ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬಸವಣ್ಣ

ವಿಕಿಸೋರ್ಸ್ದಿಂದ

ಬಸವಣ್ಣ

ಸುಮಾರು 1131. ಅನುಭಾವಿ. ಸಮಾಜ ಸುಧಾರಕ, ಧಾರ್ಮಿಕ ಮುಖಂಡ, ಕ್ರಾಂತಿಕಾರ, ಕಾಯಕನಿಷ್ಠ, ಮೇಲಾಗಿ ಕವಿ. 12ನೆಯ ಶತಮಾನವನ್ನು ಭರತಖಂಡದ ಧಾರ್ಮಿಕ ಪರಂಪರೆಯಲ್ಲಿ ಒಂದು ಚಿರಸ್ಮರಣೀಯ ಘಟ್ಟವನ್ನಾಗಿಸಿದ ಮಹಾವ್ಯಕ್ತಿ. ಇವರ ವ್ಯಕ್ತಿತ್ವ ಬಹುಮುಖವಾದುದಾದರೂ ಇವರನ್ನು ಕುರಿತು ಅನೇಕ ಕಾವ್ಯಗಳು ರಚಿತವಾಗಿದ್ದರೂ ಅವುಗಳಲ್ಲಿ ಯಾವುದರಲ್ಲೂ ಇವರ ವ್ಯಕ್ತಿತ್ತ್ವದ ಸಮಗ್ರ ಯಥಾವತ್ತಾದ ಚಿತ್ರಣ ಮೂಡಿ ಬಂದಿಲ್ಲ. ಅವೆಲ್ಲ ಪವಾಡಗಳಲ್ಲಿ ಹುದುಗಿ ಹೋಗಿವೆ. ಆದರೆ ಸಾವಿರಕ್ಕೂ ಹೆಚ್ಚು ಸಂಖ್ಯೆಯಲ್ಲಿ ದೊರೆತಿರುವ ಇವರ ವಚನಗಳಿಂದ ಹಾಗೂ ಪುರಾಣಗಳಲ್ಲಿ ಸೂಚಿತವಾಗಿರುವ ಘಟನೆಗಳಿಂದ ಚಾರಿತ್ರಿಕ ಅಂಶಗಳನ್ನು ಹೆಕ್ಕಿ ತೆಗೆದು ಇವರ ಜೀವನಚಿತ್ರವನ್ನೂ ಸಾಧನೆಗಳನ್ನೂ ಕಾಣಬೇಕಾಗಿದೆ.

ಹುಟ್ಟಿದ್ದು ಬಾಗೇವಾಡಿಯಲ್ಲಿ. ಈಗ ಅದು ಬಿಜಾಪುರ ಜಿಲ್ಲೆಯಲ್ಲಿ ತಾಲ್ಲೂಕಿನ ಮುಖ್ಯ ಸ್ಥಳವಾಗಿದೆ. ಹಿಂದೆ ಪ್ರಸಿದ್ಧ ಅಗ್ರಹಾರವಾಗಿತ್ತು. ತಂದೆ ಅದರ ಅಧಿಪತಿ ಮಾದಿರಾಜ. ತಾಯಿ ಮಾದಲಾಂಬೆ. ದೇವರಾಜ ಅಣ್ಣ, ನಾಗಮ್ಮ ಅಕ್ಕ. ಬಾಗೇವಾಡಿಯ ಪ್ರಸಿದ್ಧ ದೈವ ಬಸವೇಶ್ವರನ ಅನುಗ್ರಹದಿಂದ ನಂದೀವ್ರತದ ಫಲವಾಗಿ ಇವರು ಜನಿಸಿದರು ಎನ್ನಲಾಗಿದೆ. ಸುಮಾರು 1131ರಲ್ಲಿ ಬಸವಣ್ಣನವರು ಜನಿಸಿರಬೇಕೆಂದು ವಿದ್ವಾಂಸರ ಅಭಿಪ್ರಾಯ.

ಬಾಲ್ಯದಿಂದಲೇ ಇವರು ವಯಸ್ಸಿಗೆ ಮೀರಿದ ಕುತೂಹಲ ಜಾಣ್ಮೆಜಾಗೃತಿಗಳನ್ನು ವ್ಯಕ್ತಪಡಿಸತೊಡಗಿದರು. ಎಂಟರ ಪ್ರಾಯದಲ್ಲೆ ಸಾಮಾಜಿಕ ಧಾರ್ಮಿಕ ವಿಚಾರಗಳನ್ನು ಒರೆ ಹಚ್ಚುವ ಪ್ರೌಢ ವಿಚಾರಸರಣಿ ಇವರಲ್ಲಿ ಗೋಚರವಾಯಿತು. ಉಪನಯನವಾದ ಕೆಲವು ಕಾಲಾನಂತರ ಯಜ್ಞೋಪವೀತವನ್ನು ಕಿತ್ತು ಹಾಕಿದರೆಂದು ಹರಿಹರ ಕವಿ ಹೇಳುತ್ತಾನೆ. ಅದೇನೇ ಇರಲಿ, ವೈದಿಕಧರ್ಮದ ಚತುರ್ವರ್ಣಗಳ ವಿಭಜನೆಯನ್ನೂ ಅದರಿಂದ ಸಮಾಜದಲ್ಲಿ ಉಂಟಾದ ಮೇಲು ಕೀಳುಗಳನ್ನು ಇವರು ಒಪ್ಪಿಕೊಳ್ಳಲಾರದೇ ಹೋದರೆಂಬುದಂತೂ ಸತ್ಯ. ಸಾಮಾಜಿಕ ವ್ಯವಸ್ಥೆಯನ್ನು ಪ್ರತಿಭಟಿಸುವುದಕ್ಕಾಗಿ ಯಜ್ಞೋಪವೀತವನ್ನು ಕಿತ್ತು ಹಾಕಿದ್ದರಿಂದ ಬಹಿಷ್ಕøತರಾಗಿ ಹುಟ್ಟೂರನ್ನು ಬಿಟ್ಟು ಅಕ್ಕ ನಾಗಮ್ಮನೊಡನೆ ಸಂಗಮ ಕ್ಷೇತ್ರಕ್ಕೆ ಹೋದರು. ಈ ವೇಳೆಗೆ ಆಕೆಗೆ ಮದುವೆಯಾಗಿದ್ದು ಅವಳ ಪತಿ ಶಿವಸ್ವಾಮಿ ಬಹುಶಃ ಸಂಗಮದವನೇ ಆಗಿದ್ದಂತೆ ತೋರುತ್ತದೆ. ಆ ಕಾಲದಲ್ಲಿ ಸಂಗಮ ಕ್ಷೇತ್ರ ಪ್ರಸಿದ್ಧ ವಿದ್ಯಾಕೇಂದ್ರವಾಗಿತ್ತು. ಅದರ ಸ್ಥಾನಪತಿಗಳಾದ ಜಾತವೇದ ಮುನಿ ಅಥವಾ ಈಶಾನ್ಯ ಗುರುಗಳು, ಸಂಗಮೇಶ್ವರ ಸ್ವಾಮಿಗಳೆಂದು ಪ್ರಸಿದ್ಧರಾಗಿದ್ದರು. ಅವರ ಸಮ್ಮುಖದಲ್ಲಿ ದೀಕ್ಷಾವಿಧಿಯೊಡನೆ ಇವರ ವಿದ್ಯಾಭ್ಯಾಸ ಹನ್ನೆರಡು ವರ್ಷ ನಡೆಯಿತು.

ಕೃಷ್ಣಾ ಮಲಾಪಹಾರಿ ನದಿಗಳ ಸಂಗಮದ ಆ ಸುಂದರ ಪರಿಸರದಲ್ಲಿ, ಹೃದಯದ ಭಾವನೆಗಳಿಗೆ ಅನುಭವದ ಶ್ರೀಮಂತಿಕೆ ಒಪ್ಪವೀಯಿತು. ಹರಿತವಾದ ಬುದ್ಧಿಗೆ ಸಾಣೆ ಹಿಡಿದಂತಾಯಿತು. ಕಳಚೂರ್ಯ ಬಿಜ್ಜಳನ ಬಳಿ ದಂಡಾಧೀಶನಾಗಿದ್ದ ಇವರ ಸೋದರಮಾವ ಬಲದೇವ ತನ್ನ ಒಬ್ಬಳೇ ಮಗಳು ಗಂಗಾಂಬಿಕೆಯನ್ನು ಇವರಿಗೆ ಮದುವೆ ಮಾಡಿಕೊಡಲು ಮುಂಬಂದರು. ಗುರುಗಳೇ ನಿಂತು ಈ ಮದುವೆ ಮಾಡಿಸಿ ನೂತನ ದಂಪತಿಗಳನ್ನು ಸಂಗಮದಿಂದ ಮಂಗಳವಾಡಿಗೆ ಹೋಗ ಹೇಳಿದರು. ಇವರ ಜೊತೆ ಶಿವಸ್ವಾಮಿ ನಾಗಮ್ಮರೂ ಹೊರಟರು.

