ಈ ಪುಟವನ್ನು ಪರಿಶೀಲಿಸಲಾಗಿಲ್ಲ.
೧೭೦ ನೋವು
ಕಿವಿ ಕಿವುಡಾಗುವಂತೆ ಭಾಗೀರಥಿ ಏರಿದ ಧ್ವನಿಯಲ್ಲಿ ಅನ್ನತೊಡಗಿದಳು : "ಸರಿ ಹೋಗ್ಬೇಕಾ ? ಹೋಗ್ಬೇಕಾ ನಾನು? ಓಡಿಸ್ಬಿಡ್ತೀರಾ ನನ್ನ ? ಓಹೋ ಹೋ ಹೋ ! ಅಷ್ಟು ಸುಲಭ ಅಂದ್ಕೊಂಡ್ರಾ? ಬನ್ನಿ. ಬನ್ನೀ ಅಂದೆ. ಹೋಟ್ಲಿನೋರೂ ಬರ್ಲಿ ! ಕಪ್ಪು ಕೋಟಿನೋರೂ ಬರ್ಲಿ ! ನಾನು ಯಾರೂಂತ ಒಮ್ಮೆ ಸರಿಯಾಗಿ ನೋಡಿ.ಸಿಗಿದ್ಬಿಡ್ತೀನಿ! ಚಕ್ಕಳ ಸುಲೀತೀನಿ ! ಕರುಳು ಕಿತ್ತು ಗುಂಡಿಗೆ ಬಗೆದು ರಕ್ತ ಕುಡೀತೀನಿ." ದೊಡ್ಡಮ್ಮ ಮೃದುವಾಗಿ ಮಾತುಗಳನ್ನಾಡಿದರು : "ಹಾಗೆಲ್ಲ ಮಾತಾಡ್ಬಾರದಮ್ಮ, ಭಾಗೀ...... ನೋಡು, ನಾನು ಯಾರೂಂತ ನೋಡು. ದೊಡ್ಡಮ್ಮ ಅಲ್ವಾ...? "ದಡ್ಡಮ್ಮಾ, ದಡ್ಡಮ್ಮಾ ! ಎಲ್ಲಮ್ಮಾ ನನ್ಮಗು? ಕಿತ್ಕೊಂಡ್ಬಿಟ್ಯಾ ? ಎಲ್ಲಿ ಶ್ರಿಪಾದ? ನಿಮ್ಮ ಪಾದದಿಂದ ಶ್ರಿಪಾದನ್ನ ತುಳೀತೀರಾ? ಪಾಪಿಗಳೆ! ಕರಕೊಂಡ್ಬನ್ರೀ. ಆ ಮಗೂನ ಗಂಡಸು ಮಾಡ್ತೀನಿ !" ದೊಡ್ಡಮ್ಮ ಕೂಗಿ ನುಡಿದರು : "ಗೋವಿಂದೂ, ಶ್ರಿಪಾದನ್ನ ಎತ್ಕೊಂಡ್ಬಾ !" ಮಗುವನ್ನು ನೋಡಿದ ಮೇಲಾದರೂ ಭಾಗೀರಥಿಯ ಚೀರಾಟ ನಿಂತಿತೇನೋ ಎಂಬ ಆಸೆ ಅವರಿಗೆ. ಗೋವಿಂದ ಶ್ರೀಪಾದನನ್ನು ಕರೆದುಕೊಂಡು ಬಂದ. ಅದರ ಕೈಯಲ್ಲಿ ವಿಷ್ಣುಮೂರ್ತಿ ಕಳುಹಿಸಿದ ಗೊಂಬೆ ಇತ್ತು. ಭಾಗೀರಥಿ ಅಂದಳು : "ಥೂ ! ಮು೦ಡೇದೇ ! ಯಾರ ಜತೇಲಿದ್ಯೋ ಇಷ್ಟ್ಹೊತ್ತು ? ನಾಚ್ಕೆ ಆಗೋ ಲ್ವೇನೊ ನಿಂಗೆ ! ಬಾರೋ ಇಲ್ಲಿ !" ಅಳುಕುತ್ತ ದೊಡ್ಡಮ್ಮ ಮುಸು ಮುಸು ಅಳುತ್ತಿದ್ದ ಶ್ರಿಪಾದನನ್ನು ಮುಂದಕ್ಕೆ ತಳ್ಳಿದರು. ಭಾಗೀರಥಿ ಸರಕ್ಕನೆ ಮಗುವನ್ನು ತನ್ನೆಡೆಗೆ ಎಳೆದುಕೊಂಡಳು. ಗೊಂಬೆಯನ್ನು ಕಿತ್ತೆಸೆದು ಮಗುವನ್ನು ಬೋರಲಾಗಿ, ನೆಲಕ್ಕೆ ಅಮುಕಿ, ಡಬ್ ಡಬ್ ಡಬ್ಬೆಂದು ಬೆನ್ನಿಗೆ ಗುದ್ದತೊಡಗಿದಳು. ಮಗು ಚಿಟ್ಟೆಂದು ಚೀರಿ ರೋದಿಸಿತು. "ಅಯ್ಯೋ ಪಾಪಿ," ಎನ್ನುತ್ತ ದೊಡ್ಡಮ್ಮ ಶ್ರಿಪಾದನನ್ನು ಬಿಡಿಸಿಕೊಳ್ಳಲು ಯತ್ನಿಸಿದರು. "ಗಂಡ್ನಂತೆ ಗಂಡ ! ಗಂಡ್ಸಂತೆ ಗಂಡ್ಸು !" ಎಂದು ಭಾಗೀರಥಿ ಮಗುವಿಗೆ ಮತ್ತೂ ಗುದ್ದಿದಳು. ದೊಡ್ಡಮ್ಮ ಅಂದರು : "ಏನ್ ನೋಡ್ತಿದೀಯಾ ಶೀನ ? ಬಾ, ಹಿಡಿ ಇವಳ್ನ; ಗೋಪೂ ಬಾರೋ ! ಮಗೂನ ಬಿಡಿಸಿ ! ಇವಳ್ನ ಕೋಣೆಗೆ ತಳ್ಳಿ!" ಜಗಲಿಯಲ್ಲಿದ್ದ ವಿಷ್ಟುಮೂರ್ತಿಯವರೂ ಮೋಹನರಾಯರೂ ಒಳಗೆ ಬಂದರು.