ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕಾಯಕ

ವಿಕಿಸೋರ್ಸ್ದಿಂದ

ಕಾಯಕ

ಮನುಷ್ಯ ತನ್ನ ಜೀವನ ನಿರ್ವಹಣೆಗಾಗಿ ಅವಲಂಬಿಸಿರುವ ವೃತ್ತಿಯೇ ಕಾಯಕ. ಅದರಲ್ಲಿ ಮೇಲುಕೀಳೆಂಬುದಿಲ್ಲ. ಅದನ್ನು ಮಾಡದವನು ಉಣ್ಣಲು ಅರ್ಹನಲ್ಲ. ಧರ್ಮದೃಷ್ಟಿಯಿಂದ ನ್ಯಾಯವಾದ ರೀತಿಯಲ್ಲಿ ತನ್ನ ತನ್ನ ಕಾಯಕವನ್ನು ಮಾಡಬೇಕಾದ್ದು ಪ್ರತಿಯೊಬ್ಬನ ಕರ್ತವ್ಯ.

ಪ್ರತಿಯೊಬ್ಬ ಮಾನವನೂ ಉದ್ಯೋಗಶೀಲನಾಗಬೇಕು. ತನಗೆ ಸಮಾಜಕ್ಕೆ ಮತ್ತು ರಾಷ್ಟ್ರಕ್ಕೆ ಆವಶ್ಯಕವಾದ ಪ್ರತಿಯೊಂದು ಕೆಲಸವನ್ನೂ ಪ್ರತಿಯೊಬ್ಬನೂ ಹಂಚಿಕೊಂಡು ಶ್ರದ್ಧೆಯಿಂದದನ್ನು ಮಾಡಬೇಕು. ವೇದಕಾಲದಲ್ಲಿ ಉದ್ಯೋಗದಲ್ಲಿ ಮೇಲು ಕೀಳು ಎಂಬ ಭಾವನೆಯಿರಲಿಲ್ಲ. 'ನಾನು ಕವಿ, ನನ್ನ ತಂದೆ ವೈದ್ಯ, ನನ್ನ ತಾಯಿ ಕಾಳುಗಳನ್ನು ಬೀಸುತ್ತಾಳೆ. ಹೀಗೆ ಹಲವು ಕೆಲಸಗಳನ್ನು ಮಾಡುತ್ತ, ಗೋವುಗಳು ಹುಲ್ಲುಗಾವಲುಗಳಿಂದ ಆಹಾರವನ್ನು ಹೊಂದುವಂತೆ, ನಾವು ಐಶ್ವರ್ಯವನ್ನು ಸೌಖ್ಯವನ್ನೂ ಹೊಂದಲಿಚ್ಛಿಸುತ್ತೇವೆ' ಎಂಬ ಋಗ್ವೇದದ ಮಾತು ಸಮಾಜದಲ್ಲಿ ಕಾಯಕದ ರಹಸ್ಯವನ್ನು ಸೂಚಿಸುತ್ತದೆ.         

 (ಎಂ.ಜಿ.ಎನ್.)

ಕಾಯಕವೆಂಬುದು ವೀರಶೈವಧರ್ಮದ ಪಾರಿಭಾಷಿಕ ಶಬ್ದ. ಕಾಯಕವೇ ಕೈಲಾಸ ಎಂಬ ಮಾತು ಶರಣರಲ್ಲಿ ರೂಢಿಯಲ್ಲಿದೆ. ತನಗಾಗಿ ಮತ್ತು ಸಮಾಜಕ್ಕಾಗಿ ಶಿವಾರ್ಪಿತ ಭಾವದಿಂದ ಕಾರ್ಯಗಳನ್ನು ಕೈಗೊಂಡು ಎಲ್ಲರೂ ತಂತಮ್ಮ ಕಾಯಕದಲ್ಲಿ ನಿರತರಾಗಿರಬೇಕೆಂದು ಶರಣರ ಆಶಯ.        

