ಹಳ್ಳಿಯ ಚಿತ್ರಗಳು

ವಿಕಿಸೋರ್ಸ್ದಿಂದ

ಹಳ್ಳಿಯ ಚಿತ್ರಗಳು  (1931) 
by ಗೊರೂರು ರಾಮಸ್ವಾಮಿ ಐಯಂಗಾರ್

Download this featured text as an EPUB file (suitable for most e-readers except Kindles). Download this featured text as a RTF file. Download this featured text as a PDF. Download this featured text as a MOBI file (suitable for Kindles). ಇದನ್ನು ಡೌನ್ಲೋಡ್ ಮಾಡಿ!


ಹಳ್ಳಿಯ ಚಿತ್ರಗಳು





ಸಣ್ಣ ಕತೆಗಳು

ಶ್ರೀ ಮಾ ನ್ ಶ್ರೀ ನಿ ನಾ ಸ ರ

ಮು ನ್ನು ಡಿ ಯೊ ಡನೆ



ಗೊರೂರು ರಾಮಸ್ವಾಮಿ ಐಯಂಗಾರ್






ಬೆಂಗಳೂರು ಪ್ರೆಸ್
ಮೈಸೂರು ರೋಡ್, ಬೆಂಗಳೂರು ಸಿಟಿ
೧೯೩೧

[ ಬೆಲೆ ರೂ. ೧

ವಿಷಯ ಸೂಚಿಕೆ

ಮು ನ್ನು ಡಿ

ಈಗ ಐದು ತಿಂಗಳ ಹಿಂದೆ ಒಂದು ದಿನ ನಾನು ಕಚೇರಿಯಲ್ಲಿದ್ದಾಗ ನನಗೆ ದಿನದ ಟಪಾಲಿನೊಂದಿಗೆ ಒಂದು ಪತ್ರವು ಬಂದಿತು. ಅದನ್ನು ಬರೆದವರು ನನ್ನ ವಿಷಯದಲ್ಲಿ ಬಹಳ ವಿಶ್ವಾಸವನ್ನು ಸೂಚಿಸಿ ತಾವು ಗ್ರಾಮಜೀವನದ ಚಿತ್ರಗಳ ಒಂದು ಪುಸ್ತಕವನ್ನು ಬರೆದಿರುವುದಾಗಿಯೂ, ಅದನ್ನು ನಾನು ಒಂದುಸಲ ನೋಡಬೇಕೆಂತಲೂ, ಅದಕ್ಕೆ ಒಂದು ಮುನ್ನುಡಿಯನ್ನು ಬರೆದುಕೊಡಬೇಕೆಂತಲೂ ಕೇಳಿದ್ದರು. ಪತ್ರವನ್ನು ನೋಡಿಯೇ ನನಗೆ ಅದನ್ನು ಬರೆದವರ ವಿಷಯದಲ್ಲಿ ಪ್ರೀತಿ ಹುಟ್ಟಿತು; ಅವರ ಗ್ರಂಥವು ಚೆನ್ನಾಗಿರುವುದೆಂದು ಭಾಸವಾಯಿತು. ಇದಾದ ಐದಾರು ದಿನದ ಮೇಲೆ ಗ್ರಂಥಕರ್ತರು ನನ್ನ ಬಳಿ ಬಂದು ಪುಸ್ತಕದ ಕೆಲವು ಭಾಗಗಳನ್ನು ಓದಿ ಹೇಳಿದರು. ಅವರ ವಿಷಯದಲ್ಲೂ ಅವರ ಗ್ರಂಥದ ವಿಷಯದಲ್ಲಿಯೂ ನನಗೆ ಮೊದಲೇ ಉಂಟಾಗಿದ್ದ ಭಾವವು ಅವರ ಓದನ್ನು ಕೇಳಿ ಸಮರ್ಥವಾಯಿತು. ಆ ಪುಸ್ತಕಕ್ಕೆ ಮುನ್ನುಡಿಯನ್ನು ಬರೆಯುವುದಕ್ಕೆ ನಾನು ಅಂದು ಸಂತೋಷದಿಂದ ಒಪ್ಪಿದೆನು; ಇಂದು ಅದನ್ನು ಬಹಳ ಸಂತೋಷ ದಿಂದ ಬರೆಯುತ್ತಿದ್ದೇನೆ.

ಶ್ರೀಮಾನ್ ಗೊರೂರು ರಾಮಸ್ವಾಮಿ ಐಯಂಗಾರ್‍ರವರ ಹಳ್ಳಿಯ ಚಿತ್ರಗಳನ್ನು ನೋಡಿ ನಾನು ಆನಂದಪಟ್ಟಿದೇನೆ. ಇವರು ಸುಲಭವಾಗಿ ಮಾಡುವ ವರ್ಣನೆಗಳು ನಾವು ಕನಸಿನಲ್ಲಿ ಕಂಡು ಮೆಚ್ಚಿ ನಿಜವಾದೀತೇ ಎಂದು ಆಶಿಸುವ ಒಂದು ಪ್ರಪಂಚವನ್ನು ನಮ್ಮ ಎಚ್ಚರದ ದೃಷ್ಟಿಯ ಮುಂದೆ ತಂದು ನಿಲ್ಲಿಸುತ್ತವೆ. ಈ ಊರುಗಳು, ಊರುಗಳ ಈ ಜನಗಳು, ಈ ಹೊಲಗದ್ದೆ ಪೈರುಗಳು, ಹೊಳೆ ಕೆರೆ ದೇವಾಲಯಗಳು, ಸರಳವಾದ ಸುಂದರವಾದ ಈ ನಡೆನುಡಿ, ಈ ಬಾಳು-ಇವೆಲ್ಲ ನಮಗೆ ಹೊಸವಲ್ಲದಿದ್ದರೂ ಹೊಸವಾಗಿ ಕಂಡು ಮನಸ್ಸನ್ನು ಮುಗ್ಧವಾಗಿ ಮಾಡುತ್ತವೆ. ಗ್ರಂಥಕರ್ತರು ಸುತ್ತಣ ಪ್ರಪಂಚವನ್ನು ಚೆನ್ನಾಗಿ ನೋಡಿ ಅದರ ಅಂದಚೆಂದಕ್ಕೆ ಮನಸ್ಸಿನಲ್ಲಿ ಎಡೆಗೊಟ್ಟು ಅದರ ಬದುಕಿನಲ್ಲಿ ತಮ್ಮ ಬದುಕನ್ನು ಬೆರೆಸಿ ತಾವೇ ಅದು ಎಂಬಂತೆ ಅದರೊಂದಿಗೆ ಸೇರಿಹೋಗಿದ್ದಾರೆ. ಹೀಗಾದ ಮೇಲೆ ತಮ್ಮ ಜೀವವನ್ನು ಮರುಳುಗೊಳಿಸಿದ ಆ ಪ್ರಪಂಚದ ಅಂದ ಚೆಂದವನ್ನು ಇತರರಿಗೆ ತಿಳಿಸೋಣವೆಂದು ತಮಗಾದ ಅನುಭವಗಳನ್ನು ವ್ಯಕ್ತಪಡಿಸಲು ಈ ಚಿತ್ರಗಳನ್ನು ರಚಿಸಿದ್ದಾರೆ. ಈ ಚಿತ್ರಗಳು ನಮಗೆ ಆನಂದವನ್ನುಂಟುಮಾಡುವುದೆಂದು ಹೇಳಿದಮೇಲೆ ಗ್ರಂಥಕರ್ತರು ತಮ್ಮ ಉದಾರವಾದ ಕಾರ್ಯದಲ್ಲಿ ಜಯಶೀಲರಾಗಿದ್ದಾರೆ ಎಂದು ಬೇರೆಯಾಗಿ ಹೇಳಬೇಕಾಗಿಲ್ಲ.

ಸಾಮಾನ್ಯವಾಗಿ ನಾವು ಪ್ರಪಂಚದಲ್ಲಿ ಸಂತೆಗೆ ಬಂದವರಂತೆ ನಡೆದು ಕೊಳ್ಳುತ್ತೇವೆ. ಏನೋ ನಮ್ಮ ನಮ್ಮ ಕೆಲಸವೆಂದುಕೊಂಡಿರುವ ಕೆಲಸವನ್ನು ಹೇಗೋ ಮಾಡುವುದು; ನಮ್ಮವರೆಂದ ಒಬ್ಬರಿಬ್ಬರನ್ನು ನಮ್ಮವರಂತೆ ಕಾಣುವುದು; ನಮ್ಮ ದಿನ ಮುಗಿದೊಡನೆ ಈ ಬಾಳನ್ನು ಬಿಟ್ಟು ಕದಲುವುದು; ಅಥವಾ ಕೆಲಸ ಮುಗಿದ ಮೇಲೂ ಮನೆಯ ನೆನಪು ಬರದೆ ಸಂತೆಯಾಳದಲ್ಲಿರೋಣವೆಂದು ಮರದ ಕೆಳಗೆ ಮಲಗುವ ಮದ್ಯಪಾಯಿಯಂತೆ ರುಚಿಯಳಿದ ಬದುಕಿಗೆ ಇನ್ನೂ ತಗಲಿಕೊಂಡಿರುವುದು. ಇದು ಸಾಮಾನ್ಯ ಜೀವನದ ಕಾರ್‍ಯಕ್ರಮ. ನಿಜವಾಗಿ ನೋಡಿದರೆ ನಾವು ಬಂದಿರುವುದು ಸಂತೆಗಲ್ಲ; ಒಂದು ಕೇಳೀಗೃಹಕ್ಕೆ, ಒಂದು ವಿವಾಹಮಂಟಪಕ್ಕೆ, ಒಂದು ದೇವಾಲಯಕ್ಕೆ, ನಾವು ಪ್ರಪಂಚದಲ್ಲಿ ಮಾಡಬೇಕಾಗಿರುವುದು ಬರಿಯ ವ್ಯಾಪಾರವಲ್ಲ. ನಾವು ಇಲ್ಲಿಯ ಆಟದಲ್ಲಿ ಸೇರಬೇಕಾಗಿದೆ, ಇಲ್ಲಿಯ ಉತ್ಸವದಲ್ಲಿ ಭಾಗಿಗಳಾಗಬೇಕಾಗಿದೆ, ಇಲ್ಲಿಯ ಪೂಜೆಯಲ್ಲಿ ಕಲೆಯಬೇಕಾಗಿದೆ. ಇದನ್ನು ಅರಿಯದ ಅಥವಾ ಮರೆತ ನಮಗೆ ಇಂಥ ಪುಸ್ತಕಗಳು ಪ್ರಪಂಚದಲ್ಲಿ ನಮ್ಮ ನಿಜವಾದ ಕಾರ್ಯವೇನೆಂದು ಜ್ಞಾಪಕ ಕೊಡುತ್ತವೆ. ಕೊಳ್ಳುವ ಮಾರುವ ವ್ಯವಹಾರದ ನಿಲುವಿನಿಂದ ನಮ್ಮ ಮನಸ್ಸು ಜನದ ವಿಷಯದಲ್ಲಿ ಪ್ರೇಮದ ನಿಲುವಿಗೆ ತಿರುಗುತ್ತದೆ. ಸರಸದಿಂದ ಒಲಿಸಿ ಮನಸ್ಸನ್ನು ಹೀಗೆ ತಿದ್ದುವ ಗ್ರಂಥಗಳು ಸಿಕ್ಕುವುದು ಓದುವವರ ಪುಣ್ಯ. ಈ ಕಾರಣದಿಂದ ಮಾತ್ರವಲ್ಲದೆ ನಮಗೆ ಪ್ರಕೃತದಲ್ಲಿ ಗ್ರಾಮಗಳ ವಿಷಯದಲ್ಲಿ ಹುಟ್ಟಿರುವ ಔದಾಸೀನ್ಯವನ್ನು ಕಳೆಯುವುದಕ್ಕೆ ಇಂಥ ಚಿತ್ರಗಳು ಅಗತ್ಯವಾಗಿ ಬೇಕಾಗಿವೆ. ನಮ್ಮ ನಾಗರಿಕತೆ ಗ್ರಾಮಗಳನ್ನು ಅವಲಂಬಿಸಿದ್ದು; ನಮ್ಮ ದೇಶದ ತಪಸ್ಸು ವನಗಳಲ್ಲಿ ಬೆಳೆದದ್ದು, ಆದರೆ ಪಾಶ್ಚಾತ್ಯರ ಸಂಪರ್ಕದಿಂದ ನಮಗೆ ವನವಾಗಲೀ ಗ್ರಾಮವಾಗಲೀ ಮೊದಲಿನಷ್ಟು ಈಗ ಪ್ರಿಯವಾಗಿಲ್ಲ. ವಿಶ್ವ ಶಿಲ್ಪಿಯು ನಮ್ಮ ನಾಡ ಜೀವನದ ಕಣ್ಣನ್ನು ಗ್ರಾಮಗಳಲ್ಲಿ ಇಟ್ಟನು. ನಾವು ಇದನ್ನು ಮರೆತಿದ್ದೇವೆ; ಈಚೆಗೆ ನಗರಗಳಲ್ಲಿ ಗುಂಪು ಸೇರುತ್ತಿದೇವೆ. ಶಾಂತಿಯಿಂದ ಕೂಡಿದ ಗ್ರಾಮಜೀವನವನ್ನು ಸೌಕರ್ಯಗಳು ಸಾಲವೆಂಬ ಕಾರಣದಿಂದ ಬಿಡುತ್ತಾ ಸಲಕರಣೆಗಳು ಹೆಚ್ಚಾಗಿರುವ ನಗರಗಳ ಅಶಾಂತ ಜೀವನಕ್ಕೆ ಆಶಿಸುತ್ತಿದ್ದೇವೆ. ಅಶಾಂತಿಯಲ್ಲಿ ಸುಖವೆಲ್ಲಿಂದ ಬರಬೇಕು? ಆದರೆ ಇದನ್ನು ನಾವು ತಿಳಿಯುವುದು ತಾನೆ ಹೇಗೆ? ಸಲಕರಣೆಗಳು ಕಡಿಮೆಯಾದರೂ ಗ್ರಾಮ ಜೀವನದಲ್ಲಿ ಒಂದು ಸೊಗಸು ಒಂದು ಸುಖ ಇದೆಯೆಂಬುದನ್ನು ತೋರಿಸುವುದರಿಂದ ಇದು ನಮಗೆ ಮಂದಟ್ಟಾಗಬಹುದು. ನಗರಗಳಲ್ಲಿರುವ ಜನರು ಒಂದು ಮನೆಯವರಾದರೂ ಬೇರೆ ಬೇರೆ ಆವರಣಗಳಲ್ಲಿ ಸುಳಿದಾಡುತ್ತಿರುವರು. ಹಳ್ಳಿಯಲ್ಲಿರುವವರು ಬೇರೆ ಬೇರೆ ಮನೆಯವರಾದರೂ ಒಂದು ಸಂಸಾರದವರಂತೆ ನಡೆದುಕೊಳ್ಳುವರು. ನಗರಗಳಲ್ಲಿ ನಾಗರಿಕತೆಯ ಅಭ್ಯಾಸಗಳು ಬಾಳಿಗೆ ಬಾಳಿಗೆ ಮಧ್ಯೆ ಗೋಡೆಗಳಂತೆ ಬೆಳೆಯುತ್ತವೆ. ಹಳ್ಳಿಯಲ್ಲಿ ನಿರಂತರ ಸಹವಾಸದಿಂದ ಜನರು ಒಬ್ಬರಿಗೊಬ್ಬರು ಒಡಹುಟ್ಟುಗಳಂತೆ ಆಗುತ್ತಾರೆ. ತನ್ನ ಮಗು ಚೆನ್ನಾಗಿಲ್ಲವೆಂಬುದನ್ನು ತಿಳಿದೂ ನೆನೆಯದ ತಾಯಂತೆ, ತನ್ನ ಗಂಡ ಮನ್ಮಥನಲ್ಲವೆಂಬುದನ್ನು ಕಂಡೂ ಮರೆಯುವ ಹೆಂಡತಿಯಂತೆ ಸದಾಕಾಲ ಜೊತೆಯಾಗಿರುವುದರಿಂದ ಹಳ್ಳಿಯ ಜನರು ಒಬ್ಬರನ್ನೊಬ್ಬರು ಸಮಾಧಾನದಿಂದ ಪ್ರೀತಿಯಿಂದ ನೋಡುವುದನ್ನು ಕಲಿಯುತ್ತಾರೆ. ಇದು ನಮಗೆ ತಿಳಿಯಬೇಕಾದರೆ ಇಂಥ ಗ್ರಂಥಕರ್ತರ ಸಹಾಯ ಬೇಕು. ಇವರು ಕಸವನ್ನು ಒಂದು ಬದಿಗಿರಿಸಿ ಮುಖ್ಯವಾದದ್ದು ರಸ ಎಂದು ತೋರಿಸಿರುವುದರಿಂದ ನಮಗೆ ಜನಜೀವನದ ತಿರುಳು ಯಾವುದು ಎಂದು ಗೋಚರವಾಗುತ್ತದೆ. ಈ ಗ್ರಂಥದ ಭಾಷೆಯ ರೀತಿಯೂ ಗಮನಕ್ಕೆ ಅರ್ಹವಾದದ್ದು. ವಿಷಯದ ಸೊಗಸಿನಂತೆ ಈ ಭಾಷೆಯ ಸೊಗಸೂ ಜನಜೀವನದ ಸಾಮೀಪ್ಯದಿಂದ ಬಂದಿದೆ. ಈ ಗ್ರಂಥದಲ್ಲಿ ಜನರಾಡುವ ಮಾತೇ ಸಾಹಿತ್ಯವೂ ಆಗಿದೆ. ನಿಜವೂ ಇಷ್ಟೇ. ಸಾಹಿತ್ಯದ ಭಾಷೆಯೆಂದರೆ ಬೇರೆ ಯಾವುದೋ ಒಂದು ಭಾಷೆಯೆಂದು ನಮ್ಮಲ್ಲಿ ಅಲ್ಲಲ್ಲಿ ವಾಡಿಕೆಯಾಗಿರುವ ಭಾವನೆ ಅಷ್ಟೇನೂ ಸರಿಯಾದುದಲ್ಲ. ಗ್ರಂಥವೆನ್ನುವುದು ಬಹುಮಟ್ಟಿಗೆ ಬರಹದ ಮೂಲಕ ಮಾಡುವ ಸಂಭಾಷಣೆ. ಸಂಭಾಷಣೆಯ ವಿಷಯ ಬೇರೆ ಬೇರೆಯಾದಾಗ ಅದಕ್ಕೆ ಅನುಗುಣವಾಗಿ ಭಾಷೆಯ ರೀತಿಯು ಸ್ವಲ್ಪವೋ ಹೆಚ್ಚಾಗಿಯೋ ಮಾರ್ಪಡಬಹುದೇ ಹೊರತು ಸಂಭಾಷಣೆಯೇ ಅಲ್ಲದ ಬರಹ ಬಹಳವಿರಲಾರದು. ಜನರ ದಿನ ದಿನದ ಜೀವನವನ್ನು ವರ್ಣಿಸುವುದಕ್ಕೆ ಅವರ ದಿನ ದಿನದ ಭಾಷೆಯೇ ತಕ್ಕದ್ದು. ಇದನ್ನು ಉಪಯೋಗಿಸಿರುವುದರಿಂದ ಈ ಗ್ರಂಥದಲ್ಲಿ ಆ ಜನದ ಬಾಳಿನ ಸರಳತೆ, ಸ್ವಚ್ಛತೆ, ನೋವು, ನಗೆ ಎಲ್ಲವೂ ಸುಲಭವಾಗಿ ವ್ಯಕ್ತವಾಗಿವೆ. ಇಲ್ಲಿ ಬರುವ ಜನರೂ ಅವರ ನಡೆಯ ನುಡಿಯ ನಿಜವೆಂದು ನಮ್ಮ ಆಂತರ್‍ಯವು ಒಪ್ಪುತ್ತದೆ. ನಿಜವಲ್ಲ ಎಂದು ಎಲ್ಲಿಯಾದರೂ ಕಾಣುವುದಾದರೆ ಈ ಸೂತ್ರವನ್ನು ಬಿಟ್ಟ ಕಡೆಯಲ್ಲಿಯೇ ಉತ್ತಮ ರೀತಿಯ ವಸ್ತು, ಪ್ರಾಜ್ಞತೆಗೆ ಈ ಬಗೆಯ ಕೌಶಲವೂ ಸೇರಿ ಈ ಗ್ರಂಥದ ಚಿತ್ರಗಳೆಲ್ಲ ಜನರ ಜೀವನದಿಂದ ಎತ್ತಿಟ್ಟವುಗಳಂತೆ ಕಾಣುತ್ತಿವೆ.

ಗ್ರಂಥಕರ್ತರಿಗೆ ನಮ್ಮ ನಾಡಮೇಲೆ ನಮ್ಮ ಜನರ ಮೇಲೆ ಬಹಳ ಪ್ರೇಮವಿದೆ. ಜಾತಿ ಮತ ಭೇದಗಳಿಲ್ಲದೆ ಇವರು ಎಲ್ಲವನ್ನೂ ಸಮವಾದ ದೃಷ್ಟಿಯಿಂದ ಏಕರೀತಿಯ ವಿಶ್ವಾಸದಿಂದ ನೋಡಬಲ್ಲರು. ಪ್ರೇಮಪೂರಿತವಾದ ಇವರ ಕಣ್ಣು ಈ ನಾಡಿನಲ್ಲಿ ಈ ಜನದಲ್ಲಿ ಇರುವ ಒಳ್ಳೆಯ ಗುಣಗಳನ್ನು ನೋಡಿ ನೋಡಿ ಆನಂದಗೊಂಡಿದೆ. ತಪ್ಪು ಕಂಡಲ್ಲಿ ಇಂಥ ಕಣ್ಣು ಕೋಪದ ಕಿಡಿಯನ್ನು ಉಗುಳುವುದಿಲ್ಲ; ದೊಡ್ಡ ತಪ್ಪಾದರೆ ಎರಡು ತೊಟ್ಟು ಕಣ್ಣೀರನ್ನು ಹಾಕುತ್ತದೆ; ಸಣ್ಣ ತಪ್ಪಾದರೆ ನಗೆಯನ್ನು ಸೂಸುತ್ತದೆ. ಈ ಗ್ರಂಥದಲ್ಲಿ ಗ್ರಂಥಕರ್ತರು ಜನರ ದೊಡ್ಡ ತಪ್ಪುಗಳನ್ನು ತೋರಿಸಲು ಯತ್ನಿಸಿಲ್ಲ. ಅದನ್ನು ಇತರರು ಮಾಡಬಹುದು; ಇವರೇ ಇನ್ನೊಂದು ಸಂದರ್ಭದಲ್ಲಿ ಮಾಡಬಹುದು. ಈ ಗ್ರಂಥದಲ್ಲಿ ಪ್ರೇಮದಿಂದ ಕಂಡ ಕೆಲವು ಒಳ್ಳೆಯ ಗುಣಗಳು, ಸಣ್ಣ ಪುಟ್ಟ ತಪ್ಪುಗಳು ಇಷ್ಟನ್ನು ಮಾತ್ರ ಇವರು ಸೂಚಿಸಿದ್ದಾರೆ. ಗುಣಗಳ ಚಿತ್ರದಿಂದ ನಮಗೆ ನಮ್ಮ ಜೀವನದ ವಿಷಯದಲ್ಲಿ, ನಮ್ಮ ಗ್ರಾಮಗಳ ಜೀವನದ ವಿಷಯದಲ್ಲಿ ಪ್ರೀತಿಯುಂಟಾಗುತ್ತದೆ. ಸಣ್ಣ ಪುಟ್ಟ ತಪ್ಪುಗಳ ನೋಟದಿಂದ ನಾವು ಗ್ರಂಥಕರ್ತರೊಂದಿಗೆ ನಗುತ್ತೇವೆ. ಭಾವನೆಯ ಉನ್ನತ ಸ್ಥಾನಗಳಲ್ಲಿ ಕುಳಿತು ಓದುವವರನ್ನು ಜೊತೆಯಲ್ಲಿ ಕರೆದುಕೊಂಡು ಅವರಿಗೆ ಶೀಲದ ಸೌಂದರ್್ಯವನ್ನು ತೋರಿಸುವ ಶಕ್ತಿ ಅಪೂರ್ವವಾದದ್ದು. ಈ ಗ್ರಂಥಕರ್ತರಲ್ಲಿ ಈ ಶಕ್ತಿ ಚೆನ್ನಾಗಿದೆ.

ಜನರ ವಿಷಯದಲ್ಲಿ, ನಾಡ ವಿಷಯದಲ್ಲಿ ತಮಗಿರುವ ಪ್ರೇಮವನ್ನು ಸೂಚಿಸಿ ಅದೇ ಪ್ರೇಮವನ್ನು ಓದುವವರಲ್ಲಿ ಉಂಟುಮಾಡಲು ಇವರು ಉಪಯೋಗಿಸಿರುವ ಮುಖ್ಯ ಸಾಧನ ಹಾಸ್ಯ. ಈ ಗ್ರಂಥವನ್ನು ಓದುತ್ತಾ ನನಗೆ ಹತ್ತಾರು ಸಲ ಮಿತವಾಗಿಯೋ ಅತಿಯಾಗಿಯೋ ನಗೆ ಬಂದಿದೆ. ಕಾವೇರಿಯ ಪ್ರವಾಹ ಎಷ್ಟು ಎತ್ತರ ಬಂದಿತ್ತು ಎನ್ನುವುದನ್ನು ಆಯಾ ವರ್ಷ ಯಾರ ಮನೆಯ ಬಾಗಿಲಲ್ಲಿ ಸೀರೆ ಒಗೆದರು ಎನ್ನುವುದರಿಂದ ವರ್ಣಿಸುವ ಇವರ ಜನರನ್ನೂ, ಇವರ ಬಸ್ ಪ್ರಯಾಣದ ವರ್ಣನೆಯನ್ನೂ, ಇವರಿಗೆ ದಾರಿಯಲ್ಲಿ ಒಂದೊಂದಾಗಿ ಆದ ತೊಂದರೆಗಳ ಕತೆಯನ್ನೂ, ಕಾವೇರಿಯ ಪ್ರವಾಹಕ್ಕೆ ಹೆದರಿ ಮದುವೆಗಾಗಿ ಆಚೆಯ ತಡಿಗೆ ಹೋಗಲಾರದೆ ಈ ತಡಿಯಿಂದಲೇ ವಧೂವರರಿಗೆ ಆಶೀರ್ವಾದಮಾಡುತ್ತೇನೆಂದ ಇವರ ಜತೆಯ ಮುದುಕರ ವಿಷಯವನ್ನೂ, ಐಯಂಗಾರಿಗಳ ಮೊಹರಮಿನ ವರ್ಣನೆಯನ್ನೂ, ಬಾಲ ವಸ್ತ್ರಾಪಹರಣದ ಕತೆಯನ್ನೂ, ಜೋಡಿದಾರರ ಬಾಲ್ಯದ ಕಲ್ಕ್ಯವತಾರದ ವೈಭವವನ್ನೂ, ಆಮೇಲೆ ಅವರು ರೋಣಗಲ್ಲಿನಂತೆ ಕುದುರೆಯ ವೇಗವನ್ನು ತಡೆದುದೇ ಮೊದಲಾದ ವಿಷಯವನ್ನೂ, ಹನುಮನು ಹೆಂಡದಿಂದ ಉದ್ಧತನಾದ ಚರಿತ್ರೆಯನ್ನೂ, ಕಿಟ್ಟು ನರಹರಿಯ ತಿಂಡಿಯ ಹೂಜಿಯ ಕತೆಯನ್ನೂ ನೋಡಿ ಓದಿ ಕೇಳಿ ಯಾರಾದರೂ ನಗುವರು. ಗ್ರಂಥಕರ್ತರು ಇಲ್ಲಿ ಚಿತ್ರಿಸಿರುವ ರೀತಿಯಿಂದ ಇವರ ಪಾತ್ರಗಳು ಇನ್ನು ಮೇಲೆ ಸಾಹಿತ್ಯ ಪ್ರೇಮಿಗಳಿಗೆ ಬಹಳ ಪ್ರಿಯರಾಗುತ್ತಾರೆ. ಜೋಡಿದಾರರಂತೂ ತಮ್ಮ ಜೋಡಿಯ ದೊಡ್ಡಸ್ತಿಕೆಯೊಂದಿಗೆ ಸಾಹಿತ್ಯದ ವ್ಯಕ್ತಿಗಳ ಪಙ್ಕ್ತಿಯಲ್ಲಿ ಮೇಲಣ ಒಂದು ಪೀಠವನ್ನು ಈಗ ಜಹಗೀರಿಯಾಗಿ ಸಂಪಾದಿಸಿದ್ದಾರೆಂದು ಹೇಳಬಹುದು. ಇಂಥ ಜಹಗೀರಿ ಬಹಳ ದೊಡ್ಡ ಗೌರವ; ಇದನ್ನು ಕೊಡುವ ಯೋಗ್ಯತೆ ಲೋಕದ ರಾಜರಿಗಿಲ್ಲ. ಹೀಗೆಯೇ ಭಾವನವರು, ಹನುಮ, ವಾಸ್ಕೋಡಿಗಾಮ; ಹೀಗೆಯೇ ಇನ್ನಿತರರು. ಇವರಲ್ಲಿ ಯಾರನ್ನೂ ಇನ್ನು ನಾವು ನಮ್ಮ ಜ್ಞಾಪಕದಿಂದ ಬಿಟ್ಟು ಕಳುಹಿಸುವುದಿಲ್ಲ.

ಪ್ರಕೃತಿಯ ಸೌಂದರವನ್ನು ಇವರು ಅಲ್ಲಲ್ಲಿ ಹೃದಯಂಗಮವಾಗಿ ವರ್ಣಿಸಿದ್ದಾರೆ. ಅಲ್ಲಿ ಭಾಷೆ ಆ ಕೆಲಸಕ್ಕೆ ತಕ್ಕದ್ದಾಗಿ ಸುಂದರವಾಗಿದೆ. ಈ ವರ್ಣನೆಗಳನ್ನು ಓದುವುದರಲ್ಲಿಯೂ ಪಾಠಕರು ಅತಿಶಯವಾದ ಆನಂದವನ್ನು ಅನುಭವಿಸುವರು.

ಬೇನೆಯ ಭಾವ ಒಂದೆರಡನ್ನು ಈ ಗ್ರಂಥದಲ್ಲಿ ಕಾಣಬಹುದು. ಹೃದಯದ ಮಂದರ ತಂತಿಗಳನ್ನು ಮಿಡಿಯುವುದರಲ್ಲಿಯೂ ಈ ಗ್ರಂಥಕರ್ತರಿಗೆ ಬಹಳ ಕೌಶಲ್ಯವಿದೆಯೆಂದು ಗ್ರಂಥದ ಆ ಭಾಗಗಳಿಂದ ವ್ಯಕ್ತವಾಗುತ್ತದೆ.

ಇನ್ನೂ ಹಲವು ಗುಣಗಳನ್ನು ಈ ಸಣ್ಣ ಗ್ರಂಥದಲ್ಲಿ ಕಾಣಬಹುದು. ನಮ್ಮ ಜನರು ಈ ಪುಸ್ತಕವನ್ನು ಓದಿ ಅದನ್ನೆಲ್ಲಾ ಕಾಣುವರೆಂದು ನನಗೆ ನಂಬಿಕೆಯುಂಟು. ಶ್ರೀಮಾನ್ ಐಯಂಗಾರರು ಇವುಗಳಂತೆ ಇನ್ನೂ ಅನೇಕ ಚಿತ್ರಗಳನ್ನು ಬರೆದಿದ್ದಾರೆ. ನಮ್ಮ ಜನರು ಈ ಗ್ರಂಥಕ್ಕೆ ತೋರಿಸುವ ಆದರಣೆಯಿಂದ, ಆ ಬೇರೆ ಚಿತ್ರಗಳನ್ನು ಅಚ್ಚು ಮಾಡಿಸುವುದಕ್ಕೆ ಆವಶ್ಯಕವಾದ ಉತ್ತೇಜನವು ಗ್ರಂಥಕರ್ತರಿಗೆ ದೊರೆಯಲೆಂದು ನಾನು ಹಾರೈಸುತ್ತೇನೆ.

ಬೆಂಗಳೂರು, ಪ್ರಜೋತ್ಪತ್ತಿ, ಸಂ॥
ಜ್ಯೇಷ್ಠ ಶುದ್ಧ ತೃತೀಯೆ.


ಶ್ರೀನಿವಾಸ




ಮೊದಲ ಮಾತು


ಈ ಪುಸ್ತಕದಲ್ಲಿ ಬಂದಿರುವ ವ್ಯಕ್ತಿಗಳೂ, ಸನ್ನಿವೇಶಗಳೂ ಕಲ್ಪನೆಯ ರಾಜ್ಯಕ್ಕೆ ಮಾತ್ರ ಸೇರಿದುವು. ಅವು ತಮಗೆ ಅನ್ವಯಿಸುತ್ತವೆಂದು ಯಾರೂ ತಿಳಿಯಬಾರದು.

ಕೆಂಗೇರಿ,
ಪ್ರಜೋತ್ಪತ್ತಿ ಸಂ॥
ಜ್ಯೇಷ್ಠ ಶುದ್ಧ ಏಕಾದಶಿ.


ಗೊರೂರು ರಾಮಸ್ವಾಮಿ ಐಯಂಗಾರ್




ನಾನು ರತ್ನಳ ಮದುವೆಗೆ ಹೋದುದು

____ ____


ರತ್ನಳು ನನ್ನ ಅಕ್ಕನ ಹಿರಿಯ ಮಗಳು. ಅವಳ ಮದುವೆಯನ್ನು ಅತ್ಯಂತ ವೈಭವದಿಂದ ಹೊನ್ನಹಳ್ಳಿಯಲ್ಲಿಯೇ ಮಾಡಬೇಕೆಂದು ನಮ್ಮ ಭಾವನವರಿಗೆ ಬಹಳ ದಿವಸಗಳಿಂದಲೂ ಇಷ್ಟವಿದ್ದಿತು. ಸಾಲದುದಕ್ಕೆ ಅವರು ಸ್ವಲ್ಪ ವೈದಿಕರು. ಹೊನ್ನಹಳ್ಳಿಯು ಕಾವೇರಿ ನದಿಯ ದಡದಲ್ಲಿದೆ. ವೈದಿಕರಿಂದ ಕೂಡಿದ ಊರು, ಪೂರ್ವದಲ್ಲಿ ಕೆಲವು ಗುರುಗಳು ಅಲ್ಲಿಗೆ ಬಂದು, ಊರನ್ನು ತಮ್ಮ ಪಾದಧೂಳಿಯಿಂದ ಪವಿತ್ರವಾಗಿ ಮಾಡಿದ್ದರು. ರತ್ನಳ ಮದುವೆಯನ್ನು ಅಲ್ಲಿಯೇ ಮಾಡಬೇಕೆಂದು ನಿಶ್ಚಯವಾಯಿತು.

ಆದರೆ ನಮ್ಮ ಭಾವನವರು ಮದುವೆಯ ಸಿದ್ಧತೆಯ ವೈಭವದಲ್ಲಿ, ಇದು ಪ್ರವಾಹದ ಕಾಲವೆಂಬುದನ್ನೇ ಮರೆತುಬಿಟ್ಟರು. ಜುಲೈ ತಿಂಗಳ ಕೊನೆ; ಕಾವೇರಿ ನದಿಯ ಆರ್ಭಟ ಹೊನ್ನಹಳ್ಳಿಯವರಿಗೆ ಚೆನ್ನಾಗಿ ಗೊತ್ತು. ೧೯೨೪ ನೇ ಇಸವಿಯಲ್ಲಿ ಮಹಾಪ್ರವಾಹ ಬಂದಿತಲ್ಲಾ, ಆಗಿನ ಅನುಭವವನ್ನು ಹೊನ್ನಹಳ್ಳಿಯವರು ಎಂದೆಂದಿಗೂ ಮರೆಯುವಂತೆ ಇಲ್ಲ. ಪ್ರವಾಹವು ಪ್ರತಿವರ್ಷವೂ ಊರಿನೊಳಕ್ಕೆ ನುಗ್ಗುತ್ತಿದ್ದಿತು. ನದಿಯ ಸಮೀಪದಲ್ಲಿದ್ದವರ ಮನೆಯ ಬಾಗಲಿನ ಮೆಟ್ಟಿಲನ್ನು ಮುಟ್ಟುತ್ತಿದ್ದಿತು. ಆಗ ಸ್ತ್ರೀಯರೆಲ್ಲಾ ಆ ಮೆಟ್ಟಿಲುಗಳ ಮೇಲೆಯೇ ಸೀರೆಗಳನ್ನು ಒಗೆಯು ತಿದ್ದರು. “ಈ ವರ್ಷ ಆ ಮನೆಯ ಬಾಗಲಿನಲ್ಲಿ ಸೀರೆಯನ್ನು ಒಗೆದರು; ಆ ವರ್ಷ ಈ ಮನೆಯ ಬಾಗಿಲಿನಲ್ಲಿ ಸೀರೆಯನ್ನು ಒಗೆದರು"-ಇದೇ ಪ್ರವಾಹದ ಪ್ರಮಾಣವನ್ನು ನಿಶ್ಚಯಿಸುವ ಪಡಿಯಚ್ಚಾಗಿದ್ದಿತು. ಆದರೆ ೧೯೨೪ ನೇ ಇಸವಿಯಲ್ಲಿ ಮನೆಯ ಬಾಗಲಿನಲ್ಲಿ ಸೀರೆಯನ್ನು ಒಗೆಯುವುದು ಮಾತ್ರವೇ ಅಲ್ಲ, ಎಲ್ಲರೂ ಈಜುವಂತಾಯಿತು. ಗುರುಗಳ ಪಾದಧೂಳಿಯಿಂದ ಪವಿತ್ರವಾಗಿದ್ದ ಊರು, ಕಾವೇರಿ ನದಿಯ ಸ್ಪರ್ಶದಿಂದ ಮತ್ತಷ್ಟು ಪುನೀತವಾಯಿತು. ಆದರೆ ಊರು ಕಾವೇರಿಯ ಪೂರ್ಣ ಕೃಪೆಗೆ ಪಾತ್ರ ವಾಗಲಿಲ್ಲ. ಅರ್ಧ ಮನೆಗಳು ಪ್ರವಾಹದಲ್ಲಿ ಕೊಚ್ಚಿಹೋದುವು; ಉಳಿದವುಗಳೆಲ್ಲಾ ಈಗಲೋ ಇನ್ನೊಂದು ಗಳಿಗೆಗೊ ಬೀಳುವಂತಿವೆ. ಇದು ೧೯೨೪ರ ವಿಷಯವಾಯಿತು.

ನಮ್ಮ ಭಾವನವರಿಗೆ ಇದಾವುದೂ ಗೊತ್ತಿಲ್ಲದೆ ಇರಲಿಲ್ಲ. ಅವರಿರುವುದು ಹೊನ್ನಹಳ್ಳಿಯಿಂದ ಮೂರು ಮೈಲು ದೂರ ನದಿಯ ಈಚೆ ದಡದಲ್ಲಿ. ಮಹಾಪ್ರವಾಹದಲ್ಲಿ ಅವರೂ ಕಾವೇರಿಯ ಕೃಪೆಗೆ ಪೂರ್ಣವಾಗಿ ಪಾತ್ರರಾಗಿದ್ದರು. ಅವರ ಮನೆಯಲ್ಲಿ ಯಾವೆಡೆ ನೋಡಿದರೂ ಕತ್ತುದ್ದ ನೀರು ನಿಂತಿದ್ದಿತು. ಕಣಜದ ಭತ್ತವೆಲ್ಲಾ ಈಜಾಡುತ್ತಿದ್ದಿತು. ಕಬ್ಬಿನ ಗದ್ದೆಗಳೆಲ್ಲಾ ಭಾವಿಗಳಾಗಿದ್ದುವು. ಅವರು ಸಾಮಾನುಗಳನ್ನೆಲ್ಲಾ ತೆಗೆದುಕೊಂಡು ಮದುವೆಗೆ ಎಂಟು ದಿವಸ ಮುಂಚೆ, ಸಂಸಾರ ಸಮೇತರಾಗಿ ತಾವೇನೋ ಹೊನ್ನ ಹಳ್ಳಿಯನ್ನು ಸೇರಿಬಿಟ್ಟರು. ಉಳಿದ ನೆಂಟರಿಷ್ಟರೆಲ್ಲಾ ಎರಡು ಮೂರು ದಿವಸ ಮುಂಚಿತವಾಗಿಯೇ "ವಧೂವರರನ್ನಾಶೀರ್ವದಿಸಿ ಮನಸ್ಸಂತೋಷಪಡಿಸಲು" ಹೋಗಿ ಸೇರಿದರು.

ವಧುವಿನ ಸೋದರಮಾವನಾದ ನಾನೂ ಮದುವೆಗೆ ಹೋಗಬೇಕಷ್ಟೆ. ನಾನೂ ಎರಡು ದಿವಸ ಮುಂಚಿತವಾಗಿ ಬೆಂಗಳೂರಿನಿಂದ ಹೊರಟೆ. ಮಂಡ್ಯದಲ್ಲಿ ರೈಲನ್ನು ಇಳಿದೆ. ಅಲ್ಲಿ ತಲಕಾಡು ಕಡೆಗೆ ಹೋಗುತ್ತಿದ್ದ ಒಂದು ಬಸ್ಸು ನಿಂತಿದ್ದಿತು. ಬಸ್ಸು ಎಂದರೆ ನನಗೆ ಯಾವಾಗಲೂ ಹೆದರಿಕೆ. ಅದರಲ್ಲಿ ಕುಳಿತರೆ ಮತ್ತೆ ಜೀವದೊಂದಿಗೆ ಇಳಿಯುತ್ತೇನೆಯೋ ಇಲ್ಲವೋ ಎಂಬ ಭಯ. ಇದನ್ನು ಕೇಳಿ ಈಗೇನೋ ನೀವು ನಗುತ್ತೀರಿ. ಆದರೆ ನನಗೆ ಉಂಟಾಗಿರುವ ಭಯಂಕರಗಳಾದ ಅನುಭವಗಳು ನಿಮಗೆ ಉಂಟಾಗಿದ್ದರೆ, ನನ್ನ ಮಾತಿನ ಸತ್ಯತೆಯು ನಿಮಗೆ ತಿಳಿಯುತ್ತಿದ್ದಿತು. ಡ್ರೈವರನು ಬಿರುಗಾಳಿಯಂತೆ ೫೦ ಮೈಲಿಯ ವೇಗದಲ್ಲಿ ನಿರ್ಜನ ರಸ್ತೆಯಲ್ಲಿ ಗಾಡಿಯನ್ನು ಓಡಿಸುವುದು ; ಪದೇ ಪದೇ ಹಿಂದುಗಡೆ ತಿರುಗಿ ಪ್ರಯಾಣಿಕರೊಂದಿಗೆ ಹರಟೆ ಹೊಡೆಯುವುದು ; ಮೂಲೆಗಳಲ್ಲಿ ಜೋರಾಗಿ ತಿರುಗಿಸುವುದು ; ಎದುರಿಗೆ ಹುಲ್ಲು ಹೇರಿದ ಎತ್ತಿನ ಗಾಡಿಯೊಂದು ಬರುತ್ತಿದ್ದರೆ, ಗಾಡಿಯವನನ್ನು ಹೆದರಿಸಲು ಮೋಟಾರನ್ನು ಅವನ ಕಡೆಗೆ ಅವನ ಮೇಲೆಯೇ ಬಿಡುವಂತೆ ತಿರುಗಿಸುವುದು; ಕರಿಯ ಪಿಶಾಚಿಯಂತೆ ತಮ್ಮನ್ನು ನುಂಗಲು ಬರುತ್ತಿರುವ ಬಸ್ಸನ್ನು ನೋಡಿ, ಎತ್ತುಗಳು ಹೆದರಿ ಗಾಡಿಯವನ ಸ್ವಾಧೀನಕ್ಕೆ ಸಿಕ್ಕದೆ, ರಸ್ತೆಯನ್ನು ಬಿಟ್ಟು ಹಳ್ಳದ ಕಡೆಗೆ ಓಡುವುದು; ಹುಲ್ಲಿನ ಭಾರದಿಂದ ಓಸರವನ್ನು ಹೊಂದಿದ ಗಾಡಿಯು ಮಗುಚಿಕೊಳ್ಳುವುದು; ಗಾಡಿಯವನು ನಿರ್ದಾಕ್ಷಿಣ್ಯವಾಗಿ ಡೈವರನನ್ನು ಬಯ್ಯಲು, ಅವನು ನಗುತ್ತಾ ಭೂತದಿಂದ ಹಿಡಿಯಲ್ಪಟ್ಟವನಂತೆ ಬಸ್ಸನ್ನು ೬೦ ಮೈಲು ವೇಗದಲ್ಲಿ ಓಡಿಸುವುದು; ಪ್ರಯಾಣಿಕರು ಇಳಿಯಬೇಕಾದ ಕಡೆ ನಿಲ್ಲಿಸದೆ, ಅರ್ಧ ಮೈಲು ಮುಂದೆ ನಿಲ್ಲಿಸುವುದು; ಇಳಿಯುತ್ತಿರುವಾಗ ಕಂಡಕ್ಟರ್ ಎಂಬ ಬ್ರಹ್ಮನು ಪ್ರಯಾಣಿಕನು ಇನ್ನೇನು ಇಳಿದನೆಂದು ತಿಳಿದುಕೊಂಡು, ರೈಟ್ ಎಂಬುದಾಗಿ ಶಿಳ್ಳು ಹಾಕುವುದು; ಡೈವರನು ಹಿಂದು ಮುಂದು ನೋಡದೆ, ಒಮ್ಮಿಂದೊಮ್ಮೆ ಬಸ್ಸನ್ನು ಮುಂದಕ್ಕೆ ಬಿಡಲು, ಇಳಿಯುತ್ತಿದ್ದ ಪ್ರಯಾಣಿಕನು ಕೆಳಕ್ಕೆ ಬಿದ್ದು, ಭೂಚುಂಬನ ಮಾಡಿ ಹಲ್ಲು ಮುರಿದುಕೊಳ್ಳುವುದು; ಮಳೆಯು ಒಳಕ್ಕೆ ಬರದಂತೆ ತಡೆಯಲು ಗಾಡಿಯ ಅಂಚಿಗೆ ಕಟ್ಟಿರುವ ಮೇಣಗಬಟದ ತುದಿಯ ಗುಂಡಿಯು ಕಿತ್ತುಹೋಗಿ, ಗಾಳಿಯಿಂದ ಅದು ಪಟಪಟನೆ ಒಳಕ್ಕೆ ಹೊಡೆಯುವಾಗ, ತುದಿಯಲ್ಲಿ ಕುಳಿತಿರುವ ಪ್ರಯಾಣಿಕನು ಅದರ ಹೊಡೆತದ ಸವಿಯನ್ನು ನೋಡುವುದು; ಪೋಲೀಸ್ ಸ್ಟೇಷನ್ ಬಳಿ ಪ್ರಯಾಣಿಕರು ಹತ್ತು ಮಂದಿ ಇದ್ದರೆ, ಊರ ಹೊರಗಡೆ ೧೪ ಮಂದಿ ನಿಂತಿದ್ದು, ಗಾಡಿಯು ಅಲ್ಲಿಗೆ ಬಂದ ಕೂಡಲೆ ಕಂಡಕ್ಟರ್ ಮಹಾಶಯನು ಚೀಲಕ್ಕೆ ಧಾನ್ಯವನ್ನು ತುಂಬುವಂತೆ ಅವರನ್ನೆಲ್ಲಾ ಗಾಡಿಯೊಳಕ್ಕೆ ತುಂಬುವುದು - ಜನರು ಹೆಚ್ಚಿದಂತೆಲ್ಲಾ ಗಾಡಿಯು ಪುಷ್ಪಕದಂತೆ ಹೆಚ್ಚು ಹೆಚ್ಚು ವಿಸ್ತಾರವಾಗದಿರುವುದು. ಈ ಪಟ್ಟಿಯನ್ನು ಮುಂದರಿಸಿ ಪ್ರಯೋಜವಿಲ್ಲ. ಇವುಗಳೆಲ್ಲವನ್ನೂ ಅನುಭವಿಸಿದ್ದ ನಾನು, ಮಂಡ್ಯದ ಬಸ್ಸಿನಲ್ಲಿ ಕುಳಿತೊಡನೆಯೇ ಒಂದು ವಿಧವಾದ ಭಯದ ಶಂಕೆಯಿಂದ ನಡುಗತೊಡಗಿದೆ. ಬಸ್ಸು ಸಕಾಲದಲ್ಲಿ ಹೊರಟಿತು.

ಬಸ್ಸು ಬನ್ನೂರಿಗೆ ಬರುವವರೆಗೆ ಹೆಚ್ಚು ಸಂಗತಿಗಳೇನೂ ನಡೆಯಲಿಲ್ಲ. ಅಷ್ಟು ಮುಖ್ಯವಾದುದಲ್ಲದಿದ್ದರೂ ಬನ್ನೂರಿಗೆ ೪ ಮೈಲು ಹಿಂದೆ ನಡೆದ ವಿಷಯವೊಂದನ್ನು ಹೇಳಿಬಿಡುತ್ತೇನೆ. ಮಂಡ್ಯವನ್ನು ಬಿಟ್ಟಕೂಡಲೆ ಕ್ಲೀನರ್ ಮಹಾಶಯನು, ಬಸ್ಸನ್ನು ತಾನೇ ನಡಿಸಲು ಅಸಾಧಾರಣವಾದ ಆತುರತೆಯನ್ನು ತೋರಿಸಿದನು. ಡೈವರನು ಬೇಡ ಬೇಡವೆಂದು ಹೇಳುತ್ತಾ ಬನ್ನೂರಿಗೆ ಸುಮಾರು ೪ ಮೈಲು ಇರುವವರೆಗೆ ತಾನೇ ನಡಿಸಿದನು. ಆದರೆ ಮನುಷ್ಯ ಪ್ರಾಣಿಯಲ್ಲವೆ? ಕ್ಲೀನರು ಪದೇ ಪದೇ ಪ್ರಾರ್ಥಿಸುತ್ತಿರುವಾಗ, ಹೇಗೆ ತಾನೆ ಇಲ್ಲವೆಂದಾನು? ಮೋಟಾರು ಬಸ್ಸನ್ನು ನಡೆಸಲು ಅವನನ್ನು ಕೂರಿಸಿ, ತಾನು ಮಗ್ಗುಲಲ್ಲಿ ಸಿಗರೇಟನ್ನು ಸೇದುತ್ತಾ ಕಣ್ಣನ್ನು ಅರ್ಧ ಮುಚ್ಚಿಕೊಂಡು, ಅದರ ಹೊಗೆಯು ಸುರುಳಿ ಸುರುಳಿಯಾಗಿ ಮೇಲಕ್ಕೆ ಹೋಗುವುದನ್ನು ನೋಡುತ್ತಾ ವಿರಾಮವಾಗಿ ಕುಳಿತುಬಿಟ್ಟನು. ನಾನು ಊಹಿಸುತ್ತಿದ್ದ ಅಪಾಯವು ಬಂದೇಬಂದಿತು. ಮೊದಲೇ ಇದ್ದ ನನ್ನ ನಡುಕವು ಮತ್ತಷ್ಟು ಹೆಚ್ಚಾಯಿತು. ಹಿಂದೊಂದು ಸಲ ಡೈವರನ ಕೃಪೆಗೆ ಪಾತ್ರನಾದ ಕ್ಲೀನರ್ ಮಹಾಶಯನ ಕೈಯಲ್ಲಿ ಪ್ರಾಣವನ್ನು ಒಪ್ಪಿಸಿ, ನರಕಯಾತನೆಯನ್ನು ಅನುಭವಿಸಿದ್ದೆ. ಡೈವರುಗಳು ತಮ್ಮ ಪ್ರಯಾಣಿಕರ ಜವಾಬ್ದಾರಿಯನ್ನು ಕ್ಲೀನರು ಮೋಟಾರ್‌ ನಡೆಸುವುದನ್ನು ಕಲಿಯುವ ಆಶೆಗೆ ಬಲಿಕೊಡುತ್ತಿದ್ದುದನ್ನು ನಾನು ನೋಡಿದುದು ಅದೇ ಮೊದಲನೆಯ ಸಲವಾಗಿರಲಿಲ್ಲ. ಡೈವರನನ್ನು ಕುರಿತು "ಸ್ವಲ್ಪ ಗಾಡಿ ನಿಲ್ಲಿಸು" ಎಂದೆ. ಅವನು "ನೀವು ಇಳಿಯುವುದು ತಲಕಾಡಿನಲ್ಲಿ ಅಲ್ಲವೇ? ಇನ್ನೂ ೧೫ ಮೈಲು ಇದೆಯೆಲ್ಲಾ” ಎಂದ. ನಾನು ಮತ್ತೆ “ನಿಲ್ಲಿಸು” ಎಂದೆ. 'ಜರ್‍ರ ಖಡೆ ಕರೊ' ಎಂಬುದಾಗಿ ಕ್ಲೀನರಿಗೆ "ಆರ್ಡರ್" ಮಾಡಿಬಿಟ್ಟ. ತಾನು ಕಲಿಯುವುದಕ್ಕೆ ಪ್ರಾರಂಭಿಸಿದ ಕೂಡಲೇ ನಿಲ್ಲಿಸು ಅಂದುಬಿಟ್ಟನಲ್ಲಾ ಎಂದು ಕ್ಲೀನರನು ಸ್ವಲ್ಪ ಕೋಪದಿಂದಲೇ ನನ್ನ ಮೇಲೆ ಕಣ್ಣು ಬಿಟ್ಟ. ಪ್ರಾಣ ಭಯವು ನನ್ನನ್ನು ಪೂರ್ಣವಾಗಿ ಆಳುತ್ತಿದ್ದುದರಿಂದ, ನಾನು ಅವನ ಕಣ್ಣಿನ ಕೆಂಡಕ್ಕೆ ಲಕ್ಷ್ಯಮಾಡಲಿಲ್ಲ. ಎರಡು ಫರ್ಲಾಂಗ್ ಮುಂದೆ ಗಾಡಿಯನ್ನು ನಿಲ್ಲಿಸಿದ. ನಾನು ಇಳಿದು ಗಾಡಿಯ ಮುಂದೆ ನಿಂತುಕೊಂಡೆ. ಎಲ್ಲರೂ ಆಶ್ಚರ್‍ಯದಿಂದ ನನ್ನ ಕಡೆಯೇ ನೋಡಿದರು. ಡೈವರನನ್ನು ಕುರಿತು “ಗಾಡಿಯನ್ನು ನೀನು ನಡೆಸು. ಇಲ್ಲದಿದ್ದರೆ ನಾನು ಹತ್ತುವುದಿಲ್ಲ. ನಿನಗೆ ಮುಂದಕ್ಕೆ ಹೋಗಲು ಅವಕಾಶ ವನ್ನೂ ಕೊಡುವುದಿಲ್ಲ” ಎಂದೆ. ಡೈವರನು ವಿಧಿಯಿಲ್ಲದೆ ತಾನೇ ಗಾಡಿಯನ್ನು ನಡೆಸಲು ಪ್ರಾರಂಭಿಸಿದ. ಉಳಿದ ಪ್ರಯಾಣಿಕರು ನಾನು ಮೂರ್ಖನೋ ಹುಚ್ಚನೋ ಆಗಿರಬೇಕೆಂದು ನನ್ನ ಮೇಲೆ ಇಟ್ಟ ಕಣ್ಣನ್ನು ತೆಗೆಯದೆ ನನ್ನನ್ನೇ ದೃಷ್ಟಿಸುತ್ತಿದ್ದರು. ಅಂತೂ ಬನ್ನೂರಿಗೆ ಬಂದೆವು.

ಬನ್ನೂರು ಬಹಳ ಚೆಲುವಾಗಿದೆ. ಊರಿನ ಸುತ್ತಲೂ ರಸ್ತೆಯ ಎರಡು ಪಾರ್ಶ್ವಗಳಲ್ಲಿಯೂ ಕಬ್ಬಿನ ಮತ್ತು ಭತ್ತದ ಪೈರಿನ ಗದ್ದೆಗಳು; ತುಂಬಿದ ನೀರಿನ ಕಾಲುವೆ; ಹಸಿರು ಬಟ್ಟೆಯನ್ನು ಹಾಸಿದಂತೆ ಗರಿಕೆ ಬೆಳೆದ ನೆಲ; ಮತ್ತೊಂದು ಕಡೆ ರಾಗಿಯ ಹೊಲಗಳು. ಪ್ರಕೃತಿಯ ಕೈಯಿಂದ ಚಿತ್ರಿತವಾದ ಆ ಸುಂದರ ದೃಶ್ಯವನ್ನು ಕಂಡು ನನ್ನ ಬೇಸರಿಕೆಯೆಲ್ಲಾ ಮಾಯವಾಯಿತು. ಸೌಂದರ್‍ಯವನ್ನು ಕಂಡು ಮಗ್ನನಾಗಿ ಅದರಿಂದ ಉನ್ನತಿಗೆ ಏರದವನಾರು ?

ಬನ್ನೂರಿನಿಂದ ೫-೬ ಮೈಲು ಬಂದ ಕೂಡಲೆ ಮತ್ತೊಂದು ವಿನೋದವನ್ನು ನಾನು ನೋಡಿದೆನು. ರಸ್ತೆಯಲ್ಲಿ ಒಂದು ಮೋಟಾರ್ ಕಾರ್ ನಿಂತಿದ್ದಿತು. ಅದರಲ್ಲಿ ಒಬ್ಬ ಯೂರೋಪಿಯನ್ ಲೇಡಿ ಕುಳಿತಿದ್ದಳು. ಡೈವರನು ಕೆಳಗೆ ಇಳಿದು ನಿಂತಿದ್ದನು. ಕಾರಿನ ಸುತ್ತ ಹಳ್ಳಿಯವರೂ ಹೆಂಗಸರೂ ೧೦-೧೨ ಜನ ನಿಂತಿದ್ದರು. ೧೦-೧೨ ವರುಷದ ಹುಡುಗನ ತಲೆಗೆ ಏಟು ತಗಲಿ, ಸ್ವಲ್ಪ ರಕ್ತವು ಸೋರಿದ್ದಿತು. ಲೇಡಿಯು ಇಂಗ್ಲಿಷಿ ನಲ್ಲಿ, ಡೈವರನು ಕನ್ನಡದಲ್ಲಿಯೂ, ಹಳ್ಳಿಯವರೆಲ್ಲಾ ಕನ್ನಡದಲ್ಲಿಯೂ ಏಕಕಾಲದಲ್ಲಿ ಮಾತನಾಡುತ್ತಿದ್ದರು. ವಿಷಯವನ್ನು ತಿಳಿಯಲು ಹೆಚ್ಚು ಕಾಲ ಬೇಕಾಗಲಿಲ್ಲ. ಕಾರು ಹುಡುಗನಿಗೆ ತಗುಲಿ ಸ್ವಲ್ಪ ಏಟು ಬಿದ್ದಿದ್ದಿತು. ಇದರಲ್ಲಿ ವಿನೋದವೇನು ಬಂತು ಎಂಬುದಾಗಿ ನೀವು ಕೇಳಬಹುದು. ಲೇಡಿಯು ಇಂಗ್ಲೀಷಿನಲ್ಲಿ ರೈತರನ್ನು ಕುರಿತು,

“ಡೈವರನು ಗಾಡಿ ನಡೆಸುತ್ತಿದ್ದ. ಆದರೆ ತಪ್ಪು ಅವನದಲ್ಲ. ಗಾಡಿಯ ಕೊಂಬನ್ನು ಎಷ್ಟು ಸಲ ಕೂಗಿಸಿದರೂ ನಿಮ್ಮ ಹುಡುಗ ಮಗ್ಗಲಾಗಲೇ ಇಲ್ಲ. ಆದರೂ ತಕ್ಷಣ ನಿಲ್ಲಿಸಿದ. ನಿಮ್ಮ ಹುಡುಗನಿಗೆ ಏನೂ ಪೆಟ್ಟಾಗಿಲ್ಲ. ಈ ಕಷ್ಟಕ್ಕೋಸ್ಕರ ನಿಮಗೆ ನಾನು ಪ್ರತಿಫಲವನ್ನು ಕೊಡುತ್ತೇನೆ” ಎನ್ನುತ್ತಿದ್ದಳು. ಇಂಗ್ಲೀಷ್ ತಿಳಿಯದ ಹಳ್ಳಿಯವರು, “ಹುಡುಗನ ತಲೆ ಒಡೆದುದಲ್ಲದೆ ಉಪನ್ಯಾಸಕ್ಕೆ ಬೇರೆ ಪ್ರಾರಂಭಿಸಿದ್ದಾಳೆ” ಎಂದರು. ಡೈವರನು ಹಳ್ಳಿಯವರನ್ನು ಕುರಿತು,

“ ದೊರೆಸಾನಿಯು ಹೇಳಿದುದು ಗೊತ್ತಾಯಿತೆ? ಗಾಡಿಯನ್ನು ಅವರೇ ನಡೆಸುತ್ತಿದ್ದರು. ಆದರೆ ತಪ್ಪು ಅವರದಲ್ಲ. ನಿಮ್ಮ ಹುಡುಗನದೇ, ಆದರೆ ಏನೂ ಪೆಟ್ಟಾಗಿಲ್ಲ. ದೊರೆಸಾನಿಯು ಬಹಳ ಒಳ್ಳೆಯವಳು. ನಿಮಗೆ ಸಹಾಯ ಮಾಡಿಸುತ್ತೇನೆ” ಎನ್ನುತ್ತಿದ್ದನು. ಲೇಡಿಗೆ ಕನ್ನಡ ಬಾರದು. ಅವಳು ಡೈವರನನ್ನು ಇಂಗ್ಲೀಷಿನಲ್ಲಿ ಏನು ಹೇಳಿದೆ ಅವರಿಗೆ” ಎಂದಳು. ಡ್ರೈವರನು “ಒಡತಿಯೇ ನಾನು ಗಾಡಿಯನ್ನು ನಡೆಸುತ್ತಲಿದ್ದೆ. ಆದರೆ ತಪ್ಪು ನನ್ನದಲ್ಲ. ನಿಮ್ಮ ಹುಡುಗನದು. ದೊರೆಸಾನಿಯು ಬಹಳ ಒಳ್ಳೆ ಯವಳು. ಬಹುಮಾನ ಮಾಡುತ್ತಾಳೆ. ಹೆದರಬೇಡಿ ಎಂದೆ” ಎಂದನು. ಲೇಡಿಯು ಸಮಾಧಾನದಿಂದ “ರೈಟೊ, ಯು ಆರ್ ಎ ಗುಡ್ ಚಾಪ್" (ನೀನು ಬಹಳ ಒಳ್ಳೆಯ ಹುಡುಗ) ಎಂದಳು. ನಾನು ಡೈವರನನ್ನು ಕುರಿತು “ಏನಯ್ಯ ಈ ನಾಟಕ” ಎಂದೆ. ಅವನು “ಹೊಟ್ಟೆಯ ಪಾಡಾಗಬೇಕಲ್ಲ ಸ್ವಾಮಿ, ಏನಾದರೂ ಮಾಡಲೇ ಬೇಕು” ಎಂದ. ಹುಡುಗನ ತಂದೆಯು ಸ್ವಲ್ಪ ಹಣದಿಂದ ಸಮಾಧಾನವನ್ನು ಹೊಂದಿ, ಲೇಡಿಗೆ ಉದ್ದವಾದ ಒಂದು ಸಲಾಮನ್ನು ಹಾಕಿ ಹೊರಟುಹೋದ. ನಾವೂ ನಮ್ಮ ದಾರಿ ಹಿಡಿದೆವು. ಆದರೆ ನಮ್ಮ ದುರದೃಷ್ಟವು ಇನ್ನೂ ಪೂರ್ಣವಾಗಿರಲಿಲ್ಲ.

ಮೋಟಾರಿಗೆ ನೀರು ಬೇಕಿತ್ತು, ಪೆಟ್ರೋಲಿನ ಖಾಲಿ ಡಬ್ಬದಲ್ಲಿ ನೀರನ್ನು ತುಂಬುವುದನ್ನು ಕ್ಲೀನರನು ಮರೆತುಬಿಟ್ಟಿದ್ದನು. ಇದ್ದಕ್ಕಿದ್ದಂತೆ ಗಾಡಿಯನ್ನು ನಿಲ್ಲಿಸಿದುದಾಯಿತು. ಎರಡು ಮೈಲು ಸುತ್ತ ಎಲ್ಲೂ ನೀರಿರಲಿಲ್ಲ. ಕ್ಲೀನರನು ಟಿನ್ನನ್ನು ತೆಗೆದುಕೊಂಡು ಆಮೆಯ ನಡಿಗೆಯಲ್ಲಿ ನೀರಿಗೆ ಹೋದನು. ಅವನು ಹೋಗಿ ಬರುವುದಕ್ಕೆ ೧ ಗಂಟೆ ಹಿಡಿಯಿತು. ದೇವರ ದಯದಿಂದ ಆ ವೇಳೆಗೆ ಬಸ್ಸಿನ ಮತ್ತಾವ ಭಾಗವೂ ಕೆಡಲಿಲ್ಲ.

ಮಧ್ಯಾಹ್ನ ೩ ಘಂಟೆಗೆ ನಮ್ಮ ಭಾವನವರ ಊರನ್ನು ತಲಪಿದೆ. ಆದರೆ ೮ ದಿವಸ ಮುಂಚೆಯೇ ಅವರು ಹೊನ್ನಹಳ್ಳಿಗೆ ಹೊರಟುಹೋಗಿದ್ದರೆಂದು ಹೇಳಿದೆನಷ್ಟೆ. ಅಲ್ಲಿ ನಮ್ಮ ಮತ್ತೊಬ್ಬ ಗೆಳೆಯರಿದ್ದರು. ಆ ರಾತ್ರೆಯನ್ನು ಅವರ ಮನೆಯಲ್ಲಿ ಕಳೆಯುವುದು ಅನಿವಾರ್ಯವಾಯಿತು. ಹೊನ್ನ ಹಳ್ಳಿಯು ಅಲ್ಲಿಂದ ೩ ಮೈಲು ಎಂದು ಹೇಳಿದೆನಲ್ಲಾ, ಆ ಮೂರು ಮೈಲಿಯನ್ನು ಬೆಳಿಗ್ಗೆ ನಡೆದು, ಅಲ್ಲಿ ನದಿಯನ್ನು ದಾಟಬೇಕೆಂದು ಯೋಚಿಸಿಕೊಂಡೆ. ಬಹಳ ದಿವಸಗಳ ಮೇಲೆ ಹೋದ ಸ್ನೇಹಿತನಾದುದರಿಂದ ನನ್ನ ಗೆಳೆಯನು ನನ್ನನ್ನು ಬಹಳ ಚೆನ್ನಾಗಿ ಆದರಿಸಿದನು. ಪ್ರಾತಃಕಾಲ ತಾನೂ ಹೊನ್ನ ಹಳ್ಳಿಗೆ ಮದುವೆಗೆ ಬರುವುದಾಗಿ ಹೇಳಿದನು. ಆದರೆ ಆ ಆನಂದದಲ್ಲಿಯೂ ಸ್ವಲ್ಪ ಕಹಿಯು ಇದ್ದೇ ಇದ್ದಿತು. '

ನಮ್ಮ ಗೆಳೆಯನ ಅತ್ತೆಯವರು ಬಹಳ ಮಡಿ. ಮೈಲಿಗೆ ವಸ್ತುಗಳ ಮೇಲೆ ಬೀಸಿದ ಗಾಳಿ ಅವರಿಗೆ ಬೀಸಿದರೂ ಸಾಕು; ಕೂಡಲೆ ಸ್ನಾನಮಾಡಬೇಕು. ಮಾತನಾಡಿದುದಕ್ಕೆಲ್ಲ ಸ್ನಾನ. ಮುದುಕರಾದರೂ ದಿವಸಕ್ಕೆ ೮-೧೦ ಸಲ ತಣ್ಣೀರಿನಲ್ಲಿ ಮುಳುಗುತ್ತಾರೆ. ನನ್ನನ್ನು ಕಂಡ ಕೂಡಲೆ ಅವರು ನಡುಗಿದರು. ನಾನು ಇಂಗ್ಲೀಷ್ ಕಲಿತು, ಬೆಂಗಳೂರಿನಲ್ಲಿ ಜೀವಿಸುತ್ತಾ, ನಲ್ಲಿಯ ನೀರನ್ನು ಕುಡಿಯುತ್ತಿರುವೆನಾದುದರಿಂದ, ನನಗೆ ನರಕದಲ್ಲಿ ಶಾಶ್ವತವಾದ ಸ್ಥಳವಿರುವುದೆಂದು ಅವರು ತೀರ್ಮಾನಿಸಿದ್ದರು. ನಾನು ಹೋದಕೂಡಲೇ, ಎಲ್ಲಿ ಸ್ನಾನ ಮಾಡುವ ಪಾತ್ರೆಗಳನ್ನು ಮುಟ್ಟಿಬಿಡುತ್ತಾನೋ ಎಂಬ ಗಾಬರಿಯಿಂದ, ನಾನು ಕೇಳುವುದಕ್ಕೆ ಮುಂಚೆಯೇ ಬೆಳ್ಳಿಯ ಚೊಂಬಿನಲ್ಲಿ ಕಾಲು ತೊಳೆಯಲು ನೀರನ್ನು ತಂದಿಟ್ಟರು. ಒಳಕ್ಕೆ ಹೋದಾಗ ಎಲ್ಲಿ ಕೊಟ್ಟಿಗೆಗೆ ಹೋಗಿಬಿಡುತ್ತಾನೆಯೋ ಎಂದು ನನ್ನ ಹಿಂದೆಯೇ ಬಂದರು. ಇದನ್ನೆಲ್ಲಾ ನೋಡಿ ನನಗೆ ಬಹಳ ನಗು ಬಂದಿತು. ನನ್ನ ಸ್ನೇಹಿತನೂ ಅವನ ಹೆಂಡತಿಯೂ ಉಪಚಾರ ಹೇಳಿದರು.

ಆ ದಿವಸ ಸಾಯಂಕಾಲ ನಡೆದ ಮತ್ತೊಂದು ವಿಷಯವನ್ನು ಇಲ್ಲಿ ಹೇಳಬೇಕಾಗಿದೆ. ನಾನೂ ನನ್ನ ಸ್ನೇಹಿತನ ಮನೆಯೊಳಗೆ ಕುಳಿತಿದ್ದೆವು. ಹೊರಗೆ ಬಿರುಗಾಳಿ ಬೀಸುತ್ತಿದ್ದಿತು. ಗಾಡಾಂಧಕಾರ, ಅವರ ಮನೆಯಿಂದ ೪ ಮಾರು ದೂರದಲ್ಲಿ ಒಂದು ತೋಪಿದೆ. ಆ ತೋಪಿನ ಆಚೆ ರಸ್ತೆ, ರಸ್ತೆಯ ಮಗ್ಗುಲಲ್ಲಿ ನಮ್ಮ ಸ್ನೇಹಿತನ ಜೀತಗಾರನ ಮನೆ. ಆ ಜೀತಗಾರನು ಪ್ರತಿದಿನವೂ ಕತ್ತಲೆಯಾಗುವುದಕ್ಕೆ ಮುಂಚೆಯೇ ತನ್ನ ಮನೆ ಯನ್ನು ಸೇರಿಕೊಳ್ಳುವ ಪದ್ದತಿಯಿತು. ಯಾತಕ್ಕೆಂದರೆ ಆ ತೋಪಿನಲ್ಲಿ ಭೂತ ಪಿಶಾಚಿಗಳಿವೆಯೆಂದು ಹತ್ತಾರು ತಲೆಗಳಿಂದ ಪ್ರಸಿದ್ಧವಾಗಿದೆ. ಈ ಜೀತಗಾರನಂತೂ ಒಂದು ದಿವಸ ಆ ತೋಪಿನಲ್ಲಿ ಜಡೆಮುನಿಯನ್ನು ಪ್ರತ್ಯಕ್ಷವಾಗಿ ನೋಡಿಯೇಬಿಟ್ಟನಂತೆ. ಅದು ಬೆಳದಿಂಗಳಿನಂತೆ ಬಿಳುಪಾದ ಬಟ್ಟೆಯನ್ನು ಧರಿಸಿ, ಉದ್ದವಾದ ಜಡೆಯನ್ನು ಹೊತ್ತು, ಹಿಂದು ಮುಂದಾದ ಕಾಲಿನ ಹೆಜ್ಜೆಯುಳ್ಳದುದಾಗಿ, ಬಹಳ ಎತ್ತರವಾಗಿದ್ದಿತಂತೆ. ಜಡೆಮುನಿಯನ್ನು ಇಷ್ಟು ಸ್ಪಷ್ಟವಾಗಿ ಕಂಡವನು, ಆ ದಾರಿಯಲ್ಲಿ ಕತ್ತಲೆಯಲ್ಲಿ ಮತ್ತೆ ಹೋದಾನೆ? ನಾವು ಅವನಿಗೆ ಒಂದು ಲಾಂದ್ರವನ್ನು ಹತ್ತಿಸಿ ಕೊಟ್ಟೆವು. ಆದರೂ ಅವನು ಹೋಗಲೋ ಬೇಡವೋ ಎಂಬುದಾಗಿ ಅನುಮಾನಿಸುತ್ತ ನಿಂತಿದ್ದನು. ಆ ವೇಳೆಗೆ ಸರಿಯಾಗಿ ರಸ್ತೆಯಲ್ಲಿ ಒಂದು ಮೋಟಾರ್ ಬಸ್ಸು ಒಂದು ನಿಂತಿತು. ನಿತ್ಯ ೪ ಘಂಟೆಗೆ ಬರುತ್ತಿದ್ದ ಬಸ್ಸು ಅದು. ಈ ದಿವಸ ೬ ಘಂಟೆಗೆ ಬಂದಿತು. ಅದರ ಮುಂದಲ ಎರಡು ಬೆಳಕುಗಳೂ ಸೂರ್‍ಯನ ಮರಿಗಳಂತೆ ಪ್ರಕಾಶಿಸುತ್ತಾ ರಸ್ತೆಯನ್ನು ಒಂದು ಫರ್ಲಾಂಗ್ ದೂರ ಬೆಳಗುತ್ತಿದ್ದು, ಅದನ್ನು ನೋಡಿದ ಕೂಡಲೆ ಜೀತಗಾರನು “ಸ್ವಾಮಿ ಬಸ್ಸು ನಿಂತದೆ, ಅದರ್‍ಬೆಳಕ್ಕಲ್ಲಿ ಮನೆ ಸೇರ್ಕೊಂಡ್ಬಿಡ್ತೇನೆ" ಎಂದು ಹೊರಟುಹೋದ. ನಾವು ಅವನ ವಿಷಯವನ್ನೇ ಕುರಿತು ಮಾತನಾಡುತ್ತ ನಗುತ್ತಲಿದ್ದೆವು. ಸುಮಾರು ೧೦ ನಿಮಿಷ ಕಳೆದಿರಬಹುದು. ಆವೇಳೆಗೆ ಮತ್ತೆ ಅವನೇ ಬಾಗಲಿನಲ್ಲಿ "ಬುದ್ದಿ” ಎಂದ. ನಾವು "ಏನೋ ಜಡೆಮುನಿ ಓಡಿಸಿಕೊಂಡೇ ಬಂದುಬಿಡ್ತೀನೋ?"' ಎಂದೆವು. ಅವನು “ಯಾರೋ 'ಬುದ್ಯೋರ್ಮನೆ ದಾರಿ ತೋರಿಸು' ಅಂದ್ರು; ಕರ್‍ಕೊಂಡ್ಬಂದೆ" ಎಂದ. ನಾವು "ಯಾರವರು?" ಎಂದು ಕೇಳುವುದಕ್ಕೆ ಮುಂಚಿತವಾಗಿಯೇ ಬಾಗಿಲಿನಲ್ಲಿ ಅಪರಿಚಿತ ಧ್ವನಿಯೊಂದು "ಸ್ವಾಮಿ, ಈ ರಾತ್ರಿ ಊಟಕ್ಕೆ ಅನುಕೂಲವಾಗುತ್ತದೆಯೆ?" ಎಂದಿತು. ನನ್ನ ಸ್ನೇಹಿತನು "ನೀವು ಯಾವ ಊರು?" ಎಂದನು. ಹೊರಗೆ ನಿಂತಿದ್ದವನು "ನಾವು ಪರಸ್ಥಳ" ಎಂದನು. ನಮ್ಮ ಸ್ನೇಹಿತನು "ಒಳಕ್ಕೆ ಬನ್ನಿ” ಎಂದನು. ಹೊರಗಿನಿಂದ ಇಬ್ಬರು ಒಳಕ್ಕೆ ಬಂದರು. ನೋಡಿದರೆ ಅವರು ನನ್ನ ಸ್ನೇಹಿತನ ಬಂಧುಗಳು. ಅವರೂ ವಿವಾಹಕ್ಕಾಗಿ ಹೊನ್ನ ಹಳ್ಳಿಗೆ ಹೋಗಲು ಬಂದಿದ್ದರು. ಅವರು ಮಾಡಿದ ವಿನೋದದಿಂದ, ನಮಗೆಲ್ಲಾ ಬಹಳ ನಗು ಬಂದಿತು. ನನ್ನ ಸ್ನೇಹಿತನು ಮಾತ್ರ “ನನಗೆ ಮೊದಲೇ ಗೊತ್ತಾಯಿತು” ಎಂದ. ನಾನು “ಇದ್ದರೂ ಇರಬಹುದು” ಎಂದೆ.

ಸರಿ; ಆ ರಾತ್ರೆ ಊಟವಾಯಿತು. ನನ್ನ ಸ್ನೇಹಿತನಿಗೆ ಕನ್ನಡ ಸಾಹಿತ್ಯದ ಜ್ಞಾನವಿಲ್ಲದಿದ್ದರೂ, ಪಂಡಿತನಂತೆ ನಟಿಸುತ್ತಾನೆ. ಜೈಮಿನಿ ಭಾರತ, ಕನ್ನಡ ಭಾರತ, ಇವುಗಳಲ್ಲಿ ೮-೧೦ ಕಷ್ಟ ಕಷ್ಟವಾದ ಪದ್ಯಗಳನ್ನು ಹುಡುಕಿಟ್ಟುಕೊಂಡು, ಯಾರಾದರೂ ಹೋದಕೂಡಲೇ ಅರ್ಥ ಹೇಳಿ ಅಂತ ಪ್ರಾಣ ಹಿಂಡುತ್ತಾನೆ. ಅವರಿಗೆ, ಬರುವುದಿಲ್ಲ ಅಂತ ಹೇಳುವುದಕ್ಕೆ ಅವಮಾನ. “ಹಳ್ಳಿಯಲ್ಲಿ ಕುಳಿತುಕೊಂಡು ಸಾಹಿತ್ಯದ ಗಂಧವನ್ನೇ ಅರಿಯದ ಇವನಿಗೆ ಮಾತ್ರ ಆ ಪದದ ಅರ್ಥ ಗೊತ್ತಿರಬೇಕು; ನಮಗೆ ಗೊತ್ತಿರಬಾರದೆ?” ಎಂದು ಅವರು ಯೋಚಿಸುತ್ತಿದ್ದರು. ಕೆಲವರಂತೂ ನಮ್ಮ ಸ್ನೇಹಿತನ ಮನೆಯ ಬಳಿಗೇ ಸುಳಿಯುತ್ತಿರಲಿಲ್ಲ. ಒಂದುಸಲ ನಾನು ಕಂಡ ವಿಷಯವನ್ನು ಎಂದಿಗೂ ಮರೆಯಲಾರೆ. ಸುಮಾರು ೫ ವರ್ಷಗಳ ಕೆಳಗೆ ನಡೆದುದು. ರಾತ್ರಿ ೮ ಘಂಟೆ ಇದ್ದಿರಬಹುದು. ಊರ ಹೊರಗಿನ ಕೆರೆಗೆ ನಾನೂ ನನ್ನ ಸ್ನೇಹಿತನೂ, ಆಗತಾನೇ ಬಂದಿದ್ದ ಮತ್ತಾರೋ ೨-೩ ಜನರೂ ಬಟ್ಟೆ ಒಗೆಯಲು ಹೋಗಿದ್ದೆವು. ನನ್ನ ಸ್ನೇಹಿತನ ಬಂಧುಗಳಾದ ಹಿರಿಯರೋರ್ವರು ಬೆಂಗಳೂರಿನಿಂದ ಅಲ್ಲಿಗೆ ಬಂದರು. ಅವರು ಬೆಂಗಳೂರಿನಲ್ಲಿ ಸಂಸ್ಕೃತ ವಿದ್ವಾಂಸರು; ಪಾಠಶಾಲೆಯಲ್ಲಿ ಅಧ್ಯಾಪಕರು, ನಾವೆಲ್ಲಾ ಅವರ ಯೋಗಕ್ಷೇಮವನ್ನು ವಿಚಾರಿಸುತ್ತಿರುವಾಗ, ನಮ್ಮ ಸ್ನೇಹಿತನು “ಅದೆಲ್ಲಾ ಇರಲಿ ಪಂಡಿತರೆ, ಎಲ್ಲಿ ನೋಡೋಣ. ಇದಕ್ಕೆ ಅರ್ಥವನ್ನು ಹೇಳಿ” ಎಂದನು. ಸರಿ ಅವನು ಏನು ಹೇಳುತ್ತಾನೆಂಬುದು ನಮಗೆ ತಿಳಿದಿದ್ದಿತು. ಪಾಪ! ಪಂಡಿತರು ೧ ಮೈಲು ನಡೆದುಕೊಂಡು ಬಂದಿದ್ದರು; ಬಹಳ ಆಯಾಸದಿಂದ ಏದುತಿದ್ದರು. ಅವರ ತಲೆಯ ಮೇಲೆ ಒಂದು ಪುಸ್ತಕದ ಗಂಟೂ ಶಾಲುವಿನ ಮೂಟೆಯೂ ಇದ್ದವು. ನಮ್ಮ ಸ್ನೇಹಿತನಿಗೆ ಇದಾವುದರಿಂದಲೂ ಕನಿಕರವುಂಟಾಗಲಿಲ್ಲ. ಅವನು ಗಂಟಲನ್ನು ಸರಿಮಾಡಿಕೊಂಡು, ದಪ್ಪ ದನಿಯಲ್ಲಿ ಹೇಳಿ ಹೇಳಿ ಉರುವಾಗಿದ್ದ. ಈ ಪದ್ಯವನ್ನು ಹೇಳಿದನು.

ಸುನಿಮೇಷ ಮೀನ ಚಾಪಲ ನೇತ್ರ ಚಕ್ರೋನ್ಮಿ
ಥುನ ಕುಂಭ ಕುಚೆ ಮಕರ ಕೇತು ಮಾತುಲ ಸಮಾ
ನನೆ ಸಿಂಹ ಮಧ್ಯೆ ವೃಷಭಧ್ವಜಾರಿಯ ಪಟ್ಟದಾನೆ ಕನ್ಯಾ ಕುಲಮಣಿ |
ಮನಸಿಜ ಶಶಾಂಕ ಕರ್ಕಟ ಚೇಲಂ ಗುಡುವ
ತನಿ ಸೊಬಗುವಡೆದ ಸಮ್ಮೋಹನದ ಕಣಿಯೆ ಬಾ
ರೆನುತೋರ್ವ ನೀರೆ ಸಖಿಯಂ ಕರೆದಳೀರಾರು ರಾಶಿಯಂ ಹೆಸರಿಪವೊಲು |
|

ಸರಿ, ವಿಧಿಯಿಲ್ಲ. ಪಂಡಿತರು ಅದಕ್ಕೆ ಅರ್ಥವನ್ನು ಹೇಳಿದರು. ನನ್ನ ಸ್ನೇಹಿತ ಅಷ್ಟಕ್ಕೇ ಬಿಡಲಿಲ್ಲ. ಒಂದಾದಮೇಲೊಂದು, ತಾನು ಉರು ಹೊಡೆದಿದ್ದ ಪದ್ಯಗಳನ್ನೆಲ್ಲಾ ಹೇಳಿ, ಅವರಿಂದ ಅರ್ಥವನ್ನು ಹೇಳಿಸಿದ. ಕೊನೆಗೆ ಮನೆಗೆ ಬಂದೆವು.

