ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬಿಜಾಪುರೆ, ಆರ್ ಕೆ

ವಿಕಿಸೋರ್ಸ್ದಿಂದ

ಬಿಜಾಪುರೆ, ಆರ್ ಕೆ ಆರ್ ಕೆ ಬಿಜಾಪುರೆ ಜನರು ಪ್ರೀತಿ ಗೌರವ ಅಭಿಮಾನದಿಂದ ಕರೆಯುವುದು ರಾಮಭಾವು ವಿಜಾಪುರೆ- ಹಾರ್ಮೋನಿಯಂ ವಾದನದಲ್ಲಿ ನಿಷ್ಣಾತರಾದ ಕಲಾವಿದರು. ಉತ್ತರಾದಿ ಸಂಗೀತ ಕ್ಷೇತ್ರದಲ್ಲಿ 70 ವರ್ಷಕ್ಕೂ ಮಿಗಿಲಾಗಿ ಸೇವೆ ಸಲ್ಲಿಸಿ, ಸಂಗೀತವನ್ನು ಶ್ರೀಮಂತಗೊಳಿಸಿದ್ದಾರೆ.

ತಂದೆ ಕಾಗವಾಡದ ಕಲ್ಲೋಪಂತ ಬಿಜಾಪುರೆ. ತಮ್ಮ ಮಗ ರಾಮಚಂದ್ರನಿಗೆ ಇದ್ದ ಸಂಗೀತಾಸಕ್ತಿಯನ್ನು ಗುರುತಿಸಿದ್ದರು. ಕಲ್ಲೋಪಂತರು ಪ್ರಾಥಮಿಕ ಶಾಲಾ ಶಿಕ್ಷಕರು, ಸಾಹಿತಿಗಳು, ಸಂಗೀತಾರಾಧಕರು. ಸಂಗೊಳ್ಳಿ ರಾಯಣ್ಣ, ಸಂಶಯ ಸಂಭ್ರಮ, ಇದೇ ಸಾರಾಯಿ ಮೊದಲಾದ ನಾಟಕಗಳ ಕರ್ತೃ. ಶಿವ ಚಿದಂಬರ ಚರಿತ್ರೆ, ಅಡವಿ ಸಿದ್ದೇಶ್ವರ ಚರಿತ್ರೆ, ಎಂಬ ಕೃತಿಗಳನ್ನೂ ಬರೆದಿದ್ದರು. ತಾಯಿ ಗೋದೂಬಾಯಿ ದಾಸರಪದಗಳನ್ನು ಜಾನಪದಗೀತೆಗಳನ್ನು ಸುಶ್ರಾವ್ಯವಾಗಿ ಹಾಡಬಲ್ಲವರಾಗಿದ್ದರು. ಆ ದಿನಗಳಲ್ಲೇ ಮುಲ್ಕೀ ಪರೀಕ್ಷೆ ಪಾಸು ಮಾಡಿದ್ದ ಮಹಿಳೆ. ರಾಮಚಂದ್ರನ ದೊಡ್ಡಪ್ಪ ತಬಲ ವಾದಕರು. ಸುಸಂಸ್ಕøತ ಕುಟುಂಬ, ಸಂಗೀತಮಯ ವಾತಾವರಣ ಬಾಲಕ ರಾಮಚಂದ್ರನ ಮೇಲೆ ಪ್ರಭಾವ ಬೀರಿತ್ತು.