(ಬಿ.ಎಸ್.)

ಸೋಂಬತನವನ್ನು ಶರಣರು ಖಂಡಿಸುತ್ತಾರೆ.

ಕಾಯಕಕಾರದೆ ಮೈ ಸೋಂಬತನದಿಂದೆ

ಬೇರೆ ಕೂಳ ಗಳಿಸಲಾರದೆ ಹಸಿದಿಪ್ಪರಯ್ಯ|

ಒಡಲ ಸೀರೆಯ ಗಳಿಸಲಾರದೆ

ಕಚ್ಚುಟವ ಕಟ್ಟಿಕೊಂಡಿಪ್ಪರಯ್ಯ|

ಮೀಯಲು ಎಣ್ಣೆ ಗಳಿಸಲಾರದೆ

ಮಂಡೆ ಬೋಳಾಗಿಪ್ಪರಯ್ಯ|

ದಿಟದಿಂದ ಬಿಡಿಸಲರಿಯದೆ ಸಂಸಾರದ ಶಠೆಯನವಧರಿಸಿ

ಕೊಂಡಿಪ್ಪವರಿಗೆ ನಾನಂಜುವೆನೆಯ್ಯ ಸಕಲೇಶ್ವರ|

(ಸಕಲೇಶ ಮಾದರಸ)

ತನ್ನ ದುಡಿಮೆಯ ಫಲವನ್ನು ತನ್ನ ಸ್ವಾರ್ಥಕ್ಕೆ ಉಪಯೋಗಿಸಿಕೊಳ್ಳದೆ ತನಗೆಷ್ಟು ಬೇಕೊ ಅಷ್ಟನ್ನು ಇಟ್ಟುಕೊಂಡು ಉಳಿದುದನ್ನು ಲೋಕಸಂಸಾರಕ್ಕೆ ಉಪಯೋಗಿಸಿದಾಗ ದುಡಿಮೆ ಕಾಯಕವಾಗುತ್ತದೆ. ಬಸವಣ್ಣನವರು ಬಿಜ್ಜಳನ ಮಂತ್ರಿಯಾಗಿ ದುಡಿದರು. 'ಹೊತ್ತಾರೆ ಎದ್ದು ಕಣ್ಣ ಹೊಸವುತ್ತ, ಎನ್ನೊಡಲಿಂಗೆ, ಎನ್ನೊಡವೆಗೆ, ಎನ್ನ ಮಡದಿ ಮಕ್ಕಳಿಗೆಂದು ಕುದಿದೆನಾದೊಡೆ ಎನ್ನ ಮನಕ್ಕೆ ಮನವೇ ಸಾಕ್ಷಿ' ಎಂದವರು ತಮ್ಮ ಕಾಯಕದ ಬಗ್ಗೆ ಉದ್ಗಾರವೆತ್ತಿದ್ದಾರೆ.

ಇನ್ನೊಬ್ಬರ ಹಂಗಿನಲ್ಲಿ ಬಾಳುವ ಜೀವನವನ್ನು ಬಸವಣ್ಣನವರು ನಿಷ್ಠುರವಾಗಿ ಖಂಡಿಸಿದ್ದಾರೆ. 'ಅನ್ಯರ ಮನೆಗೆ ಹೋಗಿ ತನ್ನುದರವ ಹೊರೆಯದ ಅಚ್ಚ ಶರಣರ ಕಂಡರೆ ನಿಶ್ಚಯವಾಗಿ ಕೂಡಲ ಸಂಗಯ್ಯನೆಂಬೆ'. ಭಕ್ತನಾಗಲಿ, ಗುರುವಾಗಲಿ. ಜಂಗಮನಾಗಲಿ ಎಲ್ಲರೂ ತಮ್ಮ ತಮ್ಮ ಕಾಯಕದಲ್ಲಿ ನಿರತರಾಗಿರಬೇಕು. ಅದೇ ಶರಣರ ದೃಷ್ಟಿಯಾಗಿತ್ತು. ನುಲಿಯ ಚಂದಯ್ಯನ ಒಂದು ವಚನದಿಂದ ಈ ಮಾತಿನ ಅರ್ಥಕ್ಕೆ ಪುಷ್ಟಿಯೊದಗುತ್ತದೆ.