ಮಂಗಳವಾಡಕ್ಕೆ ಬಂದಮೇಲೆ ಬಸವಣ್ಣ ಗಂಗಾಂಬಿಕೆಯ ಜೊತೆಗೆ ನೀಲಲೋಚನೆ ಅಥವಾ ನೀಲಾಂಬಿಕೆಯನ್ನೂ ಮದುವೆಯಾಗಬೇಕಾಯಿತು. ನೀಲಾಂಬಿಕೆ ಬಿಜ್ಜಳನ ಇನ್ನೊಬ್ಬ ದಂಡನಾಯಕ ಸಿದ್ಧರಸನ ಮಗಳು. ಚಿಕ್ಕಂದಿನಲ್ಲಿಯೆ ತಂದೆತಾಯಿಗಳನ್ನು ಕಳೆದುಕೊಂಡು ಬಿಜ್ಜಳನ ಆಶ್ರಯದಲ್ಲಿ ಆತನ ಸಾಕುತಂಗಿಯಾಗಿ ಬೆಳೆದವಳು.

ಬಿಜ್ಜಳನ ಭಂಡಾರದಲ್ಲಿ ಬಸವಣ್ಣನವರಿಗೆ ಒಂದು ಕೆಲಸವೂ ದೊರೆಯಿತು. ದುಡಿಯದೆ ತಿನ್ನುವ ಹಕ್ಕಿಲ್ಲವೆಂಬುದನ್ನು ನಿಶ್ಚಿತವಾಗಿ ನಂಬಿದ್ದ ಇವರು ರಾಜಾಸ್ಥಾನದಲ್ಲಿ ಕೆಲಸವನ್ನು ಒಪ್ಪಿಕೊಳ್ಳಲು ಹಿಂದೆ ಮುಂದೆ ನೋಡಲಿಲ್ಲ. ಮುಂದೆ ಸ್ವಲ್ಪಕಾಲದಲ್ಲಿಯೆ ರಾಜ್ಯ ಭಂಡಾರದ ಮಂತ್ರಿಯಾದ ಬಲದೇವರು ದೈವಾಧೀನರಾಗಲು ಅವರ ಸ್ಥಾನಕ್ಕೆ ಬಸವಣ್ಣನವರನ್ನೇ ನೇಮಕ ಮಾಡಲಾಯಿತು. ರಾಜ್ಯದ ಭಂಡಾರಿಯಾದ ಬಸವಣ್ಣ ಕ್ರಮೇಣ ಅಂತರಂಗದ ಸಾಧನೆಯಿಂದಾಗಿ ಭಕ್ತಿ ಭಂಡಾರಿಯೂ ಆದರು. ಅಲ್ಲದೆ ತನ್ನ ಆಧ್ಯಾತ್ಮಿಕ ದೃಷ್ಟಿಯ ಕ್ರಾಂತಿಕಾರಕ ಭಾವನೆಗಳಿಗೆ ಅನುಸಾರ ಸಾಮಾಜಿಕ ಕ್ರಾಂತಿಗೂ ಕೈ ಹಾಕಿದರು. ಬಹುಶಃ ಬಸವಣ್ಣನವರು ಮಂಗಳವಾಡಕ್ಕೆ ಬಂದ ಒಂದೆರಡು ವರ್ಷಗಳಲ್ಲಿಯೆ ಅಂದಿನ ರಾಜಕೀಯದಲ್ಲಿ ಬದಲಾವಣೆ ತಲೆದೋರಿತು. ಚಾಲುಕ್ಯ ಅರಸು ದುರ್ಬಲನಾಗಿದ್ದುದರಿಂದ ಸಾಮಂತ ಬಿಜ್ಜಳ ತಾನೇ ಚಕ್ರವರ್ತಿಯಾಗಿ ಮಂಗಳವಾಡದಿಂದ ಕಲ್ಯಾಣಕ್ಕೆ ಬರಬೇಕಾಯಿತು. ಆಗ ಬಸವಣ್ಣನವರು ಇಡೀ ರಾಜ್ಯದ ಮಹಾಭಂಡಾರಿಯಾದರು. ಬಸವಣ್ಣನವರ ಅಧಿಕಾರ ಕ್ಷೇತ್ರವೂ ಧಾರ್ಮಿಕ ಕ್ಷೇತ್ರವೂ ವ್ಯಾಪಕಗೊಂಡವು.

ಸುಮಾರು 12 ವರ್ಷಗಳ ಕಾಲ ಕಲ್ಯಾಣ ಬಸವಣ್ಣನವರ ಕಾರ್ಯಕ್ಷೇತ್ರವಾಗಿತ್ತು. ಈ ಅಲ್ಪಾವಧಿಯಲ್ಲಿ ಇವರು ಸಾಧಿಸಿದ ಪರಿಣಾಮ, ಜನಜೀವನದ ಮೇಲೆ ಬೀರಿದ ಪ್ರಭಾವ ಅದ್ವಿತೀಯವಾದದು. ಬಹುಶಃ ಹಿಂದೆ ಯಾವ ಧಾರ್ಮಿಕ ಪುರುಷರೂ ಪ್ರವಾದಿಗಳೂ ಈ ಮಾರ್ಗದಲ್ಲಿ ಇಂಥ ಸಾಧನೆಯನ್ನುಂಟುಮಾಡಿರಲಿಲ್ಲ. ಬಸವಣ್ಣನವರು ಇಡೀ ಯುಗವನ್ನು ಎಚ್ಚರಿಸಿದ ಯುಗಪ್ರವರ್ತಕ ಶಕ್ತಿಯಾಗಿ ಪರಿಣಮಿಸಿದರು. ಚುಂಬಕ ಗಾಳಿಯಂತೆ ಅಸಂಖ್ಯಾತ ಸಾಧಕರನ್ನೂ ಶರಣರನ್ನೂ ಸೆಳೆದು ಅವರೆಲ್ಲರನ್ನೂ ಅನುಭವ ಮಂಟಪದಲ್ಲಿ ಸಮಾವೇಶಗೊಳಿಸಿ ಅವರ ವಿಚಾರಮಥನದಿಂದ ಧರ್ಮದ ನವನೀತವನ್ನು ತೆಗೆದರು. ಅಲ್ಲಮಪ್ರಭುವಿನಂಥ ಮಹಾಮೇರು ಸದೃಶ ವ್ಯಕ್ರಿತ್ವವೂ ಬಸವಶಕ್ತಿಗೆ ಮಣಿದು ಕಲ್ಯಾಣದಲ್ಲಿ ಕೆಲವು ಕಾಲ ಅನುಭವಮಂಟಪವನ್ನು ನಿರ್ದೇಶಿಸಿತು.

ಬಸವಣ್ಣನವರ ಕ್ರಾಂತಿಕಾರಕ ಭಾವನೆಗಳು ವೈದಿಕ ಪರಂಪರೆಯನ್ನು ಕೆರಳಿಸಿದುವು. ಅವರನ್ನು ಪದಚ್ಯುತಗೊಳಿಸಲು ಆ ಪರಂಪರೆಯ ಅನುಯಾಯಿಗಳು ಹೊಂಚಿದರು. ಬಸವಣ್ಣನವರು ರಾಜ್ಯಭಂಡಾರದ ಹಣವನ್ನು ದುರ್ವಿನಿಯೋಗ ಮಾಡಿ ದಾಸೋಹ ನಡೆಸುತ್ತಿರುವನೆಂದು ದೂರಿ ಬಿಜ್ಜಳನಲ್ಲಿಗೆ ಇತರ ಅನೇಕ ಆರೋಪಗಳನ್ನು ಕೊಂಡೊಯ್ದರು. ಅವೆಲ್ಲವೂ ವ್ಯರ್ಥವಾದವು. ಆದರೆ ಅಸ್ಪøಶ್ಯರ ಹರಳಯ್ಯನ ಮಗನಿಗೂ ಬ್ರಾಹ್ಮಣರ ಮಧುವರಸನ ಮಗಳಿಗೂ ವಿವಾಹ ಮಾಡಿದಾಗ ಅದನ್ನು ಅಂದಿನ ಸಮಾಜ ಅರಗಿಸಿಕೊಳ್ಳಲಾರದೆ ಹೋಯಿತು. ವರ್ಣಸಂಕರವಾಯಿತೆಂದು ಸಂಪ್ರದಾಯಸ್ಥರು ಹುಯಿಲೆಬ್ಬಿಸಿದರು. ಇದರೊಡನೆ ರಾಜಕೀಯ ಪಿತೂರಿಯೂ ಸೇರಿ ಹರಳಯ್ಯ ಮಧುವರಸರಿಗೆ ಬಿಜ್ಜಳ ಮರಣದಂಡನೆ ವಿಧಿಸುವಂತಾಯಿತು. ಅದಾದ ಸ್ವಲ್ಪ ಕಾಲದಲ್ಲಿಯೇ ಬಿಜ್ಜಳನ ಕೊಲೆಯೂ ಆಯಿತು. ಆ ಅಪರಾಧವನ್ನು ಶರಣರ ಮೇಲೆ ಹಾಕುವ ಕುಟಿಲ ರಾಜಕೀಯವೂ ನಡೆಯಿತು. ಈ ಬೆಳವಣಿಗೆಗಳಿಂದ ಬೇಸರಗೊಂಡು ಮೊದಲೇ ಕಲ್ಯಾಣವನ್ನು ಬಿಟ್ಟಿದ್ದ ಬಸವಣ್ಣನವರು ಕೂಡಲಸಂಗಮ ಕ್ಷೇತ್ರಕ್ಕೆ ಹೋಗಿ ಕೂಡಲ ಸಂಗಮನಲ್ಲಿ ಐಕ್ಯರಾದರು. ಇದು ಸುಮಾರು 1167-68ರಲ್ಲಿ ಸಂಭವಿಸಿರಬೇಕೆಂದು ವಿದ್ವಾಂಸರು ನಿರ್ಧರಿಸಿದ್ದಾರೆ.