ಇದು ನನಗೆ ಗೊತ್ತಿದ್ದುದರಿಂದ, ನಾನು ಬೆಂಗಳೂರಿನಿಂದ ಬರುವಾಗಲೇ, ನನ್ನ ಸ್ನೇಹಿತನ ಪ್ರೀತಿಯ ಪದ್ಯಗಳಿಗೆ ಅರ್ಥವನ್ನು ತಿಳಿದುಕೊಂಡು ಹೋಗಿದ್ದೆ. ಆದರೆ ಆ ಪುಣ್ಯಾತ್ಮನಿಗೆ ಇದೂ ಗೊತ್ತಿದ್ದಿತೋ ಏನೊ? ಅವನು ತನ್ನ ಪ್ರೀತಿಯ, ಜೈಮಿನಿಯ ಭಾರತದ “ಸುನಿಮೇಷ ಮಿಾನ ಚಾಪಲ ನೇತ್ರೆ"ಯನ್ನಾಗಲಿ, “ಕಳಹಂಸಮಾಕೀರ್ಣವಾಗಿರ್ದೊಡಂ ಕಾಳಗದ ಕಳನಲ್ಲ"ವನ್ನಾಗಲಿ ಓದಲಿಲ್ಲ. ಕುಮಾರವ್ಯಾಸ ಭಾರತವನ್ನು ತಂದ. ನನಗೆ ನಡುಕ ಹತ್ತಿತು. ಆ ದಪ್ಪ ಪುಸ್ತಕವನ್ನು ನೋಡಿ ಗಾಬರಿಯಾಯಿತು. ಜೊತೆಗೆ ಹಾರ್ಮೋನಿಯಂ ಬೇರೆ ಕಿರೋ ಅನ್ನಿಸಿದ. ಸರಿ; ದೇವರೇ ನನ್ನನ್ನು ಕಾಪಾಡಬೇಕೆಂದುಕೊಂಡೆ. ಹಾರ್ಮೋನಿಯಂ ಸದ್ದು ಕೇಳಿದೊಡನೆಯೇ ಹಳ್ಳಿಯವರೆಲ್ಲಾ ಬಂದು ಸೇರಿಬಿಟ್ಟರು. ನನ್ನ ಯೋಗ್ಯತೆಯ ಒರೆಗಲ್ಲು ಸಿದ್ಧವಾಯಿತೆಂದುಕೊಂಡೆ. ಸ್ನೇಹಿತನೊಂದಿಗೆ “ನನಗೆ ನಿದ್ರೆ ಬರುತ್ತದಯ್ಯ; ನೀನು ಬೇಕಾದರೆ ಓದು. ನಾನು ಮಲಗಿಕೊಳ್ಳುತ್ತೇನೆ" ಎಂದೆ. ಅವನು ಸುಮ್ಮನಿರಬೇಕಲ್ಲ. “ನಾಳೆ ಬೆಳಿಗ್ಗೆ ೧೧ ಗಂಟೆಯವರಿಗೆ ರಾಮಾಯಣದ ಕರ್ಣನಂತೆ ಬಿದ್ದುಕೊ. ನೋಡು, ಇವರೆಲ್ಲಾ ಸೇರಿಬಿಟ್ಟಿದ್ದಾರೆ. ನನಗೆ ತಿಳಿದಂತೆ ಓದುತ್ತೇನೆ. ನೀನು ಅರ್ಥವನ್ನು ಹೇಳಿತೀರಬೇಕು” ಎಂದ. “ನನಗೆ ಬರುವುದಿಲ್ಲ” ಎಂದೆ. "ಎಲ್ಲಾ ಬರುತ್ತೆ” ಎಂದ. ಇನ್ನೇನು ಮಾಡುವುದು. “ಆಗಲಿ” ಎಂದೆ. ತಪ್ಪುಮಾಡಿದ ವಿದ್ಯಾರ್ಥಿಗೆ ಶಿಕ್ಷೆಯನ್ನು ಕೊಟ್ಟಿದ್ದರೆ ಅವನ ಮುಖವು ನನ್ನ ಮುಖವು ಆಗ ಇದ್ದುದಕ್ಕಿಂತ ಹೆಚ್ಚು ಪೆಚ್ಚಾಗಿರುತ್ತಿರಲಿಲ್ಲ. ಸಾಲದುದಕ್ಕೆ ನನ್ನ ಸ್ನೇಹಿತನು ಬಂದವರನ್ನೆಲ್ಲಾ ಕುರಿತು, “ಇವರು ಬಹಳ ವಿದ್ವಾಂಸರು, ಸಂಸ್ಕೃತ ಮತ್ತು ಕನ್ನಡದಲ್ಲಿ ದಿಗ್ದಂತಿಗಳು” ಎಂದು ಬಿಟ್ಟ. ನಾನು ರೋದನ ಧ್ವನಿಯಿಂದ "ಯಾವ ಭಾಗ ಓದುತ್ತೀಯೆ" ಎಂದೆ. ನನ್ನ ಸ್ನೇಹಿತನು ನನಗೇನೋ ಬಹಳ ದೊಡ್ಡ ಸಹಾಯಮಾಡುವವನಂತೆ “ನಿನಗೆ ಬೇಕಾದ ಸ್ಥಳದಲ್ಲಿ ಓದುತ್ತೇನೆ. ದೌಪದಿ ಸ್ವಯಂವರ, ವಸ್ತ್ರಾಪಹರಣ, ಕೀಚಕ ವಧೆ, ಅಭಿಮನ್ಯುವಿನ ಕಾಳಗ-". ಪ್ರತಿಯೊಂದು ಹೆಸರಿನೊಂದಿಗೂ ನನ್ನ ಮಿದುಳು ಗರಗರನೆ ತಿರುಗತೊಡಗಿತು. ನನಗೆ ಯಾವ ವಿಷಯವೂ ಚೆನ್ನಾಗಿ ಗೊತ್ತಿರಲಿಲ್ಲ. ಕಥೆಯನ್ನೇನೊ ಕೇಳಿದ್ದೆ. ಆದರೆ ಸದ್ಯಕ್ಕೆ ಅರ್ಥ ಹೇಳುವುದೆಂದರೆ ಸಾಮಾನ್ಯವೇ. ಹೋಮರನ ಒಡಿಸಿಯನ್ನು ಬೇಕಾದರೆ ಚಾಚೂ ತಪ್ಪದಂತೆ ಒಪ್ಪಿಸಿಬಿಡುತ್ತಿದ್ದೆ. ಆದರೆ ಕನ್ನಡ ಭಾರತದಲ್ಲಿ ಒಂದು ಪದ್ಯಕ್ಕೂ ಅರ್ಥವನ್ನು ಹೇಳುವ ಯೋಗ್ಯತೆ ನನ್ನಲ್ಲಿ ಇರಲಿಲ್ಲ. ಕೊನೆಗೆ "ದ್ರೌಪದೀ ಸ್ವಯಂವರ ಓದು" ಎಂದೆ. ನಮ್ಮ ತಂದೆಯವರು ಸಂಸ್ಕೃತ ಭಾರತದಲ್ಲಿ ದೌಪದೀ ಸ್ವಯಂವರವನ್ನು ಓದಿ, ಅರ್ಥವನ್ನು ಹೇಳಿದುದನ್ನು ನನ್ನ ಹನ್ನೊಂದನೆಯ ವಯಸ್ಸಿನಲ್ಲಿ ಕೇಳಿದ್ದೆ. ಅಲ್ಲದೆ ಮಾತಾಡುವ ಪೆಟ್ಟಿಗೆಯಲ್ಲಿ (ಗ್ರಾಮಾಫೋನು) “ನೀವೆದ್ದದ್ದೇನು ಗಡ್ಡದುಪಾದ್ಯರೆ" ಎಂಬ ಹಾಡನ್ನೂ ಕೇಳಿದ್ದೆ. ಅಲ್ಲದೆ, ಅಲ್ಲಿ ಕುಳಿತಿದ್ದವರಾರಿಗೂ ಕನ್ನಡದಲ್ಲಿ ಜ್ಞಾನವಿರಲಿಲ್ಲ. 'ಕುಂತೀ ಪುತ್ರೋವಿನಾಯಕಃ' ಎಂಬಂತೆ ಯದ್ವಾತದ್ವಾ ಹೇಳಿ ಮುಗಿಸಿಬಿಡಬಹುದೆಂದು ಯೋಚಿಸಿಕೊಂಡೆ. ಆದರೆ “ಪುರಾಣ ವ್ಯುತ್ಪತ್ತಿಯ" ಫಲವು ನನಗೆ ಗೊತ್ತಿಲ್ಲದೆ ಇರಲಿಲ್ಲ. ಕಾವ್ಯದ ವರ್ಣನೆಗಳನ್ನು ವಿವರಿಸಲರಿಯದೆ, ಬರಿಯ ಕಥೆಯನ್ನು ಎತ್ತು ಉಚ್ಚೆ ಹುಯ್ದಂತೆ ಹೇಳುವುದರಲ್ಲಿರುವ ಅಪಾಯದ ಒಂದು ದೃಷ್ಟಾಂತವನ್ನು ಕೇಳಿ. ನನ್ನ ಮತ್ತೊಬ್ಬ ಸ್ನೇಹಿತನು, ಒಬ್ಬ ದೊಡ್ಡ ಅಧಿಕಾರಿಗಳ ಮನೆಯಲ್ಲಿ ನವರಾತ್ರೆಯ ಕಾಲದಲ್ಲಿ, ವಾಲ್ಮೀಕಿ ರಾಮಾಯಣವನ್ನು ಪಾರಾಯಣ ಮಾಡುತ್ತಿದ್ದ. ಪಾರಾಯಣವನ್ನು ಪ್ರಾರಂಭಿಸಿದ ಮೂರನೆಯ ದಿವಸ, ಆ ಅಧಿಕಾರಿಗಳ ಹೆಂಡತಿಯು ಇವನೇನೋ ವಿದ್ಯಾ ಎಂದುಕೊಂಡು, “ಅರ್ಥವನ್ನು ಹೇಳಿ” ಎಂದರು. ಇವನಿಗೆ ರಾಮಾಯಣವನ್ನು ಓದುವುದಕ್ಕೆ ತಿಳಿದಿದ್ದಿತೇ ಹೊರತು ವಾಲ್ಮೀಕಿಯ ಸಂಸ್ಕೃತ ಮಾತಿಗೆ ಅರ್ಥಮಾಡಿಕೊಳ್ಳುವ ಪಾಪಕ್ಕೆ ಇವನೆಂದೂ ಪ್ರವೃತ್ತಿಸಿದವನೇ ಅಲ್ಲ. ಆದರೆ ರಾಮಾಯಣದ ಕಥೆಯು ಯಾರಿಗೆ ಗೊತ್ತಿಲ್ಲ. ಅವನಿಗೆ ಲೋವರ್ ಸೆಕಂಡರಿಗೆ ಬೇರೆ ಸಂಕ್ಷೇಪ ರಾಮಾಯಣವು ಪಠ್ಯಪುಸ್ತಕವಾಗಿದ್ದಿತು. ಇರಲಿ, ಅವನು ಅರಣ್ಯಕಾಂಡವನ್ನು ಓದುತ್ತಿದ್ದನು. ಅಧಿಕಾರಿಯ ಹೆಂಡತಿಗೆ ಪ್ರತಿಯೊಂದು ಶ್ಲೋಕವನ್ನು ಹೇಳಿದೆ ಮೇಲೂ ಒಂದುಸಲ ಅರ್ಥವನ್ನು ಹೇಳಬೇಕಾಗಿದ್ದಿತು. ಆದರೆ ವಾಲ್ಮೀಕಿಯ ವರ್ಣನೆಗಳು, ಶೃಂಗಾರ, ಶೋಕ, ವೈರಾಗ್ಯ, ಇದನ್ನೆಲ್ಲಾ ಬರಿಯ ಊಹೆಯಿಂದ ಮಾತ್ರ ಹೇಳುವುದಕ್ಕೆ ಆಗುತ್ತದೆಯೆ? ಆ ಒಂದೊಂದು ಶ್ಲೋಕಕ್ಕೂ ನನ್ನ ಸ್ನೇಹಿತ ಕಥೆಯನ್ನೇ ಮುಂದರಿಸುತ್ತಾ ನಡೆದುಬಿಟ್ಟ. ಕವಿಯು ವರ್ಣನೆಗಾಗಿ ತೆಗೆದುಕೊಂಡ ಕಾಲವನ್ನು, ಇವನು ಕಥೆಯ ವಿವರಕ್ಕೆ ತೆಗೆದುಕೊಳ್ಳಲು ಆಗಲಿಲ್ಲ. ಸರಿ ಕಥೆಯು ಮುಂದರಿಯಿತು. ಅರಣ್ಯಕಾಂಡದ ಅರ್ಥವನ್ನು ಮುಗಿಸಿ, ಕಿಷ್ಕ್ರಿಂಧಾಕಾಂಡಕ್ಕೆ ಬಂದು, ಅದನ್ನೂ ಮುಗಿಸಿ, ಸುಂದರಕಾಂಡದಲ್ಲಿ ಹನುಮಂತನನ್ನು ಲಂಕೆಗೆ ಹಾರಿಸಿಬಿಟ್ಟ. ಆದರೆ ಓದುವಾಗ ಮಾತ್ರ.

ಇತಿ ಶ್ರೀಮದ್ರಾಮಾಯಣೆ ಅರಣ್ಯಕಾಂಡೆ ಏಕಾದಶಸ್ಸರ್ಗಃ"
ಎಂದು ಓದಿದ, ಅಧಿಕಾರಿಯ ಹೆಂಡತಿಯು “ಏನು ಸ್ವಾಮಿ, ಇನ್ನೂ ಅರಣ್ಯಕಾಂಡ ಓದುತ್ತಿದ್ದೀರಿ. ಹನುಮಂತನು ಆಗಲೇ ಸಮುದ್ರವನ್ನು ಹಾರಿದನೆಂದಿರಿ. ಅದು ಸುಂದರಕಾಂಡವಲ್ಲವೆ? ದಿವಸಕ್ಕೆ ಮೂರು ಕಾಂಡ ಓದುತ್ತೀರಾ" ಎಂದರು. ನನ್ನ ಸ್ನೇಹಿತನ ಮುಖವು ಮೃತನ ಮುಖದಂತೆ ಬಾಡಿತು. ಬರಿಯ ಕಥೆಯನ್ನು ಅನುಸರಿಸುವುದರಲ್ಲಿ ಈ ಭಯವಿದೆ. ಹೋಗಲಿ, ಸಾಲದುದಕ್ಕೆ ನನ್ನ ಸ್ನೇಹಿತನು, ಹಾರ್ಮೋನಿಯಮ್ಮಿನ ದಪ್ಪ ಧ್ವನಿಗೆ, ಅದಕ್ಕಿಂತಲೂ ಹೆಚ್ಚು ದಪ್ಪವಾದ ತನ್ನ ಧ್ವನಿಯನ್ನು ಸೇರಿಸಿ ಓದುವಾಗ ಎಷ್ಟೋ ಪದಗಳನ್ನು ನುಂಗಿಯೇ ಬಿಡುತ್ತಿದ್ದ. ದ್ರೌಪದೀ ಸ್ವಯಂವರದ ಪ್ರಾರಂಭದಲ್ಲಿ, ದ್ರೌಪದಿಯ ವರ್ಣನೆಯು ಬಂದುಬಿಟ್ಟಿತು. ಈಜು ಬಾರದವನನ್ನು ಮಡುವಿನಲ್ಲಿ ಕೆಡವಿದಂತಾಯಿತು. ದ್ರೌಪದಿಯ ಅಂಗಾಂಗಗಳ ವರ್ಣನೆಯೆಲ್ಲ ಬಂದಿತು. ಹಾಗೂ ಹೀಗೂ ಏನೇನೋ ಹೇಳುತ್ತಾ 'ಹಾಳು ಸ್ತ್ರೀ ವರ್ಣನೆ ಬೇಡ. ಮುಂದಕ್ಕೆ ಓದು' ಎಂದೆ. ನನ್ನ ಸ್ನೇಹಿತನು ೧೦-೧೨ ಪದ್ಯವನ್ನು ಬಿಟ್ಟು ಈ ಪದ್ಯವನ್ನು ಓದಿದ.

ರಾಜಸೂಯದ ಕರ್ತುವೋಲ್ಜಿತ
ರಾಜಮಂಡಲವಾಯ್ತು ಮುಖವಿದು
ರಾಜರಾಜನ ಪೋಲ್ದು ದಳಕಾವೇಷ್ಟಿ ತತ್ವದಲಿ |
ರಾಜನುದ್ಯಾನದವೊಲಾಸ್ಯ ಸ
ರೋಜವಾಯ್ತು ತಮಾಲಪತ್ರ ವಿ
ರಾಜಿತವು ಜನಮೇಜಯ ಕ್ಷಿತಿಪಾಲ ಕೇಳೆಂದ ||

ಪದ್ಯವನ್ನು ಕೇಳಿ ನನಗೆ ಸಿಡಿಲು ಬಡಿದಂತೆ ಆಯಿತು. ಮೈಯೆಲ್ಲಾ ಬೆವತಿತು, ಬಾಯೊಣಗಿತು; ತೊದಲಿತು. ವೀರರನ್ನು ನೋಡಿ ಉತ್ತರನು. “ನಾನು ಜೀವಗಳ್ಳರಿಗೆ ಗುರು; ದಮ್ಮಯ್ಯ, ಕಾಪಾಡು ; ನಾನು ನಿನ್ನ ಮಗ” ಎಂದು ಬೃಹನ್ನಳೆಯ ಕಾಲನ್ನು ಹಿಡಿದು ರೋದಿಸಿದಂತೆ ನಾನು ಕಾತರನಾದೆ. ಜೊತೆಗೆ ಹೆಮ್ಮೆ ಬೇರೆ ಬಾಧಿಸುತ್ತಿದ್ದಿತು.. ನನ್ನ ಸ್ನೇಹಿತನು. “ಹೂ, ಅಪ್ಪಣೆಯಾಗಲಿ” ಎಂದ. "ಬೀಸುವ ದೊಣ್ಣೆ ತಪ್ಪಿದರೆ ಸಾವಿರ ವರುಷ ಆಯುಸ್ಸು" ಎಂಬಂತೆ "ಮುಂದಲ ಪದ್ಯಕ್ಕೂ ಇದಕ್ಕೂ ಸಂಬಂಧವಿದೆ. ಅದನ್ನೂ ಓದು” ಎಂದೆ. ಅವನು ನಿರ್ದಯದಿಂದ ಈ ಪದ್ಯವನ್ನು ಕಿರಚಿದ.

ಜನಪ ಕೇಳುಪಲಾಲಿತಾಂ
ಜನವೆನೆ ಜಿತಾಕ್ಷ ನಿಪಕ್ಷವಾದುವು
ವಿನುತ ಕರ್ಣ ಪ್ರಣಯಿಗಳು ವೃಷಸೇನ ವೈರದಲಿ |
ಜನ ವಿಡಂಬನ ತಾರಕಾಮಂ
ಡನ ಕದರ್ಥಿಕ ಕುಮುದಮೆನೆ ಲೋ
ಚನ ಯುಗಳನೊಪ್ಪಿದುವು ಪಾಂಚಾಲನಂದನೆಯಾ ||

ಕುರುವಿನ ಮೇಲೆ ಬರೆ ಎಳೆದಂತಾಯಿತು; ನನ್ನ ಕುರುಕ್ಷೇತ್ರವನ್ನು ಕಂಡಂತಾಯಿತು. ಗಂಜಿ ಹೋಗದ ಬಾಯಿಯಲ್ಲಿ ಕಡುಬು ತುರುಕಿದಂತಾಯಿತು. ನನಗೆ ಒಂದು ಪದವೂ ಅರ್ಥವಾಗಲಿಲ್ಲ. ಸೂರ್ಯನನ್ನು ನುಂಗಲು ಮೇಲಕ್ಕೆ ಹಾರಿದ ಆಂಜನೇಯನ ದವಡೆಗೆ ಕಮಲಮಿತ್ರನು ಹೊಡೆದಂತಾಯಿತು. ನನ್ನ ಹೆಮ್ಮೆ ಇಳಿಯಿತು. "ಹೇಗಾದರೂ ಮುಗಿದರೆ ಸಾಕು" ಎಂದು ಯೋಚಿಸಿ, "ಅರ್ಜುನನು ಬಿಲ್ಲೇರಿಸಿದ ಸ್ಥಳವನ್ನು ಓದು" ಎಂದೆ. ಅಂತೂ ಆಯಿತು. ಇನ್ನು ಬದುಕಿರುವವರೆಗೆ ಪ್ರಾಣ ಹೋದರೂ ಸರಿಯೆ. ಪುರಾಣವನ್ನು ಮಾತ್ರ ಹೇಳುವುದಿಲ್ಲವೆಂದು ಶಪಥ ಮಾಡಿಕೊಂಡೆ. ಮಲಗುವ ವೇಳೆಗೆ ರಾತ್ರಿ ೧ ಗಂಟೆ ಆಯಿತು.

ಬೆಳಗಾಯಿತು. ನನ್ನ ಸ್ನೇಹಿತ, ಗೃಹಸ್ಥ, ನಾಳೆ ಜೊತೆಯಲ್ಲಿ ಬರುತ್ತೇನೆ ಎಂದು ಹೇಳಿದ್ದವನು ಮುಂಜಾನೆ ಎದ್ದು ಕಬ್ಬಿನ ಗದ್ದೆಗೆ ಹೋಗಿ “ಸಾಯಂಕಾಲ ಬರುತ್ತೇನೆ. ಈಗ ಕೆಲಸವಿದೆ” ಎಂಬುದಾಗಿ ಹೇಳಿ ಕಳುಹಿಸಿಬಿಟ್ಟ. ನಾವು ಮೂರು ಮೈಲು ನಡೆದುಕೊಂಡು ಹೋಗಿ ನದಿಯನ್ನು ದಾಟಬೇಕಾಗಿದ್ದಿತೆಂದು ಮೊದಲೇ ಹೇಳಿದೆನಲ್ಲ. ಹೊರಟೆವು. ಆ ವೇಳೆಗೆ ಸರಿಯಾಗಿ ನಮ್ಮ ಭಾವನವರ ಆಳು ಬಂದ. ನಮ್ಮ ಸ್ನೇಹಿತನ ಅತ್ತೆಯು ಅವನನ್ನು ಕುರಿತು "ಎಲೊ ನಿಮ್ಮ ಒಡೆಯನೋರ ಭಾಮೈದ ಬಂದಿದ್ದಾರೆ. ಗಾಡಿ ಕಟ್ಟಿಕೊಂಡು ಹೊಳೆಯವರಿಗೆ ಬಿಟ್ಟು ಬಾ" ಎಂದರು. ನಮ್ಮ ಭಾವನವರು ಎದುರಿಗೆ ಇದ್ದಿದ್ದರೆ, ಆ ರೀತಿ ಹೇಳಲು ಅವರಾರಿಗೂ ಧೈರ್‍ಯವುಂಟಾಗುತ್ತಿರಲಿಲ್ಲ. ಯಾತಕ್ಕೆಂದರೆ ನಮ್ಮ ಭಾವನವರಿಗೆ ಎತ್ತು ಎಂದರೆ ಪ್ರಾಣ, ಪ್ರಾಣವನ್ನಾದರೂ ಕೊಡುತ್ತಾರೆಯೇ ಹೊರತು, ಕೆಲಸ ತಪ್ಪಿಸಿ ಅವರು ಎತ್ತನ್ನು ಕಳುಹಿಸುವವರಲ್ಲ. ಆದುದರಿಂದ ನಾನು "ಎತ್ತೂ ಬೇಡ, ಗಾಡಿಯೂ ಬೇಡ, ನಡೆದುಕೊಂಡೇ ಹೋಗುತ್ತೇನೆ” ಎಂದೆ. ಇನ್ನಿಬ್ಬರು ನೆಂಟರು ಇದ್ದರಲ್ಲಾ, ಅವರಲ್ಲಿ ಒಬ್ಬರು ಮುದುಕರು. ಅವರು “ಬರಲಯ್ಯ ಗಾಡಿ, ನಿಮ್ಮಪ್ಪನ ಗಂಟೇನ್ಲೋಗೋದು, ಕೂತ್ಕಂಡೋಗೋಣ" ಎಂದರು. ದಾಕ್ಷಿಣ್ಯ; ಸುಮ್ಮನಾದೆ.

ಗಾಡಿಯನ್ನು ಕೂಡಿಕೊಂಡು ಅವನು ಬರುವ ವೇಳೆಗೆ ಸುಮಾರು ೮ ಘಂಟೆಯಾಯಿತು. ದೊಡ್ಡ ಎತ್ತುಗಳನ್ನು ಉಳುವುದಕ್ಕೆ ಹೂಡಿದ್ದುದರಿಂದ ಗಾಡಿಗೆ ಒಂದು ಜೊತೆ ಹೋರಿಗಳನ್ನು ಕಟ್ಟಿದ್ದ. ಅವುಗಳಿಗೆ ಗಾಡಿ ಎಳೆದು ಅನುಭವವಿರಲಿಲ್ಲ. ನಾವು ಹೋಗುತ್ತಿದ್ದ ರಸ್ತೆಯೊ-ಅದು ರಸ್ತೆಯೇ ಅಲ್ಲ-ಬೋರೆಯ ಮೇಲೂ ಹೊಲದ ಮೇಲೂ ಸವೆದುಹೋಗಿದ್ದ ಒಂದು ಗಾಡಿಯ ಚಾಡು, ಗಾಡಿಯಲ್ಲಿದ್ದವರು ನಾವು ೩ ಜನ, ಗಾಡಿ ಹೊಡೆಯುತ್ತಿದ್ದವನೊಬ್ಬ; ಒಟ್ಟು ನಾಲ್ಕು ಜನ. ಆದರೆ ಗಾಡಿಗೆ ಏನಾದರೂ ಸಮತೂಕ ಬರಲಿಲ್ಲ. ನಾನು ಸ್ವಲ್ಪ ದಪ್ಪ ಆಸಾಮಿ. ನಮ್ಮ ನೆಂಟರೊಬ್ಬರು ಮುದುಕರು, ಮತ್ತೊಬ್ಬ ಹುಡುಗ; ಗಾಡಿಯವನೊಬ್ಬ ಹುಡುಗ, ಎತ್ತು ಚಂಗನೆ ಹಾರಿತು. ಹಾಗೂ ಹೀಗೂ ಸ್ವಲ್ಪ ದೂರ ಹೋದಮೇಲೆ ಸುಮ್ಮನೆ ನಿಂತು ಬಿಟ್ಟಿತು. ಎಷ್ಟು ಹೊಡೆದರೂ ಪ್ರಯೋಜನವಾಗಲಿಲ್ಲ. ಕಾಲು ಘಂಟೆಯಮೇಲೆ ತಾನೇ ಎದ್ದಿತು. ಅದು ನಮ್ಮ ಭಾವನವರ ಪ್ರೀತಿಯ ಎತ್ತು, ಅದನ್ನು ಅವರು ಹೊಸದಾಗಿ ತರುವಾಗ ನಡೆದ ವಿಷಯ ಜ್ಞಾಪಕ ಬಂದು ನನಗೆ ನಗು ಬಂದಿತು. ಎತ್ತನ್ನು ಹೊಡೆದುಕೊಂಡು ಬರುತ್ತಿದ್ದಾಗ, ದಾರಿಯಲ್ಲಿ ಬರುತ್ತಿದ್ದ ಒಬ್ಬ ಮುದುಕರು ಅವರನ್ನು ಕುರಿತು "ಏನಯ್ಯ, ಹೋರಿಗರುಗಳಿಗೆ ಏನು ಕೊಟ್ಟೆ. ಚೆನ್ನಾಗಿದೆ" ಎಂದರು. ನಮ್ಮ ಭಾವನವರು "೨೬೦ ರೂಪಾಯಿ ಕೊಟ್ಟಿ, ಚೆನ್ನಾಗಿಲ್ಲದೆ ಏನು? ನೋಡಿ ಹೇಗೆ ಮೆಲುಕು ಹಾಕುತ್ತವೆ?” ಎಂದರು. ಮುದುಕರು ನಗುತ್ತಾ “ಮೆಲಕುಹಾಕೋದೊಂದೇ ಅಲ್ಲಯ್ಯ, ಸಗಣೀನೂ ಹಾಕುತ್ತವೆ" ಎಂದರು. ನಮ್ಮ ಭಾವನವರ ಮುಖ ಪೆಚ್ಚಾಯಿತು. ಆ ಮೆಲುಕು ಮತ್ತು ಸಗಣಿ ಹಾಕುತ್ತಿದ್ದ ಜೋಡಿ ಇವು.

ದಾರಿಯಲ್ಲಿ ಬೇಕಾದಷ್ಟು ಹಳ್ಳತಿಟ್ಟುಗಳಿದ್ದುವು. ನಮ್ಮ ಮುದಿ ನೆಂಟರು ತಮ್ಮ ಬಾಲ್ಯದಲ್ಲಿ ಯಾವಾಗಲೋ ಒಂದು ಸಲ ಗಾಡಿಯಿಂದ ಬಿದ್ದು, ಬೆನ್ನು ಮೂಳೆಗೆ ಅಪಾಯವನ್ನು ತಂದುಕೊಂಡಿದ್ದರಂತೆ. ಈಚೆಗೆ ಅವರು ಗಾಡಿಯಲ್ಲಿ ಕೂರುವುದೆಂದರೆ ಒಂದು ಅಶ್ವಮೇಧವನ್ನು ಮಾಡಿದಂತೆ. ಗಾಡಿ ಸ್ವಲ್ಪ ಓರೆಯಾದರೆ ತೀರಿತು. ಲೊ ಲೋ ಲೋ ಎಂದು ಹೇಳುತ್ತಾ ಕೆಳಕ್ಕೆ ಧುಮುಕಿಯೇ ಬಿಡುತ್ತಿದ್ದರು. ನಾವು ೨ ಮೈಲು ಹೋಗುವುದರೊಳಗಾಗಿ ೫ ಸಲ ಕೆಳಕ್ಕೆ ಧುಮುಕಿದರು. ಅವರ ಅವಸ್ಥೆಯನ್ನು ನೋಡಿ ನನಗೆ ತಡೆಯಲಾರದಷ್ಟು ನಗು ಬಂದಿತು.

ಇನ್ನು ೧/೨ ಮೈಲು ಹೋಗಿದ್ದರೆ, ಹೊಳೆ ಸಿಕ್ಕುವುದರಲ್ಲಿದ್ದಿತು. ಎದುರಿಗೆ ರಸ್ತೆಯಲ್ಲಿ ಯಾರೋ ಒಬ್ಬರು ಕೆಂಪು ಶಾಲನ್ನು ಹೊದೆದುಕೊಂಡು ಕೊಡೆಯನ್ನು ಬಿಚ್ಚಿ ಹಿಡಿದುಕೊಂಡು ಬರುತ್ತಿದ್ದರು. ಅವರನ್ನು ಎತ್ತು ಗಳು ನಮಗಿಂತ ಮುಂಚಿತವಾಗಿಯೇ ನೋಡಿಬಿಟ್ಟವು. ಆ ಎತ್ತುಗಳಿಗೆ ಕೆಂಪು ಶಾಲನ್ನು ಕಂಡರೆ ಮರಣ ಭಯ. ಕೇಳಬೇಕೆ? ನಾಗಾಲೋಟದಲ್ಲಿ ಓಡಲು ಪ್ರಾರಂಭಿಸಿಬಿಟ್ಟವು. ಪಾಪ; ನಮ್ಮ ಮುದುಕರಿಗೆ ಗಾಡಿಯಿಂದ ಧುಮುಕುವುದಕ್ಕೆ ಕೂಡ ಅವಕಾಶವಾಗಲಿಲ್ಲ. ಆಳು ಹಗ್ಗವನ್ನು ಎಷ್ಟು ಜಗ್ಗಿ ಹಿಡಿದರೂ ಎತ್ತುಗಳು ಸ್ವಾಧೀನಕ್ಕೆ ಬರಲಿಲ್ಲ. ನಮ್ಮ ಮುದುಕರು ನಾರಾಯಣ, ಕೃಷ್ಣ, ರಾಮಚಂದ್ರ ಎಂದು ಪದೇ ಪದೇ ಹೇಳತೊಡಗಿದರು. ಕೃಷ್ಣನಾಗಲಿ, ರಾಮಚಂದ್ರನಾಗಲಿ ಎತ್ತಿನ ವೇಗವನ್ನು ತಡೆಯಲಿಲ್ಲ. ಗಾಡಿಯು ಇನ್ನೂ ೪ ಉರುಳು ಉರುಳುವುದರೊಳಗಾಗಿ, ನಾವೆಲ್ಲ ನೆಲದ ಮೇಲಿದ್ದೆವು. ಒಂದು ಎತ್ತು, ಹಗ್ಗವನ್ನು ಕಿತ್ತುಕೊಂಡು ಓಡಿ ಹೋಯಿತು; ಮತ್ತೊಂದು ಗಾಡಿಯ ಬಳಿ ನಿಂತಿತು. ಗಾಡಿಯು ಮಗುಚಿಕೊಂಡಿತು. ದೇವರ ದಯದಿಂದ ಯಾರಿಗೂ ಏನೂ ಪೆಟ್ಟಾಗಲಿಲ್ಲ. ನಾವೆಲ್ಲ ಸೇರಿ ದಾರಿಯಲ್ಲಿ ಹೋಗುತ್ತಿದ್ದ ೨-೩ ಜನರ ಸಹಾಯದಿಂದ ಗಾಡಿಯನ್ನು ಮೇಲಕ್ಕೆ ಎತ್ತಿ, ಓಡಿಹೋಗಿದ್ದ ಎತ್ತನ್ನು ಹಿಡಿದು ತಂದು ಕಟ್ಟಿ ಗಾಡಿಯನ್ನು ಹಿಂದಕ್ಕೆ ಹೊಡೆದು ಕಳುಹಿಸಿದೆವು.

ಮತ್ತೊಂದು ವಿಷಯವನ್ನು ಹೇಳುವದನ್ನ ಮರತೆ. ನಿಮಗೆ ಆಶ್ಚರ್ಯವಾಗಬಹುದು. ನನ್ನ ಜೊತೆಯಲ್ಲಿದ್ದರಲ್ಲಾ ಮುದುಕರು, ಅವರು ಇದುವರೆಗೆ ಹರಿಗೋಲನ್ನೇ ನೋಡಿರಲಿಲ್ಲ. ಹಳ್ಳಿಯಲ್ಲಿದ್ದುಕೊಂಡು ಹರಿಗೋಲನ್ನೇ ನೋಡಿಲ್ಲವೆಂದರೆ ನಿಮಗೆ ಆಶ್ಚರ್‍ಯವಾಗದೆ ಮತ್ತೇನು ?

"ಇದೇನು ಸ್ವಾಮಿ, ಹರಿಗೋಲನ್ನೇ ನೋಡಿಲ್ಲವೆ. ವಯಸ್ಸು ಆಗಲೆ ೬೦ ಆಗಿದೆ. ನೀವೇನು ನ್ಯೂಯಾರ್ಕ್ ಅಥವ ಲಂಡನ್ ನಗರದಲ್ಲಿ ವಾಸಮಾಡಿದವರೊ" ಎಂದೆ. ಮುದುಕರು "ನ್ಯೂಯಾರ್ಕು ಕಾಣೆ, ಲಂಡನ್ನೂ ಕಾಣೆ. ನಮ್ಮ ಊರು ಬಿಟ್ಟು ನಾನು ಇದುವರೆಗೆ ಹೊರಕ್ಕೆ ಹೊರಟವನಲ್ಲ" ಎಂದರು. ಸ್ವಲ್ಪ ಹೊತ್ತಿನ ಮೇಲೆ "ಏನಯ್ಯ ಹರಿಗೋಲು ಹೇಗಿದೆ? ಅದರಲ್ಲಿ ಕುಳಿತರೆ ಸರಿಯಾಗಿ ಆಚೆ ದಡಕ್ಕೆ ತಲುಪುತ್ತೇವೆಯೆ? ನೀರಲ್ಲಿ ದುರ್ಮರಣವುಂಟಾಗಿ ಗತಿಯಿಲ್ಲದೆ ಅಂತರ ಪಿಶಾಚಿಯಾಗಿ ತಿರುಗಬೇಕಾದೀತು” ಎಂದರು. ನಾನು "ಏನೂ ಭಯವಿಲ್ಲ ಬನ್ನಿ" ಎಂದೆ. ಹೊಳೆಯ ದಡಕ್ಕೆ ಹೋದೆವು. ತಂಗಾಳಿ ಬಹಳ ವೇಗದಿಂದ ಹೊಳೆಯ ಮೇಲೆ ಬೀಸಿ, ಮೈಯನ್ನು ಕಡಿಯುತ್ತಲಿದ್ದಿತು. ಕಲ್ಲಿನ ಒಂದು ಚಿಕ್ಕ ದೇವಸ್ಥಾನವು ದಡದಲ್ಲಿದ್ದು, ಅದರಲ್ಲಿ ೨-೩ ಜನರು ಮಾತ್ರ ಕುಳಿತುಕೊಳ್ಳಲು ಅವಕಾಶವಿದ್ದಿತು. ನಾವು ಹೋಗುವ ವೇಳೆಗೆ ಅದರಲ್ಲಿ ಯಾರೋ ಕುಳಿತಿದ್ದರು. ಬಲಗಡೆ ನದಿಗೆ ಅಣೆಕಟ್ಟನ್ನು ಹಾಕಿದೆ. ನೀರು ಆಳವಾಗಿ ಸಮುದ್ರದಂತೆ ವಿಶಾಲವಾಗಿ ತೋರುತ್ತಿದೆ. ದೇವಸ್ಥಾನದ ಮುಂದುಗಡೆ ನದಿಯಿಂದ ತೆಗೆದ ಕಾಲುವೆ ಹರಿಯುತ್ತಿದೆ. ಮುಂದುಗಡೆ ನದಿ, ಬಲಗಡೆ ಅಣೆಕಟ್ಟು; ಎಡಗಡೆ ನದಿ, ಹಿಂದೆ ಕಾಲುವೆ. ಸನ್ನಿವೇಶವೇನೋ ಬಹಳ ಚೆನ್ನಾಗಿದ್ದಿತು. ಆದರೆ ನಮ್ಮ ಮನಸ್ಸು ಆ ಸನ್ನಿವೇಶದ ಸುಖವನ್ನು ಅನುಭವಿಸುವ ಸ್ಥಿತಿಯಲ್ಲಿರಲಿಲ್ಲ. ಪ್ರವಾಹದಿಂದ ವಿಸ್ತಾರವಾದ ನದಿಯು ೩ ಫರ್ಲಾಂಗಿನಷ್ಟು ಅಗಲವಾಗಿದ್ದಿತು. ಹರಿಗೋಲು ಎದುರು ದಡದಲ್ಲಿ ಚಿಕ್ಕ ಹಕ್ಕಿಯಂತೆ ಕಾಣುತ್ತಿದ್ದಿತು. ಗಾಳಿಯು ಬೋರೆಂದು ಬೀಸುತ್ತಿದ್ದುದರಿಂದ ನದಿಯಲ್ಲಿ ದೊಡ್ಡ ದೊಡ್ಡ ತೆರೆಗಳೆದ್ದು, ದಡವನ್ನು ಬಡಿಯುತ್ತಿದ್ದುವು. ಆ ಗಾಳಿಯು ನಿಲ್ಲುವವರೆಗೆ, ಹರಿಗೋಲು ಈಚೆ ದಡಕ್ಕೆ ಬರುವ ಸಂಭವವಿರಲಿಲ್ಲ. ಬಿರುಗಾಳಿಯು ಯಾವಾಗ ನಿಲ್ಲುತ್ತದೆಯೋ ಬಲ್ಲವರಾರು? ಒಂದು ದಿವಸವೆಲ್ಲಾ ಅದು ವೇಗವಾಗಿ ಬೀಸಿದರೂ, ಅದನ್ನು ಬೇರೆ ಯಾರೂ ಶಿಕ್ಷಿಸುವಂತೆ ಇಲ್ಲ. ಶಿಕ್ಷೆಯು ಯಾವಾಗಲೋ ಗಾಳಿಯ ಮಗನಾದ ಹನುಮಂತನಿಗೆ ಆಗಿ, ಅವನ “ಸೋಟೆಯ ಉರಗಾಯಿತೇ” ಹೊರತು, ಗಾಳಿಗೆ ಏನೂ ಆಗಲಿಲ್ಲ. ಗಂಟೆ ೯-೧೦-೧೧-೧೨ ಆಯಿತು. ಹರಿಗೋಲು ಬರಲೇ ಇಲ್ಲ. ಹೊರಡುವಾಗ ನಮ್ಮ ಸ್ನೇಹಿತನ ಹೆಂಡತಿ “ಸ್ವಲ್ಪ ಕಾಫಿ ತಿಂಡಿ ಮಾಡಿಕೊಂಡು ಹೋಗಿ" ಎಂದಿದ್ದರು. ಪುಣ್ಯಾತ್ಗಿತ್ತಿ ಅಷ್ಟು ಹೇಳಿದ್ದೆ ಸಾಕು ಎಂದು ನಾವು ತಿಂದಿದ್ದರೆ ಚೆನ್ನಾಗಿತ್ತು. "ಅರ್ಧ ಗಂಟೆಯೊಳಗೆ ಹೊಳೆ ದಾಟಿಬಿಡುತ್ತೇವೆ" ಎಂದು ಹೆಮ್ಮೆಯಿಂದ ಹೊರಟುಬಿಟ್ಟೆವು. ಹೊಟ್ಟೆ ಹಸಿವು ಪ್ರಾರಂಭವಾಯಿತು. ನೋಡಿಕೊಳ್ಳಿ ಯಾವುದು ಬೇಕಾದರೂ ತಡೆಯ ಬಹುದು. ಹೊಟ್ಟೆ ಹಸಿವು ಮಾತ್ರ ತಡೆಯುವುದಕ್ಕೆ ಆಗುವುದಿಲ್ಲ. ಅದಕ್ಕೇ ವಿಶ್ವಾಮಿತ್ರನಂತಹ ಋಷಿಯೂ ಕೂಡ ನಾಯಿಯ ಮೂಳೆ ಕಡಿದ. ನನ್ನ ಚೀಲದಲ್ಲಿ ಎರಡು ಮಾವಿನ ಹಣ್ಣುಗಳನ್ನು ಇಟ್ಟಿದ್ದೆ. ಅವನ್ನು ತೆಗೆದೆ. ಮುದುಕರಿಗೆ ಒಂದು ಕೊಡೋಣ ಅಂದರೆ ಬೇಡವೆಂದುಬಿಟ್ಟರು. ನಾನೂ ನನ್ನ ಜೊತೆಯಲ್ಲಿದ್ದ ಮತ್ತೊಬ್ಬ ಹುಡುಗನೂ ಒಂದೊಂದು ಹಣ್ಣನ್ನು ತಿಂದೆವು. ಆದರೆ ರಾವಣನ ಹೊಟ್ಟೆಗೆ ಅರಕಾಸಿನ ಮಜ್ಜಿಗೆ ಎಂದಂತಾಯಿತು ಅದು. ಆ ಒಂದು ಹಣ್ಣನ್ನು ತಿಂದಮೇಲೆ ಹಸಿವು ಇನ್ನೂ ಹೆಚ್ಚಾಗಲು ಪ್ರಾರಂಭಿಸಿತು.

ಸುಮಾರು ಎರಡು ಗಂಟೆಯ ವೇಳೆಗೆ ಎದುರು ದಡದಲ್ಲಿ ಹರಿಗೋಲನ್ನು ಮೇಲಕ್ಕೆ ಎಳೆಯಲು ಪ್ರಾರಂಭಿಸಿದರು. ಪಟ್ಟಣಗಳಲ್ಲಿದ್ದುಕೊಂಡು ಸೇತುವೆಯ ಮೇಲೆ ನಡೆಯುವವರಿಗೆ ಹರಿಗೋಲನ್ನು ಮೇಲಕ್ಕೆ ಎಳೆದರೆಂದರೆ, ಅರ್ಥವೇ ಆಗುವುದಿಲ್ಲ. ಮೇಲಕ್ಕೆ ಎಂದರೆ ಎಲ್ಲಿಗೆ ಆಕಾಶಕ್ಕೋ?” ಅಂತ ಕೇಳಿದ ನಮ್ಮ ಸ್ನೇಹಿತ ಒಬ್ಬ. ಪ್ರವಾಹದ ಕಾಲದಲ್ಲಿ ದೋಣಿಯಾಗಲಿ ಹರಿಗೋಲಾಗಲಿ ನಾವು ಒಂದು ದಡದಲ್ಲಿ ಎಲ್ಲಿ ಬಿಡುತ್ತೇವೆಯೋ ಅದೇ ನೇರದಲ್ಲಿ ಎದುರು ದಡವನ್ನು ಸೇರುವುದಿಲ್ಲ. ಅಂಬಿಗರು ಈಚೆ ದಡದಲ್ಲಿ ಬಿಟ್ಟ ನೇರದಿಂದ, ಸುಮಾರು ಒಂದು ಫರ್ಲಾಂಗು, ಎರಡು ಫರ್ಲಾಂಗು ಕೆಳಗಡೆ ಎದುರು ದಡವನ್ನು ಸೇರುತ್ತದೆ. ಅದಕ್ಕಾಗಿ ಅಂಬಿಗರು ಹರಿಗೋಲನ್ನು ಎರಡು ಫರ್ಲಾಂಗ್ ಮೇಲಕ್ಕೆ ಎಳೆದು ಬಿಡುತ್ತಾರೆ. ಆದರೂ ಕೂಡ ಅದು ಅವರು ಹೊರಟ ನೇರದಿಂದ ಎರಡು ಫರ್ಲಾಂಗ್ ಕೆಳಕ್ಕೆ ಸೇರುತ್ತದೆ.

ಹರಿಗೋಲಿನ ಕಡೆ ನೋಡಿ ನೋಡಿ ನಮಗೆ ತಲೆನೋವು ಹತ್ತಿಬಿಟ್ಟಿತು. ಕಣ್ಣು ಉರಿಯುವುದಕ್ಕೆ ಪ್ರಾರಂಭಿಸಿತು. ಸ್ವಲ್ಪ ಹೊತ್ತಿನೊಳಗೆ ದೂರದಲ್ಲಿ ನದಿಯಲ್ಲಿ ಯಾವುದೋ ಕಪ್ಪಾಗಿ ಚಲಿಸುವಂತೆ ಕಂಡಿತು. ಹರಿಗೋಲು ಹೊರಟಿತು. ಈಚೆಯ ದಡವನ್ನು ಸೇರಿತು. ಹರಿಗೋಲನ್ನೇ ನೋಡಿಲ್ಲವೆಂದು ಹೇಳುತ್ತಿದ್ದ ನಮ್ಮ ಮುದುಕರಿಗೆ ಅದನ್ನು ತೋರಿಸಿದೆ.

ಗಾಳಿಯು ಇನ್ನೂ ಬೀಸುತ್ತಲೇ ಇದ್ದಿತು. ಅಲೆಗಳು ಭಯಂಕರವಾಗಿ ಏಳುತ್ತಿದ್ದುವು. ಹರಿಗೋಲನ್ನು ಆಗಲೇ ಎದುರು ದಡಕ್ಕೆ ಬಿಡಲು ಅಂಬಿಗರು ಇಷ್ಟಪಡಲಿಲ್ಲ. ನಮ್ಮ ಮನಸ್ಸಿನಲ್ಲಿ, ಹರಿಗೋಲಿನಲ್ಲಿ ಕುಳಿತು ಬಿಟ್ಟರೆ ಸಾಕು. ಆಚೆ ದಡಕ್ಕೆ ಹೋಗುತ್ತೆ ಎಂದು. ಅಂಬಿಗರು ೮ ಜನ ರಿದ್ದರು; ಕೊನೆಗೆ ಅವರಿಗೆ ಸಿಟ್ಟು ಹತ್ತಿತು. ನಮ್ಮ ಹಿಂಸೆಯನ್ನು ತಾಳ ಲಾರದೆ ಒಬ್ಬ ಅಂಬಿಗನು “ಬನ್ನಿ ಇವತ್ತಿಗೆ ನಿಮಗೆ ನೂರು ವರ್ಷ ತುಂಬಿತು" ಎಂದನು. ನಾವು ನೂರಾದರೂ ತುಂಬಲಿ ಇನ್ನೂರಾದರೂ ತುಂಬಲಿ; ಅವನು ಅಷ್ಟು ಹೇಳಿದುದೇ ಸಾಕೆಂದು ಹರಿಗೋಲಿನಲ್ಲಿ ಕುಳಿತುಬಿಟ್ಟೆವು.

ಹರಿಗೋಲು ಹೊರಟಿತು. ಅಂಬಿಗರು ಬಹಳ ವೇಗವಾಗಿ ಹುಟ್ಟಿಹಾಕುತ್ತಿದ್ದರು. ಒಂದು ನಿಮಿಷದೊಳಗೆ ಅವರ ದೇಹವೆಲ್ಲಾ ಬೆವರಿತು. ಅವರ ಚಟುವಟಿಕೆಯನ್ನು ನೋಡಿ ನನ್ನ ಬೇಸರಿಕೆಯು ಮಾಯವಾಯಿತು, ಅವರಲ್ಲಿ ಒಂದು ವಿಧವಾದ ಉತ್ಸಾಹವೂ ಕಾತರತೆಯೂ ಇದ್ದಿತು. ಕೆಲವೆಡೆ ಹರಿಗೋಲು ಪ್ರವಾಹದ ಮತ್ತು ಹುಟ್ಟೆಯ ಏಟುಗಳ ಸಮಾನ ವೇಗಕ್ಕೆ ಸಿಕ್ಕಿ, ಮುಂದಕ್ಕೆ ಹೋಗದೆ ನಿಂತುಬಿಡುತ್ತಿದ್ದಿತು. ಮತ್ತೆ ಕೆಲವು ಕಡೆ ಸುಳಿಗೆ ಸಿಲುಕಿ ಗಿರ್‍ರೆಂದು ತಿರುಗುತ್ತಿದ್ದಿತು. ಒಂದೊಂದು ಕಡೆ ಅಲೆಯೊಂದಿಗೆ ಮೇಲಕ್ಕೆದ್ದು ಕೆಳಕ್ಕೆ ಬೀಳುತ್ತಿದ್ದಿತು. ಅರ್ಧ ನದಿಯನ್ನು ದಾಟಿದ ಮೇಲೆ, ಅಂಬಿಗರ ಗಾಬರಿಯು ಹೆಚ್ಚಾಯಿತು. ಅವರು ಎಷ್ಟು ಜೋರಾಗಿ ಹುಟ್ಟಿ ಹೊಡೆದರೂ ಹರಿಗೋಲು ಕೆಳಮುಂದಾಗಿ ಹೋಗುತ್ತಿದ್ದಿತೇ ಹೊರತು, ಎದುರು ದಡವನ್ನು ಸೇರುವ ಸೂಚನೆ ತೋರಲೇ ಇಲ್ಲ. ಅಂಬಿಗರು ಪಟ್ಟ ಶ್ರಮವು ವ್ಯರ್ಥವಾಯಿತು. ಅಷ್ಟರಲ್ಲಿ ಒಬ್ಬ ಅಂಬಿಗನು "ಆ ಬಂಡೆಯ ಕೆಳಕ್ಕೆ ಹೋದರೆ ಹರಿಗೋಲು ನಮ್ಮ ಸ್ವಾಧೀನಕ್ಕೆ ಬರುವು ದಿಲ್ಲ. ಆ ತಿರುವಿನಲ್ಲಿ ಬಂಡೆಯ ಮೇಲಿನಿಂದ ಕೆಳಕ್ಕೆ ಉರುಳಿಬಿಡುತ್ತದೆ" ಎಂದನು. ಈ ಮಾತನ್ನು ಕೇಳಿ ಹರಿಗೋಲಿನಲ್ಲಿದ್ದವರೆಲ್ಲಾ ನಡಗಲು ಪ್ರಾರಂಭಿಸಿದರು. ಮುದುಕರಂತೂ “ನನಗೊತ್ತಯ್ಯ ಹರಿಗೋಲು ಅಂದ್ರೆ ಹೀಗೇ ಆಗುತ್ತೆ ಅಂತ. ಈ ನೀರಲ್ಲಿ ನನಗೆ ದುರ್ಮರಣವಾಗುವಂತೆ ವಿಧಿಯು ಬರೆದಿದ್ದರೆ ಯಾರೇನು ಮಾಡಲಾದೀತು" ಎಂದರು. ನನಗೂ ಕೂಡ ಅಂಬಿಗರು ಹರಿಗೋಲೇರುವಾಗ ನಿಮಗೆ ೧೦೦ ವರ್ಷ ತುಂಬಿತೆಂದು ಹೇಳಿದ ಮಾತು ಜ್ಞಾಪಕಕ್ಕೆ ಬಂದಿತು.

ಅಂಬಿಗರು ಮತ್ತಷ್ಟು ಜೋರಿನಿಂದ ಹುಟ್ಟೆ ಹೊಡೆಯಲು ಪ್ರಾರಂಭಿಸಿದರು. ಒಬ್ಬನು ಸಿಟ್ಟಿನಿಂದ ನಮ್ಮ ಕಡೆ ತಿರುಗಿ “ಪಾಪಿಗಳಿರಾ ನೋಡಿ, ಗಾಳಿಯಿಲ್ಲ ಗಾಳಿಯಿಲ್ಲ ಬಿಡು ಎಂದು ಬಡ್ಕೊಂಡ್ರೆಲ್ಲ. ಈಗ್ನಮ್ಮ ಕಷ್ಟ ನೋಡಿ” ಎಂದು ಬೈದನು. ಹರಿಗೋಲಿನಲ್ಲಿರುವಾಗ ಅಂಬಿಗನ ಹತ್ತಿರ, ಕ್ಷೌರ ಮಾಡುತ್ತಿರುವಾಗ ಹಜಾಮನ ಹತ್ತಿರ, ಕೇಸು ನಡೆಯುತ್ತಿರುವಾಗ ಲಾಯರ ಹತ್ತಿರ ವಿರೋಧವನ್ನು ಕಟ್ಟಿಕೊಳ್ಳುವುದು ತರವಲ್ಲ. ಆದುದುರಿಂದ ನಾವಾರೂ ಮಾತನಾಡಲಿಲ್ಲ.

ಭಯಂಕರವಾದ ಬಿರುಗಾಳಿ ಎದ್ದಿತು. ಕರಿಯ ಮೋಡವು ಆಕಾಶವನ್ನೂ ಭೂಮಿಯನ್ನೂ ಒಂದುಮಾಡಿ, ಮಧ್ಯಾಹ್ನವೇ ರಾತ್ರೆಯಂತೆ ತೋರಿತು. ಮೋಡಗಳು ಕ್ರೂರವಾದ ಧ್ವನಿಯಿಂದ ಗುಡುಗುತ್ತಿದ್ದುವು. ಈಶಾನ್ಯ ದಿಕ್ಕಿನಲ್ಲಿ ಮಿಂಚು ಸಹಸ್ರನಾಲಗೆಯ ಹಾವುಗಳಂತೆ ಮೋಡವನ್ನು ಕಚ್ಚುತ್ತಿದ್ದಿತು. ಸಿಡಿಲು ಪ್ರಳಯ ಕಾಲದ ಸಿಡಿಲಿಗೆಣೆಯಾಗಿದ್ದಿತು. ಮೃತ್ಯುವು ಅಸಂಖ್ಯಾತವಾದ ಬಾಯಿಗಳಿಂದ ನಮ್ಮನ್ನು ನುಂಗುವುದಕ್ಕೆ ಬರುತ್ತಿರುವಂತೆ ತೋರಿತು. ನಮ್ಮ ಹರಿಗೋಲು ಅಲೆಗಳಿಗೂ ಸುಳಿಗಳಿಗೂ ಸಿಕ್ಕಿ ಬುಗರಿಯಂತೆ ಗಿರಗಿರನೆ ತಿರುಗುತ್ತಿದ್ದಿತು. ಸುತ್ತಲೂ ಆಕಾಶವು ಭರಣಿಯ ಮುಚ್ಚಲದಂತೆ ನಮ್ಮ ಮೇಲೆ ಕವಿದುಕೊಂಡು, ನಾವು ನದಿಯ ಮೇಲೆ ಸೆರೆಯಾಳುಗಳಾದಂತೆ ತೋರುತ್ತಿದ್ದಿತು. ಮಂತ್ರದಿಂದ ಮುಗ್ಧರಾದವರಂತೆ ಅಂಬಿಗರು ಹುಟ್ಟಿಯನ್ನು ಹರಿಗೋಲಿನಲ್ಲಿಟ್ಟು ನಿರಾಶರಾಗಿ ನಿಂತು ಬಿಟ್ಟರು. ಹರಿಗೋಲು ವಾಯುವೇಗದಿಂದ ಬಂಡೆಯ ಕಡೆಗೆ ಹೊರಟಿತು. ನಾವು ಅಪಾಯದಿಂದ ದೂರವಾಗಿದ್ದಿದ್ದರೆ ಪ್ರಕೃತಿಯ ಅದೊಂದು ಬೆಡಗಿನ ಕ್ರೂರ ಮುದ್ರೆಯ ಆ ಆನಂದವನ್ನು ನಾವು ಅನುಭವಿಸಬಹುದಾಗಿದ್ದಿತು. ಕಣ್ಣಿಗೆ ಕಾಣುವವರೆಗೆ ಕೆಂಪಾದ ನೀರು; ನೋಡುವುದಕ್ಕೆ ಅವ್ಯವಸ್ಥಿತವಾಗಿ ತೋರುತ್ತಿದ್ದರೂ ಕ್ರಮವರಿತು ನೆಗೆಯುತ್ತಿದ್ದ ಅಲೆಗಳ ಒಟ್ಟು ಗರ್ಜನೆಯಿಂದ ಹೊರಡುತ್ತಿದ್ದ ಒಂದು ಬಗೆಯ ಗಾನ, ರಾಶಿರಾಶಿಯಾಗಿ ತೇಲಿಹೋಗುತ್ತಿದ್ದ ಬಿಳಿಯ ನೊರೆಯ ಗುಂಪುಗಳು, ಕಣ್ಣಿಗೆ ತೋರುವವರೆಗೆ ಒಂದೇ ಸಮನಾಗಿ ಹರಿಯುತ್ತಾ ಸಮುದ್ರದ ಜ್ಞಾಪಕವನ್ನು ತರುತ್ತಿದ್ದ ನದಿಯ ನೀರಿನ ರಾಶಿ. ಇವುಗಳೆಲ್ಲ ಉಳಿದ ವೇಳೆಯಲ್ಲಾದರೆ ನಮಗೆ ಅತ್ಯಂತ ಆನಂದವನ್ನೇ ಕೊಡುತ್ತಿದ್ದುವು. ಆದರೆ ಆಗ ಅವುಗಳನ್ನು ಕುರಿತು ಯೋಚಿಸುವುದು, ಮರಣ ದಂಡನೆಗೆ ಗುರಿಮಾಡಲ್ಪಟ್ಟವನು ತನ್ನ ಆಯುಷ್ಯದ ವಿಷಯದಲ್ಲಿ ಜ್ಯೋತಿಷ್ಯವನ್ನು ಕೇಳಿ ದಂತೆಯೇ ಆಗುತ್ತಿದ್ದಿತು. ಮುಂದೆ ಅಪಾಯದ ಗಾಬರಿಯಿಂದ ನಾವು ಅರ್ಧ ಸತ್ತವರಾಗಿದ್ದೆವು. ನದಿಯ ನೀರು ಮಹಾಕಾಳಿಯು ಈಜುತ್ತಿದ್ದ ತಳವಿಲ್ಲದ ರಕ್ತದ ಸಮುದ್ರದಂತೆ ತೋರಿತು. ಅಲೆಗಳ ಕುಣಿತವು ಪ್ರಳಯ ಕಾಲದ ಈಶ್ವರನ ನಾಟ್ಯದಂತೆ ತೋರಿತು. ನಾವು ಕುಳಿತಿದ್ದ ಹರಿಗೋಲೇ ನಮ್ಮನ್ನು ಕೃತಾಂತನ ಊಳಿಗಕ್ಕೆ ಸಾಗಿಸುವ ವಾಹಕವಾಗಿತ್ತು. ಆದದ್ದಾಯಿತು. ದೇವರೇ ಗತಿ ಎಂದು ನಾವು ನಿರಾಶರಾಗಿ ಬಂದದ್ದನ್ನು ಅನುಭವಿಸಲು ಸಿದ್ದರಾದೆವು.

ಒಮ್ಮಿಂದೊಮ್ಮೆ ಅಂಬಿಗರು ಹೋ ಹೋ ಎಂದರು. ಅವರ ಮುಖದಲ್ಲಿ ಪೂರ್ಣವಾದ ನಿರಾಶೆಯ ಗಾಬರಿಯೂ ತೋರಿತು. ಎಲ್ಲರೂ ನದಿಯ ಮೇಲುಗಡೆಗೆ ನೋಡಲು ಪ್ರಾರಂಭಿಸಿದೆವು. ನಾವಲ್ಲಿ ಕಂಡುದು ನಮ್ಮ ದೇಹದ ರಕ್ತವನ್ನು ತಣ್ಣಗೆ ಮಾಡಿತು. ನಾಲಗೆಯು ಒಣಗಿಹೋಯಿತು. ಮುಖದ ಕಾಂತಿಯು ಹೀನವಾಯಿತು. ಯಮನು ಭಯಂಕರವಾದ ನೂರಾರು ಕೊಂಬೆಗಳ ಮರದ ರೂಪವನ್ನು ಧರಿಸಿ ನಮ್ಮ ಕಡೆಗೆ ಧಾವಿಸಿ ಬರುತ್ತಿದ್ದನು. ಆ ಮರವು ನದಿಯ ಒಂದು ದಡದಿಂದ ಮತ್ತೊಂದು ದಡದವರೆಗೆ ವ್ಯಾಪಿಸಿದ್ದಂತೆ ಕಂಡಿತು. ಅದಕ್ಕೇನಾದರೂ ಹರಿಗೋಲು ಸಿಕ್ಕಿಬಿಟ್ಟರೆ, ತಲೆಕೆಳಗಾಗಿ ನಾವೆಲ್ಲರೂ ನೀರಿನ ಪಾಲಾಗುವುದರಲ್ಲಿ ಸಂದೇಹವಿರಲಿಲ್ಲ. ಮರದಿಂದ ತಪ್ಪಿಸಿಕೊಂಡು ಹರಿಗೋಲನ್ನು ಬೇರೆ ಕಡೆಗೆ ತಿರುಗಿಸಬಹುದೆಂಬ ನಂಬಿಕೆಯು ಅಂಬಿಗರಲ್ಲಿ ಯಾರಿಗೂ ಇರಲಿಲ್ಲ. ಹರಿಗೋಲು ಅವರ ಸ್ವಾಧೀನ ತಪ್ಪಿಹೋಗಿದ್ದಿತು. ನಮ್ಮ ಪಾಪಕರ್ಮವೇ ಮೂರ್ತಿವೆತ್ತಂತೆ ಮರವು ಹರಿಗೋಲಿಗಿಂತಲೂ ಅಲ್ಲ ಮಿಂಚಿಗಿಂತಲೂ ವೇಗವಾಗಿ ಬರುತ್ತಿದ್ದಿತು. ನಾವೆಲ್ಲರೂ ಯಮನ ಲೋಕಕ್ಕೆ ಟಿಕೆಟ್ ಪಡೆದುಕೊಂಡು ಆಗಿದ್ದಿತು. ಟ್ರೇನು ಹತ್ತುವುದು ಮಾತ್ರಾ ಬಾಕಿ; ಟ್ರೇನೂ ಎದುರಿಗೇ ಬರುತ್ತಿದೆ ಎಂದುಕೊಂಡೆವು. ನಮ್ಮ ಮುದುಕರು, “ನೀರಿನಲ್ಲಿ ಸತ್ತವರಿಗೆ ಕರ್ಮಾಂತರವಿಲ್ಲ. ಮೋಕ್ಷವಿಲ್ಲ. ಅಂತರಪಿಶಾಚಿಯಾಗಿ ಅಲೆಯುತ್ತಿರಬೇಕು. ಮದುವೆಗೆ ಬಂದು ದುರ್ಮರಣವನ್ನು ಕಂಡಂತೆ ಆಯಿತು” ಎಂದು ನಿಟ್ಟುಸಿರುಬಿಟ್ಟರು.

ಅಂಬಿಗರಲ್ಲೊಬ್ಬನು “ಹುಟ್ಟಿ ಹಾಕಿ ನೋಡೋಣ, ಕಾವೇರಿ ತಾಯಿಯ ದಯ” ಎಂದನು. ವಿದ್ಯುತ್ ದೇಹದಲ್ಲಿ ಪ್ರವಹಿಸಿದಂತೆ ಅಂಬಿಗರೆಲ್ಲರೂ ಹುಟ್ಟೆಗಳನ್ನು ಕೈಗೆ ತೆಗೆದುಕೊಂಡರು. ಮರವು ಯಾವ ನೇರದಲ್ಲಿ ಬರುವುದೆಂಬುದನ್ನು ಹೇಳಲು ಸಾಧ್ಯವಿರಲಿಲ್ಲ. ಪ್ರವಾಹದ ವೇಗದಿಂದ ಅದು ಒಂದು ಸಲ ಈ ಕಡೆಗೂ ಮತ್ತೊಂದು ಸಲ ಆ ಕಡೆಗೂ ತಿರುಗುತ್ತಿತ್ತು. ಅಂಬಿಗರು ಹರಿಗೋಲನ್ನು ಒಂದು ಕಡೆಗೆ ನಡೆಸಿದರು. ಮರವು ನಮ್ಮ ಕಡೆಗೆ ಬರುತ್ತಿರುವುದನ್ನು ಕಂಡು ನಾವೆಲ್ಲರೂ ಎದುರಿಗೆ ಬರುತ್ತಿರುವ ಮೃತ್ಯುವನ್ನು ಎದುರುಗೊಳ್ಳಲಾರದೆ ಕಣ್ಣನ್ನು ಮುಚ್ಚಿದೆವು. ಮರದ ಒಂದು ಕೊಂಬೆಯ ತುದಿಯು ಹರಿಗೋಲಿಗೆ ತಗುಲಿತು. ಒಮ್ಮಿಂದೊಮ್ಮೆ ಹರಿಗೋಲು ಗಿರ್‍ರೆಂದು ತಿರುಗಿತು. ನಾವೆಲ್ಲರೂ ಹರಿಗೋಲಿನಲ್ಲಿ ಸೋರೆಯ ಬುರುಡೆಗಳಂತೆ ಉರುಳಾಡಿದೆವು. ಅಂಬಿಗರು "ಕಾವೇರಿ ತಾಯಿಯು ಈ ಸಲ ಕಾಪಾಡಿದಳು" ಎಂದರು. ಸಾಯುವುದಕ್ಕಾಗಿ ಕಣ್ಣನ್ನು ಮುಚ್ಚಿದ್ದ ನಾನು, ಯಮಲೋಕದಿಂದ ಹಿಂದಿರುಗಿ ಬಂದವನಂತೆ ಕಣ್ಣನ್ನು ಬಿಟ್ಟಿ. ದೂರದಲ್ಲಿ ಮರವು ದೊಡ್ಡ ಭೂತದಂತೆ ತೇಲಿಹೋಗುತ್ತಿದ್ದಿತು.

ಈ ಅಪಾಯದಿಂದ ತಪ್ಪಿಸಿಕೊಂಡುದರೊಡನೆ, ಅಂಬಿಗರಿಗೆ ಮತ್ತೆ ಜೀವದ ಆಸೆಯುಂಟಾಯಿತು. ಅವರು ಮನಸ್ಸು ಮಾಡಿ ಹುಟ್ಟೆ ಹೊಡೆದರು. ನೀರಿನಲ್ಲಿ ಮುಚ್ಚಿಹೋಗಿದ್ದ ಗಿಡಗಳ ಮೇಲೆ ಕುಣಿಯುತ್ತಾ ಹರಿಗೋಲು ದಡವನ್ನು ಸೇರಿತು. ದಡವನ್ನು ಎಂದರೆ, ಎದುರು ದಡವನ್ನಲ್ಲ. ನಾವು ಯಾವ ದಡದಿಂದ ಹೊರಟಿದ್ದೆವೋ ಆ ದಡವನ್ನು, ಭೂಮಿಯು ಗುಂಡಾಗಿದೆ ಎಂಬ ಮಾತು ಅನುಭವಕ್ಕೆ ಬಂದಂತಾಯಿತು.

ಹರಿಗೋಲನ್ನು ಮತ್ತೆ ಬಿಡೆಂದು ಅಂಬಿಗರಿಗೆ ಹೇಳಲು ನಮಗಾರಿಗೂ ಧೈರವಿರಲಿಲ್ಲ. ಸಾಯಂಕಾಲ ೬ ಗಂಟೆಯ ವೇಳೆಗೆ ಆಕಾಶವು ನಿರ್ಮಲವಾಯಿತು. ಮೋಡಗಳೆಲ್ಲ ಚೆದುರಿಹೋದುವು. ಭೂಮಿಯು ಬೆಳದಿಂಗಳ ವಸನವನ್ನು ತೊಟ್ಟಳು. ನದಿಯು ಶಾಂತವಾಯಿತು. ಮಧ್ಯಾಹ್ನ ಆ ನದಿಯನ್ನು ಕಂಡ ನಾವು ಅದೂ ಇದೂ ಎರಡೂ ಒಂದೇ ಎಂದು ನಂಬಲಾರದೆ ಹೋದೆವು. ಈ ಸೌಮ್ಯ, ಆ ರೌದ್ರ; ಈ ಶಾಂತತೆ, ಆ ಘರ್ಜನೆ; ಸ್ವರ್ಗಲೋಕದ ದೇವಿಯಂತೆ ನಡೆವ ಈ ಗಂಭೀರ ನಡಿಗೆ, ಪ್ರಳಯಕಾಲದ ಕಾಳಿಯ ಕ್ರೌರ್‍ಯದಂತಹ ಆ ನರ್ತನ; ಈ ಶುಭ್ರವಾದ ಜೊನ್ನೊಸರುವ ತಿಂಗಳಿನ ಬಿಳಿಯ ಸೀರೆ, ಆ ರಕ್ತವು ತೊಟ್ಟಿಕ್ಕುತಿರುವ ಭಯಂಕರವಾದ ಮಲಿನ ವಸನ; ನಲ್ಲನ ಕೊರಗನ್ನು ನಗಿಸುವ ಮುಗುಳುನಗೆಯ ಬೆಳದಿಂಗಳನ್ನು ಪಸರಿಸುವ ನದಿಯ ಈಗಿನ ಬೆಡಗು, ಗಂಡನನ್ನೇ ನುಂಗುವಂತೆ ಕ್ರೌರ್‍ಯವನ್ನು ತೋರಿಸುವ ಆಗಿನ ನದಿಯ ಘರ್ಜನೆ--ಪರಸ್ಪರ ವಿರುದ್ಧವಾದ ಈ ಎರಡು ರೂಪವನ್ನೂ ಒಂದೇ ನದಿಯು ತೋರುವುದೆಂದು ಹೇಗೆ ತಾನೆ ನಂಬಲಾದೀತು!

ಕಾವೇರಿ ನದಿಯು ಕೋಪವಡಗಿದ ಹೆಂಡತಿಯ ನಗೆಯಂತೆ, ಈ ಸೌಮ್ಯ ರೂಪದಿಂದ, ಸರಸದಿಂದ ಕರೆಯುವಾಗ ಯಾರು ತಾನೆ ಅದರ ಪ್ರಭಾವವನ್ನು ತಪ್ಪಿಸಿಕೊಳ್ಳುವುದಕ್ಕೆ ಆಗುತ್ತದೆ. ಬೆಸ್ತರು “ಮಹಾತಾಯಿ ಶಾಂತಳಾದೆಯಾ? ನಿನ್ಮಕ್ಕಳ್ಮೇಲೆ ಇಂತಹ ಕ್ರೌರ್ಯವನ್ನ ತೋರಿಸಬಹುದೆ? ನಾವು ಮಾಡಿದ ಯಾವ ಪಾಪಕ್ಕೆ ಇದು ಪ್ರಾಯಶ್ಚಿತ್ತ" ಎಂದು ಅಡ್ಡಬಿದ್ದರು. ಅನಂತರ ಹರಿಗೋಲಿನಲ್ಲಿ ಕುಳಿತುಕೊಂಡು "ಬನ್ನಿ" ಎಂದು ನಮ್ಮನ್ನು ಕರೆದರು. ನಮ್ಮ ಮಾವ ಮುದುಕರು ಹರಿಗೋಲನ್ನು ಕಂಡುದು ಇದೇ ಮೊದಲು. ಈ ಮೊದಲಿನ ಅನುಭವವೇ ಅವರಿಗೆ ಸಾಕಾಯಿತು. ಮಧ್ಯಾಹ್ನದ ಭಯವೂ ನೀರಿನ ಅಪಮೃತ್ಯುವೂ, ಅಂತರ ಪಿಶಾಚಿಯ ದೃಶ್ಯವೂ ಅವರ ಕಣ್ಣಿನಿಂದ ಮರೆಯಾಗಿರಲಿಲ್ಲ. ಅವರು ಅದನ್ನು ನೆನಸಿಕೊಂಡೇ ಇನ್ನೂ ನಡುಗುತ್ತಿದ್ದರು. ಅವರು ಇಗೋ ಪುಣ್ಯಾತ್ಮ ನಿನಗೆ ದೊಡ್ಡ ನಮಸ್ಕಾರ. ಈ ಕಾವೇರಿ ತಾಯಿಯ ತಂಟೆ ಬೇಡ. ಹರಿಗೋಲಿನ ಸಹವಾಸ ಮೊದಲೇ ಬೇಡ. ಮದುವೆಯ ಸುಖವನ್ನು ಇಲ್ಲಿಯೇ ಕಂಡಂತೆ ಆಯಿತು. ಈ ವೃದ್ಧಾಪ್ಯದಲ್ಲಿ ದೇವರು ಕೊಟ್ಟ ರಾಗಿ ಅಂಬಲಿ ಕುಡಿದುಕೊಂಡು, ಮನೆಯಲ್ಲಿ ಬೆಂಕಿಯ ಮುಂದೆ ಬೆಚ್ಚಗೆ ಕುಳಿತಿರುವುದನ್ನು ಬಿಟ್ಟು, ಈ ಮಳೆ, ಗಾಳಿ, ಛಳಿಯಲ್ಲಿ ಹೊಡೆಸಿಕೊಳ್ಳುವುದು ಯಾವ ಹಣೆಬರಹ. ವಧೂವರರಿಗೆ ಇಲ್ಲಿಂದಲೇ ಆಶೀರ್ವಾದ ಮಾಡಿ, ಹೀಗೆಯೇ ಹಿಂದಿರುಗುತ್ತೇನೆ" ಎಂದರು. ಅಂತೂ ಅವರನ್ನೂ ಸಮಾಧಾನಮಾಡಿ ಹರಿಗೋಲಿಗೆ ಕೂರಿಸಿದ್ದಾಯಿತು. ಯಾವ ತೊಂದರೆಯೂ ಇಲ್ಲದೆ ಎದುರು ದಡವನ್ನು ಸೇರಿದೆವು. ಆ ಕಡೆ ನಿಂತಿದ್ದ ನಮ್ಮ ನೆಂಟರೆಲ್ಲಾ ನಮ್ಮನ್ನು ನೋಡಿ ನಕ್ಕರು. ಹರಿಗೋಲು ಒಂದು ಸಲ ಅರ್ಧ ನದಿಗೆ ಬಂದು ಹಿಂದಕ್ಕೆ ಹೋದುದನ್ನು ಕಂಡು ಅವರ ಆನಂದಕ್ಕೆ ಪಾರವಿಲ್ಲದಂತಾಯಿತಂತೆ. ಮರವು ತೇಲಿ ಬಂದಾಗ, ನಾವು ಕಿರಚಿದ ಕೂಗು ನದಿಯ ಆಚೆ ತೋಪಿನಲ್ಲಿ ಪ್ರತಿಧ್ವನಿತವಾಯಿತಂತೆ. ಒಬ್ಬನು “ಯಾರೂ ಕಾಣದ ಮಹಾ ಹೊಳೆಯೊ?" ಎಂದನು. ಮತ್ತೊಬ್ಬನು “ಇಂತಹ ಹೊಳೆಯನ್ನು ನಾನು ಹತ್ತು ಸಲ ಈಜಿಕೊಂಡೇ ದಾಟಿದ್ದೇನೆ" ಎಂದನು. ಮತ್ತೊಬ್ಬನು ನನ್ನ ಹೆಗಲಿನ ಮೇಲೆ ಕೈಯಿಟ್ಟು “ಅಲ್ಲವೊ ನಿನಗೆ ಈಜು ಬರುತ್ತೆ, ಅರ್ಧ ಹೊಳೆಗೆ ಬಂತೆಲ್ಲಾ ಹರಿಗೋಲು, ಆಗ ಬಿದ್ದು ಈಜಿಬಿಡೋಕೆ ಆಗಲಿಲ್ಲವೇ?” ಎಂದನು. ಉಳಿದವರೆಲ್ಲಾ ಹೇಳಿದ್ದು ಹೋಗಲಿ ಅಂದರೆ, ನಮ್ಮ ಭಾವನೂ ಕೂಡ "ಏನು ಮಹಾ ಹೊಳೆಯೋ” ಅಂದ. ನಾನು ಕೋಪದಿಂದ "ಹೌದಯ್ಯ ಹೊಳೆಯಲ್ಲಿ ದೊಡ್ಡ ಪ್ರವಾಹದಲ್ಲಿ ನೀರು ಕುಡಿದು, ನಿಮಗೂ ನಿಮ್ಮ ಮನೆಯ ಗೋಡೆಗಳಿಗೂ ಅಭ್ಯಾಸವಾಗಿದೆ. ಆದರೆ ನಾವಿದ್ದಂತೆ ಮಧ್ಯಾಹ್ನ ನೀವು ಮೃತ್ಯುಮುಖದಲ್ಲಿ ನಿಂತಿದ್ದರೆ, ಆಗ ಗೊತ್ತಾಗುತ್ತಿತ್ತು. ನಿಮಗೆ ಅಳು, ನಮಗೆ ನಗು. ಬೆಕ್ಕಿಗೆ ಚೆಲ್ಲಾಟ, ಇಲಿಗೆ ಪ್ರಾಣ ಸಂಕಟ” ಎಂದೆ. ನಮ್ಮ ಮುದುಕರು ಕೋಪದಿಂದ “ದೊಡ್ಡ ಪ್ರವಾಹದಲ್ಲಿ ಈ ಊರು ಪೂರ್ಣವಾಗಿ ಕೊಚ್ಚಿ ಹೋಗಿದ್ದರೆ, ನಮಗೆ ಈಗ ಬರೋ ಕಷ್ಟವೇ ತಪ್ಪುತಿತ್ತು” ಎಂದು ಘರ್ಜಿಸಿದರು.

ಮದುವೆಯು ಎಲ್ಲಾ ಮದುವೆಗಳಂತೆ ವೈಭವದಿಂದ ಜರುಗಿತು. ಅದರಲ್ಲಿ ವಿಶೇಷವೇನೂ ಇರಲಿಲ್ಲ. ಆದರೆ ನಾನು ಹೋದದ್ದರಲ್ಲಿ ಮಾತ್ರ ವಿಶೇಷವಿತ್ತು. ಅದನ್ನು ನಿಮಗೆ ಹೇಳಿದ್ದೇನೆ.

ನಾವು ಮಾಡಿದ ಒಂದು ಯಾತ್ರೆ


ನಮ್ಮ ಚಿಕ್ಕಪ್ಪನ ಮಗ ರಾಜು, ಆ ಹುಡುಗಿಯನ್ನು ನೋಡಿದ ಕೂಡಲೇ, ಮಾವಿನ ಹಣ್ಣಿಗಾಗಿ ಬಾಯಿ ಬಿಡುವ ಹುಡುಗನಂತೆ ಬಾಯಿ ಬಿಡುತ್ತಿದ್ದ. ಆದರೆ ಹುಡುಗಿಯರಿಗೆ ಮದುವೆಯ ವಿಷಯ ಹೇಳಿದರೆ ಹೇಗೆ ನಾಚಿಕೆಯೋ, ಹಾಗೆಯೇ ತನ್ನ ಮದುವೆ ವಿಚಾರ ಹೇಳಿದರೆ ರಾಜುಗೆ ನಾಚಿಕೆ, ಮದುವೆ ಗೊತ್ತಾದ ಮೇಲೂ ಅವನು ಒಂದು ದಿವಸ ನನ್ನೊಂದಿಗೆ

“ಈ ಮದುವೆಯಿಂದ ತಪ್ಪಿಸಿಕೊಳ್ಳೋದು ಹ್ಯಾಗೆ? ನಾನು ಬೇಡವೆಂದರೂ ನಮ್ಮ ತಂದೆಯವರು ಗೊತ್ತುಮಾಡಿಬಿಟ್ಟಿದ್ದಾರೆ. ದೊಡ್ಡವರ ಮಾತನ್ನು ಸುಲಭವಾಗಿ ಮೀರುವುದಕ್ಕೆ ಆಗುವುದಿಲ್ಲ" ಎಂದ.

ನಾನು “ಹಾಗಾದರೆ ಮದುವೆಯ ಮೊದಲು ರಾತ್ರಿ ಮೈಸೂರಿಗೆ ಎದ್ದುಬಿಡು" ಎಂದೆ. “ಹಾಗೆಯೇ ಆಗಲಿ” ಎಂದ.

ಆದರೆ ಹಣ್ಣಿಗಾಗಿ ಹಲ್ಲು ಬಿಡುತ್ತಿರುವ ಹುಡುಗ, ಕೈಗೆ ಸಿಕ್ಕುತ್ತಿರುವ ಹಣ್ಣನ್ನು ಬಿಟ್ಟುಹೋದುದನ್ನು ಯಾರಾದರೂ ಕಂಡಿದ್ದಾರೆಯೆ? ನಾನೂ ನೋಡಲಿಲ್ಲ.

ಹಾಸನದಿಂದ ೮ ಮೈಲು ದೂರದಲ್ಲಿರುವ ಶಿವಳ್ಳಿಯಲ್ಲಿ ಅವನ ಮದುವೆ ನಡೆಯಬೇಕೆಂದು ಗೊತ್ತಾಗಿತ್ತು. ಮೇಲುಕೋಟೆಯಿಂದ ನನ್ನ ಗೆಳೆಯ ಗುಂಡುವೂ ನಮ್ಮೂರಿಗೆ ಬಂದ. ಇಬ್ಬರೂ ಶಿವಳ್ಳಿಗೆ ಹೊರಟೆವು. ಮದುವೆಯ ದಿವಸವೇ ಅಲ್ಲಿಗೆ ಹೋದೆವು. ಧಾರೆ ಆಯಿತು.

ಮದುವೆಯ ಮನೆಯಲ್ಲಿ ವರನಿಗೆ ವಧುವಿನ ಜ್ಞಾನ; ವಧುವಿಗೆ ವರನ ಜ್ಞಾನ, ನಮಗೆ ಮದುವೆಯ ಊಟದ ಹೊರತು ಮತ್ತಾವುದರ ಕಡೆಗೂ ಲಕ್ಷ್ಯವಿರಲಿಲ್ಲ. ನನ್ನ ಹೆಂಡತಿಯೂ ಮದುವೆಗಾಗಿ ಬಂದಿದ್ದಳು. ಆದರೆ ಆ ಗದ್ದಲದಲ್ಲಿ ಅವಳೊಂದಿಗೆ ಒಂದು ಮಾತನ್ನೂ ಆಡಲು ಅವಕಾಶವಿರಲಿಲ್ಲ. ಅಲ್ಲದೆ ಅವಳಿಗೆ ಆರತಿ ಅಕ್ಷತೆ, ಅರಸಿನ ಕುಂಕುಮ, ಹಸೆಮಣೆ, ಇವುಗಳ ಸಂಭ್ರಮ. ಹೊತ್ತಿಗೆ ಸರಿಯಾಗಿ ಅವಳು ನನಗೂ ಗುಂಡುವಿಗೂ ಒಂದೊಂದು ಲೋಟ ಕಾಫಿ ತಂದುಕೊಡುತ್ತಿದ್ದುದೇ ನಮ್ಮ ಪುಣ್ಯವೆಂದುಕೊಳ್ಳಬೇಕಾಯಿತು.

ಊಟವಾದ ನಂತರ, ಉಳಿದ ನೆಂಟರಿಷ್ಟರೆಲ್ಲ ಇಸ್ಪೀಟ್ ಪ್ರಾರಂಭಿಸಿಬಿಟ್ಟರು. ನಾನೂ ಗುಂಡುವೂ ಇಸ್ಪೀಟ್ ಆಟ ಸ್ವಲ್ಪ ಹೊತ್ತು ನೋಡಿದೆವು. ಆದರೆ ಬೇಸರಿಕೆ ಆಯಿತು. ಊರ ಹೊರಗಡೆ ಹೋಗಿಬರೋಣ ಬಾ ಎಂದು ಹೇಳಿಕೊಂಡು ಇಬ್ಬರೂ ಹೊರಟೆವು. ಅಂದು ಮಳೆಗಾಲ; ಸೋನೆಯು ಅರ್ಧಗಂಟೆಗೊಂದು ಬಾರಿ ಬರುತ್ತಲೇ ಇದ್ದಿತು. ಸೂರ್‍ಯನು ಎಲ್ಲೊ ದಿವಸಕ್ಕೊಂದು ಸಾರಿ ಮಂಕಾಗಿ ತೋರಿ, ಮೋಡಗಳ ಮರೆಯಲ್ಲಿ ಅವಿತುಕೊಳ್ಳುತ್ತಿದ್ದನು. ನನಗೆ ಚಳಿಯಿಂದ ಮೈ ನಡುಗುತ್ತಿದ್ದಿತು. ಖಾದಿಯ ಶಾಲನ್ನು ಬಲವಾಗಿ ಹೊದೆದುಕೊಂಡು ಕೆರೆಯ ಬಳಿಗೆ ಹೋದೆವು. ಕೆರೆಯ ನೀರು ಕೆಂಪಾಗಿ ತೋರುತ್ತಲಿದ್ದಿತು. ಬಯಲಿನ ಭತ್ತದ ಬೆಳೆಯು ಗಾಳಿಯಿಂದ ಬಳುಕಾಡುತ್ತಿದ್ದಿತು. ದೂರದಲ್ಲಿ ಅಡಿಕೆ ಮಾವು ತೆಂಗುಗಳಿಂದ ಕೂಡಿದ ತೋಟಗಳು, ಭೂಮಿಯ ಸೆರಗಿನಂತೆ ಎದ್ದು ತೋರುತ್ತಿದ್ದುವು. ಮಳೆ ಬಿದ್ದು ಭೂಮಿಯ ಎಲ್ಲಾ ಕಡೆಯ ಹಸುರಾಗಿದ್ದಿತು. ಶಿವಳ್ಳಿಯ ಸುತ್ತ ಕೊಳಗಳೆಲ್ಲ ನೀರಿನಿಂದ ತುಂಬಿದ್ದುವು. ನಾವು ಒಂದು ಕೊಳದ ಬಳಿಗೆ ಹೋದೆವು. ಅದು ಬಹಳ ಸುಂದರವಾದ ಕೊಳ, ನಾಲ್ಕು ಕಡೆಗಳಲ್ಲಿಯೂ ಅದಕ್ಕೆ ಮೆಟ್ಟಲುಗಳನ್ನು ಕಟ್ಟಿದ್ದರು. ಪದೇ ಪದೆ ಮೀನುಗಳು ಮೇಲಕ್ಕೆ ನೆಗೆದು ನೀರಿನೊಳಕ್ಕೆ ಬೀಳುತ್ತಿದ್ದುವು. ಕೆಲವು ಕಮಲಗಳೂ ಒಂದೆಡೆ ಸ್ವಲ್ಪ ಪಾಚಿಯೂ ಬೆಳೆದಿದ್ದವು. ಗಾಳಿಯು ಬರ್‍ರೆಂದು ಬೀಸುತ್ತಿದ್ದಿತು. ಕೊಳದ ದಡದಲ್ಲಿದ್ದ ಮಂಟಪದಲ್ಲಿ ನಾನೂ, ನನ್ನ ಸ್ನೇಹಿತ ಗುಂಡುವೂ ಬೆಚ್ಚಗೆ ಕುಳಿತೆವು.

ಪ್ರಕೃತಿಗೆ ಒಂದು ವಿಧವಾದ ಮಂಕು ಕವಿದಿದ್ದಂತೆ ತೋರಿತು. ಸೋನೆಯ ಮಳೆಯ ಹನಿಯ ಹೊರತು ಮತ್ತಾವ ಶಬ್ದವೂ ಕೇಳುತ್ತಿರಲಿಲ್ಲ. ಮಳೆಗಾಲದ ಕುಳಿರ್ಗಾಳಿಯು ಬೀಸುತ್ತಿದ್ದಿತು. ಪ್ರಕೃತಿಯ ಸ್ತುತಿಪಾಠಕರಾದ ಹಕ್ಕಿಗಳೊಂದೂ ಕಣ್ಣಿಗೆ ಬೀಳಲಿಲ್ಲ. ಒಂದೊಂದು ಸಮಯದಲ್ಲಿ ಮೋಡಗಳು ಬಹಳ ಹೆಚ್ಚಾಗಿ ಗುಡುಗಿ ಪ್ರಕೃತಿಯು ಬಹಳ ದುಃಖದಿಂದ ಬಳಲುವಂತೆ ತೋರುತ್ತಿದ್ದಿತು. ಮೋಡದ ಭಾರವನ್ನು ತಾಳಲಾರದೆ ಬಾನು ನೊಂದು ಅಳುತ್ತಿದ್ದಿತು. ಮಧ್ಯೆ ಮಧ್ಯೆ ಸೋನೆಯು ನಿಂತಾಗ ಗಂಭೀರವಾದ ಮೌನ; ಗಾಳಿಯು ಬೀಸಿದ ಕೂಡಲೆ ಆ ಮೌನವನ್ನು ಭೇದಿಸಿಕೊಂಡು ಪಟ ಪಟನೆ ಮರದ ಎಲೆಗಳಿಂದ ಉದುರುವ ಮಳೆಯ ಹನಿ, ಪ್ರಕೃತಿಯು ನಿದ್ರಾವಸ್ಥೆಯಲ್ಲಿದ್ದು ಕನವರಿಸುತ್ತಿರುವಂತೆ ತೋರಿತು. ಪ್ರಕೃತಿಯು ಈ ಮನೋಧರ್ಮದ ಪರಿಣಾಮವು ನಮ್ಮ ಮೇಲೆಯೂ ಆಯಿತು. ನಾವು ಮಂಕರಾಗಿ ಒಬ್ಬರನ್ನೊಬ್ಬರು ಮರೆತು ಕುಳಿತೆವು. ಗುಂಡುವು ನಿಧಾನವಾಗಿ ಹಾಡಲು ಪ್ರಾರಂಭಿಸಿದನು. ನನ್ನ ಅರಿವೇ ಅವನಿಗೆ ಇರಲಿಲ್ಲ. ತಾನೆಲ್ಲಿರುವೆನೆಂಬುದು ಅವನಿಗೆ ಮರೆತು ಹೋಗಿದ್ದಿತು. ಹಾಡುವುದರಲ್ಲಿ ಅವನು ಪ್ರಚಂಡ ಬಹಳ ಸಣ್ಣ ದನಿಯಲ್ಲಿ ರಾಗಾಲಾಪನೆಮಾಡುತ್ತಿದ್ದನು. ಶಂಕರಾಭರಣ, ಕಲ್ಯಾಣಿ, ಸಾವೇರಿ, ಕಾನಡಾ, ಅಠಾಣ ಎಲ್ಲವೂ ಒಂದೊಂದಾಗಿ ಹೊರಕ್ಕೆ ಬಂದವು. ಗಾನದಿಂದಲೇ ಆವೃತವಾದ ಒಂದು ಲೋಕವನ್ನು ನಾವು ಸೃಷ್ಟಿಮಾಡಿಬಿಟ್ಟೆವು. ಅಠಾಣ ರಾಗವನ್ನು ಗುಂಡನು ಇಂಪಾಗಿ ಹಾಡುವಾಗ ನನ್ನಲ್ಲಿದ್ದ ವಿಮರ್ಶಕನು ಭೇಷ್ ಭೇಷ್ ಎಂದನು. ಅದನ್ನು ಕೇಳಿ ಗುಂಡನು ಗಾನಲೋಕದಿಂದ ಇಹಲೋಕಕ್ಕೆ ಬಂದನು. ಅವನ ೩-೪ ಕವಿತೆಗಳನ್ನು ಹಾಡಿಸಿ ಕೇಳಿದುದಾಯಿತು. ಗಡಿಯಾರವನ್ನು ನೋಡಿದೆ. ನಾವು ಕೊಳದ ದಡದಲ್ಲಿ ೪ ಗಂಟೆಗಳ ಕಾಲ ಕುಳಿತಿದ್ದೆವು ಎಂದು ಗೊತ್ತಾಯಿತು.

