ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಇಂಗ್ಲಿಷ್ ಸಾಹಿತ್ಯ

ವಿಕಿಸೋರ್ಸ್ದಿಂದ

ಇಂಗ್ಲಿಷ್ ಸಾಹಿತ್ಯ[ಸಂಪಾದಿಸಿ]

ಆಂಗ್ಲೊ ಸ್ಯಾಕ್ಸನರ ಯುಗ:[ಸಂಪಾದಿಸಿ]

ಇಂಗ್ಲಿಷ್ ಭಾಷೆಯಂತೆಯೇ ಇಂಗ್ಲಿಷ್ ಸಾಹಿತ್ಯವೂ ಆಂಗ್ಲೋಸ್ಯಾಕ್ಸನರಿಂದ ಆರಂಭವಾಯಿತು. ಆಂಗ್ಲೋಸ್ಯಾಕ್ಸನರು ಸ್ಕಾಂಡಿನೇವಿಯ ಪ್ರದೇಶದಿಂದ ಬ್ರಿಟನ್ನಿಗೆ ಬಂದಾಗ ತಮ್ಮ ತಂಡಗಳಲ್ಲಿ ಪ್ರಚಾರದಲ್ಲಿದ್ದ ಹಾಡುಗಬ್ಬಗಳನ್ನು ನೆನೆಪಿನಲ್ಲಿಟ್ಟುಕೊಂಡು ತಂದಿದ್ದರು. ಆ ಹಾಡುಗಳು ಮೂರು ನಾಲ್ಕು ಶತಮಾನಗಳ ಕಾಲ ಬಾಯಿಂದ ಬಾಯಿಗೆ ಬಂದು ಕ್ರಮೇಣ ಲಿಖಿತ ರೂಪಕ್ಕಿಳಿದುವು. ಹೀಗೆ ಅವನ್ನು ಬರೆವಣಿಗೆಗಿಳಿಸಿದವರು ಕ್ರೈಸ್ತಮಠಗಳ ಸನ್ಯಾಸಿಗಳು. ಕ್ರೈಸ್ತ ಮತ ಇಂಗ್ಲೆಂಡಿಗೆ ಎರಡು ದಿಕ್ಕುಗಳಿಂದ ಬಂದಿತು. ದೊಡ್ಡ ಪ್ರಮಾಣದಲ್ಲಿ ಅದು ಬಂದುದು ಕ್ರಿ.ಶ. 597ರಲ್ಲಿ, ಆಗ್ನೇಯದಿಂದ, ಸಂತ ಆಗಸ್ಟೀನನ ಮೂಲಕ. ಇದಕ್ಕೆ ಮೊದಲೇ ಉತ್ತರದಲ್ಲಿ ಐರ್ಲೆಂಡಿನಿಂದ ಕೆಲವರು ಪಾದ್ರಿಗಳು ಬಂದು ಅಲ್ಲಲ್ಲಿ ಕ್ರೈಸ್ತ ಮತವನ್ನು ಜನಗಳಿಗೆ ಪರಿಚಯಮಾಡಿಕೊಟ್ಟಿದ್ದರು. ಮಠಗಳನ್ನೂ ಸ್ಥಾಪಿಸಿದ್ದರು. ಈ ಮಠಗಳಲ್ಲಿದ್ದ ಸಂತರು; ಆಂಗ್ಲೋಸ್ಯಾಕ್ಸನರ ಕಾವ್ಯವನ್ನು ಒಂಬತ್ತನೆಯ ಶತಮಾನದಲ್ಲಿ ಬರೆದಿಟ್ಟರೆಂದು ಪ್ರತೀತಿಯಿದೆ. ಈ ಕೆಲವು ಕವನಗಳಲ್ಲಿದ್ದ ಯುದ್ಧದ ವರ್ಣನೆಗಳ ತೀವ್ರತೆಯನ್ನು ಸ್ವಲ್ಪಮಟ್ಟಿಗೆ ಕಡಿಮೆಮಾಡಲೆಳಸಿರುವುದೇ ಇದಕ್ಕೆ ಸಾಕ್ಷಿ. ಹೀಗೆ ಬಂದಿರುವ ಆಂಗ್ಲೋಸ್ಯಾಕ್ಸನರ ಕವನಗಳಲ್ಲಿ ಅತ್ಯಂತ ಮುಖ್ಯವಾದುದು ಬ್ಯೋವುಲ್ಫ್. ಇದು ಇಂಗ್ಲಿಷ್ ಜನರ ಏಕೈಕ ಮಹಾಕಾವ್ಯ. ಬ್ಯೋಪುಲ್ಫ್ ಎಂಬ ವೀರ ಹ್ರಾತ್ಗಾರ್ ಎಂಬ ರಾಜನಿಗೂ ಅವನ ಆಸ್ಥಾನಿಕರಿಗೂ ಮಾರಕವಾಗಿದ್ದ ಗ್ರ್ರೆಂಡಲ್ ಎಂಬ ಕಡಲಭೂತವೊಂದನ್ನು ಅದರ ಹುದುಗುದಾಣಕ್ಕೇ ಹೋಗಿ ಕೊಂದುದಲ್ಲದೆ, ಅನಂತರ ತನ್ನವರಿಗೆ ತೊಂದರೆಕೊಡುತ್ತಿದ್ದ ಬೆಂಕಿಯುಗುಳುವ ರಾಕ್ಷಸಪ್ರಾಣಿಯೊಂದನ್ನು ಸಂಹರಿಸಹೋಗಿ ಅದನ್ನು ಕೊಂದರೂ ಅದರ ಉಸಿರುತಾಕಿ ತಾನೂ ಪ್ರಾಣಬಿಟ್ಟ ಕಥೆ ಇದು. ಆಂಗ್ಲೋಸ್ಯಾಕ್ಸನರು ಕಡಲಿನ ಮೇಲೆ ಸ್ಥಾಪಿಸಿದ ನೌಕಾಪ್ರಭುತ್ವದ ಸಾಂಕೇತಿಕ ಚಿತ್ರವೆಂದು ಪರಿಗಣಿಸಲಾಗಿದೆ. ಅದಲ್ಲದೆ ಅವರ ಸಾಮಾಜಿಕ ಜೀವನದ ಆಕರ್ಷಕ ಚಿತ್ರಗಳೂ ಈ ಕಾವ್ಯದಲ್ಲಿ ದೊರೆಯುತ್ತವೆ. ಈ ಕವನವಲ್ಲದೆ ಒಂದೆರಡು ಭಾವಗೀತೆಗಳೂ ಆಂಗ್ಲೋಸ್ಯಾಕ್ಸನರಿಂದ ಬಂದಿವೆ. ಎಡ್‍ಸಿತ್, ಡಿಯೋರ್ಸ್ ಕಂಪ್ಲೇಂಟ್ ಎಂಬುವು ಇವುಗಳಲ್ಲಿ ಮುಖ್ಯವಾದುವು. ಇವೆರಡರಲ್ಲೂ ಶೋಕದ ಧ್ವನಿಯಿದೆ. ದೇಶಬಿಟ್ಟು ದೂರ ಹೋಗಿ ಕೊನೆಯಿಲ್ಲದ ಅಲೆದಾಟಕ್ಕೆ ಗುರಿಯಾಗಿರುವ ಹಾಡುಗಾರನೊಬ್ಬನ ಕಷ್ಟಗಳ ವರ್ಣನೆ ಎಡ್‍ಸಿತ್ ತನ್ನ ಪ್ರತಿಸ್ಪರ್ಧಿಯೊಬ್ಬನ ಉತ್ಕರ್ಷದಿಂದ ತಾನು ಹೊರದೂಡಲ್ಪಟ್ಟು ಗತಿಗೆಟ್ಟಿರುವ ಆಸ್ಥಾನದ ಹಾಡುಗಾರನೊಬ್ಬನ ಸಂಕಟದ ಅಭಿವ್ಯಕ್ತಿಯನ್ನು 'ಡಿಯೋರ್ಸ್ ಕಂಪ್ಲೇಂಟ್‍ನಲ್ಲಿ ಕಾಣಬಹುದು. 'ದಿ ಸೀ ಫೇರರ್ ಎಂಬ ಇನ್ನೊಂದು ಕವನ ಸಮುದ್ರಯಾನದಲ್ಲಿ ಆಂಗ್ಲೋಸ್ಯಾಕ್ಸನರಿಗಿದ್ದ ಆಸಕ್ತಿಯನ್ನು ಸೂಚಿಸುತ್ತದೆ. ಇವಲ್ಲದೆ 'ದಿ ಹಸ್ಬೆಂಡ್ಸ್ ಮೆಸೇಜ್ ಎಂಬ ಪ್ರಣಯ ಕವನವೂ ಒಗಟುಗಳನ್ನೊಳಗೊಂಡ ಕೆಲವು ಸಣ್ಣಕವಿತೆಗಳೂ ಆ ಕಾಲದಿಂದ ಬಂದಿವೆ. ದಿ ರೂಯಿನ್ ಎಂಬ ಕವನದ ವಿಷಯ ಪಾರ್ಥಿವ ವಸ್ತುಗಳ ಅಶಾಶ್ವತತೆ.

ಆಂಗ್ಲೊ ಸ್ಯಾಕ್ಸನರ ಕಾಲದಲ್ಲಿ ಕ್ರೈಸ್ತ ಮತಕ್ಕೆ ಸಂಬಂಧಪಟ್ಟ ಕಾವ್ಯವೂ ಸೃಷ್ಟಿಯಾಯಿತು. ಉತ್ತರದ ವ್ಹಿಟ್ಟೆ ಮತ್ತು ಜಾರೋ ಎಂಬ ಸ್ಥಳಗಳಲ್ಲಿನ ಕ್ರೈಸ್ತ ಮಠಗಳಲ್ಲಿ ಅದು ನಡೆದುದು. ಕ್ಯಾಡ್‍ಮನ್ ಮತ್ತು ಕೈನ್‍ವುಲ್ಫ್ ಆ ಗುಂಪಿಗೆ ಸೇರಿದ ಮುಖ್ಯ ಕವಿಗಳು. ಕೇಡ್‍ಮನ್ ಬೈಬಲಿನಲ್ಲಿ ಉಕ್ತವಾಗಿರುವ ಜಗತ್ತಿನ ಸೃಷ್ಟಿಯನ್ನೂ ಕೈನ್‍ವುಲ್ಫ್ ಏಸುಕ್ರಿಸ್ತನ ಚರಿತ್ರೆ ಮತ್ತು ಬೋಧನೆಗಳನ್ನೂ ತಮ್ಮ ಕವಿತೆಗಳಲ್ಲಿ ವರ್ಣಿಸಿದ್ದಾರೆ. ಕ್ಯಾಡ್‍ಮನ್ನನೇ ಇಂಗ್ಲೆಂಡಿನ ಮೊಟ್ಟಮೊದಲ ಕವಿ ಎನ್ನಬಹುದು. ಕೈನ್‍ವುಲ್ಪ್‍ನ 'ದಿ ಡ್ರೀಮ್ ಆಫ್ ದಿ ರೂಡ್ ತನ್ನ ಕರ್ತನ ತೀವ್ರವಾದ ಧರ್ಮಾಭಿಮಾನವನ್ನು ಹೊರಸೂಸುತ್ತದೆ. ಜಾರೊ ಮಠದಲ್ಲಿದ್ದ ಬೀಡೆ (ಅಥವಾ ಬಿಢಾ-673-735) ಇಂಗ್ಲೆಂಡಿನಲ್ಲಿ ಕ್ರೈಸ್ತಮತದ ಬೆಳವಣಿಗೆಯ ಚರಿತ್ರೆಯನ್ನು 'ಎಕ್ಸೆಸಿಯಾಸ್ಟಿಕಲ್ ಹಿಸ್ಟರಿ ಆಫ್ ಇಂಗ್ಲೆಂಡ್‍ನಲ್ಲಿ ಬರೆದಿದ್ದಾನೆ. ಇದನ್ನು ಬರೆದಿರುವುದು ಲ್ಯಾಟಿನ್ ಭಾಷೆಯಲ್ಲಿ.

ಇಂಗ್ಲಿಷಿನಲ್ಲೇ ಗದ್ಯವನ್ನು ತಂದವನು ಆಲ್ಫ್ರೆಡ್ ದೊರೆ (871-901). ದಕ್ಷಿಣದ ವೆಸೆಕ್ಸ್ ಪ್ರಾಂತ್ಯದಲ್ಲಿ ಆಳಿದ ಆಲ್ಫ್ರೆಡ್ ಇಂಗ್ಲೆಂಡಿಗೆ ಮುತ್ತಿಗೆ ಹಾಕಿ ತಮ್ಮ ಅಧಿಪತ್ಯವನ್ನು ಸ್ಥಾಪಿಸುತ್ತಿದ್ದ ಡೇನರೊಡನೆ ಒಪ್ಪಂದ ಮಾಡಿಕೊಂಡು ತನ್ನ ರಾಜ್ಯದಲ್ಲಿ ಶಾಂತಿಸ್ಥಾಪನೆಗೈದಿದ್ದ. ಆತ ಜನಹಿತ ಸಾಧನೆಗಾಗಿ ಮಾಡಿದ ಕೆಲಸಗಳಿಗಾಗಿ ಇಂಗ್ಲಿಷ್ ಚರಿತ್ರೆಯಲ್ಲಿ ಅವನಿಗೆ ಮಹಾಶಯ (ದಿ ಗ್ರೇಟ್) ಎಂಬ ಬಿರುದು ಬಂದಿದೆ. ಆತ ಮಾಡಿದ ಕೆಲಸಗಳಲ್ಲಿ ಮುಖ್ಯವಾದುದ್ದು ತನ್ನ ಪ್ರಜೆಗಳಲ್ಲಿ ವಿದ್ಯೆಯನ್ನು ಹರಡಲು ಪ್ರಸಿದ್ಧವಾದ ಕೆಲವು ಲ್ಯಾಟಿನ್ ಕೃತಿಗಳನ್ನು ಇಂಗ್ಲಿಷಿಗೆ ಭಾಷಾಂತರ ಮಾಡಿದ್ದು, ಮಾಡಿಸಿದ್ದು. ಪೋಪ್ ಗ್ರಗೊರಿಯ 'ಪ್ಯಾಸ್ಟೊರಲ್ ಕ್ಯೂರ್, ಒರೋಸಿಯಸ್ಸನ ಚರಿತ್ರೆ, ಬೀಥಿಯಸ್ಸನ 'ಕಾನ್ಸೊಲೇಷನ್ಸ್ ಆಫ್ ಫಿಲಾಸಫಿ ಮತ್ತು ಬೀಡೆಯ 'ಎಕ್ಲೆಸಿಯಾಸ್ಟಿಕಲ್ ಹಿಸ್ಟರಿ'-ಇವು ಆ ಅನುವಾದಿತ ಗ್ರಂಥಗಳು. ಇವಲ್ಲದೆ ಆಲ್ಪ್ರೆಡ್ ತನ್ನ ರಾಜ್ಯದಲ್ಲಿ ದಿನ ದಿನವೂ ನಡೆಯುತ್ತಿದ್ದ ಘಟನೆಗಳನ್ನು ವಿವರಿಸುವ 'ದಿ ಸ್ಯಾಕ್ಸನ್ ಕ್ರಾನಿಕಲ್ ಎಂಬ ವರದಿ ರೂಪದ ದಿನಚರಿ ಗ್ರಂಥವನ್ನು ಆರಂಭಮಾಡಿಸಿದ. ನೂರಾರು ವರ್ಷಗಳು ಬೆಳೆದ ಈ ಗ್ರಂಥ ಆ ಕಾಲದ ಚರಿತ್ರೆಗೆ ಮಾತ್ರವೇ ಅಲ್ಲದೆ ಭಾಷೆಯ ಬೆಳವಣಿಗೆಗೂ ಕನ್ನಡಿಯಾಗಿದೆ. ಏಲ್ಪ್ರಿಕ್ ಎಂಬ ವ್ಯಾಕರಣಕರ್ತೃ ಮತ್ತು ವುಲ್ಪ್‍ಸ್ಟನ್ ಎಂಬ ಧರ್ಮಬೋಧಕ ಅಂದಿನ ಇನ್ನಿಬ್ಬರು ಗದ್ಯಲೇಖಕರು. ಮಧ್ಯಯುಗ-ಫ್ರೆಂಚ್ ಪ್ರಭಾವ :

1066 ರಿಂದ 1500 ಮಧ‍್ಯ ಅವಧಿ[ಸಂಪಾದಿಸಿ]

ಇಂಗ್ಲಿಷ್ ಸಾಹಿತ್ಯ ಚರಿತ್ರೆಯ ಮಧ್ಯಯುಗದ ಅವಧಿ ಸುಮಾರು 1066 ರಿಂದ 1500ರ ವರೆಗೆ ಎಂದು ಇಟ್ಟುಕೊಳ್ಳಬಹುದು. ನಾರ್ಮನ್ನರು ಇಂಗ್ಲೆಂಡಿಗೆ ಮುತ್ತಿಗೆ ಹಾಕಿ ಗೆದ್ದು ತಮ್ಮ ಪ್ರಭುತ್ವವನ್ನು ಸ್ಥಾಪಿಸಿದ್ದು 1066ರಲ್ಲಿ. ಆದರೆ ಅದಕ್ಕೆ ಸ್ವಲ್ಪ ಮೊದಲೇ ಇಂಗ್ಲೆಂಡಿನಲ್ಲಿ ನಾರ್ಮನರ ಪ್ರಭಾವ ಆರಂಭವಾಗಿತ್ತೆಂದು ಹೇಳಬಹುದು. ಅದರೊಡನೆ ಇಂಗ್ಲಿಷ್ ಸಾಹಿತ್ಯಕ್ಕೆ ಅದರಲ್ಲಿ ಅದುವರೆಗೂ ಇಲ್ಲದಿದ್ದ ಕೆಲವು ಲಕ್ಷಣಗಳು ಬಂದುವು. ಆಂಗ್ಲೊ ಸ್ಯಾಕ್ಸನರ ಕಾವ್ಯದಲ್ಲಿ ಹಗುರವೂ ಹರ್ಷಮಯವೂ ಆದ ಕವಿತೆಯಿರಲಿಲ್ಲ. ಅವರು ಗಂಭೀರ ಸ್ವಭಾವದ ವೀರರು. ಲವಲವಿಕೆಯಿಂದ ಕೂಡಿದ ಜೀವನ, ಬಣ್ಣ ಬಣ್ಣದ ಪ್ರಕೃತಿ ಚಿತ್ರಗಳು, ಪ್ರಣಯಗೀತೆಗಳು, ನೃತ್ಯಗೀತೆಗಳು-ಮೊದಲಾದುವು ಇಂಗ್ಲೆಂಡಿಗಿಂತಲೂ ಹೆಚ್ಚು ಪ್ರಕಾಶಯುತವಾದ ವಾಯುಗುಣವುಳ್ಳ ಫ್ರಾನ್ಸಿನಿಂದ ಇಂಗ್ಲಿಷ್ ಸಾಹಿತ್ಯ ಪ್ರಪಂಚಕ್ಕೆ ಬಂದುವು. ಆಂಗ್ಲೊ ಸ್ಯಾಕ್ಸನರಿಗಿಂತಲೂ ಹಿಂದೆ ಬ್ರಿಟನ್ನಿನಲ್ಲಿದ್ದ ಕೆಲ್ಟರ ಐತಿಹ್ಯಗಳನ್ನು ಸಂಗ್ರಹಿಸಿ ಬರೆದಿಟ್ಟವರೂ ನಾರ್ಮನ್ನರೇ, ಆರ್ಥರ್ ದೊರೆಯ ಮತ್ತು ಅವನ ಯೋಧರ ಸ್ವಾರಸ್ಯಮಯ ಕಥೆಗಳು ಈ ಕಾಲದಲ್ಲಿ ರೂಪಿತವಾದವು. ಇಂಗ್ಲೆಂಡಿನ ರಾಷ್ಟ್ರೀಯ ಐತಿಹ್ಯಗಳೆನ್ನಬಹುದಾದ ಈ ಕಥೆಗಳು ಇಂಗ್ಲಿಷ್ ಕವಿಗಳನ್ನು ಮತ್ತೆ ಮತ್ತೆ ಆಕರ್ಷಿಸಿವೆ. ಇದೇ ರೀತಿ ಇತರ ವೀರರ ಕಥೆಗಳನ್ನೂ ಪದ್ಯರೂಪದಲ್ಲಿ ನಿರೂಪಿಸುವ ಕಲೆಯನ್ನು ನಾರ್ಮನರು ಬೆಳೆಸಿಕೊಂಡಿದ್ದರು. ಮೆಟ್ರಿಕಲ್ ಕ್ರಾನಿಕಲ್ಸ್, ಮೆಟ್ರಿಕಲ್ ರೊಮಾನ್ಸಸ್ ಎಂದು ಹೆಸರು ಪಡೆದಿರುವ ಇಂಥ ವೀರ ಕವನಗಳನೇಕವು ಈ ಯುಗದ ಮೊದಲ ಭಾಗದಲ್ಲಿ ರಚಿತವಾದುವು. ಇವಲ್ಲದೆ ಧಾರ್ಮಿಕ ವಿಷಯಗಳಿಗೆ ಸಂಬಂಧಪಟ್ಟ ಕೃತಿಗಳೂ ವೈಯಕ್ತಿಕ ಭಾವಗಳನ್ನು ವ್ಯಕ್ತಪಡಿಸುವ ಕಾವ್ಯಗಳೂ ಕೆಲವು ಬಂದವು. ದಿ ಔಲ್ ಅಂಡ್ ದಿ ನೈಟಿಂಗೇಲ್, ದಿ ಕುಕು ಸಾಂಗ್, ಆಲಿಸಾನ್-ಇಂಥ ಕವಿತೆಗಳು. ಆದರೆ ಮಧ್ಯಯುಗದ ಇಂಗ್ಲಿಷ್ ಸಾಹಿತ್ಯದಲ್ಲಿ ಅತ್ಯುತ್ತಮವೆಂದು ಖ್ಯಾತಿವೆತ್ತಿರುವ ಕವನ ದಿ ಪೆರ್ಲ್ ಎಂಬುದು. ಜೀವನದ ಅಶಾಶ್ವತತೆ, ಸಹನೆಯ ಅಗತ್ಯ, ಆತ್ಮದ ಆಮತ್ರ್ಯತೆ, ಮರಣಾನಂತರದ ಜೀವನ-ಇವೆಲ್ಲವುಗಳೂ ಇದರಲ್ಲಿ ಸೂಚ್ಯರೀತಿಯಲ್ಲಿ ಪ್ರತಿಪಾದಿತವಾಗಿರುವುದಲ್ಲದೆ ಮಗಳ ಮರಣದಿಂದ ತಂದೆಯೊಬ್ಬ ಅನುಭವಿಸುವ ಸಹಜಸಂಕಟದ ಅಭಿವ್ಯಕ್ತಿಯೂ ಇದೆ. ಈ ಕಾಲದಲ್ಲೇ ರಚಿತವಾದ ದಿ ಹ್ಯಾರೋಯಿಂಗ್ ಆಫ್ ಹೆಲ್ ಎಂಬುದು ಬೈಬಲ್ ಕಥೆಗಳನ್ನು ಕಾವ್ಯ ರೂಪದಲ್ಲಿ ನಿರೂಪಿಸುವ ಕೃತಿಗಳಿಗೆ ಪ್ರತಿನಿಧಿಯಾಗಿದೆ. ಕ್ರೈಸ್ತಮತ ಹೇಗೆ ಇಂಗ್ಲೆಂಡಿನಲ್ಲೆಲ್ಲ ಹಬ್ಬಿ ಜನಮನ್ನಣೆ ಪಡೆದಿದ್ದಿತೆಂಬುದಕ್ಕೆ ಈ ಬಗೆಯ ಕವನಗಳು ಸಾಕ್ಷಿಗಳಾಗಿವೆ. ನಾರ್ಮನ್ನರಿಂದ ಇಂಗ್ಲಿಷ್ ಸಾಹಿತ್ಯಕ್ಕೆ ಆದ ಉಪಕಾರ ಇಷ್ಟಕ್ಕೇ ಮುಗಿಯಲಿಲ್ಲ. ಮೂರು ಶತಮಾನಗಳ ಕಾಲ ಫ್ರ್ರೆಂಚ್ ಭಾಷೆಯ ಪ್ರಭುತ್ವದ ಪರಿಣಾಮವಾಗಿ ಸಾವಿರಾರು ಫ್ರೆಂಚ್ ಪದಗಳು ಇಂಗ್ಲಿಷಿಗೆ ಬಂದು ಅದರ ಶಬ್ದಸಮೂಹವನ್ನೂ ವೈವಿಧ್ಯವನ್ನೂ ಶಕ್ತಿಯನ್ನೂ ಹೆಚ್ಚಿಸಿದವು. ಇದಲ್ಲದೆ ಹೊಸರೀತಿಯ ಛಂದಸ್ಸೂ ಫ್ರ್ರೆಂಚಿನಿಂದ ಇಂಗ್ಲಿಷಿಗೆ ಬಂದಿತು. ಆಂಗ್ಲೋಸ್ಯಾಕ್ಸನ್ ಛಂದಸ್ಸಿನ ಆಧಾರ ಆದ್ಯಕ್ಷರ ಪ್ರಾಸವುಳ್ಳ ಎರಡು ಮೂರು ಪದಗಳು ಪಂಕ್ತಿಯ ಮೊದಲರ್ಧದಲ್ಲೂ ಮತ್ತೆ ಅಷ್ಟೇ ಪದಗಳು ಎರಡನೆಯ ಭಾಗದಲ್ಲೂ ಇರಬೇಕೆನ್ನುವುದು ಆ ಕಾವ್ಯದ ಸಂಪ್ರದಾಯವಾಗಿತ್ತು. ಈಗ ಇಂಗ್ಲಿಷಿನಲ್ಲಿ ಬಳಕೆಯಲ್ಲಿರುವ ಪದಗಳ ಧ್ವನಿಯ ಒತ್ತಡವನ್ನು ಅನುಸರಿಸಿದ ಛಂದಸ್ಸನ್ನು ರೂಪಿಸುವ ಕ್ರಮ ಫ್ರ್ರೆಂಚ್ ಕಾವ್ಯದಿಂದ ಇಂಗ್ಲಿಷಿಗೆ ದತ್ತವಾದುದು. ಇದರಿಂದ ಇಂಗ್ಲಿಷ್ ಕಾವ್ಯ ಛಂದೋವೈವಿಧ್ಯವನ್ನೂ ನಾದಮಾಧುರ್ಯವನ್ನೂ ಪಡೆಯಲು ಸಾಧ್ಯವಾಯಿತು. ವಾಸ್ತವವಾಗಿ ಎಷ್ಟೋ ಫ್ರೆಂಚ್ ಛಂದಸ್ಸುಗಳೇ ಇಂಗ್ಲಿಷಿನಲ್ಲೂ ಬಳಕೆಗೆ ಬಂದುವು. ಇಂಗ್ಲೆಂಡಿನ ಹಿರಿಯ ಕವಿಗಳಲ್ಲಿ ಪ್ರಥಮನಾದ ಛಾಸರನೇ ಅವುಗಳಲ್ಲಿ ಕೆಲವನ್ನು ಫ್ರ್ರೆಂಚಿನಿಂದ ಇಂಗ್ಲಿಷಿಗೆ ತಂದ. ಛಾಸರ್

ಛಾಸರ್ (1340-1400) ಮಧ್ಯಯುಗದ ಇಂಗ್ಲಿಷ್ ಕವಿಗಳಲ್ಲಿ ಅಗ್ರೇಸರ. ಈ ಅವಧಿಯಲ್ಲಿ ಇಂಗ್ಲೆಂಡಿಗೂ ಫ್ರಾನ್ಸಿಗೂ ನೂರುವರ್ಷಗಳ ಯುದ್ಧ ನಡೆಯುತ್ತಿತ್ತು. ಈ ಯುದ್ಧ ಕೊನೆಗೊಂಡುದು ಹದಿನೈದನೆಯ ಶತಮಾನದ ಮಧ್ಯಭಾಗದ ಸುಮಾರಿಗೆ. ಅದೇ ವೇಳೆಗೆ ಮುಸ್ಲಿಮರು ಕಾನ್‍ಸ್ಟೆಂಟಿನೋಪಲ್ ಪಟ್ಟಣವನ್ನು ಹಿಡಿದು ಯೂರೋಪಿನ ಚರಿತ್ರೆಯಲ್ಲಿ ಹೊಸ ಅಧ್ಯಾಯವನ್ನು ಸ್ಥಾಪಿಸಿದರು. ತತ್ಪಲವಾಗಿ ಪಶ್ಚಿಮ ಯೂರೋಪಿನಲ್ಲಿ ರಿನೇಸಾನ್ಸ್ ಎಂಬ ಸಾಂಸ್ಕøತಿಕ ನವೋದಯದ ಚಳವಳಿ ಆರಂಭವಾಯಿತು. ಇಂಗ್ಲೆಂಡಿನಲ್ಲಿ ದೀರ್ಘ ಕಾಲದ ಯುದ್ಧದ ಪರಿಣಾಮವಾಗಿ ಜನ ಅಧಿಕ ತೆರಿಗೆ ಕೊಡಬೇಕಾದುದಲ್ಲದೆ ಇತರ ಕಷ್ಟಗಳಿಗೆ ಗುರಿಯಾಗಬೇಕಾಯಿತು. ಜೊತೆಗೆ ಪ್ಲೇಗ್ ರೋಗವೂ ತಲೆದೋರಿ ಅವರ ಸಂಕಟ ದುರ್ಭರವಾಗಿ ಅವರು ಕ್ರಿ.ಶ. 1381ರಲ್ಲಿ ದಂಗೆಯೆದ್ದರು. ಈ ದಂಗೆಯ ನಾಯಕ ಜಾನ್ ಬಾಲ್ ತನ್ನ ಭಾಷಣಗಳಲ್ಲಿ ಮತ್ತೆ ಮತ್ತೆ ಬಳಸುತ್ತಿದ್ದ ಒಂದು ದ್ವಿಪದಿ ಪ್ರಸಿದ್ಧವಾಗಿದೆ.

