ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪಂಚಾಕ್ಷರಿಸ್ವಾಮಿ ಮತ್ತಿಗಟ್ಟಿ

ವಿಕಿಸೋರ್ಸ್ದಿಂದ

ಪಂಚಾಕ್ಷರಿಸ್ವಾಮಿ ಮತ್ತಿಗಟ್ಟಿ

ಪಂಡಿತ ಪಂಚಾಕ್ಷರಿಸ್ವಾಮಿ ಮತ್ತಿಗಟ್ಟಿ ಜೈಪುರ ಅತ್ರೌಳಿ ಘರಾಣೆಯ ಹಿರಿಯ ಗಾಯಕರು. 75ರಲ್ಲಿ ಕಾಲಿಟ್ಟಿರುವ ಇವರಿಗೆ ಇನ್ನೂ ಕಲಿಯುವ ಅದಮ್ಯ ಉತ್ಸಾಹ. ಪ್ರತಿ ತಿಂಗಳು ಕೊಲ್ಹಾಪುರಕ್ಕೆ ಹೋಗಿ ಒಂದು ವಾರ ಇದ್ದು ಬಾಬಾ ಅಜೀಜುದ್ದೀನ ಖಾನರಲ್ಲಿ ಎಭುರ್ಜಿಖಾನರ ಮಗ, ಅಲ್ಲಾದಿಯಾಖಾನರ ಮೊಮ್ಮಗ ಕಲಿಯುತ್ತಿರುವರು. ಅಜೀಜುದ್ದೀನಖಾನರು ರಾಗ ರಾಗಿಣಿಗಳ ಗಣಿ. 800 ರಾಗಗಳನ್ನು ಬಲ್ಲವರು. ಬಿಲಾವಲ ರಾಗವೊಂದರಲ್ಲಿಯೆ 90 ಪ್ರಕಾರಗಳನ್ನು ಬಲ್ಲವರು. ಶಂಕರಾ ಅರನ್, ಗೌಂಡಗಿರಿ ಮಲ್ಹಾರ, ಲಚ್ಫಾಸಾಗ, ರಾಮಸಾಗ, ದೇವಸಾಗ, ಭವಸಾಗ ಹೀಗೆ ಇನ್ನೂ ಅಸಂಖ್ಯ ಅಪ್ರಚಲಿತ ರಾಗಗಳ ಭಂಡಾರವಾಗಿದ್ದಾರೆ. ಭುರ್ಜಿಖಾನರ ಮರಣಾನಂತರ ಮಲ್ಲಿಕಾರ್ಜುನ ಮನಸೂರ ಸಹ ಅಜೀಜುದ್ದೀನ ಖಾನರಿಂದ ಅನೇಕ ಚೀಜುಗಳನ್ನು ಕಲಿತರು.

ಪಂಚಾಕ್ಷರಿಸ್ವಾಮಿ ಹುಟ್ಟಿದ್ದು 12.10.1927. ರಲ್ಲಿ ತಾಯಿ ಸಾತವ್ವನ ತವರೂರಾದ ಶಿಶುನಾಳದಲ್ಲಿ. ತಂದೆಯ ಊರು ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಮತ್ತಿಗಟ್ಟಿ. ತಂದೆ ಚನ್ನಬಸಯ್ಯ ಶರೀಫರ ಪದಗಳನ್ನು ಸುಶ್ರಾವ್ಯವಾಗಿ ಹಾಡುತ್ತಿದ್ದರು. ಮನೆಯಲ್ಲಿ ಸದಾ ತಬಲಾ, ಪೇಟಿ. ವಿಸ್ಮಯವೆಂದರೆ ಪಂಚಾಕ್ಷರಿಸ್ವಾಮಿ ನಿಜಕ್ಕೂ ಸತ್ತು ಹುಟ್ಟಿದ್ದು. 6 ತಿಂಗಳ ಕೂಸಿದ್ದಾಗ ಮೃತಪಟ್ಟು ಸ್ಮಶಾನಕ್ಕೂ ಒಯ್ಯಲಾಗಿತ್ತು. ಕುಣಿ ತೋಡಿದರು. ಇನ್ನೇನು, ಕುಣಿಯಲ್ಲಿ ಇಡಬೇಕು. ಏನಾಶ್ಚರ್ಯ ಕೂಸು ಅಳಲಾರಂಭಿಸಿತು. ಕೂಸನ್ನು ಮನೆಗೆ ತಂದರು. ಅದೇ ಕೂಸು ಇಂದು ಹಿಂದುಸ್ತಾನಿ ಸಂಗೀತದ ಉಚ್ಚ ಗಾಯಕ. ಬಾಲ್ಯವನ್ನು ಶಿಶುನಾಳದಲ್ಲಿ ಕಳೆದ ಪಂಚಾಕ್ಷರಿಸ್ವಾಮಿಗೆ ಶಿಶುನಾಳ ಶರೀಫರ ಮೊಮ್ಮಗ ಮೊಯಿನುದ್ದೀನನ ಸ್ನೇಹ. ಅವನೇ ಪಂಚಾಕ್ಷರಿಸ್ವಾಮಿಯಲ್ಲಿ ಸಂಗೀತಬೀಜ ನೆಟ್ಟವನು. ಅವನು ಕಲಿಸಿದ ಕರ್ನಾಟಕಿ ಕೃತಿ ಪಾಲಯಮಾಂ ಶ್ರೀ ಗೌರಿ ಪಂಚಾಕ್ಷರಿಸ್ವಾಮಿಯವರಿಗೆ ಇನ್ನೂ ಹಸಿರಾಗಿದೆ.
