ಪುಟ:Mysore-University-Encyclopaedia-Vol-1-Part-2.pdf/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಲ್ಲಮಪ್ರಭು-ಅಲ್ಲಸಾನಿ ಪೆದ್ದನ ಕನ್ನಡದಲ್ಲಿ ಅಲ್ಲಮಂಡದ ಹೆಸರು ಅರಸಿನ್ಹು.ಈ ಜಾತಿ ಪೊದರಾಗಿಯೊ ಅಥವಾ ಸಣ್ಣ ಮರವಾಗಿಯೊ ಬೆಳೆಯುತ್ತದೆ.ಮೂರು ನಾಲ್ಕು ಗಿಣ್ಣುಗಳಿರುವಂತೆ ಕೊಂಬೆಗಳನ್ನು ಕತ್ತರಿಸಿ ಮೊದಲು ಕುಂಡಗಳಲ್ಲಿ ನೆಟ್ಟು ಬೆಳೆಸುತ್ತಾರೆ.ಇದರ ತೊಗಟೆ ಜಲೋದರ ಬೇನೆಯಲ್ಲಿ ಉಪಯುಕ್ತವೆನಿಸಿದೆ.ಮುಂಡ ಜನಾಂಗದವರು ಹಾವು ಕಚ್ಚಿದಾಗ ಬೇರನ್ನು ಔಷಧಿಯಾಗಿ ಬಳಸುತ್ತಾರೆ. (ಎಂ.ಎಚ್.ಎಂ.)

ಅಲ್ಲಮಪ್ರಭು:12 ನೆಯ ಶತಮಾನದ ಕರ್ನಾಟಕದ ಮಹತ್ಸಾಧನೆಯ ಇತಿಹಾಸದಲ್ಲಿ ಬಹಳ ಪ್ರಮುಖ ವ್ಯಕ್ತಿ.ಬಸವಣ್ಣನವರ ನೇತೃತ್ವದಲ್ಲಿ ಧಾರ್ಮಿಕ ಕ್ರಾಂತಿಯ ಒಂದು ಮಹಾಪ್ರವಾಹ ಉಕ್ಕಿ ಹರಿದು ಜೀವನಾ ಎಲ್ಲಾ ರಂಗಗಳನ್ನೂ ವ್ಯಾಪಿಸಿತಷ್ಟೆ.ನಾಡಿನ ನಾನಾ ಭಾಗಗಳಿಂದ ಬಂದ ನೂರಾರು ಶರಣರು ಕಲ್ಯಾಣ ಪಟ್ಟಣದಲ್ಲಿ ಸೇರಿದ್ದರು.ಕಳಚುರಿ ಬಿಜ್ಜಳನ ಬಳಿ ದಂಡಾಧೀಶರಾಗಿದ್ದ ಬಸವಣ್ಣನವರ ಮಾರ್ಗದರ್ಶನದಲ್ಲಿ ಸ್ವತಂತ್ರ ವಿಚಾರಮಂಥನದಿಂದ ಮೂಡಿಬಂದ ಹೊಸ ಬೆಳಕನ್ನು ಜನತೆಯಲ್ಲಿ ಬೀರಿದರು.ಆ ಶರಣರ ಅನುಭಾವಗೋಷ್ಠಿಯಲ್ಲಿ ಅಗ್ರಪೀಠವಹಿಸಿ ವಿಚಾರಮಂಥನಕ್ಕೆ ಕಾರಣವಾಗುತ್ತಿದ್ದ ಮಹಾವ್ಯಕ್ತಿ ಅಲ್ಲಮಪ್ರಭು.ಬಸವಣ್ಣನವರ ವಿಚಾರಕ್ರಾಂತಿಗೆ ಈತ ಬೆನ್ನೆಲುಬಾಗಿ ನಿಂತು,ತನ್ನ ಜ್ಞಾನ ವೈರಾಗ್ಯಗಳ ಕಾಂತಿಯನ್ನಿತ್ತು ಅದನ್ನು ಮುನ್ನೆಡೆಸಿದ.ಬಸವ ಅಲ್ಲಮರಿಬ್ಬರೂ ಆ ಯುಗದ ಮಹಾಶಕ್ತಿಗಳು.