ಕಲ್ಲೋಪಂತರಿಗೆ ಕಾಗವಾಡದಿಂದ ಗೋಕಾಕ ತಾಲ್ಲೂಕಿನ ಅಕ್ಕತಂಗೇರಹಾಳ ಗ್ರಾಮಕ್ಕೆ ವರ್ಗವಾಯಿತು. ಕಲ್ಲೋಪಂತರ ನಾಟಕಗಳಿಗೆ ಸಂಗೀತ ಸಂಯೋಜನೆ ಮಾಡಿದ್ದ ನಾಟಕದ ಮಾಸ್ತರ್ ಅಣ್ಣಿಗೇರಿ ಮಲ್ಲಯ್ಯನವರಿಂದ ರಾಮಚಂದ್ರನಿಗೆ ಸಂಗೀತ ಶಿಕ್ಷಣ ಅಕ್ಕತಂಗೇರಹಾಳಕ್ಕೆ ಬಂದರು. ಮಲ್ಲಯ್ಯನವರು ನಾಲ್ಕು ತಿಂಗಳ ಕಾಲ ಕಲ್ಲೋಪಂತರ ಮನೆಯಲ್ಲೇ ಉಳಿದು, ರಾಮಚಂದ್ರನಿಗೆ ಹಾರ್ಮೋನಿಯಂ ಪಾಠ ಹೇಳಿದರು. ಕಲ್ಲೋಪಂತರ ಮನೆಯಲ್ಲಿ ಇದ್ದದ್ದು ಲೆಗ್ ಹಾರ್ಮೋನಿಯಂ. ಕುರ್ಚಿ ಅಥವಾ ಎತ್ತರದ ಸ್ಟೂಲಿನ ಮೇಲೆ ಕುಳಿತು, ಕಾಲಿನಿಂದ ತಿದ್ದಿ ಒತ್ತಿ ನುಡಿಸಬೇಕಾದ ವಾದ್ಯ.

ಪುಟ್ಟ ಬಾಲಕನಿಗೆ ಕುರ್ಚಿಯ ಮೇಲೆ ಕುಳಿತು ಭಾಷೆ ಅಥವಾ ತಿದ್ದಿ ಒತ್ತಲು ಕಾಲುಗಳು ಎಟುಕುತ್ತಿರಲಿಲ್ಲ. ಗುರುಗಳಾದ ಮಲ್ಲಯ್ಯ ಇಲ್ಲವೆ ತಂದೆ ತೊಡೆಯ ಮೇಲೆ ಕೂರಿಸಿಕೊಂಡು, ಭಾತೆ ಒತ್ತಬೇಕಾಗಿತ್ತು, ರಾಮಚಂದ್ರ ಗುರುಗಳು ಹೇಳುತ್ತಿದ್ದ ಸ್ವರಗಳನ್ನು ಹಾರ್ಮೋನಿಯಂನಲ್ಲಿ ಗುರುತಿಸಿ ತಕ್ಷಣ ನುಡಿಸಿ ಬಿಡುತ್ತಿದ್ದ. ಶಿಷ್ಯನ ಈ ಕೌಶಲದಿಂದ ಗುರುಗಳ ಉತ್ಸಾಹವೂ ಹೆಚ್ಚುತ್ತಿತ್ತು. ನಾಲ್ಕು ತಿಂಗಳ ಶಿಕ್ಷಣದ ನಂತರ ಮಲ್ಲಯ್ಯ ತಮ್ಮ ಊರಿಗೆ ಹೋದ ಮೇಲೆ ಕಲ್ಲೋಪಂತರ ಗುರುಸ್ಥಾನದಲ್ಲಿ ನಿಂತು ಪಾಠ ಮುಂದುವರೆಸಿದರು. ಅಕ್ಕತಂಗೇರ ಹಾಳದ ಶ್ರೀಮಂತ ಗಂಗಪ್ಪ ದೇಶಪಾಂಡೆ ರಾಮಚಂದ್ರನ ಪ್ರತಿಭೆಯನ್ನು ಗಮನಿಸಿ ತಮ್ಮಲ್ಲಿದ್ದ ಹಾರ್ಮೋನಿಯಂ ಅನ್ನು ಕೈಪೆಟ್ಟಿಗೆಯನ್ನು ರಾಮಚಂದ್ರನಿಗೆ ಕೊಟ್ಟರು. ರಾಮಚಂದ್ರನಿಗೆ ಈಗ ಸ್ವತಃ ಅಭ್ಯಾಸ ಮಾಡುವುದು ಸಾಧ್ಯವಾಯಿತು. ದೇಶಪಾಂಡೆಯವರ ಬಿಡದಿಗೆ ಬರುವ ಕೀರ್ತನಕಾರರಿಗೆ ಸಾಥಿ ಕೊಡುವಷ್ಟು ರಾಮಚಂದ್ರ ಸಮರ್ಥನಾದ. ಕಲ್ಲೋಪಂತರಿಗೆ ಪತ್ನಿ ವಿಯೋಗ. ಕಲ್ಲೋಪಂತರು ಅಕ್ಕತಂಗೇರಹಾಳ ಬಿಟ್ಟು ವರ್ಗಮಾಡಿಸಿಕೊಂಡು 1929ರಲ್ಲಿ ಬೆಳಗಾವಿಗೆ ಬಂದರು, ಮಗನ ಭವಿಷ್ಯ ರೂಪಿಸುವ ದೃಷ್ಟಿಯಿಂದ. ಬೆಳಗಾವಿಯಲ್ಲಿ ಸಂಗೀತ ಕ್ಷೇತ್ರದ ದಿಗ್ಗಜರೆಲ್ಲಾ ಅಲ್ಲಿ ನೆಲೆಸಿದ್ದರು. ಖ್ಯಾತ ಗಾಯಕರಾದ ರಾಮಕೃಷ್ಣ ಬುವಾವಝೆ, ಶಿವರಾಮ ಬುವಾವಝೆ, ಪಂಡಿತ ಕಾಗಲಕರ ಬುವಾ, ಶ್ರೇಷ್ಠ ಹಾರ್ಮೋನಿಯಂ ವಾದಕರಾದ ಪಂಡಿತ್ ರಾಜವಾಡೆ, ವಿಠ್ಠಲರಾವ್ ಕೋರಗಾಂವಕರ, ತಬಲ ವಾದಕರಾದ ಅಬ್ಬಾ ಸಾಹೇಬ್, ಮೆಹಬೂಬ ಸಾಬ, ನಾರಾಯಣರಾವ್ ಚಿಕ್ಕೋಡಿ ಅವರಲ್ಲದೆ ತಂತಿವಾದ್ಯಗಳನ್ನು ನುಡಿಸುವ ಖ್ಯಾತ ವಾದಕರು. ಬೆಳಗಾವಿಯಲ್ಲಿದ್ದು. ಅದು ಸಂಗೀತದ ಪ್ರಮುಖ ಕೇಂದ್ರವಾಗಿತ್ತು.

