆತುವು. ಮಳೆಗಾಲದ ತೇಜಸ್ವಿನಿ ನದಿ ಮೈತುಂಬಿ ಸಂತೋಷದಿಂದ ಮೆರೆಯಿತು. ಸಣ್ಣಪುಟ್ಟ ದೋಣಿಗಳೆಲ್ಲ ಭಯಗೊಂಡು ಭೂಮಿಗೇರಿದುವು. ಸಾಹಸಿಗಳು ನದಿಯ ಮೇಲಿನಿಂದ ತೇಲಿಬಂದ ಮರದ ತೊಲೆಗಳನ್ನು ಹಿಡಿದರು.
ಅಪ್ಪು ಆ ರೀತಿ ಸಂಪಾದಿಸಿದ ಹತ್ತು ತೆಂಗಿನಕಾಯಿಗಳನ್ನು ಮನೆಗೆ ತಂದ. "ಪ್ರಾಣದ ಭಯ ಇಲ್ವೇನೋ ನಿಂಗೆ? ನಿನ್ನ ಮನೆ ಹಾಳಾಯ್ತು.ಈ ತೆಂಗಿನಕಾಯೂ ಬೇಡ, ಏನೂ ಬೇಡ.ನಿನ್ನಪ್ಪನಿಗೆ ಹೇಳಿ ಪೂಜೆ ಮಾಡಿಸ್ತೇನೆ ಇವತ್ತು"-ಎಂದು ಆತನ ತಾಯಿ ಗೋಳಾಡುತ್ತ ಗದಿರಿಸಿದುದಷ್ಟೇ ಬಂತು.ಅಪ್ಪು ನಕ್ಕ.ಅವನೂ ಅಷ್ಟೆ-ಅವನ ಓರಗೆಯವರೂ ಅಷ್ಟೆ; ಅವರಿಗಿಂತ ಹಿರಿಯರಾದ ಯುವಕರೂ ಅಷ್ಟೆ.
ಆ ಅವಧಿಯಲ್ಲೇ ಮಾಸ್ತರು, ಸಂಜೆ ಶಾಲೆಯಲ್ಲಿ ಪತ್ರಿಕೆಯನ್ನೋದಿ ಹೇಳುವ ಪರಿಪಾಠವನ್ನು ಆರಂಭಿಸಿದರು. ಅದು ಚರ್ವತ್ತೂರು ರೈಲ್ವೆನಿಲ್ದಾಣದಿಂದ ಅವರು ದಿನವೂ ತರಿಸುತ್ತಿದ್ದ ಪತ್ರಿಕೆ. ಮೊದಮೊದಲು ಯಾರಿಗೂ ಆಸಕ್ತಿ ಇರಲಿಲ್ಲ. ಆದರೆ ನಡುನಡುವೆ ಯಾವುದೋ ಕತೆ-ಯಾವುದೋ ಹರಟೆ-ನುಸುಳಿಕೊಂಡು, ಪತ್ರಿಕೆಯ ವಾಚನ ಕಾಲಯಾಪನೆಗೊಂದು ಸಾಧನವಾಯಿತು. ಕೆಲಸವಿಲ್ಲದೇ ಇದ್ದಾಗ ರೈತರು ಬೀಡಿ ಸೇದುತ್ತಲೋ ಎಲೆ ಅಡಿಕೆ ಜಗಿಯುತ್ತಲೋ ಶಾಲೆಯ ಜಗಲಿಯಲ್ಲಿ ಕುಳಿತು ಮಾಸ್ತರರ ಮಾತುಗಳಿಗೆ ಕಿವಿಗೊಟ್ಟರು.
ಆ ಊರಿನ ಪ್ರಮುಖ ಜಮೀನ್ದಾರರು ಇಬ್ಬರು. ಒಬ್ಬರು ಮಹಾ ಬ್ರಾಹ್ಮಣ ನಂಬೂದಿರಿ. ಅವರ ಮನೆಯ ಹೆಂಗಸರು, ಬಾಗಿಲಿನಿಂದ ಹೊರಕ್ಕೆ ಮುಖವಿಡುತ್ತಲೇ ಇರಲಿಲ್ಲ. ಇನ್ನೊಬ್ಬರು ನಂಬಿಯಾರ್. ಹೊಲೆಯರನ್ನಾದರೂ, ಮೈ ಮುಟ್ಟಿಯೇ ಬೆನ್ನು ತಟ್ಟಿಯೋ ಕೆನ್ನೆಗೆ ಏಟುಬಿಗಿದೋ ಮಾತನಾಡಿಸುವ ಸಮರ್ಥ, ವಯಸ್ಸಿನಲ್ಲಿ ಅವರು ನಂಬೂದಿರಿಗಿಂತ ಕಿರಿಯ. ಮಾಸ್ತರು ಅಲ್ಲಿಗೆ ಬರುವುದಕ್ಕೆ ಮುಂಚೆ ಆ ಊರಿಗೆ ಪತ್ರಿಕೆ ಇರುತ್ತಿದ್ದುದು ಅವರೊಬ್ಬರ ಮನೆಯಲ್ಲೇ. ಪತ್ರಿಕೆ ತರಿಸುತ್ತಿದ್ದ ತಾವು ಅಧುನಿಕರೆಂಬುದು ಅವರ ಖಚಿತ ಅಭಿಪ್ರಾಯವಾಗಿತ್ತು.
ಮಾಸ್ತರು ಪತ್ರಿಕೆ ತರಿಸುತ್ತಿದ್ದರೆಂದು ತಿಳಿದಾಗ ನಂಬಿಯಾರರು ಭುಜ ಕುಪ್ಪಳಿಸಿದ್ದರು. 'ಹೋಗಲಿ. ವಿದ್ಯಾವಂತ ಓದುವ ಚಟವಾದರ ಮರೀಬಾರದಲ್ಲ. ಇಲ್ದಿದ್ರೆ ಹುಡುಗರಿಗೆ ಪಾಠ ಏನು ಹೇಳಿಕೊಡ್ತಾನೆ?" ಎಂದು ಸುಮ್ಮನಾಗಿದ್ದರು. ಆದರೆ, ಶಾಲೆಯ ಜಗಲಿಯ ಮೇಲೆ ಸಂಜೆ ರೈತರೂ ಬಂದು ಕುಳಿತುಕೊಳ್ಳ