ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕಟ್ಟಡ ಶಾಸ್ತ್ರ

ವಿಕಿಸೋರ್ಸ್ದಿಂದ

ಕಟ್ಟಡ ಶಾಸ್ತ್ರ : ಸಂಸ್ಕೃತದಲ್ಲಿ ಕಟ್ಟಡಶಾಸ್ತ್ರವನ್ನು ವಾಸ್ತುಶಾಸ್ತ್ರವೆಂದು ಕರೆದಿದ್ದಾರೆ. ವಾಸ್ತು ಎಂದರೆ ವಾಸಿಸಲು ಮನೆಯನ್ನು ಕಟ್ಟಲು ಯೋಗ್ಯವಾದ ಭೂಮಿ, ಕಟ್ಟಬೇಕಾದ ಮನೆ ಎಂದು ಅರ್ಥ, ಇದಕ್ಕೆ ಸಂಬಂಧಪಟ್ಟ ವಿಷಯಗಳನ್ನು ತಿಳಿಸುವುದೇ ವಾಸ್ತು ಅಥವಾ ಕಟ್ಟಡಶಾಸ್ತ್ರ, ಇಲ್ಲಿ ನಿವೇಶನದ ಆಯ್ಕೆ, ಮನೆಯ ಉದ್ದಗಲ, ಎತ್ತರ ಮತ್ತು ವಿನ್ಯಾಸ, ನೋಡಬೇಕಾದ ತಿಥಿವಾರ ಇತ್ಯಾದಿಗಳು. ಉಪಯೋಗಿಸಬೇಕಾದ ಮರಮುಟ್ಟುಗಳು-ಈ ಎಲ್ಲ ವಿಷಯಗಳು ಬರುತ್ತವೆ.

ಭೃಗು, ಅತ್ರಿ, ವಸಿಷ್ಠ, ವಿಶ್ವಕರ್ಮ, ಯಮ, ನಾರದ, ನಗ್ನಜಿತ್, ವಿಶಾಲಾಕ್ಷ, ಪುರಂದರ, ಬ್ರಹ್ಮ, ಕುಮಾರ, ನಂದೀಶ, ಶೌನಕ, ಗರ್ಗ, ವಾಸುದೇವ, ಅನಿರುದ್ಧ, ಶುಕ್ರ, ಬೃಹಸ್ಪತಿ-ಈ ಹದಿನೆಂಟು ಮಂದಿ ವಾಸ್ತುಶಾಸ್ತ್ರದ ಉಪದೇಶಕರು. ಮತ್ಸ್ಯರೂಪಿಯಾದ ಭಗವಂತನಿಂದ ಮನವಿಗೆ ಇದು ಉಪದಿಷ್ಟವಾಗಿದೆ. ವಿಶ್ವಕರ್ಮ ಪ್ರಕಾಶದಲ್ಲಿರುವಂತೆ ಮೊಟ್ಟಮೊದಲು ಲೋಕಹಿತಕ್ಕಾಗಿ ಇದನ್ನು ತಿಳಿಸಿದವ ಶಂಭು. ಪುರಾತನವಾದ ಈ ಶಾಸ್ತ್ರವನ್ನು ಪರಾಶರ ಬೃಹದ್ರಥನಿಗೂ ಬೃಹದ್ರಥ ವಿಶ್ವಕರ್ಮನಿಗೂ ತಿಳಿಸುತ್ತಾನೆ. ವಿಶ್ವಕರ್ಮ ಈ ಶಾಸ್ತ್ರವನ್ನೇ ಲೋಕದಲ್ಲಿ ಪ್ರಚಾರ ಮಾಡಿರುತ್ತಾನೆ.

ಬಹಳ ಹಿಂದೆ, ತ್ರೇತಾಯುಗದಲ್ಲಿ, ದೊಡ್ಡ ಆಕಾರದ ಒಂದು ಭೂತ ತನ್ನ ಶರೀರದಿಂದ ಪ್ರಪಂಚವನ್ನೆಲ್ಲ ಆವರಿಸಿಕೊಂಡು ನಿದ್ರಿಸುತ್ತಿತ್ತು. ಇಂದ್ರನೇ ಮೊದಲಾದ ದೇವತೆಗಳು ಆ ಭಯಂಕರಾಕಾರದ ಭೂತವನ್ನು ನೋಡಿ ವಿಸ್ಮಿತರಾಗಿ ಭಯಪಟ್ಟು ಬ್ರಹ್ಮನ ಮರೆಹೊಕ್ಕು, ಭಯಂಕರ ರೂಪಿಯಾದ ಭೂತವೊಂದು ಮಲಗಿ ಪ್ರಪಂಚವನ್ನೆಲ್ಲ ಆವರಿಸಿಕೊಂಡಿದೆ, ನಾವು ಭೀತರಾಗಿದ್ದೇವೆ, ಈಗ ಎಲ್ಲಿಗೆ ಹೋಗುವುದು. ಏನು ಮಾಡುವುದು ಎಂಬ ಅರಿವಿಲ್ಲದೆ ನಿನ್ನಲ್ಲಿಗೆ ಬಂದಿದ್ದೇವೆ-ಎಂದು ವಿಷಯವನ್ನು ತಿಳಿಸಿ, ತಮ್ಮ ದುರಿತಗಳನ್ನು ನಿವಾರಿಸಿ ರಕ್ಷಿಸುವಂತೆ ಪ್ರಾರ್ಥಿಸಿದರು. ಆಗ ಬ್ರಹ್ಮ, ದೇವತೆಗಳಿಗೆ ಅಭಯ ಪ್ರದಾನಮಾಡಿ, ನೀವು ಹೆದರಬೇಡಿ, ಆ ಭೂತವನ್ನು ಕೆಳಮುಖ ಮಾಡಿ ತಳ್ಳಿ, ನಿಮಗೆ ಯಾವ ಭಯವೂ ಇರುವುದಿಲ್ಲ ಎಂದು ತಿಳಿಸುತ್ತಾನೆ. ಅದರಂತೆ, ದೇವತೆಗಳು ಆ ಭೂತವನ್ನು ಕೆಳಮೊಗನಾಗಿ ತಳ್ಳಿ ಹಿಂಸಿಸಿದರು. ಅವನೇ ಬ್ರಹ್ಮಕೃತ ವಾಸ್ತುಪುರುಷ. ಭಾದ್ರಪದ ಮಾಸದ ಕೃಷ್ಣಪಕ್ಷ ತೃತೀಯಾ ತಿಥಿ, ಕೃತ್ತಿಕಾ ನಕ್ಷತ್ರ, ವ್ಯತೀಪಾತ ಯೋಗ, ಭದ್ರಾಕರಣ ಶನಿವಾರ, ಗುಳಿಕ ಕಾಲದಲ್ಲಿ ವಾಸ್ತುಪುರುಷ ಬ್ರಹ್ಮನಲ್ಲಿಗೆ ಹೋಗಿ ಜಗತ್ಪ್ರಭುವೇ! ಚರಾಚರಾತ್ಮಕವಾದ ಸರ್ವವೂ ನಿನ್ನಿಂದ ಸೃಷ್ಟವಾಗಿದೆ. ಯಾವ ತಪ್ಪು ಇಲ್ಲದ ನನ್ನನ್ನು ವಿನಾಕಾರಣ ದೇವತೆಗಳು ಪೀಡಿಸುತ್ತಿದ್ದಾರೆ ಎನ್ನಲು ಪ್ರೀತನಾದ ಬ್ರಹ್ಮ ಅವನಿಗೆ ಗ್ರಾಮ, ನಗರ, ದುರ್ಗ, ಪ್ರಾಸಾದ, ಉದ್ಯಾನ, ಗೃಹ-ಈ ಸ್ಥಳಗಳಲ್ಲಿ ಯಾರು ನಿನ್ನನ್ನು ಪುಜಿಸದೆ ಕಟ್ಟಡ ಮೊದಲಾದುವನ್ನು ನಿರ್ಮಿಸಲು ಪ್ರಾರಂಭಿಸುತ್ತಾರೊ ಅವರ ಸಂಪತ್ತು ನಾಶವಾಗುತ್ತದೆ, ವಿಘ್ನಪರಂಪರೆಗಳು ಬರುತ್ತವೆ, ಕಟ್ಟಡ ಕಟ್ಟುವವನಿಗೂ ಮೃತ್ಯು ಸಂಭವಿಸುತ್ತದೆ ಎಂದು ವರವನ್ನು ಕೊಟ್ಟು ಅಂತರ್ಧಾನನಾದ. ಅಂದಿನಿಂದ ಯಾವ ಕಟ್ಟಡವನ್ನು ಕಟ್ಟಿಸಲು ಪ್ರಾರಂಭಿಸಬೇಕಾದರೂ ಮೊದಲು ವಾಸ್ತುಪುಜೆಯನ್ನು ಮಾಡುತ್ತಾರೆ. ಇಂದಿಗೂ ಇದು ಆಚರಣೆಯಲ್ಲಿದೆ.