ಗುಂಡನು ಹೇಳಿದನು “ಮದುವೆಯ ನಾಲ್ಕು ದಿವಸಗಳೂ ನಾವಿಲ್ಲಿ ಹೀಗೆಯೇ ಬಂದು ಕೂತಿರುವುದಕ್ಕಾಗುವುದಿಲ್ಲ. ಇವತ್ತು ಇಲ್ಲಿಗೆ ಬರದೆ ಇದ್ದಿದ್ದರೆ, ಹೇಗೆ ಕಾಲವನ್ನು ನೂಕುತ್ತಿದ್ದೆವೆಂಬುದೇ ನನಗೆ ಯೋಚನೆ ಯಾಗಿತ್ತು. ಒಂದು ದಿವಸ ಮಟ್ಟಿಗೆ ಎಲ್ಲಿಗಾದರೂ ಹೋಗಿಬರೋಣ-ಓಹೋ ನೀನು ಹಳೇಬೀಡನ್ನು ನೋಡಿದ್ದೀಯಾ?”

ನಾನು ತಕ್ಷಣ ಉತ್ತರ ಕೊಡಲಿಲ್ಲ. ಒಂದು ಘಳಿಗೆ ಯೋಚಿಸಿ “ನೋಡಿದ್ದೇನೆ-ನೋಡಿಲ್ಲ” ಎಂದೆ. ಗುಂಡನು "ಅಂದರೆ?" ಎಂದ.

ನಾನು "ಅಂದರೆ? ಅಂದರೆ" ಎಂದೆ.

“ಹಾಗಾದರೆ ದಾರಿಯಲ್ಲಿ ಬರುತ್ತಿರುವಾಗ ದೂರದಿಂದ ಎಲ್ಲಿಯೋ ನೋಡಿರಬೇಕು."

“ಏನೂ ಇಲ್ಲ. ಹಳೇಬೀಡನ್ನು ನೋಡುವುದಕ್ಕಾಗಿಯೇ ಹಳೆಬೀಡಿಗೆ ಹೋದೆ."

“ನೀನೆ ವಾಸಿಕಣೋ, ಹಳೇಬೀಡು ದೇವಸ್ಥಾನವನ್ನು ನೋಡಿ ಬಂದುಬಿಟ್ಟಿದ್ದೀಯೆ.

“ದೇವಸ್ಥಾನವನ್ನು ನೋಡಲಿಲ್ಲ.”

ಹಳೇಬೀಡಿಗೆ ಹೋಗಿ ದೇವಸ್ಥಾನ ನೋಡದೆ ಬರೋದುಂಟೇನೋ? ಯಾವುದೋ ಬೇರೆ ಕೆಲಸಕ್ಕೆ ಹೋಗಿದ್ದೆ ಅಂತ ಕಾಣುತ್ತೆ. ಆದರೂ ದೇವಸ್ಥಾನ ನೋಡಿಬರಬಹುದಾಗಿತ್ತು."

ನಾನು ಸಹಿಸಲಾರದೆ “ಇಲ್ಲ ಮಹರಾಯ, ದೇವಸ್ಥಾನಾನ ನೋಡೋದಕ್ಕೆ ಹೋದೆ. ಆದರೆ ದೇವಸ್ಥಾನ ಮಾತ್ರ ನೋಡಲಿಲ್ಲ. ಜ್ಞಾಪಿಸಿಕೊಂಡರೆ ಈಗಲೂ ಹೊಟ್ಟೆ ಉರಿಯುತ್ತೆ" ಎಂದೆ.

ಗುಂಡನ ಮುಖದಲ್ಲಿ ಚೇಷ್ಟೆಯ ನಗೆ ತೋರಿತು. ಹಿ೦ದಲ ಅನುಭವ ಜ್ಞಾಪಕಕ್ಕೆ ಬಂದು ಹೊಟ್ಟೆ ಉರಿಯುತ್ತಿದ್ದುದರಿಂದ, ಅವನನ್ನು ತಿಂದುಬಿಡಬೇಕೆಂದು ನನಗೆ ಅನ್ನಿಸುತ್ತಿತ್ತು. ಗುಂಡುವು ನನ್ನ ಹೆಗಲಿನಮೇಲೆ ಕಯ್ಯಿಟ್ಟು,

“ಏನೋ ಅದು ನಿನ್ನ ಒಗಟು ನನಗೆ ಗೊತ್ತಾಗೋದೆ ಇಲ್ಲವಲ್ಲ. ಸ್ವಲ್ಪ ಸ್ಪಷ್ಟವಾಗಿ ಹೇಳು. ನನ್ನ ಮೇಲೆ ಯಾಕೆ ಉರಿದುಬೀಳುತ್ತೀಯೆ?" ಎಂದ.

ನಾನು ಹೇಳಿದೆ. “ನೋಡು ಈಗ ೧೦ ವರ್ಷದ ಮಾತು. ಆಗ ನಾನು ಸ್ಕೌಟ್ ಆಗಿದ್ದೆ. ನಮ್ಮ ಗ್ರೂಪಿನಲ್ಲಿ ನಾನು, ಮತ್ತೊಬ್ಬ ನಮ್ಮ ತರಗತಿಯ ವಿದ್ಯಾರ್ಥಿ ಇಬ್ಬರೇ ಬ್ರಾಹ್ಮಣರಿದ್ದುದು. ಉಳಿದವರೆಲ್ಲಾ ೧೮ ಜನ ಬ್ರಾಹ್ಮಣೇತರರು. ನಮ್ಮ ಮೇಷ್ಟ್ರೂ, ಬ್ರಾಹ್ಮಣ. ಆದರೆ ಕಾಸ್ಮೊಪಾಲಿಟನ್ ಅನ್ತಾರಲ್ಲ ಹಾಗೆ. ನನಗೆ ಆಗ ವಯಸ್ಸು ೧೭ ಆಗಿತ್ತು. ಪುರೋಹಿತರ ಮಗ, ಹೋಟಲಿನ ಕಡೆ ತಲೆ ತಿರುಗಿಸಿ ಕೂಡ ಮಲಗಿದವನಲ್ಲ. ಆದರೆ ಹಳೇಬೀಡನ್ನು ನೋಡಬೇಕೆಂಬ ಆಸೆ ಅಡಗಿಸಲಸಾಧ್ಯವಾಗಿದ್ದಿತು. ಒಂದು ಶನಿವಾರ ಮಧ್ಯಾಹ್ನ ನಾವು ೨೦ ಜನರೂ ಸ್ಕೌಟು ಮಾಸ್ಟರೊಂದಿಗೆ ಹಳೇಬೀಡಿಗೆ ನಡೆದುಕೊಂಡೇ ಹೊರಟುಬಿಟ್ಟೆವು. ರಾತ್ರಿ ೮ ಗಂಟೆಗೆ ಹಗರೆಗೆ ಹೋದೆವು. ಅಲ್ಲಿ ನಾವು ತೆಗೆದುಕೊಂಡುಹೋಗಿದ್ದ ತಿಂಡಿಯನ್ನು ತಿಂದುದಾಯಿತು. ಕ್ಯಾಂಪ್ ಫೈರ್‌ (Camp fire) ಆಯಿತು. ಅದರ ಸುತ್ತ ಪ್ರತಿಯೊಬ್ಬ ಸ್ಕೌಟೂ ಮನಬಂದಂತೆ ಕಿರಚಿದ; ಹಾಡಿದ. ಮುಸಾಫರ್‌ಖಾನೆಯೊಳಕ್ಕೆ ಹೋಗಿ ಮಲಗಿಕೊಂಡೆವು. ಆದರೆ ಅಲ್ಲಿಯ ಸೊಳ್ಳೆಗಳೊ ದೇವರೇ ಗತಿ. ರಾತ್ರಿಯೆಲ್ಲ ವೀಣೆ ಮತ್ತು ಪಿಟೀಲು, ಕೆಲವು ವೇಳೆ ತಂಬೂರಿ. ನನಗಂತೂ ಕಣ್ಣು ಮುಚ್ಚುವುದಕ್ಕೆ ಆಗಲಿಲ್ಲ. ಉಳಿದವರೆಲ್ಲಾ ಗೊರಕೆ ಹೊಡೆಯುತ್ತಿದ್ದರು. ಇರುಳಿನ ಮೌನದಲ್ಲಿ ಅವರ ಗೊರಕೆಯು ಬಹಳ ಸ್ಪಷ್ಟವಾಗಿಯೂ ಕೆಲವುವೇಳೆ ಗಂಭೀರವಾಗಿ ತೋರುತ್ತಿದ್ದಿತು. ಆ ಗೊರಕೆಯಲ್ಲಿಯೂ ಒಂದು ಕ್ರಮವಿದ್ದಂತೆ ತೋರಿತು. ಪ್ರಶ್ನೆ, ಉತ್ತರ, ಪ್ರಶ್ನೆ ಉತ್ತರ; ಗೊರಕೆಗಳು ಈ ರೀತಿ ನಡೆಯುತ್ತಿದ್ದುವು. ಅವರ ನಿದ್ರೆಯನ್ನು ನೋಡಿ ನನಗೆ ಹೊಟ್ಟೆಯುರಿಯಿತು. ಬ್ರಾಹ್ಮಣರನ್ನು ಕಂಡರೆ ಸೊಳ್ಳೆಗಳಿಗೂ ದ್ವೇಷ. ಬ್ರಾಹ್ಮಣೇತರರನ್ನು ಅವುಗಳೂ ಮುಟ್ಟುವುದಿಲ್ಲವೇನೋ! ಎಂದುಕೊಂಡೆ. ಬೆಳಗಾಯಿತು. ನಡೆದುಕೊಂಡೇ ಹಳೇಬೀಡನ್ನು ಸೇರಿದೆವು. ಆ ವೇಳೆಗೆ ಗಂಟೆ ೧೧ ಆಗಿತ್ತು,

ಸರಿ; ಹಳೇಬೀಡನ್ನು ಮುಟ್ಟಿದ ಕೂಡಲೆ ಮೊದಲು ಅಡಿಗೆಯ ವಿಚಾರ ಚರ್ಚೆಗೆ ಬಂತು. ನಾನೂ ನನ್ನ ಸ್ನೇಹಿತ ಮತ್ತೊಬ್ಬ ಬ್ರಾಹ್ಮಣನೂ, “ಬ್ರಾಹ್ಮಣೇತರರು" ಬೇರೆ ಅಡಿಗೆಮಾಡಿಕೊಳ್ಳಲಿ ಎಂದೆವು. ಆದರೆ ಬೇರೆ ಅಡಿಗೆಗೆ ಬೇರೆ ಪಾತ್ರೆಗಳು ಬೇಕಲ್ಲ. ನಮ್ಮ ಬಳಿ ಪಾತ್ರೆಗಳಿಗೆ ಗತಿ ಇರಲಿಲ್ಲ. ಕೊನೆಯಲ್ಲಿ ನಮ್ಮ ಜಾತಿಯನ್ನು ಉಳಿಸಿಕೊಳ್ಳುವುದಕ್ಕಾಗಿ, ನಾವೇ ಎಲ್ಲರಿಗೂ ಅಡಿಗೆಮಾಡಲು ಒಪ್ಪಿಕೊಂಡುಬಿಟ್ಟೆವು. ಉಳಿದ ಸ್ಕೌಟುಗಳೆಲ್ಲಾ ಆನಂದದಿಂದ ಕಿರಚುತ್ತಾ ಶಿಳ್ಳು ಹಾಕುತ್ತಾ ಈಜುವುದಕ್ಕೆ ದ್ವಾರಸಮುದ್ರಕ್ಕೆ ಹೊರಟುಹೋದರು. ೨೦ ಜನಕ್ಕೆ ಅಡಿಗೆ ಮಾಡೋದು ಸಾಮಾನ್ಯವೇ? ಹೊಗೆ ಕುಡಿದು ನಮ್ಮಿಬ್ಬರಿಗೂ ಕಣ್ಣು ಕೆಂಪಾಗಿಬಿಟ್ಟಿತು. ಉಳಿದವರೆಲ್ಲಾ ಕೆರೆಯಲ್ಲಿ ಆನಂದದಿಂದ ಈಜಿ ಮೈನೋವನ್ನೆಲ್ಲಾ ಕಳೆದುಕೊಂಡು ಹೊಸ ಹುರುಪಿನಿಂದ ಬಂದರು. ಮೂರು ಗಂಟೆ ಹೊತ್ತಿಗೆ ಅಡಿಗೆ ಆಯಿತು. ನಮ್ಮನ್ನು ಸ್ವಾರ್ಥಪರರೆಂದು ಅವರು ತಿಳಿಯಬಾರದೆಂದು ನಾವೇ ಅವರಿಗೆಲ್ಲಾ ಬಡಿಸಿಬಿಟ್ಟೆವು. ಅಡಿಗೆಮಾಡಿದ ಆಯಾಸದಿಂದ ನನಗೆ ಊಟ ಸೇರಲಿಲ್ಲ. ರಾತ್ರಿ ನಿದ್ರೆ ಇಲ್ಲದುದರಿಂದ ಒಂದು ಮರದ ನೆರಳಿನಲ್ಲಿ ಮಲಗಿಬಿಟ್ಟೆ. ಚೆನ್ನಾಗಿ ನಿದ್ರೆ ಬಂದಿತು.

ನಾಲ್ಕು ಗಂಟೆಗೆ ಸ್ಕೌಟುಗಳೆಲ್ಲಾ ದೇವಸ್ಥಾನಕ್ಕೆ ಹೋಗಿ ನೋಡಿಕೊಂಡುಬಂದರು. ನಾನು ಮಲಗಿಯೇ ಇದ್ದೆ. ರಾತ್ರಿ ೮ ಗಂಟೆಗೆ ಹೊರಡಲು ನನ್ನನ್ನು ಎಬ್ಬಿಸಿದರು. ಹೊರಟು ಬೆಳಿಗ್ಗೆ ಹಾಸನಕ್ಕೆ ಹಿಂದುರಿಗಿದೆವು. ದೇವಸ್ಥಾನ ಯಾವ ದಿಕ್ಕಿನಲ್ಲಿದೆ ಎಂಬುದನ್ನು ಕೂಡ ನೋಡಲಿಲ್ಲ.”

ನಾನು ಇಷ್ಟು ಹೇಳಿ ಸುಮ್ಮನಾದೆ. ಗುಂಡ ಉದ್ದಕ್ಕೂ ಮುಗುಳುನಗೆ ನಗುತ್ತಲೇ ಇದ್ದ. ಕೊನೆಯ ತಡಿಯಲಾರದೆ ಒಂದುಸಲ ಗಟ್ಟಿಯಾಗಿಯೆ ನಕ್ಕುಬಿಟ್ಟ.

ಸ್ವಲ್ಪ ಚರ್ಚೆ ನಡೆದನಂತರ, ಬೇಲೂರಿಗೆ ಹೋಗಿ ಹಾಗೆಯೇ ಹಳೇಬೀಡನ್ನೂ ನೋಡಿಕೊಂಡು ಹಿಂದಿರುಗಬೇಕೆಂದು ನಮ್ಮಲ್ಲಿ ತೀರ್ಮಾನ ವಾಯಿತು. ಆದರೆ ಇದಕ್ಕೆ ಒಂದು ಅಡಚಣೆಯಿದ್ದಿತು. ಈ ವಿಚಾರ ನಮ್ಮವಳಿಗೆ ತಿಳಿದರೆ, ಅವಳು “ನಾನೂ ಬರುತ್ತೇನೆ” ಎಂದುಬಿಡುತ್ತಿದ್ದಳು. ಆ ಮಳೆಗಾಲದಲ್ಲಿ ಅವಳನ್ನು ಕರೆದುಕೊಂಡು ಹೋಗುವುದೆಲ್ಲಿ? ಕೊನೆಗೆ ಮದುವಣಿಗನಾದ ರಾಜು ಒಬ್ಬನಿಗೆ ಮಾತ್ರ ತಿಳಿಸಿ ಹೊರಟು ಹೋಗಬೇಕೆಂದೂ, ಹಿಂದಿರುಗಿದನಂತರ ನನ್ನ ಹೆಂಡತಿಯ ಹುಬ್ಬುಗಂಟನ್ನೂ, ಮುಖದ ಕೋಪವನ್ನೂ ಒರಸಿ ಸಮಾಧಾನಮಾಡಬಹುದೆಂದೂ ತೀರ್ಮಾನವಾಯಿತು.

ಮರುದಿವಸ ಊಟವಾದನಂತರ ನೆಂಟರೆಲ್ಲಾ ಪದ್ಧತಿಯಂತೆ ಇಸ್ಪೀಟ್ ಆಟದಲ್ಲಿ ಕುಳಿತಿದ್ದರು. ನಮ್ಮವಳು ಎದುರಿಗೇ ಹೂವನ್ನು ಕಟ್ಟುತ್ತಾ ಕುಳಿತಿದ್ದಳು. ನಾವು ಮರುದಿವಸವೇ ಹಿಂದಿರುಗುವವರಾದುದರಿಂದ ಯಾವ ಸಾಮಾನನ್ನೂ ತೆಗೆದುಕೊಂಡು ಹೋಗುವವರಾಗಿರಲಿಲ್ಲ. ಆದರೆ ರಾತ್ರಿ ಮಲಗುವುದಕ್ಕೆ ಮಾತ್ರ ಒಂದು ಕಂಬಳಿ ಬೇಕಾಗಿದ್ದಿತು. ನನ್ನ ಹತ್ತಿರ ಒಂದು ಕರಿಯ ಕಂಬಳಿ ಇದೆ. ಅದು ನನ್ನೊಂದಿಗೆ ಮದರಾಸು, ಬೊಂಬಾಯಿ, ಅಹಮದಾಬಾದ್, ಬೆಳಗಾಂ ಮುಂತಾದ ಕಡೆಗಳನ್ನೆಲ್ಲಾ ತಿರುಗಿದೆ. ಗುಂಡನು ಅದಕ್ಕೆ ರೊಮಾಂಟಿಕ್ ಕಂಬಳಿ ಎಂದು ಹೆಸರಿಟ್ಟಿದ್ದಾನೆ. ನಾನು ಎಲ್ಲಿ ಪ್ರಯಾಣ ಹೊರಟರೂ ಕಂಬಳಿಯು ಹೊರಕ್ಕೆ ಬಂದೇ ಬರುತ್ತದೆ. ಅದರಲ್ಲೂ ಈಗ ಮಳೆಗಾಲ ಕೇಳಬೇಕೆ? ಕಂಬಳಿಯನ್ನು ತೆಗೆದು ಮಡಿಸಿ ಇಟ್ಟಿ. ನನ್ನ ಹೆಂಡತಿಯು “ಕಂಬಳಿಯನ್ನು ಯಾಕೆ ಮಡಿಸುತ್ತಿದ್ದೀರಿ?” ಎಂದಳು. ನಾನು ಅಪರಾಧಿಯಂತೆ "ಏನೋ ಮಡಿಸಿದೆ" ಎಂದೆ. ಹೆಂಗಸರಿಗೆ ಬುದ್ದಿ ಏನು ಚುರುಕೋ ದೇವರೇ ಬಲ್ಲ. ಆ ಪುಣ್ಯಾತಿ ಆ ಸ್ಥಳ ಬಿಟ್ಟು ಏಳಲೇ ಇಲ್ಲ. ಹೂವು ಕಟ್ಟುವುದು ಮುಗಿಯಲೇ ಇಲ್ಲ. ಗುಂಡ ೨-೩ ಸಲ ಒಳಕ್ಕೆ ಬಂದು ನೋಡಿ ಹೋದ. ಬಸ್ಸಿಗೆ ಹೊತ್ತಾಗುತ್ತಾ ಬಂತು. ನಾನು ಅಶಾಂತಿಯಿಂದ ಆ ಕಡೆ ಈ ಕಡೆ ಹೊರಳಾಡಿದೆ. ನನ್ನ ಹೆಂಡತಿಯು ನನ್ನನ್ನು ನೋಡಿ ೨-೩ ಸಲ ನಕ್ಕಳು. ಇನ್ನು ಶರಣಾಗತನಾಗುವುದರ ಹೊರತು ಬೇರೆ ಉಪಾಯ ತೋರಲಿಲ್ಲ. ಹೆಂಡತಿಯನ್ನು ಒಳಕ್ಕೆ ಕರೆದೆ. ಹೊರಟಿರುವ ವಿಷಯವನ್ನು ಒಪ್ಪಿಕೊಂಡೆ. ಬಸ್ಸಿಗೆ ಹೊತ್ತಾಗುತ್ತಿರುವುದನ್ನು ನೋಡಿ ಅವಳು ಅಡ್ಡ ಬರಲಿಲ್ಲ. ಒಳಗೆ ಹೋಗಿ ಮದುವೆಯ ತಿಂಡಿಯನ್ನೂ ಸ್ವಲ್ಪ ಹುಳಿಯನ್ನವನ್ನೂ ಕೇಳಿ ತಂದಳು. ಸರಿ ಅಪರಾಧಿಗೆ ಒಳ್ಳೆಯ ಶಿಕ್ಷೆಯನ್ನೇ ವಿಧಿಸಿದಂತಾಯಿತೆಂದುಕೊಂಡೆ. ಹೊರಡುವಾಗ “ಈಗ ಹೋಗಿ ಬನ್ನಿ. ಬಂದ ಮೇಲೆ ಇದೆ ನಿಮಗೆ ಹುಟ್ಟಿದ ದಿವಸ” ಎಂದಳು. ಅವಳ ಕೈಲಿ, ಹುಟ್ಟಿದ ದಿವಸ"ವನ್ನು ನಾನು ಅನೇಕ ಸಾರಿ ಕಂಡಿದ್ದುದರಿಂದ ನನಗೆ ಗಾಬರಿಯಾಗಲಿಲ್ಲ.

ನಾವು ಹಾಸನದಲ್ಲಿ ಬಸ್ಸಿನಲ್ಲಿ ಕುಳಿತು ಬೇಲೂರಿಗೆ ಹೊರಟೆವು. ಕುಳಿರ್ಗಾಳಿಯು ಬೀಸುತ್ತಿದ್ದುದರಿಂದ ಇಬ್ಬರಿಗೂ ಸೇರಿ ಒಂದೇ ಕಂಬಳಿ ಯನ್ನು ಸುತ್ತಿಕೊಂಡೆವು. ನಾವು ದಾರಿಯಲ್ಲಿ ಕಂಡ ದೃಶ್ಯಗಳ ಸೊಬಗನ್ನು ನನ್ನ ಈ ಬಡ ಲೇಖನಿಯು ವರ್ಣಿಸಬಲ್ಲದೆ? ಮಲನಾಡೆಂಬ ಒಂದೇ ಪದದಲ್ಲಿ ಪ್ರಕೃತಿಯ ಸಮಸ್ತ ಸೌಂದಯ್ಯವೂ ಅಡಕವಾಗಿದೆ ಎಂಬುದನ್ನು ನೀವು ತಿಳಿಯಬೇಕು. ನಾವು ಹೋಗುತ್ತಿದ್ದ ರಸ್ತೆಯ ಉದ್ದಕ್ಕೂ ಹಸುರಾದ ಮರಗಳು ಸಾಲಿಟ್ಟಿದ್ದುವು. ಭೂದೇವಿಯ ಕಾಂತಿಯು ಹೊರಕ್ಕೆ ಚೆಲ್ಲಿ ತೋರುವಂತೆ ನೋಡಿದೆಡೆಯೆಲ್ಲಾ ಇಳೆಯು ಹಸುರಾಗಿದ್ದಿತು. ನೀರು ತುಂಬಿದ ಚಿಕ್ಕ ಕೊಳಗಳು ಮುತ್ತಿನ ಮಣಿಗಳಂತೆ ತೋರುತ್ತಿದ್ದುವು. ಅಲ್ಲಲ್ಲಿ ಚಿಕ್ಕ ದೊಡ್ಡ ಬೆಟ್ಟಗುಡ್ಡಗಳು ಎದ್ದು ಕಾಣುತ್ತಿದ್ದುವು. ಮಳೆಯ ನೀರು ಅವುಗಳ ಮೇಲಿನಿಂದ ಕೆಳಕ್ಕೆ ಉರುಳಿ, ಕಲ್ಲುಗಳೊಡನೆ ಆಟವಾಡುತ್ತಾ ಜುಳು ಜುಳು ರವದಿಂದ ಹರಿಯುತ್ತಿದ್ದಿತು. ನಾವು ಹೊರಟ ದಿವಸ ಮಳೆ ಇರಲಿಲ್ಲ. ಸೂರ್ಯನು ಚೆನ್ನಾಗಿಯೇ ಪ್ರಕಾಶಿಸುತ್ತಿದ್ದನು. ಅವನ ಕಿರಣಗಳು ಬೆಟ್ಟದ ತುದಿಯನ್ನು ಮುತ್ತಿಡುತ್ತಿದ್ದುವು, ಮರದ ಎಲೆಗಳೊಡನೆ ಮಾತನಾಡುತ್ತಿದ್ದುವು. ತುಂಬಿದ ಕೊಳದ ಅಲೆಗಳೊಂದಿಗೆ ಕುಣಿದಾಡುತ್ತಿದ್ದುವು. ಮೊದಲ ದಿವಸ ಮಳೆಯ ಮೋಡದ ದೆಸೆಯಿಂದ ಸೂರ್‍ಯನು ಕಣ್ಣಿಗೇ ಕಂಡಿರಲಿಲ್ಲ. ಈ ದಿವಸ ಬಿಸಿಲು ಸುಖವಾಗಿ ಭೂಮಿಯ ಮೇಲೆ ಒರಗಿದುದನ್ನು ಕಂಡು ಹಕ್ಕಿಗಳು ಆನಂದದಿಂದ ಗಾನಮಾಡುತ್ತಿದ್ದುವು.

ಸಂಧ್ಯಾಕಾಲ ೪ ಗಂಟೆಗೆ ಬೇಲೂರನ್ನು ತಲಪಿದೆವು. ದೇವಸ್ಥಾನವು ಎದುರಿಗೇ ಕಾಣುತ್ತಿದ್ದಿತು. ಹೆಸರನ್ನು ಕೇಳಿದೊಡನೆಯೇ ಮೈ ಪುಳಕಿತವಾಗುವಾಗ, ಎದುರಿಗೆ ಇದ್ದರೆ ಕೇಳಬೇಕೆ, ನಾವು ಆತುರದಿಂದ ದೇವಾಲಯದ ಪ್ರಾಕಾರದೊಳಕ್ಕೆ ನುಗ್ಗಿದೆವು. ಆ ಕಲೆಯ ದಿವ್ಯ ರಾಶಿಯನ್ನು ನೋಡಿ ಮುಗ್ಧರಾದೆವು, ಮಂಕರಾದೆವು, ಮೂಕರಾದೆವು. ಯಾವ ಕಡೆ ಮೊದಲು ನೋಡಬೇಕು, ಯಾವ ಕಡೆ ಆಮೇಲೆ ನೋಡಬೇಕೆಂಬುದೇ ನಮಗೆ ತಿಳಿಯಲಿಲ್ಲ-ಬಗೆ ಬಗೆಯ ತಿಂಡಿಗಳು ಎದುರಿಗೆ ಇರುವಾಗ ಯಾವುದನ್ನು ಮೊದಲು ತಿನ್ನಬೇಕೆಂದು ತಿಳಿಯದಿರುವ ಹುಡುಗನಂತೆ. ಅಂತೂ ದೇವಸ್ಥಾನವನ್ನು ಮೊದಲು ಒಂದು ಸುತ್ತು ತಿರುಗಿದೆವು. ಅದರಿಂದ ತೃಪ್ತರಾಗದೆ ಎರಡನೆಯ ಸಲ ಮತ್ತೆ ಯಾತ್ರೆಯನ್ನು ಪ್ರಾರಂಭಿಸಿದೆವು. ದೇವಸ್ಥಾನದ ಎರಡು ಕಡೆಯೂ ಸುಂದರವಾಗಿ ಚಿತ್ರಿತವಾದ. ಹೊಯ್ಸಳ ವಿಗ್ರಹಗಳು; ಒಳಗಡೆ ನವರಂಗ, ಅದರ ಸುತ್ತಲೂ ಗದ್ದುಗೆ; ಒಂದೇ ಸಮನಾಗಿ ತೋರಿದರೂ ಬೇರೆ ಬೇರೆಯಾದ ಕಲೆಯ ಬೆಡಗನ್ನುಳ್ಳ ಚಿತ್ರದ ಕಂಬಗಳು, ಕಡೆದ ಕಂಬಗಳಂತೆ ಬಗೆ ಬಗೆಯ ದುಂಡುಗಳಿಂದಲೇ ಅವು ನಿರ್ಮಿತವಾಗಿವೆ; ಸುಂದರವಾದ ಕೆತ್ತನೆಯ ಕೆಲಸದ ನೃಸಿಂಹ ಸ್ತಂಭ; ಅದರಲ್ಲಿರುವ ತ್ರಿಮೂರ್ತಿಗಳ ನಾನಾ ಅವತಾರದ ಚಿತ್ರಗಳು. ಬಳಿಯಲ್ಲಿರುವ ಗರುಡ ವಿನತೆಯರ ಕಂಭ, ನವರಂಗದ ಹೊರಭಾಗದಲ್ಲಿ ಅಡಿಪಾಯದಿಂದ ೫ ಅಡಿಯವರೆಗೆ ಕೆತ್ತಿ ಮಾಡಿರುವ ಬಗೆ ಬಗೆಯ ವಿಗ್ರಹಗಳು. ಆನೆ, ಕುದುರೆ, ರಥ, ಲತೆ ಮತ್ತು ಮಣಿ ತೋರಣಗಳು; ಸುಂದರಿಯೊಬ್ಬಳು ಮನವೊಪ್ಪುವಂತೆ ಅಲಂಕಾರಮಾಡಿಕೊಂಡು ಬಳಿಯಲ್ಲಿರುವ ಕನ್ನಡಿಯಲ್ಲಿ ತನ್ನ ಮುಂಗುರುಳನ್ನೂ ಚೆಂದುಟಿಯನ್ನೂ ಹೊಳೆಯುವ ಕಣ್ಣುಗಳನ್ನೂ ನೋಡುತ್ತಿರುವಳು. ನರ್ತನದಲ್ಲಿ ಮನಸ್ಸು ಲೀನವಾದ ಬೇಡಿತಿಯ ಉಡುಪಿನ ಸೆರಗನ್ನು ಕಪಿಯೊಂದು ಹಿಡಿದು ಎಳೆಯುತ್ತಿರುವುದು. ಯೌವನ ಸ್ತ್ರೀಯೊಬ್ಬಳು ಚಿಗುರಿಗೆ ಸಮಾನವಾದ ತನ್ನ ಕರಗಳಲ್ಲಿ ತಾಂಬೂಲವನ್ನು ಹಿಡಿದು, ಮತ್ತೊಂದು ನಳಿತೋಳಿನ ಮೇಲೆ ಗಿಳಿಯನ್ನು ಕುಳ್ಳಿರಿಸಿಕೊಂಡು ಆಡಿಸುತ್ತಿರುವಳು. ಲಲನೆಯೊಬ್ಬಳು ತಾಳವನ್ನು ಹಾಕುತ್ತಿರುವಳು. ಚೆಲುವೆಯೊಬ್ಬಳು ಮೃದಂಗವನ್ನು ಬಾರಿಸುತ್ತಿರುವಳು. ಒಬ್ಬ ಲಲನಾಮಣಿಯು ಠೀವಿಯಿಂದ ಬಾಣವನ್ನು ಪ್ರಯೋಗಿಸುವ ಸಾಹಸದಲ್ಲಿ ತೊಡಗಿರುವಳು. ಕಲಾಕೋವಿದೆಯೊಬ್ಬಳು ವೇಣುವಾದನ ಮಾಡುತ್ತಿರುವಳು. ಒಬ್ಬ ಸರಸಿಯು ಪ್ರಿಯನಲ್ಲಿ ಪ್ರಣಯ ಕೋಪವನ್ನು ನಟಿಸುತ್ತಿರುವಳು.

ನಮಗಂತೂ ಆ ವನಿತೆಯರ ಗಾನವು ಕೇಳುತ್ತಿದೆಯೋ ಎಂದು ಭಾಸವಾಯಿತು. ಅವರೆದುರಿಗೆ ನಿಂತಾಗ ಅವರು ನಮ್ಮನ್ನು ನೋಡಿ ನಗುವಂತೆ ತೋರಿತು.

“ಶ್ರುತಗಾನದಭಿರಾಮಮಾದೊಡಮಶ್ರುತಗಾನಮಭಿರಾಮತರಂ” ಎಂಬುದು ನಮಗೆ ಅನುಭವವಾಯಿತು. ದೇವಸ್ಥಾನದ ಯಾವ ಭಾಗವೂ ಮನುಷ್ಯ ನಿರ್ಮಿತವಾಗಿದ್ದುದರಂತೆ ತೋರಲಿಲ್ಲ. ಅದು ದೇವಲೋಕದಲ್ಲಿ ರತಿಯ ಎದುರಿಗೆ ಅವಳ ಊಹೆಯಿಂದ ನಿರ್ಮಿತವಾಗಿ ಇಲ್ಲಿಗೆ ತರಲ್ಪಟ್ಟು ಇಡಲ್ಪಟ್ಟ ಕಲೆಯ ನೆಲೆಯಂತೆ ತೋರಿತು. ನಾನು "ಜಕಣಾಚಾರಿ, ಇದು ನೀರವವಾದ ಧ್ವನಿಯಿಂದ ನಿನ್ನ ಮಹಿಮೆಯನ್ನು ಹೊಗಳುತ್ತಿದೆ" ಎಂದು ಪ್ರಾರಂಭಿಸಿದೆ.

ಗುಂಡನು “ನಿನ್ನ ವಾಚಾಳತನವನ್ನು ಇಲ್ಲಿ ಬಿಚ್ಚಬೇಡ" ಎಂದು ಗದರಿಸಿದ. ನಾನು ಮಾತನಾಡದೆ ಸುಮ್ಮನಾದೆ.

ದೇವಾಲಯದ ಒಳಗಿನ ಕಂಬದಲ್ಲಿ ಒಂದು ಸ್ತ್ರೀ ವಿಗ್ರಹವಿದೆ. ಅದರ ಮುಖವಂತೂ ಲಾವಣ್ಯದಿಂದ ಉಕ್ಕುತ್ತಿದೆ. ಇದಕ್ಕೂ ಜೀವವಿದೆಯೋ ಎಂದು ನಮಗೆ ಭ್ರಾಂತಿ ಬಂದಿತು. ವಿಗ್ರಹವಂತೂ ಲಜ್ಜೆಯೇ ಮೂರ್ತಿಮತ್ತಾಗಿ ನಿಂತಿದೆ. ಯಾರು ಏನು ತಿಳಿದುಕೊಳ್ಳುತ್ತಾರೆಯೋ ಎಂಬುದಾಗಿ ನಾವು ಸುತ್ತಲೂ ೨-೩ ಸಲ ನೋಡಿ ಅದರ ಕೆನ್ನೆಗಳನ್ನು ಒಂದು ಸಲ ಮುಟ್ಟಿದೆವು. ನಮ್ಮ ಸ್ಪರ್ಶದಿಂದ ಅದು ನಾಚಿಕೆಗೊಂಡಂತೆ ತೋರಿತು. ಗುಂಡನು "ಎಲ್ಲರೂ ಹೀಗೆಯೇ ಮುಟ್ಟುತ್ತಿದ್ದರೆ ಈ ವಿಗ್ರಹದ ಕೆನ್ನೆಯು ಬೇಗ ಗುಂಡಿಬಿದ್ದು ಹೋಗುತ್ತದೆ" ಎಂದ.

ಅನಂತರ ಮಂಗಳಾರತಿ ಆಯಿತು. ಗುಂಡನು "ಮೂಲದೇವರು ದೊಡ್ಡದಾಗಿ ಗಂಭೀರವಾಗಿದೆ. ಪರವಾಯಿಲ್ಲ. ಮುಖದಲ್ಲಿ ಒಂದು ವಿಧವಾದ ಗತ್ತು ಇದೆ. ಈ ವೈಭವ, ಈ ದೇವಸ್ಥಾನ, ಈ ಕಲೆ ಇವೆಲ್ಲವೂ ನನ್ನ ಹಕ್ಕು ಎಂದು ಅದು ಹೇಳುತ್ತಿರುವಂತೆ ತೋರುತ್ತದೆ" ಎಂದ. ಮಂಗಳಾರತಿಯಾಗಿ ನಾವು ದೇವಾಲಯದಿಂದ ಹೊರಕ್ಕೆ ಬರುವ ವೇಳೆಗೆ ೭-೩೦ ಗಂಟೆ ಆಗಿದ್ದಿತು. ಆಗತಾನೆ ಚಂದ್ರನು ಹೊರಕ್ಕೆ ಬರುತ್ತಿದ್ದನು. ಬೆಳದಿಂಗಳಲ್ಲಿ ಆ ದೇವಾಲಯದ ಒಂದು ನೋಟವನ್ನು ಅನುಭವಿಸಬೇಕೆಂದು ನಾವು ಚೆನ್ನಿಗರಾಯನ ದೇವಾಲಯದ ಎದುರಿಗೆ ಕುಳಿತುಕೊಂಡೆವು. ಹಿಂದಲ ವೈಭವ, ಅಂದಿನ ರಾಜರು, ಆಗಿನ ಕಲೆಯ ಪರಾಕಾಷ್ಠೆ, ಇಂದಿನ ಕಲಾರಹಿತ ಜೀವನದ ನಿಸ್ಸಾರತೆ- ಇವುಗಳ ಹಗಲು ಕನಸುಗಳನ್ನು ಒಂದೊಂದಾಗಿ ಕಂಡೆವು. ಗತವೈಭವವನ್ನು ನೆನೆದು ನಿಟ್ಟುಸಿರುಬಿಟ್ಟೆವು.

ರಾತ್ರಿ ಹತ್ತೂವರೆ ಗಂಟೆಯಾಯಿತು. ನಮ್ಮ ಗಂಟಿನಲ್ಲಿದ್ದ ಹುಳಿಯನ್ನವನ್ನೂ ತಿಂಡಿಯನ್ನೂ ಬಲಿಹಾಕಿಬಿಟ್ಟೆವು. ಅನಂತರ ಮಲಗಿಕೊಳ್ಳುವುದೆಲ್ಲಿ? ಎಂಬ ಯೋಚನೆಗೆ ಪ್ರಾರಂಭವಾಯಿತು. ನಮಗೆ ಯಾರೋ ಗುರುತಿನವರೊಬ್ಬರು ಅಲ್ಲಿ ಶಾಲೆಯ ಉಪಾಧ್ಯಾಯರಾಗಿದ್ದರು. ಅವರ ಮನೆಯನ್ನು ಬಹಳ ಶ್ರಮಪಟ್ಟು ಕಂಡುಹಿಡಿದೆವು. ಗುಂಡನು "ಈ ಅವೇಳೆಯಲ್ಲಿ ಪಾಪ ಮಲಗಿರುವವರನ್ನು ಯಾಕೆ ಎಬ್ಬಿಸಬೇಕು. ಹೇಗೂ ರೊಮಾಂಟಿಕ್ ಕಂಬಳಿ ಇದೆಯಲ್ಲ. ಛತ್ರದಲ್ಲಿ ಹೋಗಿ ಮಲಗಿರೋಣ ಬಾ” ಎಂದನು. ಛತ್ರದಲ್ಲಿ ಚಳಿಯಲ್ಲಿ ನಡುಗುವುದು ನನಗೆ ಇಷ್ಟವಿರಲಿಲ್ಲ. ನಾನು "ಉಪಾಧ್ಯಾಯ ಇನ್ನೂ ಹುಡುಗ. ಇಷ್ಟು ಬೇಗ ಮಲಗಿರೋದಿಲ್ಲ. ಮಲಗಿದ್ದರೆ ಎಬ್ಬಿಸೋಣ. ನಾವೇನು ನಿತ್ಯ ಬರುತ್ತೇವೆಯೆ ಬಾ?” ಎಂದೆ.

"ನಿತ್ಯ ಬರದ ಮಾತ್ರಕ್ಕೆ ಮಲಗಿರುವವರನ್ನು ಅವೇಳೆಯಲ್ಲಿ ಎಬ್ಬಿಸಲು ನಿನಗೆ ಯಾರು ಅಧಿಕಾರವನ್ನು ಕೊಟ್ಟಿದ್ದಾರೆ" ಎಂದ ಗುಂಡ. ನಾನು ಅವನ ಮಾತಿಗೆ ಲಕ್ಷ್ಯವನ್ನು ಕೊಡಲಿಲ್ಲ. ಗುಂಡನು "ನೀನು ಮಹಾ ವರಟ" ಎಂದ. ಅದಕ್ಕೂ ಸುಮ್ಮನಿದ್ದುಬಿಟ್ಟೆ,

ಉಪಾಧ್ಯಾಯನ ಮನೆ ಬಾಗಲಿಗೆ ಒಳಗಿನಿಂದ ಅಗಣಿ ಹಾಕಿತ್ತು. ಕೂಗಿ ಕೂಗಿ ನಮಗೆ ಗಂಟಲು ಸೋತುಹೋಯಿತು. ನೆರೆಹೊರೆಯ ಮನೆಯವರಿಗೆಲ್ಲಾ ಎಚ್ಚರವಾಗಿಬಿಟ್ಟಿತು. ಆದರೆ ಪುಣ್ಯಾತ್ಮ ನಮ್ಮ ಮೇಷ್ಟು ಮಾತ್ರ ಹೊರಕ್ಕೆ ತಲೆಹಾಕಲಿಲ್ಲ. ನಮಗೂ ಬೇಜಾರಾಗಿ ಯಾವುದಾದರೂ ಒಂದು ಛತ್ರಕ್ಕೆ ಹೋಗೋಣವೆಂದು ಯೋಚಿಸುತ್ತಿರುವಷ್ಟರಲ್ಲಿ, ಒಳಗಡೆ ಹೆಜ್ಜೆಯ ಸದ್ದಾಯಿತು. ಮೇಷ್ಟು ಕಣ್ಣು ತಿಕ್ಕುತ್ತಾ ಬಾಗಲು ತೆರೆದ. ಒಳಗೆ ಹೋಗಿ ಮಲಗಿಕೊಂಡೆವು.

ಬೆಳಿಗ್ಗೆ ಆರೂವರೆ ಗಂಟೆಗೆ ಬಸ್ಸು ಹಳೇಬೀಡಿಗೆ ಹೊರಡುವುದರಲ್ಲಿದ್ದಿತು. ಆ ಮಹಾರಾಯ್ತಿ ಮೇಷ್ಟ್ರು ಹೆಂಡತಿ ಅಷ್ಟು ಹೊತ್ತಿಗೇ ನಮಗೆ ಕಾಫಿ ಉಪ್ಪಿಟ್ಟು ಮಾಡಿಕೊಟ್ಟರು. ಮೇಷ್ಟು, ಇನ್ನೂ ಮಲಗಿಯೇ ಇದ್ದ. ನಾವು ಬಸ್ಸಿನಲ್ಲಿ ೭ ಗಂಟೆಗೆ ಹಳೇಬೀಡನ್ನು ಮುಟ್ಟಿದೆವು.

ಹಳೇಬೀಡಿಗೆ ಹೋದೊಡನೆಯೇ ನನಗೆ ಹಿಂದೆ ನಡೆದುದೆಲ್ಲಾ ಜ್ಞಾಪಕಬಂದಿತು. ಗುಂಡನು "ನಿನಗೇನು? ದೇವಸ್ಥಾನದಲ್ಲಿ ನೀನು ನೋಡಬೇಕಾದದ್ದೇನೂ ಇಲ್ಲ. ಆಗಲೇ ಒಂದುಸಲ ಪೂರ್ಣವಾಗಿ ಎಲ್ಲಾ ನೋಡಿಬಿಟ್ಟಿದ್ದೀಯೆ? ಎಂದ.

ನಾನು "ನನ್ನನ್ನು ಕೆಣಕಬೇಡ. ಅದರ ಫಲಕ್ಕೆ ಆಮೇಲೆ ನೀನೆ ಜವಾಬ್ದಾರನಾಗಬೇಕಾಗುತ್ತೆ” ಎಂದೆ.

ಇಬ್ಬರೂ ಮತ್ತೇನೂ ಮಾತನಾಡದೆ ದೇವಸ್ಥಾನದ ಕಡೆಗೆ ಹೊರಟೆವು, ಬೇಲೂರು ದೇವಾಲಯದ ಕಲೆಗಿಂತ ಹಳೇಬೀಡು ದೇವಾಲಯದ ಕಲೆಯು ಉತ್ತಮವಾದುದು; ಹೆಚ್ಚು ಸುಸಂಸ್ಕೃತವಾದುದು. ಗಂಭೀರವಾದುದು ಮತ್ತು ಆಳವಾದುದು. ಗುಂಡನು

“ನಾವು ಮೊದಲು ಬೇಲೂರನ್ನು ನೋಡಿದುದೇ ಚೆನ್ನಾಯಿತು. ಇಲ್ಲದಿದ್ದರೆ, ಇದನ್ನು ನೋಡಿದಮೇಲೆ ಇದರೆದುರಿಗೆ ಅದು ಬಹಳ ಅಲ್ಪವಾಗಿ ತೋರುತ್ತಿದ್ದಿತು” ಎಂದ.

ಈ ಚಿತ್ರದಲ್ಲಿ ಹಳೆಬೀಡಿನ ದೇವಾಲಯವನ್ನೆಲ್ಲಾ ವರ್ಣಿಸುವುದು ನನ್ನ ಉದ್ದೇಶವಲ್ಲ. ಕಲೆಯ ನೆಲೆಯಾದ ಆ ದೇವಾಲಯದಲ್ಲಿ ಪೂಜೆಯಿಲ್ಲ; ಗಂಟೆಯಿಲ್ಲ; ಗದ್ದಲವಿಲ್ಲ. ದೇವಾಲಯವು ವಿಧವೆಯ ಹಾಗೆ ಅಳುತ್ತಿರುವಂತೆ ತೋರಿತು. ಆ ಸೌಂದರ್ಯ ರಾಶಿಯೆಲ್ಲವೂ ವ್ಯರ್ಥ. ಹೇಳುವವರಿಲ್ಲ; ಕೇಳುವವರಿಲ್ಲ; ಬೇಕೆನ್ನುವವರಿಲ್ಲ; ಆದರಿಸುವವರಿಲ್ಲ. ಆ ಸೌಂದರ್ಯವನ್ನು ನೋಡಿದುದರಿಂದ ಉಂಟಾದ ಆನಂದದೊಂದಿಗೆ ಪ್ರತಿಕ್ಷಣದಲ್ಲಿಯೂ ಯಾವುದೊ ಒಂದು ವಿಧವಾದ ಅನಿರ್ವಚನೀಯವಾದ ದುಃಖವು ನಮ್ಮನ್ನು ಪೀಡಿಸುತ್ತಲೇ ಇದ್ದಿತು.

ನಾವು ದೇವಸ್ಥಾನವನ್ನು ಎರಡುಸಲ ಸುತ್ತಿದೆವು. ಆದರೂ ನಮಗೆ ತೃಪ್ತಿ ಆಗಲಿಲ್ಲ. ಹೊರಡುವುದಕ್ಕೆ ಮಾತ್ರ ಹೊತ್ತಾಯಿತು. ಅನಂತರ ಪ್ರಸಿದ್ದವಾದ ಜೈನ ಬಸ್ತಿಯ ಕಡೆಗೆ ಹೋದೆವು. ಅದರ ಬಾಗಲಿಗೆ ಬೀಗ ಹಾಕಿದ್ದಿತು. ಎದುರಿಗೆ ಒಂದು ಮನೆಯ ಮುಂದೆ ಹುಡುಗಿಯೊಬ್ಬಳು ಹಸುವಿನ ಹಾಲನ್ನು ಕರೆಯುತ್ತಿದ್ದಳು. ಅವಳ ಹೆಗಲಿನಮೇಲೆ ತಲೆಯನ್ನಿಟ್ಟು ಕರುವು ಹಸುವಿನ ಕಡೆಗೆ ಹಗ್ಗವನ್ನು ಜಗ್ಗುತ್ತಿತ್ತು. "ಬಸ್ತಿಯ ಬೀಗದಕ್ಕೆ ನಿನ್ನ ಬಳಿ ಇದೆಯೇನಮ್ಮಾ?” ಎಂದು ನಾನು ಆಕೆಯನ್ನು ಕೇಳಿದೆ. ಹುಡುಗಿಯು ಕತ್ತನ್ನು ಒಂದು ಕಡೆಗೆ ಕೊಂಕಿಸಿ "ನನ್ನ ಬಳಿ ಇಲ್ಲ” ಎಂದಳು. ಅವಳ ಮುಖದಲ್ಲಿ ಚೇಷ್ಟೆಯ ನಗೆ ತೋರಿತು. ಧ್ವನಿಯು ವಿನೋದದಿಂದ ಕೂಡಿತ್ತು. ಅವಳ ಬಳಿಯೇ ಬೀಗದಕ್ಕೆ ಇರಬಹುದೆಂದು ನಾವು ಯೋಚಿಸಿ ಅವಳು ಕರುವನ್ನು ಬಿಡುವವರೆಗೆ ಕದದ ಕಿಂಡಿಯಿಂದ ಒಳಗಡೆ ನೋಡುತ್ತಾ ನಿಂತಿದ್ದೆವು. ಅನಂತರ ನಾವು ನೂರಾರು ಮೈಲಿಯಿಂದ ಬಂದವರೆಂದು ಹೇಳಿ ಸ್ವಲ್ಪ ವಿನಯದಿಂದ ಅವಳನ್ನು ಬೇಡಿದುದಾಯಿತು. ಕತ್ತಿನ ನೂಲಿನಲ್ಲಿದ್ದ ಬೀಗದಕೈ ಹೊರಕ್ಕೆ ಬಂತು. ಗೋಮಟೇಶ್ವರನಿಗೆ ನಮ್ಮ ಮನ್ನಣೆಯನ್ನು ಸಲ್ಲಿಸಿ ಕಂಬದಲ್ಲಿ ಮುಖವನ್ನು ನೋಡಿಕೊಂಡು ಹೊರಕ್ಕೆ ಬಂದೆವು.

ಆ ವೇಳೆಗೆ ಗಂಟೆ ಹನ್ನೊಂದಾಯಿತು. ಆದರೆ ಆಕಾಶವು ಮೋಡಗಳಿಂದ ಕವಿದಿದ್ದುದರಿಂದ ನಮಗೆ ಬಿಸಲಿನ ಬೇಗೆಯು ಗೊತ್ತಾಗಲಿಲ್ಲ. ಬೇಲೂರು ಅಲ್ಲಿಂದ ಹತ್ತು ಮೈಲು ದೂರ ಮಾತ್ರ. “ನಡೆದುಕೊಂಡೇ ಹೊರಟುಹೋಗೋಣ, ಬಸ್ಸು ಬರೋದು ಸಾಯಂಕಾಲ; ಅಲ್ಲಿಯವರೆಗೆ ಇಲ್ಲಿ ಯಾತಕ್ಕೆ ನೊಣ ಹೊಡೆಯುತ್ತಿರಬೇಕು" ಎಂದ ಗುಂಡ.

ನಾನು “ಆಗಬಹುದು. ಆದರೆ ತಡಿಯಲಾರದ ಹಸಿವಲ್ಲ ನನಗೆ ಏನು ಮಾಡೋದು” ಎಂದೆ.

ಗುಂಡನು "ಏನು ರಾವಣನ ಹೊಟ್ಟೆಯೋ ನಿನಗೆ, ಹಸಿವು ಹಸಿವು ಅಂತ ಪ್ರಾಣಬಿಡ್ತೀಯ” ಎಂದ.

ನಮ್ಮ ಎದುರಿಗೆ ಒಂದು ಅಂಗಡಿಯಿದ್ದಿತು. “ಅಲ್ಲಿ ಬಾಳೆಯ ಹಣ್ಣನ್ನು ತೆಗೆದುಕೊಳ್ಳೋಣ” ಎಂದೆ. ಗುಂಡನು ಈ ಮಳೆಗಾಲದಲ್ಲಿ ಆ ಬಾಳೆಹಣ್ಣನ್ನು ತಿಂದರೆ ಹೊಟ್ಟೆಯೆಲ್ಲಾ ನಡುಗುವುದಕ್ಕೆ ಪ್ರಾರಂಭವಾಗುತ್ತದೆ. ನನಗೆ ಬೇಡ. ಬೇಕಾದರೆ ನೀನು ತೆಗೆದುಕೊ” ಎಂದ.

ಒಬ್ಬನಿಗೆ ಸಾಕೆಂದು ಒಂದು ಆಣೆಯನ್ನು ಕೊಟ್ಟು ೫ ಬಾಳೆಯ ಹಣ್ಣನ್ನೂ ಸ್ವಲ್ಪ ಬೆಲ್ಲವನ್ನೂ ಕೊಂಡುಕೊಂಡೆ. ಅರ್ಧ ಮೈಲು ಹೋದ ನಂತರ ರಸ್ತೆಯ ಪಾರ್ಶ್ವದ ದಿಣ್ಣೆಯ ಗರಿಕೆಯ ಮೇಲೆ ನನ್ನ ಕಂಬಳಿಯನ್ನು ಹಾಸಿ ಇಬ್ಬರೂ ಕುಳಿತುಕೊಂಡೆವು. ನಾನು ಬಾಳೆಯ ಹಣ್ಣನ್ನು ತಿನ್ನಲು ಪ್ರಾರಂಭಿಸಿದೆ. ಒಂದು ಹಣ್ಣನ್ನು ನಾನು ತಿಂದಕೂಡಲೆ ಗುಂಡನೂ ಒಂದು ಹಣ್ಣನ್ನು ತಿಂದನು. ನಾನು "ಹುಂ ಐದು ಇದ್ದದ್ದು ನಾಲ್ಕೆ ಆಯಿತು" ಎಂದುಕೊಂಡೆ. ತಿನ್ನುವ ಗಾಬರಿಯಲ್ಲಿದ್ದುದರಿಂದ ಆಗಲೇ ಗುಂಡನ ಮೇಲೆ ತಿರುಗಿ ಬೀಳಲು ಅವಕಾಶವಾಗಲಿಲ್ಲ. ಎರಡನೇ ಹಣ್ಣನ್ನು ನಾನು ತಿಂದ ಕೂಡಲೇ ಗುಂಡನೂ ಮತ್ತೊಂದು ಹಣ್ಣನ್ನು ತಿಂದುಬಿಟ್ಟನು. ಅನಂತರ ನನ್ನೊಂದಿಗೆ ಜಗಳವಾಡಿ ಮೂರನೆಯ ಹಣ್ಣಿನಲ್ಲೂ ಸಮವಾಗಿ ಅರ್ಧಪಾಲು ಕಿತ್ತುಕೊಂಡನು. "ಬಾಳೆಯ ಹಣ್ಣೇ ಬೇಡ. ಹೊಟ್ಟೆಯಲ್ಲಿ ನಡುಕ ಹುಟ್ಟುತ್ತೆ” ಎಂದಿದ್ದ ಗೃಹಸ್ಥ ಇವ. ಈ ಕಾಲದಲ್ಲಿ ಜನರು ತಾವು ಹೇಳಿದಂತೆ ಎಲ್ಲಿ ನಡೆಯುತ್ತಾರೆ. ನಾನು "ಅಲ್ಲಯ್ಯ ಪುಣ್ಯಾತ್ಮ ಅಲ್ಲೆ ಹೇಳಿದ್ರೆ ಇನ್ನೊಂದಾಣೆ ಹಣ್ಣು ತೆಗೆದು ಕೊಳ್ಳುತ್ತಿದ್ದೆನಲ್ಲ? ” ಎಂದೆ

ಗುಂಡನು "ನನಗೆ ಬೇಕಿರಲಿಲ್ಲ. ನೀನು ತಿನ್ನುತ್ತಿರುವಾಗ ಸುಮ್ಮನೆ ಹೇಗೆ ಕೂತಿರೋದು ಅಂತ ಒಂದು ಚೂರನ್ನು ತಿಂದೆ" ಎಂದ. ನಾನು “ನೀನು ತಿಂದದ್ದು ಒಂದು ಚೂರೇ ಹೌದು” ಎಂದುಕೊಂಡೆ. -

೧೦ ಮೈಲು ಇದ್ದ ಆ ದಾರಿಯಲ್ಲಿ ನಾವು ಚರ್ಚಿಸಿದ ವಿಷಯಗಳಿಗೆ ಮೇರೆ ಇಲ್ಲ. ಜೀವನ, ಮರಣ, ಕಲೆ, ದೇವರು, ಸಾಹಿತ್ಯ, ಸ್ವಾತಂತ್ರ್ಯ, ಹೊಯ್ಸಳರ ವೈಭವ-ಇವುಗಳ ಮೇಲೆಲ್ಲಾ ಯಥೇಚ್ಛವಾಗಿ ಉಪನ್ಯಾಸವನ್ನು ನಡೆಸಿದೆವು. ದಾರಿ ನಡೆದ ಶ್ರಮವೇ ಗೊತ್ತಾಗಲಿಲ್ಲ. ಎಷ್ಟು ಬೇಗ ೧೦ ಮೈಲು ಮುಗಿದುಹೋಯಿತು ಎನಿಸಿತು. ಬೇಲೂರಿಗೆ ಬರುವ ವೇಳೆಗೆ ಒಂದು ಗಂಟೆ ಆಗಿತ್ತು. ಆಗ ಮಳೆ ಸ್ವಲ್ಪ ಗಟ್ಟಿಯಾಗಿಯೆ ಬಂದಿತು. ಕಂಬಳಿ ಇತ್ತಲ್ಲ ಅದನ್ನೆ ಇಬ್ಬರೂ ನಿಲುವಂಗಿಯಂತೆ ಮೈಮೇಲೆ ಹಾಕಿಕೊಂಡುಬಿಟ್ಟೆವು. ಅಲ್ಲೊಂದು ಕಡೆ ಸ್ವಲ್ಪ ಹಲಸಿನತೊಳೆ ಕೊಂಡುಕೊಂಡೆವು. ಅದನ್ನು ತಿನ್ನುವಾಗಲೂ ಇದೇ ಬಗೆಯ ಕಾದಾಟ.

ಪುಣ್ಯಾತ್ಮ ಮೇಷ್ಟು ತುಂಬ ಬಿಸಿನೀರು ಕಾಯಿಸಿ ಇಟ್ಟಿದ್ದ. ಇಬ್ಬರೂ ಸ್ನಾನಮಾಡಿದೆವು. ನಮಗಂತೂ ಒಂದು ಊರನ್ನೇ ನುಂಗಿ ಬಿಡುವಷ್ಟು ಹಸಿವಾಗಿದ್ದಿತು. ಮೇಷ್ಟ್ರ ಹೆಂಡತಿ ಅಡಿಗೆಯನ್ನು ಚೆನ್ನಾಗಿಯೇ ಮಾಡಿದ್ದರು. ಆದರೆ ಪಾಪಿ ಸಮುದ್ರ ಹೊಕ್ಕರೂ ಮೊಣಕಾಲುದ್ದವೇ ನೀರು ಎಂಬಂತೆ, ಬಾಯಿಗೆ ಒಂದು ತುತ್ತು ಹಾಕುವುದರೊಳಗಾಗಿಯೇ ಬಸ್ಸು ಹಾಸನದ ಕಡೆಗೆ ಹೊರಟುಬಿಟ್ಟಿತು. ಗಡಿಬಿಡಿಯಿಂದ ಊಟವನ್ನು ಮುಗಿಸಿ ಮೇಷ್ಟರಿಗೂ ಅವನ ಹೆಂಡತಿಗೂ ವಂದನೆ ಹೇಳಿ ಬಸ್ಸು ಹತ್ತಿಬಿಟ್ಟೆವು. ಗುಂಡ ದಾರಿಯಲ್ಲಿ ೨-೩ ಸಲ "ಅಡಿಗೆ ಚೆನ್ನಾಗಿತ್ತು; ಆದರೆ ಹಾಳಾದ ಬಸ್ಸು ಊಟಮಾಡೋದಕ್ಕೆ ಅವಕಾಶಕೊಡಲಿಲ್ಲ" ಎಂದ. ಅಂತೂ ಸಂಧ್ಯಾಕಾಲ ೫ ಗಂಟೆಗೆ ಶಿವಳ್ಳಿಗೆ ಹಿಂದಿರುಗಿದೆವು.

ಆ ದಿವಸವೆಲ್ಲಾ ನನಗೆ ಬೇಲೂರು, ಹಳೇಬೀಡಿನ ಯೋಚನೆ ತಪ್ಪಲೇ ಇಲ್ಲ. ಯಾವಾಗಲೂ ಆ ದೇವಸ್ಥಾನಗಳು ಕಣ್ಣೆದುರಿಗೆ ಕಟ್ಟಿರುತ್ತಿದ್ದುವು. ಅವುಗಳನ್ನು ಮರೆತುಬಿಡಬೇಕೆಂದು ನಾನು ಪಟ್ಟ ಪ್ರಯತ್ನವೆಲ್ಲ ವ್ಯರ್ಥವಾಯಿತು. ನನ್ನ ಮಂಕು ಮುಖವನ್ನು ನೋಡಿ ನನ್ನ ಹೆಂಡತಿಯು ಮತ್ತಾವಾಗಲಾದರೂ ನನ್ನನ್ನು ತರಾಟೆಗೆ ತೆಗೆದುಕೊಂಡರೆ ಸರಿ ಎಂದು ಸುಮ್ಮನಾದಳು. ರಾತ್ರಿ ಹಾಸಿಗೆಯಲ್ಲಿ ಮಲಗಿ ಕಣ್ಣು ಮುಚ್ಚಿದಕೂಡಲೆ ದೇವಸ್ಥಾನಗಳೆರಡೂ ಕಣ್ಣೆದುರಿಗೆ ನಿಂತವು. ಆ ಬೇಲೂರು ದೇವಸ್ಥಾನದ ಸ್ತ್ರೀ ವಿಗ್ರಹವಂತೂ ನನ್ನನ್ನ ಬೇಟೆಯಾಡುವುದಕ್ಕೆ ಪ್ರಾರಂಭಿಸಿಬಿಟ್ಟಿತು. ನಿದ್ರೆಮಾಡಲು ನಾನು ಮಾಡಿದ ಪ್ರಯತ್ನ ಎಲ್ಲಾ ವ್ಯರ್ಥವಾಯಿತು. ಅರ್ಧ ನಿದ್ರೆ ಅರ್ಧ ಎಚ್ಚರ. ಕಣ್ಣನ್ನು ಮುಚ್ಚಿದ ಕೂಡಲೆ ಆ ಸ್ತ್ರೀ ವಿಗ್ರಹವು ನನ್ನೆದುರಿಗೆ ನಿಂತಿತು. ಇದ್ದಕ್ಕಿದ್ದಂತೆಯೇ ಅದು ಸಜೀವವಾಗಿ ಪೀತಾಂಬರವನ್ನು ಧರಿಸಿ, ಕಂಪಿನಿಂದಿಂದಾದ ಮಲ್ಲಿಗೆಯ ಮಲರನ್ನು ಮುಡಿದುಕೊಂಡು ನನ್ನೆದುರಿಗೆ ನರ್ತನ ಮಾಡಲಾರಂಭಿಸಿತು. ಆ ನರ್ತನವನ್ನು ನೋಡಿ ನಾನು ಮಗ್ನನಾದೆ. ಎಲ್ಲಿದ್ದೆನೆಂಬುದನ್ನೇ ಮರೆತೆ. ಆ ನರ್ತಕಿಯ ಜೊತೆಯಲ್ಲಿಯೇ ಗಾನ ಪ್ರಪಂಚದಲ್ಲಿಯೂ, ನರ್ತನ ಪ್ರಪಂಚದಲ್ಲಿಯೂ, ಕಲಾ ಪ್ರಪಂಚದಲ್ಲಿಯೂ ಸ್ವರ್ಗಲೋಕದ ಕಡೆಗೆ ಏರಿದೆ. ನರ್ತಕಿಯ ಒಂದೆರಡು ನೋಟದಿಂದಲೂ, ನಿಟ್ಟುಸಿರಿನಿಂದಲೂ ಭೂಮಿಯನ್ನು ಬಿಟ್ಟುಹೋಗಲು ಅವಳಿಗೆ ಸ್ವಲ್ಪ ಪಶ್ಚಾತ್ತಾಪವುಂಟಾಗಿರಬಹುದೆಂದು ತಿಳಿದೆ. ಸ್ವರ್ಗಲೋಕದ ಬಾಗಲಿಗೆ ನರ್ತಕಿಯು ಹೋದಕೂಡಲೆ ಆ ಬಾಗಲು ತೆರೆಯಿತು. ನರ್ತಕಿಯು ಒಳಕ್ಕೆ ಹೋದಳು. ನಾನೂ ಅವಳನ್ನು ಹಿಂಬಾಲಿಸಲು ಮುಂದುವರಿದೆ. ಆಗವಳು ಗಂಭೀರಭಾವದಿಂದ ಈ ರೀತಿ ಹೇಳಿದಳು:-

“ಕನ್ನಡಿಗರಲ್ಲಿ ಕಲಾಭಿವೃದ್ಧಿಯನ್ನೂ ಸೌಂದರ್ಯೋಪಾಸನೆಯ ಧೈಯವನ್ನೂ ಉಂಟುಮಾಡುವುದಕ್ಕಾಗಿ ನಾನು ಸ್ವರ್ಗಲೋಕದಿಂದ ಭೂಮಿಗೆ ಬಂದೆ. ಹಿ೦ದಲ ಅರಸರೂ, ಹಿಂದಲ ಪ್ರಜೆಗಳೂ ನನ್ನ ಮಾತಿಗೆ ಗೌರವವನ್ನಿತ್ತು ಕಲೆಯನ್ನು ಜೀವನದ ಒಂದು ಭಾಗವನ್ನಾಗಿ ಮಾಡಿಕೊಂಡಿದ್ದರು. ನಿಮಗೆ ಅದು ಬೇಕಿಲ್ಲ. ಅಂದಿನ ಅವರ ವೈಭವವನ್ನೂ ಇಂದಿನ ನಿಮ್ಮ ಅವನತಿಯನ್ನೂ ನೋಡಿ ಅತ್ತು ನನ್ನ ಕಣ್ಣು ಪೋಟೆಯಾಯಿತು. ಸೌಂದರ್ಯವೂ ಕಲೆಯೂ ಭಗವಂತನ ಮುಖ್ಯ ಅಂಶವೆಂಬುದನ್ನೇ ನೀವು ಮರೆತಿದ್ದೀರಿ. ಅರಸಿಕರ ಬಳಿ ನನಗೇನು ಕೆಲಸ? ಮರಳುಗಾಡಿನಲ್ಲಿ ಅರಳಿದ ಮಲ್ಲಿಗೆ ಇರಬಲ್ಲದೆ?” ಎಂದಳು.

ನಾನು ದೈನ್ಯದಿಂದ “ನಿನ್ನನ್ನು ಗೌರವಿಸುತ್ತೇನೆ. ಪೂಜಿಸುತ್ತೇನೆ; ಕಲೆಯ ನೆಲೆಯನ್ನರಿಯುತ್ತೇನೆ. ಬಾ” ಎಂದೆ.

ನರ್ತಕಿಯು ದುಃಖಪೂರ್ಣವಾದ ನಗೆಯಿಂದ “ನಿನ್ನೊಬ್ಬನಿಂದ ಏನಾದೀತು?” ಎಂದು ಹೇಳಿ ಒಳಕ್ಕೆ ಹೊರಟುಹೋದಳು. ಅವಳನ್ನು ಹಿಡಿದುಕೊಳ್ಳಲು ನಾನು ಕೈಗಳನ್ನು ಚಾಚಿದೆ. ಸ್ವರ್ಗದ ಬಾಗಿಲು ಮುಚ್ಚಿ ಹೋಯಿತು. ನಾನು ದುಃಖದಿಂದ

"ಅಯ್ಯೋ ಹೋದೆಯ; ಅಯ್ಯೋ ಹೋದೆಯ; ಹೋದೆಯ” ಎಂದುಕೊಂಡು ಕಣ್ಣು ಬಿಟ್ಟೆ. ಎದುರಿಗೆ ನನ್ನ ಹೆಂಡತಿಯು ನಿಂತಿದ್ದಳು.

ಆ ದಿವಸವೆಲ್ಲಾ ನರ್ತಕಿಯೂ ಅವಳ ಮಾತೂ ನನ್ನ ಮನಸ್ಸನ್ನು ಬಿಟ್ಟು ಹೋಗಲಿಲ್ಲ.

ನಮ್ಮ ಜೋಡಿದಾರರ ಕೆಲವು ಚಿತ್ರಗಳು


೧. ಈಜು ಕಲಿತ ಇತಿಹಾಸ

ಆಗ ಅವರಿಗೆ ವಯಸ್ಸು ೧೫ ಇದ್ದಿರಬಹುದು. ಹೊಟ್ಟೆಯು ಈಗಿನಂತೆ ಮಿತಿಮೀರಿ ಬೆಳೆದಿರಲಿಲ್ಲ. ಹುಡುಗರಾಗಿ ಎಲ್ಲರಂತೆ ಚಟುವಟಿಕೆಯುಳ್ಳವರಾಗಿದ್ದರು. ತೆಂಗಿನ ಮರಗಳನ್ನೂ, ಅಡಕೆಯ ಮರಗಳನ್ನೂ ಲೀಲಾಜಾಲವಾಗಿ ಹತ್ತಿಬಿಡುತ್ತಿದ್ದರು. ಈಜುವುದರಲ್ಲಿಯ ನಿಸ್ಸಿಮರಾಗಿದ್ದರು. ಅವರು ಈಜು ಕಲಿತದ್ದೇ ಒಂದು ಇತಿಹಾಸ. ಆದರೆ ಅದನ್ನು ನಾಲ್ಕು ಪದಗಳಲ್ಲಿ ಹೇಳಿ ಮುಗಿಸಿಬಿಡುತ್ತೇನೆ. ಅವರ ತಂದೆಯವರು ಅವರು ನದಿಯಲ್ಲಿ ಹೋಗಿ ಈಜಲು ಅವಕಾಶವನ್ನು ಕೊಡುತ್ತಿರಲಿಲ್ಲ. ಏಕೆಂದರೆ ಈಜು ಬಂದವರೇ ನೀರಿನಲ್ಲಿ ಬೇಗ ಸಾಯುತ್ತಾರೆಂದು ಅವರು ತೀರ್ಮಾನಿಸಿದ್ದರು. ಅವರ ಸ್ನೇಹಿತನೊಬ್ಬನಿಗೆ ಚೆನ್ನಾಗಿ ಈಜು ಬರುತ್ತಿತ್ತಂತೆ. ನದಿಯಲ್ಲಿ ಒಂದು ಬಂಡೆಯ ಮೇಲೆ ನಿಂತುಕೊಂಡು ನೀರಿನೊಳಕ್ಕೆ ಲಾಗಾ ಹಾಕಿದನಂತೆ. ತಲೆಯು ಕಲ್ಲಿಗೆ ಬಡಿದು ರಕ್ತಪ್ರವಾಹವು ಹೊರಟು ನದಿಯ ನೀರೆಲ್ಲಾ ಕೆಂಪಾಗಿಬಿಟ್ಟಿತಂತೆ. ಮತ್ತೊಬ್ಬ ಸ್ನೇಹಿತನು ತುಂಬು ಹೊಳೆಯಲ್ಲಿ ನದಿಯನ್ನು ಒಂದು ದಡದಿಂದ ಮತ್ತೊಂದು ದಡಕ್ಕೆ ಈಜುವುದಕ್ಕೆ ಹೋಗಿ ತೇಲಿಯೇ ಹೋದನಂತೆ. ಆದುದರಿಂದ ಅವರು, ಮಗನು ನದಿಗೆ ಸ್ನಾನಕ್ಕೆ ಹೋದರೆ ನಿರ್ದಾಕ್ಷಿಣ್ಯವಾಗಿ ಕೈಕಾಲುಗಳನ್ನು ತುಂಡುಹಾಕಿಬಿಡುತ್ತೇನೆಂದು ಘರ್ಜಿಸುತ್ತಿದ್ದರು. ಆದರೆ ಅವರ ಮಗನಿಗೆ ಗೊತ್ತು, ತನ್ನ ಕೈಕಾಲು ತುಂಡುಬೀಳುವುದಿಲ್ಲವೆಂದು. ಆದರೆ ಬೆತ್ತದಿಂದ ನಿರ್ದಯವಾಗಿ ಏಟುಗಳು ಬೀಳುತ್ತವೆಂಬುದೂ ಅವನಿಗೆ ಗೊತ್ತು. ಆ ಏಟುಗಳನ್ನು ತಿಂದು ಅವನ ಮೈ ಜಡ್ಡುಗಟ್ಟಿ ಹೋಗಿತ್ತು. ಏನಾದರೂ ಆಗಲಿ ಈಜು ಕಲಿತೇಬಿಡುತ್ತೇನೆಂದು ಅವನು ನಿಶ್ಚಯಿಸಿದನು. ಇದಕ್ಕಾಗಿ ಸ್ಕೂಲು ಬಿಟ್ಟನಂತರ ಪ್ರತಿದಿನವೂ ಗುಟ್ಟಾಗಿ ಹೊಳೆಗೆ ಹೋಗುತ್ತಿದ್ದನು. ಅವರ ಮನೆಯಲ್ಲಿ ಅವರ ಭಾವನ ದೂರದ ಸಂಬಂಧದ ಯಾರೋ ಒಬ್ಬ ಮುದುಕಿಯಿದ್ದಳು. ಅವಳಿಗೆ ವಯಸ್ಸು ಸುಮಾರು ೬೦ ಇದ್ದಿರಬಹುದು. ಆದರೆ ಆಗಲೂ ಅರೋಗ ದೃಢಕಾಯಳಾಗಿದ್ದಳು. ಪ್ರತಿದಿನವೂ ನದಿಗೆ ಹೋಗಿ ಸ್ನಾನಮಾಡಿಕೊಂಡು ಬರುತ್ತಿದ್ದಳು. ಅವಳನ್ನು ಕಂಡರೆ ಜೋಡಿದಾರನಿಗೆ ಮೈಯೆಲ್ಲಾ ಉರಿಯುತ್ತಿದ್ದಿತು. ಇವನು ನದಿಗೆ ಹೋದ ದಿವಸಗಳಲ್ಲೆಲ್ಲಾ, ಅವಳ ಕಣ್ಣಿಗೆ ಇವನು ಬೀಳುತ್ತಲೇ ಇದ್ದನು. ಇವನನ್ನು ಕಂಡಕೂಡಲೆ ಅವಳು ಮನೆಗೆ ಬಂದು "ನಿಮ್ಮ ಹುಡುಗ ಹೊಳೆಗೆ ಹೋಗಿದ್ದಾನೆ. ಇನ್ನು ಮಧ್ಯಾಹ್ನದವರೆಗೆ ಈಜುತ್ತಾನೆ. ಅದಕ್ಕೆ ಅಷ್ಟು ಚಳಿ” ಎಂದುಬಿಡುತ್ತಿದ್ದಳು. ಸರಿ ದೊಡ್ಡ ಜೋಡಿದಾರರು ಬೆತ್ತವನ್ನು ಸಿದ್ಧಮಾಡಿಕೊಂಡು ಇವನು ಬರುವುದನ್ನೇ ಕಾಯುತ್ತಾ ಕುಳಿತಿರುತ್ತಿದ್ದರು. ಅಪರಾಧಿಯಾದ ಹುಡುಗನಿಗೆ ಅವರು ಬಾಗಲಿನಲ್ಲಿ ಕುಳಿತಿದ್ದರೆ ಒಳಕ್ಕೆ ಬರಲು ಧೈರ್‍ಯವುಂಟಾಗುತ್ತಿರಲಿಲ್ಲ. ಹಿತ್ತಲಿನ ಕಡೆ ಒಂದು ಬಾಗಲಿದೆ. ಆ ಬಾಗಲಿಗೆ ಬರಬೇಕಾದರೆ ಊರ ಸುತ್ತ ಮತ್ತೆ ಸುತ್ತಿಕೊಂಡು ಬರಬೇಕು. ಆದರೂ ನಮ್ಮ ಹುಡುಗ ಊರು ಸುತ್ತಿಕೊಂಡೇ ಹಿತ್ತಲಿನ ಬಾಗಲಿಗೆ ಬರುತ್ತಲಿದ್ದ. ಬಾಗಿಲು ಹಾಳಾದ್ದು ಎಷ್ಟು ಮೆಲ್ಲಗೆ ತೆರೆದರೂ ಗೊರ್ ಅಂತ ಶಬ್ದಮಾಡಿಯೇ ಬಿಡುತ್ತಿದ್ದಿತು. ಸರಿ ಜೋಡಿದಾರರು ಒಳಕ್ಕೆ ಬರುತ್ತಿದ್ದರು. ಛಡಿ ಏಟು. ಮುದುಕಿಯ ಕಣ್ಣಿನಿಂದಲಂತೂ ಅವನಿಗೆ ತಪ್ಪಿಸಿಕೊಳ್ಳುವುದಕ್ಕೆ ಆಗಲಿಲ್ಲ. ಅವಳು ಇವನ ಚಿತ್ರಗುಪ್ತನಾಗಿಬಿಟ್ಟಳು. ಅವಳಿಗೆ ಕಾಣದಂತೆ ಇವನು ಪೇಟೆಯಲ್ಲಿ ಹೋದರೆ, ಆ ದಿವಸ ಕೋಟೆಯಲ್ಲಿ ಆದಿಕರ್ನಾಟಕರ ಗಲಾಟೆಯೆಂದು ಅವಳೂ ಪೇಟೆಯಲ್ಲಿಯೇ ಬಂದುಬಿಡುತ್ತಿದ್ದಳು. ನದಿಯ ತೀರದಲ್ಲಿ ಒಂದು ದೇವಾಲಯವಿದೆ. ಆ ದೇವಾಲಯದಲ್ಲಿ ಅಡಗಿಕೊಂಡಿದ್ದು, ಮುದುಕಿಯು ಮನೆಗೆ ಹೊರಟು ಹೋದ ಮೇಲೆ ತಾನು ನದಿಗೆ ಹೋಗೋಣ, ಇವಳ ಕಾಟ ತಪ್ಪುತ್ತೆ ಎಂದು ದೇವಾಲಯಕ್ಕೆ ಹೋದರೆ ರಾಮೇಶ್ವರಕ್ಕೆ ಹೋದರೂ ಶನೀಶ್ವರನ ಕಾಟ ತಪ್ಪಲಿಲ್ಲವೆಂಬಂತೆ ದೇವಸ್ಥಾನದ ಬಾಗಲಿನಲ್ಲಿ ಅವಳೂ ಕಂಡುಬಿಡುತಿದ್ದಳು. ಈ ಮುದಿಗೂಬೆಯು ನನಗೆ ಗುಪ್ತ ಪೋಲಿಸ್ ಆಗಿಬಿಟ್ಟಳಲ್ಲಾ, ಎಂದು ಇವನಿಗೆ ಕೋಪ. ಆದರೆ ವಿಧಿಯಿಲ್ಲ. ಏಟು ತಿಂದು ಮೈ ಜಡ್ಡುಗಟ್ಟಿಹೋಯಿತು. ಒಂದು ದಿವಸ ಭಾಷ್ಯಕಾರ ತಿರುನಕ್ಷತ್ರ. ನಾಮದ ಅಯ್ಯಂಗಾರಿಗಳಿಗೆ ಭಾಷ್ಯಕಾರರ ತಿರುನಕ್ಷತ್ರವೆಂದರೆ ೧೦ ಉಂಡೆ ನಾಮ, ಒಂದು ಸೇರು ಕುಂಕುಮ ವೆಚ್ಚ, ಇದು ಅಯ್ಯಂಗಾರಿಗಳಿಗೆ ಒಂದು ವಿಧವಾದ ಮೊಹರಂ. ಮೈಗೆ ಕೆಂಪು ಬಿಳುಪು ನಾಮ ಬಳಿದಿದ್ದೂ ಬಳಿದಿದ್ದೆ. ನೋಡಿದವರಿಗಂತೂ ಗಾಬರಿಯಾಗಿಬಿಡುತ್ತೆ. ಹೀಗೆ ನಾಮ ಹಾಕಿದ ಅಣ್ಣ ತಮ್ಮಂದಿರನ್ನು ಕಂಡು ಎಷ್ಟೋ ಮಕ್ಕಳು ಚಿಟ್ಟನೆ ಚೀರಿದುದುಂಟು. ಆದರೆ ನಮಗೆಲ್ಲಾ ಆ ದಿವಸ ಆನಂದ. ಆ ದಿವಸದ ಈ ಬಣ್ಣ ಬಳಿದುಕೊಳ್ಳುವುದಕ್ಕೆ ಎರಡು ಮೂರು ಮನೆಗಳು ಗೊತ್ತು. ಆ ಮನೆಯವರೇ ಆ ದಿವಸ ನಾಮ ಒದಗಿಸಿಕೊಡುತ್ತಾರೆ. ಇದು ಬಹಳ ಪುಣ್ಯ ಕೆಲಸವೆಂದು ಪರಿಗಣಿಸಲ್ಪಟ್ಟಿದೆ. ನಾಮವಿಡುವುದರಲ್ಲಿ ಪ್ರಸಿದ್ಧರಾದ ೨-೩ ಕಲಾವಿದರು ಈ ಕೆಲಸವನ್ನು ಪ್ರಾರಂಭಿಸಿ ಬಂದವರಿಗೆಲ್ಲಾ ನಾವು ಹಾಕಲು ಮೊದಲುಮಾಡುತ್ತಾರೆ. ಇದರಲ್ಲಿ ಬಗೆ ಬಗೆಯ ಕ್ರಮಗಳುಂಟು. ನಾಮವನ್ನು ಒಂದು ಕ್ರಮದಲ್ಲಿಯೇ ಹಾಕಬೇಕೆಂದು ನಮ್ಮ ಶಾಸ್ತ್ರದಲ್ಲಿ ಹೇಳಿದೆ. ಆದರೆ ಈ ಹಬ್ಬದ ದಿವಸ ಅದನ್ನು ಅನುಸರಿಸಬೇಕಾದುದಿಲ್ಲ. ಅದು ಕೇವಲ ವ್ರತಾದಿಗಳಿಗೆ ಮಾತ್ರ ಅನ್ವಯಿಸತಕ್ಕದ್ದು. ಈ ದಿವಸ ಯಾವ ಕ್ರಮದಲ್ಲಿ ಬೇಗ ನಾಮಗಳನ್ನು ಹಾಕಬಹುದೋ ಆ ಕ್ರಮವನ್ನು ಅನುಸರಿಸುತ್ತಿದ್ದರು. ಒಬ್ಬನು ದೇಹದ ಒಂದೊಂದು ಅವಯವಕ್ಕೂ ನಾಮ, ಶ್ರೀಚೂರ್ಣಗಳನ್ನು ಬೇಗ ಬೇಗ ಬಳಿಯುತ್ತಿದ್ದನು. ಮತ್ತೊಬ್ಬನು ಎಲ್ಲರ ತೋಳಿಗೂ ಒಂದು ಕಡೆಯಿಂದ ಬಿಳೇ ನಾಮವನ್ನು ಹಾಕುತಿದ್ದನು. ಅನಂತರ ಬೆನ್ನು ಹೊಟ್ಟೆ ಕತ್ತು ಈ ಕ್ರಮದಲ್ಲಿ ಸಾಗುತ್ತಿದ್ದಿತು. ಕೆಲವರಿಗಂತೂ ಹಣೆಯು ಇನ್ನೂ ಅಗಲವಾಗಿಲ್ಲವಲ್ಲಾ ಎಂದು ದುಃಖವುಂಟಾಗಿದ್ದಿತು. ಹಣೆಯ ಎರಡು ಕಡೆಯೂ ಅದು ಇರುವಷ್ಟು ಅಗಲವೂ ಬಿಳೆಯ ನಾಮ, ಮಧ್ಯೆ ಒಂದು ಅಂಗುಲ ಅಗಲ ಕೆಂಪು ನಾಮ, ಊರಿನ ಎಲ್ಲಾ ಹುಡುಗರಿಗೂ ಆ ದಿವಸ ಹನ್ನೆರಡು, ಹದಿನಾಲ್ಕು, ಹದಿನೆಂಟು ನಾಮ. ಅನಂತರ ಹುಡುಗರು ಊರಿನ ಸುತ್ತ ಅವ್ಯವಸ್ಥೆಯಿಂದ ರಾಮಾನುಜ ಎಂದು ಕಿರಚುತ್ತಿದ್ದರು. ಈಚೆಗೆ ನಮ್ಮ ಮಣೆಗಾರರು ಆ ಅವ್ಯವಸ್ಥೆಗೆ ಒಂದು ವ್ಯವಸ್ಥೆಯನ್ನು ಕೊಟ್ಟರು. ಈ ರೀತಿಯಾಗಿ ನಾಮಧಾರಿ ಗಳಾದ ಈ ಪಟಾಲಂ ಪೈಕಿ ಒಬ್ಬರಿಗೆ ಭಾಷ್ಯಕಾರರೆಂದು ಹೆಸರಿಟ್ಟು, ಅವರಿಗೆ ಜಡೆ ಹೆಣೆದು, ಕೈನಲ್ಲಿ ಮಣಿಯ ಸರವೊಂದನ್ನು ಕೊಟ್ಟರು. ಮತ್ತೊಬ್ಬನು ಅವರ ಶಿಷ್ಯ. ಅವನ ಕೈನಲ್ಲಿ ಒಂದು ಕೃಷ್ಣಾಜಿನವನ್ನು ಕೊಟ್ಟರು. ಅವರ ಪರಿವಾರಕ್ಕೆ ಸೇರಿದ ಮತ್ತೊಬ್ಬನ ಕೈನಲ್ಲಿ ಒಂದು ತಿರುಪ ಕೂಡೆ; ಅದರೊಳಗೆ ನಾಮ ಮುಂತಾದ ಅಯ್ಯಂಗಾರರ ಆವಶ್ಯಕ ವಸ್ತುಗಳು. ಒಂದು ರಾಮಾನುಜಾಚಾರ್‍ಯರ ಚಿತ್ರಪಟ. ಇಷ್ಟನ್ನೂ ತೆಗೆದುಕೊಂಡು ಈ ಅವ್ಯವಸ್ಥಿತವಾಗಿ ಕೆಲವು ವೇಳೆ ಭಯಂಕರವಾಗಿ ಕೂಗುತ್ತಿದ್ದ ಬಾಲಕರ ತಂಡವು ಪ್ರತಿ ಮನೆಗೂ ಹೋಗುತ್ತಿದ್ದಿತು. ಮೊದಲು ಹೋಗಬೇಕಾದವನು ಕೃಷ್ಣಾಜಿನದ ಶಿಷ್ಯ. ಅವನು ಹೋಗಿ ಮನೆಯಲ್ಲಿ ಪ್ರಶಸ್ತವಾದ ಸ್ಥಳದಲ್ಲಿ ಕೃಷ್ಣಾಜಿನವನ್ನು ಹಾಸುವುದು. ಆಮೇಲೆ ಪಟದ ಶಿಷ್ಯನು ಪಟವನ್ನು ಅದರ ಒಂದು ತುದಿಯಲ್ಲಿ ಗೋಡೆಗೆ ಒರಗಿಸಿಡುವುದು. ಭಾಷ್ಯಕಾರರು ಕೈಯಲ್ಲಿ ಮಣಿಯ ಸರವನ್ನು ಹಿಡಿದುಕೊಂಡು ಗಂಭೀರ ಭಾವದಿಂದ ಪಟದ ಮುಂದೆ ಕೃಷ್ಣಾಜಿನದ ಮೇಲೆ ಕುಳಿತು, ಕೈಯನ್ನು ಮುಗಿದುಕೊಂಡು ಕಣ್ಣು ಮುಚ್ಚಿ ಮಣಿಯನ್ನು ಒಂದೊಂದಾಗಿ ಎಣಿಸುತ್ತಾ ಪಿಟಿಪಿಟಿಗುಟ್ಟುವುದು, ಶಿಷ್ಯರೆಲ್ಲಾ ರಾಮಾನುಜ ಎಂದು ಕೂಗಿ ನಮಸ್ಕಾರ ಮಾಡುವುದು; ಪಾಪ ಈ ಭಾಷ್ಯಕಾರನಿಗೆ ಒಂದೊಂದು ವೇಳೆ ತಡೆಯಲಾರದ ನಗುವು ಬಂದುಬಿಡುತ್ತದೆ. ನಗುವುದಕ್ಕೆ ಅವಕಾಶವಿಲ್ಲ. ಸಂನ್ಯಾಸಿಯ ಯೋಗ್ಯತೆಯನ್ನೂ ಗಾಂಭೀರ್ಯವನ್ನೂ ಉಳಿಸಿಕೊಳ್ಳಬೇಕು. ಏನುಮಾಡುವುದು? ಒಂದೊಂದುಸಲ ಆ ನಗುವು ದಾರಿತಪ್ಪಿ ಹೋಗಿ ದೊಡ್ಡ ಕೆಮ್ಮಲಾಗಿಬಿಡುತ್ತಿದ್ದಿತು. ಭಾಷ್ಯಕಾರರಾಗುವುದು ದೊಡ್ಡ ಗೌರವ. ನನಗೂ ಒಂದುಸಲ ಆ ವೇಷ ಹಾಕಿಬಿಟ್ಟಿದ್ದರು. ನನ್ನ ಅವಸ್ಥೆ ಕೇಳಬೇಡಿ. ನಾನು ಗಂಭೀರವಾಗಿರಬೇಕೆಂದು ಮಾಡಿದ ಪ್ರಯತ್ನವೆಲ್ಲಾ ವ್ಯರ್ಥವಾಯಿತು. ಪ್ರತಿಯೊಂದು ಮನೆಯಲ್ಲಿಯ ಭಾಷ್ಯಕಾರರಿಗೆ ಒಂದು ಸೇರು ಅಕ್ಕಿ, ಒಂದಾಣೆ ಕಾಣಿಕೆ; ಕಾಣಿಕೆಯಲ್ಲ ವಸೂಲಿ. ಏಕೆಂದರೆ ಕೊಡದೆ ಇದ್ದರೆ ಹುಡುಗರು ಬಿಡಬೇಕಲ್ಲ; ರಾಮಾನುಜ ಎಂದು ಮನೆಯ ಹೆಂಚು ಹಾರಿಹೋಗುವಂತೆ ಕೂಗಿ ಕಿವಿಗೆ ಚಿಟರು ಹತ್ತಿಸಿಬಿಡುತ್ತಾರೆ. ಆ ಆಣೆ ಮತ್ತು ಅಕ್ಕಿಯನ್ನು ಉಪಯೋಗಿಸಿ ಈ ಭಾಷ್ಯಕಾರರ ಶಿಷ್ಯರು ಮಾರನೆ ದಿವಸ ಹುಳಿಯನ್ನ ಮಾಡಿಸಿ ಹೊಡೆದು ಬಿಡುತ್ತಾರೆ. ಅಥವ ಬಡಬಗ್ಗರಿಗೆ ಕೊಡುವುದೂ ಉಂಟು.

