ಪುಟ:Kedage.pdf/೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ತಾಳಮದ್ದಲೆಯ ಮಾತುಗಾರಿಕೆ /51

ಅನೌಚಿತ್ಯಗಳು, ಅತಿದೀರ್ಘ ಮಾತುಗಾರಿಕೆ ರಸವಿರೋಧ ಮುಂತಾದವುಗಳು. ಇದಕ್ಕೆಲ್ಲ ಸ್ವಾತಂತ್ರ್ಯವೇ ಕಾರಣ. ಇದನ್ನೂ ಮಿತವಾಗಿ ಬಳಸಿಕೊಂಡು ಸೊಗಸಾದ, ಭಾವಪೂರ್ಣವಾದ ಸಂಭಾಷಣೆ ಬೆಳೆಸಬಲ್ಲ ಕೆಲವು ಅರ್ಥಧಾರಿಗಳನ್ನು ನಾವು ಹಳ್ಳಿಗಳಲ್ಲಿ ಕಾಣಬಹುದು. ಅವರು ವಿದ್ವಾಂಸರಲ್ಲವಾದರೂ ಅವರ ಅರ್ಥಗಾರಿಕೆಗೆ ಕಲೆಯ ಸ್ಪರ್ಶವಿರುವುದು ಮಾತಿನ ಮಿತಿಯ ಅರಿವಿನಲ್ಲಿ.

ಪ್ರಸಂಗದ ಪದ್ಯಗಳನ್ನು ಅದರ ಪದಗಳನ್ನು ಬಳಸಿಕೊಳ್ಳುವುದೂ ಅರ್ಥಗಾರಿಕೆಯ ಒಂದು ಮುಖ್ಯ ಅಂಶ. ಅರ್ಥ ಎಷ್ಟೇ ಸೊಗಸಾಗಿದ್ದರೂ ಅದು ಪದ್ಯಗಳ ಸ್ಫೂರ್ತಿಯಿಂದ ಅದರ ಪದಗಳಿಗೆ ಸಂವಾದಿಯಾಗಿ ಬಾರದಿದ್ದರೆ ತಾಳಮದ್ದಲೆ ಸಮಗ್ರ ಕಲಾನುಭವ ಆಗುವುದಿಲ್ಲ, ಹಾಗೆಯೇ ಹಿಮ್ಮೇಳದಲ್ಲಿರುವ ಭಾಗವತ, ಚೆಂಡೆ ಮದ್ದಲೆಗಳು ಒಂದು ಸಜೀವ ಘಟಕವಾಗಿ ತಾಳಮದ್ದಲೆಯಲ್ಲಿ ಪಾಲ್ಗೊಳ್ಳಬೇಕು. ಈ ದೃಷ್ಟಿ ಅರ್ಥಧಾರಿಗೂ ಹಿಮ್ಮೇಳಕ್ಕೂ ಬೇಕು. ಪದ್ಯಗಳ ಅರ್ಥಗಳ ನಿರಂತರತೆ, ಭಾಗವತ ಅರ್ಥಧಾರಿಗಳೊಳಗೆ ಚುಟುಕಾದ ಸಂಪಾದಗಳ ರಚನೆ, ಮಾತುಗಳಿಗೆ ತಕ್ಕಂತಹ ಚೆಂಡೆ ಮದ್ದಲೆಗಳ ಗತ್ತುಗಳ ಬಾರಿಸುವಿಕೆ, ಭಾವಪರಿವರ್ತನೆಗಳು ಯುದ್ಧ ಮುಂತಾದೆಡೆ ಬಾರಿಸುವ ದಸ್ತು ಮುಕ್ತಾಯಗಳ ಬಾರಿಸುವಿಕೆ, ಇವೆಲ್ಲ ಅರ್ಥಧಾರಿ ಹಿಮ್ಮೇಳಗಳೆರಡರ ಬುದ್ಧಿಪೂರ್ವಕ ಯತ್ನದಿಂದ ಆಗಬೇಕು. ಪದ್ಯ ಹೇಳುವುದು ಅದರ ಮೇಲೆ ಅರ್ಥ ಹೇಳುವುದು ಇಷ್ಟೇ ಅಲ್ಲ ತಾಳಮದ್ದಲೆ ಅಂದರೆ, ಹಿಮ್ಮೇಳ ಮುಮ್ಮೇಳಗಳೊಳಗೆ ಓತಪ್ರೋತ ಸಂಬಂಧ ಇರಬೇಕು. ರಂಗಪ್ರಜ್ಞೆ (Theatre Sense) ಯ ಪ್ರೇರಣೆ ಇರಬೇಕು.

ತಾಳಮದ್ದಲೆಯ ಅರ್ಥಧಾರಿ ಈ ಕಾಲದವನು. ಆದರೆ ಪ್ರಸಂಗ ಶತಮಾನಗಳಷ್ಟು ಹಳತು. ಅದರ ವಸ್ತು ಇನ್ನಷ್ಟು ಹಳತು. ಮೂಲ ಆಕರ ಕಾವ್ಯಗಳೂ ಹಾಗೆಯೇ. ಇಂದು ಪ್ರಜ್ಞೆಯ ಅರ್ಥಧಾರಿ - ಈ ಮೂರು ಕಾಲಗಳ ಮಧ್ಯೆ ಇರುವ ಸಂಬಂಧಗಳನ್ನೂ ಸೆಳೆತಗಳನ್ನೂ ಅರ್ಥೈಸಿ ಸಾರ್ವಕಾಲಿಕವೂ ಆಗಿರುವ ಮನುಷ್ಯಲೋಕವನ್ನೂ ಪಾತ್ರಪ್ರಪಂಚಕ್ಕೆ ತುಂಬಬೇಕು. ಇಲ್ಲೇ ಅವನ ಕಾವ್ಯಾಭ್ಯಾಸ ಜೀವನಾಭ್ಯಾಸ ತಾಳಮದ್ದಲೆ ತಂತ್ರದ ಅರಿವು, ಅರಿವುಗಳ ಪಾತಕ್ಕೆ ನಿಕಷ ಇರುವುದು, ಆಧುನಿಕರಂಗಶಾಸ್ತ್ರವಿಮರ್ಶೆ, ಪುರಾಣಶಾಸ್ತ್ರವಿಮರ್ಶೆ ಪ್ರಾಚೀನ ವಸ್ತುಗಳನ್ನಾಧರಿಸಿ ಒಂದಾದ ನವೀನ ನಾಟಕ, ಕಾದಂಬರಿಗಳೆಲ್ಲ ಇಂದು ಅದರ ನೆರವಿಗಿವೆ.

ನಾಟಕವೊಂದರಲ್ಲಿ ಒಂದೊಂದು ರಂಗಪ್ರದರ್ಶನವೇ ಒಂದೊಂದು ರಂಗ ಕೃತಿಯಾಗಿ ಪ್ರತ್ಯೇಕ ಗಣನೆಗೆ ಅರ್ಹವೆಂಬುದು ಇಂದಿನ ನಾಟಕಸಿದ್ದಾಂತ ತಾಳಮದ್ದಲೆಯಂತೂ ಈ ತತ್ವದ ವಿಸ್ಕೃತರೂಪ. ಒಂದೊಂದು ಪ್ರಸಂಗದ