Where Adam dvelved and Eve span

Whi wad there the gentleman ?

(ಈವ್ ಮತ್ತು ಆಡಂ ಮನುಕುಲದ ಮಾತಾಪಿತೃಗಳು. ಅವರು ಕಷ್ಟಪಟ್ಟು ಕೆಲಸಮಾಡುತ್ತಿದ್ದರು. ಆಡಂ ಅಗೆಯುತ್ತಿದ್ದ, ಈವ್ ನೂಲುತ್ತಿದ್ದಳು. ಆಗ ದೊಡ್ಡ ಮನುಷ್ಯರು ಯಾರು ಇದ್ದರು?) ದಿ ಪೆಸೆಂಟ್ಸ್ ರಿವೋಲ್ಟ್ ಎಂದು ಪ್ರಸಿದ್ಧವಾಗಿರುವ ಈ ದಂಗೆಯ ಫಲವಾಗಿ ಜನಸಾಮಾನ್ಯರ ಪ್ರಾಮುಖ್ಯ ಹೆಚ್ಚಿತು ಎಲ್ಲರೂ ಸಮ ಎಂಬ ಭಾವನೆ ಬೆಳೆಯಿತು. ಧಾರ್ಮಿಕ ವಿಚಾರಗಳಲ್ಲೂ ಬದಲಾವಣೆ ತಲೆದೋರಿ ಅನೀತಿಯುತರಾದ ಪಾದ್ರಿಗಳು ಮೊದಲಾದವರ ವಿರುದ್ಧವಾಗಿ ಸಾರ್ವಜನಿಕಾಭಿಪ್ರಾಯ ಪ್ರಬಲವಾಯಿತು, ವೈಯಕ್ತಿಕ ನೈತಿಕಜೀವನಕ್ಕೆ ಪ್ರಾಶಸ್ತ್ಯ ಹೆಚ್ಚಿತು.

ಜಾನ್ ವಿಕ್ಲಿಫ್ ಮತ್ತು ಜಫ್ರಿಛಾಸರ್[ಸಂಪಾದಿಸಿ]

ಹೀಗೆ ಬದಲಾಯಿಸಿದ ಮನೋದೃಷ್ಟಿ ಮತ್ತು ಪರಿಸ್ಥಿತಿಗಳು ಆ ಕಾಲದ ಮುಖ್ಯ ಲೇಖಕರಲ್ಲಿ ಪ್ರತಿಬಿಂಬಿತವಾಗಿದೆ. ಜಾನ್ ವಿಕ್ಲಿಫ್, ವಿಲಿಯಂ ಲ್ಯಾಂಗ್ಲಂಡ್, ಜಾನ್ ಗವರ್ ಮತ್ತು ಜಫ್ರಿಛಾಸರ್-ಇವರೇ ಆ ಲೇಖಕರು. ವಿಕ್ಲಿಫ್ ಗದ್ಯ ಲೇಖಕ, ಧರ್ಮಸುಧಾರಕ. ಚರ್ಚಿನ ವಲಯಗಳಲ್ಲಿ ಎದ್ದು ಕಾಣುತ್ತಿದ್ದ ಅನೀತಿಯನ್ನೂ ಸುಖಲೋಲುಪತೆಯನ್ನೂ ಕಂಡು ಬೇಸತ್ತು ಲೊಲ್ಲಾಡ್ರ್ಸ್ ಎಂಬ ಧರ್ಮಪ್ರಚಾರಕರ ಹೊಸ ತಂಡವನ್ನೇ ಆರಂಭಿಸಿದ. ತನ್ನ ಕಾಲದ ಧಾರ್ಮಿಕ ಅವನತಿಯನ್ನು ಕುರಿತು ಬರೆದುದಲ್ಲದೆ ಬೈಬಲಿನ ಹೊಸ ಒಡಂಬಡಿಕೆಯ ಕೆಲವು ಭಾಗಗಳನ್ನು ಇಂಗ್ಲಿಷಿಗೆ ಭಾಷಾಂತರಿಸಿದ. ಇಂಗ್ಲಿಷಿನಲ್ಲಿರುವ ಬೈಬಲಿನ ಭಾಷಾಂತರಗಳಲ್ಲಿ ಇದು ಮೊದಲನೆಯದು. ವಿಲಿಯಂ ಲ್ಯಾಂಗ್ಲಂಡ್ ಜನತಾಕವಿ. ದಿ ವಿಷನ್ ಆಫ್ ಪಿಯರ್ಸ್ ದಿ ಪ್ಲೌಮನ್ ಎಂಬ ತನ್ನ ಕವನದಲ್ಲಿ ಸಮಕಾಲೀನ ಸಾಮಾಜಿಕ ಆರ್ಥಿಕ ಮತ್ತು ಧಾರ್ಮಿಕ ಪರಿಸ್ಥಿತಿಗಳನ್ನು ರೂಪಕವಾಗಿ, ಪರೋಕ್ಷವಾಗಿ ಚಿತ್ರಿಸಿದ್ದಾನೆ. ಪಿಯರ್ಸ್ ಪ್ಲೌಮನ್ ಎಂಬಾತ ಗುಡ್ಡವೊಂದರ ಮೇಲೆ ಮಲಗಿ ನಿದ್ದೆ ಹೋದಾಗ ಕನಸಿನಲ್ಲಿ ಒಂದು ಪರಿಷೆಯನ್ನು ಕಾಣುತ್ತಾನೆ. ಅದರಲ್ಲಿ ನಾನಾತರದ ಜನ ಸಮಾಜದ ಬೇರೆಬೇರೆ ಭಾಗಗಳ ಪ್ರತಿನಿಧಿಯಾಗಿ ಕಾಣಿಸಿಕೊಳ್ಳುತ್ತಾರೆ. ಕವಿಯಿರುವುದು ಬಡವರ ಕಡೆ. ಜಾನ್‍ಗವರ್ ಶ್ರೀಮಂತ ಕವಿ. ಆತ ತನ್ನ ವಾಕ್ಸ್ ಕ್ಲಮ್ಯಾಂಟಿಸ್ ಎಂಬ ಇಂಗ್ಲಿಷ್ ಕವನದಲ್ಲಿ ಜನಸಾಮಾನ್ಯರ ದಂಗೆಯನ್ನು ವರ್ಣಿಸಿ ಅವರ ಬೇಡಿಕೆಗಳನ್ನು ನರಿಗಳ ಕೂಗಿಗೆ ಹೋಲಿಸಿದ್ದಾನೆ. ಕನ್‍ಫೆಸಿಯೋ ಆಮ್ಯಾಂಟಿಸ್ ಎಂಬ ಫ್ರೆಂಚ್ ಕವನವನ್ನೂ ಸ್ವೆಕ್ಯುಲಂ ಮೆಡಿಟ್ಯಾಂಟಿಸ್ ಎಂಬ ಲ್ಯಾಟಿನ್ ಕವನವನ್ನೂ ಆತ ಬರೆದ. ಆತ ಒಂದೊಂದು ಭಾಷೆಯಲ್ಲಿ ಒಂದೊಂದು ಕವನ ರಚಿಸಿರುವುದನ್ನು ನೋಡಿದರೆ ಯಾವುದರಲ್ಲಿ ಕೃತಿ ರಚನೆ ಮಾಡಬೇಕೆಂದು ಅವನ ಮನಸ್ಸಿಗೇ ನಿರ್ಧಾರವಾಗಿಲ್ಲವೆನ್ನಬೇಕು. ಛಾಸರನ ವಿಷಯದಲ್ಲಿ ಇಂತ ಸಂಶಯಕ್ಕೆ ಅವಕಾಶವೇ ಇಲ್ಲ. ಆತ ಮೊದಲಿನಿಂದಲೂ ಇಂಗ್ಲಿಷಿನಲ್ಲೇ ಬರೆದ. ಆರಂಭದಲ್ಲಿ ರೂಪಕಾವ್ಯದಿಂದ ಮೋಹಿತನಾಗಿ ಹೌಸ್ ಆಫ್ ಫೇಮ್ ಎಂಬ ಕವನವನ್ನು ಬರೆದರೂ ಅನಂತರ ತನ್ನ ಕಾಲದ ಇಂಗ್ಲಿಷ್ ಸಮಾಜದ ವಿವಿಧ ಚಿತ್ರಗಳನ್ನು ದಿ ಕ್ಯಾಂಟರ್ಬರಿ ಟೇಲ್ಸ್ ಎಂಬ ಹೆಸರಾಂತ ಕೃತಿಯಲ್ಲಿ ಕೊಟ್ಟಿದ್ದಾನೆ. ಬೆಕೆಟ್ ಎಂಬ ಸಂತನ ಸಮಾಧಿಯಿರುವ ಕ್ಯಾಂಟರ್ಬರಿಗೆ ಅಗುತ್ತಿದ್ದ ಯಾತ್ರಿಕರ ತಂಡದವರು ಹೇಳುವ ಕಥೆಗಳೆ ಈ ಕೃತಿಯ ವಸ್ತು. ಅವರೆಲ್ಲರನ್ನೂ ವರ್ಣಿಸುವ ಪ್ರೊಲೋಗ್ ಎಂಬ ಪೀಠಿಕಾಕವನ ಬಹಳ ಪ್ರಸಿದ್ಧವಾಗಿದೆ. ಅಂದಿನ ಇಂಗ್ಲೆಂಡಿನಲ್ಲಿ ಕಾಣಿಸಿಕೊಂಡಿದ್ದ ಹೊಸ ವೃತ್ತಿಗಳ, ವ್ಯಕ್ತಿಗಳ ಸ್ವಾಭಾವಿಕ ಚಿತ್ರಗಳನ್ನು ನಾವು ಈ ಕವನದಲ್ಲಿ ಕಾಣುತ್ತೇವೆ. ಮಾನವಸ್ವ ಭಾವದ ವೈವಿಧ್ಯ, ವೈಚಿತ್ರಗಳಲ್ಲಿ ಛಾಸರನಿಗೆ ಖುಷಿ. ಸಮಾಜವನ್ನು ಚಿತ್ರಿಸುವುದರಲ್ಲಿ ಛಾಸರನ ದೃಷ್ಟಿ ವಿಚಾರಪರನ ದೃಷ್ಟಿಯಾಗಿದ್ದು, ತಾನು ಮಧ್ಯಕ್ಕೆ ಸೇರಿದ್ದರೂ ಅತ್ಯಾಧುನಿಕನಾದ ಸಮೀಕ್ಷಕನ ಮನೋಧರ್ಮವನ್ನು ಇಲ್ಲಿ ಪ್ರದರ್ಶಿಸುತ್ತಾನೆ. ಇವನದು ನವಿರಾದ ಹಾಸ್ಯ. ಇವನ ಛಂದೋನಿರ್ವಹಣ ಸಮರ್ಪಕವಾಗಿದ್ದು, ಇಂಗ್ಲಿಷಿಗೆ ಇದ್ದ ಅನೇಕ ಫ್ರೆಂಚ್ ಪದಗಳ ಮತ್ತು ಛಂದಸ್ಸುಗಳ ಬಳಕೆ ಕಂಡುಬರುತ್ತದೆ. ಕಂಪ್ಲೇಂಟ್ ತು ಹಿಸ್ ಪರ್ಸ್, ದಿ ಬುಕ್ ಆಫ್ ದಿ ಡಚಸ್ ಎಂಬ ಗೀತರೂಪದ ಪದ್ಯಗಳನ್ನು ಈತ ಬರೆದಿದ್ದಾನೆ. ಇವನ ಸಾಧನೆಯು ಮಿಡ್‍ಲೆಂಡ್ ಉಪಭಾಷೆಯನ್ನು ಇಂಗ್ಲೆಂಡಿನಲ್ಲಿ ಸಾಹಿತ್ಯದ ಮಾಧ್ಯಮವಾಗಿ ನಿಶ್ಚಿತಗೊಳಿಸಿತು. ಛಾಸರನ ಅನಂತರ 15ನೆಯ ಶತಮಾನದಲ್ಲಿ ಇಂಗ್ಲಿಷ್ ಉಚ್ಚಾರಣೆಯಲ್ಲಿ ಬದಲಾವಣೆ ನಡೆಯಿತು. ಪದಗಳಿಗೆ ವಿಭಕ್ತಿ ಪ್ರತ್ಯಯಗಳನ್ನು ಸೇರಿಸುವ ಪದ್ಧತಿ ಕ್ರಮೇಣ ನಿಂತುಹೋಗಿ ಕಾವ್ಯವ್ಯಾಸಂಗ ಮಾಡುವವರಿಗೂ ಕಾವ್ಯಲೇಖಕರಿಗೂ ಯಾವ ರೂಪ ಸರಿ, ಯಾವುದು ತಪ್ಪು ಎಂಬುದೇ ಅನಿರ್ದಿಷ್ಟವಾಯಿತು. ಜೊತೆಗೆ ಅನಿಶ್ಚಿತ ರಾಜಕೀಯ ಪರಿಸ್ಥಿತಿಯೂ ಒಂದಾಗುತ್ತಲೊಂದರಂತೆ ಬಂದ ಯುದ್ಧಗಳೂ ಸಾಹಿತ್ಯ ಸೃಷ್ಟಿಗೆ ಅಡಚಣೆಗಳಾಗಿದ್ದುವು. ಆದ್ದರಿಂದ ಆ ಯುಗದಲ್ಲಿ ಹೇಳಬಹುದಾದ ಇಂಗ್ಲಿಷ್ ಕವಿಗಳಾರೂ ಬರಲಿಲ್ಲ. ಛಾಸರ್ ಹಾಕಿಕೊಟ್ಟ ಹಾದಿಯಲ್ಲಿ ನಡೆದು ಕಾವ್ಯ ಮಾಡಿದವರೆಂದರೆ ಸ್ಕಾಟ್ಲೆಂಡಿನ ಕೆಲವರು : ಮೊದಲನೆಯ ಜೇಮ್ಸ್, ರ್ಕ್ ಹೆನ್ರಸನ್, ವಿಲಿಯಂ ಡನ್ ಬಾರ್, ಸರ್ ಡೇವಿಡ್ ಲಿಂಡ್ಸೆ. ದಿ ಕಿಂಗ್ಸ್ ರ್, ದಿ ಟೆಸ್ಟಮೆಂಟ್ ಆಫ್ ಕ್ರೆಸಿಡ್, ದಿ ಥಿಸಲ್ ಅಂಡ್ ದಿ ರೋಸ್, ದಿ - ಇವು ಕ್ರಮವಾಗಿ ಅವರ ಕೃತಿಗಳು. ಇವೆಲ್ಲವುಗಳಲ್ಲೂ ಗಮನಾರ್ಹವಾದ ಶಕ್ತಿ ಕಂಡುಬರುತ್ತದೆ. ಇಂಗ್ಲೆಂಡಿನಲ್ಲಿ ಛಾಸರನ ಪ್ರಭಾವಕ್ಕೆ ಒಳಗಾಗಿದವರೆಂದರೆ ಜಾನ್ ಲಿಡ್ ಗೇಟ್, ಥಾಮಸ್ ಅಕ್ಲೀವ್ ಮತ್ತು ಜಾನ್ ಸ್ಕೆಲ್ಟನ್. ಅಲ್ಲದೆ, ಸರ್ ಥಾಮಸ್ ಮ್ಯಾಲೊರಿ ಎಂಬ ಗದ್ಯಲೇಖನ ಮಾರ್ಟ್ ಡಿ ಅರ್ಥರ್ ಕಥೆಗಳ ಸಂಗ್ರಹವೂ ಈ ಶತಮಾನದ ದ್ವಿತೀಯಾರ್ಧದಲ್ಲಿ ಬಂತು. ಇನ್ನೂ ಇತರ ಕೆಲವು ಪುಸ್ತಕಗಳನ್ನೂ ವಿಲಿಯೋ ಕ್ಯಾಕ್ಸ್‍ಟನ್ ತನ್ನ ಹೊಸ ಮುದ್ರಣಾಲಯದಲ್ಲಿ ಮುದ್ರಿಸಿ ಇಂಗ್ಲೆಂಡಿನ ಪುಸ್ತಕ ಪ್ರಕಟಣೆಯ ಚರಿತ್ರೆಯಲ್ಲಿ ಹೊಸ ಹೆಜ್ಜೆಯಿಟ್ಟ. ಅಚ್ಚಿನ ಯಂತ್ರ ಬರುವ ಸಮಯಕ್ಕೆ ಸರಿಯಾಗಿ ರಿನೇಸಾನ್ಸ ಸಾಂಸ್ಕøತಿಕ ಉದಯ ಬಂದಿತು. ಪ್ರಾಚೀನ ಗ್ರೀಕ್ ಮತ್ತು ಲ್ಯಾಟಿನ್ ಸಾಹಿತ್ಯದ ಪರಿಚಯ ಇಟಲಿಯವರಿಗುಂಟಾಗಿ ತನ್ಮೂಲಕ ಹೊಸಬಗೆಯ ಸಾಹಿತ್ಯಸೃಷ್ಟಿ ಆರಂಭವಾಯಿತು. ಮಧ್ಯಯುಗದ ವಿದ್ವಜ್ಜನರ ವಿಚಾರದಲ್ಲಿ ನಿರ್ಲಕ್ಷ್ಯದಿಂದಿದ್ದರು. ಛಾಸರ್ ಇದಕ್ಕೊಂದು ಅಪವಾದವಾಗಿದ್ದ. ಆದರೆ ಅವನಿಗೆ ಅನುಯಾಯಿಗಳು ಇಲ್ಲ. ರಿನೇಸಾನ್ಸಿನ ಫಲವಾಗಿ ಜಗತ್ತಿನ ಸೌಂದರ್ಯ ಮತ್ತು ಇಹಜೀವನದ ಸ್ವಾರಸ್ಯ ಗ್ರೀಕ್ ಮತು ಲ್ಯಾಟಿನ ಸಾಹಿತ್ಯಗಳ ಮೂಲಕ ಜನರ ತಿಳಿವಳಿಕೆಗೆ ಮತ್ತೆ ಬಂದು ಅದರ ಮನೋದೃಷ್ಟಿಯಲ್ಲೇ ಒಂದು ದೊಡ್ಡ ಪರಿವರ್ತನೆಯುಂಟಾಯಿತು; ಸಾಹಿತ್ಯ ಸೃಷ್ಟಿ ಸುಗಮವಾಯಿತು. ಗ್ರೀಕ್ ಮತ್ತು ಲ್ಯಾಟಿನ್ ಕವಿಗಳು, ನಾಟಕಕಾರರು ಮೊದಲಾದವರ ಕೃತಿಗಳಂಥ ಕೃತಿಗಳನ್ನು ತಮ್ಮ ತಮ್ಮ ಭಾಷೆಗಳಲ್ಲೂ ರಚಿಸಬೇಕೆಂಬ ಬಯಕೆ ಮೂಡಿತು. ರಿನೇಸಾನ್ಸ್‍ನ ಪ್ರಭಾವ ಇಂಗ್ಲೆಂಡಿನಲ್ಲೂ ಕಾಣಿಸಿಕೊಳ್ಳತೊಡಗಿತು. ಹದಿನೈದನೆಯ ಶತಮಾನದ ಕೊನೆ ಮತ್ತು ಹದಿನಾರು ಮತ್ತು ಹದಿನೇಳನೆಯ ಶತಮಾನಗಳ ಮೊದಲ ಕೆಲವು ವರ್ಷಗಳು ಇಂಗ್ಲಿಷ್ ಸಾಹಿತ್ಯದಲ್ಲಿ ರಿನೇಸಾನ್ಸ ಯುಗ, ಹೊಸವಿಷಯಗಳು, ಹೊಸ ಸಾಹಿತ್ಯ ಪ್ರಕಾರ ಸೃಷ್ಟಿ, ಹೊಸ ದೃಷ್ಟಿ, ಜಗತ್ತಿನ ಸುಖಸೌಂದರ್ಯಗಳ ವಿಷಯದಲ್ಲಿ ಒಂದು ಉತ್ಸಾಹ-ಇವು ಈ ಯುಗದ ಮತ್ತು ಈ ಸಾಹಿತ್ಯದ ಹೆಗ್ಗುರುತುಗಳು. ಇಟಲಿಯಲ್ಲಿ ಪೆಟ್ರಾರ್ಕ್, ಬೊಕ್ಯಾಚಿಯೊ ಮೊದಲಾದವರಿಂದ ಆರಂಭವಾಗಿ ಟ್ಯಾಸೊ, ಷ್ಟೊ, ಮೊದಲಾದ ಕವಿಗಳಿಂದ ಮುಂದುವರಿಸಲ್ಪಟ್ಟ ಈ ವರ್ಗದ ಸಾಹಿತ್ಯ ಮೂರು ಶತಮಾನ ಇಂಗ್ಲಿಷ್ ಸಾಹಿತ್ಯದ ಮೇಲೆ ತನ್ನ ಪ್ರಭಾವವನ್ನು ಬೀರಿತು. ಕೋಲೆಟ್, ಎರಾಸ್ಮಸ್ ಮತ್ತು ಥಾಮಸ್ ಮೂರ್-ಇವರು ಇಂಗ್ಲೆಂಡಿಗೆ ಈ ಹೊಸ ವಿದ್ವತ್ತನ್ನು ತಂದವರು. ಜನರ ಜೀವನವನ್ನು ಉತ್ತಮವಾಗಿರಬೇಕೆಂದು ಎರಾಸ್ಮಸ್ ಮತ್ತು ಮೂರರ ಬಯಕೆಯಾಗಿತ್ತು. ಅದನ್ನು ತಮ್ಮ ಇನ್ ಪ್ರ್ಯೇಸ್ ಆಫ್ ಫಾಲಿ ಮತ್ತು ಯೋಟೋಪಿಯ ಗ್ರಂಥಗಳಲ್ಲಿ ವ್ಯಕ್ತಪಡಿಸಿದ್ದಾರೆ.

ಇಂಗ್ಲಿಷಿನಲ್ಲಿ ಹೊಸ ಕಾವ್ಯ[ಸಂಪಾದಿಸಿ]

ಇಂಗ್ಲಿಷಿನಲ್ಲಿ ಹೊಸ ಕಾವ್ಯವನ್ನು ತಂದವರು ಸರ್ ಥಾಮಸ್ ವಯಟ್ ಮತ್ತು ಆಫ್ ಸರ್ರೆ ಎಂಬುವರು. ಪೆಟ್ರಾರ್ಕನ ಕೆಲವು ಸಾನೆಟ್ಟುಗಳನ್ನು ವಯಟ್ ಇಂಗ್ಲಿಷಿಗೆ ಭಾಷಾಂತರಿಸಿದ. ತಾನೂ ಕೆಲವು ಭಾವಗೀತೆಗಳನ್ನು ಬರೆದ. ಸರ್ರೆವರ್ಜಿಲನ ಈನಿಯಡ್ ಕಾವ್ಯದ ಮೊದಲ ಎರಡು ಕಾಂಡಗಳನ್ನು ಅನುವಾದ ಮಾಡಿದ್ದಲ್ಲದೆ ತನ್ನದೇ ಆದ ಭಾವಗೀತೆಗಳನ್ನೂ ಸಾನೆಟ್ಟುಗಳನ್ನೂ ರಚಿಸಿದ. ಇಬ್ಬರೂ ಹೊಸ ಛಂದಸ್ಸುಗಳನ್ನು ಇಂಗ್ಲಿಷಿಗೆ ನೀಡಿದರು. ಸರಳರಗಳೆಯನ್ನು ಇಂಗ್ಲಿಷಿಗೆ ಕೊಟ್ಟವ ಸರ್ರೆ. ಇವರ ಕವಿತೆಗಳಲ್ಲದೆ ಲಿಲಿಯ ಯೂಫುಯಿಸ್, ಆಸ್ಕಮ್ನ ದಿ ಸ್ಕೂಲ್ ಮಾಸ್ಟರ್ ಮತ್ತು ಟಾಕ್ಸೊಫೈಲಸ್, ಎಲಿಯಟ್ಸ್‍ನ ದಿ ಗೌವರ್ನರ್ಸ ಬುಕ್ ಮೊದಲಾದ ಗ್ರಂಥಗಳೂ ರಿನೇಸಾನ್ಸಿನ ಪರಿಣಾಮವಾಗಿ ಜನರಲ್ಲಿ ಉಂಟಾದ ದೃಷ್ಟಿಬೇಧವನ್ನು ತೋರಿಸುತ್ತವೆ. ಮೊದಮೊದಲು ಗ್ರೀಕ್ ಮತ್ತು ಲ್ಯಾಟಿನ್ ಭಾಷೆಗೇ ಮಾರುಹೋಗಿದ್ದ ಲೇಖಕರೂ ವಿದ್ವಾಂಸರೂ ಬರಬರುತ್ತ ಹೊಸ ಬಗೆಯ ಸಾಹಿತ್ಯವನ್ನು ಸೃಷ್ಟಿಸಿದ್ದಕ್ಕೆ ಇವರು ನಿದರ್ಶನ ಒದಗಿಸುತ್ತಾರೆ. ಇವರಾರೂ ಉನ್ನತಮಟ್ಟದ ಲೇಖಕರಲ್ಲದಿದ್ದರೂ ಚಾರಿತ್ರಕವಾಗಿ ಮುಖ್ಯರು.