ಇಂತಹ ಒಂದು ತಿರುನಕ್ಷತ್ರದ ದಿವಸ ಜೋಡಿದಾರರು (ಅಂದರೆ ಚಿಕ್ಕ ೧೫ ವರುಷದ ಈ ಹುಡುಗ. ಈಗಿನ ಜೋಡಿದಾರ) ಎಲ್ಲರಂತೆ ನಾಮದ ಬಣ್ಣ ಹಾಕಿಕೊಂಡಮೇಲೆ, ಆ ದಿವಸ ಅವನನ್ನೇ ಭಾಷ್ಯಕಾರನನ್ನಾಗಿ ಆರಿಸಿಬಿಟ್ಟರು. ಅವನು ಗಂಭೀರನಾಗಿಯೇ ಇದ್ದ. ಕೆಲವು ಮನೆಗಳಲ್ಲಿ ಸ್ತ್ರೀಯರೂ ಸಹ ಇವನಿಗೆ ಅಡ್ಡಬಿದ್ದರು. ಉಳಿದ ಕೆಲವರು ಇವನು ರಾಮಾನುಜಾಚಾರ್ಯರಂತೆಯೇ ಕಾಣುತ್ತಾನೆ ಎಂದರು. ಅವರ ತಂದೆಯವರಿಗೂ ಕೂಡ ಇವನ ವೇಷವನ್ನೂ ಗಾಂಭೀರವನ್ನೂ ನೋಡಿ ಆನಂದವಾಯಿತು. ಊರು ಒಂದು ಸುತ್ತು ಬರುವ ವೇಳೆಗೆ ೫ ಗಂಟೆಯಾಯಿತು. ದೇವರ ಉತ್ಸವವು ರಾತ್ರಿ ೮ ಗಂಟೆಗೆ ಮುಂಚೆ ಹೊರಡುವುದಾಗಿರಲಿಲ್ಲ. ೮ ಗಂಟೆಯವರೆಗೆ ಮಾಡುವುದೇನೆಂದು ಈ ಅಭಿನವ ಭಾಷ್ಯಕಾರನು ತನ್ನ ೩ ಜನ ಸ್ನೇಹಿತರೊಂದಿಗೆ ಆಲೋಚಿಸಿದನು. ಅಷ್ಟು ಹೊತ್ತಿಗೆ ನಾಮದಿಂದ ಮೈ ಬಿಗಿಯಹತ್ತಿತು. ಗಟ್ಟಿಯಾಗಿ ಕೂಗುತ್ತ ಊರೆಲ್ಲಾ ಅಲೆದುದರಿಂದ ಶಖೆಯಾಗಿ ಮೈ ಬೆವತಿತು. ಸ್ನೇಹಿತನೊಬ್ಬನು “ಬನ್ನಿ ನದಿಗೆ ಹೋಗಿ ಈಜೋಣ" ಎಂದನು. ಆ ಸೂಚನೆಯನ್ನು ಎಲ್ಲರೂ ಒಪ್ಪಿದರು. ಜೋಡಿದಾರನೊಂದಿಗೆ ಅವನ ೩ ಜನ ಸ್ನೇಹಿತರೂ ನದಿಯ ಬಳಿಗೆ ಹೋದರು. ಅಲ್ಲಿ ಸಂಧ್ಯಾವಂದನೆಗೆಂದು ಹೋಗಿದ್ದ ಊರಿನವರನೇಕರು ನಶ್ಯವನ್ನು ತೀಡುತ್ತಾ ಕುಳಿತಿದ್ದರು. “ಇದು ಪ್ರಯೋಜನವಿಲ್ಲ. ಪೂರ್ವದಿಕ್ಕಿನ ಕಾಲುವೆಗೆ ಹೋಗಿಬಿಡೋಣ. ಅರಸನ ಅಂಕೆ ಇಲ್ಲ. ದೆವ್ವದ ಕಾಟವಿಲ್ಲ. ಹೇಳೋರಿಲ್ಲ ಕೇಳೋರ್‍ಮೊದಲೇ ಇಲ್ಲ. ಅಲ್ಲದೆ ಕಾಲುವೆಯ ಸೇತುವೆಯ ಕೆಳಗೆ ಈಜಲು ಬಹಳ ಆನಂದ. ಸೇತುವೆಗೆ ನೀರು ತಗಲಿ ಡಬ ಡಬ ಎಂದು ಸದ್ದಾಗುವುದು. ರಾತ್ರಿ ಉತ್ಸವದ ಓಲಗ ಕೇಳಿಸುವವರೆಗೆ ಈಚಾಡೋಣ ಬನ್ನಿ” ಎಂದು ಎಲ್ಲರೂ ಹೊರಟುಹೋದರು.

ಸೂರ್‍ಯನು ಮುಳುಗುವುದರಲ್ಲಿದ್ದನು. ಅವನ ಹೊನ್ನಿನ ಕಿರಣವು ಬೆಟ್ಟದ ತುದಿಯಲ್ಲಿಯೂ, ಮರಗಳ ಎಲೆಗಳ ಅಂಚಿನಲ್ಲಿಯೂ, ಹೋಗಲೋ ಬೇಡವೋ ಎಂದು ಯೋಚಿಸುತ್ತಾ ನಿಂತಿದ್ದಿತು. ಸಂಧ್ಯಾಕಾಲಕ್ಕೆ ಸ್ವಭಾವವಾದ ಒಂದು ವಿಧವಾದ ಮೌನವೂ ಶಾಂತತೆಯ ಪ್ರಪಂಚವನ್ನೆಲ್ಲಾ ಆವರಿಸಿದ್ದಿತು. ಆ ಸಂಧ್ಯೆಯ ಗಾಂಭೀರ್‍ಯವನ್ನು ಭೇದಿಸಬಾರದೆಂದು, ಇರುಳು ಹೆಣ್ಣು ಮೆಲ್ಲಗೆ ಹೆಜ್ಜೆಯ ಮೇಲೆ ಹೆಜ್ಜೆಯನ್ನಿಡುತ್ತಾ ಬರುತ್ತಿರುವುದು ಕೇಳಿಸುವಂತಿದ್ದಿತು. ಬೆಳ್ಳಹಕ್ಕಿಗಳ ಸಾಲೊಂದು ಸಿಪಾಯಿಗಳೋಪಾದಿಯಲ್ಲಿ ನೇರವಾಗಿ ಪಶ್ಚಿಮದ ಕಡೆಗೆ ಹಾರುತ್ತಿದ್ದಿತು. ಕಾಳಿನಿಂದ ಬಗ್ಗಿದ ಪೈರಿನ ಮೇಲೆ ತಂಗಾಳಿಯು ಬೀಸಿದ ಕೂಡಲೆ, ಅದು ಆಚೆ ಈಚೆ ಬಗ್ಗಿ, ಮಧ್ಯದಲ್ಲೊಂದು ದಾರಿಯನ್ನು ಬಿಟ್ಟು, ಹೆದರಿ ಹೆದರಿ ಹೆಜ್ಜೆಯಿಕ್ಕುತ್ತಿರುವ ಇರುಳಿಗೆ, ಸುಸ್ವಾಗತವನ್ನು ಮಾಡುವಂತೆ ತಲೆಯಲ್ಲಾಡಿಸುತ್ತಿದ್ದಿತು. ಪ್ರಕೃತಿಯ ಈ ಬೆಡಗಿನ ಕಡೆಗೆ ಹುಡುಗರ ಲಕ್ಷ್ಯವಿರಲಿಲ್ಲ. ಅವರೆಲ್ಲರೂ ಒಂದು ಮರದ ಕೆಳಗೆ ಸ್ವಲ್ಪ ದೂರದಲ್ಲಿ ಬಟ್ಟೆಗಳನ್ನು ತೆಗೆದಿಟ್ಟು ಈಜುವುದಕ್ಕೆ ಪ್ರಾರಂಭಿಸಿದ್ದರು. ಒಬ್ಬರೊಂದಿಗೊಬ್ಬರು ಯಾರು ಹೆಚ್ಚು ಹೊತ್ತು ಮುಳುಗುತ್ತಾರೆಂದು ಹುರುಡು ಕಟ್ಟಿಕೊಂಡು ಈಜುತ್ತಿದ್ದರು. ಆದರೆ ಆ ಅಭಿನವ ಭಾಷ್ಯಕಾರನಿಗೆ ಆ ದಿವಸವೂ ಗ್ರಹಚಾರ ತಪ್ಪಿದುದಾಗಿರಲಿಲ್ಲ. ನಮ್ಮೂರ ಶಾನುಭೋಗ ರಾಮೋಹಳ್ಳಿಗೆ ಹೋಗಿದ್ದವನು ಆ ದಾರಿಯಲ್ಲಿ ಊರ ಕಡೆಗೆ ಬರುತ್ತಿದ್ದ. ಪುಣ್ಯಾತ್ಮ ತನ್ನ ದಾರಿ ತಾನು ಹಿಡಿದುಕೊಂಡು ಹೋಗಬಹುದಾಗಿತ್ತು. ಹಾಗೆ ಮಾಡಲಿಲ್ಲ. ಸುತ್ತಲೂ ನೋಡಿದ, ಹುಡುಗರು ಈಜುತ್ತಿರುವದು ಕಣ್ಣಿಗೆ ಬಿತ್ತು. ಮನಸ್ಸಿನಲ್ಲಿಯೇ ನಗುತ್ತಾ ಮರದ ಕೆಳಗಡೆ ಇಟ್ಟಿದ್ದ ಬಟ್ಟೆಯ ಗಂಟನ್ನು ಕಂಕುಳಲ್ಲಿ ಇರಿಕಿಕೊಂಡು ಊರ ಕಡೆಗೆ ಹೊರಟುಹೋದ. ಹುಡುಗರು ಮನದಣಿಯ ಈಜಾಡಿ ಮೈಕೈ ನೋವೆಲ್ಲಾ ಹೋಗಿಸಿಕೊಂಡು, ಮೇಲಕ್ಕೆ ಬಂದು ನೋಡುತಾರೆ! ಬಟ್ಟೆಗಳೊಂದೂ ಇಲ್ಲ. ಈ ಗೋಪಿಯರನ್ನು ಮೋಹಿಸಿದ ಕೃಷ್ಣನಾರೊ? ಎಂಬ ಸಂಶಯವುಂಟಾಯಿತವರಿಗೆ. ಸುತ್ತ ಎಲ್ಲಾದರೂ ಮರದ ಮೇಲಾದರೂ ಕೃಷ್ಣ ಕುಳಿತಿದ್ದಿದ್ದರೆ, ಹೋಗಿ ಅವನ ಕಾಲು ಹಿಡಿದು ಕೊಂಡು ಬೇಡಿ ಕಾಡಿ ದಮ್ಮಯ್ಯ ಗುಡ್ಡೆಹಾಕಿ ಬಟ್ಟೆಗಳನ್ನು ಹಿಂದಕ್ಕೆ ಪಡೆಯಬಹುದಾಗಿದ್ದಿತು. ಆದರೆ ಈಗ ಆ ಕೃಷ್ಣನ ಹೆಸರೂ ಇಲ್ಲ. ಉಸಿರೂ ಇಲ್ಲ. ಪಾಪ! ಲಂಗೋಟಿಯ ಹೊರತು ಅವರ ಮೈಮೇಲೆ ಮತ್ತಾವುದೂ ಬಟ್ಟೆಗಳಿರಲಿಲ್ಲ. ಅವರಿಗೆ ಚಳಿಯ ಭಯ ಅಷ್ಟೇನೂ ಇರಲಿಲ್ಲ. ಆದರೆ ಒಂದು ಮೈಲು ನಡೆದುಕೊಂಡು ಊರಿಗೆ ಹೋಗಬೇಕಲ್ಲ? ಈ ನಿರ್ವಾಣದಲ್ಲಿ ಹೋಗುವುದೆಂತು? ಎಂಬುದೇ ದೊಡ್ಡ ಪ್ರಶ್ನೆ ಯಾಯಿತು. ಜೋಡಿದಾರನಿಗಂತೂ ಇಲ್ಲಿಗೂ ನಮ್ಮ ಮನೆ ಮುದುಕಿಯು ಬಂದಿದ್ದಳೇನೋ ಎಂಬ ಸಂದೇಹವುಂಟಾಯಿತು. ಊರೊಳಕ್ಕೆ ಒಬ್ಬನು ಹೋಗಿ ಎಲ್ಲರ ಬಟ್ಟೆಗಳನ್ನೂ ತರಬೇಕೆಂದು ಜೋಡಿದಾರನು ಸೂಚಿಸಿದನು. ಆದರೆ ಹೋಗುವುದಕ್ಕೆ ಯಾರೂ ಒಪ್ಪಲಿಲ್ಲ. ಅಲ್ಲದೆ ತರುವುದಕ್ಕೆ ಬಟ್ಟೆ ಎಲ್ಲಿದೆ? ಈ ವಿಚಾರ ದೊಡ್ಡವರಿಗೆ ತಿಳಿದರೆ ರಾದ್ಧಾಂತವಾಗುವುದು. ದೊಡ್ಡವರಿಗೆ ತಿಳಿಯದಂತೆ ಊರನ್ನು ಸೇರಬೇಕೆಂಬುದೇ ಎಲ್ಲರ ಅಭಿಪ್ರಾಯವೂ ಆಶಯ ಆಗಿದ್ದಿತು. ಅವರವರು ತಮತಮಗೆ ತೋರಿದಂತೆ ತಮ್ಮ ಮನೆಗಳಿಗೆ ಹೋಗಿ ಸೇರಿಕೊಳ್ಳಬಹುದೆಂದು ತೀರ್ಮಾನವಾಯಿತು.

ನಮ್ಮ ಜೋಡಿದಾರ, ನಿರ್ಜನವಾದ ಕೋಟೆಯನ್ನು ಬಳಸಿಕೊಂಡು ಮರದ ನೆರಳಿನ ಆಶ್ರಯದಲ್ಲಿ ಅವಿತುಕೊಳ್ಳುತ್ತಾ ಗುಳ್ಳೆಯ ನರಿಯಂತೆ ತಮ್ಮ ಮನೆಯ ಹಿಂದಕ್ಕೆ ಬಂದನು. ಆ ವೇಳೆಗೆ ರಾತ್ರಿ ೭-೩೦-೮ ಗಂಟೆಗಳ ಸಮಯ. ಹಿತ್ತಲ ಬಾಗಲನ್ನು ಒಳಗಡೆಯಿಂದ ಅಗಣಿ ಹಾಕಿಬಿಟ್ಟಿರುವರೆಂದು ಇವನಿಗೆ ಗೊತ್ತಿದ್ದಿತು. ಬೀದಿಯ ಬಾಗಲಿನಿಂದ ಹೋಗೋಣವೆಂದರೆ, ಉತ್ಸವವನ್ನು ನೋಡುವುದಕ್ಕಾಗಿ ಆ ದಿವಸ ಜೋಡಿದಾರರೊಂದಿಗೆ ಮಾತನಾಡುತ್ತಾ ಊರಿನ ಅರ್ಧ ಜನರೆಲ್ಲರೂ ಜಗಲಿಯ ಮೇಲೆ ಕುಳಿತುಬಿಟ್ಟಿದ್ದರು. ನಮ್ಮ ನಿರ್ವಾಣ ಬ್ರಾಹ್ಮಣನಿಗೆ ಅವರನ್ನೆಲ್ಲಾ ತಿನ್ನುವಷ್ಟು ಸಿಟ್ಟು ಬಂದಿತು. ಅವರಾರೂ ಇಲ್ಲದಿದ್ದರೆ, ಜೋಡಿದಾರರು ಸಂಧ್ಯಾವಂದನೆಯಾದನಂತರ ಕೋಣೆಗೆ ಹೋಗಿ ದೇವರ ಪೂಜೆಮಾಡುತ್ತಾ ಸ್ತೋತ್ರಗಳನ್ನು ಹೇಳುತ್ತಿರುವಾಗ, ಉಪಾಯವಾಗಿ ಬಾಗಲನ್ನು ತೆಗೆಸಿ ಒಳಗೆ ಸೇರಿಬಿಡಬಹುದಾಗಿದ್ದಿತು. ಈಗ ಅದು ಸಾಧ್ಯವಿಲ್ಲದುದರಿಂದ ಅವನು ಹಿತ್ತಲ ಗೋಡೆಯನ್ನು ಹತ್ತಿ ಒಳಗಡೆಗೆ ಹಾರಿದನು. ಪಾಪ ಬೇಟೆಗಾರರಿಂದ ಅಟ್ಟಲ್ಪಟ್ಟ ಜಿಂಕೆಯಂತೆ ಅವನ ಮೈಯೆಲ್ಲವೂ ತರದು ಹೋಯಿತು. ಹಿತ್ತಲ ಬಾಗಲಿಗೆ ಬಂದನು. ಅದರ ಆಚೆಗೆ ತೊಟ್ಟಿಯ ಬಾಗಲು. ತೊಟ್ಟಿಯಲ್ಲಿ ನಮ್ಮ ನಾಯಕನ ತಂಗಿ ತಾಯಿಯೊಂದಿಗೆ ಮಾತನಾಡುತ್ತಿದ್ದಳು. ಎರಡು ಬಾಗಲುಗಳ ಮೂಲಕ ತನ್ನ ಧ್ವನಿಯ ಅವರಿಗೆ ಕೇಳುವಂತೆ ಜೋಡಿದಾರನು ಕೂಗಬೇಕಾಗಿತ್ತು. ಅದಕ್ಕಾಗಿ ಅವನೊಂದು ಉಪಾಯವನ್ನು ಮಾಡಿದನು. ಅವನ ತರ್ಕವು ಈ ರೀತಿ ನಡೆಯಿತು: "ನಾನು ಗಟ್ಟಿಯಾಗಿ ಕೂಗಿಬಿಟ್ಟರೆ ಬಾಗಲಿನಲ್ಲಿ ಕುಳಿತಿರುವ ನಮ್ಮ ತಂದೆಗೆ ಕೇಳಿಬಿಡುತ್ತೆ. ಸ್ವಲ್ಪ ಮೆಲ್ಲಗೆ ಕೂಗಿದರೆ, ಯಾರಿಗೂ ಕೇಳೋದಿಲ್ಲ, ಏನೂ ಪ್ರಯೋಜನವಾಗುವುದಿಲ್ಲ. ಅದಕ್ಕಾಗಿ ಈ ಉಪಾಯವನ್ನು ಮಾಡುತ್ತೇನೆ. ಕೊಟ್ಟಿಗೆಯ ಬಾಗಲನ್ನು ಸ್ವಲ್ಪ ಸದ್ದು ಮಾಡಿದರೆ ದನಗಳು ಕಿತ್ತುಕೊಂಡಿವೆಯೆಂದು ನೋಡಲು ನಮ್ಮ ತಾಯಿಯೋ ತಂಗಿಯೋ ಬರುತ್ತಾಳೆ. ಅನಂತರ ಮುಂದೆ ಎಲ್ಲಾ ಸುಲಭ."

ಈ ತರ್ಕ ವಾಚಸ್ಪತಿಯು ೮-೧೦ ಸಲ ಹಿತ್ತಲ ಬಾಗಲನ್ನು ಕುಟ್ಟಿದನು. ತೊಟ್ಟಿಯಲ್ಲಿ ಅವನ ತಾಯಿಯ ತಂಗಿಯ ಪಂಜಿನ ಕಳ್ಳರ ವಿಷಯವನ್ನು ಕುರಿತು ಮಾತನಾಡುತ್ತ ಕುಳಿತಿದ್ದರು. ಹಿಂದೆ ಅವರ ಮನೆಗೆ ೨-೩ ಸಾರಿ ಕಳ್ಳರು ನುಗ್ಗಿದ್ದರಂತೆ. ಆ ವಿಚಾರವನ್ನೆಲ್ಲಾ ಅವರು ಮಾತನಾಡುತ್ತಿದ್ದರು. ಅವರ ವಾತಾವರಣವೆಲ್ಲಾ ಕಳ್ಳರಿಂದಲೂ ಭಯದಿಂದಲೂ ತುಂಬಿಹೋಗಿತ್ತು. ಈ ಹಿತ್ತಲ ಬಾಗಲ ಸದ್ದನ್ನು ಅವೇಳೆಯಲ್ಲಿ ಕೇಳಿದ ಕೂಡಲೆ ಅವರು ಬೆಚ್ಚಿಬಿದ್ದರು. ತಮ್ಮ ಕಥೆಯಿಂದ ಕಳ್ಳರ ಪ್ರಪಂಚವನ್ನು ಸೃಷ್ಟಿ ಮಾಡಿದ್ದ ಅವರಿಗೆ ಕಳ್ಳರು ಎದುರಿಗೇ ಬಂದಂತೆ ತೋರಿತು. ತಾಯಿ ಮಗಳಿಬ್ಬರೂ ಬೀದಿಯ ಬಾಗಲಿಗೆ ಹೋದರು. ಮಗಳು ತಂದೆಯೊಂದಿಗೆ "ಯಾರೋ ಹಿತ್ತಲ ಬಾಗಲನ್ನು ಇಡಿಯುತ್ತಿದ್ದಾರೆ. ಈಗ ಒಂದೇ ಸಮನೆ ೧೦-೨೦ ಸಲ ಇಡಿದರು" ಎಂಬುದಾಗಿ ಹೇಳಿದಳು. ಬಾಗಲಿನಲ್ಲಿದ್ದವರೆಲ್ಲಾ ಕೌತುಕದಿಂದ ಒಳಗೆ ಬಂದರು. ಪಾಪ! ನಮ್ಮ ನಾಯಕನು ತಂಗಿಯು ದೀಪವನ್ನು ತರುವುದಕ್ಕೆ ಒಳಕ್ಕೆ ಹೋಗಿದ್ದಾಳೆ. ಅದಕ್ಕೆ ಇಷ್ಟು ತಡವಾಯಿತು ಎಂದು ಸಮಾಧಾನಪಟ್ಟು ಕೊಂಡಿದ್ದನು. ತನ್ನನ್ನು ನೋಡಲು ಇವರೆಲ್ಲಾ ಬರುತ್ತಿರುವುದು ಅವನಿಗೆ ತಿಳಿದಿದ್ದರೆ, ಅವನು ಮತ್ತೆ ಕಪಿಯಂತೆ ಗೋಡೆಯನ್ನು ಹಾರಿ ಓಡಿಬಿಡುತ್ತಿದ್ದನು. ಆದರೆ ವಿಧಿಯು ಅವನಿಗೆ ಇಲ್ಲಿಯೂ ಮೋಸಮಾಡಿತು. ಮೆಲ್ಲನೆ ತೊಟ್ಟಿಯ ಬಾಗಲು ತೆರೆಯಿತು. ದೀಪದ ಬೆಳಕು ಬಾಗಲಿನ ಕಂಡಿಯ ಮೂಲಕ ಹೊರಕ್ಕೆ ತೋರುತ್ತಿದ್ದಿತು. ಹಿತ್ತಲು ಬಾಗಲೂ ತೆರೆಯಿತು. ಎಲ್ಲರಿಗಿಂತಲೂ ಮುಂಚೆ ಅವನ ಕಣ್ಣಿಗೆ ಬಿದ್ದವರು ಅವನ ತಂದೆ.

ಇವನನ್ನು ಈ ಅವಸ್ಥೆಯಲ್ಲಿ ಕಂಡು ಅವರ ತಂದೆಗೆ ಬಹಳ ನಗು ಬಂದಿತು. ಉಳಿದವರೆಲ್ಲಾ ಘೊಳ್ಳೆಂದು ನಕ್ಕುಬಿಟ್ಟರು. ಜೋಡಿದಾರನಿಗೆ ಮಾತ್ರ ಪ್ರಾಣವೇ ಹೋದಂತಾಯಿತು. ತನ್ನ ಅವಸ್ಥೆಯನ್ನು ನೋಡಿ ಅವರು ನಕ್ಕುದು ಇವನಿಗೆ ಸಹಿಸಲಿಲ್ಲ. ಮನಸ್ಸಿನಲ್ಲಿ “ಪಾಪಿಗಳಿರಾ ನಿಮ್ಮನ್ನು ಶಿಕ್ಷಿಸುವ ದೇವರೇ ಇಲ್ಲವೆ?" ಎಂದುಕೊಂಡನು.

ಬೇರೆ ಬಟ್ಟೆಯನ್ನು ಹಾಕಿಕೊಂಡುದಾಯಿತು. ಸರಿ ವಿಚಾರಣೆ. ತಮ್ಮ ತಂದೆಯವರೊಬ್ಬರೇ ವಿಚಾರಣೆ ಮಾಡಿದ್ದರೆ ನಮ್ಮ ನಾಯಕನಿಗೆ ದುಃಖ ವಿರುತ್ತಿರಲಿಲ್ಲ; ಆದರೆ ಊರಿಗೆ ಊರೇ ಸೇರಿಬಿಟ್ಟಿತ್ತು. ಭಾಷ್ಯಕಾರರೆಂದು ತನ್ನನ್ನು ಮಧ್ಯಾಹ್ನ ಗೌರವಿಸಿದವರೆಲ್ಲಾ ಈಗಿನ ತನ್ನ ಈ ಅವಸ್ಥೆಯನ್ನು ನೋಡುವರಲ್ಲಾ? ಎಂದು ಅವನಿಗೆ ದುಃಖವುಂಟಾಯಿತು. ಆದರೆ ವಿಧಿಯಿರಲಿಲ್ಲ. ಬಂದದ್ದನ್ನು ಅನುಭವಿಸಲೇಬೇಕಾಗಿತ್ತು. ತನಗೆ ಅವಮಾನ ಮಾಡಲು ಪ್ರಪಂಚವೆಲ್ಲಾ ಒಂದಾಗಿರುವುದೆಂದು ಅವನು ಭಾವಿಸಿದನು.

ಅವರ ತಂದೆಯವರು ನಿನಗೆ ನೀರಿನ ಬರ ಹಿಡಿದಿದೆ. ನಿನ್ನ ಜುಟ್ಟನ್ನು ಹಿಡಿದುಕೊಂಡು ನೀರಿನೊಳಗೆ ಉಸಿರು ಕಟ್ಟುವವರೆಗೆ ಮುಳುಗಿಸಿಬಿಡುತ್ತೇನೆ" ಎಂದರು. ನಮ್ಮ ನಾಯಕನಿಗೆ ನೀರು ಎಂದ ಕೂಡಲೇ ಬಾಯಲ್ಲಿ ನೀರೊಡೆಯಿತು. ಅವನು ಧೈರದಿಂದ “ಅಷ್ಟು ಮಾಡಿದರೆ ಸಾಕು. ನಾನು ಕದ್ದು ಈಜೋದೆ ತಪ್ಪುತ್ತೆ. ಬೇಕಾದಷ್ಟು ಹೊತ್ತು ನೀರಿನಲ್ಲಿ ಮುಳುಗಿಸಿ. ಅನಂತರ ಮೇಲಕ್ಕೆ ಬರುತ್ತೇನೆ” ಎಂದನು.

ಜೋಡಿದಾರರು ಹೊಡೆಯಬೇಕೆಂದು ಎತ್ತಿದ್ದ ಕೈಯಿನ ಬೆತ್ತವನ್ನು ಕೆಳಕ್ಕೆ ಹಾಕಿಬಿಟ್ಟರು. ಪೋಪ್ ಎಂಬ ಪಾಶ್ಚಾತ್ಯ ಕವಿಯು ಕವಿತೆಗಳನ್ನು ಮಾಡಿ ಮಾಡಿ ತನ್ನ ಬಾಲ್ಯದಲ್ಲಿಯೇ ಅವನ ತಂದೆಗೆ ಬೇಸರಿಕೆಯನ್ನು ಹತ್ತಿಸಿಬಿಟ್ಟನಂತೆ. ಅವನ ತಂದೆಯು ಒಂದು ದಿವಸ ಕೋಪದಿಂದ, ಬೆತ್ತವನ್ನು ಹಿಡಿದುಕೊಂಡು ನಿನ್ನ ಕವಿತೆಗಳಿಗೆ ಇದೇ ಬಹುಮಾನ ಎಂದು ಹೊಡೆಯುವುದಕ್ಕೆ ಹೋದರಂತೆ. ಪೋಪನು ದೈನ್ಯದಿಂದ,

Father, father, mercy take
I shall Verses never make.
ತಂದೆಯೆ ತಂದೆಯೆ ತೋರಿಸು ಕರುಣೆಯ
ಮುಂದಕೆ ಎಂದಿಗು ಮಾಡೆನು ಕವಿತೆಯ.

ಎಂದು ಕವಿತೆಯಲ್ಲಿಯೇ ಗಾಬರಿಯಿಂದ ಪ್ರಾರ್ಥಿಸಿದನಂತೆ. ಅವರ ತಂದೆಯು ಇವನನ್ನು ಇನ್ನು ಸರಿಮಾಡುವುದಕ್ಕಾಗುವುದಿಲ್ಲ ಎಂಬುದಾಗಿ ಬಿಟ್ಟು ಬಿಟ್ಟರಂತೆ. ಹಾಗೆಯೇ ಜೋಡಿದಾರರೂ ಮಗನನ್ನು ಹೊಡೆಯದೆ ನೀನು ಯಾವತ್ತಾದರೂ ನೀರಿನಲ್ಲಿಯೇ ಸಾಯುತ್ತೀಯೆ ಖಂಡಿತ, ಎಂದು ಹೇಳಿ ಸುಮ್ಮನಾದರು.

೨. ಕಾಮನ ಹಬ್ಬದ ವಿನೋದ

ಕಾಮನ ಹಬ್ಬದ ದಿವಸ ಬಂದಿತು. ಊರ ಹೊರಗಿನ ಬೈಲಿನಲ್ಲಿ ತೋಟಗಳಿಂದ ಬೇಕಾದಂತೆ ಒಣಗಿದ್ದ ಗರಿಗಳನ್ನು ಆರಿಸಿ ತಂದು ಶೇಖರಿಸಿದ್ದರು. ರಾತ್ರಿ ಹತ್ತು ಗಂಟೆಗೆ ಆ ದೊಡ್ಡ ರಾಶಿಗೆ ಬೆಂಕಿಯನ್ನು ಹತ್ತಿಸಿ ವಿನೋದವನ್ನು ನೋಡಬೇಕೆಂದು ಹುಡುಗರೆಲ್ಲರೂ ಯೋಚಿಸಿದ್ದರು. ಸಂಧ್ಯಾಕಾಲ ಸುಮಾರು ೭ ಗಂಟೆ ಇದ್ದಿರಬಹುದು. ಜಗತ್ತಿನ ಮೇಲೆ ಕತ್ತಲೆಯ ಛಾಯೆಯು ಆಗತಾನೆ ಬೀಳುತ್ತಿದ್ದಿತು. ಕಷ್ಟಪಟ್ಟು ಗರಿಗಳನ್ನು ಶೇಖರಿಸಿದ್ದವರೆಲ್ಲಾ ಈ ನೋಟವನ್ನು ವಿರಾಮವಾಗಿ ಬಂದು ನೋಡುವುದಕ್ಕೋಸ್ಕರ, ತಮ್ಮ ತಮ್ಮ ಕೆಲಸಗಳನ್ನು ಮುಗಿಸಿಕೊಂಡು ಬರಲು ಮನೆಗಳಿಗೆ ಹೋಗಿದ್ದರು. ಜೋಡಿದಾರನು ಗರಿಗಳ ರಾಶಿ ಎಷ್ಟಾಗಿದೆಯೋ ನೋಡಿಕೊಂಡು ಬರೋಣವೆಂದು ಅವುಗಳನ್ನು ಶೇಖರಿಸಿದ್ದ ಬೈಲಿಗೆ ಹೋದನು. ಹೋಗುವಾಗ ರಾತ್ರಿ ೧೦ ಗಂಟೆಗೆ ಬೇಕಾಗಬಹುದೆಂದು ಯೋಚಿಸಿ, ಜೇಬಿನಲ್ಲಿ ಒಂದು ಬೆಂಕಿಯ ಪೊಟ್ಣವನ್ನು ಹಾಕಿಕೊಂಡು ಹೋದನು. ಬೆಟ್ಟದಂತೆ ರಾಶಿಯಾಗಿ ಬಿದ್ದಿದ್ದ ಒಣಗಿದ್ದ ತರಗನ್ನು ನೋಡಿ ಜೋಡಿದಾರನಿಗೆ ಅದನ್ನು ಹತ್ತಿಸಿಬಿಡಬೇಕೆಂದು ಆಸೆಯಾಯಿತು. ಜೇಬಿನೊಳಕ್ಕೆ ಕೈ ಹೋಯಿತು; ಬೆಂಕಿಯ ಪೊಟ್ಣ ಹೊರಕ್ಕೆ ಬಂತು. ಒಂದು ನಿಮಿಷದೊಳಗೆ ಉರಿಯು ಸಹಸ್ರಾರು ನಾಲಗೆಯಿಂದ ಮೇಲಕ್ಕೆದ್ದಿತು. ಅರ್ಧ ಗಂಟೆ ಮುಗಿಯುವುದರೊಳಗಾಗಿ ತರಗಿನ ರಾಸಿಯಿದ್ದ ಸ್ಥಳದಲ್ಲಿ ಒಂದು ಅಡಿ ಬೂದಿ ಮಾತ್ರ ಉಳಿಯಿತು. ಆ ಉರಿಯ ಆನಂದದಲ್ಲಿ ಇದುವರೆಗೆ ಪ್ರಪಂಚವನ್ನೇ ಮರೆತಿದ್ದ ಜೋಡಿದಾರನಿಗೆ ಉರಿಯು ಆರಿದಮೇಲೆ ಜ್ಞಾನೋದಯವಾಯಿತು. ತನ್ನ ಸ್ನೇಹಿತರು ತನ್ನನ್ನು ಸುಮ್ಮನೆ ಬಿಡುವುದಿಲ್ಲವೆಂದು ಅವನು ಚೆನ್ನಾಗಿ ತಿಳಿದಿದ್ದನು. ಅವರೆಲ್ಲರ ಕಷ್ಟದ ಫಲವನ್ನೂ ತಾನೊಬ್ಬನೇ ಅನುಭವಿಸಿದುದಕ್ಕಾಗಿ ತನಗುಂಟಾಗಬಹುದಾದ ಫಲವು ಅವನಿಗೆ ಗೊತ್ತಿದ್ದಿತು. ಅವರ ಕೈಗೆ ತಾನು ಸಿಕ್ಕಿದರೆ ಮೈಮೂಳೆ ಮುರಿಯುವವರೆಗೆ ಏಟು ಬೀಳುವುದೆ೦ದೂ, ಕೋಪದ ಮೊದಲಿನ ಆವೇಶದಲ್ಲಿ ಪ್ರಾಣಾಪಾಯವೇ ಉಂಟಾದರೂ ಉಂಟಾಗಬಹುದೆಂದೂ ಅವನು ಹೆದರಿದನು. “ಇದಕ್ಕೆ ಮುಖ್ಯ ಉಪಾಯವೆಂದರೆ, ಈ ದಿವಸವೆಲ್ಲಾ ಶತ್ರುಗಳ ಕೈಗೆ ಸಿಕ್ಕದೆ ತಪ್ಪಿಸಿಕೊಳ್ಳುವುದು. ಕೋಪವು ಶಮನವಾದ ಮೇಲೆ ಏನೂ ಆಗುವುದಿಲ್ಲ. ನೋಡಿಕೊಳ್ಳೋಣ. ಸದ್ಯಕ್ಕೆ ಬೀಸುವ ದೊಣ್ಣೆ ತಪ್ಪಿದರೆ ಸಾವಿರ ವರುಷ ಆಯುಸ್ಸು" ಎಂದು ಯೋಚಿಸಿದನು. ಆದರೆ ಹೋಗುವುದೆಲ್ಲಿಗೆ? ಎಂಬುದು ತೋರಲಿಲ್ಲ. ಯಾರ ಮನೆಯಲ್ಲಿ ಅವಿತುಕೊಂಡರೂ ವಿಷಯವು ಹೊರಕ್ಕೆ ಬಿದ್ದ ಮೇಲೆ ತನ್ನನ್ನು ಅವರು ಮುಚ್ಚಿಡುವರೆಂಬ ನಂಬಿಕೆ ಇವನಿಗೆ ಇರಲಿಲ್ಲ. ತಮ್ಮ ಮನೆಗೆ ಹೋಗಲು ತಂದೆಯವರ ಭಯ. ಈ ಯೋಚನೆಯಲ್ಲಿಯೆ ರಾತ್ರಿ ೮ ಗಂಟೆಯಾಗಿ ಹೋಯಿತು. ಜೋಡಿದಾರನು ಏನು ಮಾಡೋಣವೆಂದು ಯೋಚಿಸುತ್ತಾ ನದಿಯ ದಡಕ್ಕೆ ಬಂದನು. ತೀರದ ದೇವಸ್ಥಾನವು ನಿಶ್ಯಬ್ದವಾಗಿತ್ತು. ಇರುಳ ಹೆಣ್ಣು ಕರಿಯ ತೊಡವೆಯನ್ನು ತೊಟ್ಟು ಸಿಂಗಾರವಾಗಿದ್ದಳು. ಅವಳ ಕಪ್ಪಾದ ಅರಮನೆಯಲ್ಲಿ ಎಷ್ಟು ಜನ ದಾರಿತಪ್ಪಿರುವರೋ ಎಂದು ಅವನು ಯೋಚಿಸಿದನು. ಹೊಳೆಯ ಮಧ್ಯದಲ್ಲಿ ಮಚ್ಚೆಯ ಕಲ್ಲು ಎಂಬುದಾಗಿ ಒಂದು ಬಂಡೆಯಿದೆ. ಅದರ ಸುತ್ತಲೂ ಒಂದು ಮಡುವಿದೆ. ಅಲ್ಲಿ ನೀರು ಬಹಳ ಆಳ. ನೀರಿನೊಳಗೆ ಚಿನ್ನದ ರಥವು ಮುಳುಗಿದೆ ಎಂದು ಹೇಳುತ್ತಾರೆ. ಇಲ್ಲಿ ನಮ್ಮೂರ ರಥೋತ್ಸವದ ಕಾಲದಲ್ಲಿ ತೆಪ್ಪೋತ್ಸವ ನಡೆಯುತ್ತದೆ. ಈ ಬಂಡೆಗೆ ಈಜಿಬಿಟ್ಟರೆ ಸದ್ಯಕ್ಕೆ ಈ ರಾತ್ರಿ ನನಗೆ ಭಯವಿಲ್ಲವೆಂದುಕೊಂಡು ನಮ್ಮ ಜೋಡಿದಾರನು ಬಟ್ಟೆಗಳನ್ನೆಲ್ಲಾ ತಲೆಗೆ ರುಮಾಲಿನಂತೆ ಸುತ್ತಿ, ಆ ಮಡುವಿನ ಬಂಡೆಗೆ ಈಜಿಬಿಟ್ಟ. ಆ ಮಡುವಿನಲ್ಲಿ ಮೊಸಳೆಯಿದೆ ಎಂಬ ಸುದ್ದಿಯಿದೆ. ಆದರೆ ಆಗಿನ ಗಾಬರಿಯಲ್ಲಿ ಅವನಿಗೆ ಯಾವುದೂ ಜ್ಞಾಪಕ ಬರಲಿಲ್ಲ. ಬಂಡೆಯು ವಿಶಾಲವಾಗಿ ದೊಡ್ಡದಾಗಿದೆ. ಜೋಡಿದಾರನು ಅದರಮೇಲೆ ಕುಳಿತುಕೊಂಡ. ಆಕಾಶವು ಸಾವಿರಾರು ನಕ್ಷತ್ರಗಳಿಂದ ಕೂಡಿ ಚಿತ್ರಿತವಾದ ಬಟ್ಟೆಯಂತೆ ಕಾಣುತ್ತಿದ್ದಿತು. ನದಿಯ ನೀರು ಒಂದು ವಿಧವಾದ ಗಾನದಿಂದ ಮುಂದಕ್ಕೆ ಹರಿಯುತ್ತಾ ಸಣ್ಣ ಸಣ್ಣ ಅಲೆಗಳೊಂದಿಗೆ ಆಟವಾಡುತ್ತಿದ್ದಿತು. ತೀರದಲ್ಲಿ ಮರಗಳಿಂದ ತುಂಬಿದ ತೋಪು, ಕರಿಯ ರಾಕ್ಷಸನ ಮೈಯಂತೆ ಕಾಣುತ್ತಿದ್ದಿತು. ಮಧ್ಯೆ ಮಧ್ಯೆ ಮಿಂಚಿನ ಹುಳುಗಳು ಮಿನುಗುತ್ತಿದ್ದುವು. ದೂರದ ಹಳ್ಳಿಯ ನಾಯಿಗಳ ಕೂಗು ಇರುಳ ಶಾಂತಿಗೆ ಮಿಂಚನ್ನೆಸೆಯುತ್ತಿದ್ದಿತು. ಜೋಡಿದಾರನು ಕುಳಿತಿದ್ದಂತೆಯೇ ಕಣ್ಣುಮುಚ್ಚಿ ತೂಕಡಿಸಲಾರಂಭಿಸಿದನು.

ತಾನು ಎಷ್ಟು ಹೊತ್ತು ತೂಕಡಿಸುತ್ತಿದ್ದನೋ ಅದು ಅವನಿಗೆ ಚೆನ್ನಾಗಿ ತಿಳಿಯದು. ಆದರೆ ಒಮ್ಮಿಂದೊಮ್ಮೆ ನದಿಯ ತೀರದಲ್ಲಿ ೨-೩ ಲಾಂದ್ರಗಳು ಇವನ ಕಣ್ಣಿಗೆ ಬಿದ್ದುವು. ಜೋಡಿದಾರನಿಗೆ ಕೂಡಲೇ ತಾನೆಲ್ಲಿರುವೆನೆಂಬುದರ ಅರಿವುಂಟಾಯಿತು. ದಡದಲ್ಲಿ ೧೫-೨೦ ಜನ ಹುಡುಗರು ಗಟ್ಟಿಯಾಗಿ ಮಾತನಾಡುತ್ತಿದ್ದರು. ಒಬ್ಬನು “ಇದು ಅವನ ಕೆಲಸವೇ” ಎಂದನು. ಮತ್ತೊಬ್ಬನು “ಕೈಗೆ ಸಿಕ್ಕಲಿ ಈಗ್ಯಾಕೆ ಮಾತು?” ಎಂದನು. ಮೂರನೆಯವನು “ತೋಟದಿಂದ ಗರಿಯನ್ನು ಹೊತ್ತು ಬೆನ್ನು ಮೂಳೆಯೆಲ್ಲಾ ಇನ್ನೂ ನೋಯುತ್ತಾ ಇದೆ” ಎಂದನು. ನಾಲ್ಕನೆಯವನು "ಇಷ್ಟು ಜನರ ಕೈಗೆ ಅವನು ಸಿಕ್ಕಿಬಿಟ್ಟರೆ ಆಳಿಗೆ ಒಂದು ಗುದ್ದು ಎಂದರೂ ಅವನ ಮೈ ಮಳೆಯೆಲ್ಲಾ ಪುಡಿಯಾಗಿ ಹೋಗುತ್ತೆ" ಎಂದನು. ಜೋಡಿದಾರನಿಗೆ ಅವರ ಮಾತುಗಳನ್ನು ಕೇಳಿ ಮೈಯಲ್ಲಿ ನಡುಕವುಂಟಾಯಿತು. ಅವರೆಲ್ಲರೂ ಜವಾಬ್ದಾರಿಯಿಲ್ಲದ ಇವನ ವಯಸ್ಸಿನ ಹುಡುಗರೇ ಆಗಿದ್ದರು. ಆ ದಿವಸ ತನಗೆ ಚೆನ್ನಾಗಿ ಏಟು ಬೀಳುವುದರಲ್ಲಿ ಅನುಮಾನವಿರಲಿಲ್ಲ. ಆದರೆ ನದಿಯ ಮಧ್ಯದಲ್ಲಿದ್ದೇನಲ್ಲಾ ಭಯವಿಲ್ಲ ಎಂದುಕೊಂಡನು. ಅಷ್ಟು ಹೊತ್ತಿಗೆ ನದಿಯ ತೀರಕ್ಕೆ ಇನ್ನೂ ೧೦-೧೫ ಮಂದಿ ಬಾಲಕರು ಬಂದರು. ಅವರೆಲ್ಲ “ಅವನು ಊರಲ್ಲಿ ಯಾರ ಮನೆಯಲ್ಲಿಯೂ ಇಲ್ಲ. ಪೇಟೆ ಕೋಟೆ ಎಲ್ಲಾ ಹುಡುಕಿದ್ದಾಯಿತು. ಛತ್ರದ ಮಾಳಿಗೆಯ ಮೇಲೂ ಇಲ್ಲ. ಊರೊಳಗಿನ ಹಳೆಯ ದೇವಸ್ಥಾನದಲ್ಲಿಯೂ ಇಲ್ಲ. “ಶೃಂಗಾರ ತೋಟ"ದಲ್ಲಿಯೂ ಇಲ್ಲ. ಸುರಗಿಯ ಮರದಮೇಲೂ ಇಲ್ಲ. ಈ ರಾತ್ರಿಯಲ್ಲಿ ಅವನು ಎಲ್ಲಿಗೆ ಹೋದ ಅನ್ನೋದೆ ಅನುಮಾನ" ಎಂದರು. ಅವರಲ್ಲಿ ಒಬ್ಬನು “ಹಾಗಾದರೇನು ಭೂಮಿಯೊಳಕ್ಕೆ ಹೊರಟುಹೋದನೋ?" ಎಂದನು. ಮತ್ತೊಬ್ಬನು “ನೀರಿನೊಳಗೆ ಮುಳುಗಿದ್ದಾನೋ ಏನೊ" ಎಂದನು. ಇನ್ನೊಬ್ಬನು “ಆ ಮಟ್ಟಿ ಕಲ್ಲಿನ ಮೇಲಕ್ಕೆ ಈಜಿ ಹೋಗಿದ್ದಾನೇನೊ” ಎಂದನು. ಆ ಮಾತನ್ನು ಕೇಳಿ ಜೋಡಿದಾರನಿಗೆ ಹೃದಯವು ಬಾಯಿಗೆ ಬಂದಿತು. ಅವರಲ್ಲಿ ೧೦ ಹುಡುಗರು ಈಜಿ ನೋಡೋಣ ಎಂಬುದಾಗಿ ಬಂಡೆಗೆ ಬಂದು ಬಿಟ್ಟರೆ, ಇವನ ಗತಿ ದೇವರೇ ಗತಿ. ಆದರೆ ಅವರಾರೂ ಈಜಲಿಲ್ಲ. ಒಬ್ಬನು “ಈ ಮಡುವಿನಲ್ಲಿ ಮೊಸಳೆ ಇದೆ. ಅವನು ಇಲ್ಲಿಗೆ ಹೋಗಿಲ್ಲ" ಎಂದನು. ಇನ್ನೊಬ್ಬನು "ಎಲ್ಲಿ ಹೋಗ್ತಾನೆ ಸಾಯ್ತಾನ್ಯೆ? ನಾಳೆ ಸಿಕ್ಕಿಯೇ ಸಿಕ್ಕುತ್ತಾನೆ ಬನ್ನಿ” ಎಂದನು. ಮತ್ತೊಬ್ಬ ಹುಡುಗನು ಗಟ್ಟಿಯಾಗಿ ಕತ್ತಲೆಯನ್ನುದ್ದೇಶಿಸಿ "ಎಲೋ ರಾಮು ಈವತ್ತಿಗೆ ಬದುಕಿಕೊಂಡೆ ಹೋಗು, ನಾಳೆ ಇದೆ ನಿನಗೆ ಹಬ್ಬ” ಎಂದು ಕೂಗಿ ಹೇಳಿದನು. ನದಿಯ ತೀರದಲ್ಲಿ ಕಂಡ ಲಾಂದ್ರಗಳೆಲ್ಲಾ ಊರಕಡೆ ಹೊರಟುಹೋದುವು. ಹೋಗ ಹೋಗುತ್ತಾ ಸ್ನೇಹಿತರ ಧ್ವನಿಯು ದೂರದಲ್ಲಿ ನಿಶ್ಯಬ್ದತೆಯಲ್ಲಿ ಲೀನವಾಯಿತು.

ಜೋಡಿದಾರನು ಯೋಚಿಸಿದ್ದಂತೆಯೇ "ಬೀಸುವ ದೊಣ್ಣೆ ತಪ್ಪಿದರೆ-" ಎಂಬಂತೆ ಆಯಿತು. ಮೊಸಳೆ ಮಡುವಿಗೆ ಇವನು ಈಜಿಕೊಂಡು ಹೋದುದನ್ನು ಕೇಳಿ ಹುಡುಗರು ಭಲಾಭಲಾ ಎಂದರು. ಅದುವರೆಗೆ ಯಾರೂ ಈ ಸಾಹಸವನ್ನು ಮಾಡಿರಲಿಲ್ಲ. ಅವರ ತಂದೆಯು ಮಾತ್ರ "ಮೊಸಳೆಯು ಅವನನ್ನು ನುಂಗದುದೇ ಆಶ್ಚರ್‍ಯ" ಎಂದರು.

೩. ವಿದ್ಯೆಯನ್ನು ಕಲಿತ ಅನುಭವ

ನಮ್ಮ ಜೋಡಿದಾರನ ವಿದ್ಯಾರ್ಜನೆಯ ಒಂದೇ ಒಂದು ಅನುಭವವನ್ನು ಹೇಳುತ್ತೇನೆ. ಮಗನೇನೋ ದಿಗ್ಧಂತಿಯಾಗಿಬಿಡುತ್ತಾನೆ ಎಂದು ಅವರ ತಂದೆಯವರು ಕನ್ನಡ ಲೋವರ್ ಸೆಕಂಡರೀ ಪರೀಕ್ಷೆಗೆ ಅವನಿಗೆ “ಪ್ರೈವೇಟ್ ಟ್ಯೂಷನ್" ಹೇಳಿಸಿದರು. ಪರೀಕ್ಷೆಗೆ ಹೋಗುವ ಕಾಲ ಬಂದಿತು. ಆಗ ನಮ್ಮೂರಿಗೆ ಪರೀಕ್ಷೆಯ ಕೇಂದ್ರವು ನರಸೀಪುರವಾಗಿತ್ತು. ಪರೀಕ್ಷೆಗೆ ಹೊರಡುವುದಕ್ಕೆ ೪-೫ ದಿವಸ ಮೊದಲಿನಿಂದಲೇ ದೊಡ್ಡ ಜೋಡಿದಾರರು ಮಗನಿಗೆ "ಪರೀಕ್ಷೆಯಲ್ಲಿ ಸಮಾಧಾನದಿಂದಿರು. ನಿನಗೆ ಯಾವಾಗಲೂ ಗಾಬರಿ ಹೆಚ್ಚು” ಎಂಬುದಾಗಿ ಒತ್ತಿ ಒತ್ತಿ ಮನಸ್ಸಿಗೆ ಹಿಡಿಯುವಂತೆ ಉಪನ್ಯಾಸ ಮಾಡಿದ್ದರು. ವಿದ್ಯಾರ್ಥಿಗಳೆಲ್ಲರೂ ಮುಂಜಾನೆ ನರಸೀಪುರಕ್ಕೆ ಹೊರಡಬೇಕೆಂದು ನಿಶ್ಚಿತವಾಯಿತು. ಹೊರಡುವ ಮೊದಲ ರಾತ್ರಿ ಜೋಡಿದಾರನ ತಾಯಿಯವರು ಮಗನೇನೋ ವಿದ್ವತ್ ಪರೀಕ್ಷೆ ಮಾಡಿಬಿಡುತ್ತಾನೆ ಎಂಬುದಾಗಿ ಸಂತೋಷಪಟ್ಟು, ಇವನಿಗೆ ಎರಡು ರಸಬಾಳೆಯ ಹಣ್ಣನ್ನೂ ಒಂದು ಚೂರು ಕೊಬ್ಬರಿಯನ್ನೂ ಕೊಟ್ಟು “ದಾರಿಯಲ್ಲಿ ಹಸಿವಾದರೆ ಇದನ್ನೂ ತಿನ್ನು” ಎಂದು ಹೇಳಿದರು. ಜೋಡಿದಾರನು ಅದನ್ನು ಒಂದು ಬಟ್ಟೆಯಲ್ಲಿ ಕಟ್ಟಿ ಬೆಳಗಿನ ಜಾವ ಹೊರಡುವಾಗ ತೆಗೆದುಕೊಳ್ಳೋಣ ಎಂದು ತನ್ನ ಪೆಟ್ಟಿಗೆಯಲ್ಲಿ ಹಾಕಿಬಿಟ್ಟನು. ಮುಂಜಾನೆ ಉಳಿದ ವಿದ್ಯಾರ್ಥಿಗಳೆಲ್ಲರೂ ಗಾಡಿಯನ್ನೇರಿ ಇವನ ಮನೆಯ ಬಾಗಲಿಗೆ ಬಂದರು. ಇವನೂ ತಾಯಿತಂದೆಗಳಿಗೆ ನಮಸ್ಕಾರ ಮಾಡಿ ಗಾಡಿಯಲ್ಲಿ ಕುಳಿತುಕೊಂಡು ಹೊರಟನು.

ನದಿಯ ತೀರಕ್ಕೆ ಹೋದ ಕೂಡಲೆ ಇವನಿಗೆ ಬಾಳೆಯಹಣ್ಣು ಕೊಬ್ಬರಿಯ ಜ್ಞಾಪಕ ಬಂದಿತು. ತಾಯಿಯವರು ಹೊರಡುವಾಗ ಕೊಟ್ಟ ವಸ್ತುವೆಂಬ ಅಭಿಮಾನವೋ, ಅಥವಾ ಹಸಿವಾದರೆ ತಿನ್ನಬೇಕೆಂಬ ಚಪಲವೋ, ಅಂತೂ ಬಾಳೆಯಹಣ್ಣು ಕೊಬ್ಬರಿಯನ್ನು ತರಲೇಬೇಕೆಂದು ನಿಶ್ಚಯಿಸಿದನು. ಗಾಡಿಯು ಹೊಳೆಯ ಮರಳಿನಲ್ಲಿಯೂ ನೀರಿನಲ್ಲಿಯೂ ನಿಧಾನವಾಗಿ ಹೋಗುತ್ತಿದ್ದಿತು. ಅದು ಹೊಳೆ ದಾಟುವ ವೇಳೆಗೆ ಹಿಂದಿರುಗಬಹುದೆಂದು ಜೋಡಿದಾರನು ಒಂದೇ ಉಸಿರಿನಲ್ಲಿ ಮನೆಗೆ ಓಡಿದನು. ಅವನ ತಂದೆ ತಾಯಿಗಳು ಮತ್ತೆ ಮಲಗಿರಲಿಲ್ಲ. ಯಾವುದೋ ಮಾತನಾಡುತ್ತಾ ಕುಳಿತಿದ್ದರು. ಮಗನು ಹಿಂದಿರುಗಿದುದನ್ನು ನೋಡಿ ಅವನ ತಂದೆಯವರಿಗೆ ಒಹಳ ಕೋಪವುಂಟಾಯಿತು. ಪರೀಕ್ಷೆಗೆ ಹೊರಟವನು ಹೊರಟ ಕೂಡಲೆ ಹಿಂದಿರುಗುವುದು ಅಪಶಕುನವೆಂದು ಅವರು ಯೋಚಿಸಿದರು. ಕೋಪದಿಂದ “ಯಾಕೆ ಬಂದೆ" ಎಂದು ಘರ್ಜಿಸಿದರು. ಜೋಡಿದಾರನು "ಒಂದು ಸಾಮಾನನ್ನು ಮರೆತುಬಿಟ್ಟೆ” ಎಂದನು. ಅವರ ತಂದೆಯವರು ಕೋಪದಿಂದ “ನಿನಗೆ ಪರೀಕ್ಷೆ ಪ್ಯಾಸ್ ಆದರೆ ನಾನು ಮೂಗು ಕುಯ್ಯಿಸಿಕೊಳ್ಳುತ್ತೇನೆ” ಎಂದರು. ನಮ್ಮ ನಾಯಕನು ಪಾಪ ಆವರೆಗೆ ದುಃಖವನ್ನು ಕಂಡಿರಲಿಲ್ಲ. ಪರೀಕ್ಷೆಗೆ ಹೊರಟಾಗ ತಂದೆಯವರು ಮಾಡಿದ ಈ ಆಶೀರ್ವಾದದಿಂದ ಅವನ ಹೃದಯವು ದುಃಖದಿಂದ ವಿದೀರ್ಣವಾಯಿತು. ಅವನು ಕಣ್ಣೀರು ಸುರಿಸುತ್ತಾ ಹೊರಟುಹೋದನು. ಯಾವ ಕೊಬ್ಬರಿ ಬಾಳೆಯ ಹಣ್ಣಿಗಾಗಿ ಇಷ್ಟು ಮಾತನ್ನು ಕೇಳಿದ್ದನೋ, ಅದನ್ನು ದಾರಿಯಲ್ಲಿ ನದಿಯೊಳಕ್ಕೆ ಎಸೆದುಬಿಟ್ಟನು. ತಾನು ಬುದ್ದಿವಂತನಲ್ಲವೆಂಬುದೂ, ಪಾಠವನ್ನು ಒಂದು ದಿವಸವೂ ಓದಲಿಲ್ಲವೆಂಬುದೂ, ದಡ್ಡರಿಗಿಂತ ದಡ್ಡನೆಂಬುದೂ ಅವನಿಗೆ ತಿಳಿದಿದ್ದಿತು. ಪರೀಕ್ಷೆಯಲ್ಲಿ ತನಗೆ ಪ್ಯಾಸ್ ಆಗುವುದಿಲ್ಲವೆಂದು ಎಲ್ಲರಿಗಿಂತ ಮುಂಚೆಯೇ ಅವನು ತಿಳಿದಿದ್ದನು. ಆದರೆ ತನ್ನ ತಂದೆಯವರು ಹೇಳಿದ್ದ ಮಾತನ್ನು ನೆನೆದುಕೊಂಡಾಗಲೆಲ್ಲಾ ಅವನಿಗೆ ದುಃಖವುಂಟಾಗಿ ಎಳೆಯ ಮಕ್ಕಳಂತೆ ಅಳುತ್ತಿದ್ದನು. ಅವನು ಆ ದಿವಸ ಅತ್ತಂತೆ ತನ್ನ ಜೀವಮಾನದಲ್ಲಿ ಮತ್ತಾವಾಗಲೂ ಅತ್ತುದಿಲ್ಲವಂತೆ.

ಪರೀಕ್ಷೆಯಲ್ಲಿ ಜೋಡಿದಾರನಿಗೆ ಉತ್ಸಾಹವಿರಲಿಲ್ಲ. ಪ್ರಶ್ನೆ ಪತ್ರಿಕೆಯನ್ನು ಕೈಗೆ ತೆಗೆದುಕೊಂಡ ಕೂಡಲೆ ತಂದೆಯ ಮಾತುಗಳು ಜ್ಞಾಪಕ ಬರುತ್ತಿದ್ದುವು.

ಅಂತೂ ಆ ವರುಷವೇ ಅವನು ಪರೀಕ್ಷೆಯಲ್ಲಿ ತೇರ್ಗಡೆಯಾಗಿಬಿಟ್ಟನು.

೪. ಕುದುರೆ ಸವಾರಿ ಕಲಿತುದು

ಈ ಮಧ್ಯೆ ಜೋಡಿದಾರನು ಮತ್ತೊಂದು ಸಾಧನೆಯನ್ನು ಪ್ರಾರಂಭಿಸಿಬಿಟ್ಟನು. ಈಜುವುದು, ಮರಹತ್ತುವುದರ ಜೊತೆಗೆ ಕುದುರೆ ಸವಾರಿ ಬೇರೆ ಪ್ರಾರಂಭವಾಯಿತು. ಬೀದಿಯಲ್ಲಿ ಮೇಯುತ್ತಿದ್ದ ಯಾವ ಬಡಕಲ ಕುದುರೆಯನ್ನೂ ಇವನು ಬಿಡುತ್ತಿರಲಿಲ್ಲ. ಸ್ವಲ್ಪ ಬಲವಾದ ಕತ್ತೆ ಸಿಕ್ಕಿದ್ದರೆ ಅದರಮೇಲೂ ಸವಾರಿಮಾಡುತ್ತಿದ್ದನೇನೊ? ಅವನ ಮನೆಯ ಮಗ್ಗುಲಲ್ಲಿ ಒಂದು ದೇವಸ್ಥಾನವಿದೆ. ಅದರ ಸುತ್ತಲೂ ಗೋಡೆ. ಜೋಡಿದಾರನು ಬೀದಿಯಲ್ಲಿ ಕಾಣುತ್ತಿದ್ದ ಕುದುರೆಗಳನ್ನೆಲ್ಲಾ ಆ ಗುಡಿಯೊಳಕ್ಕೆ ಓಡಿಸಿಕೊಂಡುಹೋಗಿ ಗುಡಿಯ ಸುತ್ತ ಸವಾರಿ ಮಾಡುತ್ತಿದ್ದನು. ಒಂದು ದಿವಸ ಬೆಳಿಗ್ಗೆ ನಮ್ಮೂರ ಶಾನುಭೋಗರ ದೊಡ್ಡ ಕುದುರೆಯು ಅವರೆ ಮನೆಯ ಬಾಗಲಿನಲ್ಲಿ ಮೇಯುತ್ತಿದ್ದಿತು. ಅದರ ಮುಂದು ಎರಡು ಕಾಲುಗಳನ್ನೂ ಕಟ್ಟಿದ್ದರು. ಜೋಡಿದಾರನು ಅದನ್ನು ದೇವಸ್ಥಾನದೊಳಕ್ಕೆಳೆದು ಕೊಂಡು ಹೋದನು.

ಮೊದಲು ಕುದುರೆಯ ಕಾಲಿನ ಹಗ್ಗವನ್ನು ಬಿಚ್ಚಿ ಆಮೇಲೆ ಅದರ ಬೆನ್ನಿನಮೇಲೆ ಹತ್ತಬೇಕಾಗಿದ್ದಿತು. ಆದರೆ ಜೋಡಿದಾರನಿಗೆ ಅಷ್ಟೊಂದು ಸಾವಧಾನವಿರಲಿಲ್ಲ. ಅವನು ಮೊದಲು ಕುದುರೆಯ ಮೇಲೆ ಹತ್ತಿ ಕುಳಿತು ಬಳಿಯಲ್ಲಿದ್ದ ಜೊತೆಗಾರನನ್ನು ಕುರಿತು 'ಕಾಲಿನ ಕಟ್ಟನ್ನು ಬಿಚ್ಚು' ಎಂದನು. ಕುದುರೆಗೆ ತಡಿಯಿಲ್ಲ ಲಗಾಮಿಲ್ಲ. ಅವನ ಸ್ನೇಹಿತನು ಕಾಲಿನ ಕಟ್ಟನ್ನು ಬಿಚ್ಚಲು ಬಗ್ಗಿದನು. ಆ ವೇಳೆಗೆ ದೇವಸ್ಥಾನದ ಹೊರಗೆ ಮತ್ತೊಂದು ಕುದುರೆ ಕೆನೆಯಿತು. ಕೂಡಲೇ ಜೋಡಿದಾರನು ಕುಳಿತಿದ್ದ ಕುದುರೆಯು ಮುಂದಲ ಎರಡು ಕಾಲುಗಳನ್ನೂ ಮೇಲಕ್ಕೆತ್ತಿ ನೆಗೆಯಿತು. ಕಾಲಿನ ಕಟ್ಟನ್ನು ಬಿಚ್ಚಲು ಬಗ್ಗಿದ್ದ ಸ್ನೇಹಿತರು ಹೆದರಿ ಹಿಂದಕ್ಕೆ ಬಿದ್ದುಬಿಟ್ಟನು. ಜೋಡಿದಾರನು ಕೆಳಕ್ಕೆ ಇಳಿಯಬೇಕೆಂದು ಪ್ರಯತ್ನಿಸಿದನು. ಕುದುರೆಯು ಇಳಿಯಲು ಅವಕಾಶಕೊಡದೆ ನೆಗೆಯುತ್ತಾ ದೇವಸ್ಥಾನದ ಹೊರಗೆ ಬಂದು, ಜೋಡಿದಾರರ ಮನೆಯ ಬಾಗಲಿನಲ್ಲಿ ಎರಡು ಕಾಲುಗಳನ್ನೂ ಮೇಲಕ್ಕೆತ್ತಿ ಗಟ್ಟಿಯಾಗಿ ಮತ್ತೊಂದು ಸಲ ನೆಗೆದುಬಿಟ್ಟಿತು. ದೊಡ್ಡ ಜೋಡಿದಾರರು ಮನೆಯ ಜಗಲಿಯ ಮೇಲೆ ಸಂಧ್ಯಾವಂದನೆ ಮಾಡುತ್ತಾ ಕುಳಿತಿದ್ದವರು. ಮಗನ ಈ ಕಲ್ಕ್ಯಾವತಾರದ ವೈಭವವನ್ನು ನೋಡಿದರು. ನಮ್ಮ ನಾಯಕನು ನೆಲದ ಮೇಲೆ ಬಿದ್ದ ಕ್ಷಣವೇ ರಬ್ಬರ್ ಚೆಂಡಿನಂತೆ ಎದ್ದು ನಿಂತುಬಿಟ್ಟನು. ಅವರ ತಂದೆಯವರು ಅವನನ್ನು ನೋಡಿ “ನೀನು ಯಾವತ್ತಿದ್ದರೂ ಕುದುರೆಯಿಂದಲೇ ಬಿದ್ದು ಸಾಯುತ್ತೀಯೆ. ನಾನು ಹೇಳಿದ ಯಾವ ಮಾತೂ ಸುಳ್ಳಾಗಿಲ್ಲ" ಎಂದರು.

೫. ಕೆರೆಯನ್ನು ದಾಟುವಾಗ

ಜೋಡಿದಾರರಿಗೆ ೨೦ ವರುಷಗಳಾಗಿದ್ದಿರಬಹುದು. ಒಂದು ದಿವಸ ಅವರು ನರಸೀಪುರಕ್ಕೆ ಹೋಗಬೇಕಾಯಿತು. ಆಗ ಈಗಿನಂತೆ ಎಲ್ಲೆಲ್ಲೂ ಬಸ್ ಇರಲಿಲ್ಲ. ಒಂದು ಗಾಡಿ ಬೇಕಾದರೆ ಬಾಡಿಗೆ ಹತ್ತು ರೂಪಾಯಿ ಕೊಡಬೇಕಾಗಿದ್ದಿತು. ಜೋಡಿದಾರರಿಗೆ ಯೌವನವು ಉಕ್ಕಿ ಬರುತ್ತಿದ್ದಿತು. ಅವರು ಕಡಿದರೆ ನಾಲ್ಕಾಳು ಆಗುವಂತೆ ಇದ್ದರು, "೧೪ ಮೆಲಿ ನಡೆದೇ ಬಿಡುತ್ತೇನೆ" ಎಂದು ಅವರು ನಡೆದುಕೊಂಡೇ ಹೊರಟರು. ಇವರು ಹೊರಡುವ ವೇಳೆಗೆ ಸರಿಯಾಗಿ ಸೂರ್ಯನು ಉದಯಿಸಿ ಬರುತ್ತಿದ್ದನು. ಬೆಳಗಿನ ದೇವಿಯು ತಳಿರಿನ ಕೈಯಲ್ಲಿ ಚಿನ್ನದ ಕುಕ್ಕೆಯನ್ನು ಹಿಡಿದುಕೊಂಡು ಅದರೊಳಗೆ ಪೂಜಾದ್ರವ್ಯವನ್ನು ತೆಗೆದುಕೊಂಡು ಪೂರ್ವ ದಿಕ್ಕಿನಿಂದ ಭೂಮಿಗೆ ಬರುತ್ತಿದ್ದಳು. ಇಬ್ಬನಿಯ ಹನಿಯು ಮುತ್ತಿಟ್ಟ ಮೊಗ್ಗುಗಳೆಲ್ಲಾ, ಆಗತಾನೆ ಅರಳುತ್ತಿದ್ದುವು. ವಾಯುವು ಅವುಗಳ ಸುವಾಸನೆಯನ್ನು ಹೊತ್ತುಕೊಂಡು ಸಂಚಾರಕ್ಕೆ ಪ್ರಾರಂಭಿಸಿತ್ತು. ಹಕ್ಕಿಗಳು ಇಂಪಾದ ಗಾನದಲ್ಲಿ ಹಾಡುತ್ತಿದ್ದುವು. ಪ್ರಾತಃಕಾಲವು ಮನಸ್ಸಿಗೆ ಉಲ್ಲಾಸವನ್ನೂ ಉತ್ಸಾಹವನ್ನೂ ಉಂಟುಮಾಡುವುದಾಗಿದ್ದಿತು. ಜೋಡಿದಾರರು ಪ್ರಕೃತಿಯ ಅಂದಿನ ಅಂದವನ್ನು ನೋಡುತ್ತಾ ಸುಮಾರು ಎರಡು ಗಂಟೆ ನಡೆದರು. ಆ ವೇಳೆಗೆ ಬಿಸಿಲು ಸ್ವಲ್ಪ ತೀಕ್ಷ್ಣವಾಯಿತು. ಎಲ್ಲಾದರೂ ಒಂದು ಘಳಿಗೆ ಕುಳಿತುಕೊಂಡು ಸುಧಾರಿಸಿ ಕೊಂಡು, ಅನಂತರ ಮುಂದಕ್ಕೆ ಹೋಗೋಣವೆಂದು ಅವರು ಯೋಚಿಸುತ್ತಾ ನಿಧಾನವಾಗಿ ನಡೆಯುತ್ತಿದ್ದರು.

ಜೋಡಿದಾರರು ಮಧ್ಯೆ ಮಧ್ಯೆ ರಸ್ತೆಯನ್ನು ಬಿಟ್ಟು ಕಾಲುದಾರಿಯಲ್ಲಿ ಹೋಗುತ್ತಿದ್ದರು. ಹೀಗೆ ಮಾಡುತ್ತಿದ್ದುದರಿಂದ ದೂರವು ಸ್ವಲ್ಪ ಕಡಿಮೆಯಾಗುತ್ತಿದ್ದಿತಲ್ಲದೆ ಬೇಸರಿಕೆಯ ತಪ್ಪುತ್ತಿದ್ದಿತು. ಕಾಲುದಾರಿಯಲ್ಲಿ ನಡೆಯುತ್ತಿರುವಾಗ ಮಧ್ಯೆ ಒಂದು ಕೆರೆ ಸಿಕ್ಕಿತು. ಆ ಕೆರೆಯ ಕೋಡಿಯ ನೀರು ಕಾಲುವೆಯಂತೆ ೩ ಫರ್ಲಾಂಗ್ ದೂರ ಹರಿದು ಹೋಗಿದ್ದಿತು. ಆ ಮೂರು ಫರ್ಲಾಂಗನ್ನು ಸುತ್ತಿಕೊಂಡು ಸರಿಯಾದ ದಾರಿಗೆ ಹೋಗಬೇಕಾಗಿದ್ದಿತು. ಬೇಸಗೆಯ ಕಾಲದಲ್ಲಿ ಕೋಡಿಯಲ್ಲಿ ನೀರು ಇರುತ್ತಿರಲಿಲ್ಲವಾದುದರಿಂದ, ಸುತ್ತಬೇಕಾದ ಆವಶ್ಯಕವಿರಲಿಲ್ಲ. ಆಗ ೩ ಫರ್ಲಾಂಗ್ ದೂರ ಉಳಿತಾಯವಾಗುತ್ತಿತ್ತು. ಜೋಡಿದಾರರಿಗೆ ನೀರನ್ನು ಕಂಡ ಒಡನೆಯೆ ಆನಂದವಾಯಿತು. ಈ ೩ ಫರ್ಲಾಂಗ್ ದೂರವನ್ನು ಉಳಿಸಿಬಿಡುತ್ತೇನೆ ಎಂಬುದಾಗಿ ಮನಸ್ಸಿನಲ್ಲಿ ಯೋಚಿಸಿಕೊಂಡರು. ಕೋಡಿಯು ಸುಮಾರು ೨೦ ಅಡಿ ಮಾತ್ರ ಅಗಲವಾಗಿದ್ದಿತು. ಅದನ್ನು ಹಾಯ್ದುಕೊಂಡು ಆಚೆಕಡೆಗೆ ಹೋಗಬೇಕೆಂದು ಯೋಚಿಸಿ, ಜೋಡಿದಾರರು ಉಟ್ಟ ಪಂಚೆಯನ್ನೂ ಅಂಗಿಯನ್ನೂ ಬಿಚ್ಚಿ ತಲೆಗೆ ಕಟ್ಟಿ, ಒಂದು ಚೌಕವನ್ನು ಸೊಂಟಕ್ಕೆ ಸುತ್ತಿಕೊಂಡು ಹೊರಟರು. ಜೋಡಿದಾರರ ಗ್ರಹಚಾರ, ಆ ಕಾಡಿನಲ್ಲಿಯೂ ಕೂಡ ಅದೃಷ್ಟವು ಅವರಿಗೆ ಎದುರಾಗಿದ್ದಿತು.

ಇವರು ಯಾವ ನೇರದಲ್ಲಿ ಹಾಯುವದಕ್ಕಾಗಿ ಕೋಡಿಗೆ ಇಳಿದರೋ, ಅದೇ ನೇರದಲ್ಲಿ ಎದುರು ದಡದಲ್ಲಿ ಗಂಗಡಿಕಾರರ ಹುಡುಗಿಯೊಬ್ಬಳು ಶಾಲೆ ಸೆಣೆ ಸೀರೆ ಒಗೆಯುತ್ತಿದ್ದಳು. ಈ ಧಾಂಡಿಗನನ್ನು ನೋಡಿ ಅವಳಿಗೆ ಭಯವೂ ಆಶ್ಚರವೂ ಉಂಟಾದುವು. "ದಾರಿ ೩ ಫರ್ಲಾಂಗ್ ಆಚೆ ಇದೆ. ಇಲ್ಲಿಯೋ ನೀರು ಕತ್ತುದ್ದ ಇದೆ. ಇವನನ್ನು ನೋಡಿದರೆ ಯಮನಂತೆ ಕಾಣುತ್ತಾನೆ. ದಾರಿಯನ್ನು ಬಿಟ್ಟು, ಈ ಆಳುದ್ದ ನೀರನ್ನು ಇವನು ಹಾಯುವದಕ್ಕೇನು ಕಾರಣ” ಎಂದು ಅವಳು ಯೋಚಿಸತೊಡಗಿದಳು. ಅವಳಿಗೆ ವಯಸ್ಸು ೧೮ ಇದ್ದಿರಬಹುದು. ಸಾಮಾನ್ಯವಾಗಿ ರೂಪವತಿ ಯಾಗಿದ್ದಳು. ಆದರೆ ತಾನು ಬಹಳ ರೂಪವತಿಯೆಂದು ಅವಳಿಗೆ ನಂಬಿಕೆಯಾಗಿಬಿಟ್ಟಿದ್ದಿತು. ಜೋಡಿದಾರರ ಗ್ರಹಚಾರಕ್ಕೆ ಅವಳು “ಈ ಹಾರುವ ನನ್ನನ್ನ ಹಿಡೊಕೋಳೋಕ್ಬರ್‍ತಾನೆ" ಎಂಬುದಾಗಿ ಗಟ್ಟಿಯಾಗಿ ಕೂಗಿ ಕೊಂಡಳು. ಅವಳ ಕೂಗನ್ನು ಕೇಳಿ ಜೋಡಿದಾರರಿಗೆ ಆಶ್ಚರವಾಯಿತು. ಅವರು ನಗುತ್ತಾ ಮನಸ್ಸಿನಲ್ಲಿ "ಈ ಹೆಣ್ಣಿನ ಹೆಮ್ಮೆ ಹೇಳೋಕಿಲ್ಲ. ಸ್ವಲ್ಪ ಕೆಂಪು ತುಟಿ ಹೊಳೆಯುವ ಕಣ್ಣು ಇದ್ದ ಮಾತ್ರಕ್ಕೆ ತಾನೇ ರತಿ, ಲೋಕವೆಲ್ಲಾ ತನ್ನನ್ನೆ ಹಿಡಿದುಕೊಳ್ಳುವುದಕ್ಕೆ ಬರುತ್ತೆ ಅಂತ ತಿಳಿದಿದ್ದಾಳೆ" ಎಂದುಕೊಂಡು ಸುಮ್ಮನಾದರು. ಕೋಡಿಯನ್ನು ದಾಟಿ ಮೇಲಕ್ಕೆ ಹತ್ತಿದ ಕೂಡಲೇ, ತಾವು ಕಟ್ಟಿಕೊಂಡಿದ್ದ ಔದಾಸೀನ್ಯದ ಗಾಳಿಯ ಗೋಪುರವು ಪುಡಿ ಪುಡಿಯಾಯಿತೆಂಬುದು ಅವರಿಗೆ ಗೊತ್ತಾಯಿತು. ಅಂದು ಅವರು ಅನುಭವಿಸಿದುದನ್ನು ಮತ್ತೆ ಮರೆಯುವಂತೆ ಇಲ್ಲ. ನೆನಸಿಕೊಂಡರೆ ಈಗಲೂ ಮೈನಡುಕ ಬರುತ್ತೆ ಎಂಬುದಾಗಿ ಹೇಳುತ್ತಾರೆ. ಹುಡುಗಿಯ ಕೂಗನ್ನು ಕೇಳಿ ಸುತ್ತಮುತ್ತ ಕೆಲಸ ಮಾಡುತ್ತಿದ್ದವರೆಲ್ಲಾ ಕೈಯಲ್ಲಿ ಒಂದೊಂದು ದೊಣ್ಣೆಯನ್ನು ಹಿಡಿದುಕೊಂಡು ಇವರ ಕಡೆಗೆ ಬರುತ್ತಿದ್ದರು. ಹೊಲಗಳಲ್ಲಿಯೂ ಗದ್ದೆಗಳಲ್ಲಿಯೂ ಉಳುತ್ತಿದ್ದವರೆಲ್ಲಾ ಆರುಗಳನ್ನು ಅಲ್ಲಿಯೇ ಬಿಟ್ಟು ಕೈಯಲ್ಲಿ ಉಳುವ ಕೋಲನ್ನು ಹಿಡಿದುಕೊಂಡು ಓಡಿಬರುತ್ತಿದ್ದರು. ತೋಟಗಳಲ್ಲಿ ಕೆಲಸ ಮಾಡುತ್ತಿದ್ದವರು ಗುದ್ದಲಿ ಕುಡುಗೋಲುಗಳನ್ನು ಹಿಡಿದುಕೊಂಡೇ ಇವರ ಕಡೆಗೆ ಧಾವಿಸಿ ಬರುತ್ತಿದ್ದರು. ದನ ಕಾಯುವ ಹುಡುಗರು ದನಗಳನ್ನು ಅಲ್ಲಿಯೇ ಬಿಟ್ಟು ಓಡಿಬರುತ್ತಿದ್ದರು. ಕೆಲವರು ಹೆಂಗಸರೂ ಕೂಡ ಕೈಗಳಲ್ಲಿ ದೊಣ್ಣೆಗಳನ್ನೂ ಸಮ್ಮಾರ್ಜನಿಗಳನ್ನೂ ಹಿಡಿದುಕೊಂಡು ಬರುತ್ತಿದ್ದರು. ಇದನ್ನು ನೋಡಿ ಜೋಡಿದಾರರ ಎದೆ ಒಡೆದುಹೋಯಿತು. ಓಡಿಬರುತ್ತಿದ್ದವರೆಲ್ಲರೂ ಯಮದೂತರಂತೆ ಕಂಡರು. ಮೃತ್ಯುವು ಅವರ ಎದುರಿಗೆ ವಾಯುವೇಗದಲ್ಲಿ ಬರುತ್ತಿದ್ದಿತು. ಅವರು ಯಾವ ಕಡೆ ನೋಡಿದರೂ ೧೦ ಜನರು ಇವರ ಕಡೆಗೆ ಬರುತ್ತಿದ್ದರು. ಕೆಲಸ ಕೆಟ್ಟಿತೆಂದು ಜೋಡಿದಾರರು ವಿನಯದಿಂದ "ತಾಯಿ" ಎಂದರು. ಆ ಹುಡುಗಿಯು ತಾಯಿಯೂ ಅಲ್ಲ ಮಗನೂ ಅಲ್ಲ, ಅಲ್ಲಿ ನೋಡು ನಿನಗೆ ಹುಟ್ಟಿದ ದಿವಸ ಕಾಣುತ್ತೆ" ಎಂದಳು. ಜೋಡಿದಾರರಿಗೆ ಮತ್ತೇನೂ ತೋಚಲಿಲ್ಲ. ಹೊಡೆದಾಡುವುದಕ್ಕೆ ಮೊದಲೇ ಪುಳಿಚಾರು. ಅಲ್ಲದೆ ನೂರಾರು ಜನರ ಎದುರಾಗಿ ಒಬ್ಬ ಕಾದಾಡುವುದೆಂದರೆ ಸಾಮಾನ್ಯವೆ? ಅವರೆಲ್ಲಾ ಬಂದ ಮೇಲೆ ಎಲ್ಲರಿಗೂ ಸಮಾಧಾನವನ್ನು ಹೇಳಿ ತನ್ನ ನಿರಪರಾಧಿತ್ವವನ್ನು ತೋರಿಸಿಕೊಳ್ಳಬಹುದಾಗಿದ್ದಿತು. ಆದರೆ ಅಲ್ಲಿ ಬರುತ್ತಿರುವವರು ಸಮಾಧಾನವನ್ನು ಕೇಳಲು ಬರುವವರಾಗಿರಲಿಲ್ಲ. ಮಾತು ಕಥೆ ಯಾವುದೂ ನಡೆಯುವುದಕ್ಕೆ ಮುಂಚೆ ಪ್ರತಿಯೊಬ್ಬನೂ ಒಂದೊಂದು ಬೈಗಳದೊಂದಿಗೆ ಇವರಿಗೆ ಒಂದೊಂದು ಏಟನ್ನು ಹಾಕಿಬಿಡುತ್ತಿದ್ದನು. ಮಾತು ಕಥೆ ಸಮಾಧಾನ ಇದೆಲ್ಲಾ ಆಮೇಲೆ. ಆದುದರಿಂದ ಜೋಡಿದಾರರು ಅಲ್ಲಿ ಹೆಚ್ಚು ಹೊತ್ತು ನಿಂತರೆ ಪ್ರಯೋಜನವಿಲ್ಲವೆಂದುಕೊಂಡು “ಕಾಲಾಯ ತಸ್ಯೆ ನಮಃ” ಕಾಲಿಗೆ ಬುದ್ದಿ ಹೇಳಿ ಓಡುವುದಕ್ಕೆ ಪ್ರಾರಂಭಿಸಿದರು. ಈಗ ಅವರ ಜೀವನ ಮರಣಗಳು ಅವರ ಕಾಲಿನ ಮೇಲೆ ಅವಲಂಬಿಸಿದ್ದುವು. “ತಲೆ ಹೋಗುವುದಕ್ಕೆ ಕಾಲು ಹೊಣೆ?" ಎಂಬ ನುಡಿಯು ನಿಶ್ಚಯವಾಗಿಯೂ ಅವರಿಗೆ ಅನ್ವಯಿಸುವಂತಾಯಿತು. ಪಾಪ ಅವರಿಗೆ ಬೆಳಗಿನಿಂದ ಆಯಾಸವಾಗಿ ಸುದಾರಿಸಿಕೊಳ್ಳಬೇಕು ಎನ್ನುವ ಹೊತ್ತಿಗೆ ಇದೊಂದು ಗ್ರಹಚಾರ ಬಂದಿತು. ಆದರೇನು? ಹಳ್ಳಿಯವರು ಇವರನ್ನು ಬಿಡಲಿಲ್ಲ. ಜೋಡಿದಾರರು ಮುಂದೆ ಅವರು ಹಿಂದೆ; ಹುಚ್ಚು ನಾಯಿಯನ್ನು ಓಡಿಸಿಕೊಂಡು ಹೋದಂತೆ ಇವರನ್ನು ಓಡಿಸಿಕೊಂಡು ಹೋದರು. ಜೋಡಿದಾರರು ಪಂಚೆಯನ್ನುಟ್ಟಿರಲಿಲ್ಲ. ಅದು ಇನ್ನೂ ಅವರ ತಲೆಯ ಮೇಲೆಯೇ ಇದ್ದಿತು. ಕೋಡಿಯನ್ನು ದಾಟುವುದಕ್ಕಾಗಿ ಸೊಂಟಕ್ಕೆ ಸುತ್ತಿದ್ದ ಒಂದು ಚೌಕದ ಹೊರತು ಮತ್ತಾವ ಬಟ್ಟೆಯನ್ನೂ ಇವರು ತೊಟ್ಟಿರಲಿಲ್ಲ. ಬೆಳಗಿನಿಂದಲೂ ನಡೆದು ಆಯಾಸಗೊಂಡಿದ್ದುದರಿಂದ ಇವರ ವೇಗವು ನಿಧಾನವಾಗಿ ಕಡಮೆಯಾಗುತ್ತಾ ಬಂದಿತು. ಇವರಿಗೂ ಇವರ ಬೇಟೆಗಾರರಿಗೂ ನಡುವೆ ಇದ್ದ ದೂರವ ಕಡಮೆಯಾಯಿತು. ತಮಗೆ ನೂರು ವರುಷ ಅಂದಿಗೆ ತುಂಬಿತೆಂದು ಅವರು ತಿಳಿದರು. ಆದದಾಗಲಿ ಇನ್ನು ಓಡುವುದಕ್ಕೆ ಆಗುವುದಿಲ್ಲ ಕುಳಿತುಬಿಡುತ್ತೇನೆ ಎಂದು ಅವರು ಯೋಚಿಸು ತಿದ್ದರು. ಎದುರಿಗೆ ಮತ್ತೊಂದು ಹಳ್ಳಿಯು ಕಣ್ಣಿಗೆ ಬಿದ್ದಿತು. "ಆ ಹಳ್ಳಿಗೆ ಹೋಗಿಬಿಡುತ್ತೇನೆ. ಅವರೂ ಇವರಂತೆ ರಾಕ್ಷಸರಾಗಿರಲಾರರು" ಎಂದುಕೊಂಡು ಆ ಹಳ್ಳಿಯವರೆಗೆ ಓಡಿದರು.