ಇಂದು ಶಿವಮೊಗ್ಗ ಜಿಲ್ಲೆಯಲ್ಲಿ ಒಂದು ಹಳ್ಳಿಯಾಗಿ ಉಳಿದಿರುವ ಬಳ್ಳಿಗಾವೆ ಅಲ್ಲಮನ ಜನ್ಮಸ್ಥಳ.ತಂದೆಯ ಹೆಸರು ನಿರಹಂಕಾರ,ತಾಯಿ ಸುಜ್ಞಾನಿ.ಇವು ತಂದೆ ತಾಯಿಗಳ ನಿಜವಾದ ಹೆಸರುಗಳೋ ನಿರಹಂಕಾರ ಸುಜ್ಞಾನಗಳಿಂದ ಮಾತ್ರ ಅಲ್ಲಮಪ್ರಭುವಿನಂಥ ವ್ಯಕ್ತಿತ್ವ ಮೂಡಬಲ್ಲುದೆಂಬುದರ ಸಾಂಕೇತಿಕ ಸೂಚನೆಯೋ ತಿಳಿಯದು.ಅಂತೂ ಪ್ರಭುದೇವನ ತಂದೆ ಬಳ್ಳಿಗಾವೆಯಲ್ಲಿ ನಾಗವಾಸಾಧಿಪತಿಯಾಗಿದ್ದಾನೆಂಬ ಮಾತು ಬರುತ್ತದೆ.ಇವನ ಬಾಲ್ಯ ಜೀವನದ ಪರಿಸರಗಳಾಗಲಿ ಮನೊವಿಕಾಸದ ಚಿತ್ರವಾಗಲಿ ದೊರೆಯದು.ಆದರೆ ಈತನ ಜೀವನದಲ್ಲೊಂದು ಪರಿವರ್ತನೆಯ ಘಟ್ಟ ತಾರುಣ್ಯದಲ್ಲಿ ಪ್ರಾಪ್ತವಾದಂತೆತೋರುತ್ತದೆ.ಅದು ಹರಿಹರ ಹೇಳುವಂತೆ ಬಳ್ಳಿಗಾವೆಯ ಕಾಮಲತೆಯಿಂದ ಆಗಿರಲಿ ಅಥವಾ ಚಾಮರಸ ಹೇಳುವಂತೆ ಬನವಾಸಿಯ ಮಾಯಾದೇವಿಯಿಂದ ಆಗಿರಲಿ,ಅಂತೂ ಸಂಸಾರವನ್ನು ಮೆಟ್ಟಿ ಮೇಲೇರುವ ಸಾಧನೆಗೆ ಪ್ರಭುವನ್ನು ಪ್ರಚೋದಿಸಿದ ಒಂದು ಘಟನೆ ನಡೆದಿರಬೆಕು.ಅದರಿಂದ ಪ್ರಭುದೇವನಿಗೆ ತನ್ನ ಹೃದಯದ ಅಂತರಾಳದಲ್ಲಿ ಅಡಗಿದ್ದ ಅತೀವವಾದ ಆಕಾಂಕ್ಶೆಯ ಅರಿವು ಆದಂತೆ ತೋರುತ್ತದೆ.ಮುಂದೆ ಈತನ ವಚನಗಳಲ್ಲಿ ನಾವು ಕಾಣುವ ಜ್ಞಾನ ವೈರಾಗ್ಯಗಳು ಮೊದಲಿನಿಂದಲೂ ಈತನ ಜೀವನದಲ್ಲಿ ಉಸಿರಾಟದಂತೆ ಸಹಜವಾಗಿದ್ದುವು.ತನ್ನ ಸಹಜ ಸ್ವರೂಪದ ವಿಕಾಸಕ್ಕಾಗಿ ಹಂಬಲಿಸಿತ್ತು.ಪ್ರಭುವಿನ ಮನಸ್ಸು ಈ ಸಂಸಾರದ ವಿಷಯಸುಖಗಳಲ್ಲಿ ಆನಂದವನ್ನು ಪಡೆಯಲಾರದೆ ಹೋಯಿತು.ಆದುದರಿಂದ ಇದನ್ನು ತ್ಯಜಿಸಿ ಈತ ಅಗಾಧವಾದ ಸಾಧನೆಯನ್ನು ಕೈಕೊಡದಂತೆ ತೋರುತ್ತದೆ.

