ಪುಟ:ವೈಶಾಖ.pdf/೩೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಮಗ್ರ ಕಾದಂಬರಿಗಳು ೩೨೫ ರುದ್ರ, ತನ್ನ ಕೈ ಕಾಲುಗಳನ್ನು ರಕ್ತ ಸೋರುವುದನ್ನು ಮನಸ್ಸಿಗೆ ಹಚ್ಚಿಕೊಳ್ಳದೆ, ಆವೇಶಬಂದವನಂತೆ ಲಕ್ಕನನ್ನು ಹಿಗ್ಗಾಮುಗ್ಗ ಬಡಿಯಲು ಪ್ರಾರಂಭಿಸಿದ... ಲಕ್ಕನಿಗೆ ಒಂದೊಂದು ಏಟು ಬಿದ್ದಾಗಲೂ ಕೃಷ್ಣಶಾಸ್ತ್ರಿ ತಮ್ಮ ದೇಹಕ್ಕೆ ಏಟು ಬಿದ್ದಂತೆ ನರಳಿದರು. ನಿಸ್ಸಹಾಯಕರಾಗಿ ಅವರ ಒಳಜೀವ ಮುಲುಕಿತು. 'ತೇನ ವಿನಾ ತೃಣಮಪಿ ನ ಚಲತಿ'... ಇದನ್ನು ಗಮನಿಸಿ ಅವರನ್ನು ಸುತ್ತುವರಿದ ಬ್ರಾಹ್ಮಣ ಗಣದ ಜೊತೆಗೆ ಚಾವಡಿಯೊಳಗಿನ ಎಲ್ಲ ಯಜಮಾನರೂ ಮೂಕವಿಸ್ಮಿತರಾದರು. ಅವರ ದೊಡ್ಡಪ್ಪನ ಮಗ ಸುಬ್ಬಾವಧಾನಿಗಳು, “ಈ ಕಿಟ್ಟಣನಿಗೆ ಇವತ್ತೇನಾಗಿದೆ-ಒಳ್ಳೆ ಬುದ್ಧನ ಹಾಗೆ ಆಡ್ತಾ ಇದಾನಲ್ಲ?” ಎಂದು ವ್ಯಥೆಪಟ್ಟರು. ಕೃಷ್ಣ ಶಾಸ್ತ್ರಿಗಳಿಗೆ ಆ ದೃಶ್ಯವನ್ನು ನೋಡುತ್ತ ಕೂರಲು ಸಾಧ್ಯವಾಗದೆ ಅಲ್ಲಿಂದೆದ್ದರು. ತಮ್ಮ ಜ್ಞಾತಿ ಕಾಶಿಪತಯ್ಯನವರ ತೊಡೆಯ ಮೇಲೆ ಕುಳಿತು ಆಳುತ್ತಿದ್ದ ಸರಸಿಯನ್ನು ಎತ್ತಿಕೊಂಡು ಮನೆಯ ಕಡೆ ಹೊರಟರು. ಶಾಸ್ತ್ರಿಗಳು ಮನೆಯೊಳಗೆ ಬಂದಾಗ ರುಕ್ಕಿಣಿಯು ತೊಟ್ಟಿಯ ಕಂಬವೊಂದನ್ನು ಒರಗಿ ಕುಳಿತಿದ್ದಳು. ಅವಳ ಕಣ್ಣಿನಲ್ಲಿ ಇಲ್ಲಿಯತನಕ ಒಂದೇ ಸಮನೆ ಸುರಿದ ನೀರು ಈಗ ನಿಂತಿರುವಂತಿತ್ತು. ಆದರೆ ಅವಳ ದೃಷ್ಟಿ ಮಾತ್ರ ಅಂಗಳದ ಮೇಲಿನ ಆಕಾಶದಲ್ಲಿ ನೆಟ್ಟಿತ್ತು. ಇದನ್ನು ನೋಡಿದ ಶಾಸ್ತ್ರಿಗಳು ತಾವು ಎತ್ತಿದ್ದ ಸರಸಿಯನ್ನು ಕೆಳಗಿಳಿಸಿದರು. ಸರಸಿ ಅಳುತ್ತಲೆ, “ಅತ್ತೆ-ಅತ್ತೆ” ಎಂದು ಕೂಗುತ್ತ ರುಕ್ಕಿಣಿಯ ಬಳಿಗೆ ಓಡಿದಳು. ರುಕ್ಕಿಣಿಯು ಯಾಂತ್ರಿಕವಾಗಿ ಅವಳನ್ನು ತನ್ನ ಎದೆಗೆ ಅಪ್ಪಿಕೊಂಡಳು. ೩೩ ಲಕ್ಕನಿಗೆ ಛಡಿ ಏಟಿನ ಶಿಕ್ಷೆ ಮುಗಿದ ತರುವಾಯ, ದರುಮನಹಳ್ಳಿಯ ನ್ಯಾಯ ಸ್ಥಾನವು ಅವನನ್ನು ಹಳ್ಳಿಯಿಂದಾಚೆಗೆ ಗಡೀಪಾರುಮಾಡುವ ತೀರ್ಮಾನಕ್ಕೆ ಸರ್ವಾನುಮತದಿಂದ ಒಪ್ಪಿಗೆ ಕೊಟ್ಟಿತು. ಅವನಿಗೆ ಹಳ್ಳಿಯಲ್ಲಿ ಯರೂ ಬೆಂಕಿ ಬಿಸಿನೀರುಗಳನ್ನು ಕೊಡುಕೂಡದೆಂತಲೂ ಅವನು ಗ್ರಾಮದ ಎಲ್ಲೆ ಕಟ್ಟಿನ ಹೊರಗೆ ಕೂಡಲೆ ಹೊರಟುಹೋಗಬೇಕೆಂತಲೂ, ಮತ್ತೆ ಎಂದು ಆ ಗ್ರಾಮದೊಳಗೆ. ಪ್ರವೇಶಿಸಬಾರದೆಂತಲೂ ಕಟ್ಟಾಜ್ಞೆಮಾಡಿ, ಕುಳುವಾಡಿ ಕುಂದೂರಯ್ಯನಿಂದ ಸಾರಿಕೆ ಕೊಡಿಸಿದ್ದರು.