ಆ ಹಳ್ಳಿಯ ಊರುಬಾಗಲಿನ ಅರಳೀಕಟ್ಟೆಯ ಮೇಲೆ, ಆ ಗ್ರಾಮದ ಪಟೇಲನು ಕುಳಿತಿದ್ದನು. ಬೆತ್ತಲೆ ಓಡಿಬಂದ ಈ ಬಡ ಬ್ರಾಹ್ಮಣನ ಅವಸ್ಥೆಯನ್ನು ಏನೆಂದು ವಿಚಾರಿಸಿದನು. ಜೋಡಿದಾರರಿಗೆ ಪಾಪ ಮಾತನಾಡು ವುದಕ್ಕೆ ಸಹ ಉಸಿರಿರಲಿಲ್ಲ. ಬಾಯೆಲ್ಲಾ ಒಣಗಿಹೋಗಿದ್ದಿತು. ಅವರು ತಮ್ಮ ಬೇಟೆಗಾರರ ಕಡೆಗೆ ಕೈ ತೋರಿಸಿ ನಡೆದ ವಿಷಯವನ್ನು ಎರಡು ಮಾತಿನಲ್ಲಿ ಹೇಳಿದರು. ಪಟೇಲನು 'ಸುದಾರಿಸಿಕೊಳ್ಳಿ, ನಿರಪರಾಧಿಗಳಿಗೆ ಭಯವಿಲ್ಲ' ಎಂದನು.

ವಿಚಾರಣೆಯಾಯಿತು. ಜೋಡಿದಾರರದು ತಪ್ಪಿಲ್ಲವೆಂದು ತೀರ್ಮಾನವಾಯಿತು. ಆದರೂ ಹಳ್ಳಿಯವರು ಇವರ ಕಡೆಗೆ ಕಣ್ಣನ್ನು ಕೆರಳಿಸಿ "ಲೋ ಹಾರುವಾ ಈವತ್ತು ತಪ್ಪಿಸಿಕೊಂಡೆ ಹೋಗು. ಇನ್ನೊಂದು ದಿವಸ ನಮಗೆ ಸಿಕ್ಕಿದರೆ ನಿನ್ನ ಚರ್ಮವನ್ನು ಸುಲಿದುಬಿಡುತ್ತೇವೆ" ಎಂದರು. ಜೋಡಿದಾರರು ಅಂದಿನಿಂದ ಈಚೆಗೆ ಆ ದಾರಿಯಲ್ಲಿ ನರಸೀಪುರಕ್ಕೆ ಹೋಗಲಿಲ್ಲ. ಈಗವರು ಹೋಗಬೇಕಾದರೂ ೪೦ ಮೈಲು ದೂರವಿರುವ ಮತ್ತೊಂದು ದಾರಿಯಲ್ಲಿ ಬಳಸಿಕೊಂಡು ಹೋಗುತ್ತಾರೆಯೇ ಹೊರತು, ೧೪ ಮೈಲು ಇರುವ ಈ ದಾರಿಯಲ್ಲಿ ಹೋಗುವುದಿಲ್ಲ.

೬. ಜೋಡಿದಾರರ ಬ್ರಹ್ಮಾಸ್ತ್ರ

ಈಗ ನಮ್ಮ ಜೋಡಿದಾರರಿಗೆ ವಯಸ್ಸು ೬೦ ಆಗಿಹೋಗಿದೆ. ಆದರೂ ದೃಢಕಾಯರಾಗಿದ್ದಾರೆ. ಹಿಂದೆ ಕಲಿತ ಇಂಗ್ಲಿಷೆಲ್ಲಾ ಮರೆತುಹೋಗಿದೆ. ೪-೬ ಸಂಸ್ಕೃತ ಶ್ಲೋಕಗಳನ್ನು ಉರುಹಾಕಿ ಅವಿದ್ಯಾವಂತರ ಎದುರಿನಲ್ಲಿ ತಾವೇ ಸಂಸ್ಕೃತ ವಿದ್ವಾಂಸರೆಂದು ನಟಿಸುತ್ತಾರೆ. ಎಲ್ಲೋ ಒಂದೊಂದು ಇಂಗ್ಲಿಷ್ ಪದವನ್ನು ಮಧ್ಯೆ ಮಧ್ಯೆ ಸೇರಿಸುತ್ತಾರೆ. ಹೊಟ್ಟೆ ಮಿತಿಮೀರಿ ಬೆಳೆದಿದೆ. ಸಿಟ್ಟೂ ಹೆಚ್ಚಾಗಿದೆ. ಆದರೆ ಆ ಸಿಟ್ಟಿನಿಂದ ಇತರರಿಗೆ ಏನೂ ತೊಂದರೆಯಿಲ್ಲ. ತೊಂದರೆಯೆಲ್ಲಾ ಅವರಿಗೆಯೆ. ಮಹಾತ್ಮಾ ಗಾಂಧಿಯವರೋ ಯಾರೋ ಸತ್ಯಾಗ್ರಹವೆಂಬ ಒಂದು ಅಸ್ತ್ರವನ್ನು ಎಲ್ಲಾದಕ್ಕೂ ಎದುರಾಗಿ ಹಿಡಿದಿದ್ದಾರಂತೆ. ಹಾಗೆಯೇ ನಮ್ಮ ಜೋಡಿದಾರರು ಎಲ್ಲಾದಕ್ಕೂ ಎದುರಾಗಿ, ವಿಕಾರವಾಗಿ ಕೂಗಿ ಬಾಯ ಬಡದುಕೊಳ್ಳುವ ಒಂದು ಅಸ್ತ್ರವನ್ನು ಹಿಡಿದಿದ್ದಾರೆ. ಈ ಅಸ್ತ್ರವು ಮಾಡುವಂತಹ ಕೆಲಸವನ್ನೂ, ಸಾಧನೆಯನ್ನೂ, ಮತ್ತಾವ ಅಸ್ತ್ರವೂ ಮಾಡುವುದಿಲ್ಲವೆಂದು ಅವರ ದೃಢವಾದ ನಂಬುಗೆ.

ಒಂದು ದಿವಸ ಇವರ ಹೆಸರ ಗದ್ದೆಗೆ ಪೇಟೆಯಲ್ಲಿ ಯಾರೋ ಒಬ್ಬನ ಎಮ್ಮೆ ನುಗ್ಗಿತು. ಎಮ್ಮೆಯು, ಒಂದು ಕಡೆಯಿಂದ ಹೂವು ಕಾಯಿಗಳಿಂದ ತುಂಬಿದ ಪೈರನ್ನೆಲ್ಲಾ ಮೇಯುತ್ತಾ ಬಂದಿತು. ಪಾಪ ಕಷ್ಟಪಟ್ಟು ತಾವು ಬೆಳೆಸಿದ್ದ ಪೈರು ಹಾಳಾದುದನ್ನು ಕಂಡು ಜೋಡಿದಾರರಿಗೆ ಬಹಳ ದುಃಖವುಂಟಾಯಿತು. ಆ ಪುಣ್ಯಾತ್ಮ ಆ ಎಮ್ಮೆಯನ್ನು ಗದ್ದೆಯಿಂದ ಹೊರಕ್ಕೆ ಅಟ್ಟಲೇ ಇಲ್ಲ. ಅದು ಯಾರದೆಂದು ತಿಳಿದುಕೊಂಡು, ಅದನ್ನು ಅಲ್ಲೇ ಮೇಯುವುದಕ್ಕೆ ಬಿಟ್ಟು, ನೇರವಾಗಿ ಪೇಟೆಗೆ ಎಮ್ಮೆಯ ಒಡೆಯನ ಬಾಗಲಿಗೆ ಬಂದು, ಒಂದು ಸಲ ಬಾಯಿ ಬಡದುಕೊಂಡ. ಯಾರನ್ನೂ ಹೊಡೆಯಲಿಲ್ಲ ಬಯಲಿಲ್ಲ. ಉಳಿದವರಂತೆ ಎಮ್ಮೆಯ ಕಾಲು ಮುರಿಯಲಿಲ್ಲ. ಎಮ್ಮೆಯ ಯಜಮಾನನಿಗೆ ಅದಕ್ಕಿಂತ ಹೆಚ್ಚು ಶಿಕ್ಷೆಯು ಬೇಕಾಗಲಿಲ್ಲ. ಅಲ್ಲಿಂದ ಈಚೆಗೆ ಅವನು ಎಮ್ಮೆಯನ್ನು ಜೋಡಿದಾರರ ಗದ್ದೆ ಇರುವ ದಿಕ್ಕಿಗೇ ಬಿಡುತ್ತಿಲ್ಲ.

ಒಂದುಸಲ ಜೋಡಿದಾರರು -ನಕ್ಕೆ ಹೋಗಬೇಕಾಯಿತು. ಒಂದು ಗಾಡಿಯನ್ನು ಬಾಡಿಗೆಗೆ ಗೊತ್ತುಮಾಡಿದರು. ಆಗ ಮಳೆಗಾಲ. ಬಾಕಿ ಕಾಲಗಳಲ್ಲಿ ಒಂದು ಗಾಡಿ ೨ ರೂಪಾಯಿಗೆ ದೊರೆಯುತ್ತಿದ್ದಿತು. ಆದರೆ ಆ ದಿವಸ ಗಾಡಿಯವನು ಜೋಡಿದಾರರ ಅವಸರವನ್ನು ನೋಡಿ ಎದ್ದು ಹೋಗುವ ಮಾತು ಬಿದ್ದು ಹೋಗಲಿ ಅಂತ ಒಂದು ಗಾಡಿಗೆ ೧೦ ರೂಪಾಯಿ ಹೇಳಿಬಿಟ್ಟ. ೧೪ ಮೈಲಿಗೆ ೧೦ ರೂಪಾಯಿ. ೧೦ ರೂಪಾಯಿಗಳಿಗೆ ನಾಲ್ಕು ಗಾಡಿಗಳು ಬರುತ್ತಿದ್ದುವು. ಆದರೆ ಜೋಡಿದಾರರಿಗೆ ಹೆಚ್ಚಾಗಿ ಚೌಕಶಿ ಮಾಡಲು ಇಷ್ಟವಿರಲಿಲ್ಲ. ಅವರು “೯ ರೂಪಾಯಿಗೆ ಬರುತ್ತೀಯಾ?” ಎಂದರು. ಗಾಡಿಯವನು “ಆಗೋಕಿಲ್ಲ ಸ್ವಾಮಿ, ಮಳ್ಗಾಲ. ಹತ್ತು ರೂಪಾಯಿ ಕೊಟ್ಭಿಡಿ” ಅಂದ. ಜೋಡಿದಾರರು ಆವಶ್ಯಕವಾಗಿ-ಗೆ ಆ ದಿವಸ ಹೋಗಬೇಕಾಗಿದ್ದುದರಿಂದ ೧೦ ರೂಪಾಯಿಗಳನ್ನೇ ಕೊಡಲು ಒಪ್ಪಿದರು.

ಬೆಳಗಿನ ಜಾವ. ಮಳೆಯು ಬಹಳ ಜೋರಾಗಿ ಬರುತ್ತಿದ್ದಿತು. ಮಳೆಯ ಹನಿಯ ಬಾಣದ ಹೊಡೆತಗಳನ್ನು ತಾಳಲಾರದೆ ಎತ್ತುಗಳು ಸೋತು ಮೆಲ್ಲನೆ ಮುಂದಕ್ಕೆ ನಡೆಯುತ್ತಿದ್ದುವು. ಕಪ್ಪೆಗಳೆಲ್ಲಾ ಬೇಕಾದಂತೆ ಒಟಗುಟ್ಟುತ್ತಿದ್ದುವು. ಮಳೆಯ ನೀರು ರಸ್ತೆಯ ಉದ್ದಕ್ಕೂ ದಡಬಡನೆ ಹರಿಯುತ್ತಿದ್ದಿತು. ಜೋಡಿದಾರರು ಗಾಡಿಯೊಳಗೆ ಮಲಗಿಕೊಂಡಿದ್ದರು. ಅವರಿಗೆ ನಿದ್ರೆ ಬಂದಿದ್ದಿತು. ಗಾಡಿಯವನು ಮಳೆಯು ನಿಂತಮೇಲೆ ಹೊರಡೋಣವೆಂದು, ರಸ್ತೆಯ ಮಗ್ಗುಲಲ್ಲಿದ್ದ ಒಂದು ಹಳ್ಳಿಯ ಊರ ಮುಂದಲ ಮರದ ಕೆಳಗೆ ಗಾಡಿಯನ್ನು ಬಿಟ್ಟನು. ಮಳೆಯು ಸಹಿಸಲಸಾಧ್ಯವಾಗಿ ಬೀಳುತ್ತಿದ್ದಿತು. ಗಾಡಿಯವನ ಮೈ ನಡುಗುತಿದ್ದಿತು. ಬಟ್ಟೆಗಳೆಲ್ಲಾ ನೆನೆದುಹೋಗಿದ್ದುವು. ಗಾಡಿಯಲ್ಲಿ ಬೇಕಾದಷ್ಟು ಸ್ಥಳವಿದ್ದಿತು. ಜೋಡಿದಾರರು ಮಲಗಿ ಗೊರಕೆ ಹೊಡೆಯುತ್ತಿದ್ದರು. ಮನುಷ್ಯ ಪ್ರಾಣಿಯಲ್ಲವೆ? ಪಾಪ ಅವನೂ ಗಾಡಿಯೊಳಗೆ ಒಂದು ಮಗ್ಗುಲಿಗೆ ಕುಳಿತುಕೊಂಡನು. ರಾತ್ರಿಯೆಲ್ಲಾ ನಿದ್ರೆಯಿಲ್ಲದುದರಿಂದ ಮಳೆಯಿಂದ ಆಶ್ರಯವು ಸಿಕ್ಕಿದಕೂಡಲೆ ನಿದ್ರೆ ಬಂದುಬಿಟ್ಟಿತು.

ಬೆಳಗಾಯಿತು. ಮಳೆಯು ನಿಂತುಹೋಗಿದ್ದಿತು. ಜೋಡಿದಾರರಿಗೆ ಮೊದಲು ಎಚ್ಚರವಾಯಿತು. ಗಾಡಿಯವನು ಇನ್ನೂ ಗೊರಕೆ ಹೊಡೆಯುತ್ತಲೇ ಇದ್ದನು. ನೋಡಿದಕೂಡಲೆ ಅವರಿಗೆ ಬಹಳ ಕೋಪಬಂದಿತು. ಗಾಡಿಯವನು ೧೦ ರೂಪಾಯಿ ತೆಗೆದುಕೊಂಡುದಲ್ಲದೆ ಗಾಡಿಯೊಳಗೆ ಕುಳಿತುದನ್ನೂ ಕಂಡು ಆ ಚಳಿಯಲ್ಲಿಯೂ ಅವರ ಮೈ ಬೆವರಿತು. ಮತ್ತಾರಾದರೂ ಆಗಿದ್ದರೆ ಗಾಡಿಯವನನ್ನು ಒದ್ದು ಎಬ್ಬಿಸುತ್ತಿದ್ದರು. ಜೋಡಿ ದಾರರು ಅವನಿಗೆ ಹಾಗೆ ತೊಂದರೆಯನ್ನು ಕೊಟ್ಟು ಅವನ ನಿದ್ರೆಯನ್ನು ಹಾಳುಮಾಡಲಿಲ್ಲ. ಅವರ ಬ್ರಹ್ಮಾಸ್ತ್ರವಿದೆಯಲ್ಲ; ಗಾಡಿಯಿಂದ ಕೆಳಕ್ಕಿಳಿದು ಒಂದುಸಲ ಬಾಯಿ ಬಡಿದುಕೊಂಡರು. ನೀವು ಈಗ ಏನು ಹೇಳುತ್ತೀರಿ. “ಆಭಾಸ, ಅಪಾಯಕರ, ಶುದ್ದ ಕಾಡುಮನುಷ್ಯ” ಎಂದು. ಆಭಾಸವೋ ಅಪಾಯಕರವೋ ಅವರು ಮಾಡಿದಷ್ಟು. ಗಾಡಿಯವನಿಗೆ ಎಚ್ಚರವಾಯಿತು. ಅವನು ಕೆಳಕ್ಕೆ ಇಳಿದು ಗಾಬರಿಯಿಂದ "ಏನು ಸ್ವಾಮಿ ಯಾತಕ್ಕೆ" ಎಂದನು. ಜೋಡಿದಾರರು ಮಾತನಾಡಲಿಲ್ಲ. ಹಳ್ಳಿಯವರೆಲ್ಲಾ ಪ್ರಭಾತದಲ್ಲಿ ಉಂಟಾದ ಈ ಮಂಗಳ ಧ್ವನಿಯನ್ನು ಕೇಳಿ, ಹೊರಕ್ಕೆ ಬಂದರು. ಮಹೋದರರಾಗಿ ಕಣ್ಣಿನಲ್ಲಿ ಕೆಂಡವನ್ನುಗುಳುತ್ತಿರುವ ಜೋಡಿದಾರರು, ಅವರ ಎದುರಿಗೆ ಮಿಟಮಿಟನೆ ಕಣ್ಣನ್ನು ಬಿಡುತ್ತಿದ್ದ ಗಾಡಿಯ ಆಳು. ಊರಿನ ಪಟೇಲನು ಬಂದು ಜೋಡಿದಾರರನ್ನು ಕುರಿತು 'ವಿಚಾರವೇನು ಬುದ್ದಿ' ಎಂದನು. ಜೋಡಿದಾರರ “ವಿಚಾರವೇನಯ್ಯ, ನಾನು ಹತ್ತು ರೂಪಾಯಿ ಕೊಟ್ಟು ಗಾಡಿಯನ್ನು ಬಾಡಿಗೆಗೆ ತೆಗೆದುಕೊಂಡುದು ಇವನು ಮಲಗುವುದಕ್ಕಾಗಿಯೇ” ಎಂದರು. ೧೪ ಮೈಲಿಗೆ ಹತ್ತು ರೂಪಾಯಿಗಳನ್ನು ಕೊಟ್ಟುದನ್ನು ಕೇಳಿ ಹಳ್ಳಿಯವರ ಸಹಾನುಭೂತಿಯೆಲ್ಲವೂ ಜೋಡಿದಾರರ ಕಡೆಗೆ ತಿರುಗಿತು. ಗಾಡಿಯವನದೇ ತಪ್ಪೆಂದು ಅವರೆಲ್ಲರೂ ಏಕವಾಕ್ಯದಿಂದ ಹೇಳಿಬಿಟ್ಟರು. ಆದರೆ ಜೋಡಿದಾರರು ಬಾಯಿ ಬಡದುಕೊಂಡುದರ ಅರ್ಥವು ಯಾರಿಗೂ ತಿಳಿಯಲಿಲ್ಲ. ನನಗೂ ತಿಳಿಯಲಿಲ್ಲ.

ಗಾಡಿಯವನಿಗೆ ಆದ ಈ ಅಪಮಾನವನ್ನು ಕಂಡು ಜೋಡಿದಾರರಿಗೆ ಅವನಲ್ಲಿ ಬಹಳ ಕರುಣೆಯುಂಟಾಯಿತು. ಅವನಿಗೆ ಅವಮಾನ ಮಾಡಬೇಕೆಂದು ಅವರಿಗೆ ಮನಸ್ಸಿರಲಿಲ್ಲ. ಆದರೆ ೯ ರೂಪಾಯಿ ಕೊಡುತ್ತೇನೆಂದು ಹೇಳಿದ ತನ್ನ ಮಾತನ್ನು ತೆಗೆದುಹಾಕಿಬಿಟ್ಟನಲ್ಲಾ ಎಂಬ ಕೋಪ. ಒಂದು ರೂಪಾಯಿಗಾಗಿ ಅವರು ಹಿಂದೆಮುಂದೆ ನೋಡುವವರಾಗಿರಲಿಲ್ಲ. ಆದರೆ ಗಾಡಿಯವನು ತಮ್ಮ ಮಾತನ್ನು ತೆಗೆದುಹಾಕದೆ ಪ್ರಯಾಣ ಮುಗಿಸಿ ಹಿಂದಿರುಗಿದನಂತರ “ಸ್ವಾಮಿ ಏನಾದರೂ ಇನಾಂ ನಿಮ್ಮ ಹೆಸರಾಗಿ ಕೊಡಿ” ಎಂದು ಕೇಳಿದ್ದರೆ ಅವರು ಒಂದಲ್ಲ ಎರಡು ರೂಪಾಯಿಗಳನ್ನು ಕೊಟ್ಟುಬಿಡುತ್ತಿದ್ದರು. ತಾನು ಹೇಳಿದ ಮಾತನ್ನು ತೆಗೆದುಹಾಕಿಬಿಟ್ಟನಲ್ಲಾ ಎಂದು ಅವರ ಮನಸ್ಸಿನಲ್ಲಿ ಅವಮಾನವು ಕುದಿಯುತ್ತಿದ್ದಿತು. ಸ್ವಭಾವದಿಂದ ಕೋಮಲರಾದ ಅವರಿಗೆ, ಗಾಡಿಯವನಿಗಾದ ಈ ಅವಮಾನವನ್ನು ಸಹಿಸುವುದು ಆಗಲಿಲ್ಲ. ಪಾಪ ಏನೋ ಪ್ರಾಣಿ ಒಳಗೆ ಕುಳಿತರೆ ನಾನ್ಯಾಕೆ ಹುಚ್ಚನಂತೆ ಹಾರಿಬಿದ್ದೆ? ನನ್ನ ವಿವೇಕವೆಲ್ಲ ಎಲ್ಲಿಹೋಯಿತು? ನನಗೆ ವಯಸ್ಸಾದು ನಾಯಿಗೆ ಆದಂತೆ, ಎಂದು ಅವರು ಪಶ್ಚಾತ್ತಾಪಪಟ್ಟರು. ಹೊರಗಡೆಯ ತೋರಿಕೆಗೆ ಅವರೇ ಜಯಶಾಲಿಗಳಾಗಿದ್ದರೂ, ದುಃಖದಿಂದ ಅವರ ಹೃದಯವು ವಿದೀರ್ಣವಾಗಿತ್ತು. ಸಾವಿರಾರು ಜನರು ತಮ್ಮಿಂದ ಸಹಾಯವನ್ನು ಹೊಂದಿ, ನಿತ್ಯವೂ ತಮ್ಮನ್ನು ದಾತಾರರೆಂದು ಹೊಗಳುತ್ತಿರುವಾಗ, ಸ್ವಾಭಿಮಾನವೆಂಬ ಒಣ ಹೆಮ್ಮೆಗೆ ತುತ್ತಾಗಿ, ಆ ಒಬ್ಬ ಬಡ ಪ್ರಾಣಿಯನ್ನು ಒಂದು ರೂಪಾಯಿನ ನೆಪದಿಂದ ನೋಯಿಸಿದುದಕ್ಕಾಗಿ, ಅವರಿಗೆ ಬಹಳ ಸಂಕಟವಾಗಿ ತಮ್ಮನ್ನು ತಾವೇ ಹಳಿದುಕೊಂಡರು. ಗಾಡಿಯವನಂತೂ, ಪಾಪ, ಗಟ್ಟಿಯಾಗಿ ಉಸಿರು ಕೂಡ ಬಿಡದೆ, ಗಾಡಿಯನ್ನು ಹೊಡೆದುಕೊಂಡು ಹೋಗುತ್ತಿದ್ದನು. ಜೋಡಿದಾರರೊಂದಿಗೆ ತಾನು ಒಂದು ರೂಪಾಯಿಗೆ ಮಾಡಿದ ಚೌಕಶಿಯಿಂದ ಅವನಿಗೂ ಪಶ್ಚಾತ್ತಾಪವಾಗಿತ್ತು. ಜೋಡಿದಾರರನ್ನು ತಿರುಗಿ ನೋಡುವುದಕ್ಕೆ ಕೂಡ ಅವನಿಗೆ ಧೈರ್‍ಯವಿರಲಿಲ್ಲ. ಒಮ್ಮಿಂದೊಮ್ಮೆ ಮಳೆಯು ಮತ್ತೆ ಜೋರಾಗಿ ಬರಲು ಪ್ರಾರಂಭವಾಯಿತು. ಗಾಡಿಯವನ ಕಂಬಳಿ, ದಟ್ಟಿ ಎಲ್ಲಾ ತೊಯ್ದು ಹೋಗಿ ಅವನ ಮೈಯಿಂದ ನೀರು ಕೆಳಕ್ಕೆ ಸುರಿಯುತ್ತಿದ್ದಿತು. ಅವನು ಚಳಿಯಿಂದ ಗಡಗಡ ನಡುಗುತ್ತಿದ್ದನು. ಅವನನ್ನು ಕಂಡು ಜೋಡಿದಾರರಿಗೆ ಬಹಳ ಕನಿಕರವುಂಟಾಯಿತು. ಅವರು ಮೃದುವಾದ ಧ್ವನಿಯಿಂದ “ಚೆನ್ನ ಗಾಡಿಯಲ್ಲಿ ಕುಳಿತುಕೊ, ಇದುವರೆಗೆ ನೆನೆದುದೇ ಸಾಕು” ಎಂದರು. ಚೆನ್ನನು ತನ್ನ ಕಿವಿಯನ್ನೇ ತಾನು ನಂಬಲಿಲ್ಲ. ತಾನು ಹಿಂದೆ ಮಾಡಿದ ತಪ್ಪಿಗಾಗಿ ಜೋಡಿದಾರರು ತನ್ನನ್ನು ಹಾಸ್ಯ ಮಾಡುತ್ತಿರುವರೆಂದು ಅವನು ತಿಳಿದನು. ಅವನು ದೈನ್ಯದಿಂದ “ಬುದ್ದಿ, ಏನೋ ತಿಳೀಲಿಲ್ಲ. ನನ್ನ ಹಾಸ್ಯ ಮಾಡ್ಬೇಡಿ, ನಾವು ಬಡವು, ನೀವು ಕಾಪಾಡ್ದ್ರೆ ಉಂಟು. ಇಲ್ದಿದ್ರೆ ಸಾಯ್ತೇವೆ. ನನ್ನ ತಪ್ಪ ಮಾಫ್ ಮಾಡ್ಬಿಡಿ. ಮುಂದೆ ಹಾಂಗೆಂದ್ರೂ ಮಾಡೋದಿಲ್ಲ" ಎಂದನು. ಜೋಡಿದಾರರು ವಿಶ್ವಾಸದಿಂದ “ಚೆನ್ನ ಹೀಗೆಲ್ಲಾ ಮಾತ್ನಾಡ್ಬೇಡ. ಭಗವಂತನ್ಮುಂದೆ ನಾವೆಷ್ಟರವರು. ನಾನು ನಿನ್ನನ್ನು ಸಂರಕ್ಷಿಸೋಕೆ ನನಗಿರೋ ಅಂಥಾ ಅಧಿಕಾರವೇನು? ಏನೋ ನನ್ಗೂ ಸಿಟ್ಬಂತು; ನಿನ್ಗೂ ಸಿಟ್ಬಂತು. ಕಳೆದುಹೋದದ್ದನ್ನ ಚಿಂತಿಸಿ ಫಲವಿಲ್ಲ. ಒಳಗಡೆ ಕೂತುಕೊ" ಎಂದರು. ಆದರೂ ಚೆನ್ನನಿಗೆ ನಂಬಿಕೆಯಾಗಲಿಲ್ಲ. ಆ ಬಾಯಿ ಬಡಕೊಂಡ ಜೋಡಿದಾರರೆಲ್ಲಿ? ತಂದೆಯಂತೆ ಪ್ರೇಮದಿಂದ ಮಾತನಾಡುವ ಇವರೆಲ್ಲಿ? ಇದೇನು ಈ ಒಗಟೆ, ಎಂದು ಅವನು ಭ್ರಾಂತನಂತೆ ಕಣ್ಣು ಮಿಟಕಿಸಿದನು. ಜೋಡಿದಾರರು ಚೆನ್ನನನ್ನು ಎಳೆದು ಒಳಕ್ಕೆ ಕೂರಿಸಿಕೊಂಡರು. ಚೆನ್ನನು ಹುಚ್ಚನಂತೆ ಸುಮ್ಮನೆ ಕುಳಿತುಬಿಟ್ಟನು. ಎತ್ತುಗಳು ನಿಧಾನವಾಗಿ ಗಾಡಿಯನ್ನು ಎಳೆದುಕೊಂಡು ಹೋಗುತ್ತಿದ್ದುವು. ಅಂತೂ ಹಾಸನಕ್ಕೆ ಸಕಾಲದಲ್ಲಿ ತಲಪಿ, ಜೋಡಿದಾರರು ತಮ್ಮ ಕೆಲಸಗಳನ್ನೆಲ್ಲಾ ಮಾಡಿಕೊಂಡರು.

ಒಂದು ಸಲ ಬೈಗಳವನ್ನು ತಿಂದುದರಿಂದಲೇ ಚೆನ್ನನು ಈಗ ಜೋಡಿದಾರರ ಪ್ರಿಯ ಶಿಷ್ಯನಾಗಿಬಿಟ್ಟಿದ್ದನು. ಅವರು ಅವನಿಗೆ ಹಾಸನದಲ್ಲಿ ಒಂದು ರೂಪಾಯಿಯನ್ನು ಕೊಟ್ಟು “ಹೋಗು, ಮಳೆಯಿಂದ ನೆನೆದು ನಿನ್ದೇಹವೆಲ್ಲಾ ಮಂಜಿನ ಗಡ್ಡೆಯಾಗಿದೆ. ಹೋಟ್ಲಿಗೆ ಹೋಗಿ ಚೆನ್ನಾಗಿ ಬಿಸಿನೀರಿನಲ್ಲಿ ಸ್ನಾನ ಮಾಡಿ ಬಿಸಿಬಿಸಿಯಾಗಿ ಒಳ್ಳೆ ಊಟವನ್ನು ಉಂಡು ಸ್ವಲ್ಪ ಕಾಫಿಯನ್ನೂ ಕುಡಿದು ಬಾ, ನಮ್ಮ ಕಾಫಿ; ನಿಮ್ಮ ಕಾಫಿಯಲ್ಲ" ಎಂದು ಹೇಳಿ ಕಳುಹಿಸಿದರು.

ಚೆನ್ನನು ಜೋಡಿದಾರರ ಮಾತನ್ನು ಮೀರಲಿಲ್ಲ. ಚೆನ್ನಾದ ಊಟವನ್ನೇ ಮಾಡಿದನು. ಆದರೆ ಕಾಫಿಯ ವಿಷಯದಲ್ಲಿ ಮಾತ್ರ ಅವರ ಮಾತನ್ನು ಮೀರಿದನು; ತನ್ನ ಕಾಫಿಯನ್ನೇ ಕುಡಿದನು. ೨-೩ ಸೇರು ಹೆಂಡವನ್ನು ಕುಡಿದು ಪ್ರಪಂಚವನ್ನೇ ಮರೆತು ಗಾಡಿಯ ಕೆಳಗೆ ಬಂದು ಮಲಗಿಬಿಟ್ಟನು. ಜೋಡಿದಾರರು ಕೆಲಸವನ್ನೆಲ್ಲಾ ಮುಗಿಸಿಕೊಂಡು ರಾತ್ರಿ ೮ ಗಂಟೆಯ ವೇಳೆಗೆ ಗಾಡಿಯ ಬಳಿಗೆ ಬಂದರು. ಚೆನ್ನನು ಹೆಂಡದ ಮತ್ತಿನಿಂದ ಗೊರಕೆ ಹೊಡೆಯುತ್ತಿದ್ದನು. ಜೋಡಿದಾರರು ಚೆನ್ನನನ್ನು ಬಲಾತ್ಕಾರವಾಗಿ ಎಬ್ಬಿಸಿದರು. ಅವನೂ ಹೇಗೋ ಗಾಡಿಯನ್ನು ಹೂಡಿದನು. ಎತ್ತು ನಿಧಾನವಾಗಿ ಹೊರಟಿತು. ಚೆನ್ನನಿಗೆ ಮತ್ತೆ ನಿದ್ರೆ ಬಂದುಬಿಟ್ಟಿತು. ಜೋಡಿದಾರರು “ಪಾಪ, ನೆನ್ನೆ ದಿವಸವೆಲ್ಲಾ ನಿದ್ರೆಯಿಲ್ಲ. ಆದ್ದರಿಂದ ಗೊರಕೆ ಹೊಡೆಯುತ್ತಾನೆ" ಎಂದುಕೊಂಡರು. ಹೊರಟ ಸ್ವಲ್ಪ ಹೊತ್ತಿಗೆ ಅವರಿಗೂ ನಿದ್ರೆ ಬಂದುಬಿಟ್ಟಿತು.

ಅವರಿಗೆ ಎಷ್ಟು ಹೊತ್ತು ನಿದ್ರೆ ಬಂದಿತೋ ತಿಳಿಯದು. ಆದರೆ ಇದ್ದಕ್ಕಿದ್ದಂತೆ, ಒಮ್ಮಿಂದೊಮ್ಮೆ, ಗಾಡಿಯು ನಿಂತುಬಿಟ್ಟಿತು. ಅದು ನಿಂತ ಕೂಡಲೇ ಜೋಡಿದಾರರಿಗೆ ಎಚ್ಚರವಾಯಿತು. ೨-೩ ಸಲ ಚೆನ್ನನನ್ನು ಕೂಗಿದರು. ಚೆನ್ನನು ಮಾತನಾಡಲಿಲ್ಲ. ಜೋಡಿದಾರರ ಗ್ರಹಚಾರ. ಅವರು ಮಾಡಿದ್ದ ಸಹಾಯವು ಅವರ ಮೇಲೆಯೇ ತಿರುಗಿಕೊಂಡಿತು. ಜೋಡಿದಾರರು ಗಾಡಿಯಿಂದ ಕೆಳಕ್ಕೆ ಇಳಿದರು. ಆಕಾಶದಲ್ಲಿ ಚಂದ್ರನು ಕಾಣುತ್ತಿರಲಿಲ್ಲ. ಕೆಲವು ನಕ್ಷತ್ರಗಳು ಮಾತ್ರ ಥಳಥಳಿಸುತ್ತಿದ್ದುವು. ಗಾಳಿಯು ತಣ್ಣಗೆ ಬೀಸುತ್ತಿದ್ದಿತು. ಗಾಡಿಯ ಎದುರಿಗೆ ಆಳವಾದ ಒಂದು ಕಾಲುವೆ. ಅದರಲ್ಲಿ ನೀರಿರಲಿಲ್ಲ. ಎತ್ತುಗಳು ಇನ್ನು ನಾಲ್ಕು ಹೆಜ್ಜೆ ಮುಂದಕ್ಕೆ ಹೋಗಿದ್ದರೆ, ಅಥವ ಗಾಡಿಯ ಚಕ್ರವು ಇನ್ನು ಒಂದು ಉರುಳು ಮುಂದಕ್ಕೆ ನುಗ್ಗಿದ್ದರೆ, ದೇವರೇ ಗತಿ. ಜೋಡಿದಾರರು, ಎತ್ತು, ಗಾಡಿ, ಆಳು, ಎಲ್ಲಾ ೫೦-೬೦ ಅಡಿ ಆಳವಾದ ಹಳ್ಳದೊಳಗೆ ಬಿದ್ದುಹೋಗುತ್ತಿದ್ದರು. ರಸ್ತೆಯಲ್ಲಿ ಒಂದು ಕಾಲುದಾರಿಯು ಬಂದ ಕೂಡಲೇ ಎತ್ತುಗಳು ಆ ಕಡೆಗೆ ಹೊರಟುಬಿಟ್ಟಿದ್ದವು. ಆ ಕಾಲು ದಾರಿಯು ಎಲ್ಲಿಯವರಿಗೆ ಕಾಣುತ್ತಿದ್ದಿತೋ ಅಲ್ಲಿಯವರೆಗೆ ಎತ್ತುಗಳು ಬಂದು, ಕಾಲು ದಾರಿಯು ಅಳಿಸಿಹೋಗಿದ್ದ ಈ ಆಳವಾದ ಹಳ್ಳದ ಮುಂದೆ ನಿಂತುಬಿಟ್ಟಿದ್ದುವು. ಹಳ್ಳವನ್ನು ನೋಡಿ ಜೋಡಿದಾರರು ನಡುಗಿದರು. ಈ ದಿವಸ ತಾನು ಸಾಯದೆ ಉಳಿದದ್ದು ದೇವರ ಕೃಪೆ ಎಂದುಕೊಂಡರು. ತಮ್ಮ ಪ್ರಾಣವನ್ನುಳಿಸಿದ ಎತ್ತುಗಳನ್ನು ಬಹಳ ಶ್ಲಾಘಿಸಿದರು. ಅನಂತರ ಬಲಾತ್ಕಾರವಾಗಿ ಚೆನ್ನನನ್ನು ಎಬ್ಬಿಸಿದುದಾಯಿತು. ಆದರೆ ಆ ಕಾರಇರುಳಿನಲ್ಲಿ ಇವರಿಬ್ಬರಿಗೂ ದಾರಿಯು ತಿಳಿಯಲಿಲ್ಲ. ಆದುದರಿಂದ ಉಪಾಯ ಕಾಣದೆ, ಗಾಡಿಯನ್ನು ಮತ್ತೆ ಎತ್ತುಗಳು ಎಳೆದುಕೊಂಡು ಬಂದಿದ್ದ ಕಾಲು ದಾರಿಗೇ ತಿರುಗಿಸಿದರು. ಅಂತೂ ಇಂತೂ ರಸ್ತೆಗೆ ಬಂದುದಾಯಿತು. ಆದರೆ ರಸ್ತೆಯಲ್ಲಿಯೂ ಕೂಡ ನಮ್ಮ ಊರಿನ ಕಡೆಗೆ ಹೋಗುತ್ತಿದ್ದ ರಸ್ತೆ ಯಾವುದು ಎಂಬುದಾಗಿ ತಿಳಿಯದೆ, ಬಂದ ದಾರಿಯಲ್ಲಿ ಗಾಡಿಯನ್ನು ಹಿಂದಕ್ಕೆ ಹೊಡೆಸಿದರು. ಅಲ್ಲಿ ಒಂದು ಗುರುತು ಸಿಕ್ಕಿದ ನಂತರ ಮತ್ತೆ ಹಿಂದಿರುಗಿಸಿ ಊರನ್ನು ಮುಟ್ಟಿದರು. ಎತ್ತಿನ ಬುದ್ದಿವಂತಿಕೆಗೆ ಮೆಚ್ಚಿ ಜೋಡಿದಾರರೇ ಆ ಎತ್ತುಗಳನ್ನು ಕೊಂಡುಕೊಂಡರು.

ನಾನು ಮೊದಲೇ ಹೇಳಿದಂತೆ ಜೋಡಿದಾರರಿಗೆ ಸಿಟ್ಟು ಬಂದರೆ ತಮ್ಮನ್ನು ತಾವು ಶಿಕ್ಷಿಸಿಕೊಳ್ಳುತ್ತಿದ್ದರೇ ಹೊರತು ಇತರರನ್ನು ಶಿಕ್ಷಿಸುತ್ತಿರಲಿಲ್ಲ. ನಮ್ಮ ಸ್ಕೂಲಿನಲ್ಲಿ ಈಗ ಕೆಲವು ವರ್ಷಗಳ ಹಿಂದೆ ಒಬ್ಬ ಮುಖ್ಯೋಪಾಧ್ಯಾಯರಿದ್ದರು. ಅವರು ಹುಡುಗರನ್ನು ಬಹಳವಾಗಿ ಹೊಡೆಯುತ್ತಿದ್ದರು. ಅವರು ಹುಡುಗರಾಗಿದ್ದಾಗ ಅವರಿಗೆ ಛಡಿ ಏಟು, ಕೋದಂಡ, ಕುರ್ಚಿ ಕೂರುವುದು, ಮುಂತಾದ ಶಿಕ್ಷೆಗಳೆಲ್ಲಾ ಆಗಿದ್ದುವಂತೆ. ಅದರಿಂದಲೇಯಂತೆ ಅವರು ವಿದ್ಯೆಯನ್ನು ಕಲಿತುದು. ಈ ಅಭಿಪ್ರಾಯದಿಂದಲೇ ಅವರು ಛಡಿ ಏಟಿಲ್ಲದೆ ವಿದ್ಯೆ ಬರುವುದಿಲ್ಲವೆಂದು ಹೇಳುತ್ತಾ, ಹುಡುಗರಿಗೆಲ್ಲಾ ಚೆನ್ನಾಗಿ ಏಟುಗಳನ್ನು ಕೊಡುತ್ತಿದ್ದರು. ಒಂದು ದಿವಸ ಜೋಡಿದಾರರ ಮಗನಿಗೆ, ಪಾಠ ಒಪ್ಪಿಸಲಿಲ್ಲವೆಂದು ಚೆನ್ನಾಗಿ ಏಟು ಬಿತ್ತು. ಅವನು ಅಳುತ್ತಾ ಮನೆಗೆ ಹೋಗಿ ತಂದೆಯೊಂದಿಗೆ ಹೇಳಿದನು. ಜೋಡಿದಾರರು ಕೈಯಲ್ಲಿ ಒಂದು ಬೆತ್ತವನ್ನು ಹಿಡಿದುಕೊಂಡು ಮಗನನ್ನೂ ಕರೆದುಕೊಂಡು, ಸ್ಕೂಲಿಗೆ ಬಂದರು. ಅವರನ್ನು ಕಂಡು ಮುಖ್ಯೋಪಾಧ್ಯಾಯರು “ಇವರು ನನ್ನನ್ನು ಏನು ಮಾಡುತ್ತಾರೋ" ಎಂದು ಬೆದರಿದರು. ಜೋಡಿದಾರರು ಬಂದು 'ಹೆಡ್ ಮಾಸ್ಟರನ್ನು' ಬಯ್ಯಲಿಲ್ಲ. ಸ್ಕೂಲಿನಲ್ಲಿ ಗಟ್ಟಿಯಾಗಿ ಮಾತನಾಡಲಿಲ್ಲ. ಮೊದಲೇ ಏಟು ತಿಂದು ಅಳುತ್ತಿದ್ದ ಮಗನನ್ನು ಕಂಬದ ಹತ್ತಿರ ನಿಲ್ಲಿಸಿ ಬಲವಾಗಿ ಹೊಡೆದರು. ಅನಂತರ ಮುಖ್ಯೋಪಾಧ್ಯಾಯರನ್ನು ಕುರಿತು "ಸ್ವಾಮಿ ತೃಪ್ತಿಯಾಯಿತೆ? ನಿಮ್ಮ ಕೆಲಸವನ್ನು ನಾನೇ ಮಾಡಿದ್ದೇನೆ” ಎಂದು ಹೇಳಿ ಮನೆಗೆ ಹೊರಟುಹೋದರು. ಮುಖ್ಯೋಪಾಧ್ಯಾಯರ ಮುಖವು ನಾಚಿಕೆಯಿಂದ ಪೆಚ್ಚಾಯಿತು. ಅಲ್ಲಿಂದ ಮುಂದೆ ಅವರು ಒಬ್ಬ ಹುಡುಗನನ್ನೂ ಹೊಡೆಯುವ ತಂಟೆಗೆ ಹೋಗಲಿಲ್ಲ.

೮. ಜೋಡಿದಾರರ ಹೊಟ್ಟೆಯ ಪ್ರಮಾಣವು

ಜೋಡಿದಾರರಿಗೆ ಹೊಟ್ಟೆ ಮಿತಿಮೀರಿ ಬೆಳೆದಿದ್ದಿತೆಂದು ಮೊದಲೇ ಹೇಳಿದ್ದೇನೆ. ಆದರೆ ಅವರಿಗೇನೋ ಅದು ನಂಬಿಕೆ ಇರಲಿಲ್ಲ. "ಯಾರಿಗೂ ಇಲ್ಲದ ಹೊಟ್ಟೆ ನನಗೇನು ಬಂದಿರೋದು” ಎಂದು ಅವರು ಕೇಳುತ್ತಿದ್ದರು. ಇದು ಒಂದುಸಲ ಅವರ ನಿದರ್ಶನಕ್ಕೆ ಬಂದುಬಿಟ್ಟಿತು. ಯಾರೋ ಒಬ್ಬ ಹುಡುಗನು ಅವರನ್ನು 'ಹೊಟ್ಟೆ ಜೋಡಿದಾರರು' ಎಂದುಬಿಟ್ಟನು. ಜೋಡಿದಾರರಿಗೆ ಬಹಳ ಸಿಟ್ಟು ಬಂದಿತು. ಅವನನ್ನು ಹೊಡೆಯಬೇಕೆಂದು ಓಡಿಸಿಕೊಂಡು ಹೊರಟರು. ಹುಡುಗ ಊರನ್ನು ಒಂದು ಸುತ್ತು ಸುತ್ತಿದ. ಮುಂದೆ ಓಡಲಾರದೆ ಸೋತು ಬಿದ್ದ. ಹಿಂದೆ ಶತ್ರುವು ಕಣ್ಣನ್ನು ಕೆಂಪಗೆ ಮಾಡಿಕೊಂಡು ಓಡಿಸಿಕೊಂಡು ಬರುತ್ತಿದ್ದಾನೆ, ಏನುಮಾಡುವುದು? ಊರ ಮುಂದೆ ಒಂದು ಆಂಜನೇಯನ ದೇವಸ್ಥಾನವಿದೆ. ಒಳಕ್ಕೆ ದನಕರುಗಳು ನುಗ್ಗದಂತೆ ಪ್ರಾಕಾರದ ಗೋಡೆಹಾಕಿದ್ದಾರೆ. ಬಾಗಿಲಿನ ಬದಲು ಒಂದು ಚಿಕ್ಕ ಕವಡಿಯಿದೆ. 'ಆವಶ್ಯಕತೆಯು ಮುಖ್ಯ ಉಪಾಧ್ಯಾಯ'ನೆಂಬ ಗಾದೆಯುಂಟಷ್ಟೆ. ಹುಡುಗನಿಗೆ ಕೂಡಲೆ ಹೊಳೆಯಿತು. ಅವನು ಕವಡಿಯನ್ನು ದಾಟಿ ಗುಡಿಯನ್ನು ಸೇರಿಬಿಟ್ಟನು. ಜೋಡಿದಾರರು ದಾಟುವುದಕ್ಕೆ ಹೋಗುತ್ತಾರೆ. ಹೊಟ್ಟೆಯೇ ಹಿಡಿಯಲಿಲ್ಲ. ಹುಡುಗ ಒಳಗಡೆ ಕೈಯಿಂದ ಚೇಷ್ಟೆ ಮಾಡುತ್ತಾ ಇವರನ್ನು ಹಾಸ್ಯಮಾಡಿ ನಗುತ್ತಲಿದ್ದ. ಆಗ ಜೋಡಿದಾರರಿಗೆ ಜನರು ತಮ್ಮನ್ನು ಹೊಟ್ಟೆಯ ಜೋಡಿದಾರನೆನ್ನುವುದರ ಅರ್ಥವು ಸ್ಪಷ್ಟವಾಯಿತು.

ಸುಪ್ರಸಿದ್ದ ಆಂಗ್ಲೇಯ ಪ್ರಬಂಧಕಾರನಾದ 'ಅಡಿಸನ್' ಎಂಬುವನು ತನ್ನ 'ಸ್ಪೆಕ್ಟೇಟರ್' ಪತ್ರಗಳೊಂದರಲ್ಲಿ ಒಂದು ಬೊಜ್ಜು ಬೆಳೆದವರ ಸಂಘದ ವಿಷಯವನ್ನು ಹೇಳುತ್ತಾನೆ. ಆ ಸಂಘಕ್ಕೆ ಸದಸ್ಯರಾಗಲು ಕೆಲವು ನಿಯಮಗಳಿದ್ದುವಂತೆ. ಅವುಗಳಲ್ಲಿ ಅತ್ಯಂತ ಪ್ರಾಮುಖ್ಯವಾದುದು ಈ ಮುಂದೆ ಹೇಳುವುದು. ಸಂಘದ ಕಛೇರಿಯಲ್ಲಿ ಎರಡು ಕವಡಿಗಳಿದ್ದುವಂತೆ. ಒಂದು ಕವಡಿಯು ಬಹಳ ದೊಡ್ಡದಾಗಿ ಅದರ ಮೂಲಕ ಯಾರು ಬೇಕಾದರೂ ನುಸಿಯಬಹುದಾಗಿದ್ದಿತಂತೆ. ಮತ್ತೊಂದು ಸ್ವಲ್ಪ ಚಿಕ್ಕದು. ಚಿಕ್ಕದು ಎಂದರೆ ನಿಮ್ಮ ಕೈಯಲ್ಲಿ ಒಂದು ಮಾರು. ಸದಸ್ಯರಾಗಲಪೇಕ್ಷಿಸುವವರು ಈ ಎರಡನೆಯ ಕವಡಿಯಲ್ಲಿ ನುಸಿಯಬೇಕಾಗಿದ್ದಿತು. ಯಾರು ಸಲೀಸಾಗಿ ನುಸಿದುಕೊಂಡು ಹೋಗಿಬಿಡುತ್ತಿದ್ದರೋ ಅವರು ಸದಸ್ಯರಾಗಲು ಅರ್ಹರಾಗುತ್ತಿರಲಿಲ್ಲ. ಯಾರ ಹೊಟ್ಟೆಯು ನುಸಿಯುವಾಗ ಆ ಕವಡಿಯಲ್ಲಿ ಸಿಕ್ಕಿಕೊಳ್ಳುತ್ತಿದ್ದಿತೋ ಅವರು ಮಾತ್ರ ಸದಸ್ಯರಾಗಲು ಯೋಗ್ಯರಾಗುತ್ತಿದ್ದರು. ಇದೇ ಆ ಬೊಜ್ಜು ಬೆಳೆದವರ ಸಂಘದ ನಿಯಮವಾಗಿದ್ದಿತಂತೆ. ಅಲ್ಲಿಯ ಮೂರು ಸದಸ್ಯರನ್ನು ಸೇರಿಸಿ ತೂಕಮಾಡಿದರೆ ಅವರ ಭಾರವು ೧,೨೦೦ ಪೌಂಡು ಇರುತ್ತಿದ್ದಿತಂತೆ. ಇಂತಹ ಸಂಘಕ್ಕೆ ಸದಸ್ಯರಾಗಲು ನಮ್ಮ ಜೋಡಿದಾರರೂ ಅರ್ಹರಾಗಿದ್ದರು.

೯. ಜೋಡಿದಾರರ ಚಟುವಟಿಕೆ

ಜೋಡಿದಾರರು ಸ್ವಲ್ಪ ದಪ್ಪವಾದ ಮಾತ್ರಕ್ಕೆ ಅವರಿಗೆ ಚಟುವಟಿಕೆ ಕಡಮೆ ಎಂದು ಊಹಿಸಬೇಡಿ. ಈವತ್ತೂ ಅವರಷ್ಟು ಕೆಲಸಮಾಡಲು ಹುಡುಗರೆನ್ನಿಸಿಕೊಳ್ಳುವ ನಮಗೇ ಆಗುವುದಿಲ್ಲ. ಈಗ ೫ ವರ್ಷಗಳ ಕೆಳಗೆ ನಡೆದ ಸಂಗತಿಯೊಂದನ್ನು ಕೇಳಿ. ಜೋಡಿದಾರರು ನಮ್ಮೂರ ನದಿಗೆ ಸ್ನಾನಕ್ಕೆ ಹೋಗಿದ್ದರು. ಸ್ನಾನವಾದಸಂತರ ಪರಿಷ್ಕಾರವಾಗಿ ಪಂಚೆಕಚ್ಚೆ ಪಂಚೆಯನ್ನುಟ್ಟು, ಹನ್ನೆರಡು ನಾಮ ಧರಿಸಿಕೊಂಡು, ಪೂರ್ವ ದಿಕ್ಕಿಗೆ ಎದುರಾಗಿ ಕುಳಿತುಕೊಂಡು, ಜಪವನ್ನು ಮಾಡುತ್ತಿದ್ದರು. ನದಿಯಲ್ಲಿ ೪-೫ ಜನ ಗಂಡಸರು ಸ್ನಾನಮಾಡುತ್ತಿದ್ದರು. ಹೆಂಗಸರನೇಕರು ಪಾತ್ರೆಗಳನ್ನು ಬೆಳಗುತ್ತಿದ್ದರು. ಇದ್ದಕ್ಕಿದ್ದಂತೆ ವಿಧವೆಯೊಬ್ಬಳು "ಅಯ್ಯೋ ನನ್ನ ತಟ್ಟಿ ಹೋಯಿತಲ್ಲ. ಮನೆಗೆ ಹೋದರೆ ತಲೆಗೆ ಬೂದಿ ಹುಯ್ತಾರೆ. ಅದನ್ನ ತಂದ್ಯೋಡೋರು ಯಾರೂ ಇಲ್ವೆ?” ಎಂದು ಕೂಗಿ ಅತ್ತಳು. ತಟ್ಟೆ ಯಾವಾಗಲೋ ನೀರಿನಲ್ಲಿ ತೇಲಿಹೋದುದನ್ನು ವಿಧವೆಯು ಈಗತಾನೆ ಹೋಯಿತೆಂದುಕೊಂಡಳು. ನದಿಯ ಕಡೆಗೆ ನೋಡುವುದರಲ್ಲಿ ತಟ್ಟೆಯು ಮೊದಲೇ ಹೇಳಿದ ಮಟ್ಟೆಕಲ್ಲು ಮಡುವಿನ ಬಳಿ ತೇಲಿ ಹೋಗುತ್ತಿತ್ತು. ವಿಧವೆಯು “ಪುಣ್ಯಾತ್ಮರು ಯಾರಾದರೂ ಈಜಿ ಹೋಗಿ ಅದನ್ನು ತಂದುಕೊಡಿರಪ್ಪ”, ಎಂದು ಕೇಳಿಕೊಂಡಳು. ಈಜು ಬರುತ್ತಿದ್ದ ೪-೫ ಜನ ಯುವಕ ಧಾಂಡಿಗರು "ಆಗುವುದಿಲ್ಲ, ಅಲ್ಲಿ ಮೊಸಳೆ ಇದೆ. ಎಂಟಾಣೆಯ ತಟ್ಟೆಗಾಗಿ ನಮ್ಮ ಪ್ರಾಣವನ್ನು ಬಿಡುವುದಕ್ಕೆ ಆಗುವುದಿಲ್ಲ. ಹೋದರೆ ಹೋಯಿತು" ಎಂದುಬಿಟ್ಟರು. ವಿಧವೆಯು "ನಿಮಗೆ ಹೇಗೊತ್ತಾಗುತ್ತಪ್ಪ, ಗಂಡ ಸತ್ತ ಮುಂಡೆಯ ಕಷ್ಟ. ಇದು ಹೋದರೆ ಮನೆಯಲ್ಲಿ ಅತ್ತಿಗೆ ಪರಕೆ ಸೇವೆ ಮಾಡ್ತಾಳೆ. ನಿಮ್ಮ ಕಾಲಿಗೆ ಬೀಳ್ತೇನೆ. ನಿಮ್ಮ ಮಕ್ಕಳ ಪುಣ್ಯ; ಯಾರಾದರೂ ಈಜಿ ಹೋಗಿ ತಂದುಕೊಡಿ" ಎಂದು ಹಲ್ಲುಗಿರಿದು ಬೇಡಿದಳು. ಆ ಧಾಂಡಿಗರಾರೂ ಅವಳ ಬೇಡಿಕೆಯನ್ನು ಸಲಿಸಲಿಲ್ಲ. ನೀರಿನಿಂದ ಮೇಲಕ್ಕೆ ಬಂದು "ಗೋವಿಂದೇತಿ ಸದಾ ಧ್ಯಾನಂ ಗೋವಿಂದೇತಿ ಸದಾ ಜಪಂ” ಎಂದು ಗಟ್ಟಿಯಾಗಿ ಹೇಳುತ್ತಾ ಮೈಗೆ ನಾಮವನ್ನು ಬಳಿಯಲು ಪ್ರಾರಂಭಿಸಿದರು. ವಿಧವೆಯು ಒಂದೇ ಸಮನಾಗಿ “ಅಯ್ಯೋ ಏನು ಮಾಡಲಿ. ಮನೆಗೆ ಹೋದರೆ ಅತ್ತಿಗೆಯು ತಲೆ ಒಡೆಯುತ್ತಾಳಲ್ಲಾ” ಎಂದು ಅಳುತ್ತಿದ್ದಳು. ಅವಳ ರೋದನವನ್ನು ನೋಡಿ ಜೋಡಿದಾರರ ಮನಸ್ಸು ಕರಗಿಹೋಯಿತು. ಅವರಿಗೆ ವಯಸ್ಸು ೬೦. ದೇಹ ಆನೆಯ ದೇಹದಂತಿದೆ. ಎಲ್ಲಾ ನಿಶ್ಚಯ. ಆದರೆ ಮನಸ್ಸಿಗೆ ದೊಡ್ಡದು ಯಾವುದಿದೆ. ಅವರು ಪಂಚೆಯನ್ನು ಬಿಚ್ಚಿ, ಸೊಂಟಕ್ಕೆ ಒಂದು ಚೌಕವನ್ನು ಕಟ್ಟಿಕೊಂಡು, ತಾವು ಬಾಲ್ಯದಲ್ಲಿ ಈಜಿದ ಮಟ್ಟಿ ಕಲ್ಲು ಮಡುವಿಗೆ ಈಜಿ ಹೋಗಿ, ಆ ಪಾತ್ರೆಯನ್ನು ತಂದು ಹೆಂಗಸಿಗೆ ಕೊಟ್ಟರು.

ನಾಮವನ್ನು ಬಳಿದುಕೊಂಡು “ಗೋವಿಂದೇತಿ ಸದಾ ಸ್ನಾನ”ವನ್ನು ಜಪಿಸುತ್ತಿದ್ದ ಧಾಂಡಿಗರು ಆಶ್ಚರ್ಯದಿಂದ ಮೂಗಿನ ಮೇಲೆ ಬೆರಳಿಟ್ಟರು.

೧೦. ಜೋಡಿದಾರರು ಕುದುರೆಯಿಂದ ಬಿದ್ದುದು

ಯಾವುದಾದರೂ ವಿನೋದವು ನಡೆದರೆ ನಗುವುದನ್ನು ನಾನು ನೋಡಿದ್ದೇನೆ. ಆದರೆ ಇತರರಿಗೆ ಕಷ್ಟ ಬಂದಾಗ ಕೂಡ ಒಂದೊಂದು ಸಲ ನಗು ಬಂದುಬಿಡುತ್ತೆ. ಹಾಗೆಂದ ಮಾತ್ರಕ್ಕೆ ಅವರ ಕಷ್ಟಗಳನ್ನು ಕಂಡು ನಾವು ಸಂತೋಷಪಡುವೆವೆಂದಲ್ಲ; ಆದರೆ ನಮಗೆ ನಗುವನ್ನು ತಡೆಯುವುದಕ್ಕೆ ಆಗುವುದಿಲ್ಲವೆಂದು ಮಾತ್ರ ಅರ್ಥ.

ನಮ್ಮ ಜೋಡಿದಾರರು ಮಿತಿಮೀರಿ ಹೊಟ್ಟೆ ಬೆಳೆಸಿದ್ದಾರೆಂದು ಹೇಳಿದೆ ನಷ್ಟೆ. ಅವರು ಒಂದು ಕುದುರೆಯನ್ನು ಕೊಂಡುಕೊಂಡರು. ಎತ್ತರವಾದ ಕುದುರೆಯನ್ನು ಕೊಂಡರೆ ಅದರ ಮೇಲೆ ನೆಗೆದು ಹತ್ತಲು ತಮಗೆ ಸಾಧ್ಯವಿಲ್ಲದುದರಿಂದ, ತಮಗೆ ಸುಲಭವಾಗಿ ಹತ್ತಲು ಅನುಕೂಲವಾಗುವಂತೆ ಕುಳ್ಳಾದ ಕುದುರೆಯನ್ನೇ-ಕೊಂಡರು. ಆ ಕುದುರೆ ತಂದಾಗಲೇ ನಾವೆಲ್ಲಾ "ಜೋಡಿದಾರರ ಸವಾರಿಗೆ ಈ ಕುದುರೆಯೆ? ಇದರ ಮೇಲೆ ಅವರು ಕುಳಿತುಬಿಟ್ಟರೆ, ಸರ್ಕಸ್ಸಿನಲ್ಲಿ ಆನೆ ಬೈಸಿಕಲ್ ಸವಾರಿ ಮಾಡಿದಂತಾಗುತ್ತದೆ" ಎಂದುಕೊಂಡೆವು. ನಮ್ಮ ಊಹೆಯೂ ತಪ್ಪಾಗಲಿಲ್ಲ. ಪಾಪ, ಆ ಕುದುರೆಯ ಬೆನ್ನು, ಜೋಡಿದಾರರು ಅದರ ಮೇಲೆ ಕುಳಿತ ಕೂಡಲೇ ನೆಲಕ್ಕೆ ಬಗ್ಗಿ ಹೋಗುತ್ತಿದ್ದಿತು. ಹೊಟ್ಟೆಯು ನೆಲದ ಮೇಲೆ ಎಳೆಯುತ್ತಿದೆಯೋ ಎನ್ನುವಂತೆ ತೋರುತ್ತಿದ್ದಿತು. ಅವರದನ್ನು ಹತ್ತುವುದು ಭಗೀರಥ ಪ್ರಯತ್ನ. ಕುದುರೆಯ ಜೀನು ಮತ್ತು 'ರಿಕಾಪ'ನ್ನು ಒಂದು ಕಡೆ ಎರಡು ಆಳುಗಳು ಗಟ್ಟಿಯಾಗಿ ಹಿಡಿದುಕೊಳ್ಳಬೇಕು. ಮತ್ತೊಂದು ಕಡೆ ಇಬ್ಬರು ಬಲವನ್ನೆಲ್ಲಾ ಬಿಟ್ಟು, ಅವರ ಹೊಟ್ಟೆಯನ್ನು ಹಿಡಿದು, ಎತ್ತಿ, ಕುದುರೆಯ ಮೇಲೆ ಹತ್ತಿಸಬೇಕು. ಪ್ರತಿ ಸಲ ಕುದುರೆ ಏರುವಾಗಲೂ ಜೋಡಿದಾರರು ೩-೪ ಪ್ರಯತ್ನಗಳಿಲ್ಲದೆ ಜಯಶಾಲಿಗಳಾದುದೇ ಇಲ್ಲ.

ಒಂದು ದಿವಸ ಅವರು ಹೀಗೆ ಕಷ್ಟ ಪಟ್ಟು ಕುದುರೆಯ ಮೇಲೇರಿ ಕುಳಿತು ಏದುತ್ತಾ, ತಮ್ಮ ಗದ್ದೆಗಳನ್ನು ನೋಡಿಕೊಂಡು ಬರಲು ಹೊರಟರು. ದಾರಿಯಲ್ಲಿ ಒಂದು ಕಡೆ ಒಂದು ಸಲ ಕೆಳಕ್ಕೆ ಇಳಿಯಬೇಕಾಯಿತು. ಅವರು ಕೆಳಕ್ಕೆ ಇಳಿಯುವದೆಂದರೆ ಸಾಮಾನ್ಯವೇ? ಅದಕ್ಕೆ ಮತ್ತೆ ನಾಲ್ಕು ಜನ ಬೇಕು. ನಾನೊಂದು ಸಲ ಬೈಸಿಕಲ್ಲು ಸವಾರಿ ಕಲಿತೆ. ಕುಳಿತುಕೊಂಡು ಸವಾರಿಮಾಡಲು ಬರುತ್ತಿದ್ದಿತು. ಕೆಳಕ್ಕೆ ಇಳಿಯಲು ಬರುತ್ತಿರಲಿಲ್ಲ. ಚಕ್ರವ್ಯೂಹವನ್ನು ಭೇದಿಸುವುದಕ್ಕೆ ಅಭಿಮನ್ಯುವಿಗೆ ತಿಳಿದಿದ್ದರೂ, ಅದರಿಂದ ತಪ್ಪಿಸಿಕೊಂಡು ಹೊರಕ್ಕೆ ಬರಲು ಅವನಿಗೆ ತಿಳಿಯಲಿಲ್ಲವಲ್ಲಾ, ಹಾಗೆ. ನಮ್ಮ ಚಿಕ್ಕಮ್ಮನ ಮಗುವನ್ನು ಒಂದು ದಿವಸ ನನ್ನ ಬೈಸಿಕಲ್ ಮೇಲೆ ಕುಳ್ಳಿರಿಸಿಕೊಂಡು ಹೆಮ್ಮೆ ತೋರಿಸುತ್ತಾ ಸವಾರಿ ಮಾಡಲು ಪ್ರಾರಂಭಿಸಿದೆ. ಆದರೆ ಇಳಿಯುವುದಕ್ಕೆ ಯಾರಾದರೂ ಹತ್ತಿರ ಇರಬೇಕು. ಅವರ ಬಳಿಗೆ ಬೈಸಿಕಲ್ಲು ಹೋದಾಗ ಮೆಲ್ಲನೆ ಬಿಡಬೇಕು. ಅವರನ್ನು ಹಿಡಿದುಕೊಂಡು ಬೈಸಿಕಲ್ ನಿಲ್ಲಿಸಬೇಕು. ಆಗ ಕೆಳಕ್ಕೆ ನಾನು ಇಳಿಯಬೇಕು. ಇಷ್ಟೆಲ್ಲಾ ಆಗಮಗಳು ನಡೆಯಬೇಕಾಗಿದ್ದಿತು. ಆದರೆ ಆದಿನ ಒಬ್ಬನೂ ನನ್ನ ಕಣ್ಣಿಗೆ ಬೀಳಲಿಲ್ಲ. ನಾನು ಬೈಸಿಕಲ್ಲು ತಿರುಗಿಸಿದ್ದೂ ತಿರುಗಿಸಿದ್ದೇ. ಊರನ್ನು ೮-೧೦ ಸುತ್ತು ತಿರುಗಿಬಿಟ್ಟೆ. ಮಗುವು "ಸಾಕು, ಇಳಿದುಬಿಡುತ್ತೇನೆ" ಎಂದಿತು. ಮಗುವಿನ ತಾಯಿಯು “ಸಾಕು, ಇಳಿಸಿಬಿಡಪ್ಪ, ಎಷ್ಟು ತಿರುಗಿಸಿದರೂ ಮಕ್ಕಳಿಗೆ ಆಸೆ ಇದ್ದೇ ಇರುತ್ತದೆ" ಎಂದರು. ಆದರೆ ಇಳಿಸುವುದು ಅಂದರೆ ಸಾಮಾನ್ಯವೆ? ಊರ ಹೊರಕ್ಕೆ ಹೋಗಿ, ಬೈಸಿಕಲ್ಲನ್ನು ಒಂದು ಮರದ ಮಗ್ಗುಲಿಗೆ ಬಿಟ್ಟು, ಆ ಮರವನ್ನು ಹಿಡಿದುಕೊಂಡು ಇಳಿಯುವ ಸಂಭ್ರಮದಲ್ಲಿ, ನನಗೂ ಮಗುವಿಗೂ ಸ್ವಲ್ಪ ಪೆಟ್ಟಾಯಿತು. ಅವನಿಗೆ 'ಪೆಪ್ಪರ್‌ಮೆಂಟ್' ಕೊಟ್ಟು ಯಾರಿಗೂ ಹೇಳಬೇಡ ಎಂದು ಸಮಾಧಾನಪಡಿಸಿದೆ. ನಮ್ಮ ಜೋಡಿದಾರರ ಸಮಾಚಾರ ಹಾಗಾಯಿತು. ಕುದುರೆಯಿಂದ ಇಳಿಯಬೇಕು. ಆದರೆ ಮಗ್ಗುಲಲ್ಲಿ ಯಾರೂ ಇಲ್ಲ. ಆದದ್ದಾಗಲಿ ಎಂದು 'ರಿಕಾಪಿ'ನ ಮೇಲೆ ತಮ್ಮ ಭಾರವನ್ನೆಲ್ಲಾ ಬಿಟ್ಟು, ಇಳಿಯುವುದಕ್ಕೆ ಸವರಿಸಿದ ಕೂಡಲೆ ಒಂದೇ ಕಡೆಗೆ ಬಂದ ಇವರ ಮಿತಿಮೀರಿದ ಭಾರದಿಂದ 'ರಿಕಾಪು' ಕಿತ್ತುಹೋಯಿತು. ಇವರ ಒಂದು ಕಾಲು 'ರಿಕಾಪಿ'ನಲ್ಲಿ ಸಿಕ್ಕಿಕೊಂಡಿತು. ದೇಹವೆಲ್ಲಾ ನೆಲದ ಮೇಲೆ ಬಿದ್ದುಹೋಯಿತು. ಕುದುರೆಯು ಎಳೆಯುತ್ತಾ ೪ ಹೆಜ್ಜೆ ಮುಂದಿಟ್ಟಿತು. ಆದರೆ ಬಡ ಕುದುರೆ, ಈ ರೋಣಗಲ್ಲನ್ನು ಎಳೆಯಲಾರದೆ ಏದುತ್ತ ಅಲ್ಲಿಯೇ ನಿಂತುಬಿಟ್ಟಿತು. ಪಾಪ, ಜೋಡಿದಾರರಿಗೆ ಸ್ವಲ್ಪ ಏಟು ತಗಲಿತು. ಮಂಡಿಯು ಸುಲಿದು ಹೋಗಿ ರಕ್ತವು ಸೋರುತ್ತಿದ್ದಿತು. ಹೆರಳೆಕಾಯಿ ಗಾತ್ರದ ಅವರ ಮೂಗು, ತೆಂಗಿನಕಾಯಿಯಂತೆ ಬುರು ಬುರು ಊದಿಬಿಟ್ಟಿತು. ಆ ಊದುವಿಕೆಯಿಂದ ಮುಖದಲ್ಲಿ ಕಣ್ಣು ತುಟಿ ಮೂಗು ಬಾಯಿ ಯಾವುದೂ ಗೊತ್ತಾಗದೆ, ಎಲ್ಲಾ ಒಂದೇ ಸಮನಾಗಿದ್ದುವು. ಮಗ್ಗಲು ಗದ್ದೆಯಲ್ಲಿ ನಮ್ಮ ಇಬ್ಬರು ಸ್ನೇಹಿತರು, ಆಳುಗಳ ಕೈಲಿ ಕೆಲಸವನ್ನು ಮಾಡಿಸುತ್ತಿದ್ದವರು, ಜೋಡಿದಾರರು ನೆಲಕ್ಕೆ ಉರುಳಿದುದನ್ನು ಕಂಡು ಓಡಿಬಂದು ಅವರನ್ನು ಎತ್ತಿಕೊಂಡು ಗಾಯವನ್ನು ತೊಳೆದು ಉಪಚಾರಮಾಡಲು ನದಿಯ ತೀರಕ್ಕೆ ಹೊರಟರು. ಆದರೆ ಆ ಪುಣ್ಯಾತ್ಮನನ್ನು ಎರಡು ಜನ ಸುಲಭವಾಗಿ ಎತ್ತುವುದಕ್ಕಾಗುತ್ತದೆಯೆ? ಎಷ್ಟು ತಡೆದರೂ ಸಾಧ್ಯವಾಗದೆ ಇಬ್ಬರಿಗೂ ನಗು ಬಂದುಬಿಟ್ಟಿತು.

ಹೊಳೆಯ ತೀರಕ್ಕೆ ಕರೆದುಕೊಂಡು ಹೋಗಿ ಮಂಡಿಯ ಗಾಯವನ್ನು ತೊಳೆಯುವಾಗಲೂ ಇವರಿಗೆ ಅಸಾಧ್ಯವಾದ ನಗು; ಜೋಡಿದಾರರು ಊದಿದ ಮೊಖದೊಳಗಿಂದ ಎಲ್ಲೊ ಗವಿಯೊಳಗೆ ಮಾತನಾಡಿದಂತೆ ಮಾತನಾಡುವಾಗ ಇವರಿಗೆ ತಡೆಯಲಾರದ ನಗು ಬಂದುಬಿಟ್ಟಿತು. ನಗೆಯ ಕಾರಣಕ್ಕಾಗಿ ಜೋಡಿದಾರರಿಗೆ ಏನೋ ಒಂದು ಸಬೂಬು ಹೇಳಿ, ಮನೆಗೆ ಅವರನ್ನು ಕರೆದುಕೊಂಡು ಬಂದರು.

ಜೋಡಿದಾರರು ಕುದುರೆಯಿಂದ ಬಿದ್ದ ಸಮಾಚಾರವನ್ನು ಕೇಳಿ ನನಗೆ ಆಶ್ಚರವಾಯಿತು. ಬಾಲ್ಯದಲ್ಲಿ ಅವರು ಲಗಾಮು ಕೂಡ ಇಲ್ಲದೆ ಎಂತಹ ದೊಡ್ಡ ಕುದುರೆಯನ್ನಾದರೂ ಸವಾರಿಮಾಡುತ್ತಿದ್ದುದು ನನಗೆ ಗೊತ್ತಿದ್ದಿತು. ನೋಡೋಣವೆಂದು ಅವರ ಮನೆಗೆ ಹೋದೆ. ಆಗಲೂ ಈ ನಗುವಿನ ಅವಾಂತರ. ಅವರ ಮುಖವು ಗಾಳಿ ತುಂಬಿದ 'ಪುಟ್‍ಬಾಲ್ ಬ್ಲಾಡರಿ'ನಂತೆ ಇದ್ದಿತು. ಆ 'ಬ್ಲಾಡರಿನ' ಯಾವುದೋ ಕಡೆಯಿಂದ ಚಿಕ್ಕ ತೂತಿನಿಂದ ಗಾಳಿ ಹೊರಡುವಂತೆ, ಒಂದು ಧ್ವನಿಯು ಹೊರಡುತ್ತಲಿದ್ದಿತು. ಆ ಮುಖವನ್ನು ನೋಡಿ ನನಗೆ ನಗು ಬಂದುಬಿಟ್ಟಿತು. ನಗುವನ್ನು ತಡೆಯಲಾರದೆ ಹೊರಕ್ಕೆ ಬಂದುಬಿಟ್ಟೆ.


ನಮ್ಮ ಹೊಳೆಯ ಒಂದು ಅನುಭವ


ನಮ್ಮ ಹಳ್ಳಿಗೆ ಈಗ ಸೇತುವೆ ಆಗಿಬಿಟ್ಟಿರುವುದರಿಂದ, ಹೊಳೆಯ ಪ್ರವಾಹದ ಅವಾಂತರ ಈಗಿನವರಿಗೆ ಸ್ವಲ್ಪವೂ ಗೊತ್ತಾಗುವುದೇ ಇಲ್ಲ. ಆದರೆ ನಮ್ಮ ಹೊಳೆಯ ಕ್ರೌರ್‍ಯಕ್ಕೆ ಸಿಕ್ಕಿ ಕಷ್ಟಪಟ್ಟವರಲ್ಲಿ, ನಮ್ಮ ಊರು ನಿಂಗ ಒಬ್ಬ, ಅವನಿಗೆ ಉಂಟಾದ ಅನುಭವದಲ್ಲಿ ವಿನೋದವೂ ಭಯವೂ ತುಂಬಿಕೊಂಡಿವೆ. ಅವನಿಂದಲೂ, ಅವನ ಅವಸ್ಥೆಯನ್ನು ಕಂಡ ಇತರರಿಂದಲೂ, ಕೇಳಿದುದನ್ನು ನಾನು ನಿಮಗೆ ಹೇಳುತ್ತೇನೆ.

ನಮ್ಮ ಹಳ್ಳಿಗೆ ಎರಡು ಮೈಲಿ ದೂರದಲ್ಲಿ ಪಶ್ಚಿಮದಿಕ್ಕಿನಲ್ಲಿ ಹೇಮಾವತಿ ಮತ್ತು ಯಗಚಿ ನದಿಗಳೆರಡೂ ಸಂಗಮವಾಗುತ್ತವೆ. ಆ ಸ್ಥಳವು ಪುರಾಣ ಪ್ರಸಿದ್ಧವೂ ಪುನೀತವೂ ಆದುದು. ಸಂಗಮಸ್ಥಳದಲ್ಲಿ ವಿಶಾಲವಾದ ಒಂದು ತೋಪಿದೆ. ಅಲ್ಲಿರುವ ಮರಗಳು ಗಗನ ಚುಂಬಿಗಳಾಗಿ, ಶೀತಳವಾದ ನೆರಳನ್ನು ನೆಲದಮೇಲೆ ಪ್ರಸರಿಸುತ್ತವೆ. ಅಲ್ಲೊಂದು ಈಶ್ವರ ದೇವಾಲಯವಿದೆ. ಆ ತೋಪು ಶಾಂತಿಗೆ ನೆಲೆಮನೆಯಾಗಿ, ಅಲ್ಲಿ ಕುಳಿತುಕೊಳ್ಳುವರ ಮನಸ್ಸಿಗೆ ಇಂಪಾದ ಸಮಾಧಾನವನ್ನುಂಟುಮಾಡುತ್ತದೆ. ಮನಸ್ಸಿಗೆ ಬೇಸರಿಕೆಯಾದಾಗ ಆ ತೋಪಿನಲ್ಲಿ ಹೋಗಿ ಎರಡು ಗಳಿಗೆ ಕುಳಿತರೆ ಸಾಕು. ಬಾಹ್ಯ ಪ್ರಕೃತಿಯ ನಿಶ್ಯಬ್ದತೆಯೂ ಶಾಂತಿಯೂ ನಮ್ಮ ಹೃದಯವನ್ನು ಮುಟ್ಟದೆ ಬಿಡುವುದಿಲ್ಲ. ರಮಣೀಯವಾದ ನದಿಯ ತೀರ, ತೀರದ ಉದ್ದಕ್ಕೂ ತೋರಣಗಳನ್ನು ಕಟ್ಟಿರುವಂತೆ ಬಾಗಿರುವ ಮರದ ಹಸುರಾದ ಕೊಂಬೆಗಳು, ಆ ಕೊಂಬೆಗಳಿಂದ ನೀರಿನ ಮೇಲೆ ಉದುರುವ ಅರಳಿದ ಹೂವು, ಹೂವಿನ ಕಂಪನ್ನು ಹೊತ್ತುಕೊಂಡು ಪ್ರಕೃತಿಯ ದೇವಾಲಯದಲ್ಲಿ ಭಕ್ತನಂತೆ ಸಂಚರಿಸುವ ಮಂದ ಮಾರುತ, ಕಲ್ಲುಗಳ ಮೇಲೆ ಜಾರುತ್ತ, ಬಂಡೆಗಳ ಮೇಲೆ ಉರುಳುತ್ತಾ, ಜುಳು ಜುಳು ರವದಿಂದ ಹರಿಯುತ್ತಿರುವ ನದಿ, ತೋಪಿನ ನಿಶ್ಯಬ್ದತೆಗೆ ಆನಂದದಿಂದ ಇಂಪಾದ ಗಾನವನ್ನು ಎಸೆಯುತ್ತಿರುವ ಹಕ್ಕಿಗಳು, ನದಿಯ ಎರಡು ತೀರದ ಉದ್ದಕ್ಕೂ ಹಸುರಾಗಿ ಬೆಳೆದು ನಿಂತಿರುವ ಪೈರಿನ ಬಯಲು, ಎರಡು ನದಿಗಳೂ ಒಂದಾಗಿ ಸೇರಿ ವಿಸ್ತಾರವಾದ ಪಾತ್ರ, ಇವುಗಳೆಲ್ಲಾ ಅಲ್ಲಿ ಒಂದಾಗಿ ಪ್ರಕೃತಿಯ ಕಲಾನಿಪುಣತೆಯ ಚಿತ್ರದ ಪರಮಾವಧಿಯ ದೃಶ್ಯವೊಂದು ಅಲ್ಲಿ ಕಣ್ಣಿಗೆ ಬೀಳುತ್ತದೆ.

ಯಗಚಿ ಹೊಳೆಗೆ ಕಳ್ಳ ಹೊಳೆಯೆಂದು ಹೆಸರು ಬಂದಿದೆ. ಭಗವಂತನ 'ಕ್ರಿಮಿನಲ್ ಕೋರ್ಟು' ಅಪರಾಧಿಗಳ ಪೈಕಿ ಇದೂ ಸೇರಿದೆಯೋ ಏನೋ? ಇಬ್ಬನಿಯು ಬಂದರೆ ತುಂಬಿಹೋಗುತ್ತದೆ; ಬೆಳದಿಂಗಳಿಗೆ ಆರಿಹೋಗುತ್ತದೆ. ನಮ್ಮ ನಿಂಗನೂ, ಅವನ ಸ್ನೇಹಿತನಾದ ಬೋರನೂ, ಮುತ್ತುಗದೆಲೆ ತರುವುದಕ್ಕಾಗಿ ಸಂಗಮದ ಹತ್ತಿರ ಹೋಗಿ ಹೊಳೆಯನ್ನು ದಾಟಿ ಆಚೆ ದಡವನ್ನು ಸೇರಿದರು. ನದಿಯಲ್ಲಿ ನೀರು ಮಂಡಿಯುದ್ದ ಬರುತ್ತಿತ್ತು. ಆಗ ಬೆಳಿಗ್ಗೆ ೬ ಗಂಟೆಯಿದ್ದಿರಬಹುದು. ಸ್ವಲ್ಪ ಹೊತ್ತಿನೊಳಗಾಗಿ ಮಳೆ ಬರಲು ಪ್ರಾರಂಭವಾಯಿತು. ಅವರಿಬ್ಬರೂ ಅಲ್ಲಿಯೇ ಇದ್ದ ಈಶ್ವರ ದೇವಾಲಯವನ್ನು ಹೊಕ್ಕರು. ಮಳೆ ಬಿಡಲಿಲ್ಲ. ಮಲೆನಾಡಿನ ಸೋನೆಯಾಗಿ ಪ್ರಾರಂಭಿಸಿದುದು, ಕಲ್ಲು ಮಳೆಯಾಗಿ ಸುರಿಯಲು ಮೊದಲಾಯಿತು. ಮಧ್ಯಾಹ್ನ ೧೨ ಗಂಟೆಯಾದರೂ ಮಳೆ ಸುರಿಯುತ್ತಲೇ ಇದ್ದಿತು. ಸಾಯಂಕಾಲದೊಳಗೆ ಬಿಡಬಹುದೆಂಬ ಸೂಚನೆ ತೋರಲಿಲ್ಲ. ಅಷ್ಟು ಹೊತ್ತಿಗೆ ಮೇಲೆ ಎಲ್ಲೋ ಜೋರಾಗಿ ಮಳೆಯಾಗಿ, ನೂರಾರು ಸಿಂಹಗಳು ಘರ್ಜಿಸಿದಂತೆ ಶಬ್ದ ಮಾಡುತ್ತಾ ಪ್ರವಾಹವು ಬಂದೇಬಿಟ್ಟಿತು. ಮಧ್ಯಾಹ್ನ ಸುಮಾರು ಮೂರು ಗಂಟೆಯ ಹೊತ್ತಿಗೆ ಮಳೆಯು ಸ್ವಲ್ಪ ಕಡಮೆಯಾಯಿತು. ಪ್ರವಾಹವು ಮಾತ್ರ ಮೊದಲಿನಂತೆ ಬರುತ್ತಲೇ ಇದ್ದಿತು.