ಈತನಲ್ಲಿ ಕಾಣುವ ಯೋಗಸಮನ್ವಯ ಸಿದ್ಧಿ ಆಶ್ಚ್ರ್ಯಕರವಾದುದು.ಹಠಯೋಗ ರಾಜಯೋಗ ಮೊದಲಾದ ಎಲ್ಲಾ ಯೋಗಗಳಲ್ಲೂ ಈತ ನಡೆದು ಅವುಗಳ ಆಚೆಗೆ ಶಿವಯೋಗದತ್ತ ಸಾಗಿದುದರ ಸಾಕ್ಶಿಯನ್ನು ಇವನ ವಚನಗಳು ತಂದುಕೊಡುತ್ತವೆ.ಪರಿವ್ರಾಜಕ ಸಂನ್ಯಾಸಿಯಾಗಿ ಭರತಖಂಡದ ಅದ್ಯಂತವೂ ಈತ ಸಂಚರಿಸಿರಬೇಕು;ನೂರಾರು ಸಾಧಕರನ್ನು ಸಂಧಿಸಿ ಅನೇಕ ಬಗೆಯ ಅನುಭವಗಳನ್ನು ಪಡೆದಿರಬೇಕು.ಆದರೆ ಯಾವುದೂ ಈತನಿಗೆ ಪೂರ್ಣತೃಪ್ತಿಯನ್ನು ಕೊಟ್ಟಂತೆ ತೋರುವುದಿಲ್ಲ.ಭೂಮವಾದುದನ್ನು ಬಯಸಿದವನು ಈತ,ಆ ಅನುಭಾವವನ್ನು ಈತನಿಗೆ ತಂದುಕೊಟ್ಟವನು ಅನಿಮಿಷಯೋಗಿ.ಶಿವಯೋಗದ ನಿಲುವನ್ನು ಅನಿಮಿಷದಿಂದ ಅಲ್ಲಮ ಅರಿತುಕೊಂಡ.ಎಲ್ಲ ಯೋಗಗಳ ರಹಸ್ಯವನ್ನೂ ಅರಿತ ಅಲ್ಲಮಪ್ರಭುವಿನ ಸಾಧನೆಯ ಕೊನೆಯ ಹಂತದಲ್ಲಿ ಅನಿಮಿಷಯೋಗಿಯ ದರ್ಶನವಾಯಿತೆಂದು ಭಾವಿಸಬಹುದು.ಅನಿಮಿಷಯೋಗಿಯ ಕರಸ್ಥಲದ ಲಿಂಗ ಪ್ರಭುದೇವನ ಹಸ್ತಪೀಠವನ್ನು ಸೇರುತ್ತದೆ.ಅದರ ಮಹತ್ತಿನಲ್ಲಿ ಈತನ ಮನಸ್ಸು ಪರವಶವಾಗುತ್ತದೆ.ಇವನ ಅಂಗವೆಲ್ಲ ನಷ್ಟವಾಗಿ ಲಿಂಗದಲ್ಲಿ ಲೀನವಾಗುತ್ತದೆ.ನಿಜವನರಿದ ನಿಶ್ಚಿಂತ,ಮದನನ ಗೆಲಿದ ಮರಣವ ಗೆಲಿದ ಮಹಾಂತ,ಘನವನೊಳಕೊಂಡ ಮಹಿಮ,ಪರವನೊಳಕೊಂಡ ಪರಿಣಾಮಿಯಾಗಿ ಈತ ಪರಿಣಮಿಸುತ್ತಾನೆ.ಈ ಸನ್ನಿವೇಶವನ್ನು ಶೂನ್ಯ ಸಂಪಾದನೆ ಬಹಳ ಚೆನ್ನಾಗಿ ಚಿತ್ರಿಸಿದೆ.