ರಾಮಚಂದ್ರ ಮೊದಲು ಕಾಗಲಕರ ಬುವಾ ಅವರಲ್ಲಿ ಹಾಡುಗಾರಿಕೆಯನ್ನು ಕಲಿಯಲು ಆರಂಭಿಸಿದರು. ಎಂಟು ವರ್ಷಕಾಲ ಪಂಡಿತ್ ರಾಜವಾಡೆ, ಪಂಡಿತ ಗೋವಿಂದರಾವ್ ಗಾಯವಾಡೆ ಇವರ ಸಾನ್ನಿಧ್ಯದಲ್ಲಿ ಹಾರ್ಮೋನಿಯಂ ನುಡಿಸುವುದನ್ನು ಕಲಿಯ ತೊಡಗಿದರು. ಯೌವ್ವನಾವಸ್ಥೆಗೆ ಬಂದಾಗ, ರಾಮಚಂದ್ರರವರ ಕಂಠ ಒಡೆಯಿತು. ಬಾಲ್ಯದ ಕೋಮಲ ಮಾರ್ದವತೆ ಕಳೆದು ಗಡಸಾಗ ತೊಡಗಿದಾಗ ಹಾಡುಗಾರಿಕೆಯನ್ನು ಬಿಟ್ಟು, ಹಾರ್ಮೋನಿಯಮ್ ವಾದ್ಯ ನುಡಿಸುವುದರಲ್ಲಿ ಪ್ರಭುತ್ವ ಪಡೆಯಲು ರಾಮಚಂದ್ರ ಬಿಜಾಪುರೆ ಕೇಂದ್ರಕರಿಸಿದರು. ಧಾರವಾಡದಲ್ಲಿದ್ದ ಹಣವಂತರಾವ್ ವಾಳವೇಕರ್, ಅವರ ಸಾನ್ನಿಧ್ಯದಲ್ಲಿ ಇವರ ವಾದನ ಕೌಶಲಕ್ಕೆ ಮತ್ತಷ್ಟು ಘನತೆ-ಮೆರಗು ಬಂದಿತು.

