ಪುಟ:ಹಳ್ಳಿಯ ಚಿತ್ರಗಳು.djvu/೧೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನಗೆಯ ನೀತಿ

೧೦೩

ಬೇಕಾದಾಗ ಊಟಕ್ಕೆ ಕುಳಿತುಕೊಳ್ಳುತ್ತಿದ್ದರು. ಕೆಲವರು ಪರಿಶೇಚನವನ್ನೇ ಮಾಡುತ್ತಿರಲಿಲ್ಲ. ಕೆಲವರು ಆಪೋಶನವನ್ನೇ ತೆಗೆದುಕೊಳ್ಳುತ್ತಿರಲ್ಲಿಲ್ಲ. ಕಿಟ್ಟುವು ಅವರ ಮಧ್ಯದಲ್ಲಿ ಅಂಗಿಹಾಕಿಕೊಂಡೇ ಊಟಕ್ಕೆ ಕುಳಿತಿದ್ದನು. ಅವರ ತಂದೆಯವರು ನೋಡಿ "ಸಾರ್ಥಕವಾಯಿತು; ಉದ್ಧಾರವಾಯಿತು” ಎಂದುಕೊಂಡು ಕೊಠಡಿಗೆ ಹಿಂದಿರುಗಿದರು.

ಕಿಟ್ಟುವು ಊಟ ಮುಗಿಸಿಕೊಂಡು ಬಂದಕೂಡಲೆ, ಅವರ ತಂದೆಯವರು ಕೋಪದಿಂದ “ನಡಿ ಊರಿಗೆ- ಮಗನೆ ನಿನ್ನ ವಿದ್ಯೆ ಹಾಳಾಯ್ತು. ಓದಿದ್ದು ಸಾಕು” ಎಂದು ಗದರಿಸಿದರು. ಕಿಟ್ಟುವಿಗೆ ಗಾಬರಿಯಾಯಿತು. ಅವನಿಗೇನೂ ಪರೀಕ್ಷೆಯಲ್ಲಿ 'ಫೇಲ್' ಆಗಿರಲಿಲ್ಲ. ತಾನು ತಿಂಡಿ ಕದ್ದುದನ್ನು ನರಹರಿಯು ತಂದೆಗೆ ಹೇಳಿರಬಹುದೆಂದು ಅವನು ಹೆದರಿದನು. ಅವರ ತಂದೆಯವರು ಮತ್ತೆ ಸ್ವಲ್ಪ ಸಮಾಧಾನದಿಂದ “ಈ ಜಾತಿಕೆಟ್ಟ ವಿದ್ಯದಿಂದ ನಮಗೆ ಆಗಬೇಕಾದುದೇನು? ನಮ್ಮ ಅಪ್ಪ ಅಜ್ಜ ಈ ವಿದ್ಯಾನೆ ಕಲಿತರೆ? ನಾನು ಕಲಿತಿದ್ದೇನೆಯೆ? ನಡಿ ಊರಿಗೆ ಪೌರೋಹಿತ್ಯ ಕಲಿಯುವಿಯಂತೆ. ಅದರಿಂದ ಇಹವೂ ಉಂಟು ಪರವೂ ಉಂಟು” ಎಂದರು. ಆಮೇಲೆ ಕಿಟ್ಟುವಿಗೆ ತನ್ನ ತಂದೆಯವರು ಹೋಟಲಿಗೆ ಬಂದಿದುದು ಗೊತ್ತಾಯಿತು. ಸ್ವಲ್ಪ ಚರ್ಚೆ ನಡೆದಮೇಲೆ, ಕಿಟ್ಟುವು ಆ ಹೋಟಲನ್ನು ಬಿಟ್ಟು ಬೇರೆ ಒಂದು ಹೋಟಲಿನಲ್ಲಿ ಊಟಮಾಡಿಕೊಂಡು ವ್ಯಾಸಂಗಮಾಡಬಹುದೆಂದು ಅವರ ತಂದೆಯವರು ಒಪ್ಪಿದರು. ನರಹರಿಗೆ ಸ್ವಲ್ಪ ಅಸಮಾಧಾನವಾಯಿತು. ಕಿಟ್ಟುವು ಓದುವುದನ್ನು ಬಿಡಬೇಕೆಂದು ಅವನಿಗೆ ಸ್ವಲ್ಪವೂ ಇಷ್ಟವಿರಲಿಲ್ಲ. ಕಿಟ್ಟುವಿನ ತಂದೆಯ ಕೋಪದ ಆವೇಶದ ಮೊದಲ ಮಾತುಗಳನ್ನು ಕೇಳಿಯಂತೂ, ಅವನಿಗೆ ಗಾಬರಿಯೂ, ತಾನು ಮಾಡಿದ ಕೆಲಸಕ್ಕಾಗಿ ಪಶ್ಚಾತ್ತಾಪವೂ, ಉಂಟಾಗಿದ್ದಿತು. ಆದರೂ ಕಿಟ್ಟುವಿಗೆ ಇನ್ನೂ ಸ್ವಲ್ಪ ಹೆಚ್ಚಾಗಿ ಬೈಗುಳವಾಗಿದ್ದರೆ, ಮುಯ್ಯಿ ತೀರಿಸಿಕೊಂಡಂತಾಗಿ ಅವನ ಮನಸ್ಸಿಗೆ ಹೆಚ್ಚು ಸಮಾಧಾನವಾಗುತ್ತಿದ್ದಿತು.

ಕಿಟ್ಟುವಿನ ತಂದೆಯವರು ೧೧ ಗಂಟೆಗೆ ಹೊರಟುಹೋದರು. ಹೊರಡುವಾಗ “ಕೋರ್ಟು ಕೆಲಸ ಮುಗಿಸಿಕೊಂಡು ಹಾಗೇ ಮೋಟಾರ್