ರಿಸಿಯೂ, ಸ್ವರಯುಕ್ತವಾದ ಗಾನದ ಜಯಘೋಷದಿಂದಲೂ, ಕೆಲವರು, ಮಂತ್ರಪೂತವಾದ ಅರ್ಘ್ಯನಮಸ್ಕಾರಗಳಿಂದಲೂ, ನೆಲಕ್ಕೆ ತಿಳಿಸಿದ್ದೀರಿ. ಈ ಸದಾಗತಿ (ಗಾಳಿ), ನನ್ನ ಬಿರುಸು ಎಷ್ಟಿದ್ದರೂ ಸೈರಿಸಿಕೊಂಡು, ಎಡೆಯ ರಿತು, ತನ್ನ ಬೀಸಣಿಗೆಯನ್ನು ಬೀಸುತ್ತಿರುವುದನ್ನು, ಎಷ್ಟು ಹೇಳಿದರೂ ಕಡಮೆಯೆ. ಏನೂ ತಿಳಿಯದ ಈ ಪಶುಪ್ರಾಣಿಗಳೂ, ತಮ್ಮ ಕರುಗಳ ಬಾಯಿಗಟ್ಟಿ, ತಮ್ಮ ಹಾಲನ್ನು, ನನ್ನ ನೈವೇದ್ಯಕ್ಕಾಗಿ, ಅರ್ಪಿಸಿದ್ದಾನೆ. ತೇಜಸ್ವಿ (ಅಗ್ನಿ) ಯೆಂದರೆ, ಯಜ್ಞಯಾಗಾದಿಗಳಿಂದ ದೇವತೆಗಳ, ಅಡಿಗೆಯ ಭಕ್ಷ್ಯಭೋಜನಾದಿಗಳಿಂದ ಮನುಷ್ಯರ, ಆಹಾರಕ್ಕೆ ಕಾರಣಭೂತನು. ಇನ್ನೂ ಅಸಂಖ್ಯರಾದ ನಿಮ್ಮ ಕೃತಜ್ಞತೆಯನ್ನು ಎಷ್ಟು ಹೇಳಿದರೂ, ಸಮುದ್ರಕ್ಕೆ ಹಿಂಗುಕದಡಿದಂತೆ ಕಡಮೆಯೇ ಸರಿ. ನಿಮ್ಮ ಈ ಉಪಕಾರಗಳಿಗೆಲ್ಲ, ಕಾರ್ಯರೂಪವಾಗಿಯೇ ಪ್ರತಿಫಲವನ್ನು ಕಟ್ಟಿಕೊಡಬೇಕೆಂದು, ನನ್ನ ಎಣಿಕೆಯಿತ್ತು. ಮಾಡುವುದೇನು? ಈ ಕಾಲಗತಿಯಿಂದಾಗಿ, ಈ ಬಂಧುವಿಗೆ, ನಿಮ್ಮನ್ನಗಲಿ ದೂರವಿರುವ ಕಠಿಣಸಂದರ್ಭವು ಹತ್ತಿರವಾದುದರಿಂದ, ಹೂಗೊಡುವಲ್ಲಿ, ಹೂವಿನ ಎಸಳಿನಿಂದಲೆ ತೀರಿಸಬೇಕಾಗಿದೆ.
ಕಾಲ:-ಆರ್ಯನೆ, ನೀನು, ನನ್ನ ಕಾರ್ಯ ಭಾರವನ್ನು ತಿಳಿಯದವನಲ್ಲ. ಆ ಭಾರವನ್ನು ಹೊತ್ತು, ಲೋಕಕ್ಕೆ ತಿಳಿಸುವುದರಿಂದಲೆ, ನಿನಗೆ 'ಹೊತ್ತು!' ಎಂಬ ಹೆಸರೂ ಬಂದಿದೆ. ಎಲ್ಲವನ್ನೂ ತಿಳಿದ ನೀನು, ನೆವವನ್ನೊಡ್ಡಿ ಆಲಸ್ಯಮಾಡಿದರೆ, 'ಆಳಿನ ತಪ್ಪು ಅರಸಿನ ಮೇಲೆ' ಎಂಬಂತೆ ಪರಮಾತ್ಮನ ಸಮಕ್ಷದಲ್ಲಿ, ಎಲ್ಲವೂ ನನ್ನ ತಪ್ಪಾಗಿ ತೋರುವುದು. ಯಾಕೆಂದರೆ-ಕಾಲ ಸೂಚಕರಾದ ನಿಮ್ಮೊಳಗೆ ಒಬ್ಬನಾದ ನಕ್ಷತ್ರಪತಿಯೆಂಬವನು, 'ಕ್ಷಯರೋಗ' ವೆಂದು ಹೇಳುತ್ತ, ಆಗಾಗ, ಕೆಲಸಕ್ಕೆ ಬರುವುದಿಲ್ಲ. ನಿನ್ನ ಅವಸ್ಥೆಯೂ ಹೀಗೆ. ಕಾಲಬೋಧಕವಾದ ಗಡಿಯಾರ (ಘಟಿಕಾಗಾರ)ಗಳೆಂಬ ನಿಮ್ಮ ಗತಿ ಹೀಗಾಗಹತ್ತಿದರೆ, ದಿನಗಳೆದಂತೆ ಒಬ್ಬೊಬ್ಬರು ಒಂದೊಂದು ಗಡಿ ಯಾರಗಳನ್ನು ಕೈಗೆ ಕಟ್ಟಿಕೊಳ್ಳುವ ಎಡೆಯುಂಟಾಗುವುದು. ಆ ಕೃತ್ರಿಮ ಯಂತ್ರಗಳು ತೋರುವ ಕಾಲವೂ, ಬೂತಗನ್ನಡಿಹಿಡಿದ ಮೋರೆಯಂತೆ, ಕೃತ್ರಿಮವೆ. ಅದರಿಂದಲೆ, ಕಾರ್ಯಕ್ರಮಗಳೊಂದೂ, ಸರಿಯಾಗದೆ, ಅದರಲ್ಲಿ, ಲೋಕಕ್ಕೆ ಅಸಡ್ಡೆಯುಂಟಾಗಿ ಧರ್ಮವೆಲ್ಲವೂ ಕೆಡುವುದು,