ಹದಿನಾರನೆಯ ಶತಮಾನದ ಪೂರ್ವಾರ್ಧ[ಸಂಪಾದಿಸಿ]

ಮೋರ್, ವಯಟ್, ಸರ್ರೆ, ಆಸ್ಕಮ್ ಇವರೆಲ್ಲರೂ ಹದಿನಾರನೆಯ ಶತಮಾನದ ಪೂರ್ವಾರ್ಧಕ್ಕೆ ಸೇರಿದವರು; ಎಂಟನೆಯ ಹೆನ್ರಿಯ ಆಸ್ಥಾನಿಕರು. ಅವನ ಕಾಲದಲ್ಲೇ ಇಂಗ್ಲೆಂಡಿಗೆ ಪ್ರಾಟೆಸ್ಟಂಟ್ ಮತ ಬಂದು ಕ್ರೈಸ್ತ ಮಠ ರೋಮನ್ ಕೆಥೊಲಿಕ್ ಮತ್ತು ಪ್ರಾಟೆಸ್ಟಂಟ್ ಎಂದು ಎರಡು ಪಂಗಡಗಳಾಗಿ ವಿಭಜಿತವಾಯಿತು. ಕಾಲಕ್ರಮೇಣ ಈ ಎರಡು ಪಂಗಡಗಳಿಗೂ ಬೆಳೆದ ವೈಷಮ್ಯ ಇಂಗ್ಲಿಷ್ ಸಾಹಿತ್ಯದಲ್ಲೂ ತನ್ನ ಪರಿಣಾಮವನ್ನು ತೋರದೆ ಹೋಗಿಲ್ಲ. ಹೆನ್ರಿ ನಿರಂಕುಶ ರಾಜನಾಗಿದ್ದ. ಅವನ ಜೀವನ ಅಷ್ಟೇನೂ ಶುದ್ಧವಾದದ್ದಾಗಲಿ ಸೌಂದರ್ಯಮಯವಾದದ್ದಾಗಲಿ ಆಗಿರಲಿಲ್ಲ. ಅವನ ಮಗಳು ಎಲಿಜಬೆತ್ತಳ ಆಳ್ವಿಕೆ ಇಂಗ್ಲೆಂಡಿನ ಚರಿತ್ರೆಯಲ್ಲಿ ಸುವರ್ಣಕಾಲವೆಂದು ಹೆಸರು ಪಡೆದಿದೆ. 1588ರಲ್ಲಿ ಸ್ಪೇನ್ ದೇಶದ ಅರ್ಮಡ ಎಂಬ ಮಹಾನೌಕಾತಂಡವೊಂದು ಬಂದು ಇಂಗ್ಲೆಂಡಿನ ತೀರಕ್ಕೆ ಮುತ್ತಿಗೆ ಹಾಕಿ ಸೋತು ದಿಕ್ಕುಪಾಲಾಗಿ ಓಡಿತು. ಅಂದಿನಿಂದ ಎಲಿಜಬೆತ್ತಳ ಸ್ಥಾನಭದ್ರವಾದುದಲ್ಲದೆ ಇಂಗ್ಲೆಂಡಿನ ಹಿರಿಮೆಯೂ ಹೆಚ್ಚಿ ವೈಭವಪೂರ್ಣವಾದ ರಾಷ್ಟ್ರಜೀವನಕ್ಕೆ ಮಾರ್ಗವಾಯಿತು. ದೇಶದ ಒಳಗೆ ಶಾಂತಿ, ವೈಭವ, ಹೊರಗೆ ಗೌರವ, ಸಮುದ್ರದಾಚೆ ಸಾಹಸಗಳಿಂದ ನೌಕಾಯಾನ ಮತ್ತು ಹೊಸದೇಶಗಳ, ಹೊಸವಸಾಹತುಗಳ ಸ್ಥಾಪನೆ-ಹೀಗೆ ನಾನಾರೀತಿಯಲ್ಲಿ ಜನರ ಜೀವನ ಮಹತ್ತರವಾಯಿತು. ಉದ್ವೇಗಪೂರ್ಣವಾಯಿತು.

ನಾಟಕ-ಷೇಕ್ಸ್‍ಪಿಯರ್, ಅವನ ಯುಗ:[ಸಂಪಾದಿಸಿ]

ಈ ಯುಗ ಇಷ್ಟು ಚೈತನ್ಯಮಯವಾದುದರಿಂದಲೇ ಇದರ ವಿಶಿಷ್ಟ ಸಾಹಿತ್ಯಪ್ರಕಾರ ನಾಟಕವಾದುದು. ಮಧ್ಯಯುಗದಲ್ಲೇ ಚರ್ಚುಗಳಲ್ಲಿ ಧರ್ಮಭೋಧನೆಯ ಸಾಧನವಾಗಿ ಪಾದ್ರಿಗಳಿಂದ ನಡೆಯುತ್ತಿದ್ದ ಬೈಬಲ್ ಕಥೆಗಳ ಪ್ರದರ್ಶನದಿಂದ ಆರಂಭವಾಗಿದ್ದ ನಾಟಕ (ಆ ಕಾಲದ ನಾಟಕಗಳಿಗೆ ಮಿಸ್ಟರಿ ಪ್ಲೇಸ್, ಮಿರಕಲ್ ಪ್ಲೇಸ್, ಮೊರ್ಯಾಲಿಟಿ ಪ್ಲೇಸ್ ಎಂದು ಹೆಸರು) ಹದಿನಾರನೆಯ ಶತಮಾನದಲ್ಲಿ ಉನ್ನತಮಟ್ಟಕ್ಕೇರಿತು. ಇಂಟರ್ ಲ್ಯೂಡ್ ಎಂಬ ಕಿರುನಾಟಕ ಪ್ರಕಾರವೂ ಹಾಸ್ಯನಾಟಕಗಳೂ ಬಂದುವು. ಪ್ರಾರಂಭದಲ್ಲಿ ಪ್ರದರ್ಶನವು ಚರ್ಚ್‍ಗಳ ಆವರಣದಲ್ಲಿ ನಡೆಯುತ್ತಿತ್ತು. ಅನಂತರ ಚಕ್ರಗಳ ಮೇಲು ಚಲಿಸುವ, ಎರಡು ಅಂತಸ್ತುಗಳ ರಂಗವೇದಿಕೆಯು ಕಾಣಿಸಿಕೊಂಡಿತು. ಮುಂದೆ ಲಂಡನ್ನಿನಲ್ಲಿ ಥೇಮ್ಸ್ ನದಿಯಾಚೆ ಕಟ್ಟಿದ ರಂಗಭೂಮಿಯಿಂದ ಇಂಗ್ಲಿಷ್ ನಾಟಕಗಳ ಬೆಳವಣಿಗೆಗೆ ವಿಶೇಷ ನೆರವಾಯಿತು.

ಗ್ಯಾಮರ್ ಗರ್ಟನ್ಸ್ ನೀಡ್ಸ್ ಮತ್ತು ರಾಲ್ಪ್ ರಾಯಿಸ್ಟರ್ ಡಾಯಿಸ್ಟರ್ ಇಂಗ್ಲಿಷಿನ ಮೊದಲ ಹಾಸ್ಯನಾಟಕಗಳೆನ್ನಬಹುದು. ಹಾಸ್ಯ ಅಷ್ಟೇನೂ ಸೂಕ್ಷ್ಮರೀತಿಯದಲ್ಲದಿದ್ದರೂ ಸೆನೆಕನ ಲ್ಯಾಟಿನ ದುರಂತ ನಾಟಕಗಳ ಮಾದರಿಯಲ್ಲಿ 1561ರಲ್ಲಿ ಸ್ಯಾಕ್ವಿಲ್ ಮತ್ತು ನಾತ್ಪನ್ ಎಂಬುವರು ಗೋರ್ಪೋಡಕ್ ಎಂಬ ನಾಟಕವನ್ನು ಬರೆದರು. ಇದೇ ಇಂಗ್ಲಿಷಿನ ಮೊಟ್ಟಮೊದಲ ಸರಳೆಗಳೆಯ ನಾಟಕ. ಅನಂತರ ಯೂನಿವರ್ಸಿಟಿ ವಿಟ್ಸ್ ಎಂದು ಹೆಸರು ಪಡೆದಿರುವ ಲಿಲಿ, ಪೀಲ್, ಗ್ರೀನ್, ಮಾರ್ಲೊ ಮತ್ತು ಕಿಡ್ ಒಬ್ಬೊಬ್ಬರೂ ಒಂದೊಂದು ಬಗೆಯ ನಾಟಕಕ್ಷೇತ್ರದಲ್ಲಿ-ಹಾಸ್ಯನಾಟಕ, ರುದ್ರನಾಟಕ ಇತ್ಯಾದಿ-ವಿಶೇಷ ಪ್ರತಿಭೆಯನ್ನು ಪ್ರದರ್ಶಿಸಿದರು. ಕಿಡ್ ಬರೆದ ಸ್ಪ್ಯಾನಿಷ್ ಟ್ರಾಜಿಡಿ ಭೀಭತ್ಸಮಯ ದೃಶ್ಯಗಳಿಗೂ ರೋಮಾಂಚಕಾರಕ ಘಟನೆಗಳಿಗೂ ಹತ್ಯೆಗಳಿಗೂ ಪ್ರಸಿದ್ಧವಾಗಿ ಸೆನೆಕನ್ ಟ್ರಾಜಿಡಿ ಎಂಬ ವಿಶಿಷ್ಟವರ್ಗದ ನಾಟಕಗಳಿಗೆ ಮಾದರಿಯಾಯಿತು. ಷೇಕ್ಸ್‍ಪಿಯರನ ಹ್ಯಾಮ್ಲೆಟ್ ನಾಟಕವೂ ಸ್ವಲ್ಪಮಟ್ಟಿಗೆ ಈ ವರ್ಗಕ್ಕೆ ಸೇರಿದ್ದೇ. ವೆಬ್‍ಸ್ಟರ್‍ನ ದಿ ವೈಟ್ ಡೆವಿಲ್ ಮತ್ತು ಡಚೆಸ್ ಆಫ್ ಮ್ಯಾಲ್ಪಿ ಎಂಬ ಪ್ರಖ್ಯಾತ ನಾಟಕಗಳು ಇದೇ ಜಾತಿಯವು. ಯೂನಿವರ್ಸಿಟಿ ವಿಟ್ಸ್‍ಗಳಲ್ಲಿ ಅತ್ಯಂತ ಪ್ರಸಿದ್ಧನೂ ಪ್ರಭಾವಶಾಲಿಯೂ ಆದವನು ಕ್ರಿಸ್ಟೊಫರ್ ಮಾರ್ಲೊ. ಅವನ ಟ್ಯಾಂಬುರ್ಲೇನ್, ದಿ ಜ್ಯೂ ಆಫ್ ಮಾಲ್ಟ. ಡಾಕ್ಟರ್ ಫೌಸ್ಟಸ್, ಎಡ್ವರ್ಡ್ 11-ನಾಟಕಗಳು ತಮ್ಮ ಕಲ್ಪನಾ ವೈಭವಕ್ಕೂ ಪಾತ್ರಪೋಷಣೆ ಸಂವಿಧಾನ ವೈಖರಿಗಳಿಗೂ ಭಾಷೆ ಮತ್ತು ಛಂದಸ್ಸುಗಳ ಅಪೂರ್ವಶಕ್ತಿಗೂ ಹೆಸರಾಂತ ಷೇಕ್ಸ್‍ಪಿಯರನಿಗೇ ದಾರಿಮಾಡಿಕೊಟ್ಟವೆಂದು ಹೇಳಲಾಗಿದೆ. ಈ ಯುಗದ ನಾಟಕಕಾರರಲ್ಲೆಲ್ಲ ಶಿಖರಪ್ರಾಯನಾದವ ಲೋಕ ವಿಖ್ಯಾತನಾದ ಷೇಕ್ಸ್‍ಪಿಯರ್. ರೊಮ್ಯಾಂಟಿಕ್ ಪಂಥಕ್ಕೆ ಸೇರಿದ ಇಂಗ್ಲಿಷ್ ನಾಟಕ ಪ್ರಪಂಚಕ್ಕೆ ಹಿಮಾಲಯ ಸದೃಶನಾದವ ಈ ಕವಿ. ಹಾಸ್ಯನಾಟಕ, ರುದ್ರನಾಟಕ, ಚಾರಿತ್ರಿಕ ನಾಟಕ ಮೊದಲಾದ ನಾನಾ ಕೇತ್ರಗಳಲ್ಲಿ ಒಂದೇ ಸಮನಾದ ಔನ್ನತ್ಯಪಡೆದ ಸಾಧನೆ ಅವನದು. ಸಾಮಾಜಿಕ ನಾಟಕಗಳನ್ನು ಬರೆಯುವುದರಲ್ಲಿ ಷೇಕ್ಸ್‍ಪಿಯರ್ ಆಸಕ್ತನಾಗಿರಲಿಲ್ಲ. ಮನುಷ್ಯ ಹೃದಯದಲ್ಲಿ ಕೆಲಸಮಾಡುವ ಭಾವಗಳ ವಿಶ್ಲೇಷಣೆ ಮತ್ತು ಅನ್ವೇಷಣೆ ಅವನ ಮುಖ್ಯ ಉದ್ದೇಶವಾಗಿತ್ತು. ಮೂವತ್ತೆಂಟು ನಾಟಕಗಳನ್ನೂ ಎರಡು ದೀರ್ಘಕಥನ ಕವನಗಳನ್ನೂ ಸುಮಾರು ನೂರ್ಯೆವತ್ತುನಾಲ್ಕು ಸಾನೆಟ್ಟ್ತುಗಳನ್ನೂ ಷೇಕ್ಸಪಿಯರ್ ರಚಿಸಿದ್ದಾನೆ. ಸಾನೆಟ್ (ಸುನೀತ)ಕ್ಕೆ ಹೊಸ ರೂಪವನ್ನು ಕೊಟ್ಟ. ಸುನೀತ ಚಿತ್ರದಲ್ಲಿ ಸ್ನೇಹ, ಪ್ರೇಮಗಳ ಸೂಕ್ಷ್ಮ ವಿಶ್ಲೇಷಣೆ ಇದೆ. 'ವೀನಸ್ ಅಂಡ್ ಅಡೊನಿಸ್, ದಿ ರೇಪ್ ಆಫ್s ಲ್ಯುಕ್ರ್ರಿಷಿ ಎಂಬುವು ಆ ಕವನಗಳು. ಅವನ ನಾಟಕಗಳಲ್ಲಿ ಮಚ್ ಆಡೊ ಅಬೌಟ್ ನಥಿಂಗ್, ದಿ ಟೇಮಿಂಗ್ ಆಫ್ ದಿ ಷ್ರ್ಯೂ, ಆಸ್ ಯು ಲ್ಯೆಕ್ ಇಟ್, ಟ್ವೆಲ್ಫ್‍ತ್ ನ್ಯೆಟ್, ಮಿಡ್ ಸಮ್ಮರ್ ನ್ಯೆಟ್ಸ್ ಡ್ರೀಂ, ಮರ್ಚೆಂಟ್ ಆಫ್ ವೆನಿಸ್ ಮೊದಲಾದ ಹಾಸ್ಯನಾಟಕಗಳೂ ರೋಮಿಯೋ ಅಂಡ್ ಜೂಲಿಯಟ್, ಮ್ಯಾಕ್ಬೆತ್, ಹ್ಯಾಮ್ಲೆಟ್, ಒಥೆಲೊ, ಕಿಂಗ್ ಲಿಯರ್ ಮೊದಲಾದ ರುದ್ರ ನಾಟಕಗಳೂ ದಿ ಟೆಂಪೆಸ್ಟ್, ವಿಂಟರ್ಸ್ ಟೇಲ್ ಮತ್ತು ಸಿಂಬೆಲಿನ್ ಎಂಬ (ದುಃಖದಲ್ಲಿ ಆರಂಭವಾಗಿ ಸುಖದಲ್ಲಿ ಕೊನೆಗಾಣುವ) ಟ್ರಾಜಿ-ಕಾಮೆಡಿಗಳೂ ಜ್ಯೂಲಿಯಸ್ ಸೀಸರ್, ಕೋರಿಯೋಲನಸ್, ರಿಚರ್ಡ್ II, ಹೆನ್ರಿ ಗಿ ಮೊದಲಾದ ರೋಮ್ ಮತ್ತು ಇಂಗ್ಲೆಂಡುಗಳ ಚರಿತ್ರೆಗಳಿಗೆ ಸಂಬಂಧಪಟ್ಟ ನಾಟಕಗಳೂ ಸಾಹಿತ್ಯ ಪ್ರಪಂಚದ ಅಮೂಲ್ಯರತ್ನಗಳೆಂದು ಪರಿಗಣಿತವಾಗಿವೆ. ವಸ್ತು ಯಾವುದೇ ಆಗಲಿ, ಷೇಕ್ಸ್‍ಪಿಯರ್ ನಾಟಕಗಳು ಮಾನವನ ಹೃದಯಾಂತರಾಳವನ್ನು ತೆರೆದು ತೋರಿಸುವ ದರ್ಪಣಗಳು. ಹೆಸರಿಗೆ ಇಂಗ್ಲಿಷಿನವರು, ರೋಮಿನವರು ಇತ್ಯಾದಿಯಾದರೂ ಅವನ ಪಾತ್ರಗಳು ಎಲ್ಲ ಕಾಲಗಳ ಎಲ್ಲ ಮಾನವರ ಪ್ರತಿನಿಧಿಗಳು. ಅಂತೆಯೇ ಅವನ ನಾಟಕ ಇಡೀ ಪ್ರಪಂಚದ ಒಂದು ತುಣುಕೆಂದರೆ ಉತ್ಪ್ರೇಕ್ಷೆಯಿರದು.

ಬೆನ್‍ಜಾನ್ಸನ್[ಸಂಪಾದಿಸಿ]

ಷೇಕ್ಸ್‍ಪಿಯರನ ಗೆಳೆಯನೂ ಸಹನಾಟಕಕಾರನೂ ಆದ ಬೆನ್‍ಜಾನ್ಸನ್ ವಿಡಂಬನಾತ್ಮಕ ಸಾಮಾಜಿಕ ನಾಟಕಗಳನ್ನು ಬರೆದ. ಹಾಸ್ಯನಾಟಕಗಳು ಸಮಾಜ ಸುಧಾರಣೆಗೆ, ನೀತಿಬೋಧನೆಗೆ ಸಾಧನಗಳಾಗಬೇಕೆಂಬುದು ಅವನ ಮತ. ಆ ಕೆಲಸಕ್ಕಾಗಿ ಆತ ತನ್ನ ಸಮಕಾಲೀನರ ನ್ಯೂನತೆಗಳನ್ನು ಹೊರಗೆಡಹಬೇಕೆಂದು ಸಾಮಾಜಿಕ ನಾಟಕಗಳನ್ನು ರಚಿಸಿದ. ಅವನ ಕಾಲದಲ್ಲಿ ಪ್ರಚಾರದಲ್ಲಿದ್ದ `ಥಿಯರಿ ಆಫ್ ಹ್ಯೂಮರ್ಸ್ ಎನ್ನುವ ಮನಶ್ಯಾಸ್ತ್ರ ಸಿದ್ಧಾಂತವೊಂದನ್ನು ಆತ ತನ್ನ ಕೆಲಸಕ್ಕಾಗಿ ಬಳಸಿಕೊಂಡ. ಪ್ರತಿ ಮನುಷ್ಯನೂ ಒಂದೊಂದು ಪ್ರಬಲ ಪ್ರವೃತ್ತಿಯ ಪ್ರಭಾವಕ್ಕೆ ಒಳಗಾಗುತ್ತಾನೆ. ಅವನ ಕಾರ್ಯಗಳಿಲ್ಲ ಈ ಪ್ರವೃತ್ತಿಯಿಂದ ಪ್ರೇರಿತವಾಗುತ್ತವೆ. ಹಾಗೆ ಹೊರಬಿದ್ದು ತೃಪ್ತಿ ಹೊಂದಿದ ಅನಂತರ ಆ ಪ್ರವೃತ್ತಿ ತನಗೆ ತಾನೇ ಸರಿಹೋಗಬೇಕು ಎಂಬುದೇ ಆ ಸಿದ್ಧಾಂತ. ಈ ಸಹಜ ಪ್ರವೃತ್ತಿಯನ್ನು ಅಂದಿನವರು ಹ್ಯೂಮರ್ ಎನ್ನುತ್ತಿದ್ದರು. ಬೆನ್ ಜಾನ್‍ಸನ್ನನ ನಾಟಕಗಳ ಪಾತ್ರಗಳು ಒಬ್ಬೊಬ್ಬರೂ ಇಂಥ ಒಂದೊಂದು ಪ್ರವೃತಿಯ ದಾಸರು. ಆದ್ದರಿಂದ ಅವನ ನಾಟಕಗಳಿಗೆ ಕಾಮಿಡಿ ಆಫ್ ಹ್ಯೂಮರ್ಸ್ ಎಂಬ ಹೆಸರೇ ಬಂದಿದೆ. ಎವೆರಿ ಮ್ಯಾನ್ ಇನ್ ಹಿಸ್ ಹ್ಯೂಮರ್, ಎವೆರಿ ಮ್ಯಾನ್ ಔಟ್ ಆಫ್ ಹಿಸ್ ಹ್ಯೂಮರ್, ದಿ ಆಲ್ಕೆಮಿಸ್ಟ್, ವಾಲ್ಪೋನೆ, ದಿ ಸೈಲೆಂಟ್ ವಉಮನ್, ಬಾರ್ತಲೋಮಿಯೋ ಫೇರ್ ಫೇರ್ ಮೊದಲಾದ ಅವನ ನಾಟಕಗಳ ಹೆಸರುಗಳೇ ಅವನ ಉದ್ದೇಶವನ್ನು, ಹ್ಯೂಮರ್ಸ್ ಸಿದ್ಧಾಂತ ಅವನ ನಾಟಕಗಳಲ್ಲಿ ವಹಿಸುವ ಪಾತ್ರವನ್ನು, ಸೂಚಿಸುತ್ತವೆ. ಬೆನ್ ಜಾನ್ಸನ್ ವಾಸ್ತವಿಕ ನಾಟಕಗಳ ರಚನಕಾರ. ಸಮಕಾಲೀನ ಜನರ ನಡೆನುಡಿಗಳು ಅವನ ನಾಟಕಗಳಲ್ಲಿ ಮೂಡಿವೆ. ಇದರ ಫಲವಾಗಿ ಕಾಮೆಡಿ ಆಫ್ ಮ್ಯಾನರ್ಸ್ ಎಂಬ ಸಾಮಾಜಿಕ ನಾಟಕಗಳ ಇನ್ನೊಂದು ವರ್ಗಕ್ಕೂ ಅವನು ಪ್ರವರ್ತಕನಾದ ಷೇಕ್ಸಪಿಯರ್ ಮತ್ತು ಬೆನ್ ಜಾನ್ಸನ್ನರಲ್ಲದೆ ಈ ಯುಗದ ಇತರ ಗಣ್ಯನಾಟಕಕಾರರು ಫೋರ್ಡ್ ಮಿಡ್ಲ್‍ಟನ್, ಹೇವುಡ್, ಡೆಕ್ಕರ್, ಮ್ಯಾಸಿಂಜರ್ ಮತ್ತು ಷರ್ಲೆ. ಫೋರ್ಡನ ದಿ ಬ್ರೋಕನ್ ಹಾರ್ಟ್, ಮಿಡ್ಲಟನ್ನನ ದಿ ಛೇಂಜ್‍ಲಿಂಗ್, ಮ್ಯಾಸಿಂಜರನ ಎ ನ್ಯೂ ವೇ ಟು ಪೆ ಓಲ್ಡ್ ಡೆಟ್ಸ್, ಷರ್ಲೆಯ ಹ್ಯೆಡ್ ಪಾರ್ಕ್, ಹೇವುಡ್‍ನ ಎ ವುಮನ್ ಕಿಲ್ಡ್ ವಿತ್ ಕ್ಯೆಂಡನೆಸ್- ಇವು ಅವರ ನಾಟಕಗಳಲ್ಲಿ ಪ್ರಸಿದ್ಧವಾಗಿವೆ. ಹೇವುಡ್‍ನ ನಾಟಕ ಕುಟುಂಬ ಜೀವನದಲ್ಲಿ ಉದ್ಭವಿಸುವ ದುರಂತ ಸನ್ನಿವೇಶಗಳನ್ನು ಚಿತ್ರಿಸಿರುವ ಡೊಮೆಸ್ಟಿಕ್ ಟ್ರಾಜಿಡಿ ವರ್ಗಕ್ಕೆ ಸೇರಿದ್ದು. ಡೆಕ್ಕರ್‍ನ ದ ಷ್ಯೂ ಮೇಕರ್ಸ್ ಹಾಲಿಡೆ ಸಮಾಜದ ಕೆಳಮಟ್ಟಕ್ಕೆ ಸೇರಿದ ಜನರ ಜೀವನದ ಚಿತ್ರಗಳನ್ನು ಒಳಗೊಂಡಿದೆ. ಮೋಚಿಯೊಬ್ಬ ಪುರಸಭಾಮೇಯರ್ ಆಗುವುದು ಅದರ ಕಥೆ. ಬೋಮಂಟ್ ಮತ್ತು ಫ್ಲೆಚರ್ ಎಂಬ ಇಬ್ಬರು ನಾಟಕಕಾರರು ಒಟ್ಟಿಗೆ ನಾಟಕ ರಚನೆ ಮಾಡುತ್ತಿದ್ದು ಟ್ರಾಜಿ-ಕಾಮೆಡಿ ನಾಟಕವರ್ಗವನ್ನು ಆರಂಭಿಸಿದರು (ಷೇಕ್ಸ್‍ಪಿಯರ್ ತನ್ನ ಕಡೆಯ ನಾಟಕಗಳನ್ನು ಬರೆದಾಗ ಇದರಿಂದ ಪ್ರಭಾವಿತನಾದನೆಂದು ಕೆಲವರು ವಿದ್ವಾಂಸರ ಅಭಿಪ್ರಾಯ). ದುಃಖಪೂರಿತ ಸನ್ನಿವೇಶಗಳಲ್ಲಿ ಆರಂಭವಾಗಿ ಅನಿರೀಕ್ಷಿತವಾದ (ಕೆಲವು ವೇಳೆ ಅತಿಮಾನವವಾದ) ಘಟನೆಗಳ ಪರಿಣಾಮವಾಗಿ ನಾಟಕ ಸುಖಾಂತವಾಗುತ್ತದೆ. ಷೇಕ್ಸ್‍ಪಿಯರ್ ಬರೆದಂಥ ರುದ್ರನಾಟಕಗಳನ್ನು ನೋಡುವುದಕ್ಕೆ ಬೇಕಾದ ಮನಸ್ಸಿನ ದೃಢತೆ ಸಾಕಷ್ಟು ಇಲ್ಲದಿದ್ದ ಪ್ರೇಕ್ಷóಕರ ತೃಪ್ತಿಗಾಗಿ ರಚಿತವಾದ ನಾಟಕಗಳಿವು. ಕೃತಕವೂ ಅಸಹಜವೂ ಆದ ಆಗುಹೋಗುಗಳ ಆಧಾರದ ಮೇಲೆ ನಿಂತಿರುವ ಈ ಬಗೆಯ ನಾಟಕಗಳು ಆ ಕಾಲಕ್ಕೆ ಕೊನೆಯಾದುದರಲ್ಲಿ ಆಶ್ಚರ್ಯವೇನಿಲ್ಲ.

