ಪುಟ:Kalyaand-asvaami.pdf/೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬೀದಿಯ ಮಾರಿ ಮನೆ ಸೇರಿದ ಮೇಲೆ, ನಿಮಿಷವೂ ತಡಮಾಡದೆ ಪ್ರತಿಯೊಂದನ್ನೂ ತನ್ನ ಆಧೀನಕ್ಕೆ ತೆಗೆದುಕೊ೦ಡಿತು. ಉತ್ತರ ಪಶ್ಚಿಮ ದಕ್ಷಿಣಗಳಲ್ಲಿದ್ದ ಕೊಡಗು ಸೇನೆಗಳನ್ನು ಬೋಪು ದಿವಾನನ ಮೂಲಕವೆ ಇಂಗ್ಲಿಷರು ಮಡಿಕೇರಿಗೆ ಕರೆ ಕಳುಹಿಸಿದರು. ಇದು ಕನಸೆ ? - ಎಂದು ಭ್ರಮೆಗೊಂಡವರು ಅದೆಷ್ಟು ಜನ! ಅಧಿಕಾರದ ಹಣದ ಆಸೆಗೆ ಹಲವರು ತಮ್ಮನ್ನೆ ಮಾರಿಕೊಂಡರು. ಜನಾಂಗದ ಐಕಮತ್ಯದ ದುರ್ಗ ಬಿರುಕು ಬಿಟ್ಟಿತು. ಆ ಬಿರುಕುಗಳಿಗೆಲ್ಲ ಆಂಗ್ಲರು ಬಲವಾಗಿ ಆಪು ಹೊಡೆದು ಒಡಕನ್ನು ಹೆಚ್ಚಿಸಿದರು. ಅರಸರು ಅರಮನೆಯಲ್ಲಿ ಪರಕೀಯರ ದರಬಾರು ! ಹಿಂದೆ ಬೇಟೆಯಾಡಲು ಬ್ರಿಟಿಷರು ಬರುತ್ತಿದ್ದಾಗ ಅವರ ವಾಸಕ್ಕಾಗಿ ಅತಿಥಿ ಗೃಹವನ್ನು ನಿರ್ಮಿಸಿರಲಿಲ್ಲವೆ ದೊಡ್ಡರಾಜೇಂದ್ರ? ಆ ಗೃಹದಲ್ಲೆ ಚಿಕ್ಕವೀರರಾಜೇಂದ್ರನನ್ನೂ ಆತನ ಕುಟುಂಬವನ್ನೂ ಕೈದಿಗಳಾಗಿ ಈಗ ಇರಿಸಿದರು. ಎಲ್ಲ ಕಡೆಗಳಿಗೂ ಕೊಂಡಿ ಚಾಚಿ ಏಡಿಯ ಹಾಗೆ ಆ ಮಣ್ಣನ್ನು ಭದ್ರವಾಗಿ ಹಿಡಿದಿತ್ತು. ವಿದೇಶಿಯ ಪ್ರಭುತ್ವ, ಪ್ರತಿಭಟನೆಯ ಸ್ವರ ಹೊರ ಡಿಸಿದವರಿಗೆಲ್ಲ ತುರಂಗವಾಸ ಲಭಿಸಿತು. ಬಂಧನದಲ್ಲಿ ವೀರರಾಜೇಂದ್ರ ಕನಲಿ ಕಿಡಿಯಾಗಿ ಆಕ್ರೋಶ ಮಾಡಿದ. ಹಿಡಿಹಿಡಿಯಾಗಿ ತಲೆಕೂದಲನ್ನೆ ಕಿತ್ತುಬಿಡಲೆತ್ನಿಸಿದ, ಮುಷ್ಟಿಯಿಂದ ಎದೆಗೆ ಬಡೆದುಕೊಂಡ ದ್ರೋಹಿಗಳನ್ನು ಶಪಿಸಿದ. "ಬ್ರಿಟಿಷರ ಸೈನಾಧಿಕಾರಿಯನ್ನು ತಕ್ಷಣವೇ ನಾನು ನೋಡ್ಬೇಕು!” ಎಂದು, ಕಾವಲಿನ ಭಟರೊಡನೆ ಹಲವು ಬಾರಿ ಹೇಳಿಕಳುಹಿದ. ಪ್ರೇಸರನ ಬದಲು ಬಂದವನು ಬೋಪು ದಿವಾನ. ಕಾವಲಿನ ಸೈನಿಕ ನುಡಿದ: "ಮಹಾರಾಜರ ಭೇಟೆಗೆ ದಿವಾನ ಸಾಹೇಬರು ಬಂದವರೆ." ವೀರರಾಜೇಂದ್ರನ ಮೈ ಉರಿಯಿತು. " ಯಾವ ದಿವಾನ ?” [ ದ್ರೋಹಿ!! ನೀಚ ! ವಂಚಕ!'] "ಬೋಪು ದಿವಾನರು." " ಜೋಕೆ! ಇನ್ನೊಮ್ಮೆ ಆ ನಾಯಿನ ದಿವಾನ ಅಂದೀಯೆ! ಆತನನ್ನು