ರಾಮಚಂದ್ರ-ರಾಮಭಾವು ವಿಜಾಪುರೆ ವೃತ್ತೀಜೀವನದ ಶುಭ ಆರಂಭವಾದುದು ಒಂದು ವಿಶಿಷ್ಟ ಸನ್ನಿವೇಶದಲ್ಲಿ. ಗುರ್ಲ ಹೊಸೂರಿನ ಚಿದಂಬರೇಶ್ವರ ಸನ್ನಿಧಿಯಲ್ಲಿ ಒಂದು ವಾರ ಕಾಲ ಸಂಗೀತ ಸೇವೆ ನಡೆಸಲು ಪಂಡಿತ ರಾಮಕೃಷ್ಣ ಬುವಾವಝೆ ಅವರು ಆಮಂತ್ರಿತರಾಗಿದ್ದರು. ಅವರಿಗೆ ಹಾರ್ಮೋನಿಯಂ ಸಾಥಿ ಆಗಿ ರಾಮಭಾವು ಹೋಗಿದ್ದರು. ಒಂದು ವಾರ ಕಾಲದ ಉತ್ಸವ ಮುಗಿದ ಮೇಲೆ ವ್ಯವಸ್ಥಾಪಕರು ರಾಮಭಾವು ಅವರಿಗೆ 21ರೂಪಾಯಿ ಸಂಭಾವನೆ ಕೊಟ್ಟರು. ದೈವ ಸನ್ನಿಧಿಯಲ್ಲಿ ದೊರೆತ ಮೊದಲ ಸಂಭಾವನೆ. ನೆನಪಿನ ಪ್ರಸಾದವಾಗಿ ರಾಮಭಾವು ಅದನ್ನು ಇನ್ನೂ ಸುರಕ್ಷಿತವಾಗಿ ಇಟ್ಟುಕೊಂಡಿದ್ದಾರೆ.

