೧೧೪ ಚಿರಸ್ಮರಣೆ
ಕೆಲ ರೈತರು ಮಾಸ್ತರ ಬಳಿಗೆ ಬಂದು ತಮಗೆ ಓದುಬರಹ ಕಲಿಸಲು ಕೇಳಿದರೆಂದು ಸುದ್ದಿ ಹಬ್ಬಿತು. ಬೇಕಾದ ಕಡೆಗೆ ವಾರ್ತೆ ತಲಪಲೆಂದು ಜಮೀನ್ದಾರರ ಹುಡುಗರೊಡನೆಯೂ ಮಾಸ್ತರು ಆ ವಿಷಯ ಪ್ರಸ್ತಾಪಿಸಿದರು. ತಮಗೆ ಕರೆಕಳುಹಬಹುದು; ಆದರೆ ಈ ಸಲ ಬಿಟ್ಟುಕೊಡಬಾರದು--ಎಂಬ ನಿರ್ಧಾರವನ್ನೂ ಅವರು ಮಾಡಿದರು.
ಮು೦ದೆ ನಡೆದುದು ನಿರೀಕ್ಷಿಸಿದುದಕ್ಕಿ೦ತ ಸ್ವಲ್ಪ ಭಿನ್ನವಾಗಿತ್ತು.ಮಾರನೆಯ
ದಿನ ಬೆಳಗ್ಗೆ ಊರ ಜಮೀನ್ದಾರರಿಬ್ಬರು ತಮ್ಮ ಆಳುಗಳೊಡನೆ ಬಂದು ಶಾಲೆಗೆ ಭೇಟಿಕೊಟ್ಟರು. ಅಲ್ಲಿದ್ದುದು ಮುರುಕು ಕುರ್ಚಿಯೊಂದೇ.
"ನೀವು ಕೂತ್ಕೊಳ್ಳಿ" ಎಂದರು ನಂಬಿಯಾರರು ನಂಬೂದರಿಗೆ. "ನೀವು ಕೂತ್ಕೊಳ್ಳಿ" ಎಂದರು ಅವರು ಇವರಿಗೆ. ಯಾರೊಬ್ಬರೂ ಕುರ್ಚಿಯ ಮೇಲೆ ಕುಳಿತುಕೊಳ್ಳಲಿಲ್ಲ. "ಶಾಲೆ ಅಂದ್ಮೇಲೆ ಒಂದೆರಡು ಬೆಂಚಾದರೂ ಇರಬೇಕಪ್ಪ" ಎಂದರು
ನಂಬೂದಿರಿ. ಅದು ವಿಶ್ವಸ್ಥ ಸಮಿತಿಯ ಮುಖ್ಯಸ್ಥನ ಮೇಲೆ ಅವರೆಸೆದ ಬಾಣ.
ಆ ಬಾಣವನ್ನು ಕೈಯಿಂದ ಸವರಿ ಬದಿಗೆಸೆಯುವಂತೆ ನಂಬಿಯಾರರೆಂದರು: "ಬೆಂಚು ತಂದು ಹಾಕಿದರೆ ನಮ್ಮ ಮನೆ ಆಳುಗಳ್ನ ಇಲ್ಲಿ ಕಾವಲೂ
ಇಡಬೇಕಾಗ್ತದೆ!"
ಆ ಇಬ್ಬರೂ ಮಾಸ್ತರೊಡನೆ ಶಾಲೆಯ ಅಂಗಳಕ್ಕಿಳಿದರು. ಆಗತಾನೆ
ಬರತೊಡಗಿದ್ದರು ಹುಡುಗರು. ನಂಬಿಯಾರರ ಮಗನೂ ನಂಬೂದಿರಿಯ ಮಕ್ಕಳೂ ತಂದೆಯನ್ನು ನೋಡುತ್ತ ಈ ದಿನ ಅಭಿಮಾನದಿಂದಲೇ ಒಳಗೆ ಬಂದರು. ಉಳಿದವರು ದೈರ್ಯ ಸಾಲದೆ ಕಾಲು ಹಾದಿಯಲ್ಲೇ ನಿ೦ತರು.
ನಂಬಿಯಾರರು ಮಾಸ್ತರನ್ನುದ್ದೇಶಿಸಿ ಹೇಳಿದರು: "ನಾವೊಂದು ಸುದ್ದಿ ಕೇಳಿದೆವು--" ಮಾಸ್ತರು ಮು೦ದುವರಿಸಲು ಅವರಿಗೆ ಆಸ್ಪದ ಕೊಡಲಿಲ್ಲ. "ಹೌದು ನಾನಾಗಿಯೇ ಬಂದು ತಮಗೆ ತಿಳಿಸಬೇಕೂಂತಿದ್ದೆ. ಅಷ್ಟರಲ್ಲಿ ತಾವೇ
ಇಲ್ಲಿಗೆ ದಯಮಾಡಿಸಿದಿರಿ."
ಮಾಸ್ತರು ಹಾಗೆ ಹೇಳಿದೊಡನೆಯೇ ನಂಬೂದಿರಿ ಎಂದರು: "ನೋಡಿಯಪ್ಪ. ನಾನು ಮೊದಲೇ ಸ್ಪಷ್ಟವಾಗಿ ಹೇಳ್ಬಿಡ್ತೇನೆ. ಹಿಂದೆ ಈ ಶಾಲೆ
ಕಟ್ಟಿಸೋದೇ ನನಗಿಷ್ಟವಿರಲಿಲ್ಲ. ಈ ಮಹಾರಾಯರು ಗೆದ್ದರು. ಅಂತೂ ಎಲ್ಲರಿಗೂ ವಿದ್ಯೆ ಸಿಗಬೇಕು ಅನ್ನೊ ತತ್ವ ಆಗ ಒಪ್ಪಿಕೊಂಡಹಾಗಾಯಿತು.