ಇದಲ್ಲದೆ ಆದ್ಯ ಶಿಲಾಸ್ತಂಭ ವಿನ್ಯಾಸ ಸ್ಥಳವನ್ನು ಗೊತ್ತುಮಾಡುವಾಗ ತತ್ಕಾಲದಲ್ಲಿ ವಾಸ್ತುಪುರುಷನ ಸ್ಥಿತಿಯನ್ನು ಅರಿಯಬೇಕು. ಈ ವಾಸ್ತುವೇ ಚರವಾಸ್ತು. ಇದರ ವಿವರ ವಿದ್ಯಾಮಾಧವೀಯದಲ್ಲಿ ಹೀಗಿದೆ:

ಮಾರ್ತಾಂಡಾರೂಢ ರಾಶೌ ವಿನಿಹಿತಚರಣಸ್ತನ್ಮದನ್ಯಸ್ತ ಮೂರ್ಧಾ ವಾಮೇ ಪಾಶ್ವೇ ಶಯಾನೋ ಭ್ರಮತಿ ಸ ಪರಿತಃ ಪುರುಷೋ ವಾಸ್ತು ರೂಪಃ! ಪಾದೇ ಯದ್ಯರ್ಥನಾಶಃ ಶಿರಸಿ ಚ ಮರಣಂ ತಸ್ಯ ಪೃಷ್ಠೇ ವಿಪತ್ತಿಃ ವಕ್ಷಸ್ಯೂರೌ ಚ ನಾಶಶ್ಯು ಭಫಲಮುದರೇ ಸ್ತಂಭಮಾದ್ಯಂ ವಿದಧ್ಯತ್ ||

ಕಟ್ಟಡವನ್ನು ಕಟ್ಟುವುದಕ್ಕೆ ಮೊದಲು ಸ್ಥಳವನ್ನು ಪರೀಕ್ಷಿಸುವುದು ಆದ್ಯ ಕರ್ತವ್ಯ. ನಿವೇಶನವನ್ನು ಚಾತುರ್ವರ್ಣಾನುಗುಣವಾಗಿ ನಿಷ್ಕರ್ಷಿಸಿಕೊಳ್ಳಬೇಕು. ಮಣ್ಣು ಬಿಳುಪು ವರ್ಣದವರಿಗೆ ಪುರ್ವೋತ್ತರಗಳಲ್ಲಿ ತಗ್ಗಾದ ಭೂಮಿಯಾಗಿದ್ದು, ಮಣ್ಣು ಬಿಳುಪು ಬಣ್ಣದ್ದಾಗಿ, ಸುವಾಸನೆ ಉಳ್ಳದ್ದೂ ಮಧುರವೂ ದರ್ಭೆ ಬೆಳೆದಿರುವುದೂ ಆಗಿದ್ದರೆ ಶ್ರೇಯಃಪ್ರದ. ಕ್ಷತ್ರಿಯರಿಗೆ ತಿಟ್ಟುಪ್ರದೇಶವೂ ರಕ್ತಗಂಧವೂ ಕಷಾಯರುಚಿಯೂ ಆಗಿ ಹುಲ್ಲು ಬೆಳೆದಿರುವ ಕೆಂಪು ಮಣ್ಣಿನ ಭೂಮಿ ಶ್ರೇಷ್ಠ. ವೈಶ್ಯರಿಗೆ ಹಳ್ಳತಿಟ್ಟುಗಳಿಲ್ಲದ ಹಳದಿ ಬಣ್ಣದ, ಜೇನಿನ ವಾಸನೆ ಮತ್ತು ಸ್ವಲ್ಪ ಹುಳಿಯಾದ ರುಚಿಯುಳ್ಳ ಮಣ್ಣಿನಿಂದ ಕೂಡಿ ಫಲಪುಷ್ಪ ಭರಿತವಾದ ಭೂಮಿ ಉತ್ತಮ. ನಾಲ್ಕನೆಯ ವರ್ಣದವರಿಗೆ ಹಳ್ಳತಿಟ್ಟುಗಳುಳ್ಳ, ಮದ್ಯದ ವಾಸನೆಯಿಂದ ಕೂಡಿ ಆದ ಹುಲ್ಲು ಬೆಳೆದಿರುವ ಕಪ್ಪು ಮಣ್ಣಿನ ನಿವೇಶನ ಶುಭಪ್ರದ. ಹಳ್ಳತಿಟ್ಟುಗಳಿಲ್ಲದ ಸಮವಾದ ಬಿಳುಪು ಮಣ್ಣಿನಿಂದ ಕೂಡಿದ ಭೂಮಿ ಎಲ್ಲರಿಗೂ ಗ್ರಾಹ್ಯ.