ಪಂಚಾಕ್ಷರಿಸ್ವಾಮಿ ತಮ್ಮ ಏಳನೆಯ ವಯಸ್ಸಿನಲ್ಲಿಯೆ ಪಂಚಾಕ್ಷರಿ ಗವಾಯಿಗಳಲ್ಲಿ ಸಂಗೀತ ಕಲಿಯಲು ಆರಂಭಿಸಿದರು. ಪಂಚಾಕ್ಷರಿ ಗವಾಯಿಗಳು ಉಭಯ ಗಾಯನಾಚಾರ್ಯರು. ಕಿರಾಣಾ ಘರಾಣೆಯ ಅಬ್ದುಲ್ ವಹೀದಖಾನ ಮತ್ತು ಗ್ವಾಲಿಯರ ಘರಾಣೆಯ ನೀಲಕಂಠಬುವಾ ಮಿರಜಕರರ ಶಿಷ್ಯರು. ವಿಚಿತ್ರವೆಂದರೆ, ಪಂಚಾಕ್ಷರಿಸ್ವಾಮಿಯ ತಂದೆ ಚನ್ನಬಸಯ್ಯರು ಪಂಚಾಕ್ಷರಿ ಗವಾಯಿಗಳಲ್ಲಿ ಕಲಿಯಬಯಸಿದ್ದರು. ಮದುವೆಯಾದವರಿಗೆ ನಾನು ಕಲಿಸುವುದಿಲ್ಲ. ನಿನ್ನ ಹೊಟ್ಯಾಗ ಹುಟ್ಟಿದವರು ಯಾರಾದರೂ ಇದ್ದರೆ ಕಳುಹಿಸು ಎಂದು ಪಂಚಾಕ್ಷರಿ ಗವಾಯಿಗಳ ಅಪ್ಪಣೆ. ಆ ಭಾಗ್ಯ ಮಗನದಾಯಿತು. ಪಂಚಾಕ್ಷರಿಸ್ವಾಮಿಯು ಪಂಚಾಕ್ಷರಿ ಗವಾಯಿಗಳ ಸಂಗೀತ ಶಾಲೆ ಸೇರಿದಾಗ ಪುಟ್ಟರಾಜ ಗವಾಯಿಗಳು, ಬಸವರಾಜ ರಾಜಗುರು, ಸಿದ್ಧರಾಮ ಜಂಬಲದಿನ್ನಿ ಸಹಪಾಠಿಗಳು.
