ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗೇ, ಜಾನ್

ವಿಕಿಸೋರ್ಸ್ದಿಂದ
ಗೇ, ಜಾನ್

1685-1732. ಕವಿ ಮತ್ತು ನಾಟಕಕಾರ. ಇಂಗ್ಲೆಂಡಿನ ಡೆವನ್ನಲ್ಲಿ ಹುಟ್ಟಿದ ಈತ ಚಿಕ್ಕಂದಿನಲ್ಲೇ ಅನಾಥನಾದ. ಲಂಡನಿನ ರೇಷ್ಮೆ ವ್ಯಾಪಾರಿಯ ಬಳಿ ಕೆಲಸಕ್ಕೆ ಸೇರಿದ. ಆದರೆ ಈತನಿಗೆ ಆ ಕೆಲಸದಲ್ಲಿ ಅಭಿರುಚಿಯಿಲ್ಲವೆಂಬುದನ್ನು ಕಂಡುಕೊಂಡ ಯಜಮಾನ ಇವನನ್ನು ಕೆಲಸದಿಂದ ತೆಗೆದುಹಾಕಿದ. 1708ರ ಹೊತ್ತಿಗೆ ವೈನ್ ಎಂಬ ಪದ್ಯವನ್ನು ಬರೆದು ಜಾನ್ ಪ್ರಸಿದ್ಧನಾದನಲ್ಲದೆ 1713ರಲ್ಲಿ ಗ್ರಾಮ ಜೀವನವನ್ನು ಕುರಿತ ರೂರಲ್ ಸ್ಪೋಟ್ರ್ಸ್‌ ಎಂಬ ಪದ್ಯಸಂಕಲನವನ್ನು ಹೊರತಂದ. 1714ರಲ್ಲಿ ಷಪಡ್ರ್ಸ್‌ ವೀಕ್ ಎಂಬ ವೀರಕಾವ್ಯವನ್ನೂ 1716ರಲ್ಲಿ ಟ್ರೆವಿಯ ಎಂಬ ಅಣಕು ವೀರಕಾವ್ಯವನ್ನೂ ರಚಿಸಿದ. 1727 ಮತ್ತು 1728ರಲ್ಲಿ ಅಚ್ಚಾದ ಫೇಬಲ್ಸ್‌ ಈತನಿಗೆ ಶಾಶ್ವತವಾದ ಪ್ರಸಿದ್ಧಿಯನ್ನು ದೊರಕಿಸಿಕೊಟ್ಟವು. ಆ ವೇಳೆಗೆ ಈತ ಸಾಹಿತ್ಯಕೂಟಗಳಲ್ಲಿ ಸೇರತೊಡಗಿ ಪೋಪ್ ಮತ್ತು ಸ್ವಿಫ್ಟರ ಸ್ನೇಹಿತನಾದ. ಈತನ ದಿ ಬೆಗ್ಗರ್ಸ್‌ ಆಪೆರ (1728) ಎಂಬ ಕೃತಿಗೆ ವಸ್ತುವನ್ನು ಸೂಚಿಸಿದವ ಜೋನಾಥನ್ ಸ್ವಿಫ್ಟ್‌ನೇ. ಈ ಕೃತಿಯಲ್ಲಿ ಇಟಾಲಿಯನ್ ಆಪೆರದ ಮಾರ್ಮಿಕ ವಿಡಂಬನೆಯಿದೆ. ಇಂದಿಗೂ ಜಾನನ ಪ್ರಸಿದ್ಧಿ ನಿಂತಿರುವುದು ಈ ನಾಟಕದಿಂದಲೇ. ಇದರ ಹಾಡುಗಳು ಅತ್ಯಂತ ಜನಪ್ರಿಯವಾದುವು. ನಾಟಕದ ಉತ್ತರ ಭಾಗವಾದ ಪಾಲಿ 1729ರಲ್ಲಿ ಹೊರಬಂತು. ರಾಜಾಸ್ಥಾನವನ್ನು ಟೀಕಿಸುತ್ತದೆಂಬ ಕಾರಣದಿಂದ ಈ ನಾಟಕವನ್ನು ಚೇಂಬರ್ಲಿನ್ ನಿಷೇಧಿಸಿದನಾದರೂ ನಾಟಕದ ಪ್ರತಿಗಳೇನೋ ಚೆನ್ನಾಗಿ ಖರ್ಚಾದವು.


