ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪಂಚ ಪರಮೇಷ್ಠಿಗಳು

ವಿಕಿಸೋರ್ಸ್ದಿಂದ

ಪಂಚ ಪರಮೇಷ್ಠ್ಠಿಗಳು - ಸಾಧು, ಉಪಧ್ಯಾಯ, ಆಚಾರ್ಯ, ಅರ್ಹತ್ ಮತ್ತು ಸಿದ್ಧ ಸ್ಥಾನಗಳಲ್ಲಿರುವವರನ್ನು ಪಂಚಪರಮೇಷ್ಠಿಗಳೆಂದು ಜೈನರು ಭಯಭಕ್ತಿಯಿಂದ ಪೂಜಿಸುತ್ತಾರೆ. ಸಾಧಕರು ಮೊದಲ ಸಾಧು ಪದದಿಂದ ತೊಡಗಿ ತಮ್ಮ ಆಚಾರವಿಚಾರಗಳಿಂದ ಶುದ್ಧರಾಗುತ್ತ ಒಂದೊಂದೇ ಹಂತವನ್ನು ಏರಿ ಕೊನೆಯಲ್ಲಿ ಸಿದ್ಧಾವಸ್ಥೆಯನ್ನು ಪಡೆಯಬೇಕು.

ಪರಮೇಷ್ಠಿ ಪದಗಳಲ್ಲಿ ಸಾಧುಗಳು ಎಲ್ಲಕ್ಕೂ ಕೆಳಗಿನ ಹಂತದಲ್ಲಿ ನಿಲ್ಲುವರು. ಇವರು 28 ಮೂಲಗುಣಗಳ ಧಾರಕರು, ಆಗಮದ ಹದಿನಾಲ್ಕು ಪೂರ್ವಗಳ ಪೂರ್ಣ ಜ್ಞಾನವುಳ್ಳ ಉಪಾಧ್ಯಾಯರ ಸ್ಥಾನ ಸಾಧುಗಳಿಗಿಂತ ಮೇಲಿನದು. ಇದಕ್ಕೂ ಮೇಲಿನ ಪದ ಆಚಾರ್ಯ ಪರಮೇಷ್ಠಿಗಳದು. ಇವರು ಆಧ್ಯಾತ್ಮ ಸಾಧನೆಗಾಗಿ ಹನ್ನೆರಡು ಪ್ರಕಾರದ ತಪಗಳನ್ನು ಆಚರಿಸುತ್ತಾರೆ. ಇವರ ಮುಂದಿನದೇ ಅರ್ಹತ್ ಪದ. ಇದು ಜೀವನ್ಮುಕ್ತಾವಸ್ಥೆ. ತೀರ್ಥಂಕರರೆಲ್ಲ ಈ ಪದದಲ್ಲಿರುತ್ತಾರೆ. ಇದರ ಮುಂದಿನ ಪದ ಸಿದ್ಧಾವಸ್ಥೆ. ಇದೇ ಮುಕ್ತಾಯದ ಅವಸ್ಥೆ. (ಎಂ.ಎ.)