ಪಂಚಾಕ್ಷರಿಸ್ವಾಮಿ ಮತ್ತಿಗಟ್ಟಿ 10 ವರ್ಷ ಪಂಚಾಕ್ಷರಿ ಗವಾಯಿಗಳಲ್ಲಿ ಪರಿಶ್ರಮ ವಹಿಸಿ ಅಭ್ಯಾಸ ಮಾಡಿದರು. ಪಂಚಾಕ್ಷರಿ ಗವಾಯಿಗಳು ಶಿಷ್ಯರನ್ನು ಬಾಗಿಲು ತಟ್ಟಿ ಬೆಳಿಗ್ಗೆ 5 ಗಂಟೆಗೆ ಎಬ್ಬಿಸುತ್ತಿದ್ದರು. 5 ರಿಂದ 7ರವರೆಗೆ ತೋಡಿ ರಾಗದ ಅಭ್ಯಾಸ. 6 ತಿಂಗಳು ಅದೊಂದೆ ರಾಗದ ಅಭ್ಯಾಸ. 6 ತಿಂಗಳು ಜೀವನಪುರಿ ರಾಗದ ಅಭ್ಯಾಸ. ಹೀಗೆ ಒಂದೊಂದಾಗಿ ರಾಗಗಳಿಗೆ ಭದ್ರ ಬುನಾದಿ.

ಪಂಚಾಕ್ಷರಿ ಗವಾಯಿಗಳು ತಮ್ಮ ವಿದ್ಯಾರ್ಥಿಗಳ ಪೆÇೀಷಣೆಯಲ್ಲಿ ಬಹಳಷ್ಟು ಸಾಲ ಸೋಲ ಸಂಪಾದಿಸಿದರು. ಸಾಲ ತೀರಿಸಲು ಉಪಾಯವೆಂದು ನಾಟಕ ಕಂಪನಿ ಪ್ರಾರಂಭಿಸಿದರು. ಪಂಚಾಕ್ಷರಿ ಗವಾಯಿಗಳು ಕಂಪನಿಗೆ ತಮ್ಮನ್ನು ಪಾಲನೆ ಪೆÇೀಷಣೆ ಮಾಡಿ ಮುಂದೆ ತಂದ ಗುರುಗಳಾದ ಹಾನಗಲ್ಲ ಕುಮಾರ ಸ್ವಾಮಿಗಳ ಹೆಸರನ್ನಿಟ್ಟರು. ಶ್ರೀ ಕುಮಾರೇಶ್ವರ ಕೃಪಾಪೆÇೀಷಿತ ನಾಟಕ ಸಂಘ. ಅದು ಗವಾಯಿಗಳ ಕಂಪನಿ ಎಂದೆ ಜನಜನಿತವಾಗಿತ್ತು. ಪಂಚಾಕ್ಷರಿ ಗವಾಯಿಗಳ ಅನೇಕ ಶಿಷ್ಯರು ನಾಟಕಗಳಲ್ಲಿ ಪಾತ್ರ ಮಾಡುತ್ತಿದ್ದರು. ಸ್ತ್ರೀಯರು ನಟಿಸುವಂತಿರಲಿಲ್ಲ. ಪುರುಷರೇ ಸ್ತ್ರೀ ಪಾತ್ರ ಮಾಡಬೇಕಿತ್ತು. ಪಂಚಾಕ್ಷರಿಸ್ವಾಮಿ ಮತ್ತಿಗಟ್ಟಿ ಕೂಡ ನಾಟಕ ಕಂಪನಿ ಸೇರಿದರು. ಹಲವಾರು ವರ್ಷ ಅಬಿsನಯಿಸಿದರು. ಯಾವ ಪಾತ್ರವಾದರೂ ಸೈ. ಆಲ್ ರೌಂಡ್ ನಟ. ಹೇಮರಡ್ಡಿ ಮಲ್ಲಮ್ಮ ನಾಟಕ ಸತತವಾಗಿ 376 ಪ್ರಯೋಗ ಕಂಡಿತು. ಅದರ ಪ್ರಧಾನ ಆಕರ್ಷಣೆ ಪಂಚಾಕ್ಷರಿಸ್ವಾಮಿ ಮತ್ತಿಗಟ್ಟಿ ಅವರ ಅಭಿನಯ, ಹಾಡುಗಾರಿಕೆ. ಅವರು ಮಲ್ಲಿಕಾರ್ಜುನ, ವೇಮನ, ಭರಮರೆಡ್ಡಿ ಪಾತ್ರಗಳಲ್ಲಿ ಮಿಂಚಿದರು. ಅಂದಿನ ನಾಟಕಗಳೆಲ್ಲ ಸಂಗೀತಮಯ. ಹಾಡುಗಳ ಸುರಿಮಳೆ. ಅದರಲ್ಲೂ ಶಾಸ್ತ್ರೀಯ ಸಂಗೀತಾಧಾರಿತ ಹಾಡುಗಳು. ಪಂಚಾಕ್ಷರಿಸ್ವಾಮಿ ಮತ್ತಿಗಟ್ಟಿ ಹಾಡುತ್ತಿದ್ದ ರಂಗಗೀತೆಗಳು ರಸಿಕರ ನಾಲಿಗೆ ಮೇಲೆ ಕುಣಿದಾಡುತ್ತಿದ್ದವು. ಹೀಗಿರುತ್ತ 1944ರಲ್ಲಿ ಪಂಚಾಕ್ಷರಿ ಗವಾಯಿಗಳು ಸ್ವರ್ಗಸ್ಥರಾದರು. ಮುಂದೇನು ಎಂಬ ಪ್ರಶ್ನೆ ಪಂಚಾಕ್ಷರಿಸ್ವಾಮಿ ಮತ್ತಿಗಟ್ಟಿ ಅವರ ಮುಂದೆ ಧುತ್ತೆಂದು ನಿಂತಿತು. ಅಂಥ ಸನ್ನೀವೇಶದಲ್ಲಿ ಗುರುವೇ ಶಿಷ್ಯನನ್ನರಸಿ ಬಂದಂತೆ ಮಲ್ಲಿಕಾರ್ಜುನ ಮನಸೂರ ಬಂದರು. ನಾಟಕ ಕಂಪನಿ ಬಿಡಿಸಿ ತಮ್ಮೊಡನೆ ಕರೆದೊಯ್ದರು. ಜುಲೈ 29, 1969ರಂದು ಧಾರವಾಡದ ರಸಿಕಾಗ್ರೇಸರ ನಾರಾಯಣರಾವ ಗುರ್ಟು ಅವರ ಮನೆಯಲ್ಲಿ ಗಂಡಾಬಂಧನ. ಇದು ವಿಧ್ಯುಕ್ತವಾಗಿ ಶಿಷ್ಯನನ್ನು ಗುರು ಸ್ವೀಕರಿಸುವ ಸಮಾರಂಭ. ತಮ್ಮಲ್ಲಿ ಕನಿಷ್ಟ ಐದು ವರ್ಷ ಕಲಿಯಬೇಕೆಂಬುದು ಮಲ್ಲಿಕಾರ್ಜುನ ಮನಸೂರರ ಷರತ್ತು. ಶಿಷ್ಯ ಅರೆಬರೆ ಕಲಿತು ಗುರುವಿನ ಹೆಸರು ಕೆಡಿಸುವುದು ಬೇಡವೆಂದು ಆಗಿನ ಕಾಲದಲ್ಲಿ ಇಂಥ ಷರತ್ತು ಪ್ರಚಲಿತವಿತ್ತು. ಮಲ್ಲಿಕಾರ್ಜುನ ಮನಸೂರ ಜೈಪುರ ಅತ್ರೌಳಿ ಘರಾಣೆಯ ಗಾಯಕಿಯಲ್ಲಿ ತಮ್ಮದೇ ವಿಶಿಷ್ಟ ಶೈಲಿ ನಿರ್ಮಿಸಿಕೊಂಡವರು. ಒಮ್ಮೊಮ್ಮೆ ನಸುಕಿನ 3-4 ಘಂಟೆಗೆ ಬಾಗಿಲು ಬಡಿದು ಎಬ್ಬಿಸಿ ಅಭ್ಯಾಸ ಮಾಡಿಸುತ್ತಿದ್ದರು. ಪಂಚಾಕ್ಷರಿಸ್ವಾಮಿ ಮತ್ತಿಗಟ್ಟಿ ಅವರಿಗೆ ಸಂಗೀತದ ಹುಚ್ಚು ಎಷ್ಟು ಹತ್ತಿತ್ತೆಂದರೆ ಊಟ, ನಿದ್ರೆ ಕೂಡ ಬೇಕೆನಿಸುತ್ತಿರಲಿಲ್ಲ. ದಿನಾಲು 10-12 ತಾಸು ಮೆಹನತ್ ಮಾಡಿದರು. ಐದು ವರ್ಷ ಕಳೆದುದೇ ಗೊತ್ತಾಗಲಿಲ್ಲ. ಮಲ್ಲಿಕಾರ್ಜುನ ಮನಸೂರರಿಗೆ ಮೂಲವ್ಯಾಧಿ ತೊಂದರೆ ಜೋರಾಯಿತು. ಶಸ್ತ್ರ ಚಿಕಿತ್ಸೆ ಮಾಡಿದ ಹುಬ್ಬಳ್ಳಿಯ ಡಾ.