ಚಿದಂಬರೇಶ್ವರ ಸನ್ನಿಧಿಯಲ್ಲಿ ಆರಂಭವಾದ ಅವರ ಸಂಗೀತ ಯಾತ್ರೆ, ಯಶೋಯಾತ್ರೆಯಾಗಿ ಬೆಳೆದು, ನಾಡಿನ ಎಲ್ಲ ಹಿರಿಯ ಗಾಯಕರಿಗೆ, ವಾದ್ಯ ವಾದಕರಿಗೆ ಹಾರ್ಮೋನಿಯಂ ಸಾಥಿಯಾಗಿ, ಗಾಯಕರ, ಶೋತೃಗಳ ಅಭಿಮಾನ, ಗೌರವಕ್ಕೆ ಪಾತ್ರರಾಗಿದ್ದಾರೆ. ಉಸ್ತಾದ್ ಬಡೇ ಗುಲಾಂ ಆಲಿಖಾನ್, ಮಾಲವಿಕಾ ಕಾನನ್, ಉಸ್ತಾದ್ ಅಮೀರ್‍ಖಾನ್, ಉಸ್ತಾದ್ ಫಯ್ಯಾಜ್‍ಖಾನ್, ಉಸ್ತಾದ್ ನಿಸ್ಸಾರ್ ಹುಸ್ಸೇನ್ ಖಾನ್, ಡಾ. ಗಂಗೂಬಾಯಿ ಹಾನಗಲ್, ಡಾ. ಮಲ್ಲಿಕಾರ್ಜುನ ಮನ್ಸೂರ್, ಬಸವರಾಜ ರಾಜಗುರು, ಕುಮಾರ ಗಂಧರ್ವ, ಹೀರಾಬಾಯಿ ಬಡೋದೇಕರ್, ಕಿಶೋರಿ ಅಮೋಣಕರ್, ಪರ್ವಿನ್ ಸುಲ್ತಾನ, ಪಂಡಿತ್ ಜಸರಾಜ್, ಉಸ್ತಾದ್ ವಿಲಾಯತ್ ಖಾನ್, ಪ್ರಭಾ ಅತ್ರೆ ಮೊದಲಾದ ಹಿಂದೂಸ್ತಾನಿ ಸಂಗೀತ ದಿಗ್ಗಜರೆಲ್ಲರ ನೆಚ್ಚಿನ ಸಾಥಿಯಾಗಿ ರಾಮಭಾವು ಹಾರ್ಮೋನಿಯಮ್ ನುಡಿಸಿದ್ದಾರೆ. ಪುಣೆಯಲ್ಲಿ ಅವರಿಗೆ `ಸಂಗತ್‍ಕಾರ್ ಪುರಸ್ಕಾರ್ ಗೌರವವೂ ಲಭ್ಯವಾಗಿದೆ. ಈ ಎಲ್ಲ ಉತ್ತರಾದಿ ಸಂಗೀತದ ಮೇರು ಕಲಾವಿದರ ಸಾಥಿಯಾಗಲು ಕಾರಣ, ರಾಮಭಾವು ಅವರ ಪ್ರಧಾನ ಗಾಯಕನಿಗೆ ನೀಡುವ ಗೌರವ, ವೇದಿಕೆಯ ಮೇಲಿನ ಸೌಜನ್ಯಪೂರ್ಣ ನಡವಳಿಕೆ. ಗಾಯಕನ ಮನೋಧರ್ಮ ಅನುಸರಿಸಿ, ಅವರ ಗಾಯನದೊಂದಿಗೆ, ತಮ್ಮ ವಾದನವನ್ನು ಸಾಮರಸ್ಯಗೊಳಿಸಿ, ಕಛೇರಿಗೆ ಮೆರುಗು ಕೊಡುವಂತಹ ಸಾಥಿ.

ಕರ್ನಾಟಕ ವಿಶ್ವವಿದ್ಯಾಲಯದ ಸಂಗೀತ ವಿಭಾಗದ ಅಧ್ಯಾಪಕರು, ರುದ್ರವೀಣೆಯ ವಾದಕರೂ ಆದ ಡಾ. ಬಿಂಧುಮಾಧವ ಪಾಠಕ್, ನಿರ್ಜೀವವಾದ ಕಟ್ಟಿಗೆಯ ಪೆಟ್ಟಿಗೆಯಿಂದ ಉಜ್ವಲವಾದ ಸ್ವರಗಳನ್ನು ಹೊಮ್ಮಿಸಿ ಶ್ರೋತ್ರಗಳನ್ನು ಗಂಧರ್ವಲೋಕಕ್ಕೆ ಕರೆದೊಯ್ಯಬಲ್ಲ `ಮಾಂತ್ರಿಕ ಎಂದು ವರ್ಣಿಸಿದ್ದಾರೆ.

ರಾಮಭಾವು ಕೇವಲ ಸಾಥಿಯಾಗಿ ಉಳಿದಿಲ್ಲ ಅವರು ಹಲವಾರು ಪೋಟೋ ಕಾರ್ಯಕ್ರಮಗಳು ಆಕಾಶವಾಣಿ ಕೇಂದ್ರಗಳಿಂದ ಹಾಗೂ ಹೈದರಾಬಾದ್ ಪುಣೆ ಮೊದಲಾದ ನಗರಗಳಲ್ಲೂ ನಡೆದಿದೆ.

ಸಂಗೀತ ಕ್ಷೇತ್ರಕ್ಕೆ ಅವರು ನೀಡಿರುವ ಕೊಡುಗೆ `ಸಾಥಿ'ಯಾಗಿ ಮಾತ್ರವಲ್ಲ. ಅವರು ಗುರುವಾಗಿ ಕಳೆದ ಏಳು ದಶಕಗಳಷ್ಟು ಬೆಳೆಸಿರುವ ಶಿಷ್ಯವೃಂದ ಸಾವಿರ ಸಂಖ್ಯೆಯಲ್ಲಿದೆ. ಅವರ ಸಂಗೀತ ಶಿಕ್ಷಕ ವೃತ್ತಿ ಆರಂಭವಾದುದು ಒಂದು ವಿಶಿಷ್ಟ ರೀತಿಯಲ್ಲಿ. 1934-35ರ ಸಮಯ ಬೆಳಗಾವಿ ಪೋಸ್ಟ್‍ಮಾಸ್ಟರ್‍ರ ಹೆಂಡತಿಗೆ ಹಾಡು ಕಲಿಯುವ ಆಸಕ್ತಿ. ಆ ಪೋಸ್ಟ್‍ಮಾಸ್ಟರರ ಒತ್ತಾಯದ ಮೇರೆಗೆ, ಅವರ ಮನೆಗೆ ಹೋಗಿ ಹಾಡು, ಹಾರ್ಮೋನಿಯಂ ಹೇಳಿಕೊಟ್ಟರು. ಅಲ್ಲಿಂದ ಆರಂಭವಾಯಿತು. ಅವರ ಶಿಕ್ಷಣ ಯಾತ್ರೆ, ಬೆಳಗಾವಿಯ ವಿವಿಧ ಪ್ರದೇಶಗಳಿಗೆ ಸೈಕಲ್ ಮೇಲೆ ಹೋಗಿ ಆಸಕ್ತರಿಗೆಲ್ಲಾ ಸಂಗೀತವನ್ನು ಕಲಿಸಿದ್ದಾರೆ. ಆದರೆ ವಯೋಧರ್ಮದ ಕಾರಣ ಆ ಸೈಕಲ್‍ಯಾತ್ರೆ ಈಗ ನಿಂತಿದೆ. ವಿಜಾಪುರೆಯವರ ಸೈಕಲ್‍ಯಾತ್ರೆ, ಸಂಗೀತವಲಯದಲ್ಲೆಲ್ಲಾ ಪ್ರಸಿದ್ಧ. ಡಾ. ಬಿಂದುಮಾಧವ ಪಾಠಕ್ ದಾಖಲಿಸಿರುವ ಒಂದು ಘಟನೆ:

ಪಂ. ವಿಜಾಪುರೆಯವರು ಇತ್ತೀಚೆಗೆ ಪುಣೆಗೆ ಹೋಗಿದ್ದಾನೆ. ಪಂ. ಭೀಮಸೇನ ಜೋಷಿಯವರು `ಕಾ ಬುವಾ ಸೈಕಲ್‍ವರನ ಆಲಾ ಕಾಯ್ (`ವನ್ರಿ ಬುವಾ ಸೈಕಲ್ ಮ್ಯಾಲ ಬಂದಿರೇನು?' ಎಂದು ಕೇಳಿದರಂತೆ !) ಅದಕ್ಕೆ ಬಿಜಾಪುರೆಯವರು `ಹೌದ್ರಿ, ನಿಮ್ಮ ಮನೆ ಕಾಂಪೌಂಡಿನ್ಯಾಗ ನಿಂದರಿಸಿ ಬಂದೀನಿ ಎಂದು ಪ್ರತಿ ಚೇಷ್ಠೆ ಮಾಡಿದರಂತೆ-ಹೀಗೆ ಒಂದಲ್ಲ ಒಂದು ವಿಧದಲ್ಲಿ ಬುವಾ ಅವರನ್ನು ಪ್ರೀತಿಯಿಂದ ಛೇಡಿಸುವುದಿದೆ. ಬುವಾ ಅದಕ್ಕೆ ನಸುನಗುತ್ತ ಪ್ರತಿ ಉತ್ತರಿಸುವುದು ಸಾಮಾನ್ಯ.