ಅಲ್ಲಿಂದ ಮುಂದೆ ಸಾಧಕರನ್ನು ಉದ್ಧರಿಸುತ್ತ ಪ್ರಭು ಕಲ್ಯಾಣಕ್ಕೆ ಬರುತ್ತಾನೆ.ಅಲ್ಲಿ ಬಸವಣ್ಣನವರು ಕೈಗೊಂಡಿದ್ದ ಮಹಾಮಣಿಹದಲ್ಲಿ ಭಾಗಿಯಾಗುತ್ತಾನೆ.ಈತ ಅನುಭವ ಮಂಟಪದಲ್ಲಿ ಅಗ್ರಸ್ಥಾನ ವಹಿಸಿದುದು ಶರಣರ ಅನುಭಾವ ಗೋಷ್ಠಿಗಳಿಗೆ ಹೊಸ ಚೈತನ್ಯವನ್ನು ತುಂಬಿದಂತಾಗುತ್ತದೆ.ಅಲ್ಲಿ ಬಸವಣ್ಣನವರೊಡನೆ ಈತ ನಿರ್ವಹಿಸಿದ ಪಾತ್ರ ಬಹಳ ಪ್ರಮುಖವಾದುದು.ಕಲ್ಯಾಣದಲ್ಲಿ ಕೆಲವು ಕಾಲ ಇದ್ದ ಅನಂತರ ಅಲ್ಲಿ ತನ್ನ ಕರ್ತವ್ಯ ಮುಗಿಯುತ್ತ ಬಂದುದನ್ನು ತಿಳಿದು ಪ್ರಭು ಶ್ರೀಶೈಲದತ್ತ ಹೊರಟ.ಲಿಂಗಾಂಗ ಸಾಮರಸ್ಯದ ಕೊನೆಯ ನಿಲುವಿನಲ್ಲಿ ಲೀನವಾಗಲು ಉದ್ದೇಶಿಸಿ ಅದಕ್ಕಾಗಿ ಶ್ರೀಶೈಲದ ಕದಳಿಯ ವನವನ್ನು ಆರಿಸಿಕೊಂಡ.ಅಲ್ಲಿ ಇವನ ಚೈತನ್ಯಪ್ರಭೆ ಗುಹೇಶ್ವರನ ಹೃದಯಗಹ್ವರದಲ್ಲಿ ಒಡೆವೆರೆದು ಒಂದಾಯಿತು.ಬಳ್ಳಿಗಾವೆಯ ಪ್ರಭು ಜಗತ್ತಿನ ವಿಭುವಾಗಿ ಪರಿಣಮಿಸಿದ.ಇದು ಇವನ ವಚನಗಳಿಂದ ಮತ್ತು ಇತರ ಕಾವ್ಯಾಧಾರಗಳಿಂದ ಕಂಡುಬರುವ ಈತನ ಜೀವನಚಿತ್ರ.

ಈತನ ಜೀವನಚರಿತ್ರೆ ಅನೇಕ ಕಡೆಗಳಲ್ಲಿ ಅಸ್ಪಷ್ಟವಾಗಿದ್ದರೂ ಈತನ ವಚನಗಳಲ್ಲಿ ಮೂಡಿನಿಂತಿರುವ ಅನುಭವದ ಚಿತ್ರ ಅತ್ಯುಜ್ವಲವಾಗಿದೆ.ಈತನ ವಚನಗಳ ಅದ್ಭುತಶಕ್ತಿಯನ್ನು ಕಂಡು ಆಶ್ಚರ್ಯಗೊಳ್ಳುತ್ತೇವೆ.ಕನ್ನಡ ಭಾಷೆ ಒಂದು ವಿಶಿಷ್ಟ ಶಕ್ತಿಯನ್ನು ಈತನಿಂದ ಪಡೆಯಿತು.ಸಾಸಿವೆಯಲ್ಲಿ ಸಾಗರವನ್ನು ತುಂಬಬಲ್ಲ ಸಾಹಸ ಈತನ ವಚನಗಳಲ್ಲಿ ಕಂಡುಬರುತ್ತದೆ.ತನ್ನ ಅಪಾರವಾದ ಅನುಭವವನ್ನು ಅನ್ಯಹೃದಯ ವೇದ್ಯವಾಗುವಂತೆ ಹೇಳುವ ಈತನ ಶಕ್ತಿ ಒಂದು ಅಪೂರ್ವವಾದ ಸಿದ್ಧಿ.ಇವನು ಉಪಯೋಗಿಸಿದ ಅಲಂಕಾರಗಳು,ಕೊಡುವ ಉಪಮಾನಗಳು,ಹೋಲಿಕೆಗಳು,ಗಾದೆಯಮ್ತೆ ಸೂತ್ರರೂಪವಾದ ಮಾತುಗಳು-ಎಲ್ಲವೂ ಅವನ ಲೋಕಾನುಭವಕ್ಕೂ ಲೋಕಕಾರುಣ್ಯಕ್ಕೂ ಸಾಕ್ಶಿಯಾಗಿವೆ.