ಬೋರನಿಗೆ ಚೆನ್ನಾಗಿ ಈಜು ಬರುತ್ತಿತ್ತು. ಆದರೆ ನಿಂಗನಿಗೆ ಈಜಿನ ಗಂಧವೇ ತಿಳಿಯದು. ಹೊಳೆಯ ತೀರದಲ್ಲಿ ಒಂದು ಹಳೆಯ ಹರಿಗೋಲು ಬಿದ್ದಿದ್ದಿತು. ಆ ಕಡುವಿನಲ್ಲಿ ಈಗ ಹರಿಗೋಲನ್ನು ಉಪಯೋಗಿಸುತ್ತಿರಲಿಲ್ಲ. ೪-೫ ವರುಷಗಳ ಹಿಂದೆ ಉಪಯೋಗಿಸುತ್ತಿದ್ದ ಹಳೆಯ ಹರಿಗೋಲದು. ಅದನ್ನು ಇಬ್ಬರೂ ಸೇರಿ ಕಷ್ಟ ಪಟ್ಟು ನದಿಯ ತೀರಕ್ಕೆ ಎಳೆದು ತಂದರು. ನೀರಿಗೆ ಹರಿಗೋಲನ್ನು ಹಾಕಿದ ಕೂಡಲೆ ೨-೩ ಸ್ಥಳಗಳಿಂದ ಒಳಕ್ಕೆ ನೀರು ನುಗ್ಗಲು ಪ್ರಾರಂಭವಾಯಿತು. ಬೋರನು ಕೆಲವು ಬೇರುಗಳನ್ನೂ ಸೊಪ್ಪುಗಳನ್ನೂ ತಂದು ಆ ತೂತುಗಳಿಗೆಲ್ಲಾ ತುರುಕಿದನು. ನೀರು ಒಳಕ್ಕೆ ನುಗ್ಗುವುದು ಸ್ವಲ್ಪ ಕಡಮೆಯಾದರೂ ಇನ್ನೂ ನುಗ್ಗುತ್ತಲೇ ಇದ್ದಿತು. ಬೋರನು “ಪರವಾಯಿಲ್ಲ-ಬಾರೊ. ಹೊಳೆ ತಮಟೆ ಅಗಲ ಇದೆ. ಈ ಕಡೆ ಹರಿಗೋಲ್ನ ನೂಕಿ ಕೂತ್ಕಂಡ್ರೆ ಆ ಕಡೆಗೆ ಹೋಗಿ ಸೇರ್ತೇವೆ. ಹೊಳೆ ಇರೋ ಆಳ ಅಷ್ಟರಲ್ಲೇ ಇದೆ” ಎಂದ. ನಿಂಗನಿಗೆ ಇಷ್ಟವಿರಲಿಲ್ಲ. ಬೇಡ ಅಂದರೆ ಗೆಳೆಯ ಎಲ್ಲಿ ತನ್ನನ್ನು ಹೇಡಿ ಎಂದು ಹಾಸ್ಯ ಮಾಡುತ್ತಾನೋ ಎಂಬ ಭಯ. ಹೂ ಅಂದ. ಹರಿಗೋಲಿನಲ್ಲಿ ಕುಳಿತುಕೊಳ್ಳುವಾಗ ಅವನ ಮುಖವು ಮರಣ ದಂಡನೆಗೆ ಗುರಿಮಾಡಲ್ಪಟ್ಟವನ ಮುಖದಂತೆ ತೋರಿತು.

ತೋಪಿನಲ್ಲಿ ಬೇಕಾದಂತೆ ಸುವಾಸನೆಯುಳ್ಳ ಕೆಂಡಸಂಪಿಗೆಯ ಹೂವಿದ್ದಿತು. ನಿಂಗನು ಒಂದು ಚಿಕ್ಕ ಬುಟ್ಟಿಯ ತುಂಬ ಆ ಹೂವುಗಳನ್ನು ಕುಯಿದು ತುಂಬಿದ್ದನು. ಇಬ್ಬರೂ ಕುಯ್ಲಿದ್ದ ೨ ಮುತ್ತುಗದ ಎಲೆಯ ಪಿಂಡಿಗಳನ್ನೂ ಹರಿಗೋಲಿನೊಳಗೆ ಇಟ್ಟುದಾಯಿತು. ಗಣೆಗಾಗಿ ಚಿಕ್ಕದಾದ ಒಂದು ಕೊಂಬೆಯನ್ನು ಮುರಿದು, ಅದರ ಎಲೆಗಳನ್ನೆಲ್ಲಾ ನೆಲದ ಮೇಲೆ ಬಡಿದು ಉದುರಿಸಿದರು. ಇಬ್ಬರೂ ಹರಿಗೋಲಿನಲ್ಲಿ ಕುಳಿತು ಕೊಂಡು ಗಣೆಯಿಂದ ಒಂದು ಸಲ ಮೀಟಿದ ಕೂಡಲೆ ಅದು ಬಹಳ ವೇಗವಾಗಿ ಹೊರಟಿತು. ಪ್ರವಾಹವು ಅತಿ ವೇಗವಾಗಿ ಹೋಗುತ್ತಿದ್ದುದರಿಂದ, ಗಣೆಯನ್ನು ನೆಲಕ್ಕೆ ಅಮುಕಿ ಮೀಟಲು ಅವಕಾಶವೇ ಆಗಲಿಲ್ಲ. ಹರಿಗೋಲು ಪ್ರವಾಹದ ಜೊತೆಯಲ್ಲಿ ಗಂಟೆಗೆ ನೂರು ಮೈಲು ವೇಗದಲ್ಲಿ ಹೋಗುತ್ತಿದ್ದಿತು. ಕಣ್ಣು ಮುಚ್ಚಿ ತೆರೆಯುವುದರೊಳಗಾಗಿ ಒಂದು 'ಫರ್ಲಾಂಗು' ಕೆಳಕ್ಕೆ ಬಂದುಬಿಟ್ಟಿತು. ಆದರೆ ೨೦ ಮಾರು ಮಾತ್ರ ವಿಸ್ತಾರವಾಗಿದ್ದ ಪಾತ್ರವನ್ನು ದಾಟಿ ಎದುರು ದಡವನ್ನು ಸೇರಲಿಲ್ಲ.

ಈ ಮಧ್ಯೆ ಪ್ರವಾಹದ ವೇಗದಿಂದ ಹರಿಗೋಲಿಗೆ ತುರುಕಿದ್ದ ಸೊಪ್ಪು ಬಳ್ಳಿ ಎಲ್ಲಾ ತೇಲಿಹೋಯಿತು. ಎರಡು ಮೂರು ಕಡೆ ನೀರು ಹರಿಗೋಲಿನೊಳಕ್ಕೆ ನುಗ್ಗಲು ಪ್ರಾರಂಭವಾಯಿತು. ಬೋರನು "ಏನ್ಮಾಡೋಣ" ಎಂದನು. ನಿಂಗನು “ಮಾಡೋದೇನು ನೀನು ಈಜ್ಕೊಂಡೋಗು, ನೀರಲ್ಲಿ ಸಾಯೋದು ನನ್ನ ಹಣೇಲಿ ಬರ್ದಿರೋಹಂಗೆ ತೋರುತ್ತೆ. ಹುಡುಗನಾಗಿದ್ದಾಗ ಈಜು ಕಲೀಲಿಲ್ಲ. ಅದಕ್ಕೆ ಬೆಲೆ ಕೊಡ್ತಿದ್ದೇನೆ. ಆದ್ರೆ ೫ ಗಂಡುಮಕ್ಕಳಿದ್ದಾರೆ, ಇನ್ನೂ ಎಲ್ಲಾ ಚಿಕ್ಕೋರು. ದೇವರು ಕಾಪಾಡ್ಬೇಕು” ಎಂದು ಕಣ್ಣೀರುಬಿಟ್ಟನು. ಬೋರನು “ಹಾಗೆ ಬೇಡ, ಬಾ, ನನ್ನ ಹೆಗಲಿನ ಮೇಲೆ ಭಾರವನ್ನೆಲ್ಲ ಬಿಟ್ಟು ಮಲಗಿಕೊ, ಇಬ್ಬರೂ ಒಟ್ಟಿಗೆ ಈಜಿ ಯಾವ್ದಾದ್ರೂ ಒಂದು ದಡ ಸೇರೋಣ. ಇಲ್ಲಿ ಇಬ್ಬರೂ ಸಾಯೋಣ, ಬದುಕಿರೋವಾಗ ಹೇಗೆ ಗೆಳೆಯರೊ, ಹಾಗೆ ಸಾಯೋವಾಗ ಗೆಳೆಯರಾಗಿ ಸಾಯೋಣ" ಎಂದನು. ನಿಂಗನು ಸ್ವಲ್ಪ ಯೋಚಿಸಿ "ಹಾಗಾದ್ರೆ ಒಂದ್ಕೆಲಸ ಮಾಡಿದ್ರೆ ಇಬ್ಬರೂ ಬದುಕ್ಬಹುದು. ಈ ಹರಿಗೋಲಿಗೆ ಅರ್ಧದವರೆಗೆ ನೀರು ತುಂಬಿಬಿಟ್ಟಿರೋದರಿಂದ ನಮ್ಮಿಬ್ಬರ ಭಾರಾನೂ ಇದು ತಡೀಲಾರದು. ನೀನು ಈಜೊಂಡು ಆಚೆ ದಡ ಸೇರಿಬಿಡು, ನಮ್ಮೂರು ಕಡುವಿಗೆ ಹೋಗೋವರಿಗೆ ಭಯವಿಲ್ಲ. ಅಲ್ಲಿ ಯಾರಾದ್ರೂ ಬೆಸ್ತರು ಹಿಡಿದೇ ಹಿಡೀತಾರೆ. ಆಯುಸ್ಸಿದ್ರೆ ಬದಿಕ್ಕೋತೇನೆ. ಇಲ್ದಿದ್ರೆ ಹೋಗಲಿ. ಹುಟ್ಟಿದ್ಮೇಲೆ ಸಾಯ್ಬೇಕು” ಎಂದನು. ಬೋರನು ಹಿಂದೆ ಮುಂದೆ ನೋಡಿದನು. ನೀರು ಪ್ರತಿ ನಿಮಿಷದಲ್ಲಿಯೂ ವೇಗವಾಗಿ ಹರಿಗೋಲಿನೊಳಕ್ಕೆ ನುಗ್ಗುತ್ತಿದ್ದಿತು. ಇನ್ನು ಸ್ವಲ್ಪದರಲ್ಲಿ ಹರಿಗೋಲು ಇಬ್ಬರ ಭಾರವನ್ನು ತಡೆಯಲಾರದೆ ಮುಳುಗಬಹುದೆಂದು ಅವನಿಗೆ ತೋರಿತು. ಹದಿನೈದು ಮಾರು ದೂರದೊಳಗೆ ಸಂಗಮ ಸ್ಥಳವು ಕಾಣುತ್ತಿತ್ತು. ಸಂಗಮದ ಬಳಿ ನದಿಯ ಪಾತ್ರವು ಉಳಿದ ಕಡೆಗಿಂತ ಮೂರರಷ್ಟು ಹೆಚ್ಚು ವಿಸ್ತಾರವಾಗಿದ್ದುದರಿಂದ, ಅಲ್ಲಿ ಈಜಬಹುದೆಂಬ ನಂಬಿಕೆ ಅವನಿಗೆ ಇರಲಿಲ್ಲ. ಮುಂದೆ ಸಂಗಮದಾಚೆ ಹೇಮಾವತಿಯಲ್ಲಿ ನೀರು ಹೆಚ್ಚಾಗಿದ್ದುದರಿಂದ ಅಲ್ಲಿ ಈಜುವುದೂ ಕೂಡ ಅಸಾಧ್ಯವೇ ಆಗಿದ್ದಿತು. ಹರಿಗೋಲಿನಲ್ಲಿಯೇ ಇದ್ದರೆ ಇಬ್ಬರೂ ಮುಳುಗುವ ಸಂಭವ. ಆದುದರಿಂದ ಕೊನೆಗೆ “ಆಗಲಿ ನಾನು ಈಜ್ತೇನೆ” ಎಂದನು. ಪಾಪ, ತನ್ನ ಭಾರ ಹರಿಗೋಲಿಗೆ ಕಡಮೆಯಾದರೆ, ಅದು ನಮ್ಮೂರಿನವರಿಗೆ ಮುಟ್ಟುವುದೇನೊ, ಅಲ್ಲಿ ಬೆಸ್ತರು ನಿಂಗನನ್ನು ಬದುಕಿಸುತ್ತಾರೇನೋ, ಎಂದು ಅವನಿಗೆ ಚಪಲ. ಹರಿಗೋಲಿನಲ್ಲಿ ಇಬ್ಬರೂ ಆಲಿಂಗಿಸಿಕೊಂಡರು. ಅವರಿಬ್ಬರ ಕಣ್ಣೀರೂ ನದಿಯ ನೀರಿನೊಂದಿಗೆ ಬೆರೆಯಿತು. ನಿಂಗನಿಗೆ ಭೂಮಿಯ ಮೇಲೆ ತಾನು ಮತ್ತೆ ಸ್ನೇಹಿತನ ಮುಖವನ್ನು ನೋಡುವ ಆಸೆ ಇರಲಿಲ್ಲ. ತಡಮಾಡಲು ಅವಕಾಶವನ್ನು ಕೊಡದೆ ಅವನು ಬಲಾತ್ಕಾರವಾಗಿ ಬೋರನನ್ನು ನದಿಗೆ ನೂಕಿಬಿಟ್ಟನು. ಬೋರನು ನದಿಯ ವೇಗದಲ್ಲಿ ನೂಕಲ್ಪಟ್ಟು, ಸಂಗಮದ ಸುಳಿಯಲ್ಲಿ ಸಿಲುಕಿ, ಮುಳುಗಿ, ಅರ್ಧ ಮೈಲು ಮುಂದೆ ದಡವನ್ನು ಸೇರಿದನು. ನೀರಿನ ಹೊಡೆತದಿಂದಲೂ ಶೈತ್ಯದಿಂದಲೂ ಅವನ ಮೈಯೆಲ್ಲಾ ಹಸುರಾಗಿಬಿಟ್ಟಿತ್ತು.

ಈ ಕಡೆ ನಿಂಗನ ವಿಚಾರ ಸ್ವಲ್ಪ ಕೇಳಿ. ಮೊದಲು ಅವನು ಎರಡು ಮುತ್ತಗದ ಪಿಂಡಿಯನ್ನೂ ಒಂದೊಂದಾಗಿ ನೀರಿನೊಳಕ್ಕೆ ಬಿಸಾಡಿದನು. ಸಂಗಮ ಸ್ಥಳಕ್ಕೆ ಅವನ ಹರಿಗೋಲು ಬಂದ ಕೂಡಲೆ ಸುಳಿಯಲ್ಲಿ ಬುಗರಿಯಂತೆ ಗಿರ್‍ರೆಂದು ಸುತ್ತಿತು. ಅದು ಕೂಡೆ ನಿಂಗನ ತಲೆಯ ಸುತ್ತಿತು. ಅಲ್ಲಿಂದ ಮುಂದೆ ಹರಿಗೋಲು ಒಂದು ದೊಡ್ಡ ಬಂಡೆಯನ್ನು ಹತ್ತಿ ಕೆಳಕ್ಕೆ ಉರುಳುವುದರಲ್ಲಿದ್ದಿತು. ಕಷ್ಟ ಪಟ್ಟು ಕೈಕಾಲು ಗಾಯಮಾಡಿಕೊಂಡು ದೇವರಿಗಾಗಿ ಕುಯ್ಲಿದ್ದ ಹೂವುಗಳನ್ನೆಲ್ಲಾ ನಿಂಗನು ನದಿಗೆ ಚೆಲ್ಲಿಬಿಟ್ಟನು. ಅನಂತರ ಆ ಹರಕು ಬುಟ್ಟಿಯಿಂದ ಹರಿಗೋಲಿನ ನೀರನ್ನು ಎತ್ತಿ ಹೊರಕ್ಕೆ ಸುರಿಯಲು ಪ್ರಾರಂಭಿಸಿದನು. “ಗೋವಿಂದೋ ಗೋವಿಂದ" ಎಂಬುದಾಗಿ ಒಂದು ಸಲ ಕೂಗುವುದು; ಒಂದು ಬುಟ್ಟಿ ನೀರನ್ನು ಹರಿಗೋಲಿನಿಂದ ಎತ್ತಿ ನದಿಗೆ ಸುರಿಯುವುದು. ದಡದಲ್ಲಿ ನೋಡುವವರಿಗೆ ಈ ಗೋವಿಂದ ಶಬ್ದವು ವಿನೋದಕರವಾಗಿಯೇ ಕಂಡಿರಬಹುದು. ಆದರೆ ನಿಂಗನಿಗೆ ಮಾತ್ರ ಆಗ ಪ್ರಾಣಸಂಕಟವುಂಟಾಗಿದ್ದಿತೆಂದು ನಾನು ಅವನ ಬಾಯಿಂದಲೇ ಕೇಳಿದ್ದೇನೆ. ಅಷ್ಟೇ ಅಲ್ಲ, ತಾನು ಆ ರೀತಿ ದೇವರ ಧ್ಯಾನದೊಂದಿಗೆ ನೀರನ್ನು ಮೇಲಕ್ಕೆ ಎತ್ತಿಹಾಕದೆ ಇದ್ದಿದ್ದರೆ, ಹರಿಗೋಲು ನಮ್ಮೂರ ಕಡುವನ್ನು ಮುಟ್ಟುತ್ತಲೇ ಇರಲಿಲ್ಲವೆಂದೂ, ತಾನು ನೀರಿನಿಂದ ಜೀವ ಸಹಿತ ಹೊರಕ್ಕೆ ಬರುತ್ತಲೇ ಇರಲಿಲ್ಲವೆಂದೂ ಹೇಳಿದ್ದಾನೆ.

ನಮ್ಮೂರ ನದಿಯ ತೀರದ ಗುಡಿಸಲಿನಲ್ಲಿ ಬೆಸ್ತರ ಹನುಮನು ಉಳಿದ ಬೆಸ್ತರೊಂದಿಗೆ ಮಾತನಾಡುತ್ತಾ ಬೀಡಿ ಸೇದುತ್ತಾ ಕುಳಿತಿದ್ದನು. ಬೆಸ್ತರ ಹನುಮನೆಂದರೆ ನಮ್ಮೂರ ಬೆಸ್ತರಿಗೆಲ್ಲಾ ಕಣ್ಣಾದವನು. ಈಜುವುದರಲ್ಲಿ ಅವನಿಗೆ ಸಮಾನರಾದವರನ್ನು ನಾನು ಕಂಡೇ ಇಲ್ಲ. ೫-೬ ಆಳುದ್ದ ನೀರಿನಲ್ಲಿ ಬೆಳ್ಳಿಯ ಚಿಕ್ಕ ಎರಡಾಣೆಯನ್ನು ಎಸೆದರೆ, ಒಂದು ಕ್ಷಣದೊಳಗೆ ಮುಳುಗಿ ಅದನ್ನು ತೆಗೆದುಕೊಂಡು ಬರುತ್ತಿದ್ದನು. ಈ ಚಿತ್ರದಲ್ಲಿ ಹೇಳಿರುವ ಸಂಗತಿ ನಡೆದಾಗ, ಅವನಿಗೆ ೬೦ ವಯಸ್ಸಿದ್ದಿರಬಹುದು. ಆದರೆ ಆಳು ಬಹಳ ಗಟ್ಟಿಮುಟ್ಟಾಗಿದ್ದನು. ಆಗಲೂ ಅವನು, ತುಂಬಿದ ನಮ್ಮೂರ ಹೊಳೆಯನ್ನು ಸರಾಗವಾಗಿ ಈಜಿಬಿಡುತ್ತಿದ್ದನು.

ಅವನ ವಿಷಯವಾಗಿ ಒಂದು ಸಂಗತಿಯನ್ನು ಹೇಳಬೇಕಾಗಿದೆ. ನಮ್ಮೂರ ಶ್ರೀನಿವಾಸಯ್ಯಂಗಾರರು ಒಂದುಸಲ ಎಲಿಯೂರಿಗೆ ಹೋಗಬೇಕಾಗಿತ್ತು. ಜೊತೆಗಾಗಿ ಹನುಮನನ್ನೂ ಕರೆದುಕೊಂಡರು. ಇಬ್ಬರೂ ನಡೆದುಕೊಂಡೇ ಹೊರಟರು. ಹಾಸನದಿಂದ ೩-೪ ಮೈಲು ಹೋದ ನಂತರ ಬಿಸಿಲು ಬಹಳ ತೀಕ್ಷ್ಯವಾಯಿತು. ಹೆಂಡವನ್ನು ಇಳಿಸಲು ಈಚಲ ಮರಗಳಿಗೆಲ್ಲಾ ಗಡಿಗೆಗಳನ್ನು ಕಟ್ಟಿದ್ದ ಒಂದು ಕಾಲುದಾರಿಗೆ ಇಬ್ಬರೂ ಬಂದರು. ಮರಕ್ಕೆ ಕಟ್ಟಿದ ಮಡಕೆಯನ್ನು ನೋಡಿ, ಹನುಮನಿಗೆ, ಹೆಂಡದ ಹುಚ್ಚು ಹಿಡಿಯಿತು. ತಡೆಯಲಾರದ ಬಾಯಾರಿಕೆ ಉಂಟಾಯಿತು. ಅವನು ಗೌರವದಿಂದ “ಬುದ್ಧಿ” ಎಂದನು. ಅಯ್ಯಂಗಾರು, "ಏನು" ಅಂದರು. ಹನುಮನು “ನೀವು ಸ್ವಲ್ಪ ಹೆಜ್ಜೆ ಹಾಕಿರಿ. ನಾನು ಹಿಂದೆಯೇ ಓಡ್ಬಂದೆ” ಎಂದನು. ಅಯ್ಯಂಗಾರಿಗೆ ಅವನ ಒಳಗುಟ್ಟು ತಿಳಿಯದೆ ಇರಲಿಲ್ಲ. ಅವರು ಮನಸ್ಸಿನಲ್ಲಿ "ಏನೋ ಪಾಪ ಬಿಸಲಿನಲ್ಲಿ ನಡೆದು ದಣಿದಿದ್ದಾನೆ. ಬಾಯಾರಿಕೆಯೋ ಏನೋ? ಅವನ ಜಾತಿಗೆ ಬಂದದ್ದನ್ನ ಬೇಡವೆಂದರೆ ಬಿಡ್ತಾನೆ? ನಾವು ಕಾಫಿ ಕುಡಿಯೋ ಹಾಗೆ” ಎಂದು ಯೋಚಿಸಿ “ನಾವು ಇನ್ನೂ ತುಂಬ ದೂರ ಹೋಗಬೇಕು, ಎಚ್ಚರಿಕೆ. ಬೇಗ ಬಾ" ಎಂಬುದಾಗಿ ಹೇಳಿದರು. ಹನುಮನು ಸ್ವಲ್ಪ ದೂರ ಹೋಗಿ ಕಣ್ಣಿಗೆ ಮರೆಯಾಗಿ ಹೆಂಡದಿಂದ ತುಂಬಿದ್ದ ಒಂದು ಮಡಕೆಯನ್ನು ತನ್ನ ಕೈಯಿನ ದೊಣ್ಣೆಯಿಂದ ಹೊಡೆದು ತೂತು ಕುಕ್ಕಿ ಅದಕ್ಕೆ ಬಾಯನ್ನು ಒಡ್ಡಿ, ಬಹಳ ಮದಕಾರಿಯಾದ ಹೆಂಡವನ್ನು ಕಂಠಪೂರ್ತಾ ಪಾನಮಾಡಿಬಿಟ್ಟನು.

ಬಿಸಿಲಿನಿಂದ ಸೋತ ಅಯ್ಯಂಗಾರರು ಅವನು ಬರುವವರೆಗೆ ವಿಶ್ರಾಂತಿಯನ್ನು ತೆಗೆದುಕೊಳ್ಳೋಣವೆಂದು ಒಂದು ಮರದ ನೆರಳಿನಲ್ಲಿ ಕುಳಿತಿದ್ದರು. ಹನುಮನು ದೂರದಲ್ಲಿ ಬರುವುದನ್ನು ಕಂಡು ಅವರಿಗೆ ಬಹಳ ನಗು ಬಂದಿತು. ಅವನು ಆ ಕಡೆಯಿಂದ ಈ ಕಡೆಗೂ, ಈ ಕಡೆಯಿಂದ ಆ ಕಡೆಗೂ ಓಲಾಡುತ್ತಾ, ಆಭಾಸವಾದ ಪದಗಳನ್ನು ಹಾಡುತ್ತಾ, ಬರುತ್ತಿದ್ದನು. ಅವನ ಬಟ್ಟೆಗಳೆಲ್ಲ ಹೆಂಡದಿಂದ ನೆನೆದುಹೋಗಿದ್ದುವು. ಅವನಿಗೆ ದೇಹದ ಮೇಲೆ ಪ್ರಜ್ಞೆಯೇ ಇದ್ದಂತೆ ತೋರಲಿಲ್ಲ. ಅವನು ದೂರದಿಂದಲೇ ಅಯ್ಯಂಗಾರರನ್ನು ಕಂಡು "ಏನ್ಲಾ ಮೊಗಾ ಅಲ್ಲೆ ನಿಂತ್ಕೋ, ಒಂದು ಬೀಡಿ ಕೊಟ್ಟೆನಂತೆ" ಎಂದನು. ಅಯ್ಯಂಗಾರರಿಗೆ ಆಶ್ಚರ್ಯವಾಯಿತು. “ಬುದ್ದಿ" ಎಂದು ಗೌರವದಿಂದಲೂ ಭಯದಿಂದಲೂ ಮಾತನಾಡಿಸುತ್ತಿದ್ದವನು “ಏನ್ಲಾ” ಅಂದರೆ ಆಶ್ಚರ್ಯವಾಗಬೇಡವೆ? ಅವರು ಕುಳಿತ ಸ್ಥಳದಿಂದ ಎದ್ದರು. ಹನುಮನು “ನಿಂತ್ಕಳ್ಳಾ ಬೀಡಿ ಸೇದ್ಲಾ, ನಾನಿವ್ನಿ ಹೆದರ್ಬೇಡ" ಎಂದು ತೊದಲುತ್ತಾ ದೊಣ್ಣೆಯನ್ನು ತಿರುಗಿಸಿ ಕೊಂಡು ಅವರ ಕಡೆಗೆ ಸ್ವಲ್ಪ ವೇಗವಾಗಿ ಬರಲು ಪ್ರಾರಂಭಿಸಿದನು. ಅಯ್ಯಂಗಾರಿಗೆ ಜಂಘಾ ಬಲವು ತಪ್ಪಿಹೋಯಿತು. “ಎಲಾ ಪಾಪಿ! ಇವನು ಕಂಠಪೂರ್ತಿ ಕುಡಿದುಬಿಟ್ಟಿದ್ದಾನೆ. ಮೈಮೇಲೆ ಪ್ರಜ್ಞೆ ಇಲ್ಲ, ಇದೋ ಕಾಡು, ದೊಣ್ಣೆಯಿಂದ ನನಗೆ ನಾಲ್ಕು ಬಿಟ್ಟರೆ ಮಾಡೋದೇನು? ಈಗ ಪಲಾಯನವೇ ಸರಿಯಾದ ಉಪಾಯ. ಅಪಾಯಕ್ಕೆ ಸಿಕ್ಕಿಕೊಂಡಾಗ ನಮ್ಮ ಕಾಲೇ ನಮ್ಮನ್ನು ರಕ್ಷಿಸಬೇಕು. "ಕಾಲಾಯ ತಸ್ಮೈ ನಮಃ” ಅಯ್ಯಂಗಾರು ಸ್ವಲ್ಪ ವೇಗವಾಗಿ ಹೆಜ್ಜೆ ಹಾಕಿದರು. ಹನುಮನೂ "ನಿಂತ್ಕಳ್ಳಾ ಅಂದ್ರೆ” ಎಂಬುದಾಗಿ ತಾನೂ ವೇಗವಾಗಿ ನಡೆಯಲು ಪ್ರಾರಂಭಿಸಿದನು. ಈ ರೀತಿ ಅವರು ಮುಂದೆ, ಇವನು ಹಿಂದೆ. ಪಾಪ ಅಯ್ಯಂಗಾರರಿಗೆ ಒಳ್ಳೆ ಆಳೇ ದೊರಕಿದ. ಬಿಸಿಲಿನ ಬೇಗೆಯಲ್ಲಿ ಅವರಿಗೆ ಓಡಿ ಓಡಿ ಸಾಕಾಯಿತು. ಎದುರಿಗೆ ಒಂದು ಚಿಕ್ಕ ಕೊಳವು ಕಂಡಿತು. ಅಪಾಯವು ಸನ್ನಿಹಿತವಾದಾಗ ಉಪಾಯವು ತಾನಾಗಿಯೇ ತೋರುತ್ತದೆ. ಅಯ್ಯಂಗಾರರು ಏನೋ ಯೋಚಿಸಿಕೊಂಡು ಕೊಳದ ಮೆಟ್ಟಲಿನ ಮೇಲೆ ಕುಳಿತರು. ಹನುಮನೂ ಅಲ್ಲಿಗೆ ಬಂದನು. “ಅಲ್ಕಾಣ್ಲಾ ಸಟೇಗೆ ಮೆಳ್ಕೆ ನಡದಿದ್ರೆ ನಿನ್ಪ್ರಾಣ ಹೋಗ್ತಿತ್ತ?” ಎಂದನು. ಅಯ್ಯಂಗಾರರು ಯಾವ ಉತ್ತರವನ್ನೂ ಕೊಡದೆ ಅವನನ್ನು ಕೊಳದೊಳಕ್ಕೆ ನೂಕಿಬಿಟ್ಟರು. ಹನುಮನು ೪-೫ ಸಲ ಮುಳುಗಿ ನೀರು ಕುಡಿದನು. ಅನಂತರ ಮೇಲಕ್ಕೆ ಈಜಿಕೊಂಡು ಬಂದನು. ಬಂದವನೇ “ಬುದ್ದಿ” ಎಂದನು. ಮತ್ತೆ ನಾಗಾಲೋಟದಲ್ಲಿ ಓಡಲು ಸಿದ್ದರಾಗಿದ್ದ ಅಯ್ಯಂಗಾರರಿಗೆ, “ಬುದ್ದಿ" ಎಂದ ಕೂಡಲೆ ಸ್ವಲ್ಪ ಧೈರ್ಯ ಬಂದಿತು. ಹನುಮನು “ಬುದ್ದಿ, ನಾನೇನೂ ತುಂಬ ಕುಡೀಲಿಲ್ಲ. ಬಟ್ಟೆನೆಲ್ಲಾ ನೆನೆಸ್ಬಿಟ್ರಲ್ಲ" ಎಂದನು. ಅಯ್ಯಂಗಾರರು ಮದ್ಯಪಾನದ ಕೆಡಕುಗಳ ಮೇಲೆ ಅವನಿಗೆ ಉದ್ದಕ್ಕೂ ದೊಡ್ಡದಾದ ಉಪನ್ಯಾಸ ಮಾಡಿದರು.

ಇದೇ ಹನುಮನೇ ನಿಂಗನ ಹರಿಗೋಲನ್ನು ದೂರದಲ್ಲಿ ನೋಡಿದ. ಅರ್ಧ ಮುಳುಗಿಹೋಗಿದ್ದ ಹರಿಗೋಲು ನಮ್ಮೂರಿನವರೆಗೆ ಬರಲಾರದೆಂದೇ ಉಳಿದ ಬೆಸ್ತರು ಹೇಳಿದರು. ಹರಿಗೋಲು ಕಣ್ಣಿಗೆ ಕಾಣುವಂತೆ ನಿಧಾನವಾಗಿ ಒಂದೊಂದೇ ಅಂಗುಲ ಮುಳುಗುತ್ತಿದ್ದಿತು. ಕೆಲವು ಬೆಸ್ತರು “ಅಲ್ಲಿಗೇ ದೊಣಿಯನ್ನು ತೆಗೆದುಕೊಂಡು ಹೋಗೋಣ, ಇಲ್ಲದಿದ್ದರೆ ಈಜು ಬೀಳೋಣ” ಎಂದರು. ಹನುಮನು “ದೋಣಿ ತೆಗೆದುಕೊಂಡು ಪ್ರವಾಹಕ್ಕೆ ಎದುರಾಗಿ ಹೋಗೋಕೆ ಆಗೋದಿಲ್ಲ. ಈಜಿಬಿದ್ದು ಹರಿಗೋಲನ್ನು ಹಿಡಿಯೋದಕ್ಕೆ ಹೋದರೆ, ನಿಮ್ಮ ಕೈಗಳ ಅಲೆಗಳಿಂದ ಅದು ಮುಳಗಿ ಹೋಗ್ತದೆ" ಎಂದನು. ಉಳಿದ ಬೆಸ್ತರು ಅವನ ಮಾತಿಗೆ ಪ್ರತಿ ಹೇಳಲಿಲ್ಲ. ಹನುಮನು ವಿರಾಮವಾಗಿ ಬೀಡಿಯನ್ನು ಸೇದಿ ಎಲೆ ಅಡಿಕೆ ಅಗಿದನು. ಆ ವೇಳೆಗೆ ದೂರದಲ್ಲಿ ತೆರೆಗಳ ಸದ್ದನ್ನು ಭೇದಿಸಿಕೊಂಡು "ಗೋವಿಂದೋ ಗೋವಿಂದ” ಎಂಬ ಧ್ವನಿಯು ಅವರಿಗೆಲ್ಲಾ ಕೇಳಿಸಿತು. ಆವೇಳೆಗೆ ಹರಿಗೋಲು ಮುಕ್ಕಾಲುಪಾಲು ಮುಳುಗಿಹೋಗಿತ್ತು. ನಿಂಗನಿಗೆ ಸೊಂಟದವರೆಗೆ ಮತ್ಸ್ಯಾವತಾರವಾಗಿತ್ತು,

ಬದುಕಿದರೆ ಇಲ್ಲಿ ಬದುಕಬೇಕು, ಇಲ್ಲಿ ನೀರಿನ ಗೋರಿ, ಎಂದು ತಿಳಿದು ನಿಂಗನು ಮತ್ತೊಂದು ಸಲ ಗಟ್ಟಿಯಾಗಿ “ಗೋವಿಂದೋ ಗೋವಿಂದ” ಎಂದನು. ಹನುಮನು ದೋಣಿಯನ್ನು ಬಿಟ್ಟನು. ಈ ದೃಶ್ಯವನ್ನು ನೋಡುವುದಕ್ಕೆ ನದಿಯ ಎರಡು ತೀರಗಳಲ್ಲಿಯ ಜನರು ಇರುವೆಯ ಸಾಲಿನಂತೆ ನೆರೆದಿದ್ದರು, ಹನುಮನು ನಿಂಗನನ್ನು ಹೇಗೆ ಬದುಕಿಸುತ್ತಾನೆಂಬುದೇ ಎಲ್ಲರಿಗೂ ದೊಡ್ಡ ಸಮಸ್ಯೆಯಾಗಿತ್ತು. “ದೋಣಿಯು ಮುಂದಕ್ಕೆ ಹೋಗಿಬಿಟ್ಟರೊ? ಹರಿಗೋಲಿಗೆ ವೇಗವಾಗಿ ತಗಲಿ ಅದು ಮುಳುಗಿಹೋದರೊ? ಅದು ಮುಂದೆ ಇದು ಹಿಂದೆ ಆದರೆ?” ಎಂದು ಪ್ರೇಕ್ಷಕರೆಲ್ಲಾ ಯೋಚಿಸುತ್ತಿದ್ದರು. ನದಿಯು ತುಂಬಿ ಹರಿಯುತ್ತಿದ್ದುದರಿಂದ ಈಜಿ ನಿಂಗನನ್ನು ಸಂರಕ್ಷಿಸುವುದು ಹನುಮನಿಗೆ ಕೂಡ ಕಷ್ಟ ಸಾಧ್ಯವೇ ಆಗಿತ್ತು. ಆದರೆ ಹನುಮನಿಗೆ ಗಾಬರಿಯಿರಲಿಲ್ಲ. ತಾನು ಮಾಡುತ್ತಿದ್ದ ಕೆಲಸವೇನೆಂಬುದು ಅವನಿಗೆ ಗೊತ್ತಿದ್ದಿತು. ತನ್ನ ಶಕ್ತಿಯಲ್ಲಿ ಅವನಿಗೆ ನಂಬಿಕೆಯಿದ್ದಿತು. ನದಿಯ ಮಧ್ಯಭಾಗಕ್ಕೆ ಹರಿಗೋಲು ಬರುವ ವೇಳೆಗೆ ಸರಿಯಾಗಿ, ಬಿಲ್ಲಿನಿಂದೆಸೆದ ಅಂಬಿನಂತೆ ದೋಣಿಯು ಅಲ್ಲಿಗೆ ಬಂದಿತು. ಹನುಮನು ಎರಡು ಕೈಗಳನ್ನೂ ನೀಡಿ ನಿಂಗನನ್ನು ಎತ್ತಿ ದೋಣಿಯಲ್ಲಿ ಕುಳ್ಳಿರಿಸಿಬಿಟ್ಟನು. ಅದೇ ಕ್ಷಣದಲ್ಲಿಯೇ ಹರಿಗೋಲು ಮುಳುಗಿ ಹೋಯಿತು. ಪ್ರೇಕ್ಷಕರ ಭಲೆ ಭಲೆ ಶಬ್ದವು ಒಂದು ದಡದಿಂದ ಮತ್ತೊಂದು ದಡಕ್ಕೆ ಪ್ರತಿಧ್ವನಿತವಾಯಿತು.

ಈಗ ಹನುಮನು ಇಲ್ಲ; ಸೇತುವೆ ಇದೆ.




ನಗೆಯ ನೀತಿ


೧. ಶೀನಪ್ಪನ ವಾಕಿಂಗ್

ನನ್ನ ಸ್ನೇಹಿತ ಶೀನಪ್ಪ ಆಗತಾನೆ ಬಿ.ಎ. ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದ. ಷೋಕಿ ಅಂತೂ ಕೇಳಬೇಕಾದುದೇ ಇಲ್ಲ. ೧೨ 'ಸೂಟ್' ಇಟ್ಟಿದ್ದ. ನಿತ್ಯ ಮುಖ ಕ್ಷೌರ. ನಾನು ಅವನನ್ನು ಒಂದು ದಿವಸ “ಬಾಯ್ಯ ನಮ್ಮ ಗದ್ದೆ ಹತ್ತಿರಕ್ಕೆ ಹೋಗಿಬರೋಣ, ಪಯಿರು ಹಸುರಾಗಿ ಕಣ್ಣಿಗೆ ಇಂಪಾಗಿದೆ, ಮನೆಯಲ್ಲಿ ಹೆಗ್ಗಣದಂತೆ ಕುಳಿತು ಏನುಮಾಡುತ್ತೀಯೆ?” ಎಂದು ಕರೆದೆ. ಶೀನಪ್ಪ ಹಾಗೇ ಆಗಲಿ, ಅದಕ್ಕೇನು 'Green fields are a sight worth seeing,' ನೀನು ಹೋಗು; ನಾನು ಅರ್ಧ ಗಂಟೆ ಬಿಟ್ಟು ಬರುತ್ತೇನೆ ಎಂದ. ನಾನು ಮೊದಲೇ ಹೊರಟುಹೋದೆ.

ನಾನು ಗುದ್ದಲಿಯನ್ನು ಹಿಡಿದುಕೊಂಡು, ಗದ್ದೆಯ ಕೆಸರನ್ನು ಎತ್ತಿ ಬೇರೆ ಕಡೆಗೆ ಹಾಕುತ್ತಲಿದ್ದೆ, ನನ್ನ ಜೊತೆಯಲ್ಲಿ ನಮ್ಮ ಆಳು ಬೋರನೂ ಕಳೆ ಕೀಳುತ್ತಿದ್ದ. ಮಧ್ಯೆ ಒಂದುಸಲ ಬೋರನು ನಾಲೆಯ ಏರಿಯ ಕಡೆ ತಿರುಗಿ "ಯಾರೋ ದೊರೆಗ್ಳು ಈ ಕಡೆ ಬರ್ತಾ ಇದಾರೆ ಬುದ್ದಿ” ಎಂದ. ನಮ್ಮ ಊರಿನಲ್ಲಿ ದೊರೆಗಳನ್ನು ಕಾಣೋದು ಅಪರೂಪವೆ. ನಾನು ಮೇಲಕ್ಕೆ ತಲೆಯೆತ್ತಿ ನಾಲೆಯ ಏರಿ ಕಡೆ ನೋಡಿದೆ. ಕೋಟು, ಬೂಟು, ಹ್ಯಾಟು, ಷರಾಯಿ ವ್ಯಕ್ತಿಯೊಬ್ಬನು ನನ್ನ ಕಣ್ಣಿಗೆ ಬಿದ್ದನು. ಒಂದು ಗಳಿಗೆ ದೃಷ್ಟಿಸಿ ನೋಡುವುದರಲ್ಲಿ ಅವನು ನಮ್ಮ ಸ್ನೇಹಿತ ಶೀನಪ್ಪನೆಂಬುದು ಗೊತ್ತಾಯಿತು. ಅವನ ಡ್ರೆಸ್ಸನ್ನು ನೋಡಿ, ಇವನೇನು ವರಪೂಜೆಗೆ ಹೊರಟಿದಾನೋ ಅಥವಾ 'ಕಾನ್ವೊಕೇಶನ್ ಡಿಗ್ರಿ' ತೆಗೆದುಕೋಳೋಕೆ ಹೊರಟಿದಾನೋ, ಎಂದು ಯೋಚಿಸಿದೆ. ಗದ್ದೆ ಬದುವಿನ ಕೆಸರಿಗೆ ಬರುವವನಿಗೆ, ಈ ಮದವಣಿಗನ ಉಡುಪು ಯಾಕೆ? ಕೈಯಲ್ಲಿ ಮಡಚಿ ಇಟ್ಟುಕೊಂಡ ನಿಲುವಂಗಿ ಯಾಕೆ? ಕೊಡೆ, ಬಣ್ಣದ ಉಪನೇತ್ರ, ವಾಕಿಂಗ್ ಸ್ಟಿಕ್ ಇವೆಲ್ಲಾ ಯಾಕೆ? ನನಗೆ ಸ್ವಲ್ಪ ನಗು ಬಂದಿತು. ಶೀನಪ್ಪನು ಎದುರಿಗೆ ಇರಲಿಲ್ಲವಾಗಿ ನಿರ್ಭಯದಿಂದ ನಕ್ಕೆ.

ಕಾಲುವೆಯ ಬದುವನ್ನು ಬಿಟ್ಟು ಶೀನಪ್ಪನು ಗದ್ದೆಯ ಬಯಲಿಗೆ ಇಳಿದನು. ನಮ್ಮೂರ ಗದ್ದೆಯ ಜಮೀನು ಬಹಳ ಫಲವತ್ತಾದುದರಿಂದ, ಅಲ್ಲಿ ಬದುವಿಗೆಂದು ಸ್ವಲ್ಪವೂ ಜಮೀನನ್ನು ವ್ಯರ್ಥವಾಗಿ ಬಿಡುವುದಿಲ್ಲ. ಒಂದು ಗದ್ದೆಯಿಂದ ಮತ್ತೊಂದು ಗದ್ದೆಯನ್ನು ವಿಭಾಗಿಸುವ ಬದುವು, ಕೇವಲ ಒಂದು ಗೇಣು ಮಾತ್ರ ಅಗಲವಾಗಿದೆ. ಅದರ ಮೇಲೆ ಯಾವಾಗಲೂ ನೀರು ಹರಿಯುತ್ತಿರುವುದರಿಂದ, ಅದರ ಮಣ್ಣು ಬಹಳ ಸಡಿಲವಾಗಿ ಕುಸಿದುಹೋಗುವಂತಿದೆ. ನಾವ್ಯಾರೂ ಬದುವಿನ ಮೇಲೆ ತಿರುಗುವುದಿಲ್ಲ. ಯಾತಕ್ಕೆಂದರೆ ತಿರುಗಲು ಪ್ರಯತ್ನ ಪಟ್ಟರೆ, ಗದ್ದೆಯ ಕೆಸರಿನೊಳಕ್ಕೆ ಬೀಳುವುದು ಖಂಡಿತ.

ಶೀನಪ್ಪನು ಬದುವಿನ ಮೇಲೆ ನಡೆಯಲು ಪ್ರಾರಂಭಿಸಿದನು. ಆ ಕಡೆ ಗದ್ದೆ, ಈ ಕಡೆ ಗದ್ದೆ, ೧೭ ರೂಪಾಯಿನ ಕಟ್ ಕಟ್ ಶಬ್ದದ ಇಂಗ್ಲಿಷ್ ಬೂಟ್ಸು ಕೆಸರಾಗಬಾರದೆಂದು ಅವನು ಉಪಾಯವಾಗಿ ಬದುವಿನಮೇಲೆ ಹೆಜ್ಜೆಯನ್ನಿಕ್ಕುತ್ತಾ ಬರುತ್ತಿರುವಾಗ ಒಂದೇ ರೈಲು ಕಂಬಿಯಮೇಲೆ ನಡೆಯುವವನಂತೆ ಓಲಾಡುತ್ತಿದ್ದನು. ಕೈಯಲ್ಲಿದ್ದ ಕೋಲನ್ನಾದರೂ ಊರಿಕೊಂಡು ನಡೆಯೋಣವೆಂದರೆ, ಅದು ಬೆತ್ತವಾಗಿದ್ದುದರಿಂದ ಊರಲವಕಾಶವಿಲ್ಲದೆ ಬಳುಕುತ್ತಿದ್ದಿತು. ಅವನು ಕೆಳಕ್ಕೆ ಬೀಳಬಹುದೆಂದು ನನಗೆ ಗೊತ್ತಾಯಿತು. ಬರಬೇಡವೆಂದು ಕೂಗಿ ಹೇಳಿದ್ದರೆ ಅವನು ಅಲ್ಲಿಯೇ ನಿಂತುಬಿಡುತ್ತಿದ್ದನು. ಆದರೆ ಸುಲಭವಾಗಿ ದೊರಕಬಹುದಾದ ವಿನೋದವನ್ನು ಕಳೆದುಕೊಳ್ಳಬಾರದೆಂದು ನನ್ನ ಮನದಲ್ಲಿ ಯಾವುದೋ ಒಂದು ಒಳಧ್ವನಿಯು ಹೇಳುತ್ತಿದ್ದುದರಿಂದ ಸುಮ್ಮನಾದೆನು.

ಆ ವೇಳೆಗೆ ಶೀನಪ್ಪ ಒಂದು ಕಡದಾದ ಬದುವಿನ ಮೇಲೆ ಓಲಾಡುತ್ತಿದ್ದ. ಎಡಗಡೆಯ ಗದ್ದೆಯು ಸ್ವಲ್ಪ ಹಳ್ಳದಲ್ಲಿದ್ದಿತು. ನನಗೂ ಅವನಿಗೂ ನಡುವೆ ೭ ಚಿಕ್ಕ ಬದುಗಳಿದ್ದುವು. ಈಗಾಗಲೇ ಅವನ ಕರಿಯ ಸರ್ಜಿನ ಷರಾಯಿಗೆಲ್ಲಾ ಕೆಸರು ಹಾರಿತ್ತು. ನೋಡುತ್ತಿದ್ದಂತೆಯೇ ಶೀನಪ್ಪನು ಒಂದು ಸಲ ಬಲಗಡೆಗೆ ಹೆಚ್ಚಾಗಿ ಓಲಾಡಿದನು. ಸಮತೂಕವನ್ನು ಸರಿಪಡಿಸಿಕೊಳ್ಳುವುದಕ್ಕಾಗಿ ಮತ್ತೆ ಸ್ವಲ್ಪ ಹೆಚ್ಚಾಗಿ ಎಡಗಡೆಗೆ ಬಾಗಿದನು. ಅದೇ ಗಳಿಗೆಯಲ್ಲಿಯೇ ಬದುವಿನ ಮೇಲೆ ಬರುತ್ತಿದ್ದ ಸಾಹೇಬನು ಮರೆಯಾದನು. ಎಡಗಡೆಯ ಗದ್ದೆಯಿಂದ ನೀರೂ ಕೆಸರೂ ಮೇಲಕ್ಕೆ ಹಾರಿತು. ಪೈರಿನ ಸಾಲು ಎರಡು ಕಡೆಗೂ ಬಾಗಿ ಶೀನಪ್ಪನನ್ನು ಬಾಚಿ ತಬ್ಬಿಕೊಂಡಿತು.

ಬಿದ್ದವನ ಸಹಾಯಕ್ಕೆ ನಾನೂ ಹೋಗಲಿಲ್ಲ; ಬೋರನೂ ಹೋಗಲಿಲ್ಲ. ನಗುವನ್ನು ಮಾತ್ರ ತಡೆಯಲು ಸಾಧ್ಯವಾಗಲಿಲ್ಲ. ಶೀನಪ್ಪನು ಮೇಲಕ್ಕೆ ಎದ್ದು ನಿಂತುಕೊಂಡನು. ಆಗ ಅವನ ರೂಪು ದೇವರೇ ಗತಿ. ಇಸ್ತ್ರಿಮಾಡಿ ಗರಿಗರಿಯಾಗಿದ್ದ ಷರಾಯಿ ಕೆಸರಿನಲ್ಲಿ ತೊಯ್ದು ಹೋಗಿತ್ತು. 'ಹ್ಯಾಟ್ ' ಗದ್ದೆಯಲ್ಲಿ ಅರ್ಧ ಮುಳುಗಿ ಹೋಗಿತ್ತು. ಅವನು ಎದ್ದು ನಿಂತು ಕೊಂಡು ಕಣ್ಣು ಕಿವಿ ಮೂಗು ಎಲ್ಲವನ್ನೂ ಒಂದಾಗಿ ಮಾಡಿದ್ದ ಜೇಡಿ ಮಣ್ಣನ್ನು ಕೈಯಿಂದ ತೆಗೆದು ಹಾಕಿ ಕಿವಿಯನ್ನೂ ಕಣ್ಣನ್ನೂ ಹುಡುಕುತ್ತಿದ್ದನು. ಬಗೆ ಬಗೆಯ ಸುಗಂಧಯುಕ್ತವಾದ ಎಣ್ಣೆಗಳನ್ನು ಹಾಕಿ ಬಾಚಿಕೊಂಡಿದ್ದ ಅವನ ಮು೦ಜುಟ್ಟೆಲ್ಲವೂ ದಿಕ್ಕಾಪಾಲಾಗಿತ್ತು. ಅವನ ಕಿವಿಯಲ್ಲಿ ಒಂದು ಗೆಜ್ಜಗದ ಗಾತ್ರ ಮಣ್ಣು ತುಂಬಿತ್ತು. ಗದ್ದೆಯಲ್ಲಿ ಅರ್ಧ ಮಣ್ಣಿನಲ್ಲಿ ಹೂಳಿಹೋಗಿದ್ದ ಅವನ 'ಹ್ಯಾಟು' ಮುರುಕು ಮಡಿಕೆಯ ಚೂರಿನಂತೆ ಕಾಣುತ್ತಿದ್ದಿತು. ಅವನಿಗೇನೂ ಅಪಾಯವಾಗಿರಲಿಲ್ಲ. ಅವನ ಕನ್ನಡಕ ಕೂಡ ಸರಿಯಾಗಿಯೇ ಇತ್ತು. ನಾವು ನಕ್ಕುದನ್ನು ಕಂಡು ಶೀನಪ್ಪ ಬೋರನನ್ನು ಚೆನ್ನಾಗಿ ಬಯ್ದ. ಅವನು ಬೈದಷ್ಟೂ ಬೋರನು ನಗುತ್ತಲೇ ಇದ್ದ. ನಗೆಯ ಹೆಣ್ಣು ಔಚಿತ್ಯವನ್ನೇ ಅರಿಯಳು.

೨. ನಮ್ಮ ಭಾವನವರು ತಂದ ತಿಂಡಿ

ನಮ್ಮ ಭಾವನವರು ವೈದಿಕಶಿಖಾಮಣಿಗಳು. ೧೨ ನಾಮ ಯಾವತ್ತೂ ಬಿಟ್ಟವರೇ ಅಲ್ಲ. ಸ್ತೋತ್ರ ಪಾಠಗಳಿಗಂತೂ ಮಿತಿಯೇ ಇಲ್ಲ. ದೇವರ ದಯದಿಂದ ಸಂಸ್ಕೃತ ಶ್ಲೋಕಗಳಿಗೂ ಕಡಮೆಯಿಲ್ಲ. ಸಾಸಿವೆ ಕಾಳು ಸಿಡಿದಂತೆ ಮಾತನಾಡಿದುದಕ್ಕೆಲ್ಲ ಒಂದು ಶ್ಲೋಕದ ಆಧಾರ ಬಾಯಿಂದ ಹೊರಕ್ಕೆ ಬರುತ್ತದೆ. ಸೌಟಿನಲ್ಲಿ ಬಡಿಸಬೇಕು; ಚಮಚಾದಲ್ಲಿ ಬಡಿಸಕೂಡದು; ಬಾಯಿನೀರನ್ನು ಎಡಗಡೆಗೆ ಮುಕ್ಕುಳಿಸಿ ಉಗಿಯ ಬೇಕು; ಬಲಗಡೆಗೆ ಉಗಿಯಕೂಡದು. ಈಚಲಮರದ ಮೇಲೆ ಬಟ್ಟೆಯನ್ನಿಟ್ಟರೆ ಅದು ಮಡಿಯೋ? ಅಲ್ಲವೋ? ಈ ವಿಷಯಗಳನ್ನೆಲ್ಲಾ ಅವರು ೫-೬ ವರ್ಷಗಳವರೆಗೆ ಸಂಪ್ರದಾಯ ಗ್ರಂಥಗಳನ್ನೆಲ್ಲಾ ವ್ಯಾಸಂಗಮಾಡಿ ತೀರ್ಮಾನ ಮಾಡಿದ್ದಾರೆ.

ಈಗ ಹನ್ನೆರಡು ವರ್ಷಗಳ ಹಿಂದು ಮಾತು. ಆಗ ಮೇಲುಕೋಟೆಯಿಂದ ನಮ್ಮೂರಿಗೆ ರೈಲು ಇರಲಿಲ್ಲ. ಎತ್ತಿನ ಗಾಡಿಯಲ್ಲಿಯೇ ಪ್ರಯಾಣ. ಬೆಳಿಗ್ಗೆ ಹೊತ್ತಿಗೆ ಮುಂಚೆ ಹೊರಡುವುದಕ್ಕೆ ಕಳ್ಳರ ಭಯ; ರಾತ್ರೆ-ಹೊತ್ತು ಮೀರಿ ಪ್ರಯಾಣವನ್ನು ಮುಂದೆ ಸಾಗಿಸಲು ಕಳ್ಳರ ಭಯ. ಹೀಗಾಗಿ ಮೇಲುಕೋಟೆಯಿಂದ ನಮ್ಮೂರಿಗೆ ಬರಲು ಐದು ದಿನಗಳು ಹಿಡಿಯುತ್ತಿದ್ದುವು. ಒಂದು ಸಲ ನಮ್ಮ ಭಾವನವರು ನಮ್ಮೂರಿಗೆ ಬರುತ್ತೇನೆಂದು ಕಾಗದ ಬರೆದುದರಿಂದ ನಮ್ಮ ರೈತನ ಗಾಡಿಯೊಂದನ್ನು ಕಳುಹಿಸಬೇಕಾಯಿತು. ಶ್ರೀಕೃಷ್ಣ ಜಯಂತಿಯಾದ ಮರುದಿವಸವೇ ನಮ್ಮ ಭಾವನವರು ಮೇಲುಕೋಟೆಯಿಂದ ಹೊರಟರು. ಅಯ್ಯಂಗಾರ ಕೃಷ್ಣಜಯಂತಿ ಅಂದರೆ ನಿಮಗೆ ತಿಳಿದೇ ಇದೆ. ಅದರಲ್ಲೂ ವೈದಿಕರಾದವರ ವಿಷಯ ಕೇಳಬೇಕಾದುದೇ ಇಲ್ಲ. ಅವರು ನೂರಾರು ಹೊಸ ತಿಂಡಿಗಳಿಂದ ಕೃಷ್ಣ ಪರಮಾತ್ಮನನ್ನು ತುಷ್ಟಿಪಡಿಸುತ್ತಾರೆ. ನಮ್ಮ ಅಕ್ಕ ನಮ್ಮೂರಲ್ಲೇ ಇದ್ದರು. ಆದುದರಿಂದ ನಮ್ಮೂರಿಗೆ ತಿಂಡಿಯನ್ನು ತರುವುದಕ್ಕೆ, ನಮ್ಮ ಭಾವನವರಿಗೆ ಒಂದು ವಿಶೇಷ ಕಾರಣವಿದ್ದಿತು. ಅವರು ದೊಡ್ಡದಾದ ಒಂದು ಬುಟ್ಟಿಯನ್ನು ತೆಗೆದು ಅದರಲ್ಲಿ ಲಾಡು, ಚಕ್ಕುಲಿ, ಮನವರಂ, ಪೂರಿ, ಮುಂತಾದ ತಿಂಡಿಗಳನ್ನೆಲ್ಲಾ ತುಂಬಿ, ಅದರಮೇಲೆ ಕಾಶಿಯ ಒಂದು ಬಿಳಿಯ ಮಡಿ ಶಾಲುವನ್ನು ಬಿಗಿದು ಕಟ್ಟಿ, ೨-೩ ಪೆಟ್ಟಿಗೆ ಹಾಸಿಗೆಗಳ ಕೂಡ ಗಾಡಿಯಲ್ಲಿ ಹಾಕಿಕೊಂಡು ಊರಿನ ಕಡೆಗೆ ಹೊರಟರು. ೫ ದಿವಸ ಕಳೆದ ಮೇಲೆ ಪದ್ಧತಿಯಂತೆ ಊರ ಹತ್ತಿರಕ್ಕೆ ಬಂದರು.

ನಾವು ಕಳುಹಿಸಿದ್ದ ಗಾಡಿಯವನು ನಮ್ಮೂರಿಗೆ ಎರಡು ಮೈಲು ದೂರದ ರಾಮೋಹಳ್ಳಿಯವನು. ಅಲ್ಲಿ ನಮ್ಮ ಜಮೀನನ್ನೆಲ್ಲ ಅವನೇ ಸಾಗುವಳಿ ಮಾಡಿದ್ದ. ಬಹಳ ನಂಬಿಕಸ್ಯ. ಆವನ ಹಳ್ಳಿಯು ರಸ್ತೆಯ ಮಗ್ಗುಲಲ್ಲಿಯೇ ಇದೆ. ಗಾಡಿಯು ತನ್ನ ಹಳ್ಳಿಯ ಬಳಿಗೆ ಬಂದ ಕೂಡಲೇ, ಅವನ ಎತ್ತುಗಳು ಅಭ್ಯಾಸದಿಂದ ಗಾಡಿಯನ್ನು ಹಳ್ಳಿಯ ಕಡೆಗೆ ಎಳೆದವು. ಗಾಡಿಯವನು ನಮ್ಮ ಭಾವನವರನ್ನು ಕುರಿತು "ಸ್ವಾಮಿ ತಾವು ಹೋಗಿ ಬಿಡಿ, ಎತ್ತುಗಳನ್ನು ಎರಡು ಗಂಟೆ ಮನೆಯ ಮುಂದೆ ಬಿಟ್ಟು ಸುದಾರಿಸ್ಕೊಂಡು, ಸ್ವಲ್ಪ ಹುಲ್ಲು ತಿನ್ನಿಸಿ ಗಾಡೀನ ಹೊಡ್ಕೊಂಡು ಬರ್‍ತೇನೆ" ಎಂದ. ಭಾವನವರಿಗೂ ಗಾಡಿಯಲ್ಲಿ ಕೂತು, ಕುಲಕಾಡಿ ಸೊಂಟವೆಲ್ಲಾ ನೋವು ಹತ್ತಿತ್ತು. ಅವರು ಹಾಗೆಯೇ ಮಾಡು” ಎಂಬುದಾಗಿ ಹೇಳಿ ಮಡಿಚೀಲವನ್ನು ಮಾತ್ರ ಹೆಗಲಿನ ಮೇಲೆ ಇಟ್ಟುಕೊಂಡು, ಗಾಡಿಯಿಂದ ಇಳಿದು ಮನೆಗೆ ಬಂದರು. ಬಂದವರೇ ನಮ್ಮನ್ನೆಲ್ಲಾ ಕುರಿತು ಒಂದುತಟ್ಟಿ ತುಂಬ ತಿಂಡಿ ತಂದಿದೀನಿ. ಸುಮ್ಮನೆ ಇರಿ. ಎಲ್ಲರಿಗೂ ಬೇಕಾದ ಹಾಗೆ ಕೊಡ್ತೀನಿ; ಒಂದು ಘಳಿಗೆ ತಡೀರಿ, ತಿಂದು ತೇಗುವಿರಂತೆ” ಎಂಬುದಾಗಿ ಹೇಳಿದರು.

ಮಧ್ಯಾಹ್ನ ಊಟವಾಯಿತು. ನಾವು ಜಗಲಿಯ ಒಂದು ಮೂಲೆಯಲ್ಲಿ ಕುಳಿತು, 'ಚೌಕಬಾರವನ್ನು' ಆಡುತ್ತಾ ಎಷ್ಟು ಹೊತ್ತಿಗೆ ತಿಂಡಿಯು ಬಂದೀತೋ ಎಂದು ನಿರೀಕ್ಷಿಸುತ್ತಿದ್ದೆವು. ನಮ್ಮ ತಂದೆಯವರೂ ಭಾವನವರೂ ಮತ್ತೊಂದು ಜಗಲಿಯ ಮೇಲೆ ಕುಳಿತು ಮಾತನಾಡುತ್ತಿದ್ದರು. ಭಾವನವರು "ಗಾಡಿಯವನು ನಂಬಿಕಸ್ತ, ಯೋಗ್ಯ, ಸಹನಾವಂತ" ಎಂದೂ ಮುಂತಾಗಿ ಹೇಳುತ್ತಿದ್ದರು. ಅವರ ಮಾತು ಪೂರ್ಣವಾಗುವುದಕ್ಕೆ ಮುಂಚಿತವಾಗಿಯೇ, ಗಾಡಿಯವನು ಮಡಿ ಶಾಲುವಿನಿಂದ ಸುತ್ತಿದ್ದ ಅವರ ಬುಟ್ಟಿಯನ್ನು ತಲೆಯಮೇಲೆ ಹೊತ್ತುಕೊಂಡು ಬಾಗಿಲಿಗೆ ಬಂದನು. ಅವನನ್ನು ನೋಡಿದ ಕೂಡಲೆ ನಮ್ಮ ಭಾವನವರು "ಮುಠಾಳ ಅನ್ಯಾಯ ಮಾಡಿಬಿಟ್ಟೆಯೆಲ್ಲ!” ಎಂದರು. ಒಂದು ಘಳಿಗೆ ಮುಂಚೆ ಹೊಗಳುತ್ತಿದ್ದವರು, ಈಗ ಬೈಯುವುದಕ್ಕೆ ಕಾರಣವೇನೆಂದು ನಮ್ಮ ತಂದೆಯವರಿಗೆ ತಿಳಿಯಲಿಲ್ಲ. ಭಾವನವರು ಕೋಪದಿಂದ ಗಾಡಿಯವನನ್ನು ಕುರಿತು "ಇದನ್ಯಾಕೆ ತೆಗೆದುಕೊಂಡು ಬಂದೆ, ಗಾಡಿ ಎಲ್ಲಿ?” ಎಂದರು. ಗಾಡಿಯವನು ಗಾಡಿಯನ್ನು ನನ್ನ ಮಗ ರಾತ್ರಿಗೆ ಹೊಡೆದುಕೊಂಡು ಬರ್ತಾನೆ. ಬರಿಯ ಕೈಯಲ್ಲಿ ಯಾಕೆ ಹೋಗಬೇಕು ಅಂತ ಇರೋದರಲ್ಲೆಲ್ಲಾ ದಪ್ಪವಾದ ಗಂಟನ್ನೇ ಹೊತ್ತುಕೊಂಡು ಬಂದೆ” ಎಂದನು. ನಮ್ಮ ಭಾವನವರು “ನೀ ಹಾಳಾದೆ" ಎಂದರು. ಅನಂತರ ನಮ್ಮನ್ನು ಕುರಿತು ಆ ಶಾಲುವನ್ನು ಬಿಚ್ಚಿಕೊಂಡು ನೀರಿನಲ್ಲಿ ನೆನೆಸಿ ಹಾಕಿಬಿಡಿ. ತಿಂಡಿ ಅವನಿಗೇ ಆಯಿತು. ದಾರಿಯಲ್ಲಿ ಕೂಡ ಒಂದು ಚೂರನ್ನೂ ತಿನ್ನದೆ ತಂದೆ” ಎಂದರು.

ನಾನು ಶಾಲುವನ್ನೇನೋ ಬಿಚ್ಚಿ ನೆನಸಿದೆ. ಆದರೆ ತಿಂಡಿಯನ್ನೂ ಬಿಡಲಿಲ್ಲ. ಭಾವನವರಿಗೆ ಹೇಳದೆ ಹುಡುಗರೆಲ್ಲಾ ಗುಟ್ಟಾಗಿ ತಿಂದು ಹಾಕಿಬಿಟ್ಟೆವು. ಭಾವನವರು ಒಂದು ತಿಂಗಳಾದರೂ ಈ ವಿಷಯ ಮರೆಯಲಿಲ್ಲ. ಮಾತೆತ್ತಿದರೆ ಗಾಡಿಯವನಿಗೆ ಬೈಗಳದ ಸುರಿಮಳೆಯಾಗುತ್ತಿದ್ದಿತು. ಅವರ ಕೂಗಾಟವನ್ನು ನೋಡಿ ನಾವು ನಕ್ಕದ್ದೂ ನಕ್ಕದ್ದೆ.

೩. ಭಾವನವರ ನುಡಿ

ನಮ್ಮ ಭಾವನವರು ತಮ್ಮ ತಂದೆಯ ಶ್ರಾದ್ಧವನ್ನು ಮಾಡಬೇಕಾಯಿತು. ಆವತ್ತಂತೂ ಅವರ ಮುಡಿಗೆ ಮಿತಿಯೇ ಇರಲಿಲ್ಲ. ಮಾತನಾಡಿದರೆ ಎಲ್ಲಿ ಮೈಲಿಗೆಯಾಗಿಬಿಡುತ್ತದೆಯೋ ಎಂಬುದಾಗಿ ಆ ದಿವಸವೆಲ್ಲಾ ನಮ್ಮೊಂದಿಗೆ ಬರಿಯ ಸಂಜ್ಞೆಯಿಂದಲೇ ಸಂಭಾಷಣೆ, ಅವರು ಶ್ರಾದ್ಧ ಮಾಡಿ ಮುಗಿಸುವ ಹೊತ್ತಿಗೆ ಭಾರಿ ಅಶ್ವಮೇಧ ಯಾಗವನ್ನು ಮಾಡಿದಂತೆ ಆಗುತ್ತಿತ್ತು. ಹೋಮವೆಲ್ಲಾ ಆಗಿ 'ಬ್ರಾಹ್ಮಣ'ರಿಗೆ ಎಲೆ ಹಾಕುವುದೇ ಮೂರು ಗಂಟೆ. “ಬ್ರಾಹ್ಮಣ"ರಿಗೆ ಆದನಂತರ ನಮ್ಮ ಭಾವನವರಿಗೂ, ನಮಗೂ, ಉಳಿದವರಿಗೂ ಊಟವಾಗುವ ಪದ್ದತಿ. ಇರಲಿ, ಆ ದಿವಸ ಬ್ರಾಹ್ಮಣರು ಊಟಕ್ಕೆ ಕುಳಿತಿದ್ದರು. ಆಗತಾನೆ ಪರಿಶೇಚನವನ್ನು ಮುಗಿಯಿಸಿ ಒಂದೆರಡು ತುತ್ತು ಊಟಮಾಡಿದ್ದರು. ಶೂದ್ರರ ಧ್ವನಿ ಕೇಳಬಾರದೆಂದು, ಬೀದಿಯ ಬಾಗಿಲಿಗೆ ಅಗಣಿ ಹಾಕಿಬಿಟ್ಟಿದ್ದೆವು. ನಮ್ಮ ರೈತ ಬೀದಿಯ ಬಾಗಿಲಿಗೆ ಬಂದು ೨-೩ ಸಲ ಕೂಗಿದ ಅಂತ ಕಾಣುತ್ತೆ. ಅದು ನಮಗ್ಯಾರಿಗೂ ಕೇಳಿಸಲಿಲ್ಲ. ಅನಂತರ ಅವನು ಬೀದಿಯ ಕಡೆಯಿಂದ ನಡುಮನೆಯ ಕಿಟಕಿಯಲ್ಲಿ ತಲೆಯಿಟ್ಟು ಇಣಿಕಿನೋಡಿದ. ನೋಡಿದಕೂಡಲೆ ನಮ್ಮ ಭಾವನವರ ಮುಖವು ಅವನ ಕಣ್ಣಿಗೆ ಬಿದ್ದಿತು. ಭಾವನವರೂ ಅವನನ್ನು ನೋಡಿದರು. ಆಗ ಅವರ ಮುಖದಲ್ಲಿ ತೋರಿದ ಗಾಬರಿಯನ್ನು ಹೇಳಬೇಕಾದುದೇ ಇಲ್ಲ. ಅವರು ಈ "ವಿಧವಾಪತಿ, ಪಿಶಾಚಿ" (ಕನ್ನಡದಲ್ಲಿ ಬಯ್ಯಲಿಲ್ಲ. ದೇವಭಾಷೆಯಲ್ಲಿ ಬಯ್ದರು) ಎಂದರು. ತಾನು ನೋಡಿದುದರಿಂದ ಅವರಿಗೆ ಅಸಮಾಧಾನವಾಯಿತೆಂದು ತಿಳಿದು ರೈತನು-

"ಉಣ್ತೀರಾ ಬುದ್ದಿ, ಉಣ್ಣಿ ಉಣ್ಣಿ” ಎಂದು ಹೇಳಿ ಹೊರಟು ಹೋದನು.

ಹತ್ತು ನಿಮಿಷ ನಮ್ಮ ಭಾವನವರು ಹುಚ್ಚನಂತೆ ಮಂಕಾಗಿ ಕುಳಿತು ಬಿಟ್ಟರು. ಶ್ರಾದ್ಧದ ದಿವಸ ಶೂದ್ರನು ಬ್ರಾಹ್ಮಣರ ಎಲೆಯನ್ನು ನೋಡಿಬಿಟ್ಟ. ಶ್ರಾದ್ಧವೆಲ್ಲ ಕೆಟ್ಟು ಹೋಯಿತು. ಪಿತೃಗಳೆಲ್ಲ ನಿರಾಶರಾಗಿ ಹೊರಟುಹೋಗುತ್ತಾರೆ, ಅಯ್ಯೋ ಎಂದು ಅವರು ದುಃಖಿಸಿದರು. ಶಾಸ್ತ್ರ ವಿದ್ವತ್ತಿನಲ್ಲಿ ನಮ್ಮ ತಂದೆಯವರು ನಮ್ಮ ಭಾವನವರಿಗಿಂತ ಒಂದು ಕೈ ಮೇಲು ಎಂದೇ ಹೇಳಬೇಕು. ಆದರೆ ಈಗ ತಾವೇ “ಬ್ರಾಹ್ಮಣ"ರಾಗಿ ಕುಳಿತುಬಿಟ್ಟಿದ್ದುದರಿಂದ ಅವರು ಯಾವ ಮಾತನ್ನೂ ಆಡಲು ಇಷ್ಟಪಡಲಿಲ್ಲ. ಭಾವನವರಿಗೆ ಶ್ರಾದ್ಧವು ಕೆಟ್ಟು ಹೋಯಿತಲ್ಲಾ ಏನು ಮಾಡಬೇಕೆಂಬ ಯೋಚನೆ ಹತ್ತಿಬಿಟ್ಟಿತು. ಸರಿ ಪುಸ್ತಕಗಳನ್ನು ಹುಡುಕುವುದಕ್ಕೆ ಪ್ರಾರಂಭ. ನಮ್ಮ ತಂದೆಯವರ ಪೆಟ್ಟಿಗೆಯಲ್ಲಿದ್ದ ಪುಸ್ತಕಗಳೆಲ್ಲಾ ಹೊರಕ್ಕೆ ಬಂದವು. ಓಲೆಯ ಪುಸ್ತಕಗಳೆಲ್ಲ ರಾಶಿರಾಶಿಯಾಗಿ ಹೊರಗೆ ಬಿದ್ದವು. "ಬ್ರಾಹ್ಮಣ"ರಿಗೆ ಹಸಿವು ಪ್ರಾಣಹೋಗುತ್ತಿದ್ದಿತು. ಆದರೆ ಈ ಶಾಸ್ತ್ರಾರ್ಥ ನಿರ್ಣಯವಾಗುವವರೆಗೆ, ಅವರು ಬಾಯಿಗೆ ಅನ್ನವನ್ನಿಡುವಂತಿರಲಿಲ್ಲ. ನಮ್ಮ ಮನೆಯಲ್ಲಿದ್ದ ಒಂದು ಪುಸ್ತಕದಲ್ಲಿಯೂ ನಮ್ಮ ಭಾವನವರಿಗೆ ಬೇಕಾದ ವಿಷಯ ದೊರಕಲಿಲ್ಲ. ಅವರು “ಬ್ರಾಹ್ಮಣ” ರನ್ನು ಎಲೆಯ ಮುಂದೆಯೇ ಕೂರಿಸಿ, ನಮ್ಮ ಚಿಕ್ಕಪ್ಪನವರ ಮನೆಗೆ ಓಡಿದರು. ಅಲ್ಲಿ ನೂರಾರು ಪುಸ್ತಕಗಳನ್ನು ತಿರಿವಿಹಾಕಿದುದಾಯಿತು. ಅನಂತರ ಆಚೆ ಬೀದಿ ಪುರೋಹಿತರ ಮನೆಗೆ ಓಡಿದರು. ಅಲ್ಲಿಂದ ೨೦೦ ಪುಸ್ತಕಗಳು ಬಂದವು. ಯಾವುದರಲ್ಲೂ ಶೂದ್ರನು "ಉಣ್ಣೆ ಉಣ್ಣಿ” ಎಂದರೆ ಏನು ಮಾಡಬೇಕೆಂಬ ವಿಷಯ ಬರೆದಿರಲಿಲ್ಲ. ಇಷ್ಟು ಹೊತ್ತಿಗೆ ಸಾಯಂಕಾಲ ೬ ಗಂಟೆ ಆಯಿತು. ನಾವು ೩-೪ ಸಲ ಕಾಫಿ ತಿಂಡಿ ಹೊಡೆದುಬಿಟ್ಟಿದ್ದುದರಿಂದ, ನಮಗೆ ಹಸಿವು ತೋರಲಿಲ್ಲ. ವಿನೋದ ಮಾತ್ರ ಉಂಟಾಯಿತು. ನಮ್ಮ ತಂದೆಯವರು-

“ಕಾಲು ಜೋಗು ಹಿಡಿದು ಹೋಯಿತು. ಇನ್ನು ಕೂತಿರೋದಕ್ಕೆ ಆಗೋದಿಲ್ಲ” ಎಂದರು.

ಇನ್ನೊಬ್ಬ ಬ್ರಾಹ್ಮಣರು (ಅವರಿಗೆ ವಯಸ್ಸು ೬೫ ಆಗಿದ್ದಿತು) "ಜಲಸ್ಪರ್ಶಕ್ಕೆ ಹೋಗಬೇಕಯ್ಯ; ಇನ್ನು ಕೂತಿರೋಕೆ ಆಗೋದಿಲ್ಲ" ಅಂದರು.

ನಮ್ಮ ಭಾವನವರು ಯಾವುದಕ್ಕೂ ಅವಕಾಶ ಕೊಡಲಿಲ್ಲ.

"ಇಂತಹ ಸಮಯದಲ್ಲಿ ನೀವು ಮಾತನಾಡುವುದೂ ಕೂಡ ತಪ್ಪು, ಅದಕ್ಕೂ ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕಾಗುತ್ತದೆ" ಎಂದರು.

ಕೊನೆಗೆ ಹುಡುಕಿ ಹುಡುಕಿ ಬೇಸರಿಕೆಯಾಗುವ ಸಮಯಕ್ಕೆ ಯಾವುದೋ ಪ್ರಯೋಗ ಪಾರಿಜಾತದಲ್ಲಿ ಈ ರೀತಿ ಒಂದು ವಾಕ್ಯವು ದೊರೆಯಿತು.

“ಶ್ರಾದ್ಧದ ದಿವಸ ಶೂದ್ರನು ನಮ್ಮೊಂದಿಗೆ ಮಾತನಾಡಿದರೆ ಪರವಾಯಿಲ್ಲ. ಆದರೆ ನಾವು ಅವನೊಂದಿಗೆ ಮಾತನಾಡಕೂಡದು."

ಆದರೆ ನಮ್ಮ ಭಾವನವರು ಅದಕ್ಕೂ ಕೂಡ ಒಪ್ಪಲಿಲ್ಲ. “ನಾನು ಅವನನ್ನು 'ವಿಧವಾಪತಿ ಪಿಶಾಚಿ' ಎಂದೆನೆಲ್ಲ? ಅದರಿಂದ ಅವನೊಂದಿಗೆ ಮಾತನಾಡಿದಂತೆ ಆಯಿತೆಲ್ಲ” ಎಂದು ಪ್ರಾರಂಭಿಸಿದರು. ಕೊನೆಗೆ ತಾವು ಅವನೊಂದಿಗೆ ಮಾತನಾಡಲಿಲ್ಲವೆಂದೂ, ತಮ್ಮ ಪಾಡಿಗೆ ತಾವು ಮಾತನಾಡಿ ಕೊಂಡೆವೆಂದೂ ತೀರ್ಮಾನಿಸಿಕೊಂಡರು. ಅಂತೂ ರಾತ್ರಿ ೮ ಗಂಟೆಗೆ "ಬ್ರಾಹ್ಮಣರು” ಎದ್ದರು. ೧೦ ಗಂಟೆಗೆ ನಮಗೆಲ್ಲ ಊಟವಾಯಿತು.

ಮಾರನೆ ವರುಷ ನಮ್ಮ ಭಾವನರು ಮತ್ತೆ “ಬ್ರಾಹ್ಮಣಾರ್ಥಕ್ಕೆ" ಆಹ್ವಾನಿಸಬೇಕೆಂದು ಆ ಮುದುಕರ ಮನೆಗೆ ಹೋದರು. ಇವರನ್ನು ಕಂಡ ಕೂಡಲೆ ಮುದುಕರು"ಪುಣ್ಯಾತ್ಮ ನಮಸ್ಕಾರತಕೊ. ಹೋದ ವರುಷ ಜಲಸ್ಪರ್ಶ ಕಟ್ಟಿಕೊಂಡದ್ದು ಸುಧಾರಿಸಿಕೊಳ್ಳಬೇಕಾದರೆ ನನಗೆ ಒಂದು ತಿಂಗಳು ಬೇಕಾಯಿತು. ಆ ಅನುಭವ ಮತ್ತಾರಿಗಾದರೂ ಈ ವರುಷ ಉಂಟಾಗಲಿ” ಎಂದು ಬಿಟ್ಟರು.

ನಮ್ಮ ಭಾವನರು ಮತ್ತೆ “ಎಲ್ಲಾ ಆ ವಿಧವಾಪತಿಯಿಂದ ಆದ ಅನಾಹುತ” ಎಂದುಕೊಂಡು ಮನೆಗೆ ಬಂದರು.

ಭಾವನವರನ್ನು ಕಂಡಾಗಲೆಲ್ಲಾ ಈ ವಿಷಯ ಜ್ಞಾಪಕ ಬಂದು ನಗು ಬರುತ್ತೆ, ನಗಬಾರದೆಂದು ಯೋಚಿಸಿಕೊಳ್ಳುತ್ತೇನೆ. ಆದರೆ ನಗೆಗೆ ನೀತಿಯೇ ಇಲ್ಲ.

೪. ಶೀನಪ್ಪ ನುಂಗಿದ ಇಡ್ಲಿ

ನಮ್ಮ ಸ್ನೇಹಿತ ಶೀನಪ್ಪನ ಮೇಲೆ ವೆಂಕ್ಟಾಚಾರಿಗೆ ಬಹಳ ದಿವಸಗಳಿಂದ ಕಣ್ಣಿತ್ತು. ಅದಕ್ಕೆ ಕಾರಣವಿಲ್ಲದೆ ಇರಲಿಲ್ಲ. ಹೋದ ವರುಷದ ಯುಗಾದಿ ಹಬ್ಬದ ದಿನ ವೆಂಕ್ಟಾಚಾರಿಯ ಮನೆಗೆ ಶೀನಪ್ಪ ಹೋಗಿದ್ದ. ವೆಂಕ್ಟಾಚಾರಿಯ ತಾಯಿಯು ಅವನಿಗೂ ಶೀನಪ್ಪನಿಗೂ ಒಂದೊಂದು ಇಡ್ಲಿ ತಂದು ಕೊಟ್ಟರು. ಶೀನಪ್ಪ ಇಡ್ಲಿ ಬೇಡ ಅಂದ. ಆದರೆ ಅದರ ಮೇಲೆ ಹಾಕಿದ್ದ ನಿಂಬೆಕಾಯಿ ಗಾತ್ರದ ಬೆಣ್ಣೆಯನ್ನು ನೋಡಿ, ಬೆಣ್ಣೆಯನ್ನು ತಿಂದು ಬಿಡೋಣವೆಂದು ಇಡ್ಲಿ ಕೈಗೆ ತೆಗೆದುಕೊಂಡ. ಬಾಯಿಗೆ ಒಂದು ಚೂರನ್ನು ಹಾಕಿಕೊಂಡಕೂಡಲೆ, ಇಡ್ಲಿಯು ಬಹಳ ರುಚಿಯಾಗಿದ್ದುದು ಗೊತ್ತಾದುದರಿಂದ, ಮತ್ತೆ ಮಾತನಾಡದೆ ಪೂರ್ತಾ ಇಡ್ಲಿಯನ್ನೂ ನುಂಗಿಯೇ ಬಿಟ್ಟ.

ವೆಂಕ್ಟಾಚಾರಿ ಮಾತ್ರ ಇಡ್ಲಿಯನ್ನು ಸುತ್ತಾ ಮುರಿದು ತಿನ್ನುತ್ತಾ, ಮಧ್ಯದ ಬೆಣ್ಣೆಯನ್ನು ಕೊನೆಯಲ್ಲಿ ತಿನ್ನೋಣವೆಂದು ಮುಟ್ಟಿದೆ ಹಾಗೆಯೇ ಕೈಯಲ್ಲಿ ಹಿಡಿದುಕೊಂಡಿದ್ದ. ಕೊನೆಯ ಚೂರಿನೊಂದಿಗೆ ಅಷ್ಟು ಬೆಣ್ಣೆಯನ್ನೂ ಬಾಯಿಗೆ ಹಾಕಿಕೊಂಡು ಬಿಡಬೇಕೆಂದು ಅವನಿಗೆ ಇಷ್ಟವಿದ್ದಿತು. ಅವನು ಯಾವ ತಿಂಡಿಯನ್ನಾದರೂ, ಬಾಲ್ಯದಿಂದಲೂ ಹೀಗೆಯೇ ತಿನ್ನುವ ಪದ್ದತಿ. ಶೀನಪ್ಪ ವೆಂಕ್ಟಾಚಾರಿಯ ಕೈಯನ್ನು ನೋಡಿದ. ಆರು ಕಾಸಿನ ಅಗಲ ಇಡ್ಲಿ, ಅದರ ಮೇಲೊಂದು ನಿಂಬೆಕಾಯಿ ಗಾತ್ರದ ಬೆಣ್ಣೆ, ಅದನ್ನು ಕಂಡು ಶೀನಪ್ಪನಿಗೆ ಬಾಯಿನೀರು ಕರೆಯಿತು. “ಅಯ್ಯೋ ಇನ್ನೊಂದು ಗಳಿಗೆಗೆ ಅದು ವೆಂಕ್ಟಾಚಾರಿಯ ಬಾಯಿಗೆ ಮಾಯವಾಗಿ ಬಿಡುವುದಲ್ಲಾ” ಎಂದು ಅವನಿಗೆ ಕಳವಳ ಹತ್ತಿತು. ಅಷ್ಟರಲ್ಲಿ ಒಂದು ಆಲೋಚನೆ ತೋರಿತು. ಶೀನಪ್ಪ ಬೆಕ್ಕಿನಂತೆ, ಒಂದೇ ಏಟಿಗೆ, ವೆಂಕ್ಕಾಚಾರಿಯ ಕೈಲಿದ್ದ ಬೆಣ್ಣೆಯನ್ನೂ ಇಡ್ಲಿಯನ್ನೂ ಕಿತ್ತುಕೊಂಡು ಬಾಯಿಗೆ ಹಾಕಿಕೊಂಡು ಬಿಟ್ಟ, ವೆಂಕ್ಟಾಚಾರಿ ಏನಾಯಿತೆಂದು ತಿಳಿಯುವಷ್ಟರಲ್ಲಿಯೇ ಅವನ ಕೈಯಲ್ಲಿದ್ದ ಇಡ್ಲಿಯ ಬೆಣ್ಣೆಯೂ ಮಾಯವಾಗಿದ್ದಿತು.

ವೆಂಕ್ಟಾಚಾರಿಗೆ ಬಹಳ ಸಿಟ್ಟು ಹತ್ತಿತು. ಆಮೇಲೆ ಅವನು ೮-೧೦ ದಿವಸ ಶೀನಪ್ಪನ ಮನೆಗೆ, ಅವನು ಕಾಫಿ ಕುಡಿಯುವ ವೇಳೆಯಲ್ಲಿ ಹೋದ. ಸಾಧ್ಯವಾದರೆ ಶೀನಪ್ಪನು ತಿನ್ನುವುದಕ್ಕೆ ಕುಳಿತಿದ್ದಾಗ, ಅವನ ಕೈಯಿನ ತಿಂಡಿಯನ್ನೋ ಕಾಫಿಯನ್ನೊ ಹಾರಿಸಿಬಿಟ್ಟು, ಮುಯ್ಯಿಗೆ ಮುಯ್ಯಿ ತೀರಿಸಿಕೊಳ್ಳಬೇಕೆಂದು ಅವನಿಗೆ ಆಸೆ, ಶೀನಪ್ಪನಿಗೆ ವೆಂಕ್ಟಾಚಾರಿಯ ಈ ಸುಳಿವು ಗೊತ್ತಾಯಿತು. ಅವನು ಬಹಳ ಎಚ್ಚರಿಕೆಯಿಂದಿದ್ದ. ವೆಂಕ್ಟಾಚಾರಿ ನಿರಾಶನಾಗಿ ಸುಮ್ಮನಿರಬೇಕಾಯಿತು. ಆದರೆ ಶೀನಪ್ಪ ಮಹಾ ವರಟ. ಅವನಿಗೆ ಉಪಾಯದಿಂದ ಪ್ರತೀಕಾರಮಾಡಬೇಕೇ ಹೊರತು, ಶಕ್ತಿಯಿಂದ ಸಾಧ್ಯವಿಲ್ಲವೆಂದು ವೆಂಕ್ಟಾಚಾರಿಗೂ, ನಮ್ಮ ಊರಿನ ಉಳಿದವರಿಗೂ ಚೆನ್ನಾಗಿ ಗೊತ್ತು.

