ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗೋರಿಕಾಯಿ

ವಿಕಿಸೋರ್ಸ್ದಿಂದ
ಗೋರಿಕಾಯಿ

ಲೆಗ್ಯೂಮಿನೋಸೀ ಕುಟುಂಬದ ಪ್ಯಾಪಿಲಿಯೋನೇಸೀ ಉಪಕುಟುಂಬಕ್ಕೆ ಸೇರಿದ ತರಕಾರಿ ಸಸ್ಯ. ಚವಳೀಕಾಯಿ ಪರ್ಯಾಯನಾಮ. ಸಯಮಾಪ್ಸಿಸ್ ಟೆಟ್ರಗೋನೊಲೋಬ ಇದರ ಶಾಸ್ತ್ರೀಯ ಹೆಸರು. ಇಂಗ್ಲಿಷಿನಲ್ಲಿ ಕ್ಲಸ್ಟರ್ ಬೀನ್ಸ್‌ ಎಂದು ಕರೆಯಲಾಗುತ್ತದೆ. ಗೋರಿಕಾಯಿ ಭಾರತದ ಮೂಲವಾಸಿ ಎಂದು ಹೇಳಲಾಗಿದೆ. ಕಾಡುಗಿಡವಾಗಿ ಇದು ಎಲ್ಲೂ ಬೆಳೆಯದು. ಭಾರತಾದ್ಯಂತ ಇದನ್ನು ಕಾಯಿಗಳಿಗಾಗಿ, ಬೀಜಕ್ಕಾಗಿ ಬೆಳೆಸಲಾಗುತ್ತಿದೆ.


ಗೋರಿಕಾಯಿ ಗಿಡದಲ್ಲಿ ಕುಳ್ಳು ಮತ್ತು ದೈತ್ಯ ಎಂಬ ಎರಡು ಬಗೆಗಳಿವೆ. ಎರಡೂ ನೆಟ್ಟಗೆ ಬೆಳೆಯುವ ಏಕವಾರ್ಷಿಕ ಸಸ್ಯಗಳು. ಕುಳ್ಳು ಬಗೆಯದು 60-90 ಸೆಂಮೀ ಎತ್ತರಕ್ಕೆ ಬೆಳೆದರೆ ದೈತ್ಯಬಗೆಯದು 2.5-3 ಮೀ ಎತ್ತರಕ್ಕೆ ಬೆಳೆಯುತ್ತದೆ. ಕಾಂಡ ಮತ್ತು ಎಲೆಗಳ ಮೇಲೆ ನಸು ಉದಾಬಣ್ಣದ ಕೂದಲುಗಳಿವೆ. ಗಿಡವನ್ನು ಮುಟ್ಟಿದರೆ ನವೆ ಉಂಟಾಗುವುದಕ್ಕೆ ಕಾರಣ ಈ ಕೂದಲುಗಳು. ಎಲೆಗಳು ಸಂಯುಕ್ತ ಬಗೆಯವು; ಇವು ಪರ್ಯಾಯ ಮಾದರಿಯಲ್ಲಿ ಜೋಡಣೆಗೊಂಡಿವೆ; ಪ್ರತಿ ಎಲೆಯಲ್ಲಿ 3 ಕಿರುಎಲೆಗಳಿವೆ. ಹೂಗಳು ಎಲೆಗಳ ಕಂಕುಳುಗಳಲ್ಲಿರುವ ಅಂತ್ಯಾರಂಭಿ ಮಾದರಿಯ ಹೂಗೊಂಚಲುಗಳಲ್ಲಿ ಸಮಾವೇಶಗೊಂಡಿವೆ. ಕಾಯಿಗಳು ಪಾಡ್ ಮಾದರಿಯವು.


ಗಿಡವನ್ನು ಸಾಮಾನ್ಯವಾಗಿ ಎಲ್ಲ ಬಗೆಯ ಮಣ್ಣುಗಳಲ್ಲೂ ಬೆಳೆಸಬಹುದಾದರೂ ಚೆನ್ನಾಗಿ ನೀರು ಬಸಿದು ಹೋಗುವಂಥ ಮರಳು ಮಿಶ್ರಿತ ಗೋಡು ಮಣ್ಣು ಉತ್ತಮವಾದದ್ದು. ಜೂನ್-ಜುಲೈ ಇಲ್ಲವೆ ಜನವರಿ-ಫೆಬ್ರುವರಿ ತಿಂಗಳುಗಳು ಬೇಸಾಯಕ್ಕೆ ಸೂಕ್ತ. ಎಕರೆಗೆ 15-20 ಗಾಡಿ ಕೊಟ್ಟಿಗೆ ಗೊಬ್ಬರ, 125 ಕಿಗ್ರಾಂ ಅಮೋನಿಯಂ ಸಲ್ಫೇಟ್, 250 ಕಿಗ್ರಾಂ ಸೂಪರ್ಫಾಸ್ಫೇಟ್, 60 ಕಿಗ್ರಾಂ ಮ್ಯೂರಿಯೇಟ್ ಆಫ್ ಪೊಟ್ಯಾಷ್ಗಳನ್ನು ಹಾಕಿ, 5-7 ದಿವಸಗಳಿಗೊಮ್ಮೆ ನೀರನ್ನು ಹಾಯಿಸುತ್ತಿರಬೇಕು. ಬೀಜ ಬಿತ್ತಿದ 2.5 ತಿಂಗಳ ಅನಂತರ ಕಾಯಿಗಳು ಕೊಯ್ಲಿಗೆ ಸಿದ್ಧವಾಗುತ್ತವೆ. ಇಳುವರಿ ಎಕರೆಗೆ 2,500 ರಿಂದ 3,500 ಕಿಗ್ರಾಂಗಳಷ್ಟು ಇರುತ್ತದೆ.