ಅವು ಸಹೃದಯ ಮನಸ್ಸನ್ನು ಮುಟ್ಟಿ ತಮ್ಮ ಉದ್ದೇಶವನ್ನು ಪರಿಣಾಮಕಾರಿಯಾಗಿ ಸಾಧಿಸಬಲ್ಲವು.ಮಾದರಿಯಾಗಿ ಆತನ ಒಂದೆರೆಡು ವಚನಗಳನ್ನು ಉದಾಹರಿಸಬಹುದು; ಆಸೆಗ ಸತ್ತುದು ಕೋಟಿ ಕೋಟಿ;ಆಮಿಷಕ್ಕೆ ಸತ್ತುದು ಕೋಟಿ ಕೋಟಿ; ಹೊನ್ನು ಹೆಣ್ಣು ಮಣ್ಣಿಂಗೆ ಸತ್ತುದು ಕೋಟಿ ಕೋಟಿ; ನಿಮಗಾಗಿ ಸತ್ತವನಾರನೂ ಕಾಣೆ ಹೊನ್ನು ಮಾಯೆಯೆಂಬರು,ಹೆಣ್ಣು ಮಾಯೆಯೆಂಬರು, ಮಣ್ಣು ಮಾಯೆಯೆಂಬರು, ಹೊನ್ನು ಮಾಯೆಯಲ್ಲ,ಹೆಣ್ಣು ಮಾಯೆಯಲ್ಲ,ಮಣ್ಣು ಮಾಯೆಯಲ್ಲ ಮನದ ಮುಂದಣ ಆಶೆಯೇ ಮಾಯೆ ಕಾಣಾ ಗುಹೇಶ್ವರ ಪ್ರಾಣಲಿಂಗಕ್ಕೆ ಕಾಯವೇ ಸಜ್ಜೆ,ಆಕಾಶ ಗಂಗೆಯಲ್ಲಿ ಮಜ್ಜನ ಹೂವಿಲ್ಲದ ಪರಿಮಳದ ಪೂಜೆ;ಹೃದಯ ಕಮಲದಲ್ಲಿ ಶಿವಶಿವ ಎಂಬ ಗಗನವೇ ಗುಂಡಿಗೆ,ಆಕಾಶವೇ ಅಗ್ಗವಣಿ;ಚಂದ್ರಸೂರ್ಯರಿಬ್ಬರು ಪುಷ್ಪ; ಬ್ರಹ್ಮಧೂಪ,ವಿಷ್ಣುದೀಪ,ರುದ್ರನೋಗರ;ಸುಯಿಧಾನ ನೋಡಾ ಗುಹೇಶ್ವರ ಲಿಂಗಕ್ಕೆ ಪೂಜೆ ನೋಡಾ

ಹೀಗೆ ಅನೇಕ ವಚನಗಳನ್ನು ಉದಾಹರಿಸಬಹುದು.ಅನುಭವದ ತೀವ್ರತೆಯನ್ನು ಮಾತಿನಲ್ಲಿ ಸಾಧಿಸುವ ಶಕ್ತಿಗೆ ಈತನ ವಚನಗಳು ಉಜ್ವಲ ನಿದರ್ಶನಗಳಾಗಿವೆ.ಒಟ್ಟಿನಲ್ಲಿ ಶರಣರಲ್ಲೆಲ್ಲ ಒಂದು ಅದ್ವಿತೀಯವಾದ ಮೂರ್ತಿಸ್ವರೂಪ ಈತನದು.ಸಾಧಕನಾಗಿ,ಸಿದ್ಧನಾಗಿ,ಅನುಭಾವಿಯಾಗಿ,ಆ ಅನುಭಾವಾ ಬೆಳಕನ್ನು ಬೀರುವ ದೀವಟಿಗನಾಗಿ,ಕವಿಯಾಗಿ,ಕಾವ್ಯದ ಮಟ್ಟವನ್ನೂ ಮೀರಿನಿಂತ ಪ್ರವಾದಿಯಾಗಿ,ಸಮಾಜಸುಧಾರಕನಾಗಿ,ಸಮಾಜವನ್ನೇ ವ್ಯಾಪಿಸಿ ಆಚೆ ನಿಂತ ಜಂಗಮನಾಗಿ-ಹೀಗೆ ಬಹುಮುಖದ ವ್ಯಕ್ತಿತ್ವವನ್ನು ಮೀರಿನಿಂತ ಮಹಾಜ್ಯೋತಿರ್ಲಿಂಗಸ್ವರೂಪ ಅಲ್ಲಮನದು. (ಎಚ್.ಟಿ.)

ಅಲ್ಲಸಾನಿ ಪೆದ್ದನ:ವಿಜಯನಗರ ಸಾಮ್ರಾಟ ಕೃಷ್ಣದೇವರಾಯನ ಆಸ್ಥಾನದಲ್ಲಿದ್ದ ಪ್ರಸಿದ್ಧ ಕವಿ.ಸ್ವಾರೋಚಿಷಮನುಸಂಭವ ಅಥವಾ ಮನುಚರಿತ್ರೆ ಎಂಬ ತೆಲುಗು ಮಹಾಕಾವ್ಯವನ್ನು ಬರೆದಿದ್ದಾನೆ.ವಂದರೀಕ ಬ್ರಾಹ್ಮಣ,ಚೊಕ್ಕ ವಾಮಾತ್ಯನ ಮಗ,ಶಠಕೋಪ ತಪಸ್ವಿಯ ಶಿಷ್ಯ.ಚತುರ್ವಿಧ ಕವಿತಾಪ್ರವೀಣ,ಸಾಹಿತೀ ಸಮರಾಂಗಣ ಸಾರ್ವಭೌಮ ಕೃಷ್ಣದೇವರಾಯನಿಂದ ಆಂಧ್ರಕವಿಪಿತಾಮಹನೆಂಬ ಬಿರುದು ಪಡೆದು ಆಂಧ್ರ ಸಾಹಿತ್ಯದಲ್ಲಿ ಪ್ರಬಂಧ ಕವಿತ್ವಕ್ಕೆ ಮಾರ್ಗದರ್ಶಿಯಾದವ.ಅಂದಿನ ತೆಲುಗು ಸಾಹಿತ್ಯದ ಸ್ವರ್ಣಯುಗಕ್ಕೆ ಆತನ ಕಾಣಿಕೆ ಅಮೂಲ್ಯವಾದುದು.

ಸ್ವಾರೋಚಿಷಮನುಸಂಭವ ಆರು ಆಶ್ವಾಸಗಳುಳ್ಳ ಚಂಪೂಗ್ರಂಥ,ಕಥೆಯ ಮೂಲ ಮಾರ್ಕಂಡೇಯ ಪುರಾಣಾಂತರ್ಗತ ಪ್ರವರ ವೃತ್ತಾಂತ.ಮೊದಲ ಮೂರು ಆಶ್ವಾಸಗಳಲ್ಲಿ ವರೂಥಿನಿಪ್ರವರ ವೃತ್ತಾಂತವಿದೆ.ಮುಂದಿನ ಎರಡು ಆಶ್ವಾಸಗಳಲ್ಲಿ ಸ್ವಾರೋಚಿ ವನದೇವತೆಯೊಬ್ಬಳನ್ನು ಮದುವೆಯಾಗಿ ಸ್ವಾರೋಚಿಷನೆಂಬ ಮಗನನ್ನು ಪಡೆಯುತ್ತಾನೆ.ಮಗ ಮನುವಾಗಿ ವಿಷ್ಣುಸ್ತುತಿ ಮಾಡುತ್ತಾನೆ.ಅಲ್ಲಿಗೆ ಗ್ರಂಥ ಸಮಾಪ್ತವಾಗುತ್ತದೆ.

ಪೆದ್ದನಿಗಿಂತ ಹಿಂದೆ ಅನೇಕ ಕವಿಗಳು ತೆಲುಗಿನಲ್ಲಿ ಪುರಾಣರಚನೆ ಮಾಡಿದ್ದರು.ಆದರೆ ಪೆದ್ದನ ಅವರ ಮಾರ್ಗವನ್ನು ಅನುಸರಿಸದೆ ಪುರಾಣಪ್ರಸಿದ್ಧವಾದ ಒಂದು ಕಥೆಯನ್ನು ಆರಿಸಿಕೊಂಡು ಅದನ್ನು ಸುಂದರಕಾವ್ಯವಾಗಿ ಪರಿವರ್ತಿಸಿದ್ದಾನೆ.ಕಾವ್ಯದ ಉದ್ದಕ್ಕೂ ಪ್ರವರನ ಗಂಭೀರ ವ್ಯಕ್ತಿತ್ವ,ವರೂಥಿನಿಯ ರೂಪಗುಣವಿಲಾಸಗಳು ರಸವತ್ತಾಗಿ ವರ್ಣಿತವಾಗಿವೆ.ಶುಕಮಹರ್ಷಿಯಂತೆ ಪ್ರವರ ಸಂಯಮಗುಣಕ್ಕೆ ಮಾದರಿಯಾಗಿದ್ದಾನೆ.ವರೂಥಿನಿ,ರಂಭೆ,ಊರ್ವಶಿಯನ್ನು ಮೀರಿಸಿದ್ದಾಳೆ ತನ್ನ ವಿಲಾಸಾದಿಗುಣಗಳಲ್ಲಿ.