ಆರ್.ಬಿ. ಪಾಟೀಲರು ಎರಡು ವರ್ಷ ಹಾಡಕೂಡದೆಂದು ಹೇಳಿದರು. ಪಂಚಾಕ್ಷರಿಸ್ವಾಮಿ ಮತ್ತಿಗಟ್ಟಿ ಅವರಿಗೆ ಇನ್ನೂ ಕಲಿಯುವಾಸೆ. ಹೇಗೆ ಮಾಡುವುದೆಂದು ಮಲ್ಲಿಕಾರ್ಜುನ ಮನಸೂರರಿಗೆ ಚಿಂತೆಗಿಟ್ಟಿತು. ಅವರ ಆತಂಕವನ್ನು ಗ್ರಹಿಸಿದ ಪಂಚಾಕ್ಷರಿಸ್ವಾಮಿ ಮತ್ತಿಗಟ್ಟಿ ಪರಿಹಾರ ಸೂಚಿಸಿದರು: “ನಿವೃತ್ತಿಬುವಾ ಸರನಾಯಕರಲ್ಲಿ ಕಲಿಯಲೆ” “ಅಡ್ಡಿಯಿಲ್ಲ, ಅವರೂ ನಮ್ಮ ಘರಾಣೆಯವರೆ” ಪಂಚಾಕ್ಷರಿಸ್ವಾಮಿ ಮತ್ತಿಗಟ್ಟಿ ನಿವೃತ್ತಿಬುವಾ ಸರನಾಯಕರಲ್ಲಿ ಎರಡು ವರ್ಷ ಅಭ್ಯಾಸಗೈದು ಮತ್ತೆ ಮಲ್ಲಿಕಾರ್ಜುನ ಮನಸೂರರಲ್ಲಿಗೆ ಬಂದರು. ಮನಸೂರರು ತಮ್ಮ ವಿದ್ಯೆಯನ್ನೆಲ್ಲ ಧಾರೆಯೆರೆದರೆಂದು ಪಂಚಾಕ್ಷರಿಸ್ವಾಮಿ ಮತ್ತಿಗಟ್ಟಿ ಸ್ಮರಿಸುತ್ತಾರೆ. ಮಲ್ಲಿಕಾರ್ಜುನ ಮನಸೂರ ತಾವು ಕಚೇರಿಗೆ ಹೋದೆಡೆಯಲ್ಲೆಲ್ಲ ಶಿಷ್ಯನನ್ನು ಕರೆದೊಯ್ಯುತ್ತಿದ್ದರು. ಹೀಗೆ, ಪಂಚಾಕ್ಷರಿಸ್ವಾಮಿ ಮತ್ತಿಗಟ್ಟಿ ನಾಲ್ವರು ಗುರುಗಳ ಗರಡಿಯಲ್ಲಿ ಪಳಗಿರುವರು ಪಂಚಾಕ್ಷರಿ ಗವಾಯಿ, ಮಲ್ಲಿಕಾರ್ಜುನ ಮನಸೂರ, ನಿವೃತ್ತಿಬುವಾ ಸರನಾಯಕ, ಈಗ ಬಾಬಾ ಅಜೀಜುದ್ದೀನಖಾನ. ಪಂಚಾಕ್ಷರಿಸ್ವಾಮಿ ಮತ್ತಿಗಟ್ಟಿ ಅವರ e್ಞÁನದಾಹ ಯುವಕರಿಗೊಂದು ಆದರ್ಶ. 1976ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಸಂಗೀತ ವಿಭಾಗ ಆರಂಭ. ಮಲ್ಲಿಕಾರ್ಜುನ ಮನಸೂರ ಸಂಸ್ಥಾಪಕ ನಿರ್ದೇಶಕರು. ಅವರು ಗಂಗೂಬಾಯಿ ಹಾನಗಲ್ಲ ಮತ್ತು ಬಸವರಾಜ ರಾಜಗುರು ಅವರನ್ನು