ಹೋದ ವರುಷ ಶೀನಪ್ಪನ ತಾಯಿ ಸ್ವರ್ಗಸ್ಥರಾದರು. ಅವರ ಮನೆಯಲ್ಲಿ ಯಾವ ಹಬ್ಬಗಳೂ ಇಲ್ಲ. ಹಬ್ಬದ ದಿವಸಗಳಲ್ಲಿ ಊರಿನವರೆಲ್ಲಾ ಅವರ ಮನೆಗೆ ತಮ್ಮ ತಮ್ಮ ಮನೆಗಳಲ್ಲಿ ಮಾಡಿದ್ದ ಭಕ್ಷ್ಯಭೋಜ್ಯಗಳನ್ನು ತೆಗೆದುಕೊಂಡು ಹೋಗಿ ಕೊಡುವುದು ಪದ್ಧತಿ. ಶ್ರೀಕೃಷ್ಣ ಜಯಂತಿ ಉತ್ಸವ ಬಂತು. ಅಯ್ಯಂಗಾರ ಗೋಕುಲಾಷ್ಟಮಿ ಅಂದ್ರೆ ನಿಮಗೆ ಗೊತ್ತೇ ಇದೆ. ಶೀನಪ್ಪನ ಮನೆಗೆ, ತಮ್ಮ ಮನೆಯಲ್ಲಿ ಮಾಡಿದ್ದರೆ ಎಷ್ಟು ತಿಂಡಿ ಇರುತ್ತಿತ್ತೋ, ಅದಕ್ಕಿಂದ ಹೆಚ್ಚು ತಿಂಡಿ ಬಂದುಬಿಟ್ಟಿತು. ವೆಂಕ್ಟಾಚಾರಿ ಶೀನಪ್ಪನ ಪ್ರಾಣಸ್ನೇಹಿತ. ಬಲವಾದ ಒಂದು ಕುಕ್ಕೆ ತಿಂಡಿ ತೆಗೆದುಕೊಂಡು ಹೋಗಿ, ಶೀನಪ್ಪನ ಮನೆಗೆ ಕೊಟ್ಟ. ಅದೇ ಸಂಧ್ಯಾಕಾಲ, ಶೀನಪ್ಪನ ಮನೆಯ ಜಗುಲಿಯ ಮೇಲೆ, ವೆಂಕ್ಟಾಚಾರಿ ಶೀನಪ್ಪನೊಂದಿಗೆ ಏನೋ ಮಾತನಾಡುತ್ತಾ ಕುಳಿತಿದ್ದ. ಗೋಕುಲಾಷ್ಟಮಿಯ ದಿವಸ ನಮ್ಮಗಳ ಮನೆಗೆ ನಮ್ಮ ರೈತರೆಲ್ಲಾ ದೇವರ ಪ್ರಸಾದಕ್ಕಾಗಿ ಸಾಯಂಕಾಲ ಬರುವ ಪದ್ದತಿ. ಅವರು ಒಂದು ಮನೆಯನ್ನೂ ಬಿಡದೆ ಪ್ರಸಾದವನ್ನು ವಸೂಲಿಮಾಡಿಕೊಂಡೇ ಹೋಗುತ್ತಾರೆ. ತಾವಾಗಿಯೇ ಬರದ ಗೌಡರುಗಳನ್ನು, ನಾವೇ ಗೌರವದಿಂದ ಮನೆಗೆ ಕರೆಸಿ ಅವರಿಗೆ ದೇವರ ಪ್ರಸಾದವನ್ನು ಕೊಟ್ಟು ಕಳುಹಿಸುತ್ತೇವೆ. ಪ್ರಸಾದವೆಂಬುದು: ಅರಳು, ಚಕ್ಕುಲಿ, ಕೋಡಬಳೆ. ಗೋಕುಲಾಷ್ಟಮಿಯ ಸಂಧ್ಯಾಕಾಲ,-ನಮ್ಮೂರ ಪೇಟೆಯ ರೈತರೆಲ್ಲಾ ಈ ಪ್ರಸಾದಕ್ಕಾಗಿ ಊರ ಬೀದಿಗಳಲ್ಲಿ 'ಗಸ್ತು' ಹೊಡೆಯುತ್ತಿರುತ್ತಾರೆ. ಅವರ ಗುಂಪೊಂದು ಪದ್ದತಿಯ೦ತೆ ಶೀನಪ್ಪನ ಮನೆಯ ಮುಂದಕ್ಕೂ ಬಂದಿತು. ಶೀನಪ್ಪನು

“ಈ ವರುಷ ನನಗೆ ಹಬ್ಬವಿಲ್ಲ. ತಿಳಿಯದೆ ” ಎಂದ.

ಅವರು “ಹೌದು ಹೌದು” ಎಂದುಕೊಂಡು ಹೊರಟು ಹೋದರು.

ಒಮ್ಮಿಂದೊಮ್ಮೆ ವೆಂಕ್ಟಾಚಾರಿಗೆ ಶೀನಪ್ಪ ಹಾರಿಸಿದ್ದ ಇಡ್ಲಿ, ಬೆಣ್ಣೆಯ ಜ್ಞಾಪಕ ಬಂದಿತು. ಈಚೆಗೆ ಶೀನಪ್ಪನನ್ನು ಕಂಡಾಗಲೆಲ್ಲಾ ಅವನಿಗೆ ಅದರ ಜ್ಞಾಪಕ ಬರುತ್ತಿದ್ದಿತೆಂದು ಹೇಳಬಹುದು. ಅವನು ಏನನ್ನೋ ಯೋಚಿಸಿಕೊಂಡು "ಈಗಲೇ ಬಂದೆ" ಎಂದು ಹೇಳುತ್ತಾ ತನ್ನ ಮನೆಗೆ ಹೊರಟುಹೋದನು.

ವೆಂಕ್ಟಾಚಾರಿ ಮನೆಗೆ ಹೋಗಿ ಬರುವುದಕ್ಕೆ ೧೦ ನಿಮಿಷ ಹಿಡಿದಿರಬಹುದು. ಅವನು ಹಿಂದಿರುಗುವ ವೇಳೆಗೆ ಶೀನಪ್ಪ ಬಾಗಿಲಿನಿಂದ ಎದ್ದು ಹೋಗಿ ಒಳಗೆ ಕುಳಿತಿದ್ದ. ವೆಂಕ್ಟಾಚಾರಿಯು ಕೈಯಲ್ಲಿ ತಂದಿದ್ದ ಅರಳನ್ನು ಬಾಗಿಲಿನಲ್ಲಿಯೂ, ಜಗಲಿಯ ಮೇಲೆಯೂ ಚೆಲ್ಲಿ ಬಿಟ್ಟು, ಮೊದಲು ತಾನು ಕುಳಿತಿದ್ದ ಸ್ಥಳದಲ್ಲಿಯೇ ಕುಳಿತುಕೊಂಡ. ಸ್ನೇಹಿತನು ಬಂದದ್ದನ್ನು ನೋಡಿ, ಶೀನಪ್ಪನು ಬಾಗಿಲಿಗೆ ಬಂದ. ಆದರೆ ಚೆಲ್ಲಿದ್ದ ಅರಳನ್ನು ಮಾತ್ರ ನೋಡಲಿಲ್ಲ. ಆ ವೇಳೆಗೆ ಪೇಟೆಯ ರೈತರ ಮತ್ತೊಂದು ಗುಂಪು, ಶೀನಪ್ಪನ ಬಾಗಿಲಿಗೆ ಪ್ರಸಾದಕ್ಕಾಗಿ ಬಂದಿತು. ಆ ಗುಂಪಿನಲ್ಲಿ ಮಾದ ಇದ್ದ. ಮಾದನಿಗೆ ಕೋಪ ಹೆಚ್ಚು. ಅವನು ಮೆಲ್ಲಗೆ ಮಾತನಾಡಿದರೂ ಒಂದು ಮೈಲಿ ಕೇಳುತ್ತದೆ. ಅವನ ಧ್ವನಿಗೆ ಹೆದರಿಯೇ ಅನೇಕರು ಅವನಿಗೆ ಕುಕ್ಕೆಯ ತುಂಬ ಚಕ್ಲಿ ಅರಳನ್ನು ಸುರಿದು ಬಿಡುತ್ತಿದ್ದರು. ಶೀನಪ್ಪನಿಗೂ ಕೂಡ ಮಾದನನ್ನು ಕಂಡರೆ ಸ್ವಲ್ಪ ಭಯವೇ ಇದ್ದಿತು. “ಅವನನ್ನು ಸಮಾಧಾನಪಡಿಸುವುದು ಹೇಗೆ" ಎಂದು ಅವನು ಯೋಚಿಸುತ್ತಿದ್ದನು. "ವೆಂಕ್ಟಾಚಾರಿ ಇದಾನಲ್ಲ. ನನ್ನ ಪರ ಹಿಡಿದು ಮಾತನಾಡುತ್ತಾನೆ, ಪರವಾಯಿಲ್ಲ" ಎಂದುಕೊಂಡನು. ಮಾದನು ಬಾಗಿಲಿಗೆ ಬಂದವನೆ ದಪ್ಪ ಧ್ವನಿಯಲ್ಲಿ

“ಶೀನಪ್ಪನವೆ, ಎಲ್ಲಿ ಅರಳು ಚಕ್ಲಿ ಪ್ರಸಾದ ಎಲ್ಲಾ? ಅಪ್ಪಣೆಮಾಡಿ” ಎಂದನು.

ಶೀನಪ್ಪನು "ಮಾದಯ್ಯ, ಈಸಲ ನಮಗೆ ಹಬ್ಬವಿಲ್ಲ, ನಮ್ಮ ಅಮ್ಮ ಸ್ವರ್ಗಸ್ಥರಾದದ್ದು ತಿಳಿಯದೆ?” ಎಂದು ಹೇಳಿ ವೆಂಕ್ಟಾಚಾರಿಯ ಕಡೆ ನೋಡಿದನು.

ಮಾದನು ಜತೆಯವರೊಂದಿಗೆ ಹೊರಡುವುದರಲ್ಲಿದ್ದುದನ್ನು ಕಂಡು ವೆಂಕ್ಟಾಚಾರಿಯು ಶೀನಪ್ಪನ ಮುಖವನ್ನು ನೋಡಿ

“ಯಾಕ್ರಿ ಸುಳ್ಳು ಹೇಳೀರಿ?” ಎಂದನು.

ಮಾದನು ತಕ್ಷಣ ಶೀನಪ್ಪನ ಕಡೆಗೆ ಮುಖವನ್ನು ತಿರುಗಿಸಿದನು. ಶೀನಪ್ಪನು ಆಶ್ಚರ್‍ಯದಿಂದ ವೆಂಕ್ಟಾಚಾರಿಯನ್ನು ನೋಡುತ್ತಿದ್ದನು. ವೆಂಕ್ಟಾಚಾರಿಯು ಮಾದನ ಕಡೆ ತಿರುಗಿ

"ಮಾದಯ್ಯ ನಿನಗೆ ಮಾತ್ರ ಇಲ್ಲ. ಇದುವರೆಗೆ ಬಂದವರಿಗೆಲ್ಲಾ ಇವರು ಪ್ರಸಾದವನ್ನು ಕೊಟ್ಟರು. ಇಲ್ಲಿ ಚೆಲ್ಲಿರುವ ಅರಳು ಮತ್ತು ಪುರಿಯನ್ನು ನೋಡು” ಎಂದನು. ಮಾದನು ನೋಡಿದನು. ಮಾದನು ಕೋಪದಿಂದ ಹುಚ್ಚಾದನು. ಶೀನಪ್ಪನು ಆಶ್ಚರ್‍ಯದಿಂದ ಮೂಕನಾದನು. ಮಾದನು ದೊಡ್ಡ ಧ್ವನಿಯಿಂದ

"ಶೀನಪ್ಪ, ವರ್ಷಕ್ಕೊಂದು ಹಬ್ಬ. ತಾತ ಮುತ್ತಾತಂದಿರ ಕಾಲದಿಂದ ಬಂದಿದ್ದ ಪರ್ದಿಷ್ಟ (ಪದ್ದತಿ); ಸಾಲದ್ದ್ಕೆ ಸುಳ್ಬೇರೆ ಹೇಳ್ತೀರಿ, ನಾವೇನು ನಿತ್ಯ ಬಂದೇವಾ?” ಎಂದು ಘರ್ಜಿಸಿದನು. ಮಾದನ ಕೂಗನ್ನು ಕೇಳಿ, ಬೀದಿಯ ಜನವೆಲ್ಲಾ ಶೀನಪ್ಪನ ಬಾಗಿಲಿನಲ್ಲಿ ನೆರೆದು ಬಿಟ್ಟಿತು. ವೆಂಕ್ಟಾಚಾರಿ ಮಾತ್ರ ನಗುತ್ತಾ ಕುಳಿತಿದ್ದನು. ನಾನು ಶೀನಪ್ಪನನ್ನು ಕುರಿತು, "ಏನಯ್ಯ ಇದು ಅವಾಂತರ" ಎಂದೆ. ಅವನು ವೆಂಕ್ಟಾಚಾರಿಯ ಕಡೆ ನೋಡುತ್ತಾ "ಇವನ ಮನೆ ಹಾಳಾಯ್ತು, ಎಲ್ಲಾ ಈ ಪಿಶಾಚಿಯ ಚೇಷ್ಟೆ” ಎಂದನು. ವೆಂಕ್ಟಾಚಾರಿಯ ಕಡೆ ನೋಡಿದೆ. ಭೀಮನು ದುರ್ಯೋಧನನ್ನು

“ಹರಿಸಂಧಾನಕ್ಕೆ ವಂದಂದವಘಡಿಸಿದಹಂಕಾರ ಮೆಲ್ಲಿತ್ತೊ" ಎಂದು ಮೂದಲಿಸಿದಂತೆ "ಆ ದಿವಸ ಇಡ್ಲಿ ಬೆಣ್ಣೆ ನುಂಗಿದ ಜಂಭ ಎಲ್ಲಿ ಹೋಯ್ತ? ಈಗ ಕಕ್ಕು” ಎಂದನು.

ಎಲ್ಲರೂ ಘೊಳ್ಳೆಂದು ನಕ್ಕೆವು. ಶೀನಪ್ಪನೂ ನಕ್ಕನು. ಮಾದನಿಗೆ ವಿಷಯವನ್ನೆಲ್ಲಾ ತಿಳಿಸಿ, ವೆಂಕ್ಟಾಚಾರಿಯು ತನ್ನ ಮನೆಗೆ ಕರೆದುಕೊಂಡು ಹೋಗಿ, ಅವನಿಗೆ ತಿಂಡಿಯನ್ನೂ ಪ್ರಸಾದವನ್ನೂ ಕೊಟ್ಟು ಕಳುಹಿಸಿದನು. ಶೀನಪ್ಪ ಮಾತ್ರ "-ಮಗ ವೆಂಕ್ಟಾಚಾರಿ ಇಷ್ಟು ಉಪಾಯಗಾರನೆಂದು ನಾನು ತಿಳಿದಿರಲಿಲ್ಲಾ" ಎಂದನು.

೫. ಮುಯ್ಯಿಗೆ ಮುಯ್ಯಿ

ಕಿಟ್ಟುವಿನ ಹೊಟ್ಟೆಯ ಆಳ ಅವನ ತಾಯಿಗೆ ಮಾತ್ರ ಗೊತ್ತಿದ್ದಿತೇನೋ? ಅವನಿಗೆ ತಿಂಡಿಕೊಟ್ಟು ತೃಪ್ತಿಪಡಿಸಿದವರನ್ನು ನಾನು ಇದುವರೆಗೆ ಎಲ್ಲೂ ನೋಡಲಿಲ್ಲ. ಅವರ ಅಜ್ಜಿ ಒಬ್ಬರು ಮಾತ್ರ ಕಿಟ್ಟುವಿಗೆ ಬೇಕಾದಷ್ಟು ದೋಸೆಯನ್ನು ಕೊಟ್ಟು, ಅವನ ಬಾಯಿಂದ "ಹೊಟ್ಟೆ ತುಂಬಿತು" ಅನ್ನಿಸಿದ್ದರಂತೆ. ಅವರ ಅಜ್ಜಿಯು ಸತ್ತು ಹೋಗುವಾಗ ಕಿಟ್ಟುವಿನ ತಾಯಿಯೊಂದಿಗೆ "ಯಾವುದು ಎಲ್ಲಾದರೂ ಹೋಗಲಿ. ಕಿಟ್ಟುವಿಗೆ ಮಾತ್ರ ೬ ದೋಸೆ ನಿತ್ಯ ಕೊಡುವುದನ್ನು ಮರೆಯಬೇಡ” ಎಂಬುದಾಗಿ ಹೇಳಿದ್ದರಂತೆ. ಆರು ದೋಸೆ ಎಂದರೆ, ಈಗ ಹೋಟಲಿನಲ್ಲಿ ಎರಡುಕಾಸಿಗೆ ಒಂದರಂತೆ ಕೊಡುತ್ತಾರಲ್ಲ, ಅರಳಿ ಎಲೆಯಷ್ಟು ಅಗಲವಾಗಿ ತೆಳ್ಳಗಿರುವುದು; ಈ ತರದ ದೋಸೆಯಲ್ಲ. ಹೋಟಲಿನ ದೋಸೆ ಒಂದು 'ಗ್ರೋಸ್' ಕೊಟ್ಟಿದ್ದರೂ, ಕಿಟ್ಟುವಿಗೆ ಹೊಟ್ಟೆ ತುಂಬುತ್ತಿರಲಿಲ್ಲ. ಅವರ ಮನೆಯಲ್ಲಿ ಮಾಡುತ್ತಿದ್ದ ದೋಸೆ ಒಂದು ಅಂಗೈ ಮಂದವಾಗಿ, ೬ ದೋಸೆಗೆ ಅರ್ಧ ಸೇರು ಹಿಟ್ಟು ಬೇಕಾಗುತ್ತಿದ್ದಿತು. ಅವರ ತಾಯಿಯವರು, ಕಿಟ್ಟುವು ತಿನ್ನುತ್ತಿರುವಾಗ, ಇತರರನ್ನು, ಅವನಿಗೆ ದೃಷ್ಟಿಯಾಗಬಹುದೆಂದು ಒಳಗೆ ಬರಗೊಡುತ್ತಿರಲಿಲ್ಲ. ನಮ್ಮ ಸ್ನೇಹಿತರಂತೂ 'ಪ್ರಾಣಾಹುತಿಗೇ ಕಿಟ್ಟುವಿಗೆ ಅರ್ಧ ನಾವು ಅಕ್ಕಿ ಅನ್ನ-ಬೇಕು' ಎಂದು ಹಾಸ್ಯ ಮಾಡುತ್ತಿದ್ದರು.

ಕಿಟ್ಟುವು ನಮ್ಮೂರ ಸ್ಕೂಲಿನಲ್ಲೇ 'ಲೋವರ್ ಸೆಕಂಡರಿ ಪರೀಕ್ಷೆ ಪ್ಯಾಸ್' ಮಾಡಿಬಿಟ್ಟ. ಆಮೇಲೆ ಅವನನ್ನು ಹಾಸನಕ್ಕೆ ಇಂಗ್ಲಿಷ್ ಓದುವುದಕ್ಕೆ ಕಳುಹಿಸಬೇಕಾಯಿತು. ಅವರ ತಾಯಿಯವರಿಗೆ, “ಇವನಿಗೆ ಹೋಟಲಿನಲ್ಲಿ ಹೊಟ್ಟೆ ತುಂಬ ಅನ್ನ ಹಾಕ್ತಾರೋ ಇಲ್ಲವೋ” ಎಂಬ ಯೋಚನೆ. ಅವರ ತಂದೆಯವರಿಗೆ "ಅನ್ಯಾಯವಾಗಿ ಹೋಟಲಿನಲ್ಲಿ ತಿಂದು ಜಾತಿ ಕೆಟ್ಟು ಹೋಗ್ತಾನಲ್ಲ” ಎಂಬ ಚಿಂತೆ. ಅವರು ಬಹಳ ವೈದಿಕರಾದುದರಿಂದ ಹೋಟೆಲಿನ ಹೆಸರು ಕೇಳಿದರೆ ಅವರಿಗೆ ಮೈಯೆಲ್ಲಾ ಉರಿಯುತ್ತಿದ್ದಿತು. ಆದರೆ ನಮ್ಮೂರ ರಾಮಣ್ಣನವರ ಮಗ ನರಹರಿಯು “ಏನೂ ಪರವಾಗಿಲ್ಲ, ಹೋಟಲಿನಲ್ಲಿ ಬಹಳ ಮಡಿಯಾಗಿದ್ದಾರೆ. ನಾನು ಊಟ ಮಾಡುತ್ತಿರುವ ಹೋಟಲಿನಲ್ಲಿ ಬ್ರಾಹ್ಮಣರನ್ನು ಹೊರತು ಇತರರನ್ನು ಸೇರಿಸುವುದೇ ಇಲ್ಲ" ಎಂದು ಹೇಳಿದ. ನರಹರಿಗೆ ಹಾಸನದ ಒಂದು ವರ್ಷದ ಅನುಭವವಾಗಿತ್ತು. ಕಿಟ್ಟುವಿನ ತಂದೆ ಅವನ ಮಾತನ್ನು ನಂಬಿ, ಕಿಟ್ಟುವು ಹಾಸನಕ್ಕೆ ಹೋಗಿ ಹೋಟೆಲಿನಲ್ಲಿ ಊಟಮಾಡಿಕೊಂಡು, ಇಂಗ್ಲಿಷ್ ವಿದ್ಯಾಭ್ಯಾಸವನ್ನು ಮುಂದರಿಸಬಹುದೆಂದು ಒಪ್ಪಿದರು. ಹುಡುಗರು ಮಾತ್ರ "ನಿನಗೆ ಊಟಹಾಕಿ ಹೋಟಲಿನವನು ಮಟ್ಟವಾಗಿ ಬಿಡುತ್ತಾನೆ" ಎಂದು ಹಾಸ್ಯ ಮಾಡಿದರು.

ನರಹರಿಯ ಕಿಟ್ಟುವೂ ಒಂದು ಮನೆಯ ಮಹಡಿಯ ಕೊಠಡಿಯನ್ನು ಬಾಡಿಗೆಗೆ ತೆಗೆದುಕೊಂಡು, ಹೋಟಲಿನಲ್ಲಿ ಊಟಮಾಡುತ್ತಿದ್ದರು. ಕೊಠಡಿಯಿಂದ ಹೋಟಲು ಸುಮಾರು ಎರಡು ಫರ್ಲಾಂಗು ದೂರವಿತ್ತು. ಒಂದು ಭಾನುವಾರ ಅವರಿಬ್ಬರೂ ನಮ್ಮೂರಿಗೆ ಬಂದರು. ಕಿಟ್ಟುವಿನ ತಾಯಿಯೂ, ನರಹರಿಯ ತಾಯಿಯೂ ಅವರಿಬ್ಬರಿಗೂ ಹಾಸನಕ್ಕೆ ತೆಗೆದುಕೊಂಡು ಹೋಗಲು, ತಿಂಡಿಗಳನ್ನು ಮಾಡಿಕೊಟ್ಟರು. ಹೊರಡುವಾಗ ಕಿಟ್ಟುವಿನ ತಾಯಿಯು "೩-೪ ದಿವಸ ಇಟ್ಟುಕೊಂಡು ತಿನ್ನು, ಯಾರಿಗೂ ಕೊಡಬೇಡ" ಎಂಬುದಾಗಿ ಹೇಳಿದರು. ಯಾರಿಗಾದರೂ ಕೊಡುವುದಿರಲಿ, ತಾನು ಇತರರನ್ನು ಕೇಳದಿದ್ದರೆ ಕಿಟ್ಟುವಿಗೆ ಸಾಕಾಗಿತ್ತು. ಹಾಸನಕ್ಕೆ ಬರುವಾಗ ದಾರಿಯಲ್ಲಿಯೇ ಮುಕ್ಕಾಲುಪಾಲು ತಿಂಡಿಯನ್ನು ಕಿಟ್ಟುವು ನರಹರಿಗೂ ಕೊಟ್ಟು ತಾನೂ ಮುಗಿಸಿದನು. ಹಾಸನಕ್ಕೆ ೧೧ ಗಂಟೆಗೆ ಹೋಗಿ, ಸ್ಕೂಲಿನಿಂದ ಒಂದೂವರೆ ಗಂಟೆಯ ವಿರಾಮದಲ್ಲಿ ಕೊಠಡಿಗೆ ಹಿಂದಿರುಗಿ, ಉಳಿದ ತಿಂಡಿಯನ್ನು ಬಲಿಹಾಕಿಬಿಟ್ಟನು. ಗಂಟಿನಲ್ಲಿ ತಿಂಡಿ ಇರುವವರೆಗೆ ಅವನಿಗೆ ಸಮಾಧಾನವಿರಲಿಲ್ಲ. ಅನಂತರ ನಿರ್‍ಯೋಚನೆಯಾಯಿತು.

ಒಂದು ಗಂಟೆಯ ವಿರಾಮದಲ್ಲಿ ನರಹರಿ ಬಂದು ನೋಡಿದ. ಕಿಟ್ಟು ಕೊಠಡಿಯಲ್ಲಿಯೇ ಕುಳಿತಿದ್ದ. ನರಹರಿಯು ಬಂದುದನ್ನು ಕಂಡು ಕಿಟ್ಟುವು

"ಬಹಳ ಹಸಿವಾಗುತ್ತೆ ಕಣೋ, ಮಧ್ಯಾಹ್ನ ಹಾಳಾದ್ದು ಅಡಿಗೆ ಚೆನ್ನಾಗಿರಲಿಲ್ಲ, ಹೊಟ್ಟೆ ತುಂಬ ಊಟಮಾಡಲಿಲ್ಲ” ಎಂದ.

ನರಹರಿಗೆ ಗಾಬರಿಯಾಯಿತು. "ಇದೇನು ಇವನು ನನ್ನ ತಿಂಡಿಗೆ ಏಟುಹಾಕ್ತಾನೆ” ಎಂದುಕೊಂಡು, “ಊರಿಂದ ತಂದ ತಿಂಡಿ ಏನಾಯ್ತು" ಎಂದ.

ಕಿಟ್ಟುವು ಜಿಗುಪ್ಪೆಯಿಂದ "ಏನ್ಮಹಾತಿಂಡಿ. ಎಲ್ಲೋ ಒಂದ್ಚೂರು ತಂದಿದ್ದೆ, ದಾರೀಲೇ ತಿಂದ್ಹಾಕಿಬಿಟ್ಟೆ” ಎನ್ನುತ್ತಾ, ತಿಂಡಿ ಕಟ್ಟಿದ್ದ ಬರಿದಾದ ಚೌಕವನ್ನು ಅವನ ಕಡೆಗೆ ಎಸೆದನು. ನರಹರಿಯು ಮಾತನಾಡಲಿಲ್ಲ. ಅವನು ಮಹಾ ಜಿಪುಣ, ತಿಂಡಿಯ ಗಂಟನ್ನೇ ಬಿಚ್ಚಲಿಲ್ಲ. ಬಿಚ್ಚಿದರೆ ಎಲ್ಲಿ ಕಿಟ್ಟುವಿಗೆ ಕೊಡಬೇಕಾಗುವುದೋ? ಎಂಬ ಭಯ. ಕಿಟ್ಟುವೂ ಕೂತ ಜಾಗಾಬಿಟ್ಟು ಏಳಲೇ ಇಲ್ಲ. ನರಹರಿಯು ೨-೩ ಸಲ ಅವನ ಕಡೆಗೆ ಕೋಪದಿಂದ ನೋಡಿದ. ಕಿಟ್ಟುವು ಅದೊಂದನ್ನೂ ಲಕ್ಷ್ಯಮಾಡಲಿಲ್ಲ. ೨ ಗಂಟೆ ಆಗಿಹೋಯಿತು. ಇಬ್ಬರೂ ಸ್ಕೂಲಿಗೆ ಹೊರಟುಹೋದರು.

೫ ಗಂಟೆಗೆ ಸ್ಕೂಲನ್ನು ಬಿಟ್ಟ ಕೂಡಲೆ ನರಹರಿಯು ಬೇಗ ಬೇಗ ಕೊಠಡಿಗೆ ಬಂದನು. ಅವನ ಜ್ಞಾನವೆಲ್ಲಾ ತಿಂಡಿಯ ಮೇಲೆಯೇ ಇದ್ದಿತು. ಅವನು ಬರುವ ವೇಳೆಗೆ ಕಿಟ್ಟುವು ಆಗಲೇ ಬಂದು ಕೊಠಡಿಯಲ್ಲಿ ಕುಳಿತುಬಿಟ್ಟಿದ್ದನು. ನರಹರಿಯು ಕಿಟ್ಟುವನ್ನು ಕುರಿತು “ಎಲ್ಲೂ ಗಾಳಿಸಂಚಾರ ಹೋಗುವುದಿಲ್ಲವೇ ಕಿಟ್ಟು” ಎಂದನು. ಕಿಟ್ಟುವು "ಬಹಳ ಹಸಿವಾಗಿದೆ. ನಡೆಯೋದಕ್ಕೆ ತ್ರಾಣವಿಲ್ಲ. ತಿನ್ನೊದಕ್ಕೇನಾದರೂ ತಿಂಡಿ ಸಿಕ್ಕಿದರೆ ಹೋಗಬಹುದು" ಎಂದನು. ನರಹರಿಯು ಮಾತನಾಡದೆ ಸುಮ್ಮನಾದನು.

ಅನಂತರ ಇಬ್ಬರೂ ಹೋಟಲಿಗೆ ಹೋಗಿ ಊಟಮಾಡಿಕೊಂಡು ಬಂದರು. ನರಹರಿಯು ಆ ದಿವಸವೆಲ್ಲಾ ತಿಂಡಿಯನ್ನೇ ತಿಂದಿರಲಿಲ್ಲ. ರಾತ್ರಿ ಪಾಠವನ್ನೂ ಓದಲಿಲ್ಲ. ೯ ಗಂಟೆಗೆ ಮಲಗಿಕೊಂಡುಬಿಟ್ಟ. ಅವನು ಮಲಗಿದ ಕಾಲು ಗಂಟೆಯಮೇಲೆ ದೀಪವನ್ನು ಆರಿಸಿ, ಕಿಟ್ಟುವೂ ಮಲಗಿಕೊಂಡ. ಕಿಟ್ಟುವು ನರಹರಿಗೆ ನಿದ್ರೆ ಬಂದಿರಬಹುದೆಂದು ತಿಳಿದು ತಾನೂ ನಿದ್ರಿಸಲು ಪ್ರಯತ್ನ ಪಡುತ್ತಿದ್ದ. ಇವನು ಎಚ್ಚರವಾಗಿರುವುದು ನರಹರಿಗೆ ಗೊತ್ತಾಗಲಿಲ್ಲ. ಅವನು ಮೆಲ್ಲಗೆ ಹಾಸಿಗೆಯಿಂದ ಎದ್ದ. ಎದ್ದವನೇ ಸದ್ದಾಗದಂತೆ ಒಂದು ಗಂಟನ್ನು ಬಿಚ್ಚಿದ. ಗಂಟಿನಿಂದ ತಿಂಡಿ ತೆಗೆದು ಕತ್ತಲೆಯಲ್ಲಿಯೇ ತಿನ್ನುವುದಕ್ಕೆ ಪ್ರಾರಂಭಿಸಿದ. ನರಹರಿಯು ತಿಂಡಿ ಅಗಿಯುವ ಸದ್ದು ಕಿಟ್ಟುವಿಗೆ ಕೇಳಿಸಿತು. ಅವನು ಮನಸ್ಸಿನಲ್ಲಿಯೇ ನಕ್ಕು, "ಇರಲಿ ನಿನಗೆ ಮಾಡ್ತೀನಿ ಅಂದುಕೊಂಡು” ಸುಮ್ಮನಾದ.

ಮಾರನೆ ದಿವಸವೂ ಕಿಟ್ಟುವು ನರಹರಿಯ ಜೊತೆಯನ್ನು ಬಿಟ್ಟು ಅಲ್ಲಾಡಲಿಲ್ಲ. ಆವತ್ತೂ ನರಹರಿಗೆ ಹಗಲೆಲ್ಲಾ ತಿಂಡಿಯನ್ನು ತಿನ್ನಲು, ಅವಕಾಶವೇ ದೊರೆಯಲಿಲ್ಲ. ಮೊದಲ ದಿವಸದಂತೆಯೇ, ರಾತ್ರಿ ಕಿಟ್ಟುವು ಮಲಗಿದ ಮೇಲೆ ಅವನಿಗೆ ನಿದ್ರೆ ಬಂದಿರಬಹುದೆಂದು ನಂಬಿಕೆಯಾದಾಗ ತಿಂಡಿಯ ಗಂಟನ್ನು ಬಿಚ್ಚಿದ. ಕಿಟ್ಟು ಎಚ್ಚರವಾಗಿದ್ದರೂ ಮಾತನಾಡದೆ ಸುಮ್ಮನೆ ಮಲಗಿದ್ದ. ಅರ್ಧರಾತ್ರಿಗೆ ಕಿಟ್ಟುವಿಗೆ ಮತ್ತೆ ಎಚ್ಚರವಾಯಿತು. ಎದ್ದು ಸದ್ದು ಮಾಡದೆ ದೀಪವನ್ನು ಹಚ್ಚಿದ. ನರಹರಿಯ ಗಂಟನ್ನು ಬಿಚ್ಚಿ ನೋಡಿದ. 'ಸಜ್ಜಪ್ಪ' ಮತ್ತು ಅರಳುಹಿಟ್ಟು ಇತ್ತು. ಕಿಟ್ಟುವಿಗೆ ಒಂದು ಯೋಚನೆ ಹೊಳೆಯಿತು. ಲಾಂದ್ರವನ್ನು ಹಿಡಿದುಕೊಂಡು ಹೊರಕ್ಕೆ ಬಂದ. ಮನೆಯವರು ಬಾಗಿಲಿನಲ್ಲಿ ಬೆರಣಿಯನ್ನು ಕೊಂಡು ಹಾಕಿದ್ದರು. ಅದರಿಂದ ಚೆನ್ನಾಗಿ ತೆಳುವಾಗಿ ಅಗಲವಿಲ್ಲದಿದ್ದ ೭-೮ ಬೆರಣಿಗಳನ್ನು ಜೋಡಿಸಿಕೊಂಡು, ಬೀದಿಗೆ ಹೋಗಿ, ಸಣ್ಣ ಮರಳನ್ನು ಒಂದು ಸೇರಿನಷ್ಟು ಚೌಕದಲ್ಲಿ ಕಟ್ಟಿಕೊಂಡು ಒಳಕ್ಕೆ ಬಂದ. ನರಹರಿಯು ಭಯಂಕರ ಧ್ವನಿಯಲ್ಲಿ ಗೊರಕೆ ಹೊಡೆಯುತ್ತಿದ್ದ.

ಕಿಟ್ಟುವು ತಿಂಡಿಯ ಗಂಟಿನ ಸಜ್ಜಪ್ಪವನ್ನೆಲ್ಲಾ ತೆಗೆದುಕೊಂಡ. ಅದರ ಜಾಗದಲ್ಲಿ ಬೆರಣಿಯನ್ನು ಇಟ್ಟ. ಅರಳುಹಿಟ್ಟನ್ನೆಲ್ಲಾ ತನ್ನ ಚೌಕಕ್ಕೆ ಸುರಿದುಕೊಂಡು ಅಲ್ಲಿ ಸಣ್ಣ ಮರಳನ್ನಿಟ್ಟ. ಗಂಟನ್ನು ಮೊದಲಿನಂತೆಯೇ ಕಟ್ಟಿ, ಅದು ಇದ್ದ ಕಡೆಯೇ ಇಟ್ಟು ಮಲಗಿಬಿಟ್ಟ. ಅವನಿಗೂ ಬೇಗ ನಿದ್ರೆ, ಬಂದುಬಿಟ್ಟಿತು. ಬೆಳಗಾಯಿತು.

ಕಿಟ್ಟುವು ಆ ದಿವಸವಂತೂ ನರಹರಿಗೆ ತಿಂಡಿಯ ಗಂಟನ್ನು ಬಿಚ್ಚಲು ಅವಕಾಶವನ್ನೇ ಕೊಡಲಿಲ್ಲ. ರಾತ್ರಿ ಕಿಟ್ಟುವೇ ಮೊದಲು ಮಲಗಿಬಿಟ್ಟ. ಅವನು ಮಲಗಿದ ೨೦ ನಿಮಿಷಗಳನಂತರ ನರಹರಿಯು ದೀಪವನ್ನು ಆರಿಸಿ ಮಲಗಿಕೊಂಡ. ೫ ನಿಮಿಷ ಬಿಟ್ಟು ಮೆಲ್ಲನೆ ಗಂಟನ್ನು ಬಿಚ್ಚಿ, 'ಸಜ್ಜಪ್ಪ'ದ ಗಂಟಿನಿಂದ ಒಂದು ಚೂರನ್ನು ಬಾಯಿಗೆ ಹಾಕಿಕೊಂಡ. ಕೂಡಲೆ ಥೂ, ಥೂ ಎಂಬುದಾಗಿ ಉಗಳಿದ. ಅನಂತರ ಅರಳು ಹಿಟ್ಟಿನ ಗಂಟಿನಿಂದ ಒಂದು ಹಿಡಿ ಬಾಯಿಗೆ ಹಾಕಿಕೊಂಡ. ಹಲ್ಲೆಲ್ಲಾ ಮುರಿಯುವಂತಾಯ್ತು. ಅದನ್ನೂ ಉಗಳಿ "ಪಿಶಾಚಿ-ಗಂಡನ ಮನೆ ಹಾಳಾಯ್ತು" ಎಂದು ಗೊಣಗುಟ್ಟಿದ. ಆದರೂ ಹೇಗೋ ಸಹಿಸಿಕೊಂಡು ಸುಮ್ಮನಿದ್ದ. ಬೆಳಗಾಯಿತು.

ನರಹರಿ ಕಿಟ್ಟುವನ್ನು ತಿಂಡಿಯ ವಿಷಯ ಕೇಳಲೇ ಇಲ್ಲ. ತನ್ನ ಜಿಪುಣತನ ಕಿಟ್ಟುವಿಗೆ ತಿಳಿದುಹೋಯಿತಲ್ಲಾ ಎಂದು ಅವನಿಗೆ ನಾಚಿಕೆಯಾಯಿತು. ಕಿಟ್ಟು ಕೂಡ ಆ ವಿಚಾರ ಮಾತಾಡಲೇ ಇಲ್ಲ. ಬೆಳಗಾದ ಕೂಡಲೆ, ಆಗ ತಾನೆ ಹಾಸನಕ್ಕೆ ಬಂದಿದ್ದ ಕಿಟ್ಟುವಿನ ತಂದೆ, ಗಂಟನ್ನಿಡಲು ಕೊಠಡಿಗೆ ಬಂದರು. ಕಿಟ್ಟುವು ತನ್ನ ಕೊಠಡಿಯಲ್ಲಿ ನೀರು ಕುಡಿಯಲು, ೩ ದಿವಸ ಮುಂಚೆ ಒಂದು ಮಣ್ಣಿನ ಹೂಜೆಯನ್ನು ತಂದಿಟ್ಟಿದ್ದನು. ಅದು ಅವರ ತಂದೆಯ ಕಣ್ಣಿಗೆ ಬಿತ್ತು. ಅವರು ಕೂಡಲೆ "ಇದೇನು ಸಾಬರಂತೆ ನೀವೂ ಹೂಜಿಯಿಂದ ನೀರು ಕುಡೀತೀರಾ? ವೈದೀಕನ ಹೊಟ್ಟೇಲಿ ಹುಟ್ಟಿದ್ದಕ್ಕೆ ಸಾರ್ಥಕವಾಯಿತು. ಈ ಹೂಜೆಯನ್ನು ಬಿಸಾಡು. ಊರಿಂದ ಇನ್ನೊಂದು ಸಾರಿ ಬರುವಾಗ ಒಂದು ತಾಮ್ರದ ತಂಬಿಗೆ ತಂದೊಡ್ತೀನಿ. ಹೂ ಈಗಲೇ ಬೀದಿಗೆ ಎಸೆ" ಎಂದರು. ಕಿಟ್ಟುವು ಹೂಜಿಯನ್ನು ತಗೆದುಕೊಂಡು ಹೊರಕ್ಕೆ ಬಂದನು. ಅದು ಬಹಳ ಚೆನ್ನಾಗಿತ್ತು. ೩ ದಿವಸ ಮುಂಚೆ ಅದಕ್ಕೆ ೫ ಆಣೆ ಕೊಟ್ಟಿದ್ದನು. ಅದನ್ನು ಬಿಸಾಡಲು ಅವನಿಗೆ ಮನಸ್ಸು ಬರಲಿಲ್ಲ. ಬಾಗಿಲಿನಲ್ಲಿ ನಿಂತಿದ್ದ ಮನೆಯ ಯಜಮಾನನ ಮಗನನ್ನು ಕಂಡು "ಇದನ್ನು ಒಳಗೆ ಇಟ್ಟಿರು. ಸಾಯಂಕಾಲ ತೆಗೆದುಕೊಳ್ಳುತ್ತೇನೆ” ಎಂದು ಹೇಳಿ ಕೊಟ್ಟು, ಒಳಕ್ಕೆ ಬಂದನು. ಅವನನ್ನು ನೋಡಿ ಅವರ ತಂದೆಯವರು “ನಾನು ಇನ್ನೊಂದು ಸಲ ಬಂದಾಗ, ಅಂತಾದ್ದು ಏನಾದರೂ ನೀನು ಇಲ್ಲಿ ಇಟ್ಟಿದ್ದರೆ, ಅದನ್ನೂ ನಿನ್ನ ತಲೆಯನ್ನೂ ಒಂದೇ ಏಟಿಗೆ ಒಡೆದುಬಿಡುತ್ತೇನೆ ಎಂದರು.

ಆ ದಿವಸ ಕಿಟ್ಟುವು ನರಹರಿಯ ಬೆನ್ನು ಹತ್ತಲಿಲ್ಲ. ತಂದೆಯವರ ಊಟಕ್ಕೆ ಬಾಳೆಯ ಹಣ್ಣು ಮತ್ತು ಬೆಲ್ಲವನ್ನು ತರಲು ಅವನು ಅಂಗಡಿಗೆ ಹೋಗಿದ್ದ. ನರಹರಿಯು ಆಗತಾನೆ ಊಟಮಾಡಿಕೊಂಡು ಒಂದು ಕೊಠಡಿಯಲ್ಲಿ ಕುಳಿತಿದ್ದ. ಗಂಟೆ ೧೦ ಆಗಿತ್ತು. ಕಿಟ್ಟುವಿನ ತಂದೆಯೂ ಕೊಠಡಿಯಲ್ಲಿಯೇ ಕುಳಿತಿದ್ದರು. ಕಿಟ್ಟುವು ಹಣ್ಣು ತಂದನಂತರ ಅವರು ಅವನನ್ನು ಕುರಿತು “ನೀನು ಹೋಗಿ ಊಟಮಾಡಿಕೊಂಡು ಬಾ, ಸ್ಕೂಲಿಗೆ ಹೊತ್ತಾಗುತ್ತೆ" ಎಂದರು. ಕಿಟ್ಟುವು 'ಷರ್ಟನ್ನು' ಬಿಚ್ಚದೆ ಊಟಕ್ಕೆ ಹೊರಟುದನ್ನು ನೋಡಿ, "ಏನು ಹಾಳು ಹೋಟಲೋ, ಜಾತಿ ಕುಲ ಏನೂ ಇಲ್ಲ. ಇಂಗ್ಲಿಷ್ ವಿದ್ಯೆ ಬಂದು ನಮ್ಮ ಧರ್ಮ ಹಾಳಾಯ್ತು,” ಎಂದರು. ಕಿಟ್ಟುವು ಪದ್ಧತಿಯಂತೆ,

"ನಮ್ಮ ಹೋಟೆಲಿನಲ್ಲಿ ಹಾಗೆಲ್ಲಾ ಇಲ್ಲ. ಬಹಳ ಮಡಿ, ಎಂತಹ ವೈದಿಕರು ಬೇಕಾದರೂ ಊಟಮಾಡಬಹುದು” ಎಂದು ಹೇಳಿ ಹೊರಟು ಹೋದ.

ಅವನು ಹೋದ ಒಂದು ಘಳಿಗೆಯ ಮೇಲೆ ಕಿಟ್ಟುವಿನ ತಂದೆ, ನರಹರಿಯನ್ನು ಕುರಿತು.

ಹೋಟಲು ಬಹಳ ಮಡಿಯಾಗಿದೆ ಅನ್ತಾನಲ್ಲ? ಎಲ್ಲಿ, ಹೋಗಿ ನೋಡಿ ಬರೋಣ ಬಾ” ಎಂದರು. ನರಹರಿಗೆ ಇಷ್ಟವಿಲ್ಲದಿದ್ದರೆ ಅವರು ಹೋಗುವುದನ್ನು ಅವನು ತಪ್ಪಿಸಿಬಿಡಬಹುದಾಗಿದ್ದಿತು. ಸ್ಕೂಲಿಗೆ ಹೊತ್ತಾಗುತ್ತೆ ಎಂದು ಹೇಳಿದ್ದರೆ ಅವರು ಸುಮ್ಮನಾಗಿಬಿಡುತ್ತಿದ್ದರು. ಆದರೆ ನರಹರಿಗೆ ಬೆರಣಿಯನ್ನು ಅಗಿದುದೂ, ಮರಳನ್ನು ಕಡಿದುದೂ, ಇನ್ನೂ ಮರೆತಿರಲಿಲ್ಲ. ರಾತ್ರಿಯಿಂದ ಅವನಿಗೆ ಮೈಯೆಲ್ಲಾ ಉರಿಯುತಿತ್ತು. ಈ ಸಮಯವನ್ನು ಬಿಟ್ಟರೆ ಕಿಟ್ಟುವಿಗೆ ಕೈ ತೋರಿಸಲು ಅವಕಾಶದೊರೆಯುವುದಿಲ್ಲವೆಂದು ತಿಳಿದು ಅವನು “ಬನ್ನಿ ಹೋಗಿ ಬರೋಣ" ಎಂದನು. ಕಿಟ್ಟುವಿನ ತಂದೆಯು "ಹೋಟಲು ದೂರವಾಗಿದೆಯೆ?” ಎಂದರು.

ನರಹರಿಯು “ಏನೂ ಇಲ್ಲ. ಇದೇ ಬೀದಿಯಲ್ಲಿ ಈ ಮನೆಯಿಂದ ಎಡಗಡೆಗೆ ನಾಲ್ಕನೇ ಮನೆ" ಎಂದನು.

ಇಬ್ಬರೂ ಹೊರಟರು. ದಾರಿಯುದ್ದಕ್ಕೂ ಕಿಟ್ಟುವಿನ ತಂದೆಯು “ಹೋಟಲಿನಲ್ಲಿ ಪಾತ್ರೆ ಬೆಳಗುವರಾರು? ಎಲೆ ಎತ್ತುವರಾರು? ಅಡಿಗೆ ಮಾಡೋನು ನಿತ್ಯ ಸ್ನಾನ ಸಂಧ್ಯಾವನೆ ಮಾಡ್ತಾನ್ಯೆ?” ಎಂದೂ ಮುಂತಾಗಿ ಕೇಳಿದರು. ನರಹರಿಯು ಅವರು ಕೇಳಿದ್ದಕ್ಕೆಲ್ಲ “ಹೂ" ಎಂದು ಹೇಳುತ್ತಾ ಅವರನ್ನು ಹೋಟಲಿಗೆ ಕರೆದುಕೊಂಡು ಹೋದನು.

ಹೋಟಲಿನ ಹೊರ ಅಂಗಳದಲ್ಲಿ ೩-೪ ಮೇಜುಗಳೂ ಅದರ ಸುತ್ತ ಕುರ್ಚಿಗಳೂ ಇದ್ದುವು. ಒಂದು ಕುರ್ಚಿಯ ಮೇಲೆ ಒಬ್ಬ ಸಾಹೇಬನು ಕಾಫಿಯನ್ನು ಕುಡಿಯುತ್ತಾ ಮಧ್ಯೆ ಮಧ್ಯೆ ಎಡಗೈಯಲ್ಲಿ ಒಂದೊಂದು ಸಲ ಬೀಡಿಯನ್ನು ಸೇದುತ್ತಾ ಕುಳಿತಿದ್ದನು. ಇನ್ನೊಂದು ಮೇಜಿನ ಮುಂದೆ, ಷರಾಯಿ, 'ಬೂಟ್ಸ್, ಹ್ಯಾಟ್' ಹಾಕಿಕೊಂಡ ಒಬ್ಬ ಅಯ್ಯಂಗಾರು ಸೋಡವನ್ನು ಸೀಸೆಯೊಂದಿಗೆ ಕುಡಿಯುತ್ತಿದ್ದರು. ಕಿಟ್ಟುವಿನ ತಂದೆಗೆ ಇದನ್ನು ನೋಡಿ ಮೈ ಜುಮ್ಮೆಂದಿತು. ಅಷ್ಟಕ್ಕೆ ಹಿಂದಿರುಗಬೇಕೆಂದು ಯೋಚಿಸಿದರು. ಆದರೆ ಒಂದುಸಲ ಊಟಮಾಡುವ ಸ್ಥಳವನ್ನು ಹೋಗಿ ನೋಡಿಬಿಡೋಣ ಎಂಬುದಾಗಿ ಒಳಕ್ಕೆ ಹೋದರು. ಎಲ್ಲರೂ ಊಟ ಮಾಡುತ್ತಿದ್ದ ಕೋಣೆಯ ಬಾಗಿಲಿನಲ್ಲಿ ಒಂದುಸಲ ಇಣಿಕಿ ನೋಡಿದರು. ಕೆಲವರು ಅಂಗಿಯನ್ನೂ, ಕೆಲವರು ಕೊಟುಗಳನ್ನೂ ಹಾಕಿಕೊಂಡು ಊಟ ಮಾಡುತ್ತಿದ್ದರು. ಎಲೆಗಳನ್ನೆಲ್ಲಾ ಒಂದಕ್ಕೊಂದು ತಗಲುವಷ್ಟು ಹತ್ತಿರಕ್ಕೆ ಹಾಕಿದ್ದರು. ಬೇಕಾದವರು ಬೇಕಾದಾಗ ಏಳುತ್ತಿದ್ದರು. ಬೇಕಾದವರು ಬೇಕಾದಾಗ ಊಟಕ್ಕೆ ಕುಳಿತುಕೊಳ್ಳುತ್ತಿದ್ದರು. ಕೆಲವರು ಪರಿಶೇಚನವನ್ನೇ ಮಾಡುತ್ತಿರಲಿಲ್ಲ. ಕೆಲವರು ಆಪೋಶನವನ್ನೇ ತೆಗೆದುಕೊಳ್ಳುತ್ತಿರಲ್ಲಿಲ್ಲ. ಕಿಟ್ಟುವು ಅವರ ಮಧ್ಯದಲ್ಲಿ ಅಂಗಿಹಾಕಿಕೊಂಡೇ ಊಟಕ್ಕೆ ಕುಳಿತಿದ್ದನು. ಅವರ ತಂದೆಯವರು ನೋಡಿ "ಸಾರ್ಥಕವಾಯಿತು; ಉದ್ಧಾರವಾಯಿತು” ಎಂದುಕೊಂಡು ಕೊಠಡಿಗೆ ಹಿಂದಿರುಗಿದರು.

ಕಿಟ್ಟುವು ಊಟ ಮುಗಿಸಿಕೊಂಡು ಬಂದಕೂಡಲೆ, ಅವರ ತಂದೆಯವರು ಕೋಪದಿಂದ “ನಡಿ ಊರಿಗೆ- ಮಗನೆ ನಿನ್ನ ವಿದ್ಯೆ ಹಾಳಾಯ್ತು. ಓದಿದ್ದು ಸಾಕು” ಎಂದು ಗದರಿಸಿದರು. ಕಿಟ್ಟುವಿಗೆ ಗಾಬರಿಯಾಯಿತು. ಅವನಿಗೇನೂ ಪರೀಕ್ಷೆಯಲ್ಲಿ 'ಫೇಲ್' ಆಗಿರಲಿಲ್ಲ. ತಾನು ತಿಂಡಿ ಕದ್ದುದನ್ನು ನರಹರಿಯು ತಂದೆಗೆ ಹೇಳಿರಬಹುದೆಂದು ಅವನು ಹೆದರಿದನು. ಅವರ ತಂದೆಯವರು ಮತ್ತೆ ಸ್ವಲ್ಪ ಸಮಾಧಾನದಿಂದ “ಈ ಜಾತಿಕೆಟ್ಟ ವಿದ್ಯದಿಂದ ನಮಗೆ ಆಗಬೇಕಾದುದೇನು? ನಮ್ಮ ಅಪ್ಪ ಅಜ್ಜ ಈ ವಿದ್ಯಾನೆ ಕಲಿತರೆ? ನಾನು ಕಲಿತಿದ್ದೇನೆಯೆ? ನಡಿ ಊರಿಗೆ ಪೌರೋಹಿತ್ಯ ಕಲಿಯುವಿಯಂತೆ. ಅದರಿಂದ ಇಹವೂ ಉಂಟು ಪರವೂ ಉಂಟು” ಎಂದರು. ಆಮೇಲೆ ಕಿಟ್ಟುವಿಗೆ ತನ್ನ ತಂದೆಯವರು ಹೋಟಲಿಗೆ ಬಂದಿದುದು ಗೊತ್ತಾಯಿತು. ಸ್ವಲ್ಪ ಚರ್ಚೆ ನಡೆದಮೇಲೆ, ಕಿಟ್ಟುವು ಆ ಹೋಟಲನ್ನು ಬಿಟ್ಟು ಬೇರೆ ಒಂದು ಹೋಟಲಿನಲ್ಲಿ ಊಟಮಾಡಿಕೊಂಡು ವ್ಯಾಸಂಗಮಾಡಬಹುದೆಂದು ಅವರ ತಂದೆಯವರು ಒಪ್ಪಿದರು. ನರಹರಿಗೆ ಸ್ವಲ್ಪ ಅಸಮಾಧಾನವಾಯಿತು. ಕಿಟ್ಟುವು ಓದುವುದನ್ನು ಬಿಡಬೇಕೆಂದು ಅವನಿಗೆ ಸ್ವಲ್ಪವೂ ಇಷ್ಟವಿರಲಿಲ್ಲ. ಕಿಟ್ಟುವಿನ ತಂದೆಯ ಕೋಪದ ಆವೇಶದ ಮೊದಲ ಮಾತುಗಳನ್ನು ಕೇಳಿಯಂತೂ, ಅವನಿಗೆ ಗಾಬರಿಯೂ, ತಾನು ಮಾಡಿದ ಕೆಲಸಕ್ಕಾಗಿ ಪಶ್ಚಾತ್ತಾಪವೂ, ಉಂಟಾಗಿದ್ದಿತು. ಆದರೂ ಕಿಟ್ಟುವಿಗೆ ಇನ್ನೂ ಸ್ವಲ್ಪ ಹೆಚ್ಚಾಗಿ ಬೈಗುಳವಾಗಿದ್ದರೆ, ಮುಯ್ಯಿ ತೀರಿಸಿಕೊಂಡಂತಾಗಿ ಅವನ ಮನಸ್ಸಿಗೆ ಹೆಚ್ಚು ಸಮಾಧಾನವಾಗುತ್ತಿದ್ದಿತು.

ಕಿಟ್ಟುವಿನ ತಂದೆಯವರು ೧೧ ಗಂಟೆಗೆ ಹೊರಟುಹೋದರು. ಹೊರಡುವಾಗ “ಕೋರ್ಟು ಕೆಲಸ ಮುಗಿಸಿಕೊಂಡು ಹಾಗೇ ಮೋಟಾರ್ ನಲ್ಲಿ ಊರಿಗೆ ಹೋಗುತ್ತೇನೆ. ಇಲ್ಲಿಗೆ ಮತ್ತೆ ಬರಲು ಅವಕಾಶವಿಲ್ಲ. ಜೋಪಾನ. ಚೆನ್ನಾಗಿ ಓದಿಕೊಳ್ಳಿ, ನಿತ್ಯ ಸಂಧ್ಯಾವಂದನೆ ಮರೆಯಬೇಡಿ" ಎಂದು ಹೇಳಿದರು. ಕಿಟ್ಟುವೂ ನರಹರಿಯ "ಹಾಗೆಯೇ ಮಾಡುತ್ತೇವೆ" ಎಂದರು.

೫ ಗಂಟೆಗೆ ಸ್ಕೂಲಿನಿಂದ ಬಂದ ಕೂಡಲೇ ಕಿಟ್ಟುವಿಗೆ ಬಾಯಾರಿಕೆಯಾಯಿತು. ತಾನು ನಿತ್ಯ ನೀರು ಕುಡಿಯುತ್ತಿದ್ದ ಹೂಜಿ ಕೂಡಲೆ ಜ್ಞಾಪಕಕ್ಕೆ ಬಂದಿತು. ತಮ್ಮ ತಂದೆಯವರು ಬೆಳಿಗ್ಗೆ ಹೇಳಿದ್ದ ಮಾತನ್ನು ನೆನೆದು ನಗುತ್ತಾ, ಮಹಡಿಯಿಂದ ಕೆಳಗೆ ಇಳಿದು, ಮನೆಗೆ ಹೋಗಿ ಅಲ್ಲಿ ಇಟ್ಟಿದ್ದ ಹೂಜಿಯನ್ನು ಕೊಠಡಿಗೆ ತಂದನು. ನರಹರಿಯು ಮೊದಲು ನೀರನ್ನು ಕುಡಿದನು. ಆ ವೇಳೆಗೆ ಸರಿಯಾಗಿ ಹೊರಗೆ ಕಿಟ್ಟು ಎಂದು ಯಾರೋ ಕೂಗಿದರು. ಅದು ಅವನ ತಂದೆಯವರ ಧ್ವನಿ, ಧ್ವನಿಯನ್ನು ಕೇಳಿ ಕಿಟ್ಟುವಿಗೆ ಗಾಬರಿಯಾಯಿತು. ಹೂಜಿ ಕೊಠಡಿಯಲ್ಲಿ ಇಲ್ಲದೆ ಇದ್ದಿದ್ದರೆ ಹೆದರುತ್ತಿರಲಿಲ್ಲ. ಆದರೆ ಹಾಳಾದ್ದು ಆಗತಾನೆ ಹೂಜಿಯನ್ನು ಮನೆಯಿಂದ, ನೀರು ತುಂಬಿ ತಂದಿದ್ದ. ಬೆಳಿಗ್ಗೆ ತಂದೆಯವರೊಂದಿಗೆ ಬಿಸಾಡಿಬಿಟ್ಟೆ ಎಂದು ಹೇಳಿದ್ದ. ಅವರ ತಂದೆಯವರ ಕೋಪ ಹೋಟಲಿನ ಊಟ ನೋಡಿ ಮೊದಲೇ ಹೆಚ್ಚಾಗಿತ್ತು. ಅವನು ಮತ್ತೇನೂ ಉಪಾಯ ತೋರದೆ, ಮಂಡಿಯ ಮಧ್ಯೆ ಹೂಜೆಯನ್ನು ಇಟ್ಟುಕೊಂಡು, ಅದರ ಮೇಲೆ ಒಂದು ಪಂಚೆ ಮುಚ್ಚಿ ಏನೋ ಬರೆಯುವವನಂತೆ ನಟಿಸುತ್ತಾ ಕುಳಿತು ಬಿಟ್ಟ. ಕಿಟ್ಟುವಿನ ತಂದೆ ಮಹಡಿಯ ಮೆಟ್ಟಿಲೇರಿ ಒಳಕ್ಕೆ ಬಂದು,

“ಹಾಳಾದ ಮೋಟಾರ್ ತಪ್ಪಿಹೋಯಿತು. ಸಂತೆಮಾಳದಲ್ಲಿ ಒಂದು ಗಾಡಿ ಇದೆ. ಅದ್ರಲ್ಲೇ ಹೋಗ್ತಿದ್ದೀನಿ. ರಾತ್ರಿ ಎಲ್ಲಾ ನಿದ್ರೆ ಕೆಡಬೇಕು. ಏನ್ಮಾಡೋದು? ದಾರಿಯಲ್ಲಿ ನಿಮ್ಮ ಒಂದು ಸಲ ಮಾತನಾಡಿಸಿ ಬಿಟ್ಟು ಹೋಗೋಣ ಅಂತ ಬಂದೆ” ಎಂದರು. ಕಿಟ್ಟುವಿಗೆ ಸ್ವಲ್ಪ ಧೈರ್‍ಯವಾಯಿತು. "ಒಂದು ಘಳಿಗೆ ಹೀಗೆಯೇ ಕೂತಿದ್ರೆ ಹೊರಟುಹೋಗ್ತಾರೆ. ಆಮೇಲೆ ಹೂಜಿ ಹೊರಕ್ಕೆ ತೆಗೆದರೆ ಆಯ್ತು" ಅಂದುಕೊಂಡ ಅವನು. ನರಹರಿ ಇದನ್ನೆಲ್ಲಾ ನೋಡಿದ. ಅವನಿಗೆ ಒಂದು ಉಪಾಯ ಹೊಳೆಯಿತು. ಮಹಡಿ ಇಳಿದು ಕೆಳಗಿನ ಮೆಟ್ಟಿಲಿನ ಬಳಿಗೆ ಬಂದು “ಕಿಟ್ಟು ಕಿಟ್ಟು” ಎಂದು ಕೂಗಿದ. ಕಿಟ್ಟುವು ದೈನ್ಯದಿಂದ ಕುಳಿತ ಜಾಗ ಬಿಟ್ಟು ಏಳದೆ “ಓ ಓ” ಎಂದ, ನರಹರಿಯು “ಮೇಷ್ಟ್ರು ಕರೀತಾರೆ ಬಾರೊ" ಅಂದ. ಕಿಟ್ಟುವು ಆದರೂ ಅಲುಗಾಡಲೇ ಇಲ್ಲ. ಅವರ ತಂದೆಯವರು "ಹೋಗು ಮೇಷ್ಟು ಬಂದಿದ್ದಾರಂತೆ. ಅದೇನು ಕೇಳಿಬಿಟ್ಟು ಬಾ" ಎಂದರು. ಕಿಟ್ಟುವು ತಂದೆಯವರಿಗೆ ಹೂಜಿ ಕಾಣದಂತೆ ಏಳಬೇಕೆಂದು ಸವರಿಸುವುದರಲ್ಲಿ, ನೇರವಾಗಿ ಇಟ್ಟುಕೊಂಡಿದ್ದ ಹೂಜಿ ಸೊಟ್ಟಾಯಿತು. ಅದರಲ್ಲಿದ್ದ ನೀರು ಅವನ ತೊಡೆಯ ಮೇಲೆ ಬಿದ್ದು, ಅವನ ತಂದೆಯವರ ಬಳಿಗೆ ಹಾವಿನಂತೆ ಹರಿದುಕೊಂಡು ಹೋಯಿತು. ಅವರ ತಂದೆಯವರು ನೀರೆಲ್ಲಿಂದ ಬಂದಿತೆಂದುಕೊಂಡು ಆಶ್ಚರ್ಯದಿಂದ ಕಿಟ್ಟುವಿನ ಕಡೆ ನೋಡಿದರು. ಕಿಟ್ಟುವು ಪೆಚ್ಚಾಗಿ ಮೇಲಕ್ಕೆ ಎದ್ದನು. ಅವರ ತಂದೆಯವರು ಹೂಜಿಯನ್ನೂ, ಅದರಿಂದ ಹರಿದುಬರುತ್ತಿದ್ದ ನೀರನ್ನೂ, ನೋಡಿದರು. "ಪುನರಾಯಾನ್ ಮಹಾಕಪಿಃ, ಇದು ಇನ್ನೂ ಇಲ್ಲಿಯೇ ಇದೆಯೋ” ಎಂದು ಹೇಳಿ, ಕೈಯಲ್ಲಿದ್ದ ದೊಣ್ಣೆಯಿಂದ ಅದಕ್ಕೆ ಎತ್ತಿ ಒಂದು ಪಟ್ಟು ಹಾಕಿ ಚೂರು ಚೂರು ಮಾಡಿದರು. ಕುಂಬಾರನಿಗೆ ವರ್ಷ, ದೊಣ್ಣೆಗೆ ನಿಮಿಷ.” ಸದ್ಯ ಅವರು ಕಿಟ್ಟುವಿನ ತಲೆಯನ್ನು, ಮೊದಲೇ ಹೇಳಿದ್ದಂತೆ ಒಡೆಯಲಿಲ್ಲ.

ಅವರು ಹೊರಟುಹೋದ ಮೇಲೆ ನರಹರಿಯ ಕೋಪ ಪೂರ್ಣವಾಗಿ ಶಮನವಾಯಿತು. ಕಿಟ್ಟುವು ಮಾಡಿದ ವಿನೋದದ ಸೇಡನ್ನು ತಾನು ಪೂರ್ತಾ ತೀರಿಸಿದಂತೆ ಆಯಿತು. ಆ ವಿಷಯ ಅಲ್ಲಿಗೆ ತೀರಿಹೋಯಿತು. ನರಹರಿಯು ಕಿಟ್ಟುವನ್ನು ಕುರಿತು ಒಂದು ಹೂಜಿ ತಂದುಕೊಡಲೇನೊ?” ಎಂದು ಕೇಳಿದ.

ಕಿಟ್ಟುವು "ಇಲ್ಲಿ ಸ್ವಲ್ಪ ತಿಂಡಿ ಇದೆ. ಮೊದಲು ತಿನ್ನೋಣ. ಆಮೇಲೆ ಹೋಗೋಣ" ಎಂಬುದಾಗಿ ಹೇಳಿ ಒಂದು ಗಂಟನ್ನು ಬಿಚ್ಚಿದ. ತಿಂಡಿ ಎಲ್ಲಿಂದ ಬಂದಿತೆಂದು ನರಹರಿಗೆ ಆಶ್ಚರವಾಯಿತು. ಗಂಟನ್ನು ಬಿಚ್ಚಿದ ಕೂಡಲೆ ತನ್ನ 'ಸಜ್ಜಪ್ಪ' ಮತ್ತು ಅರಳುಹಿಟ್ಟು ಅಚ್ಚಳಿಯದಂತೆ ಇದ್ದುದನ್ನು ಕಂಡು, ನರಹರಿಯು ನಗುವುದಕ್ಕೆ ಪ್ರಾರಂಭಿಸಿದ. ಕಿಟ್ಟುವೂ ಅವನ ಜೊತೆಯಲ್ಲಿ, ಕೊಠಡಿಯ ಸೂರು ಹಾರಿಹೋಗುವಹಾಗೆ ನಕ್ಕ.

ಬಲವಂತದ ಮದುವೆ


ಈಗ ಒಂದು ತಿಂಗಳ ಹಿಂದೆ ನಾನು ನಮ್ಮೂರಿಗೆ ಹೋಗಬೇಕಾಗಿತ್ತು. ಹಾಸನದಿಂದ ನಮ್ಮೂರಿಗೆ ಮೋಟಾರ್ ಸಿಕ್ಕಲಿಲ್ಲ. ನಡೆದುಕೊಂಡೇ ಹೊರಟುಬಿಟ್ಟೆ. ರಸ್ತೆಯಲ್ಲಿ ೫ ಮೈಲು ಹೋದಕೂಡಲೆ ನಮ್ಮ ಊರ ಮೋಟಾರ್ 'ಪಂಕ್ಚರ್' ಆಗಿ 'ರಿಪೇರಿ'ಗಾಗಿ ನಿಂತಿತ್ತು. ಮೋಟಾರಿನಲ್ಲಿ ಕೂತು ಕೂತು ಬೇಸರಿಕೆಯಾಗಿ, ಅದರಲ್ಲಿದ್ದವರೆಲ್ಲಾ ಕೆಳಕ್ಕೆ ಇಳಿದು, ರಸ್ತೆಯ ಮರದ ಕೆಳಗೆ ನೆರಳಿನಲ್ಲಿ ಗರಿಕೆಯಮೇಲೆ ಕುಳಿತಿದ್ದರು. ಉಳಿದವರಿಂದ ೨-೩ ಮಾರು ದೂರವಾಗಿ ಬೇರೆ ಒಂದು ಮರದ ಕೆಳಗೆ ಒಬ್ಬ ಗಂಡಸು, ಒಬ್ಬ ಹೆಂಗಸು ಮತ್ತು ಮೂರು ಮಕ್ಕಳು, ಕುಳಿತಿದ್ದರು. ಗಂಡಸು ಒಂದು ಮಗುವನ್ನು ಎತ್ತಿಕೊಂಡಿದ್ದನು. ಉಳಿದ ಇಬ್ಬರು ಮಕ್ಕಳು ಗರುಕೆಯ ಮೇಲೆ ಆಟವಾಡುತ್ತಿದ್ದರು. ಹತ್ತಿರಕ್ಕೆ ಹೋದ ಕೂಡಲೇ, ಅವರು ನಮ್ಮ ಹಳೆಯ ಸ್ನೇಹಿತ ಶೀನಪ್ಪ ಮತ್ತು ಅವನ ಸಂಸಾರವೆಂದು ತಿಳಿಯಿತು. ಪರಸ್ಪರ ಯೋಗಕ್ಷೇಮವಾದ ನಂತರ “ನಿನಗೆ ಎಷ್ಟು ದಿವಸ ರಜ" ಅಂದೆ. ಶೀನಪ್ಪನು ಮೂರು ದಿವಸ. ಬುಧವಾರವೇ ಹೊರಡಬೇಕು” ಎಂದ. "ಮೂರು ದಿವಸಕ್ಕಾಗಿ ಹೆಂಡತಿ ಮಕ್ಕಳನ್ನೆಲ್ಲಾ ಕರೆದುಕೊಂಡು ಬಂದೆಯಾ?” ಎಂದೆ. ಅವನು ನಗುತ್ತಾ “ಏನು ಮಾಡೋದಪ್ಪ, ನಾನು ಹೊರಟೆ, ಅವಳು 'ನಾನೂ ಬರುತ್ತೇನೆ' ಎಂದಳು. ಮದುವೆಯಾದ ಮೇಲೆ ಗಂಡಸು ಪರರ ವಸ್ತು. ಅವರು ಹೇಳಿದಂತೆ ಕೇಳಬೇಕು. ಅವಳ ಮಾತನ್ನು ಮೀರೋದಕ್ಕೆ ಆಗುತ್ತದೆಯೇ?” ಎಂದ. ನಾನು "ಮದುವೆಯಾಗುವಾಗ ಯಾಕೆ ಅಷ್ಟು ಹಾರಾಡಿದೆ?” ಎಂದೆ. ನಮ್ಮ ಸ್ನೇಹಿತನು “ನೀನು ಮಾತ್ರ ಹಾರಾಡಲಿಲ್ಲವೋ” ಎಂದ. ನನಗೇ ಯಾಕೊ ಏಟು ಬಿತ್ತು ಅಂತ ಸುಮ್ಮನಾದೆ.

ನಮ್ಮ ಶೀನಪ್ಪನು ಮದುವೆಯಲ್ಲಿ ಹಾರಾಡಿದ್ದು ಸಾಮಾನ್ಯವಾದ ಹಾರಾಟವಲ್ಲ. ಅದರ ವಿವರ ಸ್ವಲ್ಪ ಕೇಳಿ. ಆಗ ಅವನಿಗೆ ವಯಸ್ಸು ಸುಮಾರು ೧೭ ಇದ್ದಿರಬಹುದು. ಹೈಸ್ಕೂಲು ನಾಲ್ಕನೇ ಫಾರಂನಲ್ಲಿ ಓದುತ್ತಿದ್ದ. ಎಲ್ಲಿಯೋ ವಾರದ ಊಟಮಾಡಿಕೊಂಡು, ಯಾರ ಮನೆಯಲ್ಲಿಯೋ ಒಂದು ಕೊಠಡಿಯನ್ನು ಬಾಡಿಗೆಗೆ ತೆಗೆದುಕೊಂಡು, ಅದರಲ್ಲಿ ಇರುತ್ತಿದ್ದ. ಆ ಮನೆಯ ಯಜಮಾನನಿಗೆ ೩-೪ ಹೆಣ್ಣು ಹುಡುಗಿಯರಿದ್ದರು. ಯಾರಿಗೂ ಇನ್ನೂ ಮದುವೆಯಾಗಿರಲಿಲ್ಲ. ಶೀನಪ್ಪ ಕೊಠಡಿಯನ್ನು ಬಾಡಿಗೆಗೆ ತೆಗೆದುಕೊಂಡ ಮೊದಲ ತಿಂಗಳಲ್ಲಿಯೇ, ಮನೆಯ ಯಜಮಾನನ ಮೊದಲ ಮಗಳಿಗೆ ಮದುವೆಯು ನಿಶ್ಚಯವಾಯಿತು. ಪಾಪ, ಆ ತಂದೆಯು ಎಲ್ಲೆಲ್ಲೋ ತಿರುಗಿ ತಿರುಗಿ ಸಾಕಾಗಿ ಕೊನೆಗೆ ಗಂಡು ಹುಡುಗ ಎಂಬುದಾಗಿ ಒಬ್ಬನನ್ನು ಗೊತ್ತುಮಾಡಿಕೊಂಡು ಬಂದಿದ್ದರು. ಮದುವೆಯ ಲಗ್ನವು ನಿಶ್ಚಯಿಸಲ್ಪಟ್ಟಿತು. ಮದುವೆಯಾಗುವುದಕ್ಕೆ ಯಾವ ಪ್ರತಿಬಂಧಕವೂ ಇರುವಂತೆ ತೋರಲಿಲ್ಲ.

ಆದರೆ “ಆರು ಮನುಷ್ಯ ಪ್ರಯತ್ನ; ಏಳನೆಯದು ದೈವದ ಇಚ್ಛೆ" ಎಂಬ ವಾಕ್ಯವು ಈ ಮದುವೆಗೆ ಸರಿಯಾಗಿ ಅನ್ವಯಿಸಿಬಿಟ್ಟಿತು. ಮದುವೆಯ ದಿವಸ ಬೆಳಿಗ್ಗೆ ವರನ ತಾಯಿಯು ಸ್ವರ್ಗಸ್ಥಳಾದ ವರ್ತಮಾನ ಬಂದಿತು. ವರನು ಹೇಳದೆ ಕೇಳದೆ ಹೊರಟುಹೋದನು.

ಪಾಪ, ಹುಡುಗಿಯ ತಂದೆಗೆ "ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ”ವೆಂಬಂತೆ ಆಯಿತು. ಇಷ್ಟು ಕಷ್ಟದಿಂದ ಸಂಪಾದಿಸಿದ ವರ ಹೋಯಿತಲ್ಲಾ, ಅಯ್ಯೋ ದೇವರೆ? ಹೊಂದಿಸಿದ ಸಾಮಾನು, ಹಪ್ಪಳ, ಸಂಡಿಗೆ, ಮಾಡಿಟ್ಟ ಒಬ್ಬಟ್ಟು ಎಲ್ಲಾ ಹಾಳಾಗಿ ಹೋಯಿತಲ್ಲ" ಎಂದು ಅವರು ಕೊರಗಿದರು. ಅವರ ಮನೆಯ ಕೊಠಡಿಯ ಮೇಲೆ ಶೀನಪ್ಪನು “ಶ್ರೀನಿವಾಸಯ್ಯಂಗಾರ್” ಎಂಬುದಾಗಿ ಸೀಮೆಸುಣ್ಣದಲ್ಲಿ ಹೆಸರನ್ನು ಬರೆದಿದ್ದ. ಸ್ನೇಹಿತರು ಬಂದರೆ ತನ್ನ ಕೊಠಡಿಯನ್ನು ನೋಡಿ ತಿಳಿದುಕೊಳ್ಳಲಿ ಅಂತಲೋ ಅಥವ ಟಪಾಲ್ ಜವಾನನಿಗೆ ತನ್ನ ಕೊಠಡಿಯು ತಿಳಿಯಲಿ ಎಂದೋ, ಅಥವ ಸೀಮೆಸುಣ್ಣ ಕೈಗೆ ಸಿಕ್ಕಿದಾಗ ಕೈ ನಿಲ್ಲದೆ ಚಪಲತೆಯಿಂದ ಚೇಷ್ಟೆಗಾಗಿಯೋ ಬರೆದಿದ್ದ. ಮದುವೆಗಾಗಿ ನೆರೆದಿದ್ದ ನೆಂಟರೊಬ್ಬರು, “ಈ ಶ್ರೀನಿವಾಸಯ್ಯಂಗಾರಿ ಅನ್ನುವರು ಯಾರು?" ಎಂದರು. ಅವನ ವಯಸ್ಸು ಊರು ಎಲ್ಲಾ ತಿಳಿದ ಮೇಲೆ "ಅವನಿಗೆ ಯಾಕೆ ನಿಮ್ಮ ಹೆಣ್ಣನ್ನು ಕೊಟ್ಟು ಮದುವೆ ಮಾಡಿಬಿಡಬಾರದು?” ಎಂದರು. ಹೆಣ್ಣಿನ ತಂದೆಯು ನಿರುತ್ಸಾಹದಿಂದ “ಮಾಡಬಹುದು, ಆದರೆ ಅವನು ಒಪ್ಪಬೇಕಲ್ಲ" ಎಂದರು. ಸ್ವಲ್ಪ ಹೊತ್ತು ಅವರಲ್ಲಿಯೇ ಮಾತುಕತೆಯಾದನಂತರ, ಹೆಣ್ಣಿನ ತಂದೆಯೂ ಅವನ ೨-೩ ಜನ ಬಂಧುಗಳೂ ಶೀನಪ್ಪನನ್ನು ಕರೆತರಲು ಸ್ಕೂಲಿಗೆ ಹೋದರು. ಆ ವೇಳೆಗೆ ಮೊದಲನೆಯ 'ಪೀರಿಯಡ್' ಪ್ರಾರಂಭವಾಗಿತ್ತು. ಭೂಗೋಳ ಪಾಠ ನಡೆಯುತ್ತಿತ್ತು. ಉಪಾಧ್ಯಾಯರು 'ಜಿ. ಐ. ಪಿ. ರೈಲ್ವೆಯ ವಿಚಾರವಾಗಿ ಉಪನ್ಯಾಸ ಮಾಡುತ್ತಿದ್ದರು. ಅದು ಏನಾದರೂ ಶೀನಪ್ಪನ ತಲೆಗೆ ಹತ್ತಲೇ ಇಲ್ಲ. "ಹಾಳಾದ್ದು ಪಾಠ ಮುಗಿದುಹೋದರೆ ಸಾಕಲ್ಲ" ಎಂದುಕೊಂಡು ಅವನು ತೂಗಡಿಸುತ್ತಿದ್ದನು. ಅಲ್ಲದೆ "ಮನೆಯವರು ತನಗೆ ಊಟಕ್ಕೆ ಹೇಳಲಿಲ್ಲ. ಮರೆತುಬಿಟ್ಟರೇನೋ? ಮದುವೆಯ ಒಳ್ಳೆಯ ಊಟ ತಪ್ಪಿಹೋಯ್ತು. ಆದರೂ ೧೨ ಗಂಟೆಗೆ ಹೋದಾಗ ಮನೆಯ ಮುಂದೆ ಸ್ವಲ್ಪ ಸುಳಿದಾಡಿ ನೋಡುತ್ತೇನೆ. ಮದುವೆಯ ಊಟ ಸಿಕ್ಕಿದರೆ ಅದೇ ಲಾಭ" ಎಂದು ಅವನು ಯೋಚಿಸುತ್ತಿದ್ದನು. ಅಷ್ಟು ಹೊತ್ತಿಗೆ ಸ್ಕೂಲು ಜವಾನನು ಕೈಯ್ಯಲ್ಲಿ ಒಂದು ಚೀಟಿಯನ್ನು ಹಿಡಿದುಕೊಂಡು ಒಳಗೆ ಬಂದನು. “ನಾಳೆ ದಿವಸ ರಜ ಸಿಕ್ಕಬಹುದು” ಎಂದುಕೊಂಡು ಹುಡುಗರೆಲ್ಲ ಉಪಾಧ್ಯಾಯರ ಕಡೆಗೆ ನೋಡಿದರು. ಉಪಾಧ್ಯಾಯರು ಚೀಟಿಯನ್ನು ನೋಡಿ ಗಂಭೀರಧ್ವನಿಯಿಂದ "ಶ್ರೀನಿವಾಸಯ್ಯಂಗಾರ್‍ಯರನ್ನು ಯಾರೋ ಕರೆಯುತ್ತಾರೆ” ಎಂದು ಹೇಳಿ ಶೀನಪ್ಪನ ಕಡೆಗೆ ತಿರುಗಿ “ನೀನು ಹೋಗಬಹುದು" ಎಂದರು. ಶೀನಪ್ಪನಿಗೆ ಸದ್ಯ ಪಾಠ ತಪ್ಪಿತಲ್ಲಾ ಎಂದು ಆನಂದ. ಎರಡನೆಯದಾಗಿ “ಓಹೋ ನನ್ನನ್ನು ಊಟಕ್ಕೆ ಕರೆಯಲು ಅವರ ಮನೆಯವರು ಯಾರೋ ಬಂದಿರಬೇಕು. ಅನ್ಯಾಯವಾಗಿ ಅವರ ವಿಷಯದಲ್ಲಿ ಕೆಟ್ಟ ಆಲೋಚನೆಯನ್ನು ಮಾಡಿದೆ. ನನ್ನನ್ನು ಮರೆಯುತ್ತಾರೆಯೇ ಅವರು” ಎಂದುಕೊಂಡು ಹೊರಕ್ಕೆ ಬಂದನು. ಮನೆಯ ಯಜಮಾನನಲ್ಲದೆ ಇನ್ನೂ ಮೂರು ಜನರಿದ್ದರು. ಒಬ್ಬನನ್ನು ನೋಡಿಯಂತೂ ಇವನಿಗೆ ಭಯವೇ ಆಯಿತು. ಅವನು ಹೊಡೆದಾಡುವುದಕ್ಕೆ ಸಿದ್ದವಾಗಿದ್ದ ಪೈಲ್ವಾನನಂತೆ ಧಾಂಡಿಗನಾಗಿ ತೋರುತ್ತಿದ್ದನು. ಇವನು ಹೊರಗೆ ಬಂದುದನ್ನು ಕಂಡು ಆ ಪೈಲ್ವಾನನಂತಿದ್ದವನು “ಬಾಯ್ಯ, ಶ್ರೀನಿವಾಸಯ್ಯಂಗಾರ್‍ಯ. ಮದುವೆಯ ದಿವಸವೂ ನಿನಗೆ ಸ್ಕೂಲಿನ ಗಲಾಟೆಯೇ. ಮನೆಯಲ್ಲಿ ಓಡಾಡಿಕೊಂಡು ನಮಗೂ ಸ್ವಲ್ಪ ಸಹಾಯ ಮಾಡುವಿಯಂತೆ" ಎಂದನು. ಶೀನಪ್ಪನಿಗೆ ಬಹಳ ಸಂತೋಷವಾಯಿತು. ತಾನೇನೋ ದೊಡ್ಡ ಮನುಷ್ಯ ಎಂದು ನಾಲ್ಕು ಜನವೂ ಇಲ್ಲಿಗೆ ಬಂದು ಕರೆಯುತ್ತಾರೆ. ಯಾತಕ್ಕೆ ಹೋಗಿ ಸಹಾಯ ಮಾಡಬಾರದು. ಹೇಗಾದರೂ ಸ್ಕೂಲಿನಿಂದ ರಜ ತೆಗೆದುಕೊಳ್ಳಲು ಅವಕಾಶ ಸಿಕ್ಕಿತೆಂದರೆ ಸಾಕೆಂದು ಅವನ ಅಭಿಪ್ರಾಯ. "ಆಗಲಿ" ಎಂದ. ವರನ ತಾಯಿ ಸತ್ತು ಹೋದದ್ದೂ, ಮದುವೆಯು ನಿಂತುಹೋದದ್ದೂ, ವರನು ಹೇಳದೆ ಕೇಳದೆ ಓಡಿಹೋದದ್ದೂ, ಒಂದೂ ಇವನಿಗೆ ಗೊತ್ತಿರಲಿಲ್ಲ. ಬೆಳಿಗ್ಗೆ ಕೊಠಡಿಯನ್ನು ಬಿಟ್ಟವನು ಸ್ನೇಹಿತನ ರೂಮಿಗೆ ಹೋಗಿ 'ಹೋಮ್ ವರ್ಕ್' ಮಾಡಿಕೊಂಡು ವಾರದ ಮನೆಯಲ್ಲಿ ಊಟಮಾಡಿ, ನೆಟ್ಟಗೆ ಸ್ಕೂಲಿಗೆ ಬಂದಿದ್ದ. ಉತ್ಸಾಹದಿಂದ, “ಮೇಷ್ಟರಿಗೆ ಹೇಳಿ ರಜಾ ತೆಗೆದುಕೊಂಡು ಬರುತ್ತೇನೆ” ಎಂದು ಹೊರಟ. ಬಂದಿದ್ದ ನಾಲ್ಕು ಜನರೂ ಒಬ್ಬರ ಮುಖವನ್ನೊಬ್ಬರು ನೋಡಿದರು. ಎಲ್ಲರ ಮುಖದಲ್ಲಿಯೂ ಅನಿಶ್ಚಯವು ಒಡೆದು ತೋರುತ್ತಿದ್ದಿತು. ಕೊನೆಗೆ ಪೈಲ್ವಾನನಂತಿದ್ದವನು “ಏನೂ ಬೇಡ, ನೀನು ಇಲ್ಲಿಯೇ ಇರು. ನಾನೇ ಹೋಗಿ ರಜ ಹೇಳಿ ಬರುತ್ತೇನೆ” ಎಂದು ಹೊರಟನು. ಶೀನಪ್ಪನು "ಪುಸ್ತಕಗಳನ್ನೆಲ್ಲಾ ತರಬೇಕು, ನಾನೇ ಹೋಗಿ ಬರುತ್ತೇನೆ. ಒಂದೇ ನಿಮಿಷ" ಎಂದನು. ಪೈಲ್ವಾನನು ಪುಸ್ತಕಗಳನ್ನೂ ನಾನೇ ತರುತ್ತೇನೆ, ಎಂಬುದಾಗಿ ಹೇಳಿ ಹೊರಟುಹೋದನು. ಮತ್ತೊಬ್ಬ ಅಯ್ಯಂಗಾರಿಯು “ಪುಸ್ತಕ ಹೋದರೆ ಹೋಗಲಿ, ಎರಡು 'ನೋಟ್ ಬುಕ್ಕು' ತಾನೆ?” ಎಂದನು.

ಶೀನಪ್ಪನಿಗೆ ಆ ಮಾತು ವಿಚಿತ್ರವಾಗಿ ತೋರಿತು. “ಇವರಿಗೆ ಮದುವೆ ಸಂಭ್ರಮವಾದರೆ ನನ್ನ ಪುಸ್ತಕ ಯಾತಕ್ಕೆ ಹೋಗಬೇಕು?" ಎಂದು ಅವನು ಯೋಚಿಸಿದನು. “ತನ್ನನ್ನು ಕರೆಯುವುದಕ್ಕೆ ನಾಲ್ಕು ಜನ ಯಾತಕ್ಕೆ ಬರಬೇಕು? ಮನೆಯ ಯಜಮಾನ ಮಗಳ ಮದುವೆಯಲ್ಲಿ ತೊಡಗಿರುವುದನ್ನು ಬಿಟ್ಟು, ಏನೂ ಕೆಲಸವಿಲ್ಲದವನಂತೆ ಇಷ್ಟು ವಿರಾಮ ವಾಗಿ ಯಾಕೆ ತಿರುಗುತ್ತಿದಾನೆ" ಎಂದೂ ಮುಂತಾಗಿ ಅವನು ಯೋಚಿಸಲಾರಂಭಿಸಿದನು. ಆದರೆ ಅಷ್ಟು ಹೊತ್ತಿಗೆ ಪೈಲ್ವಾನನು ಪುಸ್ತಕಗಳೊಂದಿಗೆ ಹಿಂದಿರುಗಿದುದರಿಂದ, ಮುಂದಕ್ಕೆ ಯೋಚನೆಮಾಡದೆ ಅವರ ಕೂಡ ನಡೆದನು. ನೋಡುವವರಿಗೆ ಅವನು ನಾಲ್ಕು ಪೋಲಿಸ್ ಜವಾನರ ಮಧ್ಯದಲ್ಲಿ ಹೋಗುತ್ತಿದ್ದ ಖೈದಿಯಂತೆ ತೋರುತ್ತಿದ್ದನು. ಶೀನಪ್ಪನಿಗೇನೊ ಆ ರೀತಿ ತೋರದೆ ಇದ್ದಿರಬಹುದು. ಆದರೆ ಅವನಿಗೂ ಕೂಡ ಈ ದೃಶ್ಯವು ವಿಚಿತ್ರವಾಗಿಯೇ ಕಂಡಿತು.

