ಪುಟ:ಕ್ರಾಂತಿ ಕಲ್ಯಾಣ.pdf/೩೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ರಾಜಗೃಹದಿಂದ ಹೊನ್ನಮ್ಮನ ಚಾವಡಿಗೆ

೩೩೧


ಮತ್ತಾರೂ ಇರುವುದಿಲ್ಲ. ಈಗ ಅವರು ತಮ್ಮ ಮಿತ್ರರೊಬ್ಬರೊಡನೆ ಪಾನಗೋಷ್ಠಿಯಲ್ಲಿದ್ದಾರೆ. ನೀನು ಅವರನ್ನು ಒಲಿಸಿ, ಈ ರಾತ್ರಿಯನ್ನು ಅವರೊಡನೆ ಕಳೆಯಬೇಕು.

ಹೆಗ್ಗಡೆ ಹೇಳಿದ “ದೊಡ್ಡವ್ಯಕ್ತಿ” ಜಗದೇಕಮಲ್ಲರಸರೇ ಎಂಬುದನ್ನು ಉಷಾವತಿ ತಿಳಿದಳು. ತಾನು ಹುಡುಕಿಕೊಂಡು ಬಂದ ನಿಧಿ ತಾನಾಗಿ ಕರೆಯುತ್ತಿರುವಾಗ ನಿರಾಕರಿಸುವುದು ಸಾಧ್ಯವೆ? ಆದರೆ ಇಂತಹ ನೀತಿಭ್ರಷ್ಟ ಸಲಹೆಗೆ ಕೂಡಲೆ ಒಪ್ಪುವುದು ನಗರದ ವಣಿಕ ಪುತ್ರಿಗೆ-ಅವಳು ವಿಧವೆಯೇ ಆಗಲಿ-ಉಚಿತವಲ್ಲವೆಂದು ಯೋಚಿಸುತ್ತ ಸುಮ್ಮನೆ ನಿಂತಳು.

ಹೆಗ್ಗಡೆ ಪುನಃ ಹೇಳಿದನು : “ನೀನು ಧೂರ್ತರಿಂದ ಅಪಹರಿಸಲ್ಪಟ್ಟಿಯೆಂದು ಕೇಳಿದಾಗ ನಿನ್ನ ಶೀಲಭಗವಾಯಿತೆಂದೇ ಜನರು ತಿಳಿಯುವರು. ನನ್ನ ಸಲಹೆಯಂತೆ ನಡೆಯುವುದರಿಂದ ನೀನು ಹೊಸದೇನನ್ನೂ ಕಳೆದುಕೊಳ್ಳುವುದಿಲ್ಲ. ನೀನು ಯಾವುದನ್ನು ಕಳೆದುಕೊಂಡೆಯೆಂದು ಜನರು ತಿಳಿಯುವರೋ ಆ ಶೀಲದ ವಿಕ್ರಮದಿಂದ ನಿನ್ನ ಬಿಡುಗಡೆಯನ್ನು ನೀನೇ ಸಾಧಿಸಿಕೊಳ್ಳುವೆ.”

ಆಗಲೂ ಉಷಾವತಿ ಮೌನ. ಅರ್ಥಗರ್ಭಿತವಾಗಿ ಮೂಗನ್ನು ಕೆರೆದುಕೊಳ್ಳುತ್ತ ನಿಂತಿದ್ದಳು ಅವಳು.

ಹೆಗ್ಗಡೆ ಮತ್ತೆ ಹೇಳಿದನು : “ನಾನು ಮೂಕಳು. ನಿಮ್ಮ ಪ್ರಭುಗಳ ಸೇವೆಗೆ ಅರ್ಹಳಲ್ಲ-ಎಂದು ಸಂದೇಹವಲ್ಲವೇ ನಿನಗೆ? ಹೂವುಗಳಿಗೆ ಬಾಯಿಲ್ಲ. ಅವು ಮಾತಾಡುವುದಿಲ್ಲ. ಆದರೂ ಹೂವಿನ ಸೌಂದರ್ಯ ಸುಗಂಧಗಳಿಗೆ ಮನಸೋತು ಜನರು ತಲೆಯಲ್ಲಿ ಮುಡಿಯುವರು, ಕೈಯಲ್ಲಿ ಹಿಡಿಯುವರು, ಮಾಲೆ ಕಟ್ಟಿ ಕೊರಳಿಗೆ ಹಾಕಿಕೊಳ್ಳುವರು. ನೀನು ಕೂಡ ಹೂವಿನಂತೆ ಸೌಂದರ್ಯಮಯಿ, ಸುಗಂಧವತಿ. ಸಹಜ ಸೌಂದರ್ಯಕ್ಕೆ ವಿಲಾಸವಿಭ್ರಮಗಳ ಮೆರುಗು ಹಚ್ಚುವ ಚತುರತೆಯಿದೆ. ನೀನು ಮೂಕಳೇ ಆಗಿರು, ಪ್ರಭುಗಳು ನಿನ್ನನ್ನು ಮೆಚ್ಚುವರೆಂದು ಭರವಸೆ ಕೊಡುತ್ತೇನೆ.”

ಹೆಗ್ಗಡೆಯ ವಾದ ವೈಖರಿ, ಮೊನೆಗೊಂಡ ಚಿಗುರು ನುಡಿಗಳು, ಉಷಾವತಿಗೆ ವಿಚಿತ್ರವಾಗಿ ಕೇಳಿಸಿತು. ಮುಖದಲ್ಲಿ ಮಿದುನಗೆ ಮೂಡಿತು. ತಲೆಯಾಡಿಸಿ ಸಲಹೆಗೆ ಒಪ್ಪಿಕೊಂಡಳು.

ಹೆಗ್ಗಡೆ ಆಸನದಿಂದೆದ್ದು ಉಷಾವತಿಯನ್ನು ಅರಮನೆಯೊಳಗಿನ ಕೊಠಡಿಯೊಂದಕ್ಕೆ ಕರೆದುಕೊಂಡು ಹೋಗಿ, “ಇಲ್ಲಿ ನಿನಗೆ ಬೇಕಾದ ಪ್ರಸಾಧನೋಪಕರಣಗಳು, ವಸ್ತ್ರಾಭರಣಗಳು, ಎಲ್ಲವೂ ಇವೆ. ನಿನಗೆ ಬೇಕಾದ