ಗೌರವ ಪ್ರಾಧ್ಯಾಪಕರನ್ನಾಗಿ ನಿಯುಕ್ತಿಗೊಳಿಸಿದರು. ಪಂಚಾಕ್ಷರಿಸ್ವಾಮಿ ಮತ್ತಿಗಟ್ಟಿ ಮತ್ತು ಸಂಗಮೇಶ್ವರ ಗುರವ ಅವರನ್ನು ಪೂರ್ಣಾವಧಿ ಉಪನ್ಯಾಸಕರನ್ನಾಗಿ ನಿಯಮಿಸಿದರು. ಪಂಚಾಕ್ಷರಿಸ್ವಾಮಿ ಮತ್ತಿಗಟ್ಟಿ ಅನೇಕ ಆಕಾಶವಾಣಿ ಕೇಂದ್ರಗಳಿಂದ ಗಾಯನ ಬಿತ್ತರಿಸಿದ್ದಾರೆ. ಹಲವು ಸಂಗೀತ ಸಮ್ಮೇಳನಗಳಲ್ಲಿ ಪಾಲ್ಗೊಂಡಿದ್ದಾರೆ. ದೂರದರ್ಶನದಲ್ಲೂ ಕಾರ್ಯಕ್ರಮ ನೀಡಿರುವರು. 1989ರಲ್ಲಿ ಅಮೆರಿಕಾ ಪ್ರವಾಸ ಮಾಡಿ 30-35 ಕಚೇರಿ ನೀಡಿರುವರು. ಲಂಡನ್ನಿನ ಭಾರತೀಯ ವಿದ್ಯಾಭವನದ ನಿರ್ದೇಶಕರಾದ ಮತ್ತೂರು ಕೃಷ್ಣಮೂರ್ತಿಯವರಿಂದ ಆಹ್ವಾನ ಬಂತು. ಎಲ್ಲ ವ್ಯವಸ್ಥೆ ಮಾಡಿದರು. ವಿಮಾನಯಾನದ ಟಿಕೆಟ್, ವಿಸಾ 15 ದಿನದಲ್ಲಿ ಬಂದವು. ಲಂಡನ್ನಿನಲ್ಲಿ ಪಂಚಾಕ್ಷರಿಸ್ವಾಮಿ ಮತ್ತಿಗಟ್ಟಿ ಹಾಡಿದ ದಿನ ಅಂದಿನ ಪ್ರಧಾನಿ ಪಿ.ವಿ. ನರಸಿಂಹರಾವ್ ಲಂಡನ್ನಿಗೆ ಬಂದಿದ್ದರು. ಮತ್ತೂರು ಕೃಷ್ಣಮೂರ್ತಿ ಭಾರತದ ಪ್ರಧಾನಿಯನ್ನು ಸಂಗೀತ ಆಲಿಸಲು ಆಮಂತ್ರಿಸಿದ್ದರು. 5 ನಿಮಿಷ ಕುಳಿತು ಹೋಗುವುದಾಗಿ ಹೇಳಿದ್ದ ನರಸಿಂಹರಾಯರು ಕಚೇರಿ ಮುಕ್ತಾಯವಾಗುವವರೆಗೂ ಕುಳಿತು ಆಸಕ್ತಿಯಿಂದ ಆಲಿಸಿದರು. ಭೈರವಿ ಹಾಡಿದ ಮೇಲೆ ಪಂಚಾಕ್ಷರಿಸ್ವಾಮಿ ಮತ್ತಿಗಟ್ಟಿ ಅವರನ್ನು ಅಭಿನಂದಿಸುತ್ತ ಅಚ್ಚ ಕನ್ನಡದಲ್ಲಿ ಪ್ರಶಂಸಿದರು. ಭಾರತೀಯ ವಿದ್ಯಾಭವನದ ಲಂಡನ್ ಶಾಖೆಯಲ್ಲಿ ಪಂಚಾಕ್ಷರಿಸ್ವಾಮಿ ಮತ್ತಿಗಟ್ಟಿ 15 ದಿನ ಹಿಂದುಸ್ತಾನಿ ಗಾಯನ ಕಲಿಸಿದರು. 