ನಿವೇಶನದ ಪುರ್ವಭಾಗ ಎತ್ತರವಾಗಿದ್ದು ಉಳಿದ ಭಾಗ ತಗ್ಗಾಗಿದ್ದರೆ ಅದಕ್ಕೆ ಗೋವೀಥಿ ಎಂದು ಹೆಸರು. ಇಲ್ಲಿ ಗೋಗಳಿಗೆ ವೃದ್ಧಿ ಇರುತ್ತದೆ. ಆಗ್ನೇಯದಲ್ಲಿ ಎತ್ತರವಾಗಿದ್ದರೆ ಅಗ್ನಿವೀಥಿ. ಇಲ್ಲಿ ಅಗ್ನಿಭಯ. ದಕ್ಷಿಣದಲ್ಲಿ ಎತ್ತರವಾಗಿದ್ದರೆ ಪ್ರೇತವೀಥಿ. ಇಲ್ಲಿ ಮೃತ್ಯುಭಯ. ನೈಋತ್ಯದಲ್ಲಿ ಎತ್ತರವಾಗಿದ್ದರೆ ನಾಗವೀಥಿ. ಇಲ್ಲಿ ಸರ್ಪಭಯ. ಪಶ್ಚಿಮದಲ್ಲಿ ಎತ್ತರವಾಗಿದ್ದರೆ ಜಲವೀಥಿ. ಇಲ್ಲಿ ದಾರಿದ್ರ್ಯ. ವಾಯವ್ಯದಲ್ಲಿ ಎತ್ತರವಾಗಿದ್ದರೆ ಧಾನ್ಯವೀಥಿ. ಇಲ್ಲಿ ಧನಪ್ರಾಪ್ತಿ. ಉತ್ತರದಲ್ಲಿ ಎತ್ತರವಾಗಿದ್ದರೆ ಗಜವೀಥಿ. ಇಲ್ಲಿ ಸಂಪದಭಿವೃದ್ಧಿ. ಈಶಾನ್ಯದಲ್ಲಿ ಎತ್ತರವಾಗಿದ್ದರೆ ಧನವೀಥಿ. ಇಲ್ಲಿ ಪುತ್ರಪೌತ್ರಧನವೃದ್ಧಿ. ನಿವೇಶನದ ಮಧ್ಯದಲ್ಲಿ ತಗ್ಗಾಗಿದ್ದರೆ ಸಿಂಹವೀಥಿ. ಇಲ್ಲಿ ಸರ್ವಸಮೃದ್ಧಿ. ಕಟ್ಟಡ ಕಟ್ಟಲು ನಿವೇಶನವನ್ನು ಗೊತ್ತುಮಾಡುವಾಗ ಈ ಫಲಗಳನ್ನು ಗಮನಿಸಿ ನಿವೇಶನವನ್ನು ಆರಿಸಬೇಕು.

ಕಟ್ಟಡ ಕಟ್ಟಬೇಕೆಂದಿರುವ ಭೂಮಿಯಲ್ಲಿ ಇಪ್ಪತ್ತುನಾಲ್ಕು ಅಂಗುಲ ಪ್ರಮಾಣದ ಆಳವುಳ್ಳ ಒಂದು ಬಿಲವನ್ನು ತೋಡಿ ಮತ್ತೆ ಅದೇ ಮಣ್ಣನ್ನು ಆ ಬಿಲಕ್ಕೆ ತುಂಬುವುದು. ಬಿಲ ತುಂಬಿ ಮಣ್ಣು ಹೆಚ್ಚಾಗಿ ಉಳಿದರೆ ಆ ಪ್ರದೇಶದಲ್ಲಿ ಕಟ್ಟಡವನ್ನು ಕಟ್ಟುವುದರಿಂದ ವೃದ್ಧಿಯುಂಟಾಗುತ್ತದೆ. ಸಮನಾದರೆ ಹಾನಿವೃದ್ಧಿಗಳಿಲ್ಲದೆ ಸಮಫಲಪ್ರದವಾಗುತ್ತದೆ. ಮಣ್ಣು ಸಾಲದೆ ಬಂದರೆ ಆ ನಿವೇಶನ ಶ್ರೇಷ್ಠವಲ್ಲವೆಂದು ತಿಳಿಯಬೇಕು. ಆ ಹಳ್ಳದಲ್ಲಿ ಮೊದಲ ದಿವಸ ನೀರು ತುಂಬಿ ಮಾರನೆಯ ದಿವಸ ಬೆಳಗ್ಗೆ ನೋಡುವಾಗ ನೀರು ಉಳಿದಿದ್ದರೆ ಆ ನಿವೇಶನ ಕಟ್ಟಡವನ್ನು ಕಟ್ಟಲು ಯೋಗ್ಯವಾಗಿದೆ ಎಂದು ನಿಷ್ಕರ್ಷಿಸಬೇಕು. ಬದಿ ಇದ್ದರೆ ಅಲ್ಲಿ ಗೃಹವನ್ನು ಕಟ್ಟುವುದರಿಂದ ಹಲವು ದಾರಿದ್ರ್ಯಗಳ ಪೀಡೆ ಉಂಟಾಗುತ್ತದೆ. ನೀರಿನ ಅಂಶ ಸ್ವಲ್ಪವೂ ಇಲ್ಲದೆ ಒಣಗಿದ್ದರೆ ಆ ಜಾಗದಲ್ಲಿ ಮನೆಯನ್ನು ಕಟ್ಟಿದರೆ ಮೃತ್ಯು ಉಂಟಾಗುತ್ತದೆ.

ನಿವೇಶನದಲ್ಲಿ ಬಾವಿಯನ್ನು ತೆಗೆದಾಗ ಅದಕ್ಕೆ ಅನ್ಯಗೃಹದ ನೀರು ಬರುವ ಹಾಗಿದ್ದರೆ ಹಾನಿ ಮತ್ತು ಕಲಹ ಉಂಟಾಗುತ್ತವೆ. ಆ ಜಾಗದ ನೀರು ಉತ್ತರ ಈಶಾನ್ಯ ಪುರ್ವ ದಿಕ್ಕುಗಳಿಗೆ ಹರಿದರೆ ಶುಭಫಲಪ್ರದವಾಗುತ್ತದೆ.