ಹದಿನಾರನೆಯ ಶತಮಾನಗಳ ಕಾವ್ಯ:[ಸಂಪಾದಿಸಿ]

ಎಲಿಜಬೆತ್ ಯುಗದ ನಾಟಕ ಪ್ರಪಂಚಕ್ಕೆ ಷೇಕ್ಸ್‍ಪಿಯರ್ ಇರುವಂತೆ ಆ ಯುಗದ ಕಾವ್ಯಲೋಕಕ್ಕೆ ಎಡ್ಮಂಡ್ ಸ್ಪೆನ್ಸರ್. ಕವಿಗಳ ಕವಿ ಎಂದು ಕೀರ್ತಿಶಾಲಿಯಾಗಿರುವ ಸ್ಪೆನ್ಸರ್ ತನ್ನ ಕಾಲದ ರಾಜಕೀಯ ಮತ್ತು ಧಾರ್ಮಿಕ ಘಟನೆಗಳನ್ನು ರೂಪಕವಾಗಿ ಫೇರಿ ಕ್ವೀನ್ ಎಂಬ ತನ್ನ ಸುದೀರ್ಘವಾದ ಕಾವ್ಯದಲ್ಲಿ ಚಿತ್ರಿಸಿದ್ದಾನೆ. ಮಧ್ಯಯುಗದ ಆದರ್ಶವೀರರ ಕಥೆಗಳ ಮಾದರಿಯ ಮೇಲೆ ರಚಿತವಾಗಿರುವ ಈ ಕಾವ್ಯ ಶ್ರೀಮಂತ ಯುವಕರಿಗೆ ಒಳ್ಳೆಯ ನಡತೆಯ ಶಿಕ್ಷಣವೀಯುವ ಉದ್ದೇಶವುಳ್ಳದ್ದೆಂದು ಸ್ಪೆನ್ಸರನೇ ಹೇಳಿದ್ದಾನೆ. ಅದ್ಬುತ ಘಟನೆಗಳು ನೀತಿಬೋಧಕವಾದ ಸಾಂಕೇತಿಕ ಪ್ರಸಂಗಗಳು, ಸಮಕಾಲೀನ ಘಟನೆಗಳ ಮತ್ತು ವ್ಯಕ್ತಿಗಳ ಪರೋಕ್ಷ ಚಿತ್ರಗಳು ಸುಂದರ ವರ್ಣನೆಗಳು ಸುಮಧುರ ಛಂದೋವಿಲಾಸ ಮೊದಲಾದ ಅನೇಕ ಗುಣಗಳಿಂದ ಶೋಭಿಸುವ ಈ ಕಾವ್ಯ ಇಂಗ್ಲಿಷ್ ಕಾವ್ಯಗಳಿಗೆ ಗುರುವಿನಂತಿದೆ. ದಿ ಷೆಪಡ್ರ್ಸ್ ಕ್ಯಾಲೆಂಡರ್ ಎಂಬ ಗೊಲ್ಲಗೀತೆಗಳ ವರ್ಗಕ್ಕೆ ಸೇರಿದ ಕವನವನ್ನೂ ಇನ್ನೂ ಆನೇಕ ಸಣ್ಣಪುಟ್ಟ ಕವನಗಳನ್ನೂ ಸ್ಪೆನ್ಸರ್ ರಚಿಸಿದ್ದಾನೆ. ಏನೇ ಬರೆಯಲಿ ಅವನ ವರ್ಣನಾವ್ಯೆಖರಿ ಮತ್ತು ನಾದಮಧುರತೆ ಎಲ್ಲೆಲ್ಲೂ ಎದ್ದು ಕಾಣುತ್ತವೆ. ನುರಿತ ಚಿತ್ರಕಾರನಂತೆ ಪದಗಳ ಪ್ರಯೋಗದಿಂದ ಚೆಲುವಿನ ಕೃತಿಗಳನ್ನು ಈತ ಸೃಷ್ಟಿಸಿದ್ದಾನೆ. ಅವನ ಫೇರಿ ಕ್ವೀನ್ ಕವನದ ಛಂದಸ್ಸು ಆನೇಕ ಇಂಗ್ಲಿಷ್ ಕವಿಗಳಿಗೆ ಅಭಿವ್ಯಕ್ತನ ಮಾಧ್ಯಮವನ್ನೊದಗಿಸಿದೆ. ಇಂಗ್ಲಿಷ್ ಸಾನೆಟ್ಟುಗಳ ಚರಿತ್ರೆಯಲ್ಲೂ ಸ್ಪೆನ್ಸರನಿಗೆ ಹಿರಿಯ ಸ್ಥಾನವಿದೆ. ಅವನ ಸಮಕಾಲೀನನಾಗಿದ್ದ ಸರ್ ಫಿಲಿಪ್ ಸಿಡ್ನಿಯೂ ಪ್ರಸಿದ್ಧ ಸಾನೆಟ್ಟುಗಳನ್ನಲ್ಲದೆ ಇತರ ಬಗೆಯ ಭಾವಗೀತೆಗಳನ್ನೂ ಆರ್ಕೇಡಿಯ ಎಂಬ ರಮ್ಯಕಥೆಯನ್ನೂ ಅಪಾಲಜಿ ಫಾರ್ ಪೊಯಸಿ ಎಂಬ ಕಾವ್ಯಸಮರ್ಥನಾತ್ಮಕವಾದ ಪ್ರಬಂಧವನ್ನೂ ಬರೆದಿದ್ದಾನೆ. ಲಾಡ್ಜ್, ನ್ಯಾಷ್, ಮಾರ್ಲೊ ಇವರೆಲ್ಲರೂ ಹಲಕೆಲವು ಒಳ್ಳೆಯ ಭಾವಗೀತೆಗಳನ್ನು ರಚಿಸಿದ್ದಾರೆ.

ಮೆಟಫಿಸಿಕಲ್ ಕಾವ್ಯ:[ಸಂಪಾದಿಸಿ]

ಹದಿನೇಳನೆಯ ಶತಮಾನ ಇಂಗ್ಲೆಂಡಿನ ಚರಿತ್ರೆಯಲ್ಲಿ ರಾಜಕೀಯ ಮತ್ತು ಧಾರ್ಮಿಕ ಜಿಜ್ಞಾಸೆಯ ಮತ್ತು ಕಲಹಗಳ ಕಾಲ. ಎಲಿಜಬೆತ್ತಳ ಯುಗದಂತೆ ತಾರುಣ್ಯದ ಉತ್ಸಾಹ, ಉದ್ವೇಗ, ಭಾವಾತಿಶಯಗಳು ಪ್ರಧಾನವಾಗಿರದೆ ಆಲೋಚನೆ, ವಿಮರ್ಶೆ ಈ ಕಾಲದಲ್ಲಿ ಪ್ರಾಬಲ್ಯಕ್ಕೆ ಬಂದುವು. ಇದಕ್ಕೆ ಅನುಗುಣವಾಗಿ ಚರ್ಚಾತ್ಮಕವಾದ ಗದ್ಯ ಸಾಹಿತ್ಯ ಈ ಶತಮಾನದಲ್ಲಿ ಬೆಳೆಯಿತು. ಆದರೆ ಕಾವ್ಯಸೃಷ್ಟಿಯೂ ನಡೆಯಿತು. ಇಡೀ ರಾಷ್ಟ್ರಜೀವನವನ್ನು ಪ್ರತಿಬಿಂಬಿಸುವ ಕಾವ್ಯ ಬಂದಿತು. ಪ್ರಾಟೆಸ್ಟಂಟ್ ಮತ ಮತ್ತು ಅದರ ಒಳಪಂಗಡಗಳು. ಕೆಥೊಲಿಕ ಮತ ಮೊದಲಾದುವನ್ನು ಪ್ರತಿನಿಧಿಸುವ ಕವಿಗಳು ಬಂದರು. ಲೌಕಿಕ ಕಾವ್ಯವೂ ಪ್ರಣಯಗೀತೆಗಳ ಮತ್ತು ರಾಜಕೀಯ ವಿಡಂಬನೆಗಳ ರೂಪವನ್ನು ತಳೆದು ಬೆಳೆಯಿತು. ಇಂಥ ಲೌಕಿಕ ಕವಿಗಳಲ್ಲಿ ಮೊದಲು ಹೆಸರಿಸಬೇಕಾದವ ಜಾನ್ ಡನ್ ಮತಸಂಬಂಧವಾದ ಕವಿತೆಗಳನ್ನೂ ಡನ್ ಬರೆದಿದ್ದಾನೆ. ಆದರೆ ಅವನು ತನ್ನ ಯೌವನದಲ್ಲಿ ಬರೆದ ಪ್ರಣಯಗೀತೆಗಳಿಗಿರುವ ಪ್ರಾಶಸ್ತ್ಯ ಅವಕ್ಕಿಲ್ಲ. ಆತ ದಿ ಮೆಟಫಿಜಿಕಲ್ ಸ್ಕೂಲ್ ಎಂಬ ಕಾವ್ಯವರ್ಗವನ್ನು ಆರಂಭಿಸಿದವ ಈ ಗುಂಪಿನ ಕವನಗಳ ಒಂದು ಲಕ್ಷಣ ಅವುಗಳಲ್ಲಿ ಬುದ್ಧಿಚಮತ್ಕಾರದ ಅಂಶವಿರುವುದು. ಕವಿ ಸಮಯಗಳನ್ನು ದೂರವಿರಿಸಿ, ಹೊಸ ಪ್ರತಿಮೆಗಳನ್ನು ಬಳಸಿ, ಬುದ್ಧಿ ಚಮತ್ಕಾರಕ್ಕೂ ಪ್ರಾಧಾನ್ಯವಿರುವ ಕವನಗಳನ್ನು ಬರೆದ. ಅವನ ಕವನಗಳು ತೀವ್ರಭಾವಕ್ಕೂ ಅರ್ಥಸ್ಪಷ್ಟತೆಗೂ ನಿಷ್ಕøಷ್ಟತೆಗೂ ಆಡುಮಾತಿನ ಬಳಕೆಗೂ ಗಮನಾರ್ಹವಾಗಿದೆ; ತತ್ಕಾರಣ ಅವು ಆಧುನಿಕ ಇಂಗ್ಲಿಷ್ ಕವಿಗಳ ಮತ್ತು ವಿಮರ್ಶಕರ ಮನ್ನಣೆ ಪಡೆದಿವೆ. ಡನ್ನನ ಅನಂತರ ಬಂದ ಪ್ರಣಯ ಕವಿಗಳಲ್ಲಿ ಕ್ಯಾರ್ಯೂ, ಹೆರಿಕ್, ಲವ್ಲೇಸ್, ಸಕ್ಲಿಂಗ್, ರಾಛೆಸ್ಟರ್, ಮೊದಲಾದವರ ಭಾವಗೀತೆಗಳು ಪ್ರಣಯದ ವಿವಿಧ ರೂಪದ ಆಭಿವ್ಯಕ್ತಿಯನ್ನು ಅತ್ಯಂತ ಆಕರ್ಷಕವಾದ ರೀತಿಯಲ್ಲಿ ಮಾಡುತ್ತವೆ. ಇವರೆಲ್ಲರಿಗೂ ಕ್ಯವಾಲಿಯರ್ ಪೊಯಟ್ಸ್ ಎಂದು ಹೆಸರು ಬಂದಿದೆ. ಹಗುರವಾದ ಪ್ರಣಯಭಾವದ ನಾನಾ ಛಾಯೆಗಳನ್ನು ಮನಮೋಹಕವಾದ ರೀತಿಯಲ್ಲಿ ವ್ಯಕ್ತಪಡಿಸುವುದರಲ್ಲಿ ಇವರು ಸಿದ್ಧಹಸ್ತರು. ಪ್ರಣಯನಿಷ್ಠೆಯಾಗಲಿ ಏಕಪತ್ನೀವ್ರತವಾಗಲಿ ಇವರಲ್ಲಿ ಅಪರೂಪ. ಹದಿನೇಳನೆಯ ಶತಮಾನದ ಪೂರ್ವಾರ್ಧದಲ್ಲಿ ಎಡ್ಮಂಡ್ ವ್ಯಾಲರ್, ಆಂಡ್ರ್ಯೂ ಮಾರ್ವೆಲ್, ಏಬ್ರಹಾಮ್ ಕೌಲಿ, ಜಾನ್ ಡ್ರ್ಯೆಡನ್-ಇವರೆಲ್ಲ ಉತ್ತಮ ಮಟ್ಟದ ಕೆಲವು ಭಾವಗೀತೆಗಳನ್ನೂ ಹಾಡುಗಳನ್ನೂ ಬರೆದರು. ಕೌಲಿ ಮಹಾಕಾವ್ಯವನ್ನು ಬರೆಯಬೇಕೆಂಬ ಬಯಕೆಯಿಂದ ಡೇವಿಡೇಯಿಸ್ ಎಂಬ ಬಹಳ ದೊಡ್ಡ ಕವನವನ್ನೇ ಬರೆದು ತನ್ನ ಕಾಲದಲ್ಲಿ ಬಹು ಪ್ರಖ್ಯಾತನಾಗಿದ್ದ. ಈಗ ಆ ಕಾವ್ಯವನ್ನು ಕೇಳುವವರೇ ಇಲ್ಲ. ಆ ಶತಮಾನಕ್ಕೆ ಸೇರಿದ ಜಾರ್ಜ್ ಹರ್ಬರ್ಟ್, ರಿಚರ್ಡ್ ಕ್ರಾಷಾ, ಹೆನ್ರಿ ವಾಹನ್, ಮತ್ತು ಥಾಮಸ್ ಟ್ರಹರ್ನ್ ಮೆಟಫಿಸಿಕಲ್ ಸ್ಕೂಲ್‍ಗೆ ಸೇರಿದ ಒಳ್ಳೆಯ ಕವಿಗಳು. ಎಲ್ಲರೂ ಅಲೌಕಿಕ ವಿಚಾರಗಳನ್ನು ಕುರಿತು ಅನುಭಾವಿ ಕವನಗಳನ್ನು ಬರೆದಿರುವರು. ಇವರ ಕವನಗಳು ಹದಿನೇಳನೆಯ ಶತಮಾನದ ಧಾರ್ಮಿಕ ದೃಷ್ಟಿಗೆ ದ್ಯೋತಕವಾಗಿವೆ.

ಮಿಲ್ಡನ್, ಡ್ರೇಡನ್:[ಸಂಪಾದಿಸಿ]

ಹದಿನೇಳನೆಯ ಶತಮಾನದ ಪ್ರಮುಖ ಕವಿಗಳು ಜಾನ್ ಮಿಲ್ಟನ್ ಮತ್ತು ಜಾನ್ ಡ್ರ್ಯೆಡನ್. ಮಿಲ್ಟನ್ ಇಂಗ್ಲಿಷಿನ ಪ್ರಸಿದ್ಧ ಮಹಾಕಾವ್ಯಗಳಾದ ಪ್ಯಾರಡ್ಯೆಸ್ ಲಾಸ್ಟ್ ಮತ್ತು ಪ್ಯಾರಡ್ಯೆಸ್ ರೀಗೇಯ್ನ್ಡ್ ಕೃತಿಗಳ ಕರ್ತೃ. ಇವಲ್ಲದೆ ಲಿಸಿಡಾಸ್. ಕೋಮಸ್ ಮೊದಲಾದ ಕವನಗಳೂ ಸ್ಯಾಮ್ಸನ್ ಆಗೊನಿಸ್ಟಿಸ್ ಎಂಬ ನಾಟಕವೂ ಅವನವೇ. ಸಾನೆಟ್ ಜಾತಿಯ ಕವಿತೆಗಳಿಗೂ ಮಿಲ್ಟನ್ ಪ್ರಸಿದ್ಧನಾಗಿದ್ದಾನೆ. ಕಾವ್ಯದ ವಿಷಯ, ರೂಪ ಯಾವುದೇ ಆಗಿರಲಿ ಮಿಲ್ಟನ್ ತನ್ನ ಕೃತಿಯಲ್ಲಿ ಔನ್ನತ್ಯ. ಭವ್ಯತೆಗಳನ್ನು ಮೂಡಿಸಿದ್ದಾನೆ. ಅವನ ಹಾಗೆ ಇಂಗ್ಲಿಷ್ ಸರಳ ರಗಳೆಯನ್ನು ಬಳಸಿರುವ ಕವಿ ಬೇರೆ ಯಾರೂ ಇಲ್ಲ. ಅವನ ಕೃತಿಗಳೆಲ್ಲ ಪ್ಯೂರಿಟನ್ ಪಂಥದ ಆದರ್ಶಗಳನ್ನೂ ರೀತಿನೀತಿಗಳನ್ನೂ ವ್ಯಕ್ತಪಡಿಸುತ್ತವೆ. ಡ್ರ್ಯೆಡನ್ ವಿಡಂಬನೆಯ ಕವಿ. ತನ್ನ ಕಾಲದ ರಾಜಕೀಯ ಮತ್ತು ಧಾರ್ಮಿಕ ಹೋರಾಟಗಳಿಗೆ ಸಂಬಂಧಿಸಿದ ಖ್ಯಾತ ವಿಡಂಬನೆಗಳನ್ನು ಬರೆದಿದ್ದಾನೆ. ಅಬ್ಸಲಾಮ್ ಅಂಡ್ ಅಕಿಟೋಫೆಲ್, ದಿ ಮೆಡಲ್, ಮ್ಯಾಕ್ ಫ್ಲೆಕ್ನೊ, ದಿ ಹ್ಯೆಂಡ್ ಅಂಡ್ ದಿ ಪ್ಯಾಂತರ್-ಅವನ ಉತ್ತಮ ವಿಡಂಬನೆಗಳು. ಮೊದಲನೆಯ ಎರಡು ರಾಜಕೀಯ ಪ್ರಸಂಗಗಳಿಗೂ ಮೂರನೆಯದು ಸಾಹಿತ್ಯಕ್ಕೂ ನಾಲ್ಕನೆಯದು ಧಾರ್ಮಿಕ ವಿವಾದಕ್ಕೂ ಸಂಬಂಧಪಟ್ಟಿವೆ. ಒಂದೊಂದು ವರ್ಗದಲ್ಲೂ ಮೇಲ್ಮಟ್ಟದ ವಿಡಂಬನೆ ಹೇಗಿರಬೇಕೆಂದು ಕವಿ ತೋರಿಸಿಕೊಟ್ಟಿದ್ದಾನೆ.

ಗದ್ಯ ನಾಟಕ:[ಸಂಪಾದಿಸಿ]

ಮಿಲ್ಟನ್, ಡ್ರ್ಯೆಡನ್ ಇಬ್ಬರೂ ಗದ್ಯ ಲೇಖಕರೂ ಆಗಿದ್ದರು. ತನ್ನ ಕಾಲದ ರಾಜಕೀಯ ಸಾಮಾಜಿಕ ವಿಚಾರಗಳಿಗೆ ಸಂಬಂಧಪಟ್ಟ ಗದ್ಯಕೃತಿಗಳನ್ನು ಮಿಲ್ಟನ್ ಬರೆದ. ಏರಿಯೋಪ್ಯಾಜಿಟಿಕ ಎಂಬ ಅವನ ಪ್ರಸಿದ್ದ ಗದ್ಯ ಪ್ರಬಂಧ ಅಭಿಪ್ರಾಯ ಸ್ವಾತಂತ್ರ್ಯದ ಸಮರ್ಥನೆ. ಅವನ ಕಾವ್ಯಗಳಲ್ಲಿರುವಂತೆ ಗದ್ಯಕೃತಿಗಳಲ್ಲೂ ಒಂದು ಭವ್ಯತೆ, ಶಬ್ದವ್ಯೆಭವ, ಔನ್ನತ್ಯಗಳು ಎದ್ದು ಕಾಣುತ್ತವೆ. ಡ್ರ್ಯೆಡನ್ ಆಧುನಿಕ ಇಂಗ್ಲಿಷ್ ಗದ್ಯದ ಪಿತಾಮಹನೆನ್ನಿಸಿಕೊಂಡಿದ್ದಾನೆ. ಅವನ ಗದ್ಯವೆಲ್ಲ ವಿಮರ್ಶಾತ್ಮಕ ಲೇಖನಗಳ ರೂಪವನ್ನು ತಳೆದಿದೆ. ಅವನ ವಿಮರ್ಶೆ ವಿಶಾಲಮನಸ್ಸಿನಿಂದಲೂ ಕಾವ್ಯಪ್ರಜ್ಞೆಯಿಂದಲೂ ಪ್ರೇರಿತವಾದುದು. ಇಂಗ್ಲಿಷ್ ವಿಮರ್ಶೆಯ ಪಿತಾಮಹನೆಂದೂ ಆತ ಹೆಸರು ಗಳಿಸಿದ್ದಾನೆ. ಅವನ ಶೈಲಿ ಸಂದರ್ಭಾನುಸಾರ ಆಡುಮಾತನ್ನೂ ಲ್ಯಾಟಿನ್ ಮತ್ತು ಗ್ರೀಕ್ ಭಾಷೆಗಳಿಂದ ಬಂದ ಪದಗಳನ್ನೂ ಉಪಯೋಗಿಸಿಕೊಂಡು ಪರಿಣಾಮಕಾರಕವಾಗಬಲ್ಲದು. ಮಿಡ್ಲ್ ಸ್ಟೈಲ್ ಎಂಬ ಹೆಸರು ಇದಕ್ಕೆ ಸಾರ್ಥಕವಾಗಿದೆ. ಸರಳವಾದ ಭಾಷಾಪ್ರಯೋಗಕ್ಕೆ ಹೆಸರಿಸಬೇಕಾದುದು ಇದೇಕಾಲದ ಜಾನ್ ಬನ್ಯನ್ನನ ಪಿಲಿಗ್ರಿಮ್ಸ್ ಪ್ರೋಗ್ರೆಸ್ ಎಂಬ ರೂಪಕಕಥೆ. ಆದರೆ ಮಿಲ್ಟನ್ ಮತ್ತು ಡ್ರ್ಯೆಡನ್ನರಿಗೆ ಮೊದಲೇ ಹದಿನೇಳನೆಯ ಶತಮಾನದಲ್ಲಿ ಇತರ ಪ್ರಮುಖ ಗದ್ಯಲೇಖಕರು ಕೆಲವರಿದ್ದರು. ಎಲಿಜಬೆತ್ ಯುಗಕ್ಕೆ ಸೇರಿದ ಇತರ ಗದ್ಯ ಲೇಖಕರಲ್ಲಿ ರಿಚರ್ಡ್ ಹೂಕರ್ನ ಎಕ್ಲೆಸಿಯಾಸ್ಟಿಕಲ್ ಪಾಲಿಟಿ ಕ್ರೈಸ್ತಮತದ ಆಡಳಿತ ವ್ಯವಸ್ಥೆಯನ್ನು ಕುರಿತದ್ದು. ಅದು ಗಂಭೀರವಾದ ಗದ್ಯ ಶ್ಯೆಲಿಗೆ ಪ್ರಸಿದ್ಧವಾಗಿದೆ. ಆನಂತರ ಬಂದ ಗದ್ಯಲೇಖಕರಲ್ಲಿ ಫ್ರಾನ್ಸಿಸ್ ಬೇಕನ್ ಗಣ್ಯನಾದವ. ದಿ ಅಡ್ವಾನ್ಸ್ಮೆಂಟ್ ಆಫ್ ಲರ್ನಿಂಗ್ ಮತ್ತು ಎಸ್ಸೇಸ್ ಎಂಬ ಕವನ ಬರಹಗಳು ಖ್ಯಾತಿವೆತ್ತಿವೆ. ಅವನ ಪ್ರಬಂಧಗಳು ಇಂಗ್ಲಿಷ್‍ನಲ್ಲಿ ಆ ಜಾತಿಯ ಮೊಟ್ಟಮೊದಲನೆಯ ಕೃತಿಗಳು. ಎಸ್ಸೆ ಎಂಬ ಪದವನ್ನು ಇಂಗ್ಲಿಷಿಗಿತ್ತವನೂ ಅವನೇ ಲೌಕಿಕವಾಗಿ ಊರ್ಜಿತವಾಗುವುದು ಹೇಗೆ ಎನ್ನುವುದೇ ಬೇಕನ್ನನ ಪ್ರಮುಖ ಆಸಕ್ತಿಯಾಗಿತ್ತು. ಇತರರಿಗೂ ಅವನು ಅದನ್ನೇ ಬೋಧಿಸಿದ. ಅವನ ಗದ್ಯ ಬಿಗಿಯಾದ ಅಡಕವಾದ ವಾಕ್ಯಗಳಿಂದ ಕೂಡಿ ಆಲೋಚನಾ ಭರಿತವಾಗಿದೆ. ಬೇಕನ್ನನ ಗದ್ಯಕೃತಿಗಳು ಹದಿನೇಳನೆಯ ಶತಮಾನದ ಮೊದಲ ದಶಕಕ್ಕೆ ಸೇರಿದ ಬರೆಹಗಳು ಇದೇ ದಶಕದಲ್ಲಿ ಬಂದುದು ಇಂಗ್ಲಿಷ್ ಗದ್ಯ ಕೃತಿಗಳಲ್ಲೆಲ್ಲ ಅತ್ಯಂತ ಪ್ರಭಾವಯುತವಾದ ಬ್ಯೆಬಲಿನ ಭಾಷಾಂತರ-ದಿ ಆಥರ್ಯೆಸ್ಡ್‍ವರ್ಷನ್, ಸರಳವೂ ಸುಂದರವೂ ಕಾವ್ಯಮಯವೂ ಆದ ಈ ಪುಸ್ತಕಇಂಗ್ಲಿಷ್ ಲೇಖಕರನೇಕರ ಮೇಲೆ ತನ್ನ ಪ್ರಭಾವವನ್ನು ಬೀರಿದ್ದಲ್ಲದೆ ಇಂಗ್ಲಿಷ್ ಭಾಷೆಯನ್ನು ಸ್ಥಿಮಿತಗೊಳಿಸುವುದರಲ್ಲೂ ದೊಡ್ಡ ಉಪಕಾರ ಮಾಡಿದೆ ಹದಿನೇಳನೇಯ ಶತಮಾನದ ಇತರ ಗದ್ಯಲೇಖಕರು ರಾಬರ್ಟ್ ಬರ್ಟನ್, ಥಾಮಸ್ ಫುಲ್ಲರ್, ಜೆರೆಮಿ ಟೆಯ್ಲರ್, ಐಜಾóಕ್ ವಾಲ್ಟನ್, ಸರ್ ಥಾಮಸ್ ಬ್ರೌನ್, ಸ್ಯಾಮ್ಯುಆಲ್ ಪೀಪ್ಸ್, ಥಾಮಸ್ ಹಾಬ್ಸ್ ಮತ್ತು ಜಾನ್ ಲಾಕ್. ಬರ್ಟನ್ನನ ದಿ ಅನಾಟಮಿ ಆಫ್ ಮೆಲಂಕ ಫುಲ್ಲರನ ಇಂಗ್ಲಿಷ್ ವರ್ದೀಸ್. ಟೆಯ್ಲರನ ಹೋಲಿ ಲಿವಿಂಗ್ ಅಂಡ್ ಹೋಲಿ ಡ್ಯೆಯಿಂಗ್, ವಾಲ್ಟನ್ನನ ದಿ ಕಂಪ್ಲೀಟ್ ಆಂಗ್ಲರ್, ಬ್ರೌನನ ರಿಲಿಜಯೋ ಮೆಡಿಚಿ ಮತ್ತು ಆರ್ನ್ ಬರಿಯಲ್, ಪೀಪ್ಸನ ಡಯರಿ, ಹಾಬ್ಸನ ಲೆವಿಯತಾನ್ ಮತ್ತು ಲಾಕ್‍ನ ಎಸ್ಸೆ ಆನ್ ಹ್ಯೂಮನ್ ಅಂಡರ್‍ಸ್ಟ್ಯಾಂಡಿಂಗ್ - ಇವು ಇಂಗ್ಲಿಷ್ ಸಾಹಿತ್ಯ ಚರಿತ್ರೆಯಲ್ಲಿ ಮೈಲಿಗಲ್ಲುಗಳಂಥ ಗ್ರಂಥಗಳು.