5 ವರ್ಷದ ಒಪ್ಪಂದದ ಮೇಲೆ ಲಂಡನ್ನಿಗೆ ಬರಲು ಮತ್ತೂರು ಕೃಷ್ಣಮೂರ್ತಿ ಆಮಂತ್ರಿಸಿದರು. ಇಂಗ್ಲಂಡಿನ ಧೋ ಧೋ ಸುರಿಯುವ ಮಳೆಯಿಂದ ಹೈರಾಣಾಗಿದ್ದ ಪಂಚಾಕ್ಷರಿಸ್ವಾಮಿ ಮತ್ತಿಗಟ್ಟಿ ನಾನು ಊರಿಗೆ ಹೋಗಿ ತಿಳಿಸುವೆ ಎಂದವರು ಲಂಡನ್ನಿನತ್ತ ಮತ್ತೆ ಮುಖ ಮಾಡಲಿಲ್ಲ. ಪಂಚಾಕ್ಷರಿಸ್ವಾಮಿ ಮತ್ತಿಗಟ್ಟಿ ದೊಡ್ಡ ಶಿಷ್ಯಬಳಗ ನಿರ್ಮಿಸಿರುವರು. ಅವರಲ್ಲಿ ಗೀತಾ ಜಾವಡೆಕರ,ನಿರ್ಮಲಾ ಜಯಾನಂದಯ್ಯ, ಸರಯೂ ಸೊನ್ನಿ, ಷಡಕ್ಷರಿಬುವಾ, ದಿ. ಅಜ್ಜಣ್ಣ ಪಾಟೀಲ, ಮುಕ್ತಾ ಮಜುಮದಾರ, ಮೀರಾ ಗುಂಡಿ, ವೀರಣ್ಣ ಹೂಗಾರ, ಶಶಿಕಲಾ ಚವಡಿ, ಮೃತ್ಯುಂಜಯ ಅಗಡಿ, ನಾಗರಾಜ ಹವಾಲ್ದಾರ ಪ್ರಮುಖರು. ಒಬ್ಬ ಸಂಗೀತಗಾರನ ನಿಜವಾದ ಸಂಪತ್ತೆಂದರೆ ಶಿಷ್ಯ ಸಂಪತ್ತೇ.

ಪಂಚಾಕ್ಷರಿಸ್ವಾಮಿ ಮತ್ತಿಗಟ್ಟಿ ಅವರ ಪ್ರತಿಭೆ ಗುರುತಿಸಿ ಬಿರುದು, ಪ್ರಶಸ್ತಿಗಳು ಬಂದಿವೆ. ಸಂಗೀತ ಕಲಾನಿದಿs, ನಾದಬ್ರಹ್ಮ, ಲಯಬ್ರಹ್ಮ, 1986ರಲ್ಲಿ ಕರ್ನಾಟಕ ರಾಜ್ಯ ಸಂಗೀತ ನೃತ್ಯ ಅಕಾಡಮಿಯ ಕಲಾಶ್ರೀ ಪ್ರಶಸ್ತಿ, 1994ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, 2002ರಲ್ಲಿ ಪುಟ್ಟರಾಜ ಸಮ್ಮಾನ, 2003ರಲ್ಲಿ ಕನಕಪುರಂದರ ಪ್ರಶಸ್ತಿ.
ಪಂಚಾಕ್ಷರಿಸ್ವಾಮಿ ಮತ್ತಿಗಟ್ಟಿ ಅವರ ಅಕ್ಕ ಕೇಳವ್ವ ಕ್ಯಾಸೆಟ್ ಹೊರಬಂದಿದೆ. ಅದರಲ್ಲಿ ಬಸವೇಶ್ವರ ಮತ್ತು ಅಕ್ಕಮಹಾದೇವಿಯವರ ವಚನಗಳನ್ನು ಸುಶ್ರಾವ್ಯವಾಗಿ, ಅರ್ಥಪೂರ್ಣವಾಗಿ ಹಾಡಿರುವರು. ಜೈಪುರ ಗಾಯಕಿ ಕಠಿಣವಾದುದು. ಅಂಥ ಮುಶ್ಕಿಲ್ ಗಾಯಕಿಯನ್ನು ಕರತಲಾಮಲಕ ಮಾಡಿಕೊಂಡುದು ಪಂಡಿತ ಪಂಚಾಕ್ಷರಿಸ್ವಾಮಿ ಮತ್ತಿಗಟ್ಟಿ ಅವರ ಸಾಧನೆ. ಅಂತೆಯೆ ರಸಿಕರ, ವಿಮರ್ಶಕರ ಪ್ರಶಂಸೆಗೆ ಪಾತ್ರರಾಗಿರುವರು.			(ಶ್ರೀಕೃಪಾ)