ಇದು ಒಂದು ರೀತಿಯಲ್ಲಿ ಬಸವಣ್ಣನವರ ಜೀವನ ಕಥೆಯ ರೂಪರೇಷೆ. ಲೌಕಿಕದ ಅಧಿಕಾರದಲ್ಲಿದ್ದೂ ಆಂತರಿಕವಾಗಿ ಮಹಾ ಅನುಭಾವಿಯಾದುದು ಇವರ ಅಂತರಂಗದ ಕಥೆ. ಇವರ ವಚನಗಳಲ್ಲಿ ಅದರ ಉಜ್ಜ್ವಲ ಚಿತ್ರ ಮೂಡಿದೆ. ತ್ರಿವಿಧ ದಾಸೋಹದಿಂದ ಷಟ್‍ಸ್ಥಲದ ನಿಚ್ಚಣಿಕೆ ಏರಿ ಲಿಂಗಾಂಗ ಸಾಮರಸ್ಯದ ನಿಲವಿಗೇರಿದುದನ್ನು ಅಲ್ಲಿ ಕಾಣಬಹುದು. ಅಂತೆಯೇ ಇವರ ಸಾಮಾಜಿಕ ಮತ್ತು ಧಾರ್ಮಿಕ ವಿಚಾರಧಾರೆಗಳು ಕಾಲದೇಶಗಳ ಹಂಗು ಹರಿದು ಸರ್ವತ್ರ ಮಾನ್ಯವಾಗಿ ನಿಲ್ಲಬಲ್ಲ ಅಸಾಧಾರಣತೆಯನ್ನೂ ಜೀವಂತಿಕೆಯನ್ನೂ ಪಡೆದಿವೆ.

ಇಹಲೋಕದ ಜೀವನವನ್ನು ಸಾಧನೆಯ ಮಾರ್ಗಕ್ಕೆ ಅಳವಡಿಸಿಕೊಳ್ಳುವುದೇ ಬಸವಣ್ಣನವರು ಬೋಧಿಸಿದ ಮುಖ್ಯ ತತ್ತ್ವ. ಅದಕ್ಕೆ ಜಾತಿ, ಮತ, ಉದ್ಯೋಗ, ವಯಸ್ಸು ಯಾವುದೂ ಅಡ್ಡಿಯಾಗಬಾರದು. ಅಂಥ ನೈತಿಕ ಜೀವನವನ್ನೂ ಸಾಮಾಜಿಕ ಸಮತೆಯನ್ನೂ ಸಾಧಿಸುವ ಸಾಹಸ ಅವರದು. ಕೊಲ್ಲುವವನೇ ಮಾದಿಗ, ಹೊಲಸು ತಿಂಬುವನೆ ಹೊಲೆಯ. ಕುಲವೇನೋ ಆವಂದಿರ ಕುಲವೇನೋ? ಸಕಲ ಜೀವಾತ್ಮರಿಗೆ ಲೇಸನೇ ಬಯಸುವ ನಮ್ಮ ಕೂಡಲ ಸಂಗನ ಶರಣರೆಲ್ಲಾ ಕುಲಜರು-ಎಂದು ಹೇಳಿದುದು ಮಾತ್ರವಲ್ಲ ಅದನ್ನು ಆಚರಣೆಗೂ ತಂದರು. ಹರಳಯ್ಯ, ಮಾದಾರ ಧೂಳಯ್ಯ, ಡೋಹರ ಕಕ್ಕಯ್ಯ, ಶಿವನಾಗಮಯ್ಯ ಮೊದಲಾದ ಅಸ್ಪಶ್ಯರು ಬಸವ ತತ್ತ್ವದ ಆಶ್ರಯ ಪಡೆದು ಶರಣರಾದರು, ಅನುಭಾವಿಗಳಾದರು, ವಚನಕಾರರಾದರು; ಬಸವಣ್ಣನವರ ಮಹದಾಸೆಯ ಸಾಕಾರ ಮೂರ್ತಿಗಳಾದರು.

ಬಸವಣ್ಣನವರ ಕಾಯಕದ ಕಲ್ಪನೆ ಇದೆಲ್ಲವನ್ನೂ ಸಾಧಿಸುವ ಸಮಗ್ರ ಜೀವನ ದರ್ಶನವನ್ನು ಒಳಗೊಳ್ಳುತ್ತದೆ. ವ್ಯಕ್ತಿ ಕೈಗೊಂಡ ಉದ್ಯೋಗ ಸಮಾಜದ ಆವಶ್ಯಕತೆಗಳನ್ನು ಪೂರೈಸುವಂತಿರಬೇಕು. ಅದರ ಫಲ ತನಗೆ ಮಾತ್ರವೇ ಅಲ್ಲದೆ ಸಮಾಜಕ್ಕೂ ದೊರೆಯಬೇಕು. ಆಗ ಸ್ವಾರ್ಥ ಅಳಿದು ವಿಶ್ವಶಕ್ತಿ ಅಂತರಂಗದೊಳಗೆ ಇಳಿದು ಬರಲು ಸಹಾಯಕವಾಗುತ್ತದೆ. ಈ ಕಾಯಕದಲ್ಲಿ ಮೇಲು ಕೀಳುಗಳಿಲ್ಲ. ಪ್ರತಿಯೊಬ್ಬನೂ ತನ್ನ ಉದ್ಯೋಗ ಮಾಡಲೇಬೇಕು. ಅಲ್ಲದೆ ಈ ಕಾಯಕ ತತ್ತ್ವದ ಇನ್ನೊಂದು ಅಂಶವೆಂದರೆ ವ್ಯಕ್ತಿ ಅಂದಂದಿನ ಕಾಯಕ ಅಂದಂದು ಮಾಡಿ ಶುದ್ಧನಾಗಬೇಕು. ಅಂದರೆ ತನಗೆ ಅಗತ್ಯವಾದುದಕ್ಕಿಂತ ಹೆಚ್ಚಾಗಿ ಶೇಖರಿಸಿಟ್ಟುಕೊಳ್ಳಬಾರದು. ಗಾಂಧೀಜಿ ಒತ್ತಿ ಹೇಳಿದ ಅಸಂಗ್ರಹ ತತ್ತ್ವ ಇಲ್ಲಿ ಕಂಡುಬರುತ್ತದೆ. ಇದು ಧಾರ್ಮಿಕ ಸಮತೆಗೂ ತಳಹದಿಯಾಗಿ ಸ್ತ್ರೀಪುರುಷರೆಂಬ ಭೇದವನ್ನು ಅಳಿಸಿ ಹಾಕಿತು. ಅಕ್ಕಮಹಾದೇವಿ, ಮಹಾದೇವಮ್ಮ, ಲಕ್ಕಮ್ಮ, ಲಿಂಗಮ್ಮ, ಗಂಗಾಬಿಕೆ, ನೀಲಾಂಬಿಕೆ ಈ ಮೊದಲಾದ ಅನೇಕ ಶರಣೆಯರು ಇದಕ್ಕೆ ಉಜ್ಜ್ವಲ ಸಾಕ್ಷಿಯಾಗಿದ್ದಾರೆ.