ಡ್ರ್ರ್ಯೆಡನ್, ಪೀಪ್ಸ್, ಹಾಬ್ಸ್, ಲಾಕ್, ಇವರೆಲ್ಲ ಹದಿನೇಳನೆಯ ಶತಮಾನದ ಕೊನೆಯ ನಲವತ್ತು ವರ್ಷಗಳಾದ ರೆಸ್ಟೊರೇಷನ್ ಏಜ್ ಎಂಬ ಅವಧಿಗೆ ಸೇರಿದವರು. ಈ ಯುಗ ಇಂಗ್ಲಿಷ್ ಗದ್ಯದ ಚರಿತ್ರೆಯಲ್ಲಿ ಮಾತ್ರವಲ್ಲದೆ, ನಾಟಕದ ಚರಿತ್ರೆಯಲ್ಲೂ ಪ್ರಸಿದ್ಧವಾಗಿದೆ. ಅಂದು ನಾಟಕ ನೋಡುವುದಕ್ಕೆ ಹೋಗುತ್ತಿದ್ದವರನೇಕರು ಸಮಾಜದ ಮೇಲ್ತರಗತಿಗೆ ಸೇರಿದ್ದವರು ರಾಜ ಎರಡನೆಯ ಚಾರಲ್ಸನ ಸಮೀಪವರ್ತಿಗಳು ಆವನೂ ಅವನ ಅನುಚರರೂ ಅನೀತಿಗೆ ಅತಿಭೋಗಕ್ಕೆ ಹೆಸರಾಗಿದ್ದವರು ಈ ದೋಷಗಳೇ ಪ್ರಧಾನವಾಗಿರುವ ಗದ್ಯನಾಟಕಗಳು ಈ ಅವಧಿಯಲ್ಲಿ ಬಂದುವು ರೆಸ್ಟೋರೇಷನ್ ನಾಟಕವೆಂದರೆ ಅನೀತಿಯುತವಾದುದೆನ್ನುವಷ್ಟರಮಟ್ಟಿಗೆ ಅವುಗಳಲ್ಲಿ ಕೆಲವು ಅಪಖ್ಯಾತಿಯನ್ನು ಪಡೆದಿವೆ ಅವುಗಳಲ್ಲಿ ಕೆಲವು ಸರ ಜಾರ್ಜ್ ಎತಿರೆಜ್, ವಿಲಿಯಂ ವ್ಯೆಚರ್ಲಿ, ಮಿಸೆಸ್ ಆಫ್ರಾಬೆನ್, ಮತ್ತು ವಿಲಿಯಂ ಕಾಂಗ್ರೀವ್‍ರವರ ನಾಟಕಗಳು ಇಂಥವು ವೈಚರ್ಲಿಯ ದಿ ಕಂಟ್ರಿ ಹೌಸ್ ಇದಕ್ಕೆ ಒಳ್ಳೆಯ ಉದಾಹರಣೆ, ಕಾಂಗ್ರೀವ್‍ನ ದಿ ವೆ ಆಫ್ ದಿ ವರ್ಲ್ಯ್ ಇಂಗ್ಲಿಷಿನ ಅತ್ಯಂತ ಪ್ರಸಿದ್ಧವಾದ ನಾಟಕಗಳಲ್ಲೊಂದು. ಇದರ ಗದ್ಯದ ಸೊಬಗು ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿದೆ. ಈ ನಾಟಕಗಳೂ ಹದಿನೇಳನೆಯ ಶತಮಾನದ ಆದಿಯಲ್ಲಿ ಬಂದ ವ್ಸಾನ್ ಬ್ರೂ ಮತ್ತು ಫರ್ಕುಹರ್‍ರ ನಾಟಕಗಳೂ ಗದ್ಯ ನಾಟಕಗಳನ್ನು ಇಂಗ್ಲಿಷಿನಲ್ಲಿ ಸ್ಥಾಪಿಸಿದ್ದಲ್ಲದೆ ಕಾಮೆಡಿ ಆಫ್ ಮ್ಯಾನರ್ಸ್ ವರ್ಗದ ನಾಟಕಕ್ಕೂ ಹಿರಿ ಸ್ಥಾನವನ್ನು ತಂದು ಕೊಟ್ಟವು.

ನವಭಿಜಾತ ಯುಗ:[ಸಂಪಾದಿಸಿ]

ಹದಿನೆಂಟನೆಯ ಶತಮಾನ ಇಂಗ್ಲಿಷ್ ಸಾಹಿತ್ಯ ಚರಿತ್ರೆಯಲ್ಲಿ ನಿಯೊಕ್ಲಾಸಿಕಲ್ (ನವಅಭಿಜಾತ) ಯುಗ ಸರಳವಾದ, ನೇರವಾದ, ಭಾವ ಮತ್ತು ಭಾಷೆಗಳಲ್ಲಿ ಅತಿರೇಕವಿರದಿದ್ದ ಬರಹ, ವ್ಯೆಚಾರಿಕತೆ, ವಿಡಂಬನೆ, ಮೊದಲಾದವುಗಳ ಪ್ರಾಧಾನ್ಯ. ರೊಮ್ಯಾಂಟಿಕ್ ಪಂಥದ ಪ್ರಮುಖ ಪ್ರವೃತ್ತಿಗಳಾದ ಪ್ರಕೃತಿಪ್ರೇಮ ಮತ್ತು ಕಲ್ಪನಾವಿಲಾಸಗಳ ಆಭಾವ-ಇವು ಈ ಯುಗದ ಕಾವ್ಯದ ಪ್ರಮುಖ ಲಕ್ಷಣಗಳು ಇವಕ್ಕೆ ವಿರುದ್ಧ ಲಕ್ಷ್ಪ್ಷಣಗಳನ್ನೇ ಪದ್ಯ ಪಡೆಯಿತು.

ಹದಿನೆಂಟನೆಯ ಶತಮಾನದ ಕವಿಗಳಲ್ಲಿ ಮೊದಲು ಬರುವವ ಅಲೆಕ್ಸಾಂಡರ್ ಪೋಪ್. ಲಂಡನ್ನಿನ ಕವಿಯಾದ ಇವನ ಕೃತಿಗಳು ವಿಡಂಬನೆಗಳು. ಸಮಕಾಲೀನ ಲಂಡನ್ ಸಮಾಜವನ್ನೂ ಸೋದರ ಲೇಖಕರನ್ನೂ ನಿರ್ದಾಕ್ಷಿಣ್ಯವಾಗಿ, ಅನೇಕ ವೇಳೆ ಅನ್ಯಾಯವಾಗಿ, ವೈಯಕ್ತ್ತಿಕ ಕಾರಣಗಳಿಗಾಗಿ, ಕಟುವಿಡಂಬನೆಗೆ ಅವನು ಗುರಿಪಡಿಸಿದ್ದಾನೆ. ದಿ ರೇಪ್ ಆಪ್ ದಿ ಲಾಕ್, ಡನ್ಸಿಯಡ್ ಎಂಬ ಇವನ ವಿಡಂಬನಾತ್ಮಕ ಕವಿತೆಗಳು ಪ್ರಸಿದ್ಧ. ಇವುಗಳ ಮಾಧ್ಯಮವಾದ ಹಿರಾಯಿಕ್ ಕಪ್ಲೆಟ್ ಎಂಬ ಛಂದಸ್ಸಿನ ಮೇಲೆ ಅವನಿಗಿರುವ ಸ್ವಾಮ್ಯ ಅಸದೃಶವಾದುದು. ಎಸ್ಸೆ ಅನ್ ಕ್ರಿಟಿಸಿಸಮ್, ಎಸ್ಸೆ ಅನ್ ಮ್ಯಾನ್ ಎಂಬ ಇವನ ಚರ್ಚಾತ್ಮಕ ಕವನಗಳು ಆ ಕಾಲದ ಪದ್ಯವೂ ಹೇಗೆ ಗದ್ಯದ ಕೆಲಸಕ್ಕೆ ಉಪಯೋಗಿಸಲ್ಪಡುತ್ತಿತ್ತು ಎಂಬುದನ್ನು ತೋರಿಸುತ್ತವೆ. ಗಲಿವರ್ಸ್ ಟ್ರಾವೆಲ್ಸ್ ಎಂಬ ಜಗದ್ವಿಖ್ಯಾತ ವಿಡಂಬನಾತ್ಮಕ ಕಥೆಯ ಕರ್ತೃ ಜೊನಾತನ್ ಸ್ವಿಫ್ಟ್. ಅದು ಆ ಕಾಲದ ರಾಜಕೀಯ ಸ್ಥಿತಿಗತಿಗಳನ್ನೂ ಸ್ವಿಫ್ಟನ ನಿರಾಶಾಯುತ ಜೀವನದೃಷ್ಟಿಯನ್ನೂ ಪ್ರತಿಬಿಂಬಿಸುತ್ತದೆ. ದಿ ಬ್ಯಾಟಲ್ ಆಫ್ ಬುಕ್ಸ್, ಸಾಹಿತ್ಯಕ್ಕೆ ಸಂಬಂಧಪಟ್ಟ ವಿಡಂಬನೆ ದಿ ಟೇಲ್ ಆಫ್ ಎ ಟಬ್ ಅವನ ಇನ್ನೊಂದು ಪ್ರಸಿದ್ಧ ಕೃತಿ. ಇಂಗ್ಲಿಷ್ ವಿಡಂಬನಕಾರರಲ್ಲೂ ಗದ್ಯ ಲೇಖಕರಲ್ಲೂ ಸ್ವಿಫ್ಟನ ಸ್ಥಾನ ಗಣ್ಯವಾದುದು. ಅಷ್ಟೇ ಗಣ್ಯರಾದವರು ಡೇನಿಯಲ್ ಡೀಫೋ. ಆಡಿಸನ್ ಮತ್ತು ಸ್ಟೀಲ್ ಇಂಗ್ಲಿಷಿನ ಪ್ರಬಂಧಗಳ ಶ್ರೇಷ್ಠ ನಿರ್ಮಾಪಕರ ಶ್ರೇಣಿಗೆ ಸೇರಿದವರು. ಅವರ ಟ್ಯಾಟ್ಲರ್ ಮತ್ತು ಸ್ಪೆಕ್ಟೇಟರ್ ಪ್ರಬಂಧಗಳು ಸಮಾಜ ಸುಧಾರಣೆಗಾಗಿ ರಚಿತವಾಗಿದ್ದರೂ ಉತ್ತಮ ಕಲಾಕೃತಿಗಳೂ ಆಗಿವೆ ಇಬ್ಬರೂ ನಾಟಕಗಳನ್ನೂ ಬರೆದಿದ್ದಾರೆ. ಇವರು ತಮ್ಮ ಸ್ಪೆಕ್ಟೇಟರ ಪ್ರಬಂಧಗಳಲ್ಲಿ ಸೃಷ್ಟಿಸಿದ ಸರ್ ರೋಜರ್ ಡಿ ಕವರ್ಲಿ ಇಂಗ್ಲಿಷ್ ಸಾಹಿತ್ಯ ಲೋಕದ ವಿಖ್ಯಾತ ವ್ಯಕ್ತಿಗಳಲೊಬ್ಬನಾಗಿರುವುದಲ್ಲದೆ ಮುಂದೆ ಬಂದ ಇಂಗ್ಲಿಷ್ ಕಾದಂಬರಿಗಳ ಬೆಳವಣಿಗೆಯ ಚರಿತ್ರೆಯಲ್ಲೂ ಹೆಸರಾಗಿದ್ದಾನೆ. ಹದಿನಂಟನೆಯ ಶತಮಾನದ ಇತರ ಗದ್ಯ ಲೇಖಕರಾದ ಚರಿತ್ರಕಾರ ಎಡ್ವರ್ಡ್ ಗಿಬ್ಬನ್ (ದಿ ರೈಸ್ ಅಂಡ್ ಫಾಲ್ ಆಫ್ ದಿ ರೋಮನ್ ಎಂಪೈರ್‍ನ ಕರ್ತೃ ಎಡ್ಮಂಡ್ ಬರ್ಕ್-ಇಬ್ಬರೂ ಇಂಗ್ಲಿಷ್ ಗದ್ಯದ ಸತ್ತ್ವ ಮತ್ತು ಓಜಸ್ಸುಗಳನ್ನು ತಮ್ಮ ಕೃತಿಗಳಲ್ಲಿ ತೋರಿಸಿದ್ದಾರೆ.

ಪೋಪನ ಅನಂತರ ಬಂದ ಕವಿಗಳಲ್ಲಿ ಆಲಿವರ್ ಗೋಲ್ಡ್ ಸ್ಮಿತ್ ಮತ್ತು ಸ್ಯಾಮುಅಲ್ ಜಾನ್‍ಸನ್ನರು ಕ್ಲಾಸಿಕಲ್ ಪಂಥದ ಕೃತಿಗಳನ್ನೇ ಬರೆದರು. ಗೋಲ್ಡ್ ಸ್ಮಿತ್ ನ ದಿ ಡೆಸರ್ಟಡ್ ವಿಲೇಜ್ ಮತ್ತು ದ ಟ್ರಾವೆಲರ್ ವಿಚಾರಪೂರ್ಣವಾದ ಸಮಸ್ಯಾ ಪ್ರತಿಪಾದಕವಾದ ಕವನಗಳು. ಜಾನ್‍ಸನ್ನನ ದಿ ವ್ಯಾನಿಟಿ ಆಫ ಹ್ಯೂಮನ್ ವಿಷಸ್ ಜೀವನದ ಆಶೋತ್ತರಗಳ ನಿರರ್ಥಕತೆಯನ್ನು ಪ್ರತಿಪಾದಿಸುವ ಕವನ. ಈ ಕವನಗಳೆಲ್ಲ ತಮ್ಮ ವಿಷಯಗಳಿಗೆ ಅನುಗುಣವಾಗಿ ಹಿರಾಯಿಕ್ ಕಪ್ಲೆಟ್ ಛಂದಸ್ಸಿನಲ್ಲಿವೆ. ಗೋಲ್ಡ್ ಸ್ಮಿತ್ ಕವಿಯಾಗಿದ್ದುದಲ್ಲದೆ ಪ್ರಬಂಧಕಾರನೂ ನಾಟಕಕಾರನೂ ಕಾದಂಬರಿಕಾರನೂ ಆಗಿದ್ದ. ದಿ ಸಿಟಿಜನ್ ಆಫ್ ದಿ ವಲ್ರ್ಡ್ ಎಂಬ ಅಂಕಿತನಾಮವನ್ನಿಟ್ಟುಕೊಂಡು ಆತ ಬರೆದ ಪ್ರಬಂಧಗಳು ಸಮಕಾಲೀನರ ಗುಣದೋಷಗಳ ವಿಮರ್ಶೆಯನ್ನು ಒಳಗೊಂಡಿದೆ. ಅವುಗಳಲ್ಲಿರುವ ತಿಳಿಹಾಸ್ಯ ಮಾನವ ಪ್ರೇಮಗಳು ಆಹ್ಲಾದಕರವಾಗಿವೆ. ಅವನ ದಿ ವಿಕಾರ್ ಆಫ್ ವೇಕ್‍ಫೀಲ್ಡ್ ಜಗತ್ತಿನ ಅತ್ಯಂತ ಪ್ರಸಿದ್ಧ ಕಾದಂಬರಿಗಳಲ್ಲೊಂದು. ಅವನ ನಾಟಕಗಳ ಬೆಳವಣಿಗೆಯನ್ನು ಮುಂದುವರಿಸುವುದರಲ್ಲಿ ಗಣನೀಯ ಪಾತ್ರವಹಿಸಿದವು. ಡಾಕ್ಟರ್ ಜಾನ್ಸನ್ ಕವಿಯಾಗಿದ್ದುದರ ಜೊತೆಗೆ ನಿಘಂಟುಕಾರನೂ ಆಗಿದ್ದ. 1755ರಲ್ಲಿ ಪ್ರಕಟವಾದ ಅವನ ಡಿಕ್ಷ್‍ನರಿ ಇಂಗ್ಲಿಷ್ ಭಾಷೆಯ ನಿಘಂಟುಗಳಲ್ಲಿ ಒಂದು ಘಟ್ಟವನ್ನೇ ಸ್ಥಾಪಿಸಿತು. ಇಂಗ್ಲಿಷ್ ವಿಮರ್ಶಕರ ಶ್ರೇಣಿಯಲ್ಲಿ ಅವನದು ದೊಡ್ಡ ಹೆಸರು. ಅವನ ಲೈವ್ಸ್ ಆಫ್ ಪೊಯಟ್ಸ್ ಮತ್ತು ಪ್ರಿಫೇಸ್ ಟು ಷೇಕ್ಸ್‍ಪಿಯರ್ ಅವನು ವಿಮರ್ಶೆಗೆ ಸಲ್ಲಿಸಿದ ಸೇವೆಯ ಪ್ರತೀಕಗಳಾಗಿ ಇಂದಿಗೂ ವಿದ್ವಾಂಸರಿಗೆ ಆಕರ್ಷಕವಾಗಿವೆ. ಜಾನ್ಸನ್ನನ ವಿಮರ್ಶೆ ಕ್ಲಾಸಿಕಲ್ ಯುಗದ ಕಾವ್ಯ ಮೀಮಾಂಸೆ ಮತ್ತು ಕಾವ್ಯ ಲಕ್ಷಣಗಳಿಗೆ ಕೈಮರದಂತಿದೆ. ಆದರೆ ಈ ಪಂಥಕ್ಕೆ ವಿರುದ್ಧವಾದ ಷೇಕ್ಸ್‍ಪಿಯರ್‍ನ ಔನ್ನತ್ಯವನ್ನು ಗುರುತಿಸಬಲ್ಲ ರಸಜ್ಞೆಯೂ ಅವನಲ್ಲಿತ್ತು.

ಹದಿನೆಂಟನೆಯ ಶತಮಾನದ ಉತ್ತರಾರ್ಧ ಇಂಗ್ಲಿಷ್ ಕಾದಂಬರಿಯ ಆರಂಭದ ಕಾಲ. ಸ್ಯಾಮ್ಯುಅಲ್ ರಿಚರ್ಡ್‍ಸನ ಮತ್ತು ಹೆನ್ರಿ ಫೀಲ್ಡಿಂಗ್ ಇಂಗ್ಲಿಷಿನ ಮೊದಲ ಕಾದಂಬರಿಕಾರರು. ರಿಚರ್ಡ್‍ಸನ್ನನ ಪ್ಯಾಮೆಲಾ ಮತ್ತು ಕ್ಲಾರಿಸ ಫೀಲ್ಡಿಂಗನ ಜೋಸೆಫ್ ಅಂಡ್ರ್ಯೂಸ್ ಮತ್ತು ಟಾಮ್ ಜೋನ್ಸ್ ಎಂಬ ಪ್ರಸಿದ್ಧ ಕಾದಂಬರಿಗಳು ಈ ಅವಧಿಯಲ್ಲಿ ರಚಿತವಾದುವು. ತೋಬಿಯಸ್ ಸ್ಮಾಲೆಟ್ನ ರೋಡೆರಿಕ್ ರ್ಯಾಂಡಮ್ ಮತ್ತು ಲಾರೆನ್ಸ್ ಸ್ಟರ್ನನ ಟ್ರಿಸ್ಟ್ರಾಮ್ ಷ್ಯಾಂಡಿ ಮತ್ತು ಸೆಂಟಿಮೆಂಟಲ್ ಜರ್ನಿಗಳು ಇಂಗ್ಲ್ಲಿಷ್ ಕಾದಂಬರಿಗಳ ಹಿರಿಯ ಪರಂಪರೆಯನ್ನೇ ಸ್ಥಾಪಿಸಿದುವು. ಬರಬರುತ್ತ ಇಂಗ್ಲಿಷ್ ಕಾದಂಬರಿ ಸಾಮಾಜಿಕ ಸಾಹಿತ್ಯದ ದೊಡ್ಡ ಮಾಧ್ಯಮವಾಯಿತು.

ರೊಮ್ಯಾಂಟಿಕ್ ಯುಗದ ಹರಿಕಾರರು:[ಸಂಪಾದಿಸಿ]

ಆದರೆ ಹದಿನೆಂಟನೆಯ ಶತಮಾನದಲ್ಲೆಲ್ಲ ಕ್ಲಾಸಿಕಲ್ ಸಾಹಿತ್ಯವೊಂದೇ ವಿರಾಜಿಸಲಿಲ್ಲ. ಅಂಥ ಸಾಹಿತ್ಯ ಕೆಲವು ವರ್ಷಗಳು ಎಲ್ಲರ ಗಮನವನ್ನೂ ಸೆಳೆದ ಅನಂತರ ರೊಮ್ಯಾಂಟಿಕ್ ಸಾಹಿತ್ಯಪ್ರೇಮ ಅದಕ್ಕೆ ಪ್ರೇರಕವಾದ ಪ್ರವೃತ್ತಿಗಳು ಮತ್ತೆ ಲೇಖಕರ ಮನಗಳಲ್ಲಿ ಕಾಣಿಸಿಕೊಳ್ಳತೊಡಗಿದವು. ಮಧ್ಯಯುಗದ ಐತಿಹ್ಯಗಳು ಕಾಲ್ಪನಿಕ ಕಥೆಗಳು, ಜಾನಪದ ಸಾಹಿತ್ಯ, ಪ್ರಕೃತಿ, ಗ್ರಾಮಜೀವನ-ಇವುಗಳಲ್ಲೆಲ್ಲ ಹೊಸ ಆಸಕ್ತಿಯೊಂದು ಕಾಣಿಸಿಕೊಳ್ಳಲಾರಂಭಿಸಿತು. ಬಿಷಪ್ ಪರ್ಸಿಯ ರೆಲಿಸ್ ಆಫ್ ಏನ್ಷಂಟ್ ಇಂಗ್ಲಿಷ್ ಪೊಯಟ್ರಿ ಅನೇಕಾನೇಕ ಲಾವಣಿಗಳ ಸಂಗ್ರಹ, ಲಾವಣಿಗಳ ಸರಳತೆ, ಛಂದೋವೈವಿದ್ಯ ಮೊದಲಾದ ಗುಣಗಳು ಇಂಗ್ಲಿಷ್ ಕಾವ್ಯದ ಮೇಲೆ ಮತ್ತೆ ತಮ್ಮ ಪ್ರಭಾವವನ್ನು ಬೀರತೊಡಗಿದವು. ಹಳೆಯ ಕಾಲದ ಕೃತಿಗಳನ್ನು ಹೋಲುತ್ತಿದ್ದ ಮ್ಯಾಕ್‍ಫೆರ್‍ಸನ್‍ನ ಆಸಿಯನ್ ಎಂಬ ಕವನವೂ ಚಾಟರ್‍ಮನ್‍ನ ರೌಲಿ ಪೊಯಮ್ಸ್ ಎಂಬ ಕವನ ಸಂಗ್ರಹವೂ ಈ ಕಾಲದಲ್ಲೇ ಪ್ರಕಟವಾದುದು ಅರ್ಥಪೂರ್ಣವಾದ ಸಂಗತಿ. ಹೊರೇಸ್ ವಾಲ್ಟೋಲ್‍ನ ಕ್ಯಾಸಲ್ ಆಫ್ ಅಟ್ರೌಂಟೊ ಮಧ್ಯಯುಗದ ಗಾಥಿಕ್ ವರ್ಗದ ಕಲ್ಪನಾವೈಭವದಿಂದ ಕೂಡಿದ ಕಥೆ. ವಿಸೆಸ್ ಆನ್ ರ್ಯಾಡ್‍ಕ್ಲಿಫ್‍ಳ ದಿ ಮಿಸ್ಟೆರೀಸ್ ಆಫ್ ಉಡಾಲ್ಫೋ ಕೂಡ ಇಂಥದೇ ಕೃತಿ. ಕತ್ತಲು ತುಂಬಿದ ಕಾಡು, ದೆವ್ವಗಳು, ದುಷ್ಟರು, ಪ್ರಕೃತಿಪ್ರೇಮ, ಭಾವೌತ್ಸುಕ್ಯ-ಇವು ಈ ಗ್ರಂಥಗಳ ಲಕ್ಷಣಗಳು.

