ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಏಕಾಂಗಿನಿ ೨೦೯
"ಆ ವಿಷಯ ಹೇಳಿದ್ರು. ಅಬ್ಬ!" "ಅವರು ನನಗೆ ಅಕ್ಕನಾಗಿಯೇ ಹುಟ್ಬೇಕಾಗಿತ್ತು. ಎಲ್ಲೋ ಅಪ್ಪಿತಪ್ಪಿ ನೆರೆಹೊರೆಯವರಾದ್ವಿ" ಕುಸುಮಾ ಕೇಳಿದಳು: "ನಾನು" ಸುನಂದಾ ನಕ್ಕಳು. * * * * ಮಗುವನ್ನೆತ್ತಿಕೊಂಡು ಮನೆಗೆ ಬಂದು ತಮ್ಮ ಪಾದಗಳಿಗೆ ನಮಿಸಿದ ಸುನಂದೆಯನ್ನು ಕುರಿತು ರಾಮಕೃಷ್ಣಯ್ಯ ಹೇಳಿದರು: "ದೇವರು ನಿನಗೆ ಒಳ್ಳೇದು ಮಾಡ್ಲಿ, ಮಗೂ. ಬೇರೇನು ಹೇಳಬೇಕೋ ನನಗೆ ತೋಚೋದಿಲ್ಲ." ಅವರಾಕೆಯೆಂದರು: "ಆಗಬಾರದಿತ್ತು. ಆಗಿಹೋಯ್ತು. ಇದೆಲ್ಲಾ ಮನುಷ್ಯರ ಕೈಲಿದೆಯೆ? ನೀನು ಮೊದಲು ಯಾವ ರೀತಿ ನಮಗೆ ಮಗಳಾಗಿದ್ದೆಯೋ ಈಗಲೂ ಹಾಗೆಯೇ." * * * * ವಿಜಯಾ ಕಾಗದ ಬರೆದಳು: "ಸದ್ಯಃ ಮುಗಿಯಿತಲ್ಲ! ನಿನ್ನ ಕಾಗದ ಬಂದ ಮಾರನೆ ದಿನ ಸೋಮಶೇಖರರದೂ ಬಂತು. ಓದಿ ನಮಗಿಬ್ಬರಿಗೂ ಸಮಾಧಾನವಾಯ್ತು. ನಮ್ಮ ಅತ್ತೆಗೆ ಹೇಗೆ ಹೇಳೋಣಾಂತ ತೋಚಲಿಲ್ಲ. ಹೇಗೊ ಅವರಿಗೆ ಸ್ವಲ್ಪ ಸ್ವಲ್ಪ ಗೊತ್ತಿತ್ತು. ಕೊನೆಗೆ ಅವರೂ ನಾನೂ ಸೇರಿಕೊಂಡೇ ಸಮಾಚಾರ ತಿಳಿಸಿದೆವು. 'ಅಯ್ಯೋ!ಹೀಗೂ ಆಯ್ತೆ?' ಅಂದರು. ಸ್ವಲ್ಪ ಹೊತ್ತು ಸುಮ್ಮನಿದ್ದು 'ಅಂಥಾ ಮಹಾ ನೀಚನೆ ಆತ?' ಅಂತ ಕೇಳಿದರು. ಸ್ವಲ್ಪ ಹೊತ್ತು ಆ ನೀಚನ ಗುಣಗಾನ ಮಾಡಿದೆವು. ಅಂತೂ ಮುಗಿಯಿತಮ್ಮ! ನಮ್ಮ ಊರಿನವರಿಗೆ ಈ ವಿಷಯ ತಿಳಿದಾಗ ಏನು ಹೇಳ್ತಾರೊ? ಆ ಮೂಳೆಯಿಲ್ಲದ ನಾಲಿಗೆಗಳು ತೆವಳೋದನ್ನ ಊಹಿಸಿಕೊಳ್ಳಬಲ್ಲೆ. ಹಿಂದೆ ನಿನ್ನ ವಿಷಯ ಏನೇನು ಆಡಿಕೊಳ್ಳುತ್ತಿದ್ದರು! ಆದರೆ ಮನುಷ್ಯತ್ವ ಒಂದಿಷ್ಟಾದರೂ ಇರುವ ಯಾರೂ ನಮ್ಮನ್ನು ಟೀಕಿಸಲಾರರು. ಚಂಪಾಗೆ ಕಾಗದ ಬರೆದಿಯಾ? ನನ್ನ ಹತ್ತಿರ 14