 

ಗುರುವಾದಡೂ ಕಾಯಕದಿಂದಲೇ ಜೀವನ್ಮಕ್ತಿ

ಲಿಂಗವಾದಡೂ ಕಾಯಕದಿಂದಲೇ ಶಿಲೆಯ ಕುಲ ಹರಿವುದು

ಜಂಗಮವಾದಡೂ ಕಾಯಕದಿಂದಲೇ ವೇಷಪಾಶ ಹರಿವುದು

ಇದು ಚನ್ನಬಸವಣ್ಣ ಪ್ರಿಯ ಚಂದೇಶ್ವರ ಲಿಂಗದ ಅರಿವು.

ಈತ ಹಗ್ಗ ಹೊಸೆಯುವ ಕಾಯಕ ಕೈಗೊಂಡವ. ಅದನ್ನು ನಡೆಸುತ್ತಲೇ ಸಾಧನೆ ಮುಂದುವರಿಸಿದ. ಇವನಂತೆಯೇ 12ನೆಯ ಶತಮಾನದಲ್ಲಿ ಅನೇಕ ಶರಣರು ವೃತ್ತಿಯಲ್ಲಿ ಬೇರೆಯಾದರೂ ಮೋಕ್ಷಸಾಧನೆಯ ಮಾರ್ಗದಲ್ಲಿ ಒಂದೇ ಆಗಿದ್ದರು. ಅವರಲ್ಲಿ ಮುಖ್ಯರು ಮಡಿವಾಳ ಮಾಚಯ್ಯ, ಮೇದರ ಕೇತಯ್ಯ, ಹಡಪದ ಅಪ್ಪಣ್ಣ, ಅಂಬಿಗರ ಚೌಡಯ್ಯ, ತುರುಗಾಹಿ ರಾಮಣ್ಣ, ಸುಂಕದ ಬಂಕಣ್ಣ, ತಳವಾರ ಕಾಮಿದೇವ, ಗಾಣದ ಕನ್ನಪ್ಪ, ವೈದ್ಯ ಸಂಗಣ್ಣ, ಸೂಜಿಕಾಯಕದ ರಾಮಿತಂದೆ, ಬಾಚಿಕಾಯಕದ ಬಸಪ್ಪ, ಕೊಟ್ಟಣದ ರೇಮವ್ವೆ, ಮೋಳಿಗೆ ಮಾರಯ್ಯ ಮುಂತಾದವರು. ಅವರ ಹೆಸರಿನ ಹಿಂದಿರುವ ಮಾತುಗಳೇ ಅವರು ಕೈಗೊಂಡಿದ್ದ ಕಾಯಕವನ್ನು ಸೂಚಿಸುತ್ತವೆ. ಇವರೆಲ್ಲ ಅನುಭವ ಮಂಟಪದ ಶರಣಗೋಷ್ಠಿಗೆ ಬಂದಾಗ ಮಂತ್ರಿ ಬಸವಣ್ಣನವರ ಸರಿಸಮರಾಗಿ ಕುಳಿತು ಅಧ್ಯಾತ್ಮ ಚರ್ಚೆಯಲ್ಲಿ ಭಾಗವಹಿಸುತ್ತಿದ್ದರು.

ವೈದಿಕ ಯುಗದ, ಅನಂತರ ವೀರಶೈವ ಧರ್ಮದ ಕಾಯಕದ ಕಲ್ಪನೆ ಆಧುನಿಕ ಯುಗಕ್ಕೂ ಮಾರ್ಗದರ್ಶಕವಾಗಿದೆ.