ಈ ರೊಮ್ಯಾಂಟಿಕ್ ಪ್ರವೃತ್ತಿ 18ನೆಯ ಶತಮಾನದ ಉತ್ತರಾರ್ಧದಲ್ಲಿ ಮಾತ್ರವಲ್ಲದೆ ಮೊದಲಿನಿಂದಲೂ ಇತ್ತು. ಪೋಪ್ ತನ್ನ ವಿಡಂಬನೆಗಳನ್ನೂ ಚರ್ಚಾತ್ಮಕ ಕಾವ್ಯಗಳನ್ನೂ ಬರೆಯುತ್ತಿದ್ದಾಗಲೇ ಜೇಮ್ಸ್ ಥಾಮ್ಸ್‍ನ ಎಂಬ ಋತುಗಳನ್ನು ಕುರಿತು ದೀರ್ಘ ಕವಿತೆಯನ್ನು ಬರೆದ (1731). ಎಡ್ವರ್ಡ್ ಯಂಗ್‍ನ ನೈಟ್ ಥಾಟ್ಸ್ ಕೆಲವು ವರ್ಷಗಳ ಅನಂತರ ಬಂತು. ಇವರೆಡರಲ್ಲೂ ಹಳ್ಳಿಯ ಜೀವನ. ಹಳ್ಳಿಗಾಡಿನ ದೃಶ್ಯಗಳು, ಪ್ರಕೃತಿವರ್ಣನೆ, ಮಾನವ ಸಹಜವಾದ ಭಾವಗಳು ವ್ಯಕ್ತವಾಗಿವೆ. ಶತಮಾನದ ಮಧ್ಯಭಾಗಕ್ಕೆ ಸೇರಿದ ಥಾಮಸ್ ಗ್ರೆ ಮತ್ತು ವಿಲಿಯಮ್ ಕಾಲಿನ್ಸ್‍ರಲ್ಲೂ ಈ ಗುಣಗಳುಂಟು. ಗ್ರೆ ಕವಿಯ ಎನ್ ಎಲಿಜಿ ರಿಟನ್ ಇನ್ ಎ ಕಂಟ್ರಿ ಚರ್ಚ್‍ಯಾರ್ಡ್ ಪ್ರಸಿದ್ಧ ಕವನ. ಅದು ಹಳ್ಳಿಯ ಜನರ ಕಷ್ಟ ಸುಖಗಳನ್ನೂ ಒಳಗೊಂಡಿದೆ. ಗ್ರೆ ಕವಿಯೇ ಬರೆದ ದಿ ಬಾರ್ಡ್ ಮತ್ತು ಪ್ರೋಗ್ರೆಸ್ ಆಫ್ ಪೊಯಂಸ್ ಕವನಗಳು ಕಲ್ಪನೆಯನ್ನು ಕೆರಳಿಸುವ ರಚನೆಗಳು. ಕಾಲಿನ್ಸನ ಓಡ್ ಟು ಈವನಿಂಗ್ ಕವಿತೆಯ ವಸ್ತು ಗ್ರಾಮಸೀಮೆಯ ಸಂಧ್ಯೆಯ ವರ್ಣನೆ. ಪ್ರಾಸರಹಿತವಾದ ಈ ಕವನ ಹಿರಾಯಿಕ್ ಕಪ್ಲೆಟ್ಟನ ಸಂಕೋಲೆಯಿಂದ ಹೇಗೆ ಕೆಲವರಾದರೂ ಬೇಸತ್ತಿದ್ದರೆಂದು ತೋರಿಸುತ್ತದೆ. ವಿಲಿಯಮ ಕೂಪರ್ ಮತ್ತು ಜಾರ್ಜ್ ಕ್ರ್ಯಾಬ್‍ರೂ ಹಳ್ಳಿಯ ಜೀವನದ ಮತ್ತು ನೋಟಗಳ ಕವಿಗಳು. ಸ್ಕಾಟ್ಲೆಂಡಿನ ಕವಿ ರಾಬರ್ಟ್ ಬನ್ರ್ಸ್ ಹಳ್ಳಿಯವ; ಸ್ವತ: ರೈತ. ಅವನ ಭಾವಗೀತೆಗಳು ಜನಪ್ರಿಯತೆಯನ್ನು ಗಳಿಸಿವೆ. ಪ್ರಣಯ ಕವನಗಳ ರಚನೆಯಲ್ಲಿ ಅವನದು ಎತ್ತಿದ ಕೈ. ಅವನ ಭಾಷೆ ಸ್ಕಾಟ್ಲೆಂಡಿನ ಪಶ್ಚಿಮ ಭಾಗದ ಆಡುಭಾಷೆ. ವಿಲಿಯಂ ಬ್ಲೇಕ್ ಅನುಭಾವೀ ಕವಿ. ಅವನ ಕವನಗಳಲ್ಲಿ ದೈವಚಿಂತನೆಯ ಹುಚ್ಚು ಎದ್ದು ಕಾಣುತ್ತದೆ. ಇವರೆಲ್ಲರೂ ಕಲ್ಪನೆಗೆ, ಸಹಜತೆ ಸರಳತೆಗಳಿಗೆ ಪ್ರಕೃತಿಪ್ರೇಮ ಮಾನವಪ್ರೇಮಗಳಿಗೆ ಕೈತೋರಿಸುತ್ತವೆ; ಬರಲಿರುವ ಬದಲಾವಣೆಯನ್ನು ಸೂಚಿಸುತ್ತವೆ. ಆದುದರಿಂದ ಈ ಕವಿಗಳಿಗೆ ಟ್ರಾನ್ಸಿಷನ್ ಪೊಯಟ್ಸ್ ಎಂದು ಹೆಸರು ಬಂದಿದೆ. ಒಂದು ಬಗೆಯ ಕಾವ್ಯ ಪ್ರಪಂಚದಿಂದ ಇನ್ನೊಂದಕ್ಕೆ ಹೋಗುವವರು ಎಂದು ಆ ಮಾತು ಸೂಚಿಸುತ್ತದೆ. ಇವರು ಕ್ಲಾಸಿಕಲ್ ಸಾಹಿತ್ಯಕ್ಕೂ ರೊಮ್ಯಾಂಟಿಕ್ ಸಾಹಿತ್ಯಕ್ಕೂ ಮಧ್ಯೆ ಸೇತುವೆಯಂತಿದ್ದರು. ಇವರಲ್ಲಿ ಒಬ್ಬೊಬ್ಬರಲ್ಲೂ ಬೇರೆ ಬೇರೆಯಾಗಿ ಕಂಡು ಬಂದ ಲಕ್ಷಣಗಳೇ ಒಟ್ಟಿಗೆ ಸೇರಿ ವಡ್ರ್ಸ್‍ವರ್ತ್ ಮತ್ತು ಕೋಲಿರಿಜ್‍ರಲ್ಲಿ ಕಾಣಿಸಿಕೊಂಡು ರೊಮ್ಯಾಂಟಿಕ್ ಯುಗವನ್ನು ತಂದುವು.

ರೊಮ್ಯಾಂಟಿಕ್ ಸಾಹಿತ್ಯ:[ಸಂಪಾದಿಸಿ]

ರೊಮ್ಯಾಂಟಿಕ್ ಸಾಹಿತ್ಯವು ವಿಭಾವನೆ (ಇಮ್ಯಾಜಿನೇಷ್‍ನ್)ಗೆ ಪ್ರಾಧಾನ್ಯವನ್ನು ನೀಡಿತು. ಹಿಂದಿನ ಯುಗದಲ್ಲಿ ಕವಿಯು ಸಮುದಾಯದ ವಾಣಿಯಾಗಿದ್ದ, ಈ ಯುಗದಲ್ಲಿ ಕವಿಯು ಸಮುದಾಯದ ಕಣ್ಣಾದ. ಬದುಕನ್ನು ವಿಶಿಷ್ಟ ರೀತಿಯಲ್ಲಿ ಗ್ರಹಿಸಿ ಅದಕ್ಕೆ ಕಾವ್ಯದಲ್ಲಿ ರೂಪನೀಡಿದ. ಬದುಕನ್ನು ವಿಚಾರ ಶಕ್ತಿಯಿಂದ ಮಾತ್ರ ಗ್ರಹಿಸಬಹುದೆಂಬ ಭಾವನೆ ಹೋಗಿ ಇಂದ್ರಿಯಾನುಭವಗಳ ಮೂಲಕ ಗ್ರಹಿಸಿ, ವಿಭಾವನೆಯಿಂದ ಅದರ ಒಳ ಸ್ವರೂಪಕಟ್ಟಿ ಗ್ರಹಿಸಬಹುದೆಂಬ ಭಾವನೆ ಬೆಳೆಯಿತು. ಇದರಿಂದ ಕವಿಯ ವಿಶಿಷ್ಟ ದರ್ಶನಕ್ಕೆ ಪ್ರಾಧಾನ್ಯ ಲಭ್ಯವಾಯಿತು. ವಿಡಂಬನೆಯ ಬದಲು ಭಾವಗೀತಾತ್ಮಕತೆ ಚೈತನ್ಯಶೀಲವಾಯಿತು. ನಿಸರ್ಗವು ಜೀವಂತವಾದದ್ದು, ಮಾನವ-ನಿಸರ್ಗಗಳ ನಡುವೆ ಒಂದು ವಿಶಿಷ್ಟ ಸಂಬಂಧವಿದೆ ಎನ್ನುವ ಮನೋಧರ್ಮವನ್ನು ಈ ಯುಗದಲ್ಲಿ ಕಾಣುತ್ತೇವೆ. ಸಾಹಿತ್ಯವೂ ಒಂದು ಬಗೆಯ ತಿಳಿವಳಿಕೆ ಬದುಕನ್ನು ಅರ್ಥಮಾಡಿಕೊಳ್ಳುವ ಸಾಧನ ಆಯಿತು. ಹಿಂದಿನ ಯುಗದಲ್ಲಿ ಕವಿಯು ಭಾಷೆಯನ್ನು `ಕರೆಕ್ಟ್ ಆಗಿ ಬಳಸಬೇಕೆಂಬ ಭಾವನೆ ಇತ್ತು. ಕವಿಯು ಭಾಷೆಯನ್ನು ತನ್ನ ಅನುಭವದ, ಪ್ರತಿಭೆಯ ಅಗತ್ಯಗಳಿಗೆ ಅನುಗುಣವಾಗಿ ಪುನಾರೂಪಿಸಿಕೊಳ್ಳುತ್ತಾನೆ ಎಂದು ಕವಿ-ಭಾಷೆಯ ಸಂಬಂಧ ಹೊಸ ಸ್ವರೂಪವನ್ನು ಪಡೆಯಿತು. ಈ ಸಾಹಿತ್ಯದ ಬುನಾದಿ ಸರ್ವಸಮತಾಭಾವ, ಯಾರಿಗೇ ಆಗಲಿ ಹುಟ್ಟು, ಅಧಿಕಾರ, ಅಂತಸ್ತುಗಳಿಗೆ ಸಂಬಂಧವಿಲ್ಲದೆ ಅವರು ಮನುಷ್ಯರೆಂದೇ ಗೌರವ ಸಲ್ಲಬೇಕೆಂಬ ತತ್ವ. ಇದರಿಂದ ಗ್ರಾಮಜೀವನ, ರೈತರು-ಗೊಲ್ಲರು ಮುಂತಾದ ಸಮುದಾಯಗಳು ಇವರ ಬದುಕೂ ಸಾಹಿತ್ಯದಲ್ಲಿ ಬರುವಂತಾಯಿತು. ಫ್ರಾನ್ಸಿನ ಮಹಾಕ್ರಾಂತಿಯೂ ಈ ಭಾವನೆಗೆ ಪ್ರೇರಕವಾಯಿತು. ವಡ್ರ್ಸ್‍ವರ್ತ್ ಮತ್ತು ಕೋಲಿರಿಜ್ ಈ ಯುಗದ ಪ್ರಮುಖರು. ಅವರಿಬ್ಬರೂ 1798ರಲ್ಲಿ ಪ್ರಕಟಿಸಿದ ದಿ ಲಿರಿಕಲ್ ಬ್ಯಾಲಡ್ಸ್ ಎಂಬ ಕವನ ಸಂಕಲನವೂ ಆ ಸಂಕಲನಕ್ಕೆ ವಡ್ರ್ಸ್‍ವರ್ತ್ ಬರೆದ ಪ್ರಸಿದ್ಧ ಪೀಠಿಕೆಯೂ ಈ ನವಯುಗದ ಸಾಹಿತ್ಯವನ್ನು ಅಧಿಕೃತವಾಗಿ ಪ್ರಚಾರಕ್ಕೆ ತಂದುವು ಎನ್ನಬಹುದು. ವಡ್ರ್ಸವರ್ತ್ ಇಂಗ್ಲಿಷಿನ ಪ್ರಕೃತಿಕಾವ್ಯಲೇಖಕರಲ್ಲಿ ಅತ್ಯಂತ ಹೆಸರಾಂತವ. ಪ್ರಕೃತಿಯೊಂದೇ ಅಲ್ಲದೆ ಹಳ್ಳಿಯ ಜನ ಮತ್ತು ಅವರ ಜೀವನಗಳೂ ಅವನ ಕಾವ್ಯದ ಮುಖ್ಯ ವಸ್ತುಗಳಾಗಿದ್ದುವು. ಸರಳತೆ, ಸಹಜತೆಗಳು ಅವನ ಕಾವ್ಯದ ಹಿರಿಯ ಕುರುಹುಗಳು ಅವನ ಟಿಂಟರ್ನ್ ಅಭಿ, ಡ್ಯಾಪೊಡಿಲ್ಸ್, ಸಾಲಿಟರಿ ರೀಪರ್ ಮೊದಲಾದ ಸಣ್ಣ ಕವನಗಳೂ ಪ್ರಿಲ್ಯೂಡ್ ಎಂಬ ಆತ್ಮಕಥಾನಿರೂಪಕವಾದ ದೀರ್ಘಕವನವೂ ಸರ್ವಜನಪ್ರಿಯವಾಗಿವೆ. ಕೋಲಿರಿಜ್ ಇಂದ್ರಿಯ ಗೋಚರವಲ್ಲದ, ಬುದ್ಧಿಶಕ್ತಿಗೆ ಅತೀತವಾದ ಘಟನೆಗಳನ್ನು ಅವು ದಿನದಿನದ ಸಹಜ ಘಟನೆಗಳೋ ಎನ್ನುವಂತೆ ವರ್ಣಿಸುವುದರಲ್ಲಿ ನಿಪುಣ. ದಿ ರೈಮ್ ಆಫ್ ದಿ ಏನ್‍ಷಂಟ್ ಮ್ಯಾರಿನರ್, ಕೂಬ್ಲಾಖಾನ್ ಮೊದಲಾದ ಅವನ ಸುಂದರ ಕವನಗಳು ಚಿತ್ತಾಕರ್ಷಕವಾಗಿವೆ. ಕೋಲಿರಿಜ್ ಇಂಗ್ಲಿಷ್ ವಿಮರ್ಶಕರಲ್ಲೂ ಹಿರಿಯ ಸ್ಥಾನ ಗಳಿಸಿದ್ದಾನೆ. ಅವನ ಬಯಾಗ್ರ್ಯಾಫಿಯಾ ರಿಲಿಟೆರೇರಿಯಾ ಗ್ರಂಥವಿಮರ್ಶೆಯ ಮತ್ತು ಕಾವ್ಯ ಮೀಮಾಂಸೆಯ ಚರಿತ್ರೆಯಲ್ಲಿ ಖ್ಯಾತಿಗಳಿಸಿದೆ. ಆತ ಗಣನೀಯನಾದ ತಾತ್ತ್ವಿಕನೂ ಆಗಿದ್ದ. ಇವರ ಒಡನಾಡಿಗಳಾದ ರಾಬರ್ಟ್ ಸದೆ, ಲೇಹಂಟ್, ಕ್ಯಾಂಪ್‍ಬೆಲ್, ಸರ್ ವಾಲ್ಟರ್ ಸ್ಕಾಟ್ ಮೊದಲಾದವರೂ ಜನಪ್ರಿಯ ಕವಿಗಳಾಗಿದ್ದಾರೆ. ಒಬ್ಬೊಬ್ಬರು ಒಂದೊಂದು ಬಗೆಯಲ್ಲಿ ರೊಮ್ಯಾಂಟಿಕ್ ಸಾಹಿತ್ಯದ ಲಕ್ಷಣಗಳನ್ನು ತಮ್ಮ ಕೃತಿಗಳಲ್ಲಿ ತೋರಿಸಿದ್ದಾರೆ. ಇವರಿಗಿಂತಲೂ ಕಿರಿಯರಾದ ಐರನ್, ಷೆಲ್ಲಿ, ಕೀಟ್ಸ್ ಕವಿಗಳೂ ರೊಮ್ಯಾಂಟಿಕ್ ಯುಗದ ಪ್ರಾಖರ ದೀಪಗಳು. ಇವರು ಒಬ್ಬೊಬ್ಬರೂ ಒಂದೊಂದು ರೀತಿಯ ಕಾವ್ಯಲಕ್ಷಣಕ್ಕೆ, ಕಾವ್ಯಶೈಲಿಗೆ, ವಸ್ತು ವೈಶಿಷ್ಟ್ಯಕ್ಕೆ ಪ್ರಸಿದ್ಧರು. ಬೈರನ್ ವೈಯಕ್ತಿಕ ಸ್ವಾತಂತ್ರ್ಯ ಕಲ್ಪನಾವೈಭವಗಳಿಗೂ ಷೆಲ್ಲಿ ಉನ್ನತಾದರ್ಶಗಳಿಗೂ ಕೀಟ್ಸ್ ಸೌಂದರ್ಯೋಪಾಸನೆಗೂ ಹೆಸರಾಗಿದ್ದಾರೆ. ಬೈರನ್ನಿನ ಚೈಲ್ಡ್ ಹೆರಾಲ್ಡ್ಸ್ ಪಿಲಿಗ್ರಿಮೇಜ್ ಮೊದಲಾದ ಕವಿತೆಗಳೂ ಷೆಲ್ಲಿಯ ಓಡ್ ಟು ವಸ್ಟ್ ವಿಂಡ್, ಸ್ಕೈಲಾರ್ಕ್ ಮೊದಲಾದ ಭಾವಗೀತೆಗಳೂ ಪ್ರೊಮಿಥ್ಯಾಸ್ ಆನ್ ಬೌಂಡ್ ನಾಟಕವು ಅವರ ಆಲೋಚನೆಗೆ, ಕಾವ್ಯಸೌಂದರ್ಯಕ್ಕೆ ಸೂಚಿಗಳಾಗಿವೆ. ಷೆಲ್ಲಿಯ ಡಿಫೆನ್ಸ ಆಫ್ ಪೊಯಟ್ರಿ ಇಂಗ್ಲಿಷ್ ವಿಮರ್ಶೆಯ ಕ್ಷೇತ್ರದಲ್ಲಿ ಗಣ್ಯ ಕೃತಿಯಾಗಿದೆ. ಕೀಟ್ಸ್‍ನ ಕವನಗಳಲ್ಲಿ ಮಾಲೆಮಾಲೆಯಾಗಿ ಕಂಡುಬರುವ ಚಿತ್ರಗಳ ಪರಂಪರೆ ಅಪೂರ್ವವಾದುದು. ಸುಂದರಕಾವ್ಯ, ಉನ್ನತವಿಚಾರದೋಹನ, ಆದರ್ಶದ ಪ್ರತಿಪಾದನೆ ಇವಕ್ಕೆ ಇವರ ಕಾವ್ಯ ಪ್ರಸಿದ್ಧವಾಗಿದೆ. ಎಲಿಜûಬೆತ್ ಯುಗದ ಕಾವ್ಯದಲ್ಲಿರುವಂತೆಯೇ ಈ ಯುಗದ ಕಾವ್ಯದಲ್ಲೂ ಭಾವೋತ್ಕರ್ಷತೆ ಮತ್ತು ಕಲ್ಪನಾ ವೈಭವಗಳು ಎದ್ದು ಕಾಣುತ್ತವೆ. ಮನೋಭಾವವೂ ಮಾನವಪ್ರೇಮವೂ ಈ ಕವಿಗಳ ಲಕ್ಷಣಗಳು. ಈ ಯುಗದಲ್ಲಿ ಒಳ್ಳೆಯ ನಾಟಕಗಳು ಬರಲಿಲ್ಲ. ಷೆಲ್ಲಿಯ ಚೆಂಚಿಯೊಂದೇ ಹೇಳಬಹುದಾದಂಥ ನಾಟಕ.

ರೊಮ್ಯಾಂಟಿಕ್ ಯುಗದಲ್ಲಿ ಗದ್ಯವೂ ವಿವಿಧ ರೀತಿಯಲ್ಲಿ ಬರಹಗಾರರನ್ನು ಆಕರ್ಷಿಸಿತು. ಛಾರ್ಲ್ಸ್ ಲ್ಯಾಂಬ್, ವಿಲಿಯಂ ಹ್ಯಾಜ್ಲಿಟ್ ಲೇಹಂಟ್, ಥಾಮಸ್ ಡಿಕ್ವಿನ್ಸಿ ಇವರ ಪ್ರಬಂಧಗಳು ಯಾವ ಸಾಹಿತ್ಯಕ್ಕಾದರೂ ಭೂಷಣಪ್ರಾಯವಾಗಿರುವಂಥವು. ಇವರೆಲ್ಲರೂ ಇಂಗ್ಲಿಷಿನಲ್ಲಿ ಪ್ರಬಂಧ ಸಾಹಿತ್ಯದ ಮುನ್ನಡೆಗೆ ಬಹುಮಟ್ಟಿಗೆ ಕಾರಣರಾದವರು. ಲ್ಯಾಂಬ್‍ನ ಪ್ರಬಂಧಗಳು ಅವನ ಸ್ವಂತ ಜೀವನದ ಘಟನೆಗಳಿಗೆ ಮತ್ತು ಅವನ ಬಂಧುಮಿತ್ರರಿಗೆ ಸಂಬಂಧಪಟ್ಟವು. ತತ್ಕಾರಣ ಅವು ಇಂಗ್ಲಿಷಿನ ಪ್ರಬಂಧಗಳಲ್ಲಿ ವೈಯಕ್ತಿಕತೆಗೆ, ಬರೆಹಗಾರನ ಜೀವನಪ್ರದರ್ಶನಕ್ಕೆ ಪ್ರಸಿದ್ಧವಾಗಿವೆ. ದಿ ಪರ್ಸನೆಲ್ ಎಸ್ಸೆ ಎನ್ನಿಸಿಕೊಳ್ಳುವ ಈ ಜಾತಿಯ ಪ್ರಬಂಧಗಳಿಗೆ ಮಾದರಿಗಳಾಗಿವೆ. ಲ್ಯಾಂಬ್‍ನ ಲಘುಹಾಸ್ಯ ಅಪ್ಯಾಯಮಾನವಾದುದು ಹ್ಯಾಜ್ಲಿಟ್, ಲೇಹಂಟ್ ಮತ್ತು ಡಿಕ್ವಿನ್ಸಿಯವರ ಪ್ರಬಂಧಗಳೂ ಅವರ ವ್ಯಕ್ತಿತ್ವಗಳನ್ನು ತೆರೆದು ತೋರುವುದಲ್ಲದೆ ವಿಚಾರಗರ್ಭಿತವಾಗಿಯೂ ಇವೆ. ಹ್ಯಾಜ್ಲಿಟ್ ವಿಮರ್ಶಕನೂ ಆಗಿದ್ದ. ಷೇಕ್ಸ್‍ಪಿಯರ್ ಮತ್ತು ಎಲಿಜûಬೆತ್ ಯುಗದ ಇತರ ನಾಟಕಕಾರರ ಮೇಲೆ ಆತ ಬರೆದಿರುವ ವಿಮರ್ಶೆ ಇಂದೂ ಮನ್ನಣೆ ಪಡೆದಿದೆ. ಇವರೆಲ್ಲ ಕೃತಿಗಳೂ ಅಲ್ಲದೆ, ಸರ್ ವಾಲ್ಟರ್ ಸ್ಕಾಟ್‍ನ ವಿಖ್ಯಾತ ಕಾದಂಬರಿಗಳೂ ಜೇನ್ ಆಸ್ಟೆನಳ ಪ್ರೈಡ್ ಅಂಢ್ ಪ್ರಿಜುಡಿಸ್, ಎಂಬ ಮೊದಲಾದ ಕಾದಂಬರಿಗಳೂ ಇಂಗ್ಲಿಷ್ ಸಾಹಿತ್ಯ ಪ್ರೇಮಿಗಳಿಗೆ ಚಿರಪರಿಚಿತವಾಗಿವೆ. ಐತಿಹಾಸಿಕ ಕಾದಂಬರಿ ಸ್ಕಾಟನ ವಿಶಿಷ್ಟ ಕೊಡುಗೆ ಚರಿತ್ರೆಯ ಶಕ್ತಿಗಳ ಅರಿವು, ವ್ಯಕ್ತಿಗೂ ಅವನ ಸಮುದಾಯದ ಗತಕಾಲಕ್ಕೂ ಇರುವ ಸಂಕೀರ್ಣ ಸಂಬಂಧದ ಅರಿವು ಅವನಿಗಿತ್ತು. ಅವನ ಸ್ಕಾಟಿಷ್ ಕಾದಂಬರಿಗಳೆಲ್ಲ ಸೇರಿ ಒಂದು ಮಹಾಕಾವ್ಯವಾಗುತ್ತದೆ ಎಂದು ಹೇಳುವುದುಂಟು. ಜೇನ್ ಆಸ್ಟಿನ್, ಐರನಿ ಮತ್ತು ಹಾಸ್ಯಗಳನ್ನು ಪಾತ್ರಗಳು ನೈತಿಕವಾಗಿ ಗಟ್ಟಿಯೇ ಟೊಳ್ಳೇ ಎಂದು ಶೋಧಿಸಲು ಬಳಸಿದಳು. ಇಂಗ್ಲಿಷ್ ಕಾದಂಬರಿ `ರೂಪ ಪ್ರಜ್ಞೆಯನ್ನು `ಸೆನ್ಸ್ ಆಫ್ ಫಾರಂ' ಅನ್ನು ಬಲಗೊಳಿಸಿದಳು. (ಎಂ.ಆರ್.; ಎಲ್.ಎಸ್.ಎಸ್.)

ಇಂಗ್ಲಿಷ್ ಸಾಹಿತ್ಯದ ಚರಿತ್ರೆಯಲ್ಲಿ ವಿಜ್ಞಾನದ ಯುಗ[ಸಂಪಾದಿಸಿ]