ಈ ಕ್ರಮದಲ್ಲಿ ಭೂಮಿಯನ್ನು ಪರೀಕ್ಷಿಸಿ ದೋಷಾಲ್ಪವೂ ಗುಣಬಾಹುಳ್ಯವೂ ಇರುವ ಸ್ಥಳವನ್ನು ಆರಿಸಿ ಅಲ್ಲಿ ಮನೆ ಕಟ್ಟಬೇಕು. ಮೊದಲು ನಿವೇಶನವನ್ನು ಚೌಕನಾಗಿಯೂ ಸಮನಾಗಿಯೂ ಇರುವೆಡೆ ಅಗೆದು ಅಲ್ಲಿರುವ ಹುಲ್ಲು ಮೊದಲಾದುವನ್ನು ತೆಗೆದು ಚೊಕ್ಕಟಮಾಡಬೇಕು. ಬಳಿಕ ದಿಕ್ಕುಗಳನ್ನು ಗುರುತಿಸಬೇಕು.

ಶುಭಮುಹೂರ್ತದ ದಿನದಲ್ಲಿ ನಿವೇಶನವನ್ನು ಪಂಚಗವ್ಯ ಮತ್ತು ಔಷಧಿ ಜಲದಿಂದ ಶುದ್ಧಿಮಾಡಿ ಎಂಟು ದಿಕ್ಕುಗಳಲ್ಲೂ ಪುರ್ಣಕುಂಭಗಳನ್ನಿರಿಸಿ, ಗಣಪತಿ ಗ್ರಹಾದಿಗಳನ್ನು ಪುಜಿಸಿ ಪುಣ್ಯಾಹಮಾಡಿ ಆ ಜಲದಿಂದ ಸ್ಥಳಶುದ್ಧಿಮಾಡಿ ವಾಸ್ತು ದೇವತೆಯನ್ನು ಬರೆದು ಪ್ರತಿಷ್ಠಿಸಿ ಪುಜಿಸಬೇಕು. ವಾಸ್ತುಪುರುಷನ ಕುಕ್ಷಿಸ್ಥಾನದಲ್ಲಿ ಅಗೆದು ಶಿಲಾನ್ಯಾಸವನ್ನು ಮಾಡಬೇಕು. ಬಳಿಕ ಈಶಾನ್ಯಾದಿ ದಿಕ್ಕುಗಳಲ್ಲಿ ಪ್ರದಕ್ಷಿಣವಾಗಿ ಶಿಲೆಗಳನ್ನು ಇಡಬೇಕು.

ಮನೆಯ ವಿಸ್ತಾರವನ್ನು ಒಂಬತ್ತು ವಿಭಾಗಮಾಡಿ ಬಲಗಡೆಗೆ ಐದು ಭಾಗಗಳನ್ನು ಎಡಗಡೆಗೆ ಮೂರು ಭಾಗವನ್ನು ಬಿಟ್ಟÄ ಮಧ್ಯದ ಒಂದು ಭಾಗದಲ್ಲಿ ಬಾಗಿಲನ್ನು ಇಡಬೇಕು. ಬಾಗಿಲಿಗೆ ದಕ್ಷಿಣ ಅಥವಾ ಪಶ್ಚಿಮಕ್ಕೆ ಕಿಟಕಿ ಇರಬೇಕು.