ಗಿಡಕ್ಕೆ ತಗಲುವ ರೋಗಗಳಲ್ಲಿ ಬ್ಯಾಕ್ಟೀರಿಯಲ್ ಬ್ಲೈಟ್ ಎಂಬುದು ಬಹಳ ಮುಖ್ಯವಾದದ್ದು. ಮೊದಲು ಎಲೆಗಳ ಮೇಲೆ ಬಹಳ ಸಣ್ಣ, ಪಾರದರ್ಶಕ, ನೀರುಗೂಡಿದ ಚುಕ್ಕೆಗಳು ಕಾಣಿಸಿಕೊಳ್ಳುತ್ತವೆ. ಅನಂತರ ನಾಳದ ಒಳಗಿರುವ ಕಣ ಸಮೂಹ ಹಳದಿ ಬಣ್ಣಕ್ಕೆ ತಿರುಗಿ ಎಲೆ ಸತ್ತುಹೋಗುತ್ತದೆ. ಕ್ರಮೇಣ ರೋಗ ಮುಂದುವರಿದು ಕಾಂಡಕ್ಕೂ ಅಂಟುತ್ತದೆ. ಕೊನೆಗೆ ಪೂರ್ತಿ ಗಿಡವೇ ಸತ್ತುಹೋಗುತ್ತದೆ. ಈ ರೋಗ ಬೀಜ ಮತ್ತು ಮಣ್ಣಿನಿಂದ ಪ್ರಸಾರವಾಗುತ್ತದೆ. ರೋಗರಹಿತ ಬೀಜಗಳನ್ನು ಉಪಯೋಗಿಸುವುದು, ಸೀರಸಾನ್ ಅಥವಾ ಆಗ್ರಸಾನ್ ಎಂಬ ಔಷಧಿಗಳಿಂದ ಬೀಜಗಳನ್ನು ತೊಳೆಯುವುದು ಮತ್ತು ರೋಗ ನಿರೋಧಕ ಜಾತಿಗಳನ್ನೇ ಬಿತ್ತಲು ಉಪಯೋಗಿಸುವುದು-ಇವು ರೋಗನಿಯಂತ್ರಣದ ಕೆಲವು ಕ್ರಮಗಳು.


ಗೋರಿಕಾಯಿ ತರಕಾರಿ ಮಾತ್ರವಾಗಿ ಅಲ್ಲದೆ ಇನ್ನಿತರ ಕಾರಣಗಳಿಂದಾಗಿಯೂ ಉಪಯುಕ್ತವೆನಿಸಿದೆ. ಇದು ದನಗಳಿಗೆ ಮತ್ತು ಕುದುರೆಗಳಿಗೆ ಒಳ್ಳೆಯ ಮೇವು. ಬೀಜಗಳನ್ನು ಬೇಯಿಸಿ, ಕೊಂಚ ಸಾಸಿವೆ ಎಣ್ಣೆಯೊಂದಿಗೆ ಸೇರಿಸಿ ದನಗಳಿಗೆ ತಿನ್ನಿಸುವುದುಂಟು. ಅಲ್ಲದೆ ಬೀಜಗಳಿಂದ ಒಂದು ರೀತಿಯ ಗೋಂದನ್ನು ತಯಾರಿಸಿ ಕಾಗದ ಮತ್ತು ಬಟ್ಟೆ ಕೈಗಾರಿಕೆಗಳಲ್ಲಿ ಉತ್ಪನ್ನಗಳಿಗೆ ಬಲವನ್ನು ಕೊಡುವ ವಸ್ತುವಾಗಿ ಬಳಸುತ್ತಾರೆ. ಹದವಾಗಿ ಬೆಳೆದ ಕಾಯಿಗಳನ್ನು ಸುಗ್ಗಿಯಲ್ಲಿ ಕಿತ್ತು ಒಣಗಿಸಿಟ್ಟುಕೊಂಡು ಬೇಕಾದಾಗ ತರಕಾರಿಯಾಗಿ ಬಳಸುತ್ತಾರಲ್ಲದೆ ಕರಿದು ಬಾಳಕ ಮಾಡುವುದೂ ಉಂಟು.