ವ್ಯಕ್ತಿ ಸ್ವತಃ ಪೂಜಾ ಕೈಂಕರ್ಯ ಸಲ್ಲಿಸಬೇಕೆಂಬುದು ಇವರ ಧಾರ್ಮಿಕ ಆಚರಣೆಯ ಇನ್ನೊಂದು ಮುಖ್ಯ ಅಂಶ. ತನ್ನ ಉದ್ಧಾರವನ್ನು ತಾನೇ ಕಂಡುಕೊಳ್ಳಬೇಕು. ಒಬ್ಬನ ಪರವಾಗಿ ಇನ್ನೊಬ್ಬ ಪೂಜೆ ಸಲ್ಲಿಸುವುದು ಧಾರ್ಮಿಕ ಶೋಷಣೆಗೆ ಕಾರಣವಾಗುತ್ತದೆ. ತಾನುಂಬ ಊಟವನು, ತನ್ನಾಶ್ರಯದ ರತಿ ಸುಖವನು ಬೇರೆ ಮತ್ತೊಬ್ಬರ ಕೈಯಲ್ಲಿ ಮಡಿಸಬಹುದೇ? ಎಂಬ ಸಾದೃಶ್ಯದಿಂದ ಬಸವಣ್ಣನವರು ಅದನ್ನು ಕಟುವಾಗಿ ನಿರಾಕರಿಸಿದರು. ಹಾಗೆಯೇ ಪ್ರಾಣಿವಧೆಗೆ ಕಾರಣವಾದ ಯಜ್ಞಯಾಗಾದಿಗಳನ್ನೂ ಕರ್ಮವಾದವನ್ನೂ ಅಂಧಶ್ರದ್ಧೆಯನ್ನೂ ಖಂಡಿಸಿದರು. ಒಟ್ಟಿನಲ್ಲಿ ಬಸವಣ್ಣನವರ ವೈಚಾರಿಕ ದೃಷ್ಟಿ ಬೌದ್ಧಿಕ ವಿಕಾಸಕ್ಕೆ ಧಾರ್ಮಿಕ ಸ್ವಾತಂತ್ರ್ಯಕ್ಕೆ ಮತ್ತು ಆಧ್ಯಾತ್ಮಿಕ ಪ್ರಗತಿಗೆ ತಳಹದಿಯಾಯಿತು. ಕನ್ನಡ ಭಾಷೆ ಇವರ ವಚನಗಳಿಂದ ಅಪೂರ್ವವಾದ ಒಂದು ಶಕ್ತಿಯನ್ನೂ ಶ್ರೀಮಂತಿಕೆಯನ್ನೂ ಪಡೆಯಿತು. ಮಾತು ಮಾಣಿಕ್ಯದ ದೀಪ್ತಿಯಾಯಿತು, ನುಡಿದುದೇ ಧರ್ಮವಾಯಿತು. ಇವರ ವ್ಯಕ್ತಿತ್ವ ಕಾಲದೇಶಗಳ ಪರಿಮಿತಿಯನ್ನು ಮೀರಿ ಮಾನವ ಜನಾಂಗ ಬೆಳೆದಂತೆ ತಾನು ಬೆಳೆಯುವ ಯುಗಪ್ರವರ್ತಕ ಶಕ್ತಿಯಾಗಿ ಪರಿಣಮಿಸಿದೆ. (ಎಚ್.ಟಿ.)

ಬಸವಣ್ಣನವರ ಶಕ್ತಿಯ ಮೂಲ ಇವರ ಅಪಾರ ಭಕ್ತಿಭಾವ, ಕೂಡಲ ಸಂಗಮ ದೇವನ ಅನನ್ಯ ಶರಣಭಾವ, ಜಂಗಮಸೇವೆಯೇ ಲಿಂಗಸೇವೆ ಎಂಬ ದಿವ್ಯಭಾವ. ಇವರು ಜ್ಞಾನವೈರಾಗ್ಯಗಳ ಮಹತ್ತ್ವವನ್ನು ಅಲ್ಲಗಳೆಯದಿದ್ದರೂ ಭಕ್ತಿಗೆ ಪ್ರಾಧಾನ್ಯ ನೀಡಿದರು. ಶಿವಾನುಭವ ಮಂಟಪ ಇದಕ್ಕೆ ಉಜ್ಜ್ವಲ ನಿದರ್ಶನ. ಅದರ ಖ್ಯಾತಿಯನ್ನು ತಿಳಿದ ಎಷ್ಟೋ ಮಂದಿ ಶಿವಶರಣರು ನಾಡಿನ ಒಳಗಿನಿಂದಲ್ಲದೆ ನಾಡಿನ ಹೊರಗಿನಿಂದಲೂ ಅಲ್ಲಿ ಸೇರಿದರು. ಅದು ಆಚಾರ, ವಿಚಾರ ಎರಡಕ್ಕೂ ಕೇಂದ್ರಸ್ಥಾನವಾಯಿತು. ಚೆನ್ನಬಸವ, ವೈರಾಗ್ಯನಿಧಿ ಅಲ್ಲಮಪ್ರಭು, ಅಕ್ಕಮಹಾದೇವಿ, ಸಿದ್ಧರಾಮ ಮೊದಲಾದ ಜೀವಜ್ಯೋತಿಗಳು ಅಲ್ಲಿ ಕಂಗೊಳಿಸಿದರು. ಸಹಸ್ರಾರು ಶಿವಶರಣರು ವರ್ಣ ಭೇದವಿಲ್ಲದೆ ಮೇಲು ಕೀಳೆಂಬ ಭಾವನೆ ತಾಳದೆ ಸಮಾನತೆಯಿಂದ ಆಧ್ಯಾತ್ಮಿಕ ಸಾಧನೆಯಲ್ಲಿ ತೊಡಗಿದರು. "ಕಲ್ಯಾಣವೆಂಬ ಪ್ರಣತೆಯಲ್ಲಿ ಭಕ್ತಿರಸವೆಂಬ ತೈಲವೆರೆದು ಆಚಾರವೆಂಬ ಬತ್ತಿಗೆ ಬಸವನೆಂಬ ಜ್ಯೋತಿಯ ಮುಟ್ಟಿಸಲು ತೊಳಗಿ ಬೆಳಗುತ್ತಿದ್ದಿತಾ ಶಿವನ ಪ್ರಕಾಶ. ಆ ಬೆಳಕಿನೊಳಗೆ ಒಪ್ಪುತ್ತಿದ್ದರಯ್ಯಾ ಅಸಂಖ್ಯ ಶಿವಶರಣರು. ಶಿವಭಕ್ತನಿರ್ದಕ್ಷೇತ್ರ ಶಿವಭಕ್ತನಿರ್ದದೇಶ ಪಾವನವೆಂಬುದು ಹುಸಿಯೇ ಗುಹೇಶ್ವರಾ" ಎಂಬ ಅಲ್ಲಮನ ವಚನ ಅನುಭವಮಂಟಪದಲ್ಲಿ ಬಸವಣ್ಣನವರು ವಹಿಸಿದ ಪಾತ್ರವೇನೆಂಬುದನ್ನು ತಿಳಿಸುತ್ತದೆ.

ಬಸವಣ್ಣನವರ ಬೋಧೆ ಅವರ ನೂರಾರು ವಚನಗಳಲ್ಲಿ ವ್ಯಕ್ತವಾಗಿದೆ. ಸಾಮಾನ್ಯರಿಗೂ ಅರ್ಥವಾಗುವ ವಚನ ಸಾಹಿತ್ಯ ಪ್ರವಾಹ ಆ ಕಾಲದಲ್ಲಿ ತುಂಬಿ ಹರಿಯಿತು. ಈ ವಚನಗಳು ಜಿಜ್ಞಾಸುಗಳಿಗೆ ಮುಕ್ಷುಗಳಿಗೆ ಮತ್ತು ಸಾಹಿತ್ಯೋಪಾಸಕರಿಗೆ ದಾರಿದೀಪಗಳಂತಿವೆ. ನಡೆ ನುಡಿಗಳ ಸಾಮರಸ್ಯ ಸೂಚಿಸುವ ಈ ವಚನ ಕಾಲವನ್ನು ಮೆಟ್ಟಿನಿಲ್ಲುವಂಥದು.

ನುಡಿದರೆ ಮುತ್ತಿನ ಹಾರದಂತಿರಬೇಕು ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು ನುಡಿದರೆ ಸ್ಫಟಿಕದ ಸಲಾಕೆಯಂತಿರಬೇಕು ನುಡಿದರೆ ಲಿಂಗಮೆಚ್ಚಿ ಅಹುದೆನಬೇಕು ನುಡಿಯೊಳಗೆ ನಡೆಯದಿದ್ದರೆ ಕೂಡಲ

ಸಂಗಮನೆಂತೊಲಿವನಯ್ಯ.

ಇವರ ಮಹಾನುಭಾವರ ಪಂಕ್ತಿಯಲ್ಲಿ ನಿಲ್ಲತಕ್ಕವರು. ಇವರ ಭಕ್ತಿ ಬತ್ತಲಾರದ ತೊರೆ. ಮಾನವನ ಶ್ರೇಯಸ್ಸಿಗೂ ಪ್ರೇಯಸ್ಸಿಗೂ ಮೇಲ್ಪಂಕ್ತಿಯಾಗಿ ನಿಂತ ಹಿರಿಯ ಚೇತನ ಇವರದು. (ಜಿ.ವಿ.ಎನ್.)

ಬಸವಣ್ಣನವರ ಸುಮಾರು 1393 ವಚನಗಳು ಸಿಕ್ಕಿವೆ. ಇವರ ಕೆಳಗಿನ ಜನರನ್ನು ಮಾತ್ರ ಮೇಲಕ್ಕೆತ್ತಲಿಲ್ಲ ಕನ್ನಡ ಭಾಷೆಯನ್ನೂ ಉದ್ಧರಿಸಿದರು. ಒಂದು ಭಾಷೆಗೆ ಏನೆಲ್ಲ ಸಾಧ್ಯತೆಗಳಿರಬಹುದು ಎಂಬುದನ್ನು ತೋರಿಸಿದರು. ಕವಿ ಮನೋಭಾವದಿಂದ ಕೂಡಿದ ಇವರ ವಚನಗಳು ಉಪಮೆ ರೂಪಕಾಲಂಕಾರಗಳಿಂದ ಕೂಡಿ ಕಾವ್ಯ ಸೌಂದರ್ಯದಿಂದ ಕಂಗೊಳಿಸುತ್ತಿವೆ.

ಇವರು ಫಟ್‍ಸ್ಥಲ ವಚನ, ಕಾಲಜ್ಞಾನವಚನ, ಮಂತ್ರಗೋಪ್ಯ, ಶಿಖಾರತ್ನ ವಚನ ಎಂಬ ಗ್ರಂಥಗಳನ್ನು ಬರೆದಿದ್ದಾರೆ. ಇವರನ್ನು ಕುರಿತಂತೆ ಕನ್ನಡ, ತೆಲುಗು, ಸಂಸ್ಕøತ, ತಮಿಳು, ಮರಾಠಿ ಮತ್ತು ಹಿಂದಿ ಭಾಷೆಗಳಲ್ಲಿ ಪುರಾಣಗಳು ರಚನೆಯಾಗಿವೆ. ಬಾಗೇವಾಡಿ, ಕಪ್ಪಡಿಸಂಗಮ, ಕಲ್ಯಾಣ ಪಟ್ಟಣಗಳಲ್ಲಿ ಇವರ ಸ್ಮಾರಕಗಳಿವೆ. ಬೆಳಗಾಂ ಜಿಲ್ಲೆಯ ಅರ್ಜುನವಾಡದ ಶಿಲಾಶಾಸನದಲ್ಲಿ ಇವರ ಹೆಸರು ನಿರೂಪಿತವಾಗಿದೆ. (ಬಿ.ಎಸ್.)

ವಚನಗಳು : ವೀರಶೈವಧರ್ಮದ ಇತಿಹಾಸದಲ್ಲಿ ಹೇಗೊ ಹಾಗೆ ವಚನ ಸಾಹಿತ್ಯದ ಇತಿಹಾಸದಲ್ಲಿ ಕೂಡ ಬಸವಣ್ಣನವರದು ಪ್ರಮುಖ ಪಾತ್ರ. ಇವರ ವಚನಗಳು ಹಿಂದಿನ ಹಾಗೂ ಸಮಕಾಲೀನರ ವಚನಗಳಿಗಿಂತ ವಿಶಿಷ್ಟವೂ ಆಕರ್ಷಕವೂ ಸುಲಭಗ್ರಾಹ್ಯವೂ ಆಗಿವೆ. ಇವರು ಒಟ್ಟು ಎಷ್ಟು ವಚನಗಳನ್ನು ರಚಿಸಿದ್ದಾರೆಂದು ನಿಖರವಾಗಿ ಹೇಳುವುದು ಸಾಧ್ಯವಿಲ್ಲ. ಸದ್ಯದಲ್ಲಿ 1393 ವಚನಗಳನ್ನು ಇವರವೆಂದು ಹೇಳಿ ಪ್ರಕಟಿಸಲಾಗಿದೆ. ಇವೆಲ್ಲ ಕೂಡಲಸಂಗಮಾಂಕಿತದಿಂದ ಕೂಡಿವೆ. ಚೆನ್ನಬಸವಣ್ಣನ ವಚನಗಳಲ್ಲಿಯಂಥ ದೀರ್ಘತೆಯಾಗಲಿ ದಾಸಿಮಯ್ಯನ ವಚನಗಳಲ್ಲಿಯಂಥ ಹ್ರಸ್ವತೆಯಾಗಲಿ ಇವುಗಳಲ್ಲಿ ಕಂಡುಬರುವುದಿಲ್ಲ ಸುಮಾರು ನಾಲ್ಕೆಂಟು ಸಾಲುಗಳವರೆಗೆ ಹರಿಯುವುದೇ ಹೆಚ್ಚು.

ಬಸವಣ್ಣ ಕೇವಲ ಸಾಧಕಜೀವಿ ಮಾತ್ರವೇ ಅಲ್ಲ ಸಮಾಜ ಸುಧಾರಕರೂ ಹೌದು. ತಮ್ಮೊಡನೆ ಇತರರನ್ನು ಮುಕ್ತಿಪಥದಲ್ಲಿ ಕೊಂಡೊಯ್ಯುವ ನೇತಾರರೂ ಆಗಿದ್ದರು. ಇದರಿಂದಾಗಿ ಅವರ ವಚನಗಳಲ್ಲಿ ಸಾಧನ ಮಾರ್ಗದ ವಿವರಣೆಯುಂಟು; ಧಾರ್ಮಿಕ ಆಚಾರ ವಿಚಾರಗಳ ನಿರೂಪಣೆಯುಂಟು; ಲೋಕದ ಅಂಕುಡೊಂಕುಗಳನ್ನು ಕುರಿತ ಕಟು ಟೀಕೆಯುಂಟು; ನೀತಿಬೋಧನೆಯುಂಟು; ಮಿಗಿಲಾಗಿ ಸ್ವವಿಮರ್ಶೆಯೂ ಉಂಟು. ತಂದೆ ನೀನು ತಾಯಿ ನೀನು ಬಂಧು ನೀನು ಬಳಗ ನೀನು ಎನಗೆ ನೀನಲ್ಲದೆ ಮತ್ತಾರೂ ಇಲ್ಲವಯ್ಯ ಎಂದು ಅನ್ಯಥಾ ಶರಣಂ ನಾಸ್ತಿ ಭಾವ ವ್ಯಕ್ತಪಡಿಸುತ್ತಾರೆ. ಎನಗಿಂತ ಕಿರಿಯರಿಲ್ಲ, ಶಿವಭಕ್ತರಿಗಿಂತ ಹಿರಿಯರಿಲ್ಲ, ಎಂಬ ವಿನೀತತೆ ಪ್ರದರ್ಶಿಸುತ್ತಾರೆ. `ಎನ್ನವರೊಲಿದು ಹೊನ್ನ ಶೂಲದಲಿಕ್ಕಿದರೆನ್ನ ಹೊಗಳಿ ..