ಕಥನ ಕವನಗಳನ್ನು ಬಳಸಿಕೊಂಡಿರುವ ದಿ ಬೆಗ್ಗರ್ಸ್‌ ಆಪೆರ ನಾಟಕ, ಕರ್ತೃವಿನ ಉದ್ದೇಶ, ವಾಕ್ಚಾತುರ್ಯ ಮತ್ತು ವಿಡಂಬನೆಯ ಮೂಲಕ ಇಲ್ಲಿ ಕಲೆಯಾಗಿ ಸಫಲಗೊಂಡಿದೆ. ಸಂಭಾಷಣೆಗಳು ಅನೀತಿಯನ್ನು ಪ್ರತಿಪಾದಿಸುವಂತಿದ್ದರೂ ಪ್ರೇಕ್ಷಕರು ಅದರ ವಿರೋಧ ಭಾವವನ್ನೇ ಗ್ರಹಿಸುತ್ತಾರೆ. ಇದು ಮುಖ್ಯವಾಗಿ ರಾಜಕೀಯ ವಿಡಂಬನೆ. 18ನೆಯ ಶತಮಾನದ ವಿಡಂಬನ ಸಾಹಿತ್ಯದಂತಿದ್ದರೂ ಇಂದಿಗೂ ಇದು ನವನವೀನವಾಗಿದೆ. ಇದರ ವಸ್ತು ಅಂದಿನ ಪ್ರಧಾನಮಂತ್ರಿಯಾಗಿದ್ದ ರಾಬರ್ಟ್ ವಾಲ್ಪೋಲನ ಆಡಳಿತದ ಟೀಕೆ. ಈ ನಾಟಕವನ್ನು ರಾಬರ್ಟ್ ವಾಲ್ಪೋಲನೂ ಅವನ ಅನುಯಾಯಿಗಳೂ ಸ್ವತಃ ವೀಕ್ಷಿಸಿ ತಮ್ಮ ಆಡಳಿತದ ಕೊಳೆಯನ್ನು ರಂಗದ ಮೇಲೆ ತೊಳೆಯುತ್ತಿರುವುದನ್ನು ಕಂಡು ಚಪ್ಪಾಳೆ ತಟ್ಟಿದರಂತೆ. ಈ ನಾಟಕ ಪ್ರದರ್ಶನದಿಂದ ಮಂತ್ರಿಮಂಡಲ ಉರುಳಿ ಹೋಗದಿದ್ದರೂ ಮಹತ್ತ್ವಪುರ್ಣ ಪರಿಣಾಮಗಳಾದವು. ಮುಖ್ಯವಾಗಿ ಜೈಲು ಸುಧಾರಣೆಗಳು ಜಾರಿಗೆ ಬಂದದ್ದು ಈ ನಾಟಕದಿಂದ. ಬ್ರಿಟಿಷ್ ಪೌರ ಮತ್ತು ರಾಜಕೀಯ ಆಡಳಿತದಲ್ಲಿ ಅನೇಕ ಸುಧಾರಣೆಗಳಿಗೂ ಈ ನಾಟಕ ಕಾರಣವಾಯಿತಲ್ಲದೆ ಅವರ ಸಾರ್ವಜನಿಕ ಜೀವನದಲ್ಲಿ ಸಹನೆ ಮತ್ತು ಪ್ರಾಮಾಣಿಕತೆಯನ್ನು ಹೆಚ್ಚಿಸಿತು. ಜನಜೀವನಕ್ಕೆ ಇದು ಕನ್ನಡಿ ಹಿಡಿಯಿತು. ಒಬ್ಬ ಕಳ್ಳನಿಂದ ಇನ್ನೊಬ್ಬ ಕಳ್ಳನನ್ನು ಹಿಡಿಯುವುದು ಪ್ರಾಚೀನ ನೀತಿ. ಅದನ್ನು ಗೇ ಬಹಳ ಚೆನ್ನಾಗಿ ಕಥನಕವನಗಳ ಮೂಲಕ ಈ ನಾಟಕದಲ್ಲಿ ತೋರಿಸಿದ್ದಾನೆ. ಮೊದಲನೆಯ ಹಾಡು ಮತ್ತು ಕೊನೆಯ ಹಾಡು ನಾಂದಿ ಮತ್ತು ಭರತ ವಾಕ್ಯಗಳಂತಿವೆ.


ಆಂಗ್ಲ ಸಾಹಿತ್ಯ ಚರಿತ್ರೆಯಲ್ಲಿ ಈತನ ಕೃತಿಯನ್ನು ಚರ್ಚಿಸುವಾಗ ಈತನನ್ನು ಸಂಪ್ರದಾಯಶೀಲ ಸಾಹಿತಿಗಳ ಪಂಕ್ತಿಗೆ ಸೇರಿಸಲಾಗಿದೆ. ಈತ ತನ್ನ ಸಮಕಾಲೀನನಾದ ಮ್ಯಾಥ್ಯೂ ಪ್ರಯರ್ಗಿಂತ (1664-1721) ಹೆಚ್ಚು ಸ್ಫೂರ್ತಿಯುಳ್ಳ ಲೇಖಕ. ಅಲ್ಲದೆ ಈತನ ಲಘು ಪದ್ಯಗಳೂ ಕಳಪೆಯವೇನಲ್ಲ. ವೆಸ್ಟ್‌ ಮಿನಿಸ್ಟರ್ ಅಬೆಯಲ್ಲಿ ಕವಿಯ ಸಮಾಧಿ ಇದೆ.