ಮನೆಯನ್ನು ಮುಟ್ಟಿದ ಕೂಡಲೇ ಶೀನಪ್ಪನ ಅನುಮಾನವು ಮತ್ತಷ್ಟು ಹೆಚ್ಚಾಯಿತು. ಮನೆಯ ಬಾಗಿಲಲ್ಲಿ ಓಲಗದ ಧ್ವನಿಯು ಕೇಳಲೇ ಇಲ್ಲ. ಅಲ್ಲಿ ವಾದ್ಯಗಾರರು ಇರಲೇ ಇಲ್ಲ. ಅವನು ಮನೆಯ ಯಜಮಾನರನ್ನು ಕುರಿತು, “ಯಾಕೆ ಓಲಗವೆಲ್ಲಿ?” ಎಂದನು. ತಕ್ಷಣವೇ ಪೈಲ್ವಾನನು “ಓಲಗವು ಗಂಡಿನ ಬಿಡಾರಕ್ಕೆ ಹೋಗಿದೆ" ಎಂದನು. ಮದುವೆಯ ಸಂಭ್ರಮವೂ ಗದ್ದಲವೂ ಮನೆಯಲ್ಲಿ ತೋರಲೇ ಇಲ್ಲ. ಮೊದಲನೇ ದಿವಸ ಆ ಮನೆಗೆ ಕಟ್ಟಿದ್ದ ತೋರಣಗಳು ಈಗ ಮನೆಯ ಮೌನವನ್ನು ಹಾಸ್ಯ ಮಾಡುವಂತೆ ಇದ್ದುವು.

ಮನೆಯೊಳಕ್ಕೆ ಹೋದ ಕೂಡಲೆ ಶೀನಪ್ಪನ ತಲೆಗೆ ಎಣ್ಣೆಯನ್ನು ತಂದು ಇಟ್ಟರು. ಅವನು ತಪ್ಪು ಮಾಡಿದ ಹುಡುಗನಂತೆ ಕಣ್ಣುಬಿಟ್ಟನು. "ನನ್ನ ತಲೆಗೆ ಯಾಕೆ ಎಣ್ಣೆ?” ಎಂದನು. ಪೈಲ್ವಾನನು “ನಿನಗೆ ಅಭ್ಯಂಜನ ಸ್ನಾನ” ಎಂದನು. ಶೀನಪ್ಪನು “ನಿನ್ನ ಅಭ್ಯಂಜನ ಸ್ನಾನ ಯಾರಿಗೆ ಬೇಕಾಗಿತ್ತು, ನೆನ್ನೆ ತಾನೆ ಅಗಸನಿಂದ ಬಂದ 'ಕೋಟು' ಎಣ್ಣೆಯಾಗಿ ಹಾಳಾಯಿತು" ಎಂದು ಹುಬ್ಬನ್ನು ಗಂಟುಹಾಕಿದನು. ಪೈಲ್ವಾನನು "ಆ ಕೋಟು ಹೋದರೆ ಹೊಸ ಕೋಟು ಕೊಡುತ್ತೇನೆ” ಎಂದು ಒಂದು ಸಾರಿ ಕಣ್ಣುಬಿಟ್ಟನು. ಸದ್ಯಕ್ಕೆ ಪೈಲ್ವಾನನೇ ಮನೆಯ ಆಡಳಿತವನ್ನೆಲ್ಲಾ ವಹಿಸಿಕೊಂಡಿರುವಂತೆ ತೋರಿತು. ಶೀನಪ್ಪನಿಗೆ ಅವನ ಕಣ್ಣನ್ನು ನೋಡಿ ಗಾಬರಿಯಾಯಿತು. “ಇವನ ಮನೆ ಹಾಳಾಗ, ಏನು ಬೇಕಾದರೂ ಆಗಲಿ, ಸದ್ಯ ಏಟು ತಪ್ಪಿದರೆ ಸಾಕು" ಎಂದು ಅವನು ಅಭ್ಯಂಜನ ಮಾಡಿಕೊಂಡನು. ಮುಂದೆ ಏನು ಬರುತ್ತೊ ಎಂದು ಅವನು ಕೌತುಕದಿಂದ ನೋಡುತ್ತಿರುವಾಗ, ಪೈಲ್ವಾನನು ಅವನನ್ನು “ಹಸೆ ಮಣೆಗೆ ಬಾ” ಎಂದು ಗರ್ಜಿಸಿದನು. ಶೀನಪ್ಪನು "ನೀನೆ ಹೋಗು ಹಸೆ ಮಣೆಗೆ, ನಾನೇನು ಮದವಣಿಗನೆ ಹಸೆ ಮಣೆಗೆ ಬರುವುದಕ್ಕೆ?" ಎಂದನು. ಪೈಲ್ವಾನನು ಕಣ್ಣನ್ನು ಕೆಂಪಗೆ ಮಾಡಿಕೊಂಡು “ನೀನು ಮದವಣಿಗ ಹೌದು. ನಿನಗೇ ಈವತ್ತು ಮದುವೆ" ಎಂದನು. ಕೇಳಿ ಶೀನಪ್ಪನಿಗೆ ಸಿಡಿಲು ಬಡಿದಂತಾಯಿತು.

ಪೈಲ್ವಾನನ ಮುಖವನ್ನು ನೋಡಿದ ಕೂಡಲೆ, ಅವನು ವಿನೋದಕ್ಕಾಗಿ ಹೇಳಲಿಲ್ಲವೆಂಬುದು ಗೊತ್ತಾಯಿತು. ಅವನ ಮಾತಿನ ಜೊತೆಯಲ್ಲಿಯೇ ಹಸೆಯ ಮಣೆಯು ಸಿದ್ಧವಾಯಿತು. ಶೀನಪ್ಪನಿಗೆ ಮಂಕು ಕವಿದುಕೊಂಡಿತು. ತಾನು ಎಲ್ಲಿರುವೆನೆಂಬುದೇ ಅವನಿಗೆ ಗೊತ್ತಾಗಲಿಲ್ಲ. ಇದೇನು ಸ್ವಪ್ನವೋ ಎಚ್ಚರವೋ ಎಂದು ಅವನು ತನ್ನನ್ನು ತಾನೇ ಕೇಳಿಕೊಳ್ಳಹತ್ತಿದನು. ಪೈಲ್ವಾನನು ಅವನ ಕೈಯನ್ನು ಹಿಡಿದುಕೊಂಡು "ಹಸೆಯ ಮಣೆಗೆ ಬರುತ್ತೀಯೋ ಇಲ್ಲವೊ” ಎಂದನು. ಅವನ ಹಿಡಿತವು ಕಬ್ಬಿಣದ ಮುಷ್ಟಿಯಂತಿದ್ದಿತು. ಶೀನಪ್ಪನ ಕೈ ಬಹಳ ನೋಯುವುದಕ್ಕೆ ಪ್ರಾರಂಭವಾಯಿತು. ಮರಣ ದಂಡನೆಗೆ ಗುರಿಮಾಡಲ್ಪಟ್ಟವನಂತೆ ಅವನು ಅತ್ತನು. ಮುಂದೆ ತನ್ನ ಮಾವನಾಗುವನನ್ನು ಗೋಗರೆದನು. ಪೈಲ್ವಾನನನ್ನು ಬೈದು ಗದರಿಸಿದನು. “ನಿಮ್ಮ ಹುಡುಗಾಟ ಇಷ್ಟು ಸಾಕು. ನಿಮ್ಮ ಪುಣ್ಯಕ್ಕೆ ಇನ್ನು ಬಿಟ್ಟುಬಿಡಿ" ಎಂದು ಬೇಡಿದನು. ಇವನ ಮಾತಿಗೆ ಯಾರೂ ಗಮನವನ್ನು ಕೊಡಲಿಲ್ಲ. ಇವನ ಮೇಲೆ ಇಟ್ಟ ಕೆಂಗಣ್ಣನ್ನು ಪೈಲ್ವಾನನು ಆಚೆಗೆ ತಿರುಗಿಸಲಿಲ್ಲ. ಇವನ ಕೈ ಅವನ ಕೈಯಲ್ಲಿಯೇ ಸೆರೆ ಸಿಲುಕಿಬಿಟ್ಟಿತು. ಚಿಕ್ಕ ಹುಡುಗಿಯರು ಸುತ್ತಲೂ ನಗುತ್ತಾ ಇದ್ದರು. ಒಬ್ಬಿಬ್ಬರು ಹೆಂಗಸರು ಅವನಿಗೆ ಕೇಳುವಂತೆಯೇ “ಇವನಿಗೇನು ರೋಗ, 'ಕರೆದು ಹೆಣ್ಣು ಕೊಟ್ಟರೆ ಮೊಲ್ಲೊಗರ ಬಂತು' ಅ೦ತ ಗೊಳೋ ಅಂತ ಅಳ್ತಾನೆ!” ಎಂದರು. ಇದನ್ನೆಲ್ಲಾ ಕೇಳಿ ಶೀನಪ್ಪನಿಗೆ ದು:ಖವೂ ಕೋಪವೂ ಉಂಟಾಯಿತು. ಆ ಮನೆಯನ್ನು ಬಿಟ್ಟು ಬಿಡಬೇಕೆಂದು ಅವನು ಪ್ರಯತ್ನ ಪಟ್ಟನು. ಧಾಂಡಿಗನು ಕೈಯನ್ನು ಹಿಡಿದುಕೊಂಡಿದ್ದುದರಿಂದ ಅದು ಸಾಧ್ಯವಾಗಲಿಲ್ಲ. ಗಟ್ಟಿಯಾಗಿ ಕಿರಿಚಿ ಪೋಲಿಸಿನವರು ಅಲ್ಲಿಗೆ ಬರುವಂತೆ ಮಾಡಬೇಕೆಂದು ಯೋಚಿಸಿದನು. ಆದರೆ, ಬಾಯಿಯಿಂದ ಧ್ವನಿಯೇ ಹೊರಡಲಿಲ್ಲ. ಅವರಿಗೆಲ್ಲಾ ಒಂದು ಉಪನ್ಯಾಸ ಮಾಡಿ ಬಲಾತ್ಕಾರ ವಿವಾಹದ ಅನರ್ಥಗಳನ್ನು ಅವರಿಗೆ ವಿವರಿಸಬೇಕೆಂದು ಯೋಚಿಸಿದನು. ಅವನ ಮೆದುಳು ವಿಕಾರವನ್ನು ಹೊಂದಿಬಿಟ್ಟಿದ್ದಿತು. ನಾಲಗೆಯು ತೊದಲಿ ಹೋಯಿತು. ಬಾಯಿಯಿಂದ ಮಾತೇ ಹೊರಡಲಿಲ್ಲ. ಸುತ್ತ ನಿಂತಿದ್ದವರಿಗೆ ಇವನು ಸುಮ್ಮನೆ ತುಟಿಗಳನ್ನು ಅಲ್ಲಾಡಿಸುತ್ತಿರುವುದು ಮಾತ್ರ ಕಾಣುತ್ತಿದ್ದಿತು.

ಪೈಲ್ವಾನನು ಅವನನ್ನು ಹಸೆಯ ಮಣೆಗೆ ಎಳೆದುಕೊಂಡು ಬಂದನು. ಪುರೋಹಿತನು ಭಯಂಕರವಾದ ಧ್ವನಿಯಲ್ಲಿ “ಓಂ ನಮಃಸ್ಸದಸೇ" ಎಂದು ಪ್ರಾರಂಭಿಸಿದನು. ಬಾಗಿಲಿನಲ್ಲಿ ವಾದ್ಯದವರು ಓಲಗವನ್ನು ಊದಿದರು. ಹೆಣ್ಣನ್ನು ಹಸೆಯ ಮಣೆಯ ಮೇಲೆ ತಂದು ಕೂರಿಸಿದರು. ಸುಮಂಗಲೆಯರು ಹಾಡುಗಳನ್ನು ಹಾಡಿದರು. ಉತ್ತರ ಕ್ಷಣದಲ್ಲಿಯೇ ಸುಮುಹೂರ್ತಾ ಸಾವಧಾನ; ಸುಲಗ್ನಾ ಸಾವಧಾನ" ಆಗಿಹೋಯಿತು. ಇದೆಲ್ಲಾ ನಡೆಯುತ್ತಿರುವಾಗ ಶೀನಪ್ಪನು ಸ್ವಪ್ನ ರಾಜ್ಯದಲ್ಲಿದ್ದಂತೆ ಇದ್ದನು.

ಮದುವೆಯಾದ ಮೇಲೆ ಶೀನಪ್ಪನು "ನಾನು ಇನ್ನು ೧೨ ವರ್ಷ ನಿಷೇಕ ಪ್ರಸ್ತಮಾಡಿಕೊಳ್ಳುವುದಿಲ್ಲ" ಎನ್ನುತ್ತಿದ್ದನು. ಈಗ ಅವನ ಹೆಂಡತಿ ದೊಡ್ಡವಳಾಗಿ ಇನ್ನೂ ೬ ವರ್ಷ ಪೂರ್ತಿಯಾಗಿಲ್ಲ. ಮೂರು ಮಕ್ಕಳಿವೆ. ಮದುವೆಯಲ್ಲಿ ಪೈಲ್ವಾನನಾಗಿದ್ದವನು ಈಗ ಆವನ ಪರಮ ಮಿತ್ರನಾಗಿದ್ದಾನೆ.



ನಮ್ಮ ಊರ ಬಸ್ಸು


ನಮ್ಮ ಊರಿನ ಬಸ್ಸಿನ ವಿಚಾರ ಕೇಳಿದರೆ ನಿಮಗೆ ನಕ್ಕು ಹೊಟ್ಟೆ ಹುಣ್ಣಾಗಿ ಬಿಡುತ್ತೆ. ಕುಲಮೂಲವನ್ನೂ ಋಷಿಮೂಲವನ್ನೂ ಕೇಳಕೂಡದಂತೆ, ಹಾಗೆಯೇ ನಮ್ಮ ಊರಿನ ಬಸ್ಸಿನ ಮೂಲವನ್ನೂ ನೀವು ಕೇಳಕೂಡದು. ಅದಕ್ಕೆ ಸಂಬಂಧಪಟ್ಟ ಒಂದೆರಡು ವಿಷಯಗಳನ್ನು ಮಾತ್ರ ನಿಮಗೆ ಹೇಳಿಬಿಡುತ್ತೇನೆ; ಅಷ್ಟೆ,

ಆ ದಿವಸ ಮಧ್ಯಾಹ್ನ ಗಂಟೆ ಸುಮಾರು ಹನ್ನೆರಡು ಇದ್ದಿರಬಹುದು. ಸೂರ್ಯನನ್ನು ಮೋಡಗಳು ಮುತ್ತಿಗೆ ಹಾಕಿಬಿಟ್ಟಿದ್ದುವು. ಮಿತಿಯಿಲ್ಲದೆ ನನ್ನ ಗದ್ದೆಯಮೇಲೆ ಹರಿಯುತ್ತಿದ್ದ ನಾಲೆಯ ನೀರಿನ ಪ್ರವಾಹವನ್ನು ಬೇರೆ ಕಡೆಗೆ ತಿರುಗಿಸಲು ಪ್ರಯತ್ನಿಸುತ್ತಾ, ಕೈಯಲ್ಲೊಂದು ಗುದ್ದಲಿಯನ್ನು ಹಿಡಿದುಕೊಂಡು ಗದ್ದೆಯ ಬದುವನ್ನು ಅಗೆಯುತ್ತಾ ನಿಂತಿದ್ದೆ. ಮಗ್ಗಲು ಗದ್ದೆಯಲ್ಲಿ ನಮ್ಮ ಆಳು ಬೋರನೂ ಅದೇ ಕೆಲಸವನ್ನು ಮಾಡುತ್ತಾ ನಿಂತಿದ್ದ. ಬೋರನಿಗೆ ವಯಸ್ಸು ೬೦. ನನಗೆ ೨೦. ಬೋರನು ಪದೇ ಪದೇ “ನೀವೆಲ್ಲಾ ಪುಳ್ಚಾರಿನ ಹಾರುವರು, ತುಪ್ಪ ಮೊಸರು ಕಾಫಿ ಕುಡಿಯೋದಕ್ಕೆ ಸರಿ. ನನ್ನ ಹಾಗೆ ಒಂದು ದಿವಸ ಈ ಗದ್ದೆಯ ಕೆಸರಿನಲ್ಲಿ ನಿಂತು ಕೆಲಸ ಮಾಡಿದರೆ ಆಮೇಲೆ ೧೫ ದಿವಸ ಬೇನೆಯಿಂದ ನರಳುತ್ತೀರಿ” ಎಂದ.

ನಾನು “ಆ ಕಾಲುವೆಯನ್ನು ನೀನು ತೆಗೆ; ನಾನು ಈ ಕಾಲುವೆಯನ್ನು ತೆಗೆಯುತ್ತೇನೆ. ಯಾರು ಮುಂಚೆ ಅಚ್ಚುಕಟ್ಟಾಗಿ ಕೆಲಸ ಮಾಡುತ್ತಾರೋ ನೋಡೋಣ” ಎಂದೆ.

ಬೋರನು ಒಪ್ಪಿಕೊಂಡ. ಅವನು ಒಪ್ಪಿಕೊಳ್ಳದೆ ಇದ್ದಿದ್ದರೆ ಚೆನ್ನಾಗಿತ್ತು. ಹೆಮ್ಮೆ ಕೊಚ್ಚಿಕೊಂಡ ಮೇಲೆ ಕೆಲಸ ಮಾಡದಿದ್ದರೆ ವಿಧಿಯಿರಲಿಲ್ಲ. ಬೋರನು ಮುದಿ ಎತ್ತಿನಂತೆ ಒಂದೇ ಸಮನಾಗಿ ದುಡಿಯಲು ಪ್ರಾರಂಭಿಸಿಬಿಟ್ಟನು. ಅವನಿಗೆ ಬೇಸರಿಕೆಯಾಗಲಿ ಕಷ್ಟವಾಗಲಿ ಆದಂತೆ ತೋರಲಿಲ್ಲ. ಪುಳ್ಚಾರಿನವನಾದ ನನಗೆ ಗುದ್ದಲಿಯಿಂದ ನಾಲ್ಕು ಪೆಟ್ಟು ನೆಲಕ್ಕೆ ಬಿಡುವ ವೇಳೆಗೆ ಮೈಯೆಲ್ಲಾ ಬೆವತುಹೋಯಿತು. ಸೊಂಟ ನೋಯುವುದಕ್ಕೆ ಪ್ರಾರಂಭವಾಯಿತು. ಇವನ ಹತ್ತಿರ ಅನ್ಯಾಯವಾಗಿ ಹಟ ತೊಟ್ಟು ಕೆಟ್ಟೆನಲ್ಲಾ ಎನ್ನಿಸಿತು. ಸುಧಾರಿಸಿಕೊಳ್ಳಲು ಒಂದು ಗಳಿಗೆ ನಿಲ್ಲುವುದಕ್ಕೂ ನನಗೆ ಧೈರ್ಯವಿರಲಿಲ್ಲ. ನಿಂತರೆ ಕೆಲಸವು ಹಿಂದಾಗುವುದು. ಬೋರನು "ನಾನು ಹೇಳಲಿಲ್ಲವೆ? ತುಪ್ಪ ತಿಂದ ಮೈ ತುಪ್ಪದಂತೆ ಮೆದು” ಎಂದು ಬಿಡುತ್ತಿದ್ದನೆಂಬ ಭಯ. ಈ ಉಭಯ ಸಂಕಟಕ್ಕೆ ಸಿಲುಕಿ ಹಾಗೂ ಹೀಗೂ ಅಗೆಯುತ್ತಾ ಇದ್ದೆ.

ಒಮ್ಮಿಂದೊಮ್ಮೆ ಬೋರನು ಗುದ್ದಲಿಯನ್ನು ಕೆಳಗಿಟ್ಟು ಗಾಳಿಗೆ ಕಿವಿಗೊಟ್ಟು ಆಲಿಸತೊಡಗಿದನು. ಸದ್ಯ ಸಮಯ ದೊರೆತದ್ದೇ ಸಾಕೆಂದು ನಾನೂ ಗುದ್ದಲಿಯನ್ನು ಕೆಳಗಿಟ್ಟು-

"ಏನು ಬೋರ, ಆಕಾಶವಾಣಿ ಕೇಳುತ್ತಿರುವುದೊ? ಅಥವ ದೇವಸ್ತ್ರೀಯರೇನಾದರೂ ನಿನ್ನ ಕಿವಿಯಲ್ಲಿ ಗುಟ್ಟನ್ನು ಹೇಳುತ್ತಿರುವರೋ" ಎಂದೆ.

ಬೋರನು ನನ್ನ ಮಾತಿಗೆ ಲಕ್ಷ್ಯವನ್ನು ಕೊಡಲಿಲ್ಲ. ಜಿಗುಪ್ಪೆಯಿಂದ, “ತಡೀರಿ ಸ್ವಾಮಿ" ಎಂದುಬಿಟ್ಟು ಮೊದಲಿನಂತೆಯೇ ಆಲಿಸುವುದಕ್ಕೆ ಪ್ರಾರಂಭಿಸಿದ. ನೋಡೋಣವೆಂದು ನಾನೂ ಕಿವಿಗೊಟ್ಟು ಕೇಳಿದೆ. ದೂರದಲ್ಲಿ ಗುಡುಗಿನಂತೆ ಶಬ್ದವಾಗುತ್ತಲಿದ್ದಿತು. ಪ್ರತಿ ಕ್ಷಣದಲ್ಲೂ ಹೆಚ್ಚು ಹೆಚ್ಚಾಗಿ ಕೇಳಿಸುತ್ತಿದ್ದಿತು. ಆಕಾಶವಿಮಾನವೇನಾದರೂ ನಮ್ಮ ಮೇಲೆ ಹೋಗುತ್ತಿರುವುದೇನೋ ಎಂದು ಅಂತರಿಕ್ಷದಕಡೆ ನೋಡಿದೆ. ಒಂದೆರಡು ಹಕ್ಕಿಗಳು ಮಾತ್ರ ಕಂಡವು. ಸ್ವಲ್ಪ ಹೊತ್ತಿನೊಳಗಾಗಿ ಶಬ್ದವು ಬಹಳ ಜೋರಾಗಿಯೂ ಸ್ಪಷ್ಟವಾಗಿಯೂ ಕೇಳಿಸಿತು. ಬೋರನು “ಇದೆಂತಹ ಶಬ್ದ ಸ್ವಾಮಿ, ಭೂಮಿಯೇ ನಡುಗುವಂತೆ ತೋರುತ್ತದೆ" ಎಂದನು. ನಾನು ನಗುತ್ತಾ "ಭೂಮಿಯ ನಡುಗುವುದಿಲ್ಲ ಆಕಾಶವೂ ನಡುಗುವುದಿಲ್ಲ, ಈ ಕಡೆಗೆ ಯಾವುದೋ ಮೋಟಾರ್ ಬರುತ್ತಿರಬೇಕು” ಎಂದೆ. ಬೋರನು "ಮೋಟಾರ್ ಅಲ್ಲ ಸ್ವಾಮಿ, ನಾನೇನು ಮೋಟಾರ್ ಕಂಡಿಲ್ಲವೆ. ಮೋಟಾರ್ ಎಂದಿಗೂ ಇಷ್ಟು ಶಬ್ದ ಮಾಡುವುದಿಲ್ಲ” ಎಂದನು. ಬೋರನ ಮಾತು ಮುಗಿಯುವುದರೊಳಗಾಗಿ ದೂರದಲ್ಲಿ ರಸ್ತೆಯಲ್ಲಿ ನಮ್ಮ ಕಣ್ಣಿಗೆ ಬಸ್ ಕಂಡಿತು. ಬೋರನು “ಅದೇನು ಸ್ವಾಮಿ? ಪಿಶಾಚಿಯಂತೆ ಬರುತ್ತಿದೆ. ಹಾವಿನಂತೆ ರಸ್ತೆಯ ಈಚೆಗೂ ಆಚೆಗೂ ನಲಿದಾಡುತ್ತ ಬರುತ್ತಿದೆಯಲ್ಲ?" ಎಂದನು. ನಾನು “ಇದು ಬಸ್" ಎಂದೆ. ನನಗೆ ಬಹಳ ಆನಂದವಾಯಿತು. “ನಮ್ಮೂರಿಗೂ ಒಂದು ಬಸ್ ಬಂದಿತು. ನಾಗರೀಕತೆಯ ತುದಿಯನ್ನು ಏರಿಬಿಟ್ಟೆವು ನಾವು" ಎಂದು ನಾನು ಕುಣಿದಾಡತೊಡಗಿದೆನು.

ನಮ್ಮೆದುರಿಗೆ ಬಂದಮೇಲೆ ಕೂಡ, ಅದು ಬಸ್ ಎಂದು ತಿಳಿಯುವುದೇ ನನಗೆ ಕಷ್ಟವಾಯಿತು. ಪ್ರಯಾಣಿಕರು ಕುಳಿತುಕೊಳ್ಳುವುದಕ್ಕಾಗಿ ಎಂದು ಅದನ್ನು ಮಾಡಿದ್ದರೂ ಅದಕ್ಕೆ ಕಮಾನಾಗಲಿ ಮುಸುಕಾಗಲಿ ಇರಲಿಲ್ಲ. ಅದೊಂದು ದೊಡ್ಡ ಒಡ್ಡರ ಬಂಡಿಯಂತೆ ತೋರುತ್ತಿದ್ದಿತು. ಅದರ ಯಜಮಾನನು ಅದನ್ನು ಕೊಂಡುಕೊಂಡ ಕತೆಯೂ ಬಹಳ ವಿನೋದವಾಗಿದೆ. ಸಕಲೇಶಪುರಕ್ಕೆ ಹೋಗುವಾಗ ಆ ಬಸ್ಸು ದಾರಿಯಲ್ಲಿ ಎಲ್ಲೋ ಒಂದು ಹಳ್ಳಕ್ಕೆ ಬಿದ್ದು ಹೋಯಿತಂತೆ. ದೇವರದಯದಿಂದ ಯಾರಿಗೂ ಪೆಟ್ಟಾಗಲಿಲ್ಲ. ಮೇಲಕ್ಕೆ ಎತ್ತುವುದಕ್ಕಾಗದೆ ಅದು ೬ ತಿಂಗಳು ಆ ಹಳ್ಳದಲ್ಲಿಯೇ ಬಿದ್ದಿದ್ದಿತಂತೆ. ಕೊನೆಗೆ ಬಸ್ಸಿನ ಒಡೆಯನು "ಇದನ್ನು ಯಾರು ಬೇಕಾದರೂ ಎತ್ತಿಕೊಂಡು ಉಪಯೋಗಿಸಿಕೊಳ್ಳಿ, ನನ್ನದು ಅಭ್ಯಂತರವಿಲ್ಲ" ಎಂದನಂತೆ. ಕೂಡಲೆ ಈಗಿನ ಬಸ್ಸಿನ ಈ ಯಜಮಾನನು ಅದಕ್ಕೆ ಒಂದು ಹಗ್ಗವನ್ನು ಕಟ್ಟಿ, ೨ ಜೊತೆ ಎತ್ತುಗಳಿಂದ ಬಹಳ ಕಷ್ಟಪಟ್ಟು ಮೇಲಕ್ಕೆ ಎಳಸಿದನಂತೆ, ಅದರ 'ಸೀಟು, ಕಮಾನು' ಮುಂತಾದುವುಗಳನ್ನೆಲ್ಲ ಗೆದ್ದಲು ತಿಂದುಹಾಕಿಬಿಟ್ಟಿದ್ದಿತು. ಏನೋ ಸ್ವಲ್ಪ 'ರಿಪೇರಿ' ಮಾಡಿ ಹಳ್ಳಿಯವರಿಗೆ ಇರಲಿ ಎಂದು ನಮ್ಮೂರಿಗೆ ಇಟ್ಟುಬಿಟ್ಟ.

ಬಸ್ಸಿನ ಧ್ವನಿ ಸುಮಾರು ೪ ಮೈಲು 'ಕಿರೋ' ಎಂದು ಕೇಳುತ್ತದೆ. ನಮ್ಮ ಹಳ್ಳಿಯಲ್ಲಿ ಯಾರಾದರೂ ಗಟ್ಟಿಯಾಗಿ ಕಿರಚಿದರೆ “ಬಸ್ಸು ಕಿರಚಿದಂತೆ ಅವನು ಕಿರಚುತ್ತಾನೆ” ಎನ್ನುತ್ತಾರೆ. ಒಂದು ದಿವಸ ನಾನು ನಮ್ಮೂರ ಈ ಬಸ್ಸಿನಲ್ಲಿ ಹಾಸನಕ್ಕೆ ಹೋಗಬೇಕಾಯಿತು. ನಾನು ಕುಳಿತಿದ್ದ ಸ್ಥಳದಲ್ಲಿ, ಬಸ್ಸಿನ ನೆಲದಮೇಲೆ ಹಾಸಿದ್ದ ಹಲಗೆ ತೂತುಬಿದ್ದಿದ್ದಿತು. ಬಸ್ಸು ಹೊರಟ ಕೂಡಲೇ ಅದರಿಂದ ಹೊಗೆಯು ಹೊರಡಲು ಪ್ರಾರಂಭವಾಯಿತು. ಹೊಗೆಯು ಬಸ್ಸನ್ನೆಲ್ಲಾ ತುಂಬಿಕೊಂಡಿತು. ನಾನು ಧರಿಸಿಕೊಂಡು ಹೋಗಿದ್ದ ಬಿಳಿಯ ಬಟ್ಟೆಗಳು, ನನ್ನ ಮೈ, ಎಲ್ಲಾ ರೈಲ್ವೆ ಇಂಜಿನ್ ಡ್ರೈವರನ ಮೈಯಂತೆ, ಕಪ್ಪಾಗಿ ಹೋದುವು. ಹಾಸನದಲ್ಲಿ ಈ ಕಪ್ಪನ್ನು ತೊಳೆಯುವುದಕ್ಕೆ ಒಂದು ಹಂಡೆ ನೀರನ್ನು ಎಲ್ಲಿ ಒದಗಿಸುವುದೆಂಬುದೇ ನನಗೆ ಯೋಚನೆಯಾಯಿತು. ಆಗ ನನ್ನ ಮುಖವನ್ನು ಯಾರಾದರೂ ನೋಡಿದರೆ ಗಾಬರಿಯಿಂದ ಹೆದರಿ ಓಡುತ್ತಿದ್ದರು. ಸ್ವತಃ ನನಗೇ ನನ್ನ ಗುರುತು ಹತ್ತಲಿಲ್ಲ. ಬಸ್ಸಿನಲ್ಲಿ ನಾನು ಕುಳಿತುದು ಅದೇ ಮೊದಲನೆಯ ಸಲವಾದುದರಿಂದ, ಈ ನನ್ನ ವೇಷವೂ ಅದರ ಆನಂದಕ್ಕೆ ಸೇರಿದುದೇನೋ? ಎಂದುಕೊಂಡೆ.

೨.ವ್ಯಾಸ್ಕೊಡಗಾಮನು ಏಜೆಂಟ್ ಆದುದು

ನಮ್ಮ ಊರ ಬಸ್ಸಿಗೆ ಏಜೆಂಟುಗಳ ಕಾಟ ಹೇಳಿತೀರದು. “ದೇಹಕ್ಕಿಂತ ಬಾಲವೇ ಭಾರ"ವೆಂಬಂತೆ ನಮ್ಮೂರಿನ ಬಸ್ ಯಜಮಾನನಿಗೆ ದೊರೆಯುವ ಪ್ರಯಾಣಿಕರಿಗಿಂತ ಟಿಕೆಟ್ ಮಾರುವ ಏಜೆಂಟುಗಳ ಸಂಖ್ಯೆಯೇ ಹೆಚ್ಚು. ಒಂದು ಬಸ್ಸಿಗೆ ೪ ಏಜೆಂಟುಗಳು. ಒಂದುಸಲ ಈ ಏಜೆಂಟುಗಳ ಸಂಖ್ಯೆಯು ಎಂಟಕ್ಕೆ ಏರಿತ್ತು. ಅನೇಕ ದಿವಸ ಪ್ರಯಾಣಿಕರು ದೊರಕುವುದೇ ಕಷ್ಟವಾದರೂ, ಬಸ್ಸೇನೋ ಈ ಏಜೆಂಟುಗಳಿಂದ ತುಂಬಿಹೋಗುತ್ತದೆ. ಸಾಮಾನ್ಯವಾಗಿ ಯಾರು ಯಾರು ದುಡ್ಡು ಕೊಟ್ಟು ಪ್ರಯಾಣಮಾಡಬೇಕೊ, ಅಂತವರೆಲ್ಲಾ ಏಜೆಂಟುಗಳೇ ಆಗಿಬಿಟ್ಟರೆ ಪಾಪ, ಬಸ್ಸಿನ ಯಜಮಾನನ ಗತಿ ಏನು? ಮೊದಲು ನಮ್ಮೂರ 'ವ್ಯಾಸ್ಕೊಡಗಾಮ' ಇದಕ್ಕೆ ಏಜೆಂಟ್ ಆದ. ಓಹೊ ಮರೆತೆ, ವ್ಯಾಸ್ಕೊಡಗಾಮನೆಂದರೆ ಯಾರೆಂಬುದನ್ನೇ ನಿಮಗೆ ತಿಳಿಸಲಿಲ್ಲ. ಪೋರ್ಚುಗೀಸರು ಇಲ್ಲಿ ಎಲ್ಲಿ ಬಂದರೆಂಬುದಾಗಿ ಯೋಚಿಸಬೇಡಿ. ಇವನಿಗೆ 'ವ್ಯಾಸ್ಕೊಡಗಾಮ'ನೆಂದು ಹೆಸರು ಬರಲು ಕಾರಣವನ್ನು ಹೇಳುತ್ತೇನೆ. ನಮ್ಮ ಊರು ಮಲೆನಾಡ ಹಳ್ಳಿ. ಅಲ್ಲಿ ಹಿಂದಲಿಂದಲೂ ಅಂಗಡಿ ಯಾವುದೂ ಇರಲಿಲ್ಲ. ಗ್ರಾಮಸ್ಥರು ಯಾವ ಸಾಮಾನು ಬೇಕಾದರೂ, ಸುತ್ತಮುತ್ತಲ ಸಂತೆಗಳಿಗೆ ಹೋಗಿ ತರುತ್ತಿದ್ದರು. ಆಗ ನಮ್ಮ ಊರಿನಲ್ಲಿ ಮೊದಲು ನಿಂಗನು ವ್ಯಾಪಾರವನ್ನು ಪ್ರಾರಂಭಿಸಿದ. ವ್ಯಾಪಾರಕ್ಕಾಗಿ ಹಿಂದೂ ದೇಶಕ್ಕೆ ಮೊದಲು ಬಂದವನು ವ್ಯಾಸ್ಕೊಡಗಾಮ ತಾನೆ. ಆದುದರಿಂದ, ಅದಾವುದೋ ತರ್ಕದಿಂದ ಈ ಎರಡು ಹೆಸರುಗಳನ್ನೂ ಒಟ್ಟಾಗಿ ಸೇರಿಸಿ ಹುಡುಗರು ನಿಂಗನನ್ನು 'ವ್ಯಾಸ್ಕೊಡಗಾಮ'ನೆಂದು ಕರೆಯಲು ಪ್ರಾರಂಭಿಸಿಬಿಟ್ಟರು. ಈಚೆಗೆ ಅವನಿಗೆ ಆ ಹೆಸರೇ ನಿಂತುಹೋಯಿತು. ಇರಲಿ. ಈ ವ್ಯಾಸ್ಕೊಡಗಾಮನಿಗೆ ಸಾಮಾನು ತರುವುದಕ್ಕೆ ಪದೇ ಪದೇ ಗಾಡಿಯ ಆವಶ್ಯಕತೆಯಿದ್ದುದರಿಂದ, ಅವನು ಉಪಾಯವಾಗಿ ಮೊದಲು ಏಜೆಂಟ್ ಆದನು. ಇದರಿಂದ ಅವನಿಗೆ ಹಾಸನಕ್ಕೆ ಹೋಗುವ ಪ್ರಯಾಣದ ಖರ್ಚು ಪೂರ್ತಾ ಉಳಿದು ಹೋಗುತ್ತಿದ್ದಿತು. ಎಷ್ಟು ಸ್ವಲ್ಪ ಸಾಮಾನು ಬೇಕಾದರೂ ಬಸ್ಸಿನಲ್ಲಿ ಹೋಗಿ ತಂದುಬಿಡುತ್ತಿದ್ದನು. ಒಂದು ದಿವಸ ನಾನೂ ಅವನ ಜೊತೆಯಲ್ಲಿ ಹಾಸನಕ್ಕೆ ಹೋದೆ. ಅವನು ಅಲ್ಲಿ ಒಂದು ಒಳ್ಳೆಣ್ಣೆ ಡಬ್ಬಿ ಕೊಂಡು ಬಸ್ಸಿನಲ್ಲಿಟ್ಟನು. ಆ ಡಬ್ಬ ನಮ್ಮೂರಿನಂತಹ ಚಿಕ್ಕಹಳ್ಳಿಯಲ್ಲಿ ಖರ್ಚಾಗಬೇಕಾದರೆ ೪ ತಿಂಗಳು ಬೇಕು. ಹಾಗೆ ಖರ್ಚಾದನಂತರ ಉಳಿಯುವ ಲಾಭ ೪ ಆಣೆ ಮಾತ್ರ. ವ್ಯಾಸ್ಕೊಡಗಾಮನು ಬಸ್ಸಿನಲ್ಲಿ ಅದರ ಜೊತೆಯಲ್ಲಿಯೇ ಒಂದು ಚಿಕ್ಕ ಸಕ್ಕರೆಯ ಗಂಟನ್ನೂ ಇಟ್ಟನು. ಅಂತು ಬಸ್ಸು ನಮ್ಮೂರಿನ ಕಡೆ ಹೊರಟಿತು.

ಅದರ ಕಿರೋ ಎಂಬ ಶಬ್ದದಿಂದ ನಮ್ಮ ಕಿವಿ ಮರವಾಗಿ ಹೋಯಿತು. ಬಸ್ಸಿನಲ್ಲಿ ಆ ದಿವಸ ದುರದೃಷ್ಟವಶಾತ್ ನಾನು, ವ್ಯಾಸ್ಕೊಡಗಾಮ ಇಬ್ಬರೇ ಇದ್ದೆವು. ನೀವು ಬಸ್ಸಿನಲ್ಲಿ ಕುಳಿತಿದ್ದರೆ ನಿಮಗೆ ಗೊತ್ತಾಗುತ್ತೆ. ಬಸ್ಸು ತುಂಬಿ ಅದರಲ್ಲಿ ಹೆಚ್ಚು ಜನರಿದ್ದರೆ ಅದು ಕುಲುಕಾಡುವುದಿಲ್ಲ-ದೋಣಿಯಂತೆ-ಇಲ್ಲದಿದ್ದರೆ ಒಳಗೆ ಕುಳಿತಿರುವವರ ಕರುಳೆಲ್ಲಾ ಅಲ್ಲಾಡಿ ಹೋಗುತ್ತೆ. ಮಲೆನಾಡಿನ ರಸ್ತೆಯಂತೂ ದೇವರೇ ಗತಿ. ನಾವು ಬೀಳದಂತೆ ಹಿಡಿದುಕೊಂಡು ಕುಳಿತುಕೊಳ್ಳುವುದೇ ನಮಗೆ ಸಾಕಾಗಿ ಹೋಯಿತು. ವ್ಯಾಸ್ಕೊಡಗಾಮನ ಮೂಗು ಮುಂದಲ 'ಸೀಟಿಗೆ' ತಗಲಿ ಸ್ವಲ್ಪ ಪೆಟ್ಟೇ ಆಯಿತು. ಆದರೆ ಅವನು 'ಟಿಕೆಟ್ 'ಗೆ ದುಡ್ಡು ಕೊಟ್ಟಿರಲಿಲ್ಲ. ಕಷ್ಟ ವಿಲ್ಲದೆ ಸುಖ ಬರುತ್ತದೆಯೆ? ನೋವಿಲ್ಲದೆ ದುಡ್ಡು ಉಳಿಯುತ್ತದೆಯೆ? ಒಂದುಕಡೆ ರಸ್ತೆ ಸ್ವಲ್ಪ ಹಳ್ಳವಾಗಿದ್ದಿತು. ಬಸ್ಸು ಬೆದರಿದ ಕುದುರೆಯಂತೆ ನೆಗೆದು ಕೆಳಕ್ಕೆ ಕುಕ್ಕರಿಸಿತು. ಆದರೆ ನಿಲ್ಲಲಿಲ್ಲ. ಮುಂದಕ್ಕೆ ಹೊರಟಿತು. ಆ ಕುಕ್ಕರಿಸಿದ ವೇಗಕ್ಕೆ ವ್ಯಾಸ್ಕೊಡಗಾಮನು ಕುಳಿತಿದ್ದ 'ಸೀಟಿನ' ಮೆತ್ತೆಯು ಕೆಳಕ್ಕೆ ಬಿದ್ದುಹೋಯಿತು. ಎದುರು ಬದರಾಗಿ ಕುಳಿತಿದ್ದ ನಾವಿಬ್ಬರೂ ಒಬ್ಬರ ಮೇಲೊಬ್ಬರು ಬಿದ್ದೆವು. ಊರನ್ನು ತಲುಪಿದ ಕೂಡಲೆ ವ್ಯಾಸ್ಕೊಡಗಾಮನು ತನ್ನ ಮನೆಯ ಮುಂದೆ ಬಸ್ಸನ್ನು ನಿಲ್ಲಿಸಿ, ಎಣ್ಣೆಯ ಡಬ್ಬದ ಕೆಳಗೆ ಒಂದು ಕೈ, ಮೇಲಕ್ಕೆ ಒಂದು ಕೈ ಹಾಕಿ ಮೆಲ್ಲನೆ ಎತ್ತಿದನು. ಆದರೆ ಡಬ್ಬ ಬಹಳ ಹಗುರವಾಗಿ ಕೈಗೆ ಬಂದಿತು. ಅವನು, ತುಂಬಿದ ಡಬ್ಬವನ್ನು ಅಷ್ಟು ಸುಲಭವಾಗಿ ಎತ್ತಿದುದನ್ನು ಕಂಡು, ನನಗೂ ಆಶ್ಚರವಾಯಿತು. ವ್ಯಾಸ್ಕೊಡಗಾಮನು ಹುಚ್ಚನಂತೆ ನನ್ನ ಕಡೆಯೇ ನೋಡುತ್ತ ನಿಂತುಬಿಟ್ಟನು. ಆಮೇಲೆ ಡಬ್ಬವನ್ನು ಕೆಳಗಿಟ್ಟು ಸಕ್ಕರೆಯ ಗಂಟನ್ನು ಎತ್ತಿಕೊಂಡನು. ಅದರಿಂದ ಎಣ್ಣೆಯು ಧಾರಾಕಾರವಾಗಿ ತೊಟ್ಟಿಕ್ಕುತ್ತಿದ್ದಿತು. ಎಣ್ಣೆಯ ಡಬ್ಬವು ಕುಲುಕಾಟದಲ್ಲಿ ಒಡೆದುಹೋಗಿ, ಆ ಎಣ್ಣೆಯು ಸಕ್ಕರೆಯೊಂದಿಗೆ ಬೆರೆತು ಕರಗಿ ಬಸ್ಸಿನ ತಳಭಾಗವೆಲ್ಲಾ ಅಂಟಾಗಿದ್ದಿತು. ವ್ಯಾಸ್ಕೊಡಗಾಮನಿಗೆ ಬಹಳ ಸಂಕಟವಾಗಿರಬೇಕು. ನಾಲ್ಕಾಣೆಯ ಲಾಭಕ್ಕೆ ಆಸೆಪಟ್ಟು ಅವನು ಹತ್ತು ರೂಪಾಯಿನ ಸಾಮಾನು ಕಳೆದುಕೊಂಡನು. ನನ್ನ ಕಡೆ ನೋಡಿ “ಮುಳುಗಿದೆ ಸ್ವಾಮಿ, ಮುಳುಗಿದೆ” ಎಂದನು. ವ್ಯಾಸ್ಕೊಡಗಾಮನು ಮತ್ತೆ ಏಜೆಂಟ್ ಆಗಲಿಲ್ಲ. ಈಗ ಗಾಡಿ ಮಾಡಿಕೊಂಡೇ ಸಾಮಾನುಗಳನ್ನು ತರುತ್ತಿದ್ದಾನೆ. ಆಮೇಲೆ ೧೫-೨೦ ದಿವಸಗಳವರೆಗೆ ಎಣ್ಣೆ ಮತ್ತು ಸಕ್ಕರೆಯು ಸೇಚನವಾಗಿದ್ದ ಬಸ್ಸಿಗೆ ನೊಣಗಳು ಮುತ್ತಿ 'ಝ್ಯೆಯ್' ಎಂದು ಸಂಗೀತವನ್ನು ಹಾಡುತ್ತಿದ್ದವು. ಅವುಗಳನ್ನು ಓಡಿಸುವುದೇ ಪ್ರಯಾಣಿಕರಿಗೆ ಕೆಲಸವಾಗಿ ಹೋಯಿತು.

೩. ಭಟ್ಟನ ಸಂಪಾದನೆಯ ಮಾರ್ಗ

ವ್ಯಾಸ್ಕೊಡಗಾಮನ ಅನಂತರ ನನ್ನ ಸ್ನೇಹಿತ ನಾರಾಯಣಭಟ್ಟ ಬಸ್ಸಿನ ಏಜೆಂಟಾದ. ಅವನು ಏಜೆಂಟಾಗುವುದಕ್ಕೆ ಅವನು ಒಂದು ವಿಧದಲ್ಲಿ ತೋರಿಸಿದ ಸ್ವಾರ್ಥತ್ಯಾಗವೇ ಮುಖ್ಯ ಕಾರಣ. ಅದು ಈ ರೀತಿ. ಒಂದು ದಿವಸ ಬಸ್ಸಿನಲ್ಲಿ ಹೋಗುತ್ತಿರುವಾಗ ದಾರಿಯಲ್ಲಿ ಅದಕ್ಕೆ ನೀರು ಬೇಕಾಯಿತು. ರಸ್ತೆಯ ಮಗ್ಗುಲಲ್ಲಿ ಒಂದು ಹಳ್ಳವಿದ್ದಿತು. ಅದರ ನೀರು ಕೆಂಪಾಗಿ ಕೊಚ್ಚೆಯಾಗಿತ್ತು. 'ಕ್ಲೀನರ್' ಮಹಾಶಯನು ಆ ನೀರನ್ನು ತಂದನು. ಆದರೆ ಡ್ರೈವರನು “ಬೇಡ, ಆ ನೀರು ಹಾಕಬೇಡ, ಸೋದಿಸಬೇಕು. ಅದರಲ್ಲಿರುವ ಕೆಸರೆಲ್ಲಾ ಒಳಕ್ಕೆ ಹೋದರೆ ಆಮೇಲೆ ದೇವರೇ ಗತಿ" ಎಂದನು. ಆದರೆ ಸೋದಿಸುವುದಕ್ಕೆ ಬಟ್ಟೆ ಎಲ್ಲಿದೆ? ಬಸ್ಸಿನಲ್ಲಿ ಕುಳಿತಿದ್ದ ಉಳಿದವರೆಲ್ಲಾ ಉದಾಸೀನದಿಂದಿದ್ದರು. ನನ್ನ ಸ್ನೇಹಿತ ಭಟ್ಟ ಮಾತ್ರ ಗಾಡಿಯಿಂದ ಇಳಿದು, ಬೆಳ್ಳಗೆ ಶುಭ್ರವಾಗಿ ಇಸ್ತ್ರಿ ಮಾಡಿ ಗರಿ ಗರಿಯಾಗಿದ್ದ ತನ್ನ ರುಮಾಲಿನ ಒಂದು ಸೆರಗನ್ನು ಬಸ್ಸಿನ ನೀರು ಕೊಳವೆಯ ಬಾಯಿಗೆ ಇಟ್ಟು “ಬಿಡಯ್ಯ ನೀರನ್ನು, ಸೋದಿಸಿಬಿಡೋಣ" ಎಂದ. ಸೋದಿಸಿದನಂತರ ಆ ರುಮಾಲಿನ ತುದಿಯನ್ನು ಅದೇ ನೀರಿನಲ್ಲಿ ಹಿಂಡಿ ತೊಳೆದ. ಆದರೆ ತೆಳುವಾದ ರುಮಾಲಾದುದರಿಂದ ಅದನ್ನು ಬಿಗಿಯಾಗಿ ಹಿಂಡಲು ಇಷ್ಟವಿಲ್ಲದೆ, ಏನೋ ಸುಮಾರಾಗಿ ಹಿಂಡಿ ಹೆಗಲಿನ ಮೇಲೆ ಹಾಕಿಕೊಂಡ. ಬಸ್ಸು ಹೊರಟಿತು. ಹಾಸನಕ್ಕೆ ತಲುಪಿದೆವು. ಆದರೆ ಬಸ್ಸಿನಿಂದ ಇಳಿದ ಕೂಡಲೆ ನಮ್ಮ ಭಟ್ಟನ ರೂಪು ವಿಚಿತ್ರವಾಗಿತ್ತು. ಚೆನ್ನಾಗಿ ಹಿಂಡದ ರುಮಾಲಿನಿಂದ ಕೆಂಪು ನೀರು ನಿಧಾನವಾಗಿ ಅವನ ಬಿಳಿಯ ಕೋಟಿನ ಮೇಲೂ ಪಂಚೆಯ ಮೇಲೂ ಸೋರಿದ್ದಿತು. ದೇವಸ್ಥಾನಗಳಿಗೂ ಮನೆಯ ಜಗುಲಿಗಳಿಗೂ ಸುಣ್ಣವನ್ನು ಹಚ್ಚಿ ಅದರ ಮೇಲೆ ಕೆಮ್ಮಣ್ಣಿನ ಪಟ್ಟಿಗಳನ್ನು ಬಳಿಯುವುದನ್ನು ನೀವು ನೋಡಿರಬಹುದು. ಎತ್ತುಗಳಿಗೆ ಕೆಂಪು ಬಿಳುಪಿನ ಗೌಸನ್ನು ಹಾಕುವುದನ್ನು ನೀವು ಕಂಡಿರಬಹುದು. ಭಟ್ಟನನ್ನು ನೋಡಿ ನನಗೆ ಅವುಗಳ ಜ್ಞಾಪಕಬಂದಿತು.

ಬಸ್ಸು ನಿಲ್ದಾಣದ ಹಿಂದುಗಡೆ ಒಂದು ದೊಡ್ಡ ತೋಟವಿದೆ. ಅದರಲ್ಲಿ ಒಂದು ತಿಳಿ ನೀರಿನ ಕೊಳವಿದೆ. ಭಟ್ಟನು ನನ್ನನ್ನು ನಿಲ್ದಾಣದ ಬಳಿ ಇರ ಹೇಳಿ, ತಾನು ಕೊಳದಲ್ಲಿ ಬಟ್ಟೆಯನ್ನು ಹಿಂಡಿ ಬಿಸಲಿನಲ್ಲಿ ಒಂದೇ ಘಳಿಗೆಯಲ್ಲಿ ಒಣಗಿಸಿಕೊಂಡು ಬರುವುದಾಗಿ ಹೇಳಿ ಹೊರಟುಹೋದನು. ನಾನು ಒಂದು ಪತ್ರಿಕೆಯನ್ನು ಓದುತ್ತಾ ಕುಳಿತುಕೊಂಡೆ. ಭಟ್ಟನ ರುಮಾಲಿನ ಜ್ಞಾಪಕ ಬಂದಿತು. ಎಂಟು ರೂಪಾಯಿನ ರುಮಾಲನ್ನು ಅನ್ಯಾಯವಾಗಿ ಕೆಸರಿನಲ್ಲಿ ನೆನಸಿಬಿಟ್ಟನಲ್ಲಾ ಎಂದು ನನಗೆ ಯೋಚನೆ ಹತ್ತಿತ್ತು. ಆ ವೇಳೆಗೆ ತೋಟದ ಕಡೆಯಿಂದ “ರಾಮ” ಎಂಬುದಾಗಿ ಒಂದು ಕೂಗು ಬಂದಿತು. ಅದು ಭಟ್ಟನ ಧ್ವನಿಯೆಂಬುದನ್ನು ತಿಳಿಯಲು ಕಷ್ಟವಾಗಲಿಲ್ಲ. ಆದರೆ ಅದರಲ್ಲಿ ಭಯವೂ ಗಾಬರಿಯ ತುಂಬಿಕೊಂಡಿದ್ದವು. ನನಗಂತೂ ಆ ಧ್ವನಿಯನ್ನು ಕೇಳಿ, ರಾಮಬಾಣದಿಂದ ಹತನಾದ ಮಾರೀಚನು "ಹಾ ಲಕ್ಷಣ" ಎಂದು ಕಿರಚಿದುದು ಜ್ಞಾಪಕಕ್ಕೆ ಬಂದಿತು. ಧ್ವನಿಯು ಬಂದಕಡೆ ಓಡಿದೆ. ಅಲ್ಲೇ ಕೊಳವು ಕಣ್ಣಿಗೆ ಬಿದ್ದಿತು. ಆದರೆ ಭಟ್ಟನು ಅಲ್ಲಿರಲಿಲ್ಲ. ಕೊಳದಲ್ಲಿ ಮುಳುಗಿರಬಹುದೆಂದು ನನಗೆ ಭಯವಾಗಲಿಲ್ಲ. ಏಕೆಂದರೆ ಈಜುವುದರಲ್ಲಿ ಅವನು ಪ್ರಚಂಡ. ನಾನು ಏನುಮಾಡುವುದಕ್ಕೂ ತಿಳಿಯದೆ ಭಟ್ಟನ ಹೆಸರನ್ನು ಹಿಡಿದು ಕೂಗಬೇಕೆಂದು ಯೋಚಿಸುತ್ತಿರುವಾಗ, ಮತ್ತೆ ಸಮೀಪದಲ್ಲಿಯೇ ಭಟ್ಟನ ಧ್ವನಿಯು ಕೇಳಿಸಿತು. ಅದೊಂದು ಕೆಸರಿನಿಂದ ಕೂಡಿದ ಪಾಚಿ ಬೆಳೆದ ಕೊಳ. ಜೊಂಡು ಸುತ್ತಲೂ ಒಂದು ಆಳುದ್ದ ಎತ್ತರವಾಗಿ ಬೆಳೆದುಬಿಟ್ಟಿತು. ಜೊಂಡಿನ ಆಚೆ ಕೊಳವಿರುವದೇ ಯಾರಿಗೂ ಗೊತ್ತಾಗುವಂತಿರಲಿಲ್ಲ. ಭಟ್ಟನ ಧ್ವನಿಯು ಅದರ ಒಳಗಿನಿಂದ ಬಂದಿತು. ಜೊಂಡನ್ನು ಮರೆಮಾಡಿ ನೋಡಿದೆ. ಭಟ್ಟನು ಪಾಚಿ ತುಂಬಿದ ನೀರಿನೊಳಗೆ ನಿಂತಿದ್ದರು. ನೀರು ಸೊಂಟದಿಂದ ಮೇಲಕ್ಕೆ ಇದ್ದಿತು. ಅವನ ಮುಖದಲ್ಲಿ ನಾಚಿಕೆಯೂ ಗಾಬರಿಯೂ ತೋರುತ್ತಿದ್ದುವು. ಅವನ ರುಮಾಲು ಹೆಗಲಿನ ಮೇಲೆ ಬಿದ್ದಿತ್ತು. ಒಂದು ಕೈಯನ್ನು ಕೋಟಿನ ಒಳ ಜೇಬಿಗೆ ಹಾಕಿಕೊಂಡು, ಅದರಲ್ಲಿದ್ದ ಕಾಗದಗಳೂ ನೋಟುಗಳೂ ನೆನೆಯದಂತೆ ಹಿಡಿದಿದ್ದನು. ನಾನು "ಇದೇನೋ ಈ ಅವಸ್ಥೆ?” ಎಂದೆ. ಭಟ್ಟನು ಮೊದಲು "ಇದನ್ನು ಆಚೆಗೆ ಇಡು" ಎಂಬುದಾಗಿ ಹೇಳಿ ಜೇಬಿನಲ್ಲಿದ್ದ ಕಾಗದಪತ್ರಗಳನ್ನೂ ೧೦ ರೂಪಾಯಿನ ನಾಲ್ಕು ನೋಟುಗಳನ್ನೂ ನನ್ನ ಕೈಗೆ ಕೊಟ್ಟನು. ನಾನು ನೀರಿನೊಳಗೆ ಇಳಿಯದೆ ದಡದಲ್ಲಿಯೇ ನಿಂತುಕೊಂಡು ಅವುಗಳನ್ನು ತೆಗೆದು ನನ್ನ ಜೇಬಿಗೆ ಹಾಕಿಕೊಂಡೆ. ಅನಂತರ ಭಟ್ಟನು ಕೈಯಲ್ಲಿದ್ದ ಗಡಿಯಾರವನ್ನು ಬಿಚ್ಚಿಕೊಟ್ಟನು. ಗಡಿಯಾರವು ನಿಂತುಹೋಗಿದ್ದಿತು. "ಇದ್ಯಾಕೊ?” ಎಂದು ಕೇಳಿದೆ. ಅವನು "ಕೈಯನ್ನು ನೀರಿಗೆ ಅದ್ದಿದಾಗ ಗಡಿಯಾರದ ಒಳಕ್ಕೆ ಎಲ್ಲೊ ನೀರು ಸೇರಿರಬೇಕು. ಅದರಿಂದಲೇ ನಿಂತುಹೋಗಿದೆ” ಎಂದನು.

ಇಷ್ಟೆಲ್ಲಾ ಆದಮೇಲೆ,

“ಸರಿ ಮೇಲಕ್ಕೆ ಬಾ” ಎಂದೆ.

ಭಟ್ಟನು ನಿರುತ್ಸಾಹದಿಂದ “ಬರುವ ಹಾಗಿಲ್ಲ" ಎಂದನು.

ನನಗೆ ಅರ್ಥವಾಗಲಿಲ್ಲ. ನೀರಿನಲ್ಲಿರುವವನು ನೀರುಬಿಟ್ಟು ಬರುವುದಕ್ಕಾಗುವುದಿಲ್ಲವೆಂದರೆ ಏನು ಅರ್ಥ?

"ಹಾಗಾದರೇನು ನಿನಗೆ ಜಲಸಮಾಧಿಯೇನೊ?” ಎಂದೆ.

ಭಟ್ಟನು "ಹಾಗೆಯೇ ಸರಿ" ಎಂದನು.

"ಮಂಡಿಯವರಿಗೆ ಕೆಸರಿನಲ್ಲಿ ಹೂತುಹೋಗಿದೆ. ನಾನಾಗಿಯೇ ಮೇಲಕ್ಕೆ ಬರುವಂತಿದ್ದರೆ ನೀನು ಮಹಾಗೃಹಸ್ಥ ಎಂದು ನಿನ್ನನ್ನು ಯಾಕೆ ಇಲ್ಲಿಗೆ ಕರೆಯಬೇಕಾಗಿತ್ತು? ನಿನ್ನ ಎರಡು ಕೈಗಳಿಂದಲೂ ನನ್ನ ಎರಡು ಕೈಗಳನ್ನೂ ಹಿಡಿದು ಬಲವಾಗಿ ಎಳಿ?” ಎಂದನು.

ಭಟ್ಟನನ್ನು ನೀವು ನೋಡಿಲ್ಲ. ಒಳ್ಳೆ ಆನೆ ಇದ್ದ ಹಾಗೆ ಇದ್ದಾನೆ. ಅವನನ್ನು ಎಳೆಯಬೇಕಾದರೆ ಆರು ಜೊತೆ ಬಲವಾದ ಎತ್ತುಗಳನ್ನು ಒಂದೇ ಕಾಲದಲ್ಲಿ ಕಟ್ಟಬೇಕು. ನಾನು ದಡದಲ್ಲಿ ನಿಂತುಕೊಂಡು ಕೈಗಳನ್ನು ಮುಂದಕ್ಕೆ ಚಾಚಿ “ಹು ಹು” ಎಂದೆ.

ಭಟ್ಟನು “ಆ ನಾಜೋಕೆಲ್ಲಾ ನಡಿಯೋ ಹಾಗಿಲ್ಲ. ಕೋಟು ರುಮಾಲು ಬಿಚ್ಚಿಡು. ಜೋಡು ಆಕಡೆ ಬಿಡು. ಸೊಂಟಕ್ಕೆ ಒಂದು ಚೌಕ ಸುತ್ತಿಕೊ, ಪಂಚೆಯನ್ನು ದೂರಕ್ಕೆ ಎಸೆ” ಎಂದನು.

ನಾನು "ಇಷ್ಟೆಲ್ಲಾ ಕಷ್ಟ ಯಾಕೆ? ಬಸ್ ನಿಲ್ದಾಣದಲ್ಲಿ ನಿಂತಿರುವ ಯಾರಾದರೂ ಮತ್ತೊಬ್ಬರನ್ನು ಕರೆಯುತ್ತೇನೆ" ಎಂದೆ.

ಭಟ್ಟನು ಕಾತರ ಧ್ವನಿಯಿಂದ

"ಹಾ, ಬೇಡ ಬೇಡ! ನೀನು ಹಾಗೆ ಮಾಡಿದರೆ ನಾನು ಇದುವರೆಗೆ ಮಾಡಿದುದೆಲ್ಲಾ ವ್ಯರ್ಥವಾಗುತ್ತದೆ” ಎಂದನು. ನಾನು “ನಿನ್ನ ಮನೆ ಹಾಳಾಯ್ತು" ಎಂದುಕೊಂಡು, ನನ್ನ ಉಡುಪನ್ನೆಲ್ಲಾ ಬಿಚ್ಚಿ ಒಂದು ಚೌಕವನ್ನು ಸುತ್ತಿಕೊಂಡು, ಅವನನ್ನು ಎಳೆಯಲು ಪ್ರಾರಂಭಿಸಿದೆ. ಆದರೆ ಆ ಪುಣ್ಯಾತ್ಮ ಅಲುಗಾಡಲೇ ಇಲ್ಲ. "ಯಮನಿಗೆ ಯಾಕೆ ಈ ರೀತಿ ದೇಹ ಬೆಳಸಿಟ್ಟಿದ್ದೀಯೆ?” ಎಂದೆ. ಅಂತೂ ಇಂತೂ ಬಹಳ ಕಷ್ಟ ಪಟ್ಟು ಅವನನ್ನು ಮೇಲಕ್ಕೆ ಎತ್ತಿದುದಾಯಿತು. ನಮ್ಮ ಊರಿನವರೆಲ್ಲರೂ ಮಂಗಳೂರಿನಿಂದ ಐದೈದು ರೂಪಾಯಿಗಳನ್ನು ಕೊಟ್ಟು ಹೊಸ ಜೋಡುಗಳನ್ನು ತರಿಸುತ್ತಿದ್ದರು. ಪಾಪ ಭಟ್ಟನು ಜೋಡನ್ನು ಕೊಂಡು ಇನ್ನೂ ೩ ದಿನಗಳಾಗಿದ್ದುವು. ಅದು ಕೆಸರಿನಲ್ಲಿ ಮುಳುಗಿಹೋಯಿತು. ನಾನು “ಅನ್ಯಾಯವಾಗಿ ಒಳ್ಳೆ ಜೋಡು ಹೋಯಿತಲ್ಲಾ?” ಎಂದೆ. ಭಟ್ಟನು ಹೆದರದೆ "ಹೋಗಲಿ ಇದಕ್ಕೆಲ್ಲಾ ಲಕ್ಷ್ಯ ಮಾಡಿದರೆ ದೊಡ್ಡ ಕೆಲಸಗಳನ್ನು ಮಾಡುವುದಕ್ಕೆ ಆಗುತ್ತದೆಯೇ" ಎಂದನು. ನನಗೆ ಆ ದೊಡ್ಡ ಕೆಲಸ ಯಾವುದೆಂಬುದರ ವಾಸನೆ ಕೂಡ ತಿಳಿದಿರಲಿಲ್ಲ.

ಕೆಸರು ತುಂಬಿದ್ದ ಬಟ್ಟೆಗಳನ್ನೆಲ್ಲಾ ಒಗೆಯಲು ಆ ಇನ್ನೊಂದು ಕೊಳಕ್ಕೆ ಹೋದೆವು.

ದಾರಿಯಲ್ಲಿ ನಾನು "ಇದೆಲ್ಲಾ ನೀನು ಹುಚ್ಚನಂತೆ ಮೋಟಾರಿಗೆ ನೀರನ್ನು ತುಂಬಲು ನಿನ್ನ ಹೊಸ ರುಮಾಲನ್ನು ಎಸೆದುದರ ಫಲ” ಎಂದೆನು.

ಭಟ್ಟನು “ನಾನು ಯಾಕೆ ಹಾಗೆ ಮಾಡಿದೆ. ನಿನಗೆ ಗೊತ್ತೆ" ಎಂದನು.

ನಾನು ಇಲ್ಲವೆಂದು ಒಪ್ಪಿಕೊಂಡೆ.

ಅವನು “ಅಯ್ಯೋ ಮಂಕೆ! ಆದರೆ ಅದೆಲ್ಲ ತಿಳಿಯಬೇಕಾದರೆ ತಲೆ ಸ್ವಲ್ಪ ಚುರುಕಾಗಿರಬೇಕು; ದೂರದೃಷ್ಟಿ ಬೇಕು; ಲೋಕವ್ಯವಹಾರಬೇಕು. ನನ್ನ ಮೆದುಳು ಹೇಗೆ ಕೆಲಸಮಾಡುತ್ತೆ ನಿನಗೆ ಗೊತ್ತೆ? ಬೈಸಿಕಲ್ ೫೦ ಮೈಲಿ ವೇಗದಲ್ಲಿ ಹೋಗುತ್ತಿರುವಾಗ ಅದರ ಚಕ್ರ ಯಾವ ರೀತಿ ತಿರುಗುತ್ತದೆಯೋ ಆ ರೀತಿ ನನ್ನ ಮೆದುಳು ತಿರುಗುತ್ತಿದೆ. ಅದರ“ಅದೆಲ್ಲಾ ಸರಿಯೆ; ತಿರುಗುವುದು ಬರಿಯ ಮೆದುಳೊ ಅಥವ ತಲೆಯೂ ತಿರುಗುತ್ತದೆಯೊ? ಇಲ್ಲದಿದ್ದರೆ ಈ ಕೊಳವನ್ನು ಬಿಟ್ಟು ಕೆಸರು ಕೊಳದಲ್ಲಿ ಯಾಕೆ ಹಂದಿಯಂತೆ ಮುಳುಗಿಕೊಳ್ಳುತ್ತಿದ್ದೆ?”

ವೇಗವಾಗಿ ಹೋಗುತ್ತಿದ್ದ ಅವನ ನಾಲಗೆಯನ್ನು ಈ ರೀತಿಯಾಗಿ ತಡೆದುದರಿಂದ ಭಟ್ಟನಿಗೆ ಅಷ್ಟೇನೂ ಸಂತೋಷವಾಗಲಿಲ್ಲ. ಆದರ ಹೇಳಿದ,

"ಆ ಕೊಳದ ಕಡೆಗೆ ಹೋಗುತ್ತಿರುವಾಗ ಏನೋ ಯೋಚಿಸುತ್ತಿದ್ದೆ. ದಾರಿಯಲ್ಲಿ ಕಣ್ಣಿಗೆ ಕಂಡರೂ ಕಾಣದಂತೆ ಆ ಕೊಳವಿತ್ತು. ಹಾಳಾದ್ದರ ಪಾಚಿ ಬೆಳೆದು ನೆಲಕ್ಕೂ ಕೊಳಕ್ಕೂ ವ್ಯತ್ಯಾಸವೇ ತಿಳಿಯಲಿಲ್ಲ. ಈ ಮೀರಿಹೋದದ್ದೇನು?

"ಏನೂ ಇಲ್ಲ. ಅದರಲ್ಲಿ ಇನ್ನೂ ಸ್ವಲ್ಪ ಹೆಚ್ಚಾಗಿ ಕೆಸರಿದ್ದಿದ್ದರೆ ಅಲ್ಲೆ ನಿನ್ನ ಗೋರಿ ಆಗೋದು."

ಭಟ್ಟನು ಈ ಮಾತನ್ನು ತಿರಸ್ಕಾರದಿಂದ ಅಲಕ್ಷ್ಯಮಾಡಿಬಿಟ್ಟನು. ಅನಂತರ ನನ್ನ ಬುದ್ದಿ ಹೀನತೆಗೋ ಎಂಬಂತೆ ಕನಿಕರದಿಂದ,

"ಎಲೋ ನಾನು ನಿನ್ನ ಹಾಗೆ ಅಂತ ತಿಳಿದುಬಿಟ್ಟಿಯೇನೊ? ಯಾವ ಕೆಲಸ ಮಾಡಬೇಕಾದರೂ ಎಂಟು ದಿವಸ ಅನ್ನ ಆಹಾರ ನಿದ್ರೆ ಇಲ್ಲದೆ-'

"ಬಟ್ಟೆಯೂ ಇಲ್ಲದೆ.”

"ಅನ್ನ ಆಹಾರ ನಿದ್ರೆ ಇಲ್ಲದೆ ಯೋಚಿಸಿ ಯೋಚಿಸಿ ಹೀಗೆಯೇ? ಎಂದು ನಿಶ್ಚಯಿಸಿ ಮಾಡುತ್ತೇನೆ. ಈಗ ನೋಡು, ಎಂಟು ರೂಪಾಯಿ ರುಮಾಲು ಹೋಯ್ತು ಅಂದುಬಿಟ್ಟೆ. ನೀನು ಮೂರು ದಿವಸ ಮೂಗು ಹಿಡಿದುಕೊಂಡು ಕೂತಿದ್ದರೂ ಅದರ ಕಾರಣ ನಿನಗೆ ಗೊತ್ತಾಗುತ್ಯೆ?"

"ಇಲ್ಲ"

“ಆಗಲಿ ಹೇಳುತ್ತೇನೆ ಕೇಳು. ವ್ಯಾಸ್ಕೊಡಗಾಮ ಬಸ್ಸಿನ ಏಜೆನ್ಸಿ ಬಿಟ್ಟ.”

"ಹೊ!"

"ಸುಮ್ಮನೆ ಹೊ ಅಂದರೆ ಪ್ರಯೋಜನವಾಗಲಿಲ್ಲ. ಮುಂದಿನ ವಿಚಾರ ಗೊತ್ತಾಯಿತು ತಾನೆ?" ನಾನು ಇಲ್ಲವೆಂದು ತಲೆಯಲ್ಲಾಡಿಸಿದೆ.

“ಹಾಗಾದರೆ ಕೇಳು. ಈಗ ನಾನು ಬಸ್ ಏಜೆಂಟು ಆಗುತ್ತೇನೆ.”

“ಅದಕ್ಕೆ ನಿನ್ನ ರುಮಾಲನ್ನು ಯಾಕೆ ಕೆಸರಲ್ಲಿ ಅದ್ದಬೇಕು?”

“ನಿನಗೆ ಎಷ್ಟು ಹೇಳಿದರೂ ತಿಳಿಯುವುದೇ ಇಲ್ಲ. ಈ ಏಜೆಂಟ್ ಕೆಲಸಕ್ಕೆ ನಮ್ಮೂರಿನಿಂದ ಇನ್ನೂ ಮೂರು ಜನ ಅರ್ಜಿ ಹಾಕಿದ್ದಾರೆ."

“ನಿನಗೆ ಹೇಗೆ ತಿಳಿಯಿತು?”

"ಉಪಾಯವಿದ್ದರೆ ಎಲ್ಲಾ ತಿಳಿಯುತ್ತೆ. ಡೈವರ್ ಹೇಳಿದ."

"ಹೂ."

"ಆ ಮೂರು ಜನರನ್ನೂ ಬಿಟ್ಟು ಮೋಟಾರಿನ ಯಜಮಾನ ನನಗೇ ಯಾಕೆ ಏಜೆನ್ಸಿಕೊಡಬೇಕು? ಅದಕ್ಕಾಗಿ ಸ್ವಲ್ಪ ಕೊಳೆಯಾದರೆ ಆಗಲಿ ಎಂದು ಈ ಎಂಟು ರೂಪಾಯಿನ ರುಮಾಲನ್ನೇ ನೀರನ್ನು ಸೋದಿಸಲು ಹಾಕಿದೆ. ಬಸ್ಸಿನ ಯಜಮಾನನೂ ಅದನ್ನು ನೋಡಿದ್ದಾನೆ. ಇನ್ನೇನು ನಾನೇ ಬಸ್ಸಿಗೆ ಏಜೆಂಟು.”

ಭಟ್ಟನು ಏಜೆಂಟಾದರೂ ಅದರಿಂದ ಅವನಿಗೆ ಏನು ಲಾಭಬರಬಹುದೆಂಬುದು ನನಗೆ ತಿಳಿಯಲಿಲ್ಲ. ಆಗಲೇ ಅವನಿಗೆ ಐದು ರೂಪಾಯಿನ ಜೋಡು ಹೋಯ್ತು. ೩೦ ರೂಪಾಯಿನ ಗಡಿಯಾರ ಕೆಟ್ಟು ಹೋಯ್ತು. ರುಮಾಲಿನಲ್ಲಿ ಏನು ಮಾಡಿದರೂ ಹೋಗದ ಕೆಮ್ಮಣ್ಣಿನ ಕರೆ ನಿಂತಿತು. ಹಂದಿಯಂತೆ ಸೊಂಟದವರೆಗೆ ಕೆಸರಿನಲ್ಲಿ ನೆನೆದುದಾಯಿತು. ಒಂದು ಕಾಸೂ ಉತ್ಪತ್ತಿ ಇಲ್ಲದ ನಮ್ಮೂರ ಏಜೆನ್ಸಿಯಿಂದ ಈ ನಷ್ಟವನ್ನೆಲ್ಲಾ ಅವನು ಹೇಗೆ ಕೂಡಿಸಬಹುದೆಂಬುದೇ ನನಗೆ ಬಗೆ ಹರಿಯಲಿಲ್ಲ. ಆದರೆ ಆ ರೀತಿ ಹೇಳಿ ಪ್ರಾರಂಭದಲ್ಲಿಯೆ ಅವನಿಗೆ ನಿರುತ್ಸಾಹವುಂಟುಮಾಡಬಾರದೆಂದು ಬಾಯಿಗೆ ಬೀಗ ಹಾಕಿಕೊಂಡು ಸುಮ್ಮನಿದ್ದೆ,

ಆ ದಿವಸ ನ್ಯಾಯಸ್ಥಾನದಲ್ಲಿ ಭಟ್ಟನದು ಒಂದು ವ್ಯವಹಾರ. ಅದಕ್ಕೆ ನಾನೇ ಸಾಕ್ಷಿ; ಅದಕ್ಕಾಗಿಯೇ ನಾವು ಹಾಸನಕ್ಕೆ ಹೋಗಿದ್ದುದು. ಆದರೆ ಕೊಳದ ಬಳಿ ಬಟ್ಟೆಗಳೆಲ್ಲಾ ಒಣಗುವ ವೇಳೆಗೆ ಮಧ್ಯಾಹ್ನ ಮೂರು ಗಂಟೆ ಆಯಿತು. ಬಟ್ಟೆ ಇಲ್ಲದೆ ನ್ಯಾಯಸ್ಥಾನಕ್ಕೆ ಹೋಗುವುದಕ್ಕೆ ಆಗುತ್ತದೆಯೆ? ನಾವಿಬ್ಬರೂ ಮೂರು ಗಂಟೆಗೆ ನ್ಯಾಯಸ್ಥಾನದ ಬಳಿಗೆ ಹೋಗಿ ಲಾಯರನ್ನು ನೋಡಿದೆವು. ಅವರು ನಮ್ಮನ್ನು ಕಂಡೊಡನೆಯೇ ಕೋಪದಿಂದ,

“ನಿಮ್ಮ 'ಕೇಸನ್ನು' ತೆಗೆದುಕೊಂಡುದು ನನ್ನ ತಪ್ಪು. ನಿಮ್ಮದು ಹುಡುಗಬುದ್ದಿ; ಜವಾಬ್ದಾರಿಯಿಲ್ಲ. ೧೧ ಗಂಟೆಯಿಂದ ೨ ಗಂಟೆಯವರೆಗೆ ನಿಮ್ಮ ಹೆಸರನ್ನು ಕೂಗಿ ಕೂಗಿ ಸಾಕಾಯಿತು. ನ್ಯಾಯಾಧಿಪತಿಗಳು ಹೊರಟುಹೋದರು. 'ಕೇಸು' ವಜಾ ಆಯಿತು” ಎಂದರು.

ಭಟ್ಟನು ವಿಧಿಯಿಲ್ಲದೆ,

"ನಿಮ್ಮದು ತಪ್ಪಲ್ಲ. ಹೋದರೆ ಹೋಯಿತು. ಏನು ಮಾಡೋದು. ಒಂದರಲ್ಲಿ ಹೋದರೆ ಇನ್ನೊಂದರಲ್ಲಿ ಬರುತ್ತೆ, ನೂರು ರೂಪಾಯಿ ತಾನೇ ಹೋದದ್ದು” ಎಂದನು.

"ಅಷ್ಟೇ ಅಲ್ಲ; ಎದುರು ಪಕ್ಷದವರ ವೆಚ್ಚ ಸುಮಾರು ೮೦ ರೂಪಾಯಿ ಆಗುತ್ತೆ. ಅದನ್ನೂ ನೀವೇ ಕೊಡಬೇಕು."

ನಾವು ಹಿಂದಿರುಗಿದ್ದೆವು. ಆ ದಿವಸದ ಘಟನೆಗಳನ್ನೂ ನಷ್ಟಗಳನ್ನೂ ನೋಡಿ ಯಾರಿಗಾದರೂ ನಿರುತ್ಸಾಹವೂ ಪೆಚ್ಚು ಮುಖವೂ ಉಂಟಾಗಬೇಕಾಗಿದ್ದಿತು. ನಾನೇನೋ ಬೆಪ್ಪಾಗಿ ಬರುತ್ತಿದ್ದೆ. ಆದರೆ ಭಟ್ಟನಿಗೆ ಸ್ವಲ್ಪವೂ ಬೇಸರಿಕೆಯಾದಂತೆಯೇ ತೋರಲಿಲ್ಲ. ಅವನು ಶಿಳ್ಳು ಊದುತ್ತಾ ಸಂತೋಷದಿಂದಲೇ ಬರುತ್ತಿದ್ದನು. ಅವನನ್ನು ಚೆನ್ನಾಗಿ ಬಯ್ದುಬಿಡಬೇಕೆಂದು ನಾನು ಯೋಚಿಸುತ್ತಿರುವಷ್ಟರಲ್ಲಿಯೇ ಭಟ್ಟನು,

“ಮುಂದಲ ಸಲ ಈ ಲಾಯರನ್ನು ನೋಡುವುದಕ್ಕೆ ಬಂದಾಗ ಮೋಟಾರ್ ಕಾರಿನಲ್ಲಿಯೇ ಬರುತ್ತೇನೆ" ಎಂದನು.

ನಾನು ಜಿಗುಪ್ಪೆಯಿಂದ "ಏಜೆಂಟ್ ಆಗುವೆಯಲ್ಲ. ಅದರಿಂದ ಮೋಟಾರ್‌ ನಿನ್ನದೆ ಆಯಿತಲ್ಲವೆ?” ಎಂದೆ.

ಭಟ್ಟನು ಗಂಭೀರವಾಗಿ,

“ಹಾಗಲ್ಲ ನೋಡು. ನಾಳೆಯಿಂದ ಏಜೆಂಟ್ ಆದ ಕೂಡಲೆ ನಾನೆ ಮೋಟಾರ್‌ ನಡೆಸಲು ಅಭ್ಯಾಸಮಾಡುತ್ತೇನೆ. ಅನಂತರ ಯಾವು ದಾದರೂ ಒಂದು ಹಳೆಯ ಗಾಡಿ ಯಾರಿಗೂ ಬೇಕಾಗದ್ದನ್ನು ತಂದು ಸರಿಮಾಡಿಬಿಡುತ್ತೇನೆ. ನಮ್ಮೂರಿಗೂ ಹಾಸನಕ್ಕೂ ನಾನೇ “ಸರ್‍ವೀಸ್ ಇಟ್ಟುಬಿಡುತ್ತೇನೆ. ಪ್ರಾರಂಭದಲ್ಲಿ ಈ ಒಂದು 'ಲೈನ್' ಮಾತ್ರ. ಇದರಲ್ಲಿ ಗಡಿಗೆಗಟ್ಲೆ ರೂಪಾಯಿ ಹೊಡೆಯುತ್ತೇನೆ. ಆಮೇಲೆ ಸಕಲೇಶಪುರ, ಚೆನ್ನರಾಯಪಟ್ಟಣ, ಮಡಿಕೇರಿ, ಸೇಲಂ, ಅಲ್ಲಿಯವರೆಗೆ ಬಸ್ ಸರ್ವಿಸ್ ಇಡಬೇಕು. ೬-೮ ಡ್ರೈವರುಗಳೂ ಗುಮಾಸ್ತರೂ ಬೇಕು. ಆದರೂ ಚಿಂತೆಯಿಲ್ಲ. ಸುಮ್ಮನೆ ಕುಳಿತುಕೊಂಡು ನಿತ್ಯ ಬರುವ ದುಡ್ಡನ್ನು ಎಣಿಸಿ ಜೇಬಿಗೆ ಇಳಿಬಿಡುವುದೊಂದೇ ನನಗೆ ಕೆಲಸ. ಪ್ರಾರಂಭದಲ್ಲಿ ತಿಂಗಳಿಗೆ ಒಂದುಸಾವಿರಕ್ಕೆ ಕಡಮೆ ಇಲ್ಲದೆ ಲಾಭ ಬರುತ್ತದೆ. ಅನಂತರ ಎಷ್ಟು ಕಡಮೆ ಎಂದರೂ, ಬೇಡವೆಂದರೂ, ನಾಲ್ಕು ಸಾವಿರ ರೂಪಾಯಿಗಳಿಗೆ ಮೋಸವಿಲ್ಲದಂತೆ ಜೇಬಿಗೆ ಬೀಳುತ್ತದೆ. ಎರಡು ವರುಷಗಳು ಕಳೆಯುವುದರೊಳಗಾಗಿ ಮೈಸೂರು ಸೀಮೆಯಲ್ಲೆಲ್ಲಾ “ಭಟ್ಟನ ಬಸ್ ಸರ್ವಿಸ್” ಹೊರತು ಮತ್ತಾವುದೂ ಇಲ್ಲದಂತೆ ಮಾಡಿಬಿಡುತ್ತೇನೆ.”

“ಸ್ವಲ್ಪ ತಡಿ, ಈಗಿರುವ ಬಸ್ ಸರ್‍ವಿಸ್‍ಗಳೊ?"

“ಬಂದ ಲಾಭದಿಂದ ಅವುಗಳನ್ನೆಲ್ಲಾ ನಾನೇ ಕೊಂಡುಕೊಳ್ಳುತ್ತೇನೆ."

ಆ ದಿವಸ ಸಂಧ್ಯಾಕಾಲ ಬಸ್ ಯಜಮಾನನು ಭಟ್ಟನನ್ನೇ ನಮ್ಮೂರಿಗೆ ಏಜೆಂಟಾಗಿ ನಿಯಮಿಸಿದನು.

ಭಟ್ಟನು ತನ್ನ ಲಕ್ಷ್ಯವನ್ನೂ ತೀಕ್ಷ್ಮವಾದ ಮೆದುಳಿನ ಎಲ್ಲಾ ಶಕ್ತಿಯನ್ನೂ, ಬಸ್ಸಿನ ಕಡೆಗೆ ತಿರುಗಿಸಿದನು. ಅವನ ಮನೆಯಲ್ಲಿ ಅವರ ಅಜ್ಜಿಯೊಬ್ಬರಿದ್ದರು. ಅವರಿಗೆ ೮೦ಕ್ಕೆ ಮೀರಿದ ವಯಸ್ಸಾಗಿ ಕಣ್ಣು ಕಾಣುತ್ತಿರಲಿಲ್ಲ. ಅವರು ಭಟ್ಟನಿಗೆ ಪ್ರತಿನಿತ್ಯವೂ ದೇವರ ಪೂಜೆಮಾಡೆಂದು ಹೇಳುತ್ತಿದ್ದರು. ದೇವರ ಪೂಜೆಮಾಡಲು ಭಟ್ಟನಿಗೆ ಇಷ್ಟವಿಲ್ಲದೆ ಇಲ್ಲ. ಆದರೆ ಹಾಳಾದ್ದು ಬಸ್ಸು, ಅವನ ದೇವರ ಪೂಜೆಯ ವೇಳೆಗೆ ಸರಿಯಾಗಿ ನಮ್ಮೂರಿಗೆ ಬಂದುಬಿಡುತ್ತಿದ್ದಿತು. ಭಟ್ಟನು ಕೂಡಲೆ ಹೋಗಿ ಪ್ರಯಾಣಿಕರಿಗೆ ಟಿಕೆಟನ್ನು ಕೊಟ್ಟು ಅವರನ್ನು ಗಾಡಿಯಲ್ಲಿ ಕೂರಿಸಿ ತಾನು ಬಸ್ಸಿನಲ್ಲಿ ಕುಳಿತು ಸ್ವಲ್ಪಹೊತ್ತು ನಡೆಸುವುದನ್ನು ಅಭ್ಯಾಸಮಾಡಬೇಕಾಗಿದ್ದಿತು. ಆದರೆ ದೇವರ ಪೂಜೆಮಾಡದಿದ್ದರೆ ಅಜ್ಜಿಯವರು ಬಿಡುವಂತಿಲ್ಲ. ಆದುದರಿಂದ ಸ್ನಾನಕ್ಕೆ ಬಚ್ಚಲಿಗೆ ಇಳಿಯುವಾಗಲೇ ದೇವರ ಪೂಜೆಯ ಮಂತ್ರವನ್ನು ಪ್ರಾರಂಭಿಸಿಬಿಡುತ್ತಿದ್ದನು. ಸ್ನಾನಮಾಡಿ ಮೈ ಒರಸಿಕೊಂಡು ಪಂಚೆ ಯುಟ್ಟುಕೊಂಡು ವಿಭೂತಿಯನ್ನು ಧರಿಸಿ ಸಂಧ್ಯಾವಂದನೆ ಶಾಸ್ತ್ರ ಮಾಡಿ ದೇವರ ಪೂಜೆಗೆ ಕೂರುವ ವೇಳೆಗೆ ಎಲ್ಲಾ ಮಂತ್ರಗಳನ್ನೂ ಘಟ್ಟಿಯಾಗಿ ಹೇಳಿ ಮುಗಿಸಿಬಿಡುತ್ತಿದ್ದನು. ಕುರುಡು ಮುದುಕಿಯು ಘಂಟೆಯ ಸದ್ದನ್ನು ಕೇಳಿ ಮೊಮ್ಮಗನು ದೇವರಪೂಜೆ ಮಾಡಿಯಾಯಿತೆಂದು ಸಂತೋಷದಿಂದ ತೀರ್ಥವನ್ನು ತೆಗೆದುಕೊಳ್ಳುತ್ತಿದ್ದಳು. ತೀರ್ಥವನ್ನು ಮುದುಕಿಗೆ ಕೊಡುವ ವೇಳೆಯಲ್ಲಿ ಬಸ್ ಸದ್ದಾದರೂ ಸಾಕು, ಹಾವಾಡಿಗನ ತಮಟೆಯನ್ನು ಕೇಳಿ ಹುಡುಗರು ಓಡಿಬಿಡುