ಪುಟ:Mahakhshatriya.pdf/೧೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೪.ಇಂದ್ರನಾಗುವವನನ್ನು ಹುಡುಕಿದುದು

ಸುರಾಚಾರ್ಯನ ಅರಮನೆಯಲ್ಲಿ ದೇವರ್ಷಿಪಿತೃಗಣಗಳಲ್ಲಿ ಮುಖ್ಯರಾದವರು ಸೇರಿದ್ದಾರೆ. ಇಂದ್ರನ ಸಿಂಹಾಸನವು ಶೂನ್ಯವಾಗಿದೆ. ಅದಕ್ಕೊಬ್ಬ ಅಧಿಕಾರಿಯಾದವನನ್ನು ಆರಿಸಬೇಕು. ಲೋಕಾಧಿಪತಿಗಳು ಯಾರೂ ಇಂದ್ರರಾಗುವಂತಿಲ್ಲ. ಹಾಗೆಯೇ ಪಾತಾಳ ಲೋಕದ ನಿವಾಸಿಗಳಲ್ಲಿ ಯಾರನ್ನೂ ದೇವತೆಗಳು ಒಪ್ಪುವುದಿಲ್ಲ. ಅದರಿಂದ ಯತ್ನವಿಲ್ಲದೆ ಮನುಷ್ಯಪ್ರಪಂಚದಿಂದಲೇ ಯಾರನ್ನಾದರೂ ಆರಿಸಬೇಕು. ಕ್ಷತ್ರಿಯನಾಗಿ, ಧರ್ಮಿಷ್ಠನಾಗಿ, ಇಂದ್ರಸಿಂಹಾಸನದಲ್ಲಿ ಕುಳಿತುಕೊಳ್ಳುವ ಸಾಮಥರ್ಯ್‌ವುಳ್ಳವನನ್ನೇ ಆರಿಸಬೇಕು.

ಆ ಸಭೆಗೆ ಋಷಿಗಳೂ ಪಿತೃಗಳೂ ಸುರಾಚಾರ್ಯನೇ ಅಧ್ಯಕ್ಷನಾಗಿರ ಬಹುದು ಎಂದರು. ಸುರಾಚಾರ್ಯನು ಅದರಂತೆ ಅಧ್ಯಕ್ಷನಾಗಿ ಸಭೆಯನ್ನು ಆರಂಭಿಸಿದನು.

ಪಿತೃಗಳ ಪ್ರತಿನಿಧಿಯು ಹೇಳಿದನು : “ನಮಗೆ ದೇವದಾನವರೆಂಬ ಭೇದವಿಲ್ಲ ಆದರೂ ದೇವತೆಗಳಲ್ಲಿ ಒಬ್ಬರಾದರೆ ಚೆನ್ನ.”

ಇನ್ನೊಬ್ಬರು ಹೇಳಿದರು : “ಇಲ್ಲ, ದೇವತೆಗಳಲ್ಲಿ ಯಾರೂ ಈ ಕಾರ್ಯವನ್ನು ಈಗ ವಹಿಸಿಕೊಳ್ಳುವಂತಿಲ್ಲ. ಅದರಿಂದ ಇಂದ್ರಾಧಿಕಾರಕ್ಕೆ ಪ್ರತ್ಯೆಕವಾಗಿ ಒಬ್ಬರಿರಬೇಕು.”

ಅಗ್ನಿಯು ಎದ್ದು ಹೇಳಿದನು : “ಇಲ್ಲಿ ಹವಿರ್ಭಾಗದ ಪ್ರಶ್ನವಿದೆ. ದಾನವರು ಏನಿದ್ದರೂ ನೈಮಿತ್ತಿಕ ಹೋಮ ಮಾಡುವವರೇ ಹೊರತು, ನಿತ್ಯಯಾಗಗಳನ್ನು ಮಾಡುವವರಲ್ಲ. ಅದರಿಂದ ಅವರು ಹವಿರ್ದಾನವನ್ನು ಕೊಡುವುದಿಲ್ಲವಾಗಿ, ಅವರಿಗೆ ಹವಿಸ್ಸ್ವೀಕಾರಯೋಗ್ಯತೆಯೂ ಇಲ್ಲ. ಅದರಿಂದ, ಬರುವ ಇಂದ್ರನು, ಅಥವಾ ಇಂದ್ರನಾಗುವವನು ಹವಿರ್ಭೋಜನಾಧಿಕಾರವುಳ್ಳವನಾಗಬೇಕು. ಅದು ಯೋಚನೆಯಲ್ಲಿರಲಿ”.

ಋಷಿಗಣದ ಪ್ರತಿನಿಧಿಯು ಹೇಳಿದನು : “ದೇವತೆಗಳಲ್ಲಿ ಅಗ್ನಿ, ವಾಯು, ಇಂದ್ರರು ಜ್ಯೇಷ್ಠರು. ಅವರು ಯಕ್ಷದರ್ಶನದಿಂದ ಆ ಯೋಗ್ಯತೆಯನ್ನು ಪಡೆದವರು. ಇಂದ್ರನು ಇಲ್ಲದಾಗ ವಾಯುವು ಉತ್ತಮೋತ್ತಮನು. ಆತನಾಗಲಿ.”