ಗೃಹನಿರ್ಮಾಣ ಸ್ಥಳ ಆಯಾಕಾರದಲ್ಲಿರಬೇಕು. ಗೃಹನಿವೇಶನದ ಉದ್ದ ಅಗಲಗಳನ್ನು ಯಜಮಾನನ ಹಸ್ತದಿಂದ ಅಳತೆಮಾಡಿ ಮೊಳೆಗಳಲ್ಲಿ ಗೊತ್ತು ಮಾಡಿಕೊಂಡು ಉದ್ದ ಅಗಲಗಳ ಪ್ರಮಾಣಗಳನ್ನು ಗುಣಿಸಿ ಬಂದ ಫಲವೇ ಕ್ಷೇತ್ರಫಲ. ಇದನ್ನು ಒಂಬತ್ತರಿಂದ ಗುಣಿಸಿ ಎಂಟರಿಂದ ಭಾಗಿಸಿ ನಿಂತ ಶೇಷಕ್ಕೆ ಆಯ ಎಂದು ಹೆಸರು. ಒಂದು ಶೇಷ ನಿಂತರೆ ಧ್ವಜಾಯ, ಎರಡು ನಿಂತರೆ ಧೂಮ್ರಾಯ, ಮೂರು ನಿಂತರೆ ಸಿಂಹಾಯ, ನಾಲ್ಕು ನಿಂತರೆ ಶುನಕಾಯ, ಐದು ನಿಂತರೆ ವೃಷಭಾಯ, ಆರು ನಿಂತರೆ ಖರಾಯ, ಏಳು ನಿಂತರೆ ಗಜಾಯ, ಎಂಟು ನಿಂತರೆ ಕಾಕಾಯ ಇವೆಂಟೂ ಆಯಗಳು. ಇವುಗಳಲ್ಲಿ 1, 3, 5, 7 ಈ ನಾಲ್ಕು ವಿಷಮಾಯಗಳು ಗೃಹ ನಿರ್ಮಾಣಕ್ಕೆ ಶುಭಪ್ರದಗಳು. ಧ್ವಜಾಯ ಎಲ್ಲರಿಗೂ ಶ್ರೇಷ್ಠ. ಸಿಂಹಾಯ ಬ್ರಾಹ್ಮಣನಿಗೆ ಕೂಡದು. ಇದರಲ್ಲಿ ಪಶುವೃದ್ಧಿ ಇಲ್ಲ. ಪಶ್ಚಿಮ ದಿಕ್ಕಿನ ಧ್ವಜಾಯ ಬ್ರಾಹ್ಮಣನಿಗೂ ಉತ್ತರಮುಖದ ಸಿಂಹಾಯ ರಾಜರಿಗೂ ಪುರ್ವಾಭಿಮುಖದ ವೃಷಭಾಯ ವೈಶ್ಯನಿಗೂ ದಕ್ಷಿಣಾಭಿಮುಖದ ಗಜಾಯ ಶೂದ್ರನಿಗೂ ಶ್ರೇಷ್ಠ. ಆನೆ, ಒಂಟೆಗಳ ಶಾಲೆಗೆ ಧ್ವಜ, ಗಜಾಯಗಳೂ ಕುದುರೆಲಾಯ, ದನದ ಕೊಟ್ಟಿಗೆಗಳಿಗೆ ಧ್ವಜ, ವೃಷಭಾಯಗಳೂ ಸ್ತ್ರೀಶಯ್ಯಾಗೃಹ, ಆಸ್ಥಾನ, ಯಂತ್ರಶಾಲೆಗಳಿಗೆ ಸಿಂಹ, ಧ್ವಜ, ವೃಷಭಾಯಗಳೂ ಉತ್ತಮ. ಕೊಳ, ಬಾವಿಗಳಿಗೆ ಗಜಾಯವೂ ಪೀಠಕ್ಕೆ ಸಿಂಹಾಯವೂ ಮ್ಲೇಚ್ಛರಿಗೆ ಶುನಕಾಯವೂ ವೈಶ್ಯರಿಗೆ ಖರಾಯವೂ ಶ್ರೇಷ್ಠ. ಕ್ಷೇತ್ರಫಲವನ್ನು ಒಂಬತ್ತರಿಂದ ಗುಣಿಸಿ ಏಳರಿಂದ ಭಾಗಿಸಿದರೆ ನಿಂತ ಶೇಷ ಕ್ರಮವಾಗಿ ಭಾನುವಾರಾದಿಯಾಗಿ ವಾರಗಳನ್ನು ಸೂಚಿಸುತ್ತದೆ. ಶುಭಗ್ರಹಗಳ ವಾರವಾದರೆ ಒಳ್ಳೆಯ ಫಲ. ಕ್ಷೇತ್ರಫಲವನ್ನು ಆರರಿಂದ ಗುಣಿಸಿ ಒಂಬತ್ತರಿಂದ ಭಾಗಿಸಿ ನಿಂತ ಶೇಷ ಅಂಶವಾಗುತ್ತದೆ. ಅಧಿಕಾಂಶ ಬಂದರೆ ಶುಭಪ್ರದ. ಎಂಟರಿಂದ ಗುಣಿಸಿ ಹನ್ನೆರಡರಿಂದ ಭಾಗಿಸಿ ನಿಂತ ಶೇಷ ಧನ ಎಂದರೆ ಲಾಭವನ್ನು ಸೂಚಿಸುತ್ತದೆ. ಮೂರರಿಂದ ಗುಣಿಸಿ ಎಂಟರಿಂದ ಭಾಗಿಸಿ ನಿಂತ ಶೇಷ ಋಣ ಎಂದರೆ ನಷ್ಟವನ್ನು ಸೂಚಿಸುತ್ತದೆ. ನಷ್ಟಕ್ಕಿಂತ ಲಾಭ ಅಧಿಕವಾಗಿದ್ದರೆ ಶುಭಪ್ರದ. ಎಂಟರಿಂದ ಗುಣಿಸಿ ಇಪ್ಪತ್ತೇಳರಿಂದ ಭಾಗಿಸಿ ನಿಂತ ಶೇಷ ಅಶ್ವಿನ್ಯಾದಿ ನಕ್ಷತ್ರಗಳನ್ನು ಸೂಚಿಸುತ್ತದೆ. ಶುಭನಕ್ಷತ್ರವಾಗಿದ್ದು ಗೃಹದ ಯಜಮಾನನಿಗೆ ಅನುಕೂಲ ತಾರೆ ಆದರೆ ಶುಭಪ್ರದ.

ಕ್ಷೇತ್ರಫಲವನ್ನು ಎಂಟರಿಂದ ಗುಣಿಸಿ ಹದಿನೈದರಿಂದ ಭಾಗಿಸಿದರೆ ನಿಂತ ಶೇಷ ತಿಥಿಯನ್ನು ಸೂಚಿಸುತ್ತದೆ. ಶುಭತಿಥಿ ಶುಭಪ್ರದ. ಕ್ಷೇತ್ರಫಲವನ್ನು ನಾಲ್ಕರಿಂದ ಗುಣಿಸಿ ಇಪ್ಪತ್ತೇಳರಿಂದ ಭಾಗಿಸಿ ನಿಂತ ಶೇಷ ಯೋಗವನ್ನು ಸೂಚಿಸುತ್ತದೆ. ಶುಭಯೋಗವಾದರೆ ಶುಭ. ಕ್ಷೇತ್ರಫಲವನ್ನು ಎಂಟರಿಂದ ಗುಣಿಸಿ ನೂರಿಪ್ಪತ್ತರಿಂದ ಭಾಗಿಸಿದರೆ ನಿಂತ ಶೇಷ ಆಯುಸ್ಸನ್ನು ಸೂಚಿಸುತ್ತದೆ. ಇದರಲ್ಲಿ ತಾರುಣ್ಯಾವಸ್ಥೆ ಶುಭಪ್ರದ.

ಈ ಎಲ್ಲದರಲ್ಲೂ ಶುಭಫಲದ್ಯೋತಕವಾದ ಆಯ ಶುಭ. ಈ ಅಳತೆಯ ನಿವೇಶನದಲ್ಲಿ ಕಟ್ಟಡವನ್ನು ಕಟ್ಟಿದರೆ ಯಜಮಾನನಿಗೆ ಸುಖಪ್ರದವಾಗಿರುತ್ತದೆ.

ಅಗಲದಷ್ಟೇ ಎತ್ತರವಿರುವ ಗೃಹ ಒಳ್ಳೆಯದು. ವಿಸ್ತಾರಕ್ಕೆ ಎರಡರಷ್ಟು ಉದ್ದವಿದ್ದರೆ ಏಕಶಾಲಾ ಎಂದೂ ಎರಡರಷ್ಟಿದ್ದರೆ ದ್ವಿಶಾಲಾ ಎಂದೂ ಮೂರರಷ್ಟಿದ್ದರೆ ತ್ರಿಶಾಲಾ ಎಂದೂ ನಾಲ್ಕರಷ್ಟಾದರೆ ಚತುಃಶಾಲಾ ಎಂದೂ ಕರೆಯುತ್ತಾರೆ. ಉದ್ದ ಅಗಲದ ಐದರಷ್ಟಕ್ಕಿಂತ ಮೀರಬಾರದು.

