ಈ ಪುಟವನ್ನು ಪರಿಶೀಲಿಸಲಾಗಿಲ್ಲ.
೨೦೮ ಏಕಾಂಗಿನಿ
ಕುಸುಮೆಗೆ ಸಮಿತಿಯ ಅಧ್ಯಕ್ಷರ ಮನೆಯಿಂದ ಕರೆ ಬಂತು. "ಹೋಗ್ಬೇಡಿ, ಬಂದೆ," ಎಂದು ಸುನಂದೆಯನ್ನು ಇರಹೇಳಿ ಕುಸುಮಾ, ಆ ಮನೆಗೆ ಹೋಗಿ ಸ್ವಲ್ಪ ಹೊತ್ತಿದ್ದು ಬಂದಳು. "ನಮ್ಮವರು ಇನ್ನೇನು ಬಂದ್ಬಿಡ್ತಾರೆ. ನಿಮ್ಮನ್ನ ಶೇಷದ್ರಿಪುರದಲ್ಲಿ ಬಿಟ್ಟು ಮನೆಗೆ ಹೋಗ್ತಿನಿ. ಸರೀನಾ?" "ಹಾಗೇ ಆಗಲಮ್ಮ." ಗೆಳತಿಯನ್ನೇ ನೋಡ ತ್ತಾ ಕುಸುಮಾ ಕೇಳಿದಳು: "ಮನಸ್ಸು ಹೇಗಿದೆ ಸುನಂದಕ್ಕ?" "ಕಾಯಿಲೆಯಿಂದ ಎದ್ದಾಗ ಹ್ಯಾಗಿರುತ್ತೋ ಹಾಗೆ. ಬದುಕಿ ಉಳಿದೆನಲ್ಲಾ ಅಂತ ಸಂತೋಷ. ಆದರೂ ನಿತ್ರಾಣ ಇದೆಲ್ಲಾ ಶುರುವಾದಾಗ ಒಂದು ಬಿಳಿ ಕೂದಲು ತಲೇಲಿ ಕಾಣಿಸ್ಕೊಂಡ್ತು. ಆಮೇಲೆ ಎರಡಾಯ್ತು ಈಗ ಹತ್ತಿಪ್ಪತ್ತು ಸಿಗಬಹುದು!" ಸುನಂದೆಯ ಜತೆ ಕುಸುಮೆಯೂ ನಕ್ಕಳು.
"ನಿಮಗೆ ಗೊತ್ತಿಲ್ಲ ಸುನಂದಕ್ಕ. ಬಿಳೀ ಕೂದಲು ನೋಡೋಕೆ ಸೊಗಸಾಗಿರುತ್ತೆ!" "ಇನ್ನೊಬ್ಬರ ತಲೇಲಿದ್ದರೆ ನನಗೂ ಹಾಗೇ ತೋರುತ್ತಮ್ಮ!" ಅನಂತರ ರಾಧಮ್ಮನ ಪ್ರಸ್ತಾಪ ಬಂತು. "ಹೋಗಿ ಹೇಳ್ತೀನಿ ಅವರಿಗೆ ತುಂಬಾ ಸಮಾಧಾನವಾಗುತ್ತೆ" "ಆದರೂ ಅವರನ್ನು ನೋಡೋಕೆ ಒಂದು ಥರಾ ಅಳುಕು" "ಏನಿಲ್ಲ ಸುನಂದಕ್ಕ. ನೀವು ಅವರನ್ನ ಸರಿಯಾಗಿ ತಿಳಕೊಂಡೇ ಇಲ್ಲ. ಮೊನ್ನೆ ಅವರೇನೆಂದರು ಗೊತ್ತೆ? 'ವಿಚ್ಛೇದನ ಅನ್ನೋ ಮಾತು ವಿಶೇಷವಾಗಿದೆಯೇ ಹೊರತು, ಆತನ ಜತೆ ಇನ್ನು ಆಕೆ ಸಂಸಾರ ಮಾಡೋದಿಲ್ಲ ಅನ್ನೋದರಲ್ಲಿ ವಿಶೇಷ ತೋರೋದಿಲ್ಲ'--ಅಂತ." "ನೀವು ಬರೋಕೆ ಮುಂಚೆಯಂತೂ ನನಗಿದ್ದೋರು ಸ್ನೇಹಿತೆ ಅವರೊಬ್ಬರೇ. ಮೈಮೇಲೆಲ್ಲಾ ಮಾಡಿದ ಏಟಿನ ಗಾಯಕ್ಕೆ ಎಣ್ಣೆ ಸುರಿದೋರು ಆಕೆ. ಈಗಲೂ ಮೈಯಲ್ಲಿ ಆ ಗಾಯಗಳಿವೆಯೇನೋ ಅನ್ನೋ ಹಾಗೆ ಒಂದೊಂದು ಸಲ ನನ್ನನ್ನು ನೋಡ್ತಾರೆ.