.. ... ನೀನೆನಗೊಳ್ಳಿದನಾದರೆ ಎನ್ನ ಹೊಗಳತೆಗಡ್ಡಬಾರಾ ಧರ್ಮೀ ಎಂದು ತಮ್ಮ ಸಂಕಟವನ್ನು ತೋಡಿಕೊಳ್ಳುತ್ತಾರೆ. `ಎನ್ನ ಕಾಯವ ದಂಡಿಗೆಯ ಮಾಡಯ್ಯ, ಎನ್ನ ಶಿರವ ಸೋರೆಯ ಮಾಡಯ್ಯ. ಎನ್ನ ನರವ ತಂತಿಯ ಮಾಡಯ್ಯ. ಎನ್ನ ಬೆರಳ ಕಡ್ಡಿಯ ಮಾಡಯ್ಯ, ಮೂವತ್ತೆರಡು ರಾಗವ ಹಾಡಯ್ಯ ಎನ್ನ ಉರದಲೊತ್ತಿ ನಿನ್ನ ಜಯಗಾನವಂ ಬಾರಿಸು ಎಂದು ಪ್ರಾರ್ಥಿಸುತ್ತಾರೆ. ಇಲ್ಲೆಲ್ಲ ತಮ್ಮ ಮನಸ್ಸನ್ನು ಪದರ ಪದರವಾಗಿ ಬಿಚ್ಚಿಡುವುದರ ಮೂಲಕ ಪರೋಕ್ಷವಾಗಿ ಸಾಧಕನ ವಿವಿಧ ಗುಣಗಳನ್ನು ನಿರೂಪಿಸುತ್ತ ಹೋಗಿರುವುದನ್ನು ಗಮನಿಸಬಹುದು. ಸಾಧಕ ಪರಮಾತ್ಮನೇ ಸರ್ವಸ್ವವೆಂದು ತಿಳಿಯಬೇಕು; ಅಹಂಕಾರ ತ್ಯಜಿಸಿ, ತಾನು ಎಲ್ಲರಿಗಿಂತ ಕಿರಿಯ ಎಂಬ ಭಾವ ತಳೆಯಬೇಕು; ಹೊಗಳಿಕೆಗೆ ಉಬ್ಬುವುದು ಸಲ್ಲದು; ಪರಮಾತ್ಮನಿಗೆ ಸರ್ವಸ್ವವನ್ನೂ ಅರ್ಪಿಸಬೇಕು-ಎಂಬ ಹಲವಾರು ತತ್ತ್ವಗಳು ಈ ವಚನಗಳಲ್ಲಿ ವ್ಯಕ್ತವಾಗಿವೆ. ಅಲ್ಲದೆ ನೇರವಾಗಿ ಬೋಧಿಸುವ ವಚನಗಳೂ ಉಂಟು. "ಆರು ಮುನಿದು ನಮ್ಮನೇನ ಮಾಡುವರು? ಊರು ಮುನಿದು ಎಮ್ಮನೆಂತು ಮಾಡುವರು? ನಮ್ಮ ಕುನ್ನಿಗೆ ಕೂಸು ಕೊಡಬೇಡ. ನಮ್ಮ ಸೊಣಗಂಗೆ ತಳಿಗೆಯಲಿಕ್ಕಬೇಡ, ಆನೆಯ ಮೇಲೆ ಹೋಹನ ಶ್ವಾನ ಕಚ್ಚಬಲ್ಲುದೆ? " ಇಲ್ಲಿ ಅಪಾರ ದಿಟ್ಟತನ ಪ್ರದರ್ಶಿಸಿ ಲೋಕದ ಹಂಗನ್ನು ತಿರಸ್ಕರಿಸುತ್ತಾರೆ. ನಾಳೆ ಬಪ್ಪುದು ನಮಗಿಂದೇ ಬರಲಿ, ಇಂದು ಒಪ್ಪುದು ನಮಗೀಗಲೆ ಬರಲಿ ಇದಕಾರಂಜುವರು ಇದಕಾರಳುವರು? ಜಾತಸ್ಯ ಮರಣಂ ಧ್ರುವಂ" ಎಂದು ಹೇಳಿ ಯಾವುದಕ್ಕೂ ಜಗ್ಗದೆ ಮುನ್ನುಗ್ಗುವ ಕೆಚ್ಚೆದೆ ಪ್ರದರ್ಶಿಸುತ್ತಾರೆ. ಲೋಕದ ಡೊಂಕು ತಿದ್ದುವಲ್ಲಿಯಂತೂ ಈ ಕೆಚ್ಚು ಬಹಳವಾಗಿ ಕಂಡುಬರುತ್ತವೆ. `ನೀರ ಕಂಡಲ್ಲಿ ಮುಳುಗುವರಯ್ಯ, ಮರನ ಕಂಡಲ್ಲಿ ಸುತ್ತುವರಯ್ಯ, ಬತ್ತುವ ಜಲವ, ಒಣಗುವ ಮರನ ಮೆಚ್ಚಿದವರು ನಿಮ್ಮನೆತ್ತ ಬಲ್ಲರು, 'ಮಡಕೆ ದೈವ ಮೊ¾ ದೈವ ಬೀದಿಯ ಕಲ್ಲು ದೈವ ಹಣಿಗೆ ದೈವ ಬಿಲ್ಲ ನಾರಿ ದೈವ ಕಾಣಿರೊ ಕೊಳಗ ದೈವ ಗಿಣ್ಣಿಲು ದೈವ ಕಾಣಿರೊ ದೈವ ದೈವವೆಂದು ಕಾಲಿಡಲಿಂಬಿಲ್ಲ ದೈವನೊಬ್ಬನೆ-'ಉಳ್ಳವರು ಶಿವಾಲಯ ಮಾಡುವರು, ನಾನೇನು ಮಾಡುವೆ? ಬಡವನಯ್ಯಾ ಎನ್ನ ಕಾಲೇ ಕಂಬ, ದೇಹವೇ ದೇಗುಲ, ಶಿರವೇ ಹೊನ್ನ ಕಳಸವಯ್ಯ........ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ ಎಂಬೀ ವಚನಗಳಲ್ಲಿ ಡಾಂಭಿಕ ಆಚಾರ ವಿಚಾರಗಳನ್ನು ನಿರ್ಭಯವಾಗಿ ಖಂಡಿಸುವುದನ್ನು ಕಾಣಬಹುದು. `ವಿಪ್ರ ಮೊದಲು ಅಂತ್ಯಜ ಕಡೆಯಾಗಿ ಶಿವಭಕ್ತರಾದವರೆಲ್ಲರನ್ನು ಒಂದೇ ಎಂದು ನಂಬುದೆನ್ನ ಮನವು ಎಂದು ಹೇಳಿ ಜಾತಿ ಪರಿಗಣನೆಯ ಬುಡಕ್ಕೆ ಕೊಡಲಿಯೇಟು ಹಾಕಿ ಸಮಾನತೆ ಸಾರುವುದನ್ನು ಕಾಣಬಹುದು.

ಬಸವಣ್ಣನವರ ವಚನಗಳಲ್ಲಿ ವಿಶೇಷವಾಗಿ ಕಂಡುಬರುವ ಮತ್ತೊಂದು ಪ್ರಧಾನ ಅಂಶ ಭಕ್ತಿಪ್ರತಿಪಾದನೆ. `ಭಕ್ತಿಭಂಡಾರಿ' ಎಂಬ ವಿಶೇಷಣಕ್ಕೆ ಇವರ ವಚನಗಳು ಸಮರ್ಥವಾಗಿ ಪೋಷಣೆ ನೀಡುತ್ತವೆ. ನಾಮಸಂಕೀರ್ತನೆಯ ಹಿರಿಮೆ, ಸರ್ವಸಮರ್ಪಣೆಯ ಭಾವ, ಸತಿಪತಿ ಭಾವ--ಹೀಗೆ ಭಕ್ತಿಯ ಆಚರಣೆಯ ವಿವಿಧ ಮುಖಗಳನ್ನು ಅವುಗಳಲ್ಲಿ ಕಾಣುತ್ತೇವೆ. ಅವುಗಳಲ್ಲಿ ಭಾವದ ತೀವ್ರತೆಯಿದೆ, ಆಳವಾದ ಅನುಭವದ ಪ್ರತಿಫಲನವಿದೆ; ಆತ್ಮೀಯವಾದ ಧಾಟಿಯಿದೆ. `ಹೊನ್ನ ಹಾವಿಗೆಯ ಮೆಟ್ಟಿದವನ, ಮಿಡಿಯ ಮುಟ್ಟಿದ ಕೆಂಜೆಡೆಯವನ, ಮೈಯಲ್ಲಿ ವಿಭೂತಿಯ ಧರಿಸಿದವನ, ಕರದಲ್ಲಿ ಕಪಾಲವ ಹಿಡಿದವನ, ಅರ್ಧನಾರೀಶ್ವರನಾದವನ ಬಾಣದ ಮನೆಯ ಬಾಗಿಲ ಕಾಯ್ದವನ, ನಂಬಿಗೆ ಕುಂಟಿಣಿಯಾದವನ, ಚೋಳಂಗೆ ಹೊನ್ನ, ಮಳೆಯ ಕರೆದವನ, ಎನ್ನ ಮನಕ್ಕೆ ಬಂದವನ, ಸದ್ಭಕ್ತರ ಹೃದಯದಲ್ಲಿಪ್ಪವನ ಮಾಡುವ ಪೂಜೆಯಲೊಪ್ಪುವನ, ಕಂಡೆನೆಂದು ಪರಮಾತ್ಮನ ಗುಣ ಸ್ವರೂಪಗಳನ್ನು ವರ್ಣಿಸುತ್ತ ಅವನನ್ನು ಒಂದೆಡೆ ಸಾಕಾರವಾಗಿ ಕಾಣುತ್ತಾರೆ. ಮತ್ತೊಂದೆಡೆ `ಉದಕದೊಳಗೆ ಬೈಚಿಟ್ಟ ಬಯಕೆಯ ಕಿಚ್ಚಿನಂತಿದ್ದಿತ್ತು? ಶಶಿಯೊಳಗಣ ರಸದ ರುಚಿಯಂತೆ ಇದ್ದಿತ್ತು ನೆನೆಯೊಳಗಣ ಪರಿಮಳದಂತೆ ಇದ್ದಿತ್ತು ಕೂಡಲಸಂಗಮ ದೇವರ ನಿಲವು ಕನ್ನೆಯ ಸ್ನೇಹದಂತಿದ್ದಿತ್ತು ಎಂದು ತಮ್ಮ ದರ್ಶನಾನುಭವವನ್ನು ವರ್ಣಿಸುತ್ತಾರೆ.