ಈ ಯುಗಕ್ಕೇ ಸೇರಬೇಕಾದ ಲೇಖಕರ ಹೆಸರುಗಳು ಇನ್ನೂ ಅನೇಕವಿವೆ. ಒಟ್ಟಿನ ಮೇಲೆ ಈ ಯುಗ ಇಂಗ್ಲಿಷ್ ಸಾಹಿತ್ಯದ ಅತ್ಯಂತ ರಸಮಯವಾದ ವೈವಿಧ್ಯಪೂರ್ಣವಾದ ವೈಭವೋಪೇತವಾದ ಯುಗಗಳಲ್ಲಿ ಒಂದು. ಹತ್ತೊಂಬತ್ತನೆ ಶತಮಾನದ ದ್ವಿತೀಯಾರ್ಧ ಇಂಗ್ಲಿಷ್ ಸಾಹಿತ್ಯದ ಚರಿತ್ರೆಯಲ್ಲಿ ವಿಜ್ಞಾನದ ಯುಗ. ಇದನ್ನು ವಿಕ್ಟೋರಿಯ ಯುಗ ಎಂದು ಕರೆಯುತ್ತಾರೆ. ಈ ಯುಗ ಇಂಗ್ಲಿಷ್ ಪ್ರಜಾಪ್ರಭುತ್ವದ ವಿಸ್ತರಣಕ್ಕೂ ವ್ಯಾಪಾರದ ಉತ್ಕರ್ಷಕ್ಕೂ ವಿಜ್ಞಾನದ ಬೆಳೆವಣಿಗೆಗೂ ಹೆಸರಾದುದು. ಇವೆಲ್ಲವುಗಳ ಪರಿಣಾಮ ಸಾಹಿತ್ಯದ ಮೇಲೆ ಆದುದನ್ನು ಕಾಣಬಹುದು. ಸಾಮಾನ್ಯರ ಪ್ರಾಶಸ್ತ್ಯ ಹೆಚ್ಚಿದ್ದರಿಂದ ಅವರಿಗೆ ತಕ್ಕ ಸಾಹಿತ್ಯದ ಸೃಷ್ಟಿಯಾಗಬೇಕಾಯಿತು. ವಾರ್ತಾಪತ್ರಿಕೆಗಳೂ ಮಾಸಪತ್ರಿಕೆ ಮೊದಲಾದವುಗಳೂ ಈ ಸಾಹಿತ್ಯವನ್ನು ಒದಗಿಸಿದುವು. ಕಥೆ, ಕಾದಂಬರಿ ಮೊದಲಾದವನ್ನು ಪ್ರಕಟಿಸಿ ಕಾದಂಬರಿಗಳ ಯುಗವನ್ನೇ ಸ್ಥಾಪಿಸಿದವು. ಸುದೀರ್ಘವಾದ ಸಮಾಜದ ನಾನಾ ಮುಖಗಳನ್ನು ಪ್ರತಿಬಿಂಬಿಸುವ ಕಾದಂಬರಿಗಳು ಮೇಲಿಂದ ಮೇಲೆ ಬಂದವು. ಚಾರಲ್ಸ್ ಡಿಕೆನ್ಸ್, ವಿಲಿಯಮ್ ಮೇಕ್‍ಪೀಸ್ ಥ್ಯಾಕರೆ, ಜಾರ್ಜ್ ವಿಲಿಯಟ್, ಜಾರ್ಜ್ ಮೆರಿಡಿತ್, ಚಾರಲ್ಸ್ ರೀಡ್, ರಾಬರ್ಟ್ ಲೂಯಿ ಸ್ಟೀವನ್‍ಸನ್, ಥಾಮಸ್ ಹಾರ್ಡಿ ಮೊದಲಾದ ಉನ್ನತಮಟ್ಟದ ಕಾದಂಬರಿಕಾರರು ತಮ್ಮ ಕೃತಿಗಳಿಂದ ಇಂಗ್ಲಿಷ್ ಕಾದಂಬರಿ ಪ್ರಪಂಚವನ್ನು ಐಶ್ವರ್ಯಯುತವಾಗಿ ಮಾಡಿದರು. ಆ ಕಾಲದ ಜನರ ಮನೋಧರ್ಮ, ಆರ್ಥಿಕ ಜೀವನ, ಸಂಸ್ಕøತಿ ಮೊದಲಾದವನ್ನು ಕುರಿತು ಥಾಮಸ್ ಕಾರ್ಲೈಲ್, ಜಾನ್ ರಸ್ಕಿನ್ ಮತ್ತು ಮ್ಯಾಥ್ಯೂ ಆರ್ನಾಲ್ಡ್ ಮೊದಲಾದವರು ಬರೆದರು, ಥ್ಯಾಕರೆಯ ವ್ಯಾನಿಟಿ ಫೇರ್, ಡಿಕನ್ಸ್‍ನ ಪಿಕ್ವಿಕ್ ಪೇಪರ್ಸ್, ಡೇವಿಡ್ ಕಾಪರ್‍ಫೀಲ್ಡ್, ಆಲಿವರ್ ಟ್ವಿಸ್ಟ್ ಮೊದಲಾದ ಕೃತಿಗಳೂ ಜಾರ್ಜ್ ಎಲಿಯಟ್ಟಳ ರೋಮೋಲಾ, ಸೈಲಾಸ್ ಮಾರ್ನರ್, ಮೆರಿಡಿತ್ತ್‍ನ ದಿ ಈಗೊಯಿಸ್ಟ್ ಮತ್ತು ಇವಾನ್ ಹ್ಯಾರಿಂಗ್ಟನ್, ಸ್ಟೀವನ್ಸನ್ನಿನ ದಿ ಟ್ರಿಷರ್ ಐಲೆಂಡ್ ಮತ್ತು ಕಿಡ್ನ್ಯಾಪ್ಡ್, ಹಾರ್ಡಿಯ ಟೆಸ್ ಆಫ್ ದಿ ಡಿ ಅರ್ಬರ್‍ವಿಲಿಸ್, ದಿ ರಿಟರ್ನ್ ಆಫ್ ದಿ ನೇಟಿವ್ ಮೊದಲಾದ ಕಾದಂಬರಿಗಳೂ ಜಗತ್ತಿನ ಶ್ರೇಷ್ಠ ಕೃತಿಗಳ ಶ್ರೇಣಿಯಲ್ಲಿ ರಾರಾಜಿಸುತ್ತಿವೆ. ವಿಕ್ಟೋರಿಯಾ ಕಾಲದ ಕಾವ್ಯವೂ ಅತ್ಯುನ್ನತ ಮಟ್ಟದ್ದಲ್ಲದಿದ್ದರೂ ಮಹತ್ತರವಾದುದೇ. ಆಲ್ಫ್ರೆಡ್ ಟೆನಿಸನ್, ರಾಬರ್ಟ್ ಬ್ರೌನಿಂಗ್ ಮತ್ತು ಮ್ಯಾಥ್ಯೂ ಆರ್ನಲ್ಡ್ ಈ ಯುಗದ ಮೂರು ಮುಖ್ಯ ಕವಿಗಳು. ಇವರೆಲ್ಲರ ಕಾವ್ಯದಲ್ಲೂ ನೂತನ ವೈಜ್ಞಾನಿಕ ಸಂಶೋಧನೆಗಳಿಂದ (ಅದರಲ್ಲೂ ಡಾರ್ವಿನ್ನನ ವಿಕಾಸವಾದದಿಂದ) ವಿಚಾರಪರರ ಮನಸ್ಸಿನಲ್ಲಿ ಉಂಟಾದ ಜಿಜ್ಞಾಸೆ ಚೆನ್ನಾಗಿ ವ್ಯಕ್ತವಾಗಿದೆ. ತತ್ಫಲವಾಗಿ ಅವರ ಕಾವ್ಯ ಆಲೋಚನಾಮಯವಾಗಿದೆ. ಟೆನಿಸನ್ನಿನ ಕೃತಿಗಳು ಸುಂದರ ಚಿತ್ರಗಳ ವರ್ಣನೆಗೆ ಇಂಪಾದ ಛಂದೋರಚನೆಗೆ ಪ್ರಸಿದ್ಧವಾಗಿವೆ. ಬ್ರೌನಿಂಗ್ ಸಚೇತಕವಾದ ಆಶಾವಾದಿತ್ವಕ್ಕೆ ಹೆರಾಗಿದ್ದಾನೆ. ಅರ್ನಾಲ್ಡ್ ಸೂಕ್ಷ್ಮರುಚಿಯ ಸೂಕ್ಷ್ಮ ಮನಸ್ಸಿನ ಸಂವೇದನಾಶೀಲನಾದ ಕವಿ. ಆ ಕಾಲದ ಜನರ ಮನದಲ್ಲಿದ್ದ ತುಮುಲ ಅವನ ಕಾವ್ಯದಲ್ಲಿ ಚೆನ್ನಾಗಿ ಪ್ರತಿಬಿಂಬಿತವಾಗಿದೆ. ಅವನು ಪ್ರಸಿದ್ಧ ವಿಮರ್ಶಕನೂ ಆಗಿದ್ದ. ಆಲೋಚನೆಗೆ ಕಾವ್ಯದಲ್ಲಿ ಸ್ಥಾನವಿಲ್ಲ, ಅದು ಗಮನ ಕೊಡಬೇಕಾದುದು ಸೌಂದರ್ಯಕ್ಕೆ ಎಂದು ವಾದಿಸಿ ಈ ಅಭಿಪ್ರಾಯಕ್ಕೆ ಅನುಗುಣವಾಗಿ ಕಾವ್ಯ, ಲೇಖನ ಮಾಡಿದವರು ಪ್ರಿ ರಯಾಫೇಲೈಟ್ಸ್ ಎಂಬ ಗುಂಪಿಗೆ ಸೇರಿದ ವಿಲಿಯಂ ಮಾರಿಸ್, ಡ್ಯಾಂಟೆ ಗೇಬ್ರಿಯಲ್ ರಾಸೆಟಿ, ಮತ್ತು ಛಾರಲ್ಸ್‍ಸ್ವಿನ್‍ಬರ್ನ್, ಮಾರಿಸ್ ಮತ್ತು ರಾಸೆಟಿಯವರ ಕವನಗಳು ಚಿತ್ರಮಯ ವರ್ಣನೆ ಸ್ವಿನ್‍ಬರ್ನನ ಕವನಗಳು ನಾದಮಾಧುರ್ಯಗಳಿಂದಾಗಿ ಗಮನಾರ್ಹವಾಗಿದೆ. ಮಿಸೆಸ್ ಎಲಿಜûಬೆತ್ ಬ್ಯಾರೆಟ್ ಬ್ರೌನಿಂಗ್ ಮತ್ತು ಕ್ರಿಸ್ಟಿನ ರಾಸೆಟಿ ಈ ಕಾಲದ ಗಣ್ಯ ಕವಿಯಿತ್ರಿಯರು. ಎಮಿಲಿ ಬ್ರಾಂಟೆಯೂ ಅಲ್ಪಸ್ವಲ್ಪ ಕವಿತೆಗಳನ್ನು ರಚಿಸಿದಳು. ಅವಳೂ ಅವಳ ಸೋದರಿಯರೂ ಕಾದಂಬರಿಗಳನ್ನೂ ಬರೆದಿದ್ದಾರೆ. ಇವರಲ್ಲದೆ ಈ ಶತಮಾನದ ಕೊನೆಯ ವೇಳೆಗೆ ಆಸ್ಕರ್ ವೈಲ್ಡ್, ರಡ್ಯಾರ್ಡ್ ಕಿಪ್ಲಿಂಗ್, ಜಾರ್ಜ್ ಗಿಸ್ಸಿಂಗ್, ಫ್ರಾನ್ಸಿಸ್ ಥಾಂಪ್‍ಸನ್ ಮೊದಲಾದ ಕವಿಗಳೂ ಬಂದರು. ಹಾರ್ಡಿಯೂ ಕವಿತೆ ಬರೆದ, ಇದರಲ್ಲಿ ಒಬ್ಬೊಬ್ಬರೂ ಒಂದೊಂದು ರೀತಿಯ ಸಾಹಿತ್ಯ ಪ್ರವೃತ್ತಿಗಳಿಗೆ ಪ್ರತಿನಿಧಿಗಳು. ಇಪ್ಪತ್ತನೆ ಶತಮಾನದ ಕಾವ್ಯದ ಗುಣಗಳಲ್ಲಿ ಕೆಲವನ್ನು ಹತ್ತೊಂಬತ್ತನೆ ಶತಮಾನದಲ್ಲೇ ಅನುಷ್ಠಾನಕ್ಕೆ ತಂದ ಜೆರಾರ್ಡ್ ಮ್ಯಾನ್ಲಿ ಹಾಪ್ಕಿನ್ಸ್ ಇದೇ ಕಾಲದವ. ಅವನ ಕವನಗಳು ಅವನ ಜೀವಿತಕಾಲದಲ್ಲೇ ಪ್ರಕಟವಾಗದಿದ್ದ ಕಾರಣ ಆತ ತನ್ನ ಸಮಕಾಲೀನರ ಮೇಲೆ ಪ್ರಭಾವ ಬೀರಲಾಗಲಿಲ್ಲ.

ಹದಿನೆಂಟನೆಯ ಶತಮಾನ[ಸಂಪಾದಿಸಿ]

ಹದಿನೆಂಟನೆಯ ಶತಮಾನದ ಮಧ್ಯಭಾಗದಿಂದ ಕೈಗಾರಿಕಾ ಕ್ರಾಂತಿಯು ತೀವ್ರಗೊಂಡು, ಹತ್ತೊಂಬತ್ತನೆಯ ಶತಮಾನದಲ್ಲಿ ಕೈಗಾರಿಕೆಗಳು ಬೆಳೆಯುತ್ತ ಹೋದವು. ಬ್ರಿಟಿಷ್ ಸಾಮ್ರಾಜ್ಯವೂ ವಿಸ್ತಾರವಾಯಿತು. ಭದ್ರವಾಯಿತು ದೇಶದ ವ್ಯಾಪಾರವಾಣಿಜ್ಯಗಳು ವೇಗವಾಗಿ ಬೆಳೆದವು. ಕೈಗಾರಿಕೆಗಳ ಮೇಲೂ ನಿಯಂತ್ರಣವಿಲ್ಲದುದ್ದರಿಂದ ಮತ್ತು ಸಂಪತ್ತಿನ ನ್ಯಾಯವಾದ ವಿತರಣೆಗೆ ಗಮನ ನೀಡದಿದ್ದುದರಿಂದ ಹಲವಾರು ಸಮಸ್ಯೆಗಳು ತಲೆದೋರಿದ್ದವು. ಕಾರ್ಮಿಕರ ಸ್ಥಿತಿ ದಯನೀಯವಾಯಿತು. ಸಾಮಾಜಿಕ ಕ್ಷೋಭೆ ತಲೆದೋರಿತು. ಸಾಮಾಜಿಕ ಮತ್ತು ನೈತಿಕ ಬದುಕುಗಳಿಗೆ ಸಂಬಂಧಿಸಿದಂತೆ ತೀಕ್ಷ್ಣ ಸಂದಿಗ್ಧಗಳೂ ಸಮಸ್ಯೆಗಳೂ ಕಾಣಿಸಿಕೊಂಡವು. ಅಸಾಧಾರಣ ಪ್ರತಿಭೆಯ ಕಾದಂಬರಿಕಾರ ಡಿಕನ್ಸ್, ಇವನ ಸಮಕಾಲೀನರಾದ ಜಾರ್ಜ್ ಎಲಿಯೆಟ್ ಮೊದಲಾದವರ ಕಾದಂಬರಿಗಳಿಗೆ ಈ ಹಿನ್ನೆಲೆ ಇದೆ. ಡಿಕನ್ಸ್, ಷೇಕ್ಸ್‍ಪಿಯರನಿಗೆ ಸಮನಲ್ಲದಿದ್ದರೂ, ಅವನಂತೆ ಒಂದು ವೈವಿಧ್ಯಮಯ ಪಾತ್ರಗಳ ಜಗತ್ತನ್ನೇ ಸೃಷ್ಟಿಸಿದ. ದುಷ್ಟತನದ ಸಮಸ್ಯೆಯನ್ನು ಕಣ್ಣಿಗೆ ಮನಸ್ಸನ್ನು ತಲ್ಲಣಗೊಳಿಸುವಂತೆ ನಿರೂಪಿಸಿದ ಡಿಕನ್ಸ್‍ನ ಹಾಸ್ಯಪ್ರಜ್ಞೆ, ವಿಡಂಬನೆ ಇವು ಸಮರ್ಥ ಶಸ್ತ್ರಗಳು `ಜಾರ್ಜ್ ಎಲಿಯೆಟ್ ಎಂಬ ಹೆಸರಿನಲ್ಲಿ ಬರೆದ ಮೇರಿ ಆ್ಯನ್ ಈವನ್ಸ್‍ಳಲ್ಲಿ ನೈತಿಕ ಶ್ರದ್ಧೆ, ಗತಕಾಲ-ವರ್ತಮಾನ ಕಾಲಗಳ ಸಂಬಂಧದ ಶೋಧನೆ ಕಾಣುತ್ತದೆ. ಜಾರ್ಜ್ ಮೆರಿಡಿತ್ ಮಾನಸಿಕ ಪದರಗಳನ್ನು ಶೋಧಿಸುತ್ತಾನೆ. ಈ ವಿಕ್ಟೊರಿಯನ್ ಯುಗದ ಅಂತ್ಯದಲ್ಲಿ ಬರುವ ಈತನೂ ಥಾಮಸ್ ಹಾರ್ಡಿಯೂ ವಿಕ್ಟೋರಿಯನ್ ಯುಗ, ಆಧುನಿಕ ಯುಗಗಳ ನಡುವಣ ಸೇತುವೆ. ಕ್ರೈಸ್ತ ಧರ್ಮವನ್ನು ನಿರಾಕರಿಸಿ ಬರೆದ ಮೊದಲನೆಯ ಕಾದಂಬರಿಕಾರ ಹಾರ್ಡಿ. ಮಾನವ ಜಗತ್ತನ್ನು ಮೀರಿದ ಅದೃಶ್ಯ ಶಕ್ತಿಯುಂಟು, ಅದು ಧರ್ಮ-ನ್ಯಾಯಗಳ ಪರವಲ್ಲ. ಅದರದೇ ವಿಶಿಷ್ಟ ಗುರಿಯತ್ತ ಅದು ಸಾಗುತ್ತದೆ, ಅದರ ಮುನ್ನಡೆಗೆ ಅಡ್ಡಿ ಬರುವವರು ಒಳ್ಳೆಯವರಾಗಲಿ ಕೆಟ್ಟವರಾಗಿರಲಿ ಅವರನ್ನು ತುಳಿಯುತ್ತದೆ ಎಂದು ಆತನ ದೃಷ್ಟಿ. ಶ್ರೇಷ್ಠ ದುರಂತ ಕಾದಂಬರಿಗಳನ್ನು ಇವನು ರಚಿಸಿದ. (ಎಂ.ಆರ್.)

ಇಪ್ಪತ್ತನೆಯ ಶತಮಾನದ ಸಾಹಿತ್ಯ[ಸಂಪಾದಿಸಿ]

  • ಇಪ್ಪತ್ತನೆಯ ಶತಮಾನದ ಸಾಹಿತ್ಯ ಶ್ರೀಮಂತವಾಗಿದೆ. ವೈವಿಧ್ಯಮಯವಾಗಿದೆ. ಈ ಸಾಹಿತ್ಯವು ಹಲವು ರಾಜಕೀಯ, ಸಾಮಾಜಿಕ ಮತ್ತು ಸಾಹಿತ್ಯಕ ಪ್ರಭಾವಗಳಿಗೆ ಒಳಗಾಯಿತು. ಈ ಶತಮಾನದ ಪೂರ್ವಾರ್ಧವು ಎರಡು ಜಾಗತಿಕ ಸಮರಗಳನ್ನು ಕಂಡಿತು. ಕೈಗಾರಿಕಾ ಕ್ರಾಂತಿಯಿಂದ ಅಭೂತಪೂರ್ವ ಆರ್ಥಿಕ ಕ್ರಾಂತಿಯನ್ನು ಸಮೃದ್ಧಿಯನ್ನು ತಂದಿದ್ದ ವಿಜ್ಞಾನ, ತಂತ್ರಜ್ಞಾನಗಳು ಯುದ್ಧಕ್ಕೆ ಕಾಣಿಕೆ ನೀಡಿ ಹಿಂದೆ ಎಂದೂ ಇಲ್ಲದಷ್ಟು ಯುದ್ಧಗಳು ಕ್ರೂರವೂ ವಿನಾಶಕವೂ ಆಗುವಂತೆ ಮಾಡಿದವು. ವಿಜ್ಞಾನ-ತಂತ್ರಜ್ಞಾನಗಳ ಕ್ರೂರ ಮುಖದ ಅನಾವರಣವಾಯಿತು. ಈ ಅವಧಿಯಲ್ಲೇ ಕಾರ್ಲ್ ಮಾಕ್ರ್ಸ್‍ನ ಸಿದ್ಧಾಂತಗಳು ಹಬ್ಬಿ ಕಾರ್ಮಿಕರ ಚಳವಳಿಗಳು ಬಲವಾದವು. ಕಾರ್ಮಿಕ ಘರ್ಷಣೆಗಳೂ ಪ್ರಾರಂಭವಾದವು. ಫ್ರಾಯ್ಡ್‍ನ ಮನಶ್ಯಾಸ್ತ್ರದಲ್ಲಿ ರೂಪಿಸಿದ ಸಿದ್ಧಾಂತಗಳು ಮನುಷ್ಯರನ್ನು ಬೆಚ್ಚಿ ಬೀಳಿಸಿದವು. ಮನುಷ್ಯನು ಮನುಷ್ಯನನ್ನು ಅರ್ಥಮಾಡಿಕೊಳ್ಳಲು ಹೊಸ ವಿಧಾನಗಳನ್ನು ಅನುಸರಿಸಿದ. ವಿದ್ಯುಚ್ಛಕ್ತಿ, ಚಲನಚಿತ್ರಗಳು ಬದುಕಿನಲ್ಲಿ ಕ್ರಾಂತಿಯನ್ನುಂಟುಮಾಡಿದವು. ಕಾಲ-ದೇಶಗಳ ಮೇಲಿನ ವಿಜಯ ಇನ್ನೂ ವ್ಯಾಪಕವಾಯಿತು. ದೇಶದ ಒಳಗಡೆ ಸ್ವಯಂಚಾಲಿತ ವಾಹನಗಳ ವೇಗ, ಬಳಕೆ ಹೆಚ್ಚಾದವು. ಜನತೆಯ ಶಿಕ್ಷಣವೂ ಸರ್ಕಾರದ ಹೊಣೆ ಎಂಬ ಅರಿವು ಮೂಡಿತು. 1919ರಲ್ಲಿ ಮಹಿಳೆಯರಿಗೆ ಮತದಾನದ ಹಕ್ಕು ಪ್ರಾಪ್ತವಾಯಿತು. ಕಾರ್ಮಿಕನಿಗೂ ಈ ಹಕ್ಕು ಲಭ್ಯವಾಯಿತು. 1928ರಲ್ಲಿ 21 ವರ್ಷವಾದವರಿಗೆಲ್ಲ ಮತದಾನದ ಹಕ್ಕನ್ನು ಕೊಡಲಾಯಿತು. ಇಂಗ್ಲೆಂಡ್ ಮುಕ್ತ ವ್ಯಾಪಾರ (ಫ್ರೀ ಟ್ರೇಡ್) ದಿಂದ ರಕ್ಷಣಾನೀತಿ (ಪ್ರೊಟೆಕ್ಷ್‍ನಿಸ್ಟ್)ಗೆ ವಾಲಿತು. ಭಾರತದಲ್ಲಿ ಸ್ವಾತಂತ್ರ್ಯ ಚಳವಳಿ ಬಲವಾಯಿತು. ದಕ್ಷಿಣ ಆಫ್ರಿಕದಲ್ಲಿ ಬೋಯರ್ ಯುದ್ಧ ನಡೆಯಿತು. ಬ್ರಿಟಿಷ್ ಸಾಮ್ರಾಜ್ಯಷಾಹಿಗೆ ಸವಾಲುಗಳು ಬಂದವು.
  • ಈ ಶತಮಾನದ ಉತ್ತರಾರ್ಧದಲ್ಲಿ ಬಾಂಬ್‍ನ ಭಯಂಕರ ಶಕ್ತಿಯಿಂದ ಜಗತ್ತು ಇನ್ನೂ ತಲ್ಲಣಿಸುತ್ತಿತ್ತು. ಬ್ರಿಟಿಷ್ ಸಾಮ್ರಾಜ್ಯವು ಕರಗಿ ಹೋಗಿ ಅದರ ರಾಜಕೀಯ ಪ್ರಾಬಲ್ಯ ಕುಗ್ಗಿತ್ತು. ಆರ್ಥಿಕ ವ್ಯವಸ್ಥೆಗೆ ಪೆಟ್ಟು ಬಿದ್ದಿತು. ವಿಜ್ಞಾನ-ತಂತ್ರಜ್ಞಾನಗಳು ಬೆಳೆದು ಕಾಲ, ದೇಶಗಳ ಮೇಲೆ ಪ್ರಭುತ್ವ ಹೆಚ್ಚಾಯಿತು. ಕಂಪ್ಯೂಟರ್ ಬದುಕನ್ನೇ ಕ್ರಾಂತಿಗೊಳಿಸಿತು. ಜಗತ್ತಿನಲ್ಲಿ ಎರಡು ಬಣಗಳ ಸ್ಪರ್ಧೆ ತೀವ್ರವಾಗಿ ಘರ್ಷಣೆಗಳೂ ಶೀತಲ ಸಮರವೂ ತೀಕ್ಷ್ಣವಾದವು. ಆದರೆ ಇದ್ದಕ್ಕಿದಂತೆ ಸೋವಿಯೆಟ್ ರಷ್ಯ ಕರಗಿ ಹೋಗಿ, ರಾಜಕೀಯ ಸಮೀಕರಣಗಳು ಬದಲಾದವು. ಇಂಗ್ಲೆಂಡ್, ಜಪಾನ್‍ನಂತಹ ದೇಶಗಳಿಂದ ಆರ್ಥಿಕವಾಗಿ ತೀವ್ರ ಸ್ಪರ್ಧೆಯನ್ನು ಎದುರಿಸಬೇಕಾಯಿತು. ಜಗತ್ತಿನ ಇತರ ಭಾಗಗಳ ಚಿಂತನೆಗಳು ಮತ್ತು ಸಾಹಿತ್ಯಗಳು ಹೆಚ್ಚಿನ ಪ್ರಮಾಣದಲ್ಲಿ ಲಭ್ಯವಾದವು. ಐನ್‍ಸ್ಟೀನನ ಸಾಪೇಕ್ಷ ಸಿದ್ಧಾಂತವೂ ಅನಂತರದ ವೈಜ್ಞಾನಿಕ ಬೆಳವಣಿಗೆಗಳು ಜಗತ್ತಿನ ಚಿಂತನೆಯ ಮೇಲೆ ಗಾಢವಾದ ಪರಿಣಾಮವನ್ನು ಬೀರಿದವು.

ಜಾರ್ಜ್‍ಯನ್ ಕವಿಗಳು[ಸಂಪಾದಿಸಿ]

  • ಈ ಶತಮಾನದ ಪ್ರಾರಂಭದ ವರ್ಷಗಳಲ್ಲಿ ಕಾವ್ಯರಚನೆ ಮಾಡಿದ ಕವಿಗಳನ್ನು `ಜಾರ್ಜ್‍ಯನ್ ಕವಿಗಳು ಎಂದು ಕರೆಯುತ್ತಾರೆ. ಇವರಲ್ಲಿ ಬಹು ಜನಪ್ರಿಯತೆಗಳಿಸಿದವನು ರೂಪರ್ಟ್ ಬ್ವುಕ್ (1893-1918). ಈ ಕವಿಗಳು ನೇರವಾಗಿ ಮಹಾಯುದ್ಧದಲ್ಲಿ ಭಾಗವಹಿಸಿದವರು. ಇವರಲ್ಲಿ ಬಹು ಮಂದಿ ಚಿಕ್ಕ ವಯಸ್ಸಿನಲ್ಲಿ ಯುದ್ಧಕ್ಕೆ ಬಲಿಯಾದರು. ಇವರು ಯುದ್ಧದ ನೋವು, ದೇಶಾಭಿಮಾನ ಇವುಗಳಿಗೆ ದನಿಕೊಡುತ್ತಾರೆ. ವಾಲ್ಟರ್ ಡಿ.ಟಿ.ಮೇಕ್, ಡಿ.ಎಚ್.ಲರೆನ್ಸ್ ಡಬ್ಲ್ಯು ಬಿ ಯೇಟ್ಸ್, ಟಿ.ಎಸ್.ಎಲಿಯಟ್, ಡಬ್ಲ್ಯು ಬಿ.ಆಡನ್ ಶತಮಾನದ ಪೂರ್ವಾರ್ಧದ ಪ್ರಮುಖ ಕವಿಗಳು. ಯೇಟ್ಸ್‍ನ ಕವನಗಳು ಬದುಕಿನ ಎಲ್ಲ ಅನುಭವಗಳನ್ನು ಸ್ವೀಕರಿಸಿ, ತನ್ನೊಳಗಿನ ತಳಮಳ-ನಿರಾಸೆ-ಭರವಸೆ ಯಾವುದನ್ನು ಮುಚ್ಚಿಡದೆ, ಶಕ್ತವಾದ ವ್ಯಕ್ತಿತ್ವದಿಂದ ಮೂಡಿದ ಕನವಗಳು. ಎಲಿಯೆಟ್, ಮೊದಲ ಮಹಾಯುದ್ಧದ ನಂತರ ಮೂಡಿದ ನಿರಾಸೆ, ಆಧ್ಯಾತ್ಮಿಕ ಶೂನ್ಯ ಇವುಗಳಿಗೆ ಅಭಿವ್ಯಕ್ತಿ ನೀಡಿದ. ಈ ಅಭಿವ್ಯಕ್ತಿಯ ರೀತಿ ಹಿಂದಿನ ಕಾವ್ಯಕ್ಕಿಂತ ತೀರ ಭಿನ್ನವಾಗಿದ್ದು ಹೊಸ ಯುಗಕ್ಕೆ ನಾಂದಿಯಾಯಿತು. ಅನಂತರದ ವರ್ಷಗಳಲ್ಲಿ ಸಮಾಧಾನವನ್ನು ಕಂಡುಕೊಂಡ ಎಲಿಯಟ್ ಬರೆದ `ದ ಫೋರ್ ಕ್ಯಾರ್ಟೆಟ್ಸ್ ಶತಮಾನದ ಅತ್ಯಂತ ಮಹತ್ವದ ಚಿಂತನೆಯ ಕಾವ್ಯವಾಯಿತು. ಉತ್ತರಾರ್ಧದಲ್ಲಿ ಫಿಲಿಪ್ ಲಾರ್ಕಿನ್, ಟೆಡ್ ಹ್ಯೂಸ್, ಇವನ ಹೆಂಡತಿ ಸಿಲ್ವಿಯ ಪ್ಲಾವ್, ಪೀಟರ್ ಪೋರ್ಟರ್ ಮೊದಲಾದವರು ಪ್ರಮುಖ ಕವಿಗಳು.

