ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಆತಂಕ

೬೯

ನೋಡಿದ, ಯಾವ ಮಾತನ್ನೂ ಆಡಲೊಲ್ಲ. ಕಂಡಕ್ಟರು ಕೆಟ್ಟಕೆಟ್ಟದಾಗಿ ಬೈದರೂ ಯಾವ ಪ್ರತಿಕ್ರಿಯೆಯೂ ಬರಲಿಲ್ಲ. ಸುಮಾರು ಮೂವತ್ತು ಮೈಲಿಗಳೂ ಆದಮೇಲೆ, ಬಸ್ಸಿನ ಮೊದಲ ನಿಲ್ದಾಣವು ಸಿಕ್ಕಿತು. ಬಸ್ಸಿನಿಂದ ಇವನನ್ನು ಕಂಡಕ್ಟರ್ ಹೊರಕ್ಕೆ ದೂಡಿದ. ಕಿಮಕ್ಕಮಕ್ ಅನ್ನದೆ ಇವನೂ ಇಳಿದ. ಎದುರಿನಲ್ಲಿ ಒಂದು ಸಣ್ಣ ಕೆರೆಯೊಂದಿತ್ತು. ಅದರ ಏರಿಯ ಬಳಿ ಕಲ್ಲು ಬೆಂಚೊಂದಿತ್ತು. ಅದರ ಮೇಲೆ ಹೋಗಿ ಕುಳಿತ. ತಿಂಡಿಯ ಆತುರವಿಲ್ಲ, ನಿದ್ರೆಯ ಅಗತ್ಯವಿರಲಿಲ್ಲ. ಕಡೆದ ವಿಗ್ರಹದಂತೆ ಜಡವಾಗಿ ಕೂತಿದ್ದ.

ಯಾವಾಗಲೋ ಅಲ್ಲಿಂದ ಎದ್ದು ಬಂದ. ನಿಂತಿದ್ದ ಬಸ್ಸಿನಲ್ಲಿ ಹೋಗಿ ಕುಳಿತುಕೊಂಡ. ಆ ಬಸ್ಸು ಇವನ ಊರಿನ ಕಡೆಗೆ ಹೋಗುತ್ತಿತ್ತು. ಅದೊಂದೂ ಇವನಿಗೆ ತಿಳಿಯದು. ಆ ಬಸ್ಸಿನ ಕಂಡಕ್ಟರ ಕೈಯಲ್ಲೂ ಬಾಯಿಗೆ ಬಂದ ಹಾಗೆ ಬೈಸಿಕೊಂಡು, ನಿಲ್ದಾಣದಲ್ಲಿ ಇಳಿಸಲ್ಪಟ್ಟ.

ತನ್ನ ಊರ ಬಸ್ ನಿಲ್ದಾಣಕ್ಕೆ ಹಿಂತಿರುಗಿದಾಗ, ಮಸುಕು ಮಸುಕಾಗಿ, ಸ್ಮರಣೆಯು ಬರಹತ್ತಿತು. ನಿಲ್ದಾಣದಿಂದ ನಡೆದ, ತನ್ನ ಮನೆ ಸಿಕ್ಕಿತು. ಒಳಕ್ಕೆ ಹೋದ, ಮಂಕಾಗಿ ಕುಳಿತ.

ಆ ಅವಧಿಯಲ್ಲಿ ನಾಲ್ಕು ದಿನಗಳು ನಾಲ್ಕು ರಾತ್ರಿಗಳು ಕಳೆದಿದ್ದುವು ಎನ್ನುವುದು ಅವನಿಗೆ ಗೊತ್ತೇ ಇಲ್ಲ. ಅಷ್ಟೂ ಕಾಲದಲ್ಲಿ ಊಟವಿಲ್ಲ ತಿಂಡಿಯಿಲ್ಲ, ಪ್ರಪಂಚದ ಪರಿವೆಯೇ ಇಲ್ಲ.

ಹಿರಿಯರು ಶಾಪವನ್ನು ಕೊಟ್ಟರೆ, ಅದು ಸತ್ಯವಾಗಿಬಿಡುತ್ತದೆ, ಎಂದು ಹಿಂದಿನ ಕಾಲದಲ್ಲಿ ಜನರು ನಂಬುತ್ತಿದ್ದರು. ಆ ನಂಬಿಕೆಯು ನಮ್ಮಲ್ಲಿ ಇನ್ನೂ ಬಹಳಷ್ಟು ಉಳಿದೇ ಇದೆ. ಮಾತೃಸ್ಥಾನದಲ್ಲಿರುವ ಅತ್ತಿಗೆಯು ಶಾಪವನ್ನು ಕೊಟ್ಟರು. ಅದು ನಡೆದೇ ಹೋಗುತ್ತೆ ಎನ್ನುವ ತೀವ್ರ ಭಯ ಒಂದು ಕಡೆ, ಹೀಗೆ ರೇಗುವಂತೆ ಆಕೆಯ ಹತ್ತಿರ ಹದ್ದುಮೀರಿ ಮಾತನಾಡಿದ್ದು ಘೋರ ಪಾಪ ಎನ್ನುವ ಕೊರೆತವು ಇನ್ನೊಂದು ಕಡೆ. ಜೊತೆಗೆ ಸೂಕ್ಷ್ಮಪ್ರವೃತ್ತಿಯ ಮನಸ್ಸು ಅವನದು. ಅತ್ತಿಗೆಯು ಆರೈಕೆಯನ್ನು ಇವನ ಚಿಕ್ಕಂದಿನಿಂದ ಮಾಡಿದ್ದರೂ, ಅದು ಆಕೆಯ ಔದಾರ್ಯವೆಂದನಿಸಿತ್ತು. ಕೃತಜ್ಞತೆಯೂ ತುಂಬಾ ಇತ್ತು. ಆದರೆ ಅದು ನನ್ನ ಹಕ್ಕು ಎನ್ನುವ ಭಾವನೆಯು ಬಂದೇ ಇರಲಿಲ್ಲ. ತಾಯಿಯೊಬ್ಬಳಲ್ಲಿ ಮಾತ್ರ ಹಕ್ಕಿನ ಭಾವನೆಯು ಬರಲು ಸಾಧ್ಯ. ಔದಾರ್ಯದ ಉರುಲಿನಲ್ಲಿ ಬೆಳೆದು ಬಂದವನಿಗೆ ಎಂದೂ ಸಂಕೋಚದ ಪ್ರವೃತ್ತಿಯೇ, ಅಂತಹ ಸೂಕ್ಷ್ಮ ಸ್ವಭಾವದವನಿಗೆ, 'ನಾಶವಾಗಿ ಹೋಗು, ಹಾಳಾಗಿ ಹೋಗು' ಎಂದು ಅನಿರೀಕ್ಷಿತವಾಗಿ ಅತ್ತಿಗೆಯು