ಇವರು ವಚನಗಳಲ್ಲಿ ವಿಷಯಗಳನ್ನು ಇಡುಕಿರಿದು ತುಂಬಿದ್ದರೂ ಅವನ್ನು ನಿರೂಪಿಸುವ ರೀತಿ ಮಾತ್ರ ಸರಳವೂ ಸುಲಭಗ್ರಾಹ್ಯವೂ ಆಗಿದೆ. ಸ್ಪಷ್ಟತೆ, ನಿಖರತೆ, ಭಾಷೆಯ ಹಿತಮಿತವಾದ ಬಳಕೆ ಇವೆಲ್ಲ ಇಲ್ಲಿ ಮೈಗೂಡಿವೆ. `ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ ಮುನಿಯಬೇಡ ಅನ್ಯರಿಗೆ ಅಸಹ್ಯಪಡಬೇಡ, ಇದೇ ಅಂತರಂಗಶುದ್ಧಿ, ಇದೇ ಬಹಿರಂಗಶುದ್ಧಿ, ಇದೇ ನಮ್ಮ ಕೂಡಲ ಸಂಗಮದೇವನನೊಲಿಸುವ ಪರಿ' ಎಂಬ ವಚನ ಇದಕ್ಕೆ ಉತ್ತಮ ನಿದರ್ಶನ. ಎಂಥ ಗಹನ ವಿಚಾರವನ್ನಾಗಲೀ ಇವರು ಅಷ್ಟೇ ಸ್ಪಷ್ಟವಾಗಿ ಲೀಲಾಜಾಲವಾಗಿ ಹೇಳಬಲ್ಲರು. `ಏಕಂ ಸದ್ವಿಪ್ರಾಃಬಹುಧಾ ವದಂತಿ' ಎಂಬುದನ್ನು 'ದೇವನೊಬ್ಬ ನಾಮ ಹಲವು ಎಂದು ನಿರೂಪಿಸುವಲ್ಲಿಯೂ `ಈಶಾವಾಸ್ಯಮಿದಂ ಸರ್ವಂ ಯತ್ಕಿಂಚ ಜಗತ್ಯಾಂ ಜಗತ್ ಎಂಬುದನ್ನು `ಎತ್ತೆತ್ತ ನೋಡಿದಡತ್ತತ್ತ ನೀನೇ ದೇವಾ, ಸಕಲ ವಿಸ್ತಾರದ ರೂಹು ನೀನೇ ದೇವಾ, ವಿಶ್ವತೋ ಬಾಹು ನೀನೇ ದೇವಾ, ವಿಶ್ವತೋ ಚಕ್ಷು ನೀನೇ ದೇವಾ, ವಿಶ್ವತೋ ಮುಖ ನೀನೇ ದೇವಾ, ವಿಶ್ವತೋ ಪಾದ ನೀನೇ ದೇವಾ" ಎಂಬುದಾಗಿ ವಿಶದಪಡಿಸುವಲ್ಲಿಯೂ ಈ ಅಂಶ ಗಮನಿಸಬಹುದು. ಇವರು ಬಳಸುವ ಭಾಷೆ ಸರಳವಾದುದು. ಅಚ್ಚಗನ್ನಡವನ್ನೇ ಬಳಸಬೇಕೆಂಬ ವೀರ ನಿಷ್ಠೆ ಆಗಲಿ, ಸಂಸ್ಕøತಭೂಯಿಷ್ಠ ಆಡಂಬರ ಶೈಲಿಯಲ್ಲಿ ಬರೆದರೆ ಮಾತ್ರ ಕೃತಿಗೆ ಹಿರಿಮೆ ಬರುವುದು ಎಂಬ ಧೋರಣೆ ಆಗಲಿ ಇವರದಲ್ಲ. ಸಂಸ್ಕøತ ಕನ್ನಡಪದಗಳನ್ನು ಹದವರಿತು ಬಳಸುವುದರ ಮೂಲಕ ಭಾಷೆ ಸಾಮಾನ್ಯರಿಗೂ ಗ್ರಾಹ್ಯವಾಗುವಂತೆ ಮಾಡಿದ್ದಾರೆ. ಅಷ್ಟು ಮಾತ್ರವಲ್ಲದೆ ಕೆಲವೊಮ್ಮೆ, ಸಂಸ್ಕøತದ ಪೋಷಕ ವಾಕ್ಯಗಳನ್ನು ಕೂಡ ನಡುನಡುವೆ ತರುತ್ತಾರೆ. ಇಷ್ಟಾದರೂ ಭಾಷೆ ಮಾತ್ರ ಜನಸಾಮಾನ್ಯರ ಆಡುನುಡಿಗೆ ತೀರ ಸಮೀಪವಾಗಿ ನಿಲ್ಲುತ್ತದೆ. ಅಧ್ಯಾತ್ಮದಂಥ ಗಹನ ವಿಚಾರಗಳನ್ನು ಇಂಥ ಭಾಷೆಯಲ್ಲಿ ನಿರೂಪಿಸಿರುವುದು ಬಸವಣ್ಣನವರ ಹಿರಿಮೆ.

ಅಲಂಕಾರಗಳ ಬಳಕೆಯಲ್ಲೂ ವಿಶಿಷ್ಟಮಾರ್ಗ ಅನುಸರಿಸಿದ್ದಾರೆ. ನಿತ್ಯಜೀವನದಿಂದಲೂ ಜನಸಾಮಾನ್ಯರ ಅನುಭವಕೋಶದಿಂದಲೂ ಹೆಕ್ಕಿ ತೆಗೆದ ಉಪಮೆ ದೃಷ್ಟಾಂತಗಳನ್ನು ಮೇಲಿಂದ ಮೇಲೆ ತಂದು, ವಿಷಯ ಓದುಗನ ಮನಸ್ಸಿನಲ್ಲಿ ಭದ್ರವಾಗಿ ನಿಲ್ಲುವಂತೆ ಮಾಡುತ್ತಾರೆ. `ಒಲೆ ಹತ್ತಿ ಉರಿದಡೆ ನಿಲ್ಲಬಹುದಲ್ಲದೆ ಧರೆ ಹತ್ತಿ ಉರಿದಡೆ ನಿಲ್ಲಬಹುದೆ; `ಅಡವಿಯೊಳಗೆ ಹೊಲಬುಗೆಟ್ಟ ಪಶುವಿನಂತೆ ಅಂಬಾ ಅಂಬಾ ಎಂದು ಕರೆವುತ್ತಲಿದ್ದೇನೆ; `ಎನಿಸು ಕಾಲ ಕಲ್ಲು ನೀರಿನೊಳಗಿದ್ದರೇನು ಮೃದುವಾಗಬಲ್ಲುದೆ; `ಕಂಬಳಿಯಲ್ಲಿ ಕಣಕವ ನಾದಿದಂತೆ ಕಾಣಿರೆ ಎನ್ನ ಮನ, ಎಳ್ಳಿಲ್ಲದ ಗಾಣವನಾಡಿದ ಎತ್ತಿನಂತಾಯಿತ್ತೆನ್ನ ಭಕ್ತಿ; `ಹಬ್ಬಕ್ಕೆ ತಂದ ಹರಕೆಯ ಕುರಿ ತೋರಣಕ್ಕೆ ತಂದ ತಳಿರ ಮೇಯಿತ್ತು. 'ಹಾವಿನ ಬಾಯ ಕಪ್ಪೆ ಹಸಿದು ಹಾರುವ ನೊಣಕ್ಕೆ ಆಸೆ ಪಡುವಂತೆ; 'ಆನೆಯ ಮೇಲೆಹೋಹನ ಶ್ವಾನ ಕಚ್ಚಬಲ್ಲುದೆ; `ಹುತ್ತವ ಬಡಿದರೆ ಹಾವು ಸಾಯಬಲ್ಲುದೆ; ಹೊರಿಸಿ ಕೊಂಡು ಹೋದ ನಾಯಿ ಮೊಲನೇನ ಹಿಡಿಯುವುದಯ್ಯ-ಇತ್ಯಾದಿಯಾಗಿ ಬರುವ ಮಾತುಗಳಲ್ಲಿ ಈ ಅಂಶವನ್ನು ಕಾಣಬಹುದು. ಶಬ್ದಾಲಂಕಾರಗಳ ಬಳಕೆ ಕೂಡ ಅಷ್ಟೆ ಆಕರ್ಷಕವಾಗಿವೆ. ಪದಗಳನ್ನೋ ಪದಪುಂಜಗಳನ್ನೋ ಪುನರಾವರ್ತಿಸುತ್ತ ಹೋಗುವುದು ಬಹಳಷ್ಟು ಕಡೆ ಕಾಣಿಸುತ್ತದೆ. ವರ್ಣಾವೃತ್ತಿಯಂತೂ ಮೇಲಿಂದ ಮೇಲೆ ಬರುತ್ತದೆ. ಅಂತ್ಯಪ್ರಾಸ, ಒಳಪ್ರಾಸ, ಮುಂತಾದ ಪ್ರಾಸ ವೈವಿಧ್ಯಗಳ ಬೆಡಗಂತೂ ವಿಸ್ಮಯಕರವಾಗಿದೆ.

ಉಪಮಾದ್ಯಲಂಕಾರಗಳನ್ನು 'ಮಾಲೆ ಮಾಲೆಯಾಗಿ ತರುವುದು ಬಸವಣ್ಣನವರ ವಚನಗಳ ಮತ್ತೊಂದು ವೈಶಿಷ್ಟ್ಯ. ಚಕೋರಂಗೆ ಚಂದ್ರಮನ ಬೆಳಗಿನ ಚಿಂತೆ, ಅಂಬುಜಕ್ಕೆ ಭಾನುವಿನ ಉದಯದ ಚಿಂತೆ, ಭ್ರಮರಂಗೆ ಪರಿಮಳದ ಬಂಡುಂಬ ಚಿಂತೆ ಎನಗೆ ನಮ್ಮ ಕೂಡಲ ಸಂಗಮದೇವರ ಚಿಂತೆ, ಎಂಬ ವಚನ ಇದಕ್ಕೆ ಉತ್ತಮ ನಿದರ್ಶನ. 'ಬೇವಿನ ಬೀಜವ ಬಿತ್ತಿ ಬೆಲ್ಲದ ಕಟ್ಟೆಯ ಕಟ್ಟಿ ಆಕಳ ಹಾಲನೆರೆದು ಜೇನುತುಪ್ಪವ ಹೊಯ್ದರೆ ಸಿಹಿಯಾಗಬಲ್ಲುದೇ ಎಂಬೆಡೆಗಳಲ್ಲಿ ಪರಿಣಾಮಕಾರಿ ಶಬ್ದಶಿಲ್ಪಗಳನ್ನು ಕಡೆದು ನಿಲ್ಲಿಸುತ್ತಾರೆ. `ಮನೆಯೊಳಗೆ ಮನೆಯೊಡೆಯನಿದ್ದಾನೊ ಇಲ್ಲವೋ ಹೊಸ್ತಿಲಲ್ಲಿ? ಹುಲ್ಲು ಹುಟ್ಟಿ ಮನೆಯೊಳಗೆ ರಜತುಂಬಿ ಮನೆಯೊಳಗೆ ಮನೆಯೊಡಯನಿದ್ದಾನೊ ಇಲ್ಲವೊ?' ಎಂಬ ವಚನದಲ್ಲಿ ಉತ್ತಮ ಪ್ರತಿಮಾ ನಿರ್ಮಾಣ ಚಾತುರ್ಯ ಕಾಣಬಹುದು. ಹೀಗಾಗಿ ಇವರ ವಚನ ಭಂಡಾರ ವೈವಿಧ್ಯಮಯವಾದ ಒಂದು ಚಿತ್ರಶಾಲೆ ಎನಿಸಿದೆ. ಇದರಲ್ಲಿ ಪ್ರಾಣಿಗಳಿಗೆ ಹೆಚ್ಚಿನ ಸ್ಥಾನ ಸಂದಿರುವುದು ಗಮನಾರ್ಹ.

ಇವರ ವಚನಗಳಲ್ಲಿ ಕಾಣುವ ಬಂಧದ ಬಿಗಿ ಗಮನಿಸಬೇಕಾದ ಅಂಶವಾಗಿದೆ. ಒಂದೊಂದು ವಾಕ್ಯವೂ ಒಂದೊಂದು ಅವಿಭಾಜ್ಯ ಅಂಗ, ಅಷ್ಟರ ಮಟ್ಟಿಗೆ ವಿಷಯಗಳನ್ನು ಅಡಕಿ ತುಂಬಲಾಗಿದೆ. ಅಂತೆಯೇ ವಾಕ್ಯಗಳ ಜೋಡಣೆಯಲ್ಲಿ ತರ್ಕಬದ್ಧತೆಯಲ್ಲಿ ಸಾವಯವ ಸಂಬಂಧವೂ ಇದೆ. ಮಾತುಗಳಂತೂ ಹಲವೊಮ್ಮೆ ಸೂತ್ರಪ್ರಾಯವಾಗಿರುತ್ತವೆ. `ಅರಿದರೆ ಶರಣ, ಮರೆದರೆ ಮಾನವ "ದೇವನೊಬ್ಬ ನಾಮ ಹಲವು "ದಯವಿಲ್ಲದ ಧರ್ಮವಾವುದಯ್ಯ" `ಆಚಾರವೇ ಸ್ವರ್ಗ ಅನಾಚಾರವೇ ನರಕ ಎಂಬಂಥವು ಇದಕ್ಕೆ ನಿದರ್ಶನಗಳು.

ಇನ್ನು ಈ ವಚನಗಳ ಲಯವೈವಿಧ್ಯದ ಬಗ್ಗೆ `ತಾಳಮಾನ ಸರಿಸಮನರಿಯೆ, ಓಜೆಬಜಾವಣೆಯ ಲೆಕ್ಕವನರಿಯೆ, ಅಮೃತಗಣ ದೇವಗಣನವರಿಯೆ, ಕೂಡಲ ಸಂಗಮ ದೇವಾ, ನಿನಗೆ ಕೇಡಿಲ್ಲವಾಗಿ ಆನು ಒಲಿದಂತೆ ಹಾಡುವೆ, ಎಂಬುದಾಗಿ ಬಸವಣ್ಣನವರೇ ಹೇಳಿಕೊಂಡಿದ್ದಾರೆ. ಆದ್ದರಿಂದ ಇಲ್ಲಿ ನಿಯತ ಛಂದಸ್ಸಿನ ಚೌಕಟ್ಟು ಗೋಚರಿಸುವುದಿಲ್ಲ. ಆದರೆ ಗೇಯತೆಗೆ ಮಾತ್ರ ಕುಂದಿಲ್ಲ. 'ಆನು ಒಲಿದಂತೆ ಹಾಡುವೆನು ಎಂದಿರುವಲ್ಲಿ, ಬಸವಣ್ಣವನರೇ ಈ ಗೇಯತೆಗೆ ಪ್ರಾಧಾನ್ಯವಿತ್ತಿದ್ದರೆಂಬುದನ್ನು ಗಮನಿಸಬೇಕು. ಗೇಯತೆಗೆ ಕಾರಣವಾಗುವ ಅಂಶಗಳು ಎರಡು. ಒಂದು ಶಬ್ದಾಲಂಕಾರ ವೈವಿಧ್ಯದಿಂದ ಉಂಟಾಗುವ ನಾದಮಯತೆ, ಮತ್ತೊಂದು ಲಯದಲ್ಲಿ ಕಂಡುಬರುವ ಸ್ವಚ್ಛಂದ ಗತಿಯ ವೈಶಿಷ್ಟ್ಯ. ಲಯಗತಿ ನಿಯತದಂತೆ ಕಾಣಿಸಿಕೊಂಡು, ಅದು ಸ್ಥಿರಪಡುವಷ್ಟರಲ್ಲೇ ಅನಿಯತದತ್ತ ಹೊರಳಿ, ದಾರಿ ತಪ್ಪಿತೆನ್ನುವಷ್ಟರಲ್ಲಿಯೇ ಮತ್ತೆ ನಿಯತತೆಯತ್ತ ತಿರುಗುವುದು-ಹೀಗೆ ಕಣ್ಣು ಮುಚ್ಚಾಲೆಯಾಡುತ್ತ ಸಾಗುತ್ತದೆ. ಜೊತೆಗೆ ಯತಿಯ ಸ್ಥಾನ ವೈವಿಧ್ಯ, ವಿವಿಧ ಗಣವಿನ್ಯಾಸಗಳು ಅವುಗಳ ಸಂಯೋಜನಾಚಾತುರ್ಯ ಇವೆಲ್ಲವೂ ಈ ಗತಿಗೆ ವೈಚಿತ್ರ್ಯವನ್ನೊದಗಿಸುತ್ತವೆ. ಒಟ್ಟಾರೆ ಇವುಗಳಲ್ಲಿಯ ನಿಯತ ಲಯ ತೆರೆಯ ಮರೆಯ ಬಿಂಬದಂತೆ ಅಸ್ಪಷ್ಟವಾಗಿ ಕಾಣಿಸಿಕೊಳ್ಳುತ್ತ ತನ್ನ ಸ್ಥಾನವನ್ನು ಸಂಪೂರ್ಣವಾಗಿ ಬಿಟ್ಟು ಕೊಡದೆ, ಸ್ವಚ್ಛಂದತೆಯ ನಿಯಂತ್ರಣಕ್ಕೆ ಸಹಕರಿಸುತ್ತದೆ. ಇದರಿಂದಾಗಿ ಗೇಯಗುಣ ಇವುಗಳಲ್ಲಿ ವರ್ಧಿಸುತ್ತದೆ.

ಹೀಗೆ ಬಸವಣ್ಣನವರ ವಚನಗಳು ಅರ್ಥಗರ್ಭಿತವೂ ವೈವಿಧ್ಯಮಯವೂ ಆಗಿದ್ದು ಉನ್ನತ ಮಟ್ಟದವಾಗಿವೆ. ಜನಸಾಮಾನ್ಯರ ನಡುವೆ ನಿಂತು ಅವರ ಸುಖ ದುಃಖಗಳನ್ನು ಕಂಡು, ತಮ್ಮ ಮನದಲ್ಲುಂಟಾದ ಭಾವೋತ್ಕಟತೆಯನ್ನು ಇವರು ಮಾತುಗಳ ಮೂಲಕ ಹೊರಹರಿಸಿದ್ದಾರೆ. ಮುಂದಿನ ವಚನಕಾರರ ಮೇಲೆ ಇವರ ಪ್ರಭಾವ ಬಹಳವಾಗಿ ಆಗಿದೆ. ಅಷ್ಟು ಮಾತ್ರವಲ್ಲದೆ ಇವರ ವಚನಗಳ ಮುದ್ರೆಯನ್ನು ಅನಂತರದ ದಾಸಸಾಹಿತ್ಯದಲ್ಲಿ ಕೂಡ ಅಲ್ಲಲ್ಲಿ ಗುರುತಿಸಬಹುದಾಗಿದೆ. (ಕೆ.ಜಿ.ಎನ್.ಪಿ.)