ಬಿಜಾಪುರೆಯವರು ಬೆಳಗಾವಿಯಲ್ಲಿ 1938ರಲ್ಲಿ ಆರಂಭಿಸಿದ ಶ್ರೀರಾಮ ಸಂಗೀತ ವಿದ್ಯಾಲಯದ ಸುವರ್ಣಮಹೋತ್ಸವ 1991ರಲ್ಲಿ ನಡೆಯಿತು. ಈ ಶಾಲೆಯಲ್ಲಿ 500ಂಕ್ಕೂ ಹೆಚ್ಚು ಮಂದಿ ಸಂಗೀತ ಕಲಿತಿದ್ದಾರೆ. ಅಂಧ ಮತ್ತು ಅಂಗವಿಕಲ ವಿದ್ಯಾರ್ಥಿಗಳಿಗೆ ಇಲ್ಲಿ ಉಚಿತ ಶಿಕ್ಷಣ. ಸಮಾಜಕ್ಕೆ ಬದ್ಧತೆ. ಬಿಜಾಪುರೆಯವರು ಅಖಿಲಭಾರತ ಗಂಧರ್ವ ವಿದ್ಯಾಲಯ ಮತ್ತು ಕರ್ನಾಟಕ ಸರಕಾರದ ಸಂಗೀತ ಪರೀಕ್ಷೆಗಳಿಗೆ ಪರೀಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ. `ಪ್ರಾಥಮಿಕ ಶಾಲಾ ಸಂಗೀತ ಶಿಕ್ಷಕ ಇವರು ರಚಿಸಿರುವ ಸಂಗೀತ ಶಿಕ್ಷಣಕ್ಕೆ ಸಂಬಂಧಪಟ್ಟ ಉಪಯುಕ್ತ ಪುಸ್ತಕ. ವಯೋಧರ್ಮದ ಕಾರಣ ಹೆಚ್ಚು ಓಡಾಟವಿಲ್ಲ. ಆದರೆ ಮನೆಗೆ ಬರುವ ಸಂಗೀತ ವಿದ್ಯಾರ್ಥಿಗಳಿಗೆ ಪಾಠ ಹೇಳುವ ಕಾಯಕವನ್ನು ಇಂದಿಗೂ ಮುಂದುವರೆಸಿದ್ದಾರೆ.

ಪಂ. ಬಿಜಾಪುರೆಯವರನ್ನು ಅರಸಿಕೊಂಡು ಬಂದ ಸನ್ಮಾನಗಳು, ಸತ್ಕಾರಗಳು ಅಸಂಖ್ಯ. ಕರ್ನಾಟಕ ಸಂಗೀತ ನಾಟಕ ಅಕಾಡೆಮಿ ಪುರಸ್ಕಾರ (1982), ಕರ್ನಾಟಕ ಕಲಾತಿಲಕ ಪ್ರಶಸ್ತಿ (1985) ದೊರೆತಿದೆ. ಕರ್ನಾಟಕ ಸರಕಾರದ `ಸಂಗೀತ ವಿದ್ವಾನ್ ಗೌರವ (2001) ಮತ್ತು ಕರ್ನಾಟಕ ಸರಕಾರ ನೀಡುವ ರಾಷ್ಟ್ರಮಟ್ಟದ ಪ್ರಶಸ್ತಿಯಾದ ಟಿ. ಚೌಡಯ್ಯ ಪ್ರಶಸ್ತಿ (2001)ಯ ಗೌರವಕ್ಕೆ ಪಾತ್ರರಾದ ಪ್ರಥಮ ಹಾರ್ಮೋನಿಯಂ ವಾದಕರು-ರಾಮಚಂದ್ರ ಬಿಜಾಪುರೆ. *