ಪುಟ:ಶ್ರೀರಾಮಕೃಷ್ಣ ಪರಮಹಂಸರ ಚರಿತ್ರೆ.djvu/೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಚರಿತ್ರೆ

೩೭

ಮನೋಹರವಾದ ಸ್ಥಳದಲ್ಲಿ ನನ್ನ ವಿಗ್ರಹವನ್ನು ಪ್ರತಿಷ್ಠೆ ಮಾಡಿ ಪೂಜಾನೈವೇದ್ಯಗಳ ವ್ಯವಸ್ಥೆ ಮಾಡು. ನಾನು ಆ ಮೂರ್ತಿಯಲ್ಲಿ ಆವಿರ್ಭಾವವಾಗಿ ನಿನ್ನಿಂದ ಪೂಜೆಯನ್ನು ಗ್ರಹಣಮಾಡುತ್ತೇನೆ" ಎಂದು ಆಜ್ಞಾಪಿಸಿದಳಂತೆ. ಆದ್ದರಿಂದ ರಾಣಿಯು ಕಾಶಿಗೆ ಹೋಗುವುದನ್ನು ನಿಲ್ಲಿಸಿ ಅದಕ್ಕಾಗಿ ಕೂಡಿಸಿಟ್ಟ ಹಣವನ್ನೆಲ್ಲ ವ್ರಯಮಾಡಿ ಗಂಗಾ ತೀರದಲ್ಲಿ ದೇವಸ್ಥಾನವನ್ನು ಕಟ್ಟಿಸಬೇಕೆಂದು ಸಂಕಲ್ಪಮಾಡಿಕೊಂಡಳು.

ದೇವಸ್ಥಾನವು ಕಟ್ಟಿ ಮುಗಿಯಿತು. (1855.) ದೇವಿಯ ಸೇವೆಯೂ ಚಿರಕಾಲ ನಡೆಯಬೇಕೆಂಬ ಉದ್ದೇಶದಿಂದ ಬೇಕಾದಷ್ಟು ಆಸ್ತಿಯನ್ನು ದೇವಸ್ಥಾನದ ಹೆಸರಿನಲ್ಲಿ ಮಾಡಿದ್ದೂ ಆಯಿತು. ಆದರೆ ಆ ದೇವಿಯ ಅರ್ಚನೆಗೆ ಒಪ್ಪಿಕೊಳ್ಳುವವರಾರು? ಆಕೆಯು ಬೆಸ್ತರ ಜಾತಿಯವಳು. ಶೂದ್ರಪ್ರತಿಷ್ಠಿತವಾದ ಮೂರ್ತಿಯನ್ನು ಪೂಜೆಮಾಡುವವರಾರು ? ಶೂದ್ರರಿಂದ ಪ್ರತಿಷ್ಠಿತವಾದ ಮೂರ್ತಿಯನ್ನು ಪೂಜಿಸುವುದಿರಲಿ, ಅಂಥಮೂರ್ತಿಗಳಿಗೆ ಆಚಾರಶೀಲರಾದ ಬ್ರಾಹ್ಮಣರು ನಮಸ್ಕಾರವನ್ನು ಕೂಡ ಮಾಡುತ್ತಿರಲಿಲ್ಲ. ದೇವಿಗೆ ಯಥಾವಿಧಿಯಾಗಿ ಪೂಜೆನೈವೇದ್ಯಗಳು ಆಗದಿದ್ದರೆ ಏನು ಮಾಡಿ ಏನು ಪ್ರಯೋಜನ? ಆದ್ದರಿಂದ ರಾಣಿಗೆ ಚಿಂತೆಹತ್ತಿ ಆಕೆಯು ಸುತ್ತಮುತ್ತ ಇದ್ದ ಶಾಸ್ತ್ರಜ್ಞರ ಸಲಹೆಯನ್ನು ಕೇಳಿದಳು.ಆದರೆ ತನಗೆ ಅನುಕೂಲವಾಗಿ ಯಾರೂ ಹೇಳಲಿಲ್ಲ. ಆದರೂ ರಾಣಿಯು ನಿರಾಶಳಾಗದೆ ಕಂಡಕಂಡ ಶಾಸ್ತ್ರಜ್ಞರನ್ನೆಲ್ಲಾ ವಿಚಾರಿಸುತಿದ್ದಳು. ರಾಮಕುಮಾರನಿಗೂ ಒಂದು ಕಾಗದವನ್ನು ಬರೆದಳು. ರಾಮಕುಮಾರನು ಯೋಚನೆಮಾಡಿ "ಪ್ರತಿಷ್ಠೆಗೆ ಪೂರ್ವದಲ್ಲಿಯೇ ರಾಣಿಯು ದೇವಾಲಯವನ್ನೂ ಅದಕ್ಕೆ ಸಂಬಂಧಪಟ್ಟ ಆಸ್ತಿಯನ್ನೂ ಒಬ್ಬ ಬ್ರಾಹ್ಮಣನಿಗೆ ದಾನಮಾಡಿ, ಆತನಿಂದ ದೇವಿಯ ಪ್ರತಿಷ್ಠೆ ಮಾಡಿಸಿದರೆ ಶಾಸ್ತ್ರ ನಿಯಮಕ್ಕೆ ವಿರೋಧವಾದಂತಾಗುವುದಿಲ್ಲ. ಬ್ರಾಹ್ಮಣರೇ ಮೊದಲಾದ ಉಚ್ಚವರ್ಣದವರೂ ಆ ಮೂರ್ತಿಯ