ಪುಟ:Kannadigara Karma Kathe.pdf/೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೫೨

ಕನ್ನಡಿಗರ ಕರ್ಮಕಥೆ

ಅತ್ಯುತ್ಕೃಷ್ಟವಾಗಿದ್ದುದರಿಂದ ಅವುಗಳಿಗೆ ಆರು ಹರದಾರಿಯ ಲಕ್ಷ್ಯವಿದ್ದಿಲ್ಲ ಅವು ಹಾ ಹಾ ಅನ್ನುವದರೊಳಗಾಗಿ ದರ್ಗೆಯ ಬಾಗಿಲಿಗೆ ಹೋದವು. ದರ್ಗೆಯು ಆ ವಾರವು ಬಹು ಪ್ರಶಸ್ತವಾಗಿತು ; ಆದರೆ ಅದರೊಳಗೆ ಪಶುಗಳನ್ನು ಹೂಡಿದ ರಥ ಮೊದಲಾದವುಗಳನ್ನು ಒಯ್ಯುವ ಪ್ರಚಾರವಿದ್ದಿಲ್ಲ. ಹಾಗೆ ಮಾಡುವದರಿಂದ ಪೀರಸಾಹೇಬರ ಉಪಮರ್ದ ಮಾಡಿದ ಹಾಗಾಗುತ್ತದೆಂದು ಸರ್ವಾನುಮತದಿಂದ ಗೊತ್ತಾಗಿತ್ತು. ಅಶಕ್ತರೂ, ವೃದ್ಧರೂ, ಹೆಳವರೂ ಇದ್ದರೆ ಅವರು ಮೇಣೆ, ಪಲ್ಲಕ್ಕಿ, ಡೋಲಿ ಮೊದಲಾದ ಮನುಷ್ಯ ವಾಹನಗಳಲ್ಲಿ ಕುಳಿತು ಪೀರಸಾಹೇಬರ ಗೋರಿಯ ದರ್ಶನಕ್ಕೆ ಹೋಗಬಹುದಾಗಿತ್ತು ; ಆದರೆ ದಷ್ಟಪುಷ್ಟರಿದ್ದವರು ಎಂಥ ಶ್ರೀಮಂತರಿದ್ದರೂ, ನಡದೇ ದರ್ಶನಕ್ಕೆ ಹೋಗಬೇಕಾಗಿತ್ತು.

ರಥವು ದರ್ಗೆಯ ಬಾಗಿಲಲ್ಲಿ ನಿಂತ ಕೂಡಲೆ, ಮೆಹರ್ಜಾನಳು ನಿಟ್ಟುಸಿರುಬಿಟ್ಟು ರಥದಿಂದ ಕೆಳಗೆ ಧುಮುಕಿದಳು. ಆಕೆಯು ಮಾರ್ಜೀನೆಗೆ ಹೂ, ಲಗು ಇಳಿ, ಜನರ ದಟ್ಟಣೆಯಾದ ಮೇಲೆ ದರ್ಶನಕ್ಕೆ ತೊಂದರೆಯಾದೀತು, ಎಂದು ಹೇಳುತ್ತಿರಲು, ಮಾರ್ಜೀನೆಯೂ ರಥದಿಂದ ಇಳಿದಳು. ಆಗ ಮಾರ್ಜೀನೆಯು ಧನಮಲ್ಲನಿಗೆ – “ನೀನು ಆ ಗಿಡದ ಬುಡದಲ್ಲಿ ರಥವನ್ನು ಬಿಟ್ಟುಕೊಂಡು ಸ್ವಲ್ಪ ವಿಶ್ರಮಿಸು ಎಂದಿನಂತೆ ಈಗ ನಾವು ದರ್ಶನ ತಕ್ಕೊಂಡು ಬಂದಕೂಡಲೆ.....” ಎಂದು ನುಡಿಯುತ್ತಿರಲು, ಧನಮಲ್ಲನು ಆ ಮಾತನ್ನು ಕಿವಿಯ ಮೇಲೆ ಹಾಕಿಕೊಳ್ಳದೆ, ಗಿಡದ ಕಡೆಗೆ ರಥವನ್ನು ಸಾಗಿಸಿಕೊಂಡು ನಡೆದನು. ಅದನ್ನು ನೋಡಿ ಮಾರ್ಜೀನೆಯು-ಏನು ಟೊಣಪನಿದ್ದನು, ಎಂದು ತಿರಸ್ಕರಿಸುತ್ತ, ಮೆಹರ್ಜಾನಳನ್ನು ಕರಕ್ಕೊಂಡು ದರ್ಗೆಯನ್ನು ಪ್ರವೇಶಿಸಿದಳು, ಇತ್ತ ಧನಮಲ್ಲನು ಗಿಡದ ಬುಡದಲ್ಲಿ ರಥವನ್ನು ಬಿಟ್ಟು, ಗಿಡದ ಬೊಡ್ಡೆಗೆ ಎತ್ತುಗಳನ್ನು ಕಟ್ಟಿ ಮೇವು ಚಲ್ಲಿ, ತನ್ನ ಕರಿಯ ಕಂಬಳಿಯನ್ನು ಚೆಲ್ಲಿಕೊಂಡು ಸ್ವಲ್ಪ ಅಡ್ಡಾದನು. ಮಧ್ಯಾಹ್ನದ ಬಿಸಿಲಿನಲ್ಲಿ ಗಿಡದ ತಣ್ಣೆಳಲ ಸುಖಸ್ಪರ್ಶದಿಂದ ಆ ನಿಶ್ಚಿಂತ ಪುರುಷನಿಗೆ ಗಾಢವಾದ ನಿದ್ರೆಯು ಹತ್ತಿತು ತಾಸಾಯಿತು ಎರಡು ತಾಸಾಯಿತು, ಮೂರು ತಾಸಾಯಿತು ; ಅದರೂ ಆತನನ್ನು ಎಬ್ಬಿಸಲಿಕ್ಕೆ ಯಾರೂ ಬರಲಿಲ್ಲ. ಆ ಲಠ್ಠ ಧನಮಲ್ಲನಿಗೂ ಎಚ್ಚರವಾಗಲಿಲ್ಲ. ಮುಂದೆ ಒಂಭತ್ತು ತಾಸಿನ ಸುಮಾರಕ್ಕೆ ಆತನಿಗೆ ಪಕ್ಕನೆ ಎಚ್ಚರಿಕೆಯಾಯಿತು. ಇಷ್ಟು ಹೊತ್ತಾದರೂ ಮೆಹರ್ಜಾನಳೂ, ಮಾರ್ಜೀನೆಯೂ ಬಾರದಿರುವದನ್ನು ನೋಡಿ ಅವನು ಗಾಬರಿಯಾದನು. ಬೆಪ್ಪನಂತೆ ದಗೆಯ ಆವಾರದಲ್ಲಿ ನಾಲ್ಕೂ ಕಡೆಯಲ್ಲಿ ಅವರನ್ನು ಹುಡುಕಹತ್ತಿದನು. ಹೋಗ ಬರುವವರನ್ನು ಸನ್ನೆಮಾಡಿ ಕೇಳಲು. ಈ ವಿಲಕ್ಷಣ