ನಾಟಕ[ಸಂಪಾದಿಸಿ]

  • ರೊಮ್ಯಾಂಟಿಕ್ ಯುಗ ಮತ್ತು ವಿಕ್ಟೋರಿಯನ್ ಯುಗಗಳಲ್ಲಿ ಗಮನಾರ್ಹ ನಾಟಕಕಾರರು ಬರಲಿಲ್ಲ. 20ನೆಯ ಶತಮಾನದ ಪೂರ್ವಾರ್ಧದಲ್ಲಿ ಪ್ರಾರಂಭದಲ್ಲಿ ನಾಟಕಕ್ಕೆ ಸ್ವಲ್ಪ ಜೀವಕಳೆ ನೀಡಿದವರು ಆರ್ಥರ್ ಹೆನ್ರಿ ಜೋನ್ಸ್ ಮತ್ತು ಆರ್ಥರ್ ವಿಂಗ್ ಪಿನಿಡೊ. ಆದರೆ, ನಾಟಕ ಮಂದಿರಕ್ಕೆ ಹೊಸ ಜೀವ, ಚೈತನ್ಯ ನೀಡಿದವನು ಜಾರ್ಜ್ ಬರ್ನಾರ್ಡ್ ಷಾ. ನಾಟಕಮಂದಿರವನ್ನು ಚಿಂತನೆಯ ಮಂದಿರವನ್ನಾಗಿ, ಸಾಮಾಜಿಕ ಕ್ರಾಂತಿಯ ರಂಗವನ್ನಾಗಿ ಮಾಡಬಯಸಿದ. ಇವನ ಮಾತಿನ ಚಮತ್ಕಾರ ಅದ್ಭುತವಾದದ್ದು. ವಾದ ವಿವಾದಗಳೆಂದರೆ ಉತ್ಸಾಹ. ನಾಟಕಗಳನ್ನು ಪ್ರಕಟಿಸುವಾಗ ಸುದೀರ್ಘ ಮುನ್ನುಡಿಗಳನ್ನು ಬರೆದ. ಮನುಷ್ಯ ಸ್ವಭಾವವನ್ನು ಆಳವಾಗಿ ಗ್ರಹಿಸದಿದ್ದರೂ ರಂಗಮಂದಿರದಲ್ಲಿ ಮಾತಿನ ಮಿಂಚಿನಿಂದ, ಮೋಡಿಯಿಂದ, ಐರನಿಯಿಂದ ಅತ್ಯಂತ ಪರಿಣಾಮಕಾರಿ ನಾಟಕಕಾರನಾದ ಈಗ ಆತನ ನಾಟಕಗಳ ಹೊಳಪು ಮಾಸಿದೆ. ಜಾನ್ ಗಾಲ್ಸ್ ವರ್ದಿ, ಸೀನ್ ಒಡೇಸಿ, ಟೆರೆನ್ಸ್ ರ್ಯಾಟಿಗನ್ ಗಮನಿಸಬೇಕಾದ ಇತರ ನಾಟಕಕಾರರು. ಯೇಟ್ಸ್ ಮತ್ತು ಎಲಿಯೇಟ್ ಕಾವ್ಯರೂಪಕ (ಪೊಯಟಿಕ್ ಡ್ರಾಮ)ಕ್ಕೆ ಮತ್ತೆ ಜೀವ ನೀಡಿದರು. ಕ್ರಿಸ್ಟಫರ್ ಫ್ರೈ, ಜೆ.ಬಿ. ಪ್ರೀಸ್ಟ್‍ಲಿ, ಆಡನ್, ಕ್ರಿಸ್ಟಫರ್ ಇಷರ್‍ವುಡ್ ಇವರು ಇದೇ ಕಾಲದ ನಾಟಕಕಾರರು. ಜೆ.ಎಂ.ಸಿಂಗ್, ಸಾಮರ್‍ಸೆಟ್ ಮಾಮ್, ನೊಯೆಲ್ ಕಾರ್ಡ್ ವೈನೋದಿಕಗಳನ್ನು ಬರೆದರು.
  • 1956ರ ಮೇ 8ರಂದು ಜಾನ್ ಅಸ್‍ಬಾರ್ನ್‍ನ `ಲುಕ್ ಬ್ಯಾಕ್ ಇನ್ ಆಂಗರ್ ಎನ್ನುವ ನಾಟಕವು ಪ್ರದರ್ಶಿತವಾಯಿತು. ಇದರೊಂದಿಗೆ ಇಂಗ್ಲಿಷ್ ನಾಟಕ ಹೊಸ ಯುಗಕ್ಕೆ ಕಾಲಿಟ್ಟಿತು. `ದಿ ಆ್ಯಂಗ್ರಿ ಯಂಗ್ ಮ್ಯಾನ್ ಥಿಯೇಟರ್ ಜನ್ಮತಾಳಿತು. ಎರಡನೆಯ ಮಹಾಯುದ್ಧದ ನಂತರ ತರುಣ ಜನಾಂಗದಲ್ಲಿ ಮೊಳಕೆ ಇಟ್ಟ ಅಸಮಾಧಾನ, ಕ್ರೋಧ ನಿರಾಸೆ ಎಲ್ಲ ಈ ಬಗೆಯ ನಾಟಕಗಳಲ್ಲಿ ಪ್ರಕಟವಾದವು. ಒಂದು ವರ್ಷದ ನಂತರ ಪ್ರದರ್ಶಿತವಾದ ಸ್ಯಾಮ್ಯುಎಟ್ ಬೆಕೆಟನ ನಾಟಕ `ವೆಯ್‍ಟಿಂಗ್ ಫಾರ್ ಗೋಡೋ ಮನುಷ್ಯನನ್ನು ಅವನ ಮೂಲಸ್ಥಿತಿಗೆ, ಅತ್ಯಂತ ನಿಸ್ಸಹಾಯಕ ಮತ್ತು ಅನಿಶ್ಚಯತೆಗಳ ಸ್ಥಿತಿಗೆ ಇಳಿಸಿ, ಯಾವುದೇ ಆಸೆ-ಭರವಸೆಗಳ ಕನ್ನಡಕವಿಲ್ಲದೆ ಬದುಕಿನ ವಾಸ್ತವಿಕತೆಯನ್ನು ಕಾಣುವ ಪ್ರಯತ್ನ. ಇದರೊಂದಿಗೆ `ಅಬ್ಸರ್ಡ್ ಥಿಯೇಟರ್ ಪ್ರಾರಂಭವಾಯಿತು. ಈ ಕಾಲದ ಇತರ ಗಮನಾರ್ಹ ನಾಟಕಕಾರರು ಆರ್ನಲ್ಡ್ ವೆಸ್ಕರ್, ಜಾನ್ ಆರ್ಡನ್, ಎಡ್ವರ್ಡ್ ಬಾಂಡ್ ಮೊದಲಾದವರು, ವೈನೋದಿಕ ಪ್ರಕಾರದಲ್ಲಿ ಹೆರಾಲ್ಡ್ ಪಿಂಟರ್, ಟಾಮ್ ಸ್ಟಾಫರ್ಡ್, (ಶ್ರೀಮತಿ) ಕಾವಿಟ್ ಚರ್ಚಿಲ್ ಮೊದಲಾದವರು.
  • ಈ ಅವಧಿಯಲ್ಲಿ ಇಂಗ್ಲಿಷ್ ನಾಟಕವು ಹಲವು ಆಂದೋಲನಗಳನ್ನು ಕಂಡಿತು. ಇವುಗಳಲ್ಲಿ ಪ್ರಮುಖವಾದವು ವರ್ಕರ್ಸ್ ಥಿಯೇಟರ್ ಮೂವ್‍ಮೆಂಟ್, ಫೆಮಿನಿಸ್ಟ್ ಥಿಯೇಟರ್, ಐರಿಷ್ ಥಿಯೇಟರ್ ಮತ್ತು ಥಿಯೇಟಿಕ್ ಆಫ್ ದಿ ಅಬ್ಸರ್ಡ್

ಕಾದಂಬರಿ ಪ್ರಕಾರದಲ್ಲಿ ಮಧ್ಯಂತರ ಅವಧಿ[ಸಂಪಾದಿಸಿ]

  • ಕಾದಂಬರಿ ಪ್ರಕಾರದಲ್ಲಿ 1900ರಿಂದ 1920ರವರೆಗೆ ಮಧ್ಯಂತರ ಅವಧಿ, ವಿಕ್ಟೋರಿಯ, ಯುಗದಿಂದ ಆಧುನಿಕ ಯುಗಕ್ಕೆ ಸೇತುವೆ. 1920ರ ದಶಕದಲ್ಲಿ ಜೇಮ್ಸ್ ಜಾಯ್ಸ್‍ನ `ಯೂಲಿಸಿಸ್(1922), ವರ್ಜೀನಿಯ ವುಲ್ಫಳ `ಮಿಸೆಸ್ ಡಾಲೊನೆಟ್ (1925) ಮತ್ತು ಡಿ.ಎಚ್. ಲರೆನ್ಸನ ಕಾದಂಬರಿಗಳು ಹೊಸ ಯುಗದ ಉದಯವನ್ನು ಸ್ಪಷ್ಟವಾಗಿ ಸಾರಿದವು. ಹಾರ್ಡಿಂiÀi ಕಾದಂಬರಿಗಳಲ್ಲಿಯೂ ಕಥಾವಸ್ತುವಿಗೆ ಪ್ರಾಧಾನ್ಯ, ಕಥಾವಸ್ತುವು ಹಲವು ಘಟನಾವಳಿಗಳ ಸರಪಳಿ. ಆದರೆ ಕ್ರಮೇಣ ಕಥಾವಸ್ತುವಿನ ಪ್ರಾಧಾನ್ಯ ಕಡಿಮೆಯಾಯಿತು. `ಓಪನ್ ಎಂಡೆಡ್ ಕಾದಂಬರಿಗಳು (ಪಾತ್ರಗಳ ಪ್ರಾಪಂಚಿಕ ಸ್ಥಿತಿಯನ್ನು ಒಂದು ಸ್ಪಷ್ಟ ಘಟ್ಟಕ್ಕೆ ತಂದು ನಿಲ್ಲಿಸದಿರುವ ಕಾದಂಬರಿಗಳು) ಹೆಚ್ಚಾದವು. ಕಾದಂಬರಿಯಲ್ಲಿ ನೈತಿಕ ನಿಲುವು, ಮನುಷ್ಯನ ಬದುಕಿನ ದರ್ಶನ ಇವು ಮೈದಾಳಿದವು. ಕಾಲ (ಟೈಂ)ದ ಸ್ವರೂಪದಲ್ಲಿ ಆಸಕ್ತಿ ಬೆಳೆಯಿತು. ಭಾಷೆಯ ಸಂವಹನ ಸ್ವರೂಪದಲ್ಲಿ ಆಸಕ್ತಿ ಉಂಟಾಯಿತು
  • ಇಂಗ್ಲಿಷ್ ಕಾದಂಬರಿಯ ಚರಿತ್ರೆಯಲ್ಲಿ ಹೆನ್ರಿ ಜೇಮ್ಸ್‍ನ ಸ್ಥಾನದ ಬಗ್ಗೆ ವಿವಾದ ಉಂಟು. ಅವನು ಹುಟ್ಟಿದುದು ಅಮೆರಿಕದಲ್ಲಿ. 33ನೇ ವರ್ಷದಲ್ಲಿ ಇಂಗ್ಲೆಂಡಿಗೆ ಬಂದು ನೆಲಸಿದ. ಇವನು ಪಾತ್ರಗಳ ಮನಸ್ಸಿನಲ್ಲಿಳಿದು ಅನುಭವವನ್ನು ಅವರ ಪ್ರಜ್ಞೆಯೊಳಗಿಂದ ಕಾಣುತ್ತಾನೆ. ಈತನ ಗುರಿ, `ಸಂಪೂರ್ಣ ಮನುಷ್ಯನನ್ನು ಆತನ ಆವರಣದಲ್ಲಿ ಚಿತ್ರಿಸುವುದು.
  • ಇವನಿಗೆ ಮುಖ್ಯವಾಗಿದ್ದುದು ಒಂದು ದೃಷ್ಟಿಕೋನ. ದೃಷ್ಟಿಕೋನವೇ ಕಾದಂಬರಿಯ ಆಧಾರ. ಮುಖ್ಯ ಪಾತ್ರದ ಮನಸ್ಸಿನೊಳಗೆ ಇಳಿದು ಅದರೊಳಗಿಂದ ಇವನ ಪಾತ್ರಗಳನ್ನು ಕಾಣುತ್ತಾನೆ. ಇವನು ಕಾದಂಬರಿಯ ಹೊಸ ಸಾಧ್ಯತೆಗಳನ್ನು ತೋರಿಸಿಕೊಟ್ಟ. ಜಾನ್ ಗಾಲ್ಸ್‍ವರ್ದಿಯ `ದ ಫಾರ್‍ಸೈಟ್ ಸಾಗಾ; ಶ್ರೀಮಂತವರ್ಗದ ವಿಡಂಬನೆ. ಎಚ್.ಜಿ.ವೆಲ್ಸ್ `ಸೈಂಟಿಫಿಕ್ ಫಿಕ್‍ಷನ್ ಅಥವಾ `ವೈಜ್ಞಾನಿಕ ಕಾಲ್ಪನಿಕ (ಕಾದಂಬರಿ) ರೂಪವನ್ನು ಬಲಗೊಳಿಸಿದವನು. `ದ ಟೈಮ್ ಮೆಷೀನ್ `ದ ವಾರ್ ಆಫ್ ದ ವಲ್ಡ್ರ್ಸ್ ಮುಂತಾದ ಕಾದಂಬರಿಗಳಲ್ಲಿ ವಿಜ್ಞಾನವು ಗೆದ್ದುಕೊಂಡ ಜ್ಞಾನಕ್ಕೆ ಕಲ್ಪನೆಯ ರೆಕ್ಕೆಗಳನ್ನು ಕೊಡುತ್ತಾನೆ. ಥಾಮಸ್ ಹಾರ್ಡಿ ನಿರಾಶಾವಾದಿ. ಕ್ರೈಸ್ತಮತದ ಕರುಣಾಯ ದೇವನ ಪರಿಕಲ್ಪನೆಯನ್ನು ತಿರಸ್ಕರಿಸಿ, ಮನುಷ್ಯನ ಗುಣ, ಯೋಗ್ಯತೆಗಳಿಗೆ ಲಕ್ಷ್ಯಕೊಡದ, ತನ್ನದೇ ಗುರಿ ಇರುವ ಒಂದು ಪ್ರಬಲ ಅದೃಶ್ಯ ಶಕ್ತಿಯನ್ನು ಕಂಡ ಶ್ರೇಷ್ಠ `ಟ್ರ್ಯಾಜಿಕ್ ಕಾದಂಬರಿಗಳನ್ನು ಬರೆದ. ಈ ಕಾದಂಬರಿಗಳಲ್ಲಿ ಮಾನವ ಕುಲವನ್ನು ನಿಗೂಢ ವಿಶ್ವದ ಹಿನ್ನೆಲೆಯಲ್ಲಿ ಕಾಣುತ್ತೇವೆ. ಇವನು ಆಧುನಿಕ ಕಾದಂಬರಿಗೆ ಸಿದ್ಧತೆ ಮಾಡಿದವನು. ಡಿ.ಎಚ್.ಲಾರೆನ್ಸ್, ತನ್ನ ಕಾಲದಲ್ಲಿ ಅಶ್ಲೀಲ ಬರಹಗಾರ ಎನ್ನುವ ಆಪಾದನೆಯನ್ನು ಎದುರಿಸಿದ. ಬದುಕನ್ನು ಒಪ್ಪಿಕೊಳ್ಳಬೇಕು, ಸಹಜವಾಗಿ ಅನುಭವಿಸಬೇಕು ಎನ್ನುವುದು ಆತನ ನಿಲುವು. ಜೋಸೆಫ್ ಕಾನ್ರಾಡ್ `ಮಾಂಟಾಜ್ ಪರಿಣಾಮವನ್ನು ಸಾಧಿಸುತ್ತಾನೆ. ಅನುಭವದ ಸಂಕೀರ್ಣತೆಯನ್ನು ಮನದಟ್ಟು ಮಾಡಿಕೊಡುತ್ತಾನೆ. ಜಾರ್ಜ್ ಆರ್‍ವೆಲ್ (ಎತಿಕ್ ಬ್ಲೇರ್) ಎರಡು ರಾಜಕೀಯ ಕಾದಂಬರಿಗಳನ್ನು ಬರೆದ, ಎರಡೂ (`ಅನಿಮಲ್ ಫಾರ್ಮ್, `ನೈನ್‍ಟೀನ್ ಎಯ್ಟಿಫೋರ್) ವಾಮಪಂಥದ ಸಿದ್ಧ ಪದಬೃಂದಗಳನ್ನು ಬಳಸುತ್ತಲೇ ಅದಕ್ಕೆ ದ್ರೋಹ ಮಾಡುವುದು ಎಷ್ಟು ಸುಲಭ ಎನ್ನುವುದನ್ನೂ ತೋರಿಸುತ್ತವೆ. ಜೇಮ್ಸ್ ಜಾಯ್ಸಿನ ಹಲವು ಕಾದಂಬರಿಗಳಲ್ಲಿ `ಯೂಲಿಸಿಸ್ ಅತ್ಯಂತ ಪ್ರಸಿದ್ಧವಾದದ್ದು. ಈ ಬೃಹತ್ ಕಾದಂಬರಿ ಇಪ್ಪತ್ತನಾಲ್ಕು ಗಂಟೆಗಳಲ್ಲಿ ನಡೆಯುವ ಕ್ರಿಯೆಯನ್ನು ನಿರೂಪಿಸುತ್ತದೆ. ಕಾದಂಬರಿಯು ಸಂಕೇತಗಳಿಂದ ತುಂಬಿಹೋಗಿದೆ. ಭಾಷೆಗೆ ಅಸಾಧಾರಣ ಗಮನಕೊಟ್ಟು, ಪದಪದಕ್ಕೂ, ವಾಕ್ಯವಾಕ್ಯಕ್ಕೂ ವಾಕ್ಯದ ಲಯಕ್ಕೆ ಗಮನಕೊಟ್ಟು ಜಾಯ್ಸ್ ಬರೆದ. ಇವನು `ಸ್ಟೀಮ್ ಆಫ್ ಕಾನ್‍ಷಸ್‍ನೆಸ್ ತಂತ್ರವನ್ನು ಬಳಸಿದ. ವರ್ಜಿನಿಯ ವುಲ್ಫ್ ಸಹ ಇದೇ ತಂತ್ರವನ್ನು ಬಳಸಿದಳು. ಇ.ಎಂ.ಫಾರ್‍ಸ್ಟರ್, ಐ.ವಿ.ಕಾಂಪ್ಟನ್-ಬರ್ನೆಟ್, ಆಲ್ಡಸ್ ಹಕ್ಸ್‍ಲಿ ಈ ಕಾಲದ ಇತರ ಗಮನಾರ್ಹ ಕಾದಂಬರಿಕಾರರು.
  • ಅನಂತರದ ಅವಧಿಯ ಪ್ರಮುಖ ಕಾದಂಬರಿಕಾರರಲ್ಲಿ ಒಬ್ಬ ಗ್ರಹಾಂ ಗ್ರೀನ್. ಕಷ್ಟವಾದ ನೈತಿಕ ಆಯ್ಕೆಗಳನ್ನು ಎದುರಿಸುವ ಮನುಷ್ಯ ಇವನ ವಸ್ತು. ಭಗವಂತನ `ಗ್ರೇಸ್ (ಕೃಪೆ)ಗೆ ಇವನು ಮಹತ್ವ ನೀಡುತ್ತಾನೆ. ಆರ್ಥರ್ ಕೊಯ್‍ಸ್ಲರ್‍ನ ಬದುಕೇ ಅಸಾಧಾರಣ ಘಟನೆಗಳಿಂದ, ಅನುಭವಗಳಿಂದ ತುಂಬಿಹೋದದ್ದು. ಸ್ವಾತಂತ್ರ್ಯದ ಬಯಕೆ ಇವನ ಕಾದಂಬರಿಗಳಲ್ಲಿ ತೀವ್ರವಾಗಿದೆ. ವಿಲಿಯಂ ಗೋಲ್ಡಿಂಗನೊ ಸಮಾಜದ ಪರಂಪರೆ ಮತ್ತು ಕಟ್ಟುಪಾಡುಗಳಿಂದ ದೂರವಿರುವ ಮನುಷ್ಯರು ಕಷ್ಟವಾದ ನೈತಿಕ ಆಯ್ಕೆಗಳನ್ನು ಮಾಡುವುದನ್ನು ನಿರೂಪಿಸುತ್ತಾನೆ.
  • ಎರಡನೆಯ ಮಹಾಯುದ್ಧದ ನಂತರದ ಕಾಲ ನಿರಾಸೆ, ಗೊಂದಲಗಳ ಕಾಲ, ಬದುಕಿನ ಸ್ವರೂಪ-ಮೌಲ್ಯಗಳ, ಮತ್ತೊಂದು ಅನ್ವೇಷಣೆಯ ಕಾಲ. ಫಿಲಿಪ್ ಲಾರ್ಕಿನ್, ವಿಲಿಯಂ ಕೂಪರ್, ಜಾನ್ ವೇಯ್ನ್, ಮೊದಲಾದವರ ಕಾದಂಬರಿಗಳಲ್ಲಿ `ಆ್ಯಂಗ್ರಿ ಯಂಗ್ ಮ್ಯಾನ್ (ಕ್ಷುದ್ರ ತರುಣ)ನ ಮನಃಸ್ಥಿತಿಯನ್ನು ಕಾಣುತ್ತೇವೆ. ಡೇವಿಡ್ ಸ್ಕೋಂ ಆಂಗಸ್ ವಿಲ್ಸನ್ ಮೊದಲಾದವರ ಕಾದಂಬರಿಗಳಲ್ಲಿ `ಸೋಷಿಯಲ್ ರಿಯಲಿಸಂ' (ಸಾಮಾಜಿಕ ವಾಸ್ತವತೆ ಕಾಣುತ್ತದೆ. ಎರಡನೆಯ ಮಹಾಯುದ್ಧದ ಅನಂತರದ ಒತ್ತಡಗಳಿಂದ ತಪ್ಪಿಸಿಕೊಳ್ಳುವ `ಫ್ಯಾಂಟಸಿಗಳೂ ಕಾಣಿಸಿಕೊಂಡವು. ಜೇಮ್ಸ್ ಬಾಂಡ್‍ನ ಕಥೆಗಳನ್ನು ಐಯಾನ್‍ಫ್ಲೆಮಿಂಗ್ ಬರೆದ. ಹೆಡ್ಲಿ ಛೇಸ್ ಇಂಥವೇ ಪಲಾಯನ ಕಾದಂಬರಿಗಳನ್ನು ಬರೆದ. ಇವುಗಳಲ್ಲಿ ನೈತಿಕತೆಯ ಸುಳಿವೇ ಇಲ್ಲ. ಪಾಲ್ ಸ್ಕಾಟ್‍ನಂಥವರು ನಷ್ಟವಾದ ಸಾಮ್ರಾಜ್ಯವನ್ನು ವಸ್ತುವಾಗಿ ಆರಿಸಿಕೊಂಡರು. ಈ ಅವಧಿಯಲ್ಲಿ ಜೇನ್‍ರಿಸ್, ಅನಿತ ಬ್ಯುಕ್‍ನರ್ ಹಲವರು ಮಹಿಳೆಯರು ಕಾದಂಬರಿಗಳನ್ನು ಬರೆದರು.
  • ಇಪ್ಪತ್ತನೆಯ ಶತಮಾನದಲ್ಲಿ ಕಾದಂಬರಿಕಾರನು ತತ್ತರಿಸುವ ಅನುಭವಗಳಿಗೆ ಒಳಗಾದ. ಕಾದಂಬರಿಯು ವಸ್ತುಗಳನ್ನು ಆರಿಸಿಕೊಂಡಿತು. ಇದಕ್ಕೆ ಅನುಗುಣವಾಗಿ ರೂಪದಲ್ಲಿ ಪ್ರಯೋಗಗಳಾದವು. ನಿಯತಕಾಲಿಕಗಳ ಮೇಲೆ ಕಾದಂಬರಿಕಾರನ ಅವಲಂಬನೆ ಕಡಿಮೆಯಾದುದರಿಂದ ಹಲವು ರೀತಿಗಳಲ್ಲಿ ಆತನ ಸ್ವಾತಂತ್ರ್ಯ ವಿಸ್ತಾರವಾಯಿತು.

ಗದ್ಯ[ಸಂಪಾದಿಸಿ]

  • ಬದುಕು ಹಲವು ದಿಕ್ಕುಗಳಲ್ಲಿ ಚಾಚಿಕೊಂಡಂತೆ ಗದ್ಯವು ನಿರ್ವಹಿಸಬೇಕಾದ ಹೊಣೆಗಳೂ ಹೆಚ್ಚಿದವು. ಹಲವರು ತಮ್ಮ ಅನುಭವಗಳನ್ನು ನಿರೂಪಿಸಿ ಆತ್ಮವೃತ್ತಗಳನ್ನು ಬರೆದರು. ಹಲವರು ಆರ್ಥಿಕ, ಸಾಮಾಜಿಕ, ರಾಜಕೀಯ ಮತ್ತು ನೈತಿಕ ಸವಾಲುಗಳನ್ನು ಪರಾಮರ್ಶಿಸಿದರು. ವೇಗವಾಗಿ ಬೆಳೆಯುತ್ತಿದ್ದ ವಿಜ್ಞಾನದ ತಿಳವಳಿಕೆಯನ್ನು ಜನ ಸಾಮಾನ್ಯರಿಗೆ ಕೊಂಡೊಯ್ಯಲು ಮತ್ತು ವಿಜ್ಞಾನದ ಆವಿಷ್ಕಾರಗಳು ಬದುಕಿನ ಮೇಲೆ ಮಾಡುವ ಪ್ರಭಾವವನ್ನು ವಿಮರ್ಶಿಸಲು ವಿಜ್ಞಾನಿಗಳು ಪುಸ್ತಕಗಳನ್ನು ಬರೆದರು. ಜಗವು ಕಿರಿದಾದಂತೆ ಪ್ರವಾಸವೂ ಹೆಚ್ಚಿ, ಪ್ರವಾಸ ಸಾಹಿತ್ಯ ಬೆಳೆಯಿತು. ಇವೆಲ್ಲದರ ನಡುವೆ ಲಲಿತ ಪ್ರಬಂಧ ಸ್ಪಲ್ಪಮಟ್ಟಿಗೆ ಹಿಂದಕ್ಕೆ ಸರಿಯಿತು.
  • ವಿನ್ಸ್‍ಟನ್ ಚರ್ಚಿಲ್, ಲಾನ್ಸ್‍ಲಾಟ್ ಹಾಗ್‍ಬೆನ್, ಎಡ್ಮಂಡ್ ಬ್ಲಂಡನ್, ಜೆ.ಬಿ.ಎಸ್.ಹಾಲ್ಡೇನ್, ಎ.ಎಸ್.ಎಡಿಂಗ್‍ಟನ್, ಸಿ.ಇ.ಎಂ.ಜೋಡ್, ಬರ್ನಾರ್ಡ್ ಷಾ, ಬರ್‍ಟ್ರಂಡ್ ರಸೆಲ್, ಆಲ್ಡಸ್ ಹಕ್ಸ್‍ಲಿ ಮೊದಲಾದವರು ಈ ಯುಗದ ಪ್ರಸಿದ್ಧ ಗದ್ಯ ಬರಹಗಾರರು.(ನೋಡಿ- ಇಂಗ್ಲಿಷ್-ಸಾಹಿತ್ಯ-ವಿಮರ್ಶೆ)

(ಪರಿಷ್ಕರಣೆ: ಎಲ್.ಎಸ್.ಎಸ್.)

ನೋಡಿ[ಸಂಪಾದಿಸಿ]

ರೊಮ್ಯಾಂಟಿಕ್ ಯುಗದ ಹರಿಕಾರರು