ಸ್ನಾನಾಗಾರಂ ದಿಶಿಪ್ರಾಚ್ಯಾಮಾಗ್ನೇಯ್ಯಾಂ ಚ ಮಹಾನಸಂ ಯಾಮ್ಯಾಯಾಂ ಶಯನಾಗಾರಂ ನೈಋತ್ಯಾಂ ವಸ್ತ್ರಮಂದಿರಂ | ವಾರುಣ್ಯಾಂ ಭೋಜನಗೃಹಂ ವಾಯವ್ಯಾಂ ಪಶುಮಂದಿರಂ ಭಂಡಾರವೇಶ್ಮೋತ್ತರಸ್ಯಾಮೈಶಾನ್ಯಾಂ ದೇವತಾಲಯಂ ||

ಎಂದು ನಾರದ ತಿಳಿಸಿರುವಂತೆ ಮನೆಯ ಪುರ್ವ ವಿಭಾಗದಲ್ಲಿ ಸ್ನಾನಗೃಹವೂ ಆಗ್ನೇಯ ವಿಭಾಗದಲ್ಲಿ ಅಡಿಗೆಮನೆಯೂ ದಕ್ಷಿಣ ವಿಭಾಗದಲ್ಲಿ ಮಲಗುವ ಮನೆಯೂ ನೈಋತ್ಯ ವಿಭಾಗದಲ್ಲಿ ವಸ್ತ್ರಮಂದಿರವೂ ಪಶ್ಚಿಮ ವಿಭಾಗದಲ್ಲಿ ಊಟದ ಮನೆಯೂ ವಾಯವ್ಯ ವಿಭಾಗದಲ್ಲಿ ದನದ ಕೊಟ್ಟಿಗೆಯೂ ಉತ್ತರ ವಿಭಾಗದಲ್ಲಿ ಭಂಡಾರವೂ ಈಶಾನ್ಯ ವಿಭಾಗದಲ್ಲಿ ದೇವರ ಮನೆಯೂ ಇರುವಂತೆ ಮನೆಯನ್ನು ಅಳವಡಿಸಬೇಕು. ಚೈತ್ರ ಮಾಸದಲ್ಲಿ ಮನೆಯನ್ನು ಕಟ್ಟಲು ಪ್ರಾರಂಭಿಸಿದರೆ ವ್ಯಾಧಿಯೂ ವೈಶಾಖದಲ್ಲಿ ಧನಪ್ರಾಪ್ತಿಯೂ ಜೇೖಷ್ಠದಲ್ಲಿ ಮೃತ್ಯುವೂ ಆಷಾಢದಲ್ಲಿ ಪಶುಹಾನಿಯೂ ಶ್ರಾವಣದಲ್ಲಿ ಮಿತ್ರಲಾಭವೂ ಭಾದ್ರಪದದಲ್ಲಿ ಹಾನಿಯೂ ಆಶ್ವಯುಜದಲ್ಲಿ ಜಗಳವೂ ಕಾರ್ತಿಕದಲ್ಲಿ ಧನಧಾನ್ಯವೃದ್ಧಿಯೂ ಮಾರ್ಗಶೀರ್ಷದಲ್ಲಿ ಧನವೃದ್ಧಿಯೂ ಪುಷ್ಯದಲ್ಲಿ ಕಳ್ಳರ ಭಯವೂ ಮಾಘದಲ್ಲಿ ಹೆಚ್ಚು ಮಕ್ಕಳೂ ಫಾಲ್ಗುಣದಲ್ಲಿ ದ್ರವ್ಯಲಾಭವೂ ವಂಶವೃದ್ಧಿಯೂ ಉಂಟಾಗುತ್ತದೆ.

ಮಾಘ ಫಾಲ್ಗುನ ವೈಶಾಖ ಮಾರ್ಗ ಶ್ರವಣ ಕಾರ್ತಿಕಾಃ | ಮಾಸಾಸ್ಸ್ಯುರ್ಗೃಗೃಹನಿರ್ಮಾಣೇ ಪುತ್ರಾರೋಗ್ಯಧನಪ್ರದಾಃ || ಎಂದು ನಾರದನ ಉಕ್ತಿ.

ಮೇಷ-ವೃಷಭ ಮಾಸಗಳಲ್ಲಿ ಮನೆಯನ್ನು ಕಟ್ಟಿದರೆ ಶುಭಪ್ರದವೂ ಮಿಥುನ ಮಾಸದಲ್ಲಿ ಮರಣಭಯವೂ ಕರ್ಕಾಟಕ ಮಾಸದಲ್ಲಿ ಸೌಖವೂ ಸಿಂಹ ಮಾಸದಲ್ಲಿ ಭೃತ್ಯವೃದ್ಧಿಯೂ ಕನ್ಯಾಮಾಸದಲ್ಲಿ ರೋಗವೂ ತುಲಾಮಾಸದಲ್ಲಿ ಸೌಖ್ಯವೂ ವೃಶ್ಚಿಕಮಾಸದಲ್ಲಿ ಧನಧಾನ್ಯವೃದ್ಧಿಯೂ ಧನುರ್ಮಾಸದಲ್ಲಿ ತೊಂದರೆಯೂ ಮಕರಮಾಸದಲ್ಲಿ ಧನಪ್ರಾಪ್ತಿಯೂ ಕುಂಭಮಾಸದಲ್ಲಿ ಲಾಭವೂ ಮೀನಮಾಸದಲ್ಲಿ ಭಯಂಕರ ಸ್ವಪ್ನವೂ ಉಂಟಾಗುತ್ತವೆ.

ಸೂರ್ಯ ಚರ ಮತ್ತು ಸ್ಥಿರ ರಾಶಿಗಳಲ್ಲಿ ಸಂಚರಿಸುವಾಗ ಮನೆಯನ್ನು ಕಟ್ಟಲು ಪ್ರಾರಂಭಿಸಬೇಕು. ದ್ವಿಸ್ವಭಾವ ರಾಶಿಯಲ್ಲಿ ಸಂಚರಿಸುವಾಗ ಮನೆಯ ಕೆಲಸಕ್ಕೆ ಪ್ರಾರಂಭಿಸಿದರೆ ಅಶುಭಫಲ ಉಂಟಾಗುತ್ತದೆ. ಆದರೆ ಈ ಕಾಲದಲ್ಲಿ ಅಡಿಗೆ ಮನೆ, ಧಾನ್ಯ ಕುಟ್ಟುವ ಮನೆ, ಕೊಟ್ಟಿಗೆಗಳನ್ನು ಕಟ್ಟಲು ಪ್ರಾರಂಭಿಸಬಹುದು. ಸೂರ್ಯ ಮಕರ-ಕುಂಭ ರಾಶಿಗಳಲ್ಲಿರುವಾಗ ಪಶ್ಚಿಮ ಮುಖದ ಮನೆಯನ್ನೂ ವೃಷಭ-ಮೇಷರಾಶಿಗಳಲ್ಲಿರುವಾಗ ದಕ್ಷಿಣ ಮುಖದ ಮನೆಯನ್ನೂ ಸಿಂಹ-ಕರ್ಕಾಟಕರಾಶಿಗಳಲ್ಲಿರುವಾಗ ಪುರ್ವ ಮುಖದ ಮನೆಯನ್ನೂ ತುಲಾ-ವೃಶ್ಚಿಕ ರಾಶಿಗಳಲ್ಲಿರುವಾಗ ಉತ್ತರ ಮುಖದ ಮನೆಯನ್ನೂ ಕಟ್ಟಲು ಪ್ರಾರಂಭಿಸುವುದು ಒಳ್ಳೆಯದು. ಭರಣಿ-ಕೃತ್ತಿಕಾ ನಕ್ಷತ್ರಗಳಲ್ಲಿ ಸೂರ್ಯನಿರುವಾಗ ಗೃಹಾರಂಭವನ್ನು ಮಾಡಕೂಡದೆಂದು ಕೆಲವರ ಅಭಿಪ್ರಾಯ.

