ಪುಟ:Kannadigara Karma Kathe.pdf/೨೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೨೭

೨೫ನೆಯ ಪ್ರಕರಣ

ನಿಗ್ಗರದ ಉತ್ತರ

ಗುರುತ್ವಾಕರ್ಷಣದ ವಿರುದ್ದವಾಗಿ ಮೇಲಕ್ಕೇರಿದ ಕಲ್ಲು ಕೆಳಕ್ಕೆ ಬೀಳತಕ್ಕದ್ದೇ. ಅದರಂತೆ ಬಹುಜನರ ವಿರುದ್ದವಾಗಿ ಏರಿದ ಮನುಷ್ಯನು ಎಂದಾದರೊಂದು ದಿನ ಕೆಳಗಿಳಿಯತಕ್ಕೆ ಸಂಬಂಧವು ವಿಶೇಷವಾಗಿರುವದು. ಈ ಮಾತು ರಣಮಸ್ತಖಾನನ ಸಂಬಂಧದಿಂದ ವಿಜಾಪುರದ ದರ್ಬಾರದಲ್ಲಿ ನಿಜವಾಯಿತು. ಒಬ್ಬ ಸರ್ವಸಾಧಾರಣ ಸೈನಿಕನಿಂದ ಪ್ರತ್ಯಕ್ಷ ಬಾದಶಹನವರೆಗೆ ಎಲ್ಲರೂ ರಣಮಸ್ತಖಾನನ ಮೇಲೆ ಹಲ್ಲು ಕಡಿಯಹತ್ತಿದರು. ಈಗ ಎಷ್ಟೋ ದಿವಸಗಳಿಂದ ನಮ್ಮ ಬಾದಶಹನು ವಿಜಯನಗರದ ರಾಜ್ಯವನ್ನು ಮಣ್ಣು ಗೂಡಿಸುವದಕ್ಕಾಗಿ, ಅಹಮ್ಮದನಗರ ಗೋವಳಕೊಂಡಗಳ ಬಾದಶಹರ ಸಂಗಡ ನಡಿಸಿದ ಒಳಸಂಚು ಒತ್ತಟ್ಟಿಗುಳಿದು, ತಿರುಗಿ ರಾಮರಾಜನೇ ವಿಜಾಪುರದ ಮೇಲೆ ಸಾಗಿಬರುವ ಪ್ರಸಂಗವು ಒದಗಿತೆಂದು ಎಲ್ಲರೂ ಸಂತಾಪಗೊಂಡರು. ರಣಮಸ್ತಖಾನನಿಗೆ ನಮ್ಮ ರಾಜ್ಯದೊಳಗಿನ ಎಲ್ಲ ಹುಳುಕುಗಳೂ, ನಮ್ಮ ಬಾದಶಹರು ಬೇರೆ ಬಾದಶಹರೊಡನೆ ನಡಿಸಿರುವ ಎಲ್ಲ ಒಳಸಂಚುಗಳೂ ಗೊತ್ತಿರುವದರಿಂದ, ರಾಮರಾಜನಿಗೆ ದೊಡ್ಡ ಸಹಾಯವಾಯಿತೆಂದು ಅವರು ಮಾತಾಡಿಕೊಳ್ಳಹತ್ತಿದರು; ಆದರೂ ಈ ಸಂಧಿಯಲ್ಲಿ ತಾವು ವಿಜಯನಗರದ ಮೇಲೆ ದಂಡೆತ್ತಿ ಹೋಗಿ ರಾಮರಾಜನ ಮಗ್ಗಲು ಮುರಿಯಬೇಕೆಂದು ವಿಜಾಪುರದ ದಂಡಾಳುಗಳು ಆಡಹತ್ತಿದರು. ಹೀಗಿರುವಾಗ, ಕುಂಜವನದಲ್ಲಿದ್ದ ರಣಮಸ್ತಖಾನನ ತಾಯಿಯು ಒಮ್ಮಿಂದೊಮ್ಮೆ ಇಲ್ಲದ ಹಾಗಾದಳೆಂಬ ಸುದ್ದಿಯು ವಿಜಾಪುರಕ್ಕೆ ಹೋಯಿತು. ಅದನ್ನು ಕೇಳಿ ಜನರ ತರ್ಕವಿತರ್ಕಗಳಿಗೆ ಆರಂಭವಾಯಿತು. ರಾಮರಾಜನೇ ತನ್ನ ಬಂಗಾರದವರಲ್ಲಿ ಯೊಬ್ಬಳನ್ನೂ, ಆಕೆಯ ಮಗನನ್ನೂ ಯುಕ್ತಿಯಿಂದ ಬಿಜಾಪುರದ ರಾಜ್ಯದಲ್ಲಿ ಸೇರಿಸಿ, ಅಲ್ಲಿಯ ಗುಪ್ತಸಂಗತಿಯನ್ನು ತಿಳಕೊಳ್ಳಲಿಕ್ಕೆ ಇಷ್ಟೆಲ್ಲ ತಂತ್ರವನ್ನು ರಚಿಸಬಹುದೆಂದು ಜನರು ತರ್ಕಿಸಹತ್ತಿದರು. ಇಂಥ ಹಲವು ತರ್ಕ ವಿತರ್ಕಗಳೂ ಸಂಭವಾಸಂಭವದ ಸುದ್ದಿಗಳು ಊರತುಂಬ ಹಬ್ಬಿ, ಬಾದಶಹನ