ಪುಟ:ಉತ್ತರ ಕರ್ನಾಟಕದ ಜಾನಪದ ಕಥೆಗಳು.pdf/೧೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಸತ್ತೇನು ಗುಬ್ಬಿ?

ಬೆಳೆಗಾಲ. ಹೊಲದಲ್ಲಿ ಜೋಳದ ನಿಲುವು, ಮಗಿಯಷ್ಟು ಗಡುತರವಾದ ತೆನೆ ಹೊತ್ತು ತೂಗಲಾಡುತ್ತಿದೆ.

ಹೊಲದವನು ನಡುಹೊಲದಲ್ಲಿ ಕಟ್ಟಿದ ಮಂಚಿಕೆಯನ್ನೇರಿ ನಿಂತು, ಕವಣೆಯಲ್ಲಿ ಕಲ್ಲು ಬೀಸಾಡಿ ಹಕ್ಕಿಗಳನ್ನು ಓಡಿಸುತ್ತಿದ್ದನು. ಬೀಸಾಗಿ ಬಂದ ಕವಣೆಗಲ್ಲಿನ ರಭಸಕ್ಕಂಜಿಯೇ ಹಕ್ಕಿಗಳೆಲ್ಲ ಹಾರಿಹೋದವು, ಆದರೆ ಒಂದು ಗುಬ್ಬಿ ಮಾತ್ರ ಹಾರಿ ಹೋಗದೆ, ಒಂದು ತೆನೆಯನ್ನು ಗಟ್ಟಿಯಾಗಿ ಹಿಡಿದುಕೊಂಡು ಕುಳಿತಿತು. ಹೊಲದವನ ಬಾಯ ಬೆದರಿಕೆಗಾಗಲಿ, ಬಾರಕೋಲಿನ ಸಪ್ಪಳಕ್ಕಾಗಲಿ ಅದು ಮಿಸುಕಲಿಲ್ಲ; ಕವಣೆಗಲ್ಲಿಗೂ ಹಣಿಯಲಿಲ್ಲ.

ಅಟ್ಟದಿಂದಿಳಿದು ಕಾವಲಿಗನು ಆ ಗುಬ್ಬಿ ಕುಳಿತಲ್ಲಿಗೆ ಮೆಲ್ಲನೆ ಹೋಗಿ ಅದನ್ನು ಗಪ್ಪನೆ ಹಿಡಿದು ತಂದು, ಅದರ ಕಾಲಿಗೆ ದಾರಕಟ್ಟಿ ಅಟ್ಟದ ಕಾಲಿಗೆ ಬಿಗಿದನು. ಆದರೂ ಅದು ಪಕ್ಕ ಬಿಚ್ಚಿ ಫಡಫಡಿಸುತ್ತಲೇ ಇತ್ತು. ಅದನ್ನು ಕಂಡು ಕಾವಲಿಗನು ಕೇಳಿದನು - “ಸತ್ತೇಯೇನು ಗುಬ್ಬಿ?”

ಆ ಗುಬ್ಬಿ ಹೇಳಿತು –

ಗುಂಡ ಗುಂಡ ತೆನಿ ತಿಂದು
ಗುಂಡದಾಗ ನೀರು ಕುಡಿದು
ಮಂಚಗೀ ಕಾಲಿನಲ್ಲಿ
ಜೋಕಾಲಿ ಆಡಹತ್ತಿದ್ದೇನೆ.
ನಾನೇಕೆ ಸಾಯುವನು ?”

ಹೊಲದವನು ಅದನ್ನು ಬಿಚ್ಚಿ ಕೊಂಡೊಯ್ದು ಹರಿಯುವ ಹಳ್ಳದಲ್ಲಿ ಒಗೆದನು, ಆಗಲೂ ಅದು ಫಡಫಡಿಸುತ್ತಲೇ ಇತ್ತು. ಅದನ್ನು ಕಂಡು - “ಸತ್ತೆಯಾ ಗುಬ್ಬಿ” ಎಂದು ಕೇಳಿದನು. ಗುಬ್ಬಿ ಹೇಳಿತು -

“ಗುಂಡ ಗುಂಡ ತೆನಿ ತಿಂದು
ಗುಂಡದಾಗ ನೀರು ಕುಡಿದು
ಮಂಚದಕಾಲೀಗಿ ಜೋಕಾಲಿ ಆಡಿ