ಅನೂರಾಧ, ರೋಹಿಣಿ, ರೇವತಿ, ಪುಷ್ಯ, ಉತ್ತರಾ, ಉತ್ತರಾಷಾಢ, ಉತ್ತರಾಭಾದ್ರ, ಮೃಗಶಿರ, ಹಸ್ತ-ಈ ಒಂಬತ್ತು ನಕ್ಷತ್ರಗಳು ಗೃಹಾರಂಭಕ್ಕೆ ಪ್ರಶಸ್ತಿ. ಚಿತ್ತ, ಮೂಲ, ಸ್ವಾತಿ, ಪುನರ್ವಸು, ಧನಿಷ್ಟ, ಶತಭಿಷ-ಈ ಆರು ನಕ್ಷತ್ರಗಳು ಮಧ್ಯಮ. ಉಳಿದವು ಅಶುಭಗಳು. ಸ್ಥಿರ ಮತ್ತು ಊಧರ್ವ್‌ಮುಖ ನಕ್ಷತ್ರಗಳು ಗೃಹಾರಂಭಕ್ಕೆ ಉತ್ತಮ, ಗುರು, ಶನಿ, ಬುಧ, ಶುಕ್ರವಾರಗಳಲ್ಲಿ ಕಟ್ಟಡ ಕಟ್ಟಲು ಪ್ರಾರಂಭಿಸುವುದು ಉತ್ತಮ. ಸೋಮವಾರ ಮಧ್ಯಮ.

ರೋಹಿಣಿ, ಮೃಗಶಿರ, ಪುಷ್ಯ ನಕ್ಷತ್ರಗಳಲ್ಲಿ ಪುರ್ವಾಭಿಮುಖ ಮನೆಯನ್ನೂ ಮಖ, ಸ್ವಾತಿ, ಭರಣಿ ನಕ್ಷತ್ರಗಳಲ್ಲಿ ದಕ್ಷಿಣಾಭಿಮುಖ ಮನೆಯನ್ನೂ ಉತ್ತರಾಷಾಢ, ಶ್ರವಣ, ಮಖ ಮೂಲ ನಕ್ಷತ್ರಗಳಲ್ಲಿ ಪಶ್ಚಿಮ ಮುಖದ ಮನೆಯನ್ನೂ ಶ್ರವಣ ಉತ್ತರಾಭಾದ್ರ, ಅಶ್ವಿನಿ, ಶತಭಿಷಾ ನಕ್ಷತ್ರಗಳಲ್ಲಿ ಉತ್ತರ ಮುಖದ ಮನೆಯನ್ನೂ ಕಟ್ಟುವುದು ಶುಭಫಲಪ್ರದ. ವೃಷಭ ರಾಶಿಯನ್ನು ಬಿಟ್ಟು ಉಳಿದ ಪೃಷ್ಠೋದಯ ರಾಶಿಗಳಲ್ಲಿ ಮನೆಕೆಲಸವನ್ನು ಪ್ರಾರಂಭಿಸಬಾರದು.

ಮನೆ ಕಟ್ಟುವ ಯಜಮಾನನಿಗೆ ಶುಭಗ್ರಹದಶಾಫಲಗಳು ನಡೆಯುವ ಕಾಲದಲ್ಲಿ ಗೃಹನಿರ್ಮಾಣ ಕಾರ್ಯವನ್ನು ಪ್ರಾರಂಭಿಸಬೇಕು. ಗೃಹಾರಂಭ ಲಗ್ನಕ್ಕೆ ಅಷ್ಟಮಶುದ್ಧಿ ಇರಬೇಕು. ಕೇಂದ್ರಗಳಲ್ಲಿ (1, 4, 7, 10ನೆಯ ಸ್ಥಾನಗಳಲ್ಲಿ) ಶುಭಗ್ರಹಗಳಿರಬೇಕು. ಪಾಪಗ್ರಹಗಳು 3, 6, 11ನೆಯ ಸ್ಥಾನಗಳಲ್ಲಿರಬೇಕು. ಶುಕ್ರ ಸಪ್ತಮಸ್ಥಾನದಲ್ಲಿ ಇರಕೂಡದು. ಎಂಟು ಮತ್ತು ಹನ್ನೆರಡನೆಯ ಸ್ಥಾನಗಳಲ್ಲಿ ಗ್ರಹ ಇರಕೂಡದು. ಲಗ್ನದಲ್ಲಿ ಚಂದ್ರನಿರಬಾರದು. ಈ ಅಂಶಗಳನ್ನೆಲ್ಲ ಗಮನಿಸಿ ಶುಭಕಾಲದಲ್ಲಿ ಗೃಹಾರಂಭ ಮಾಡಿದರೆ ಶುಭಪ್ರದವಾಗುತ್ತದೆ. ರೇವತಿ, ಪುಷ್ಯ, ಮಖ, ಕೃತ್ತಿಕಾ, ಹಸ್ತ, ಮೂಲ-ಈ ನಕ್ಷತ್ರಗಳಲ್ಲಿ ಅಂಗಾರಕನಿದ್ದಾಗ ಮನೆಯನ್ನು ಕಟ್ಟಿದರೆ ಬೆಂಕಿ ಮನೆಯನ್ನು ಸುಡುತ್ತದೆ ಮತ್ತು ಪ್ರಾಣಕ್ಷಯವಾಗುತ್ತದೆ.

ಜ್ಯೇಷ್ಠ, ಪುರ್ವಾಭಾದ್ರ, ಉತ್ತರಾಭಾದ್ರ, ಭರಣಿ, ಸ್ವಾತಿ, ಅನೂರಾಧಾ ನಕ್ಷತ್ರಗಳಲ್ಲಿ ಕಟ್ಟಿದ ಮನೆಯಲ್ಲಿ ಯಕ್ಷಾದಿ ಪೀಡೆ ಇರುತ್ತದೆ. ಇದರಲ್ಲಿ ಧಾನ್ಯ ಗೃಹವನ್ನು ಕಟ್ಟಿದರೆ ಶುಭಪ್ರದ.

