ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಅರ್ಚಕರು ಪ್ರಸಾದವನ್ನು ಹಂಚಿದರು.
ಸೈನ್ಯದ ಶಿಬಿರದಲ್ಲಿ ಕೊಪ್ಪರಿಗೆ ಕಡಾಯಿಗಳನ್ನಿರಿಸಿ ಬ್ರಾಹ್ಮಣರು ಸಿದ್ಧಗೊಳಿಸಿದ ಹಬ್ಬದ ಅಡುಗೆಯನ್ನು ಎಲ್ಲರೂ ಉಂಡರು. ವಿಶ್ರಾಮಕ್ಕೆಂದು ಮೀಸಲಾದ ನಿಮಿಷಗಳು ಕೆಲವೇ. ಸುಳ್ಯದಲ್ಲಿ ದೊರೆತಿದ್ದ ನಾಲ್ಕಾರು ಕುದುರೆಗಳಲ್ಲಿ ರಾಮಪ್ಪಯ್ಯನ ಅರಬ್ಬೀಕುದುರೆಯೇ ಅತ್ಯುತ್ಕೃಷ್ಟವಾಗಿತ್ತು. "ಈ ಕುದುರೆ ಸ್ವಾಮಿಯವರಿಗಿರಲಿ,ಆಗದೆ ?" ಎಂದು ರಾಮಗೌಡ ನಂಜಯ್ಯನನ್ನು ಕೇಳಿದ. " ಅವರನ್ನು ಒಪ್ಪಿಸೋದು ಕಷ್ಟ," ಎಂದ ನಂಜಯ್ಯ. ಆ ಮಾತು ನಿಜವಾಗಿತ್ತು. "ನಾನು ಸಾಕಿ ಬೆಳೆಸಿದ್ದನ್ನು ಬಿಟ್ಟು ಇನ್ನೊಂದರ ಮೇಲೆ? ಊಹೂಂ. ಅದನ್ನು ಅಣ್ಣಿಗೌಡರಿಗೆ ಕೊಡಿ," ಎಂದ ಕಲ್ಯಾಣಸ್ವಾಮಿ. ಆತನೂ ಒಪ್ಪಲಿಲ್ಲ. "ಆ ಕುದುರೆಮೇಲೆ ಕಣ್ಣಿಟ್ಟದ್ದೋರು ಕರಿಯಪ್ಪಣ್ಣ," ಎಂದ ಅಣ್ಣಿಗೌಡ. ಕರಿಯಪ್ಪ. "ಇನ್ನು ಆ ರಾಮಪ್ಪಯ್ಯನನ್ನು ಮರೆತ್ಬಿಡು. ಯುದ್ಧ ಮುಗಿದ್ಮೇಲೆ ನಿನ್ನನ್ನು ಕೊಡಗಿಗೆ ಕರಕೊಂಡ್ಹೋಗಿ ಸಾಕ್ತೀನಿ" ಎಂದ ಕುದುರೆಯನ್ನುದ್ದೇಶಿಸಿ, ಅದರ ಭುಜ ತಟ್ಟುತ್ತಾ. ಸೈನ್ಯದ ಉಸ್ತುವಾರಿಯ ವಿವರಗಳು, ಯೋಧರಿಗೆ ಕೊಡಬೇಕಾದ ಅಪ್ಪಣೆ ಕಟ್ಟಪ್ಪಣೆಗಳು, ಸಿದ್ಧವಾದುವು. "ಇನ್ನು ಒಂದು ಗಳಿಗೆಯೊಳಗೆ ಸೈನ್ಯ ಹೊರಡ್ತದೆ, ತಯಾರಗಿ !"ಎಂದು ರಾಮಗೌಡ ಅನುಜ್ಞೆ ಇತ್ತ. ಆಯುಧಗಳು? ಸುಳ್ಯದಲ್ಲಿ ಎಲ್ಲಿತ್ತು ಶಸ್ತ್ರಾಗಾರ? ಆ ವಿಷಯವನ್ನೂ ರಾಮಗೌಡ ಸ್ಪಷ್ಟಪಡಿಸಿದ: " ಏನೇನಿದೆಯೋ ಅದನೆಲ್ಲಾ ತನ್ನಿ. ಇರೋ ಕೋವಿಗಳು ಕೆಲವೇ. ಅವು ಅಭ್ಯಾಸ ಇರುವವರಿಗೆ ಮಾತ್ರ. ಖಡ್ಗ, ಭರ್ಚಿ, ಈಟ, ಕಠಾರಿ_ ಏನಿದ್ದರೂ ಹಂಚಿಕೊಳ್ಳಿ. ಏನೂ ಇಲ್ಲದವರು ಸದ್ಯಕ್ಕೆ ಬಡಿಗೆ ದೊಣ್ಣೆ ತನ್ನಿ." ಯಾರೋ ಒಬ್ಬ ಸೂಚಿಸಿದ: