ಪುಟ:ಉತ್ತರ ಕರ್ನಾಟಕದ ಜಾನಪದ ಕಥೆಗಳು.pdf/೧೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ತುಂಟ ಬೀಗ

ದೊಡ್ಡವಾಡದಲ್ಲಿ ಇಬ್ಬರು ಗಂಡಹೆಂಡತಿಯಿದ್ದರು. ಗಂಡನು ಬರಿ ಜೀನನಾಗಿದ್ದರೆ ಹೆಂಡತಿ ಜೀನಹಂಕಳಾಗಿದ್ದಳು. ಅವರು ಎರಡೂ ಹೊತ್ತು ಎಂದೂ ಉಣ್ಣುತ್ತಿದ್ದಿಲ್ಲ, ಒಪ್ಪೊತ್ತೇ ಉಣ್ಣುಕ್ತಿದ್ದರು. ರೊಟ್ಟಿಯೊಡನೆ ಕಾಯಿಪಲ್ಲೆ ತಿಂದರೆ ರೊಟ್ಟಿಯ ಸ್ಥಾರಸ್ಯವೇ ಕೆಡುತ್ತದೆಂದು ಅವರು ತಿಳಿದಿದ್ದರು.

ಒಂದು ದಿನ ಗಂಡನು ಹೆಂಡತಿಗೆ ಹೇಳಿದನು - "ಯಾಕೋ ಹೋಳಿಗೆ ಉಣ್ಣುವಂತಾಗಿದೆ ಮನಸ್ಸು?"

"ಆಗಲಿ. ಆದರೆ ಇಂದು ಬೇಡ ನಾಳೆಗೆ ಮಾಡೋಣ?" ಎಂದಳು ಹೆಂಡತಿ.

ಮರುದಿನ ಮುಂಜಾನೆ ಏಳುತ್ತಲೆ ಗಂಡನು ಗಳಿಗೆಯಲ್ಲಿ ಕೈಹಾಕಿ ಒಂದು ಸೇರಿನಷ್ಟು ಗೋದಿ ತೆಗೆದುಕೊಟ್ಟನು. ಕಡಲೆಬೇಳೆ ಮನೆಯಲ್ಲಿದ್ದವು. ತುಪ್ಪ ಸಹ ಮನೆಯದಿತ್ತು. ಅಂಗಡಿಯಿಂದ ಉಪ್ಪು, ಎಣ್ಣೆ ಬೆಲ್ಲ ತರಬೇಕಾಗುತ್ತದೆ. ಉದ್ದರಿ ತಂದರಾಯಿತು. ಅಂಗಡಿಯವನು ಕೊಟ್ಟಾಗ ತೆಗೆದುಕೊಳ್ಳುತ್ತಾನೆ. ರಿಣ ಆಗುತ್ತದೆ, ಆಗಲಿ.

ಅಡಿಗೆ ಸಿದ್ಧಪಡಿಸಲು ಹೆಂಡತಿಗೆ ಹೇಳಿ ಗಂಡನು, ಜಳಕ ಮಾಡಿ ಬರುವೆನೆಂದು ಹಳ್ಳಕ್ಕೆ ಹೋದನು. ಅದೇ ದಿನ ಸಾಧಿಸಿದಂತೆ ಅವನ ಬೀಗನು ಬಂದನು. ಹಳ್ಳದಲ್ಲಿಂಯೀ ಅವನ ದರ್ಶನವಾಯಿತು. ಅಕ್ಕನ ಗಂಡನಿಗೆ ಬೀಗನು ಕೈಮುಗಿದನು.

"ನಮ್ಮ ಹೋಳಿಗೆಗೆ ದಾಳಿ ತಂದನೀತನು?" ಎಂದು ಬಗೆದು, ಮುಂಚಿತವಾಗಿ ಮನೆಗೆ ಓಡಿ ಬ೦ದು ಹೆಂಡತಿಗೆ ಹೇಳಿದನು - "ಏನೇ, ಮಾಡಿದ ಹೋಳಿಗೆಗಳನ್ನೆಲ್ಲ ಮುಚ್ಚಿಡು. ನಿನ್ನ ತಮ್ಮ ಬಂದಿದ್ದಾನೆ. ಎಲ್ಲಿ ಕುಳಿತಿದ್ದವನೋ ನೋಡಿಕೊಂಡು ?"

"ಈ ಖೋಡಿ ಏಕೆ ಬಂತವ್ವ ಎಂದು ತಲೆಕಟ್ಟಿಕೊಂಡು ಮಲಗಿ ಬಿಟ್ಟಳು, ಜಡ್ಡಿನ ಸೋಗಿನಿ೦ದ.

ಅತಿಥಿಯಾಗಿ ಬೀಗ ಮನೆಗೆ ಬ೦ದನು. ಆತನಿಗೆ ಕುಡಿಯಲು ನೀರು ಸಹ ಕೊಡಲಿಲ್ಲ ಯಾರೂ. ಅಕ್ಕನಂತೂ ಹಾಸಿಗೆಯನ್ನೇ ಹಿಡಿದಿದ್ದಾಳೆ. ಬದುಕುವಳೋ ಇಲ್ಲವೋ ?