ಪುರ್ವಾಷಾಢ, ಶ್ರವಣ, ಉತ್ತರ, ಉತ್ತರಾಭಾದ್ರ, ಉತ್ತರಭಾದ್ರ, ರೋಹಿಣಿ ನಕ್ಷತ್ರಗಳಲ್ಲಿ ಗುರುವಿರುವಾಗ ಕಟ್ಟಿದ ಮನೆ ಕ್ಷತ್ರಿಯರಿಗೆ ಶುಭಪ್ರದ. ಚಿತ್ರ, ಅಶ್ವಿನಿ, ವಿಶಾಖ, ಧನಿಷ್ಠಾ ನಕ್ಷತ್ರಗಳಲ್ಲಿ ಶುಕ್ರನಿರುವಾಗ ಕಟ್ಟಿಸಿದ ನಾಟ್ಯಗೃಹ ಮತ್ತು ದೇವಗೃಹ ಶುಭಫಲಪ್ರದ. ಪುನರ್ವಸು ನಕ್ಷತ್ರದಲ್ಲಿ ಚಂದ್ರನಿರುವಾಗ ಸೂತಿಕಾಗೃಹವನ್ನು ರಚಿಸಬಹುದು.

ಮನೆಯನ್ನು ಕಟ್ಟಲು ಪ್ಲಕ್ಷ (ಜುಲ್ಲಿ), ಉದುಂಬರ (ಅತ್ತಿ), ವಿಭೀತಕ (ತಾರೆ), ವಟ (ಆಲ), ಅಶ್ವತ್ಥ, ಕಪಿತ್ಥ (ಬೇಲ), ಶಿಗ್ರು (ನುಗ್ಗೆ), ತಿಂತ್ರಿಣಿ (ಹುಣಿಸೆ) ನೆರಳಿಗಾಗಿ ಹಾಕಿರುವ ಮರ, ಮುಳ್ಳಿರುವ ಗಿಡ, ಬಳ್ಳಿಹಬ್ಬಿರುವ ಗಿಡ, ಕೆರೆ, ದೇವಾಲಯ, ಶ್ಮಶಾನದಲ್ಲಿರುವ ಗಿಡ, ಪೊಟ್ಟರೆ ಇರುವ ಮರ, ಸುಟ್ಟ ಮರ, ಆನೆ ಕೆಡವಿದ ಮರ-ಇವನ್ನು ಉಪಯೋಗಿಸಕೂಡದು.

ಕಡಿಯುವುದಕ್ಕೆ ಹಿಂದಿನ ರಾತ್ರಿ ಮರಕ್ಕೆ ಬಲಿಪ್ರದಾನ ಮಾಡಿ ಪುಜಿಸಿ ಮಾರನೆಯ ಹಗಲಿನಲ್ಲಿ ಕಡಿಯಬೇಕು. ಶುಭವಾರ, ನಕ್ಷತ್ರ, ತಿಥಿ, ಯೋಗ, ಕರಣಗಳಿಂದ ಕೂಡಿ ಯಜಮಾನನಿಗೆ ಚಂದ್ರತಾರಾಬಲವಿರುವ ಶುಭದಿನದಲ್ಲಿ ಹಗಲು ಒಳ್ಳೆಯ ಲಗ್ನದಲ್ಲಿ ಉತ್ತರ ಅಥವಾ ಪುರ್ವಾಭಿಮುಖವಾಗಿ ನಿಂತುಕೊಂಡು ಉದ್ದಿಷ್ಟವಾದ ಮರವನ್ನು ಕಡಿಯಬೇಕು. ಮನೆಗೆ ಚೌಕಟ್ಟು, ಕಿಟಕಿ ಇವುಗಳನ್ನು ಒಳ್ಳೆಯ ದಿನದಲ್ಲಿ ನಿಲ್ಲಿಸಬೇಕು. ಮನೆಯ ಆವರಣವನ್ನು ಮುಚ್ಚುವುದಕ್ಕೂ ಶುಭದಿನಗಳನ್ನು ಗಮನಿಸಬೇಕು.

ಮನೆ ಸಿದ್ಧವಾದ ಮೇಲೆ ಸ್ಥಿರ, ಮೃದು ನಕ್ಷತ್ರಗಳಲ್ಲಿ ಮತ್ತು ಸ್ಥಿರರಾಶಿಗಳಲ್ಲಿ ಗೃಹವನ್ನು ಪ್ರವೇಶಿಸಬೇಕು. ಚರರಾಶಿ ಕೂಡದು. ಚರರಾಶಿ ಆದರೂ ಅದರಲ್ಲಿ ವೃಷಭಾಂಶವಾದರೆ ಶುಭಪ್ರದ. ಗೃಹಪ್ರವೇಶ ಲಗ್ನಕ್ಕೆ 4, 7, 8, 10, 12ನೆಯ ಸ್ಥಾನಗಳು ಶುದ್ಧವಾಗಿರಬೇಕು. ಲಗ್ನಕೇಂದ್ರದಲ್ಲಿ ಗುರುವಿರುವುದು ಒಳ್ಳೆಯದು.

ಗೃಹಪ್ರವೇಶ ಕಾಲದಲ್ಲಿ ಶುಕ್ರ ಪೃಷ್ಠ ಭಾಗದಲ್ಲಾಗಲೀ ದಕ್ಷಿಣಕ್ಕಾಗಲೀ ಇರುವುದು ಅನುಕೂಲ. ಮುಂದೆ ಅಥವಾ ವಾಮಭಾಗದಲ್ಲಿರುವುದು ಅಶುಭಪ್ರದ.

ದೇವಾಲಯದ ನಿರ್ಮಾಣದಲ್ಲಿ ಸಾಮಾನ್ಯ ಗೃಹನಿರ್ಮಾಣಕ್ಕಿಂತ ವಿಶೇಷಾಂಶಗಳನ್ನು ಗಮನಿಸಬೇಕಾಗುತ್ತದೆ. ಈ ವಿಷಯಗಳು ಶೈವ, ಪಾಂಚರಾತ್ರ, ವೈಖಾನಸ ಮೊದಲಾದ ಆಗಮಗಳಲ್ಲಿ ವಿವರವಾಗಿ ವರ್ಣಿತವಾಗಿವೆ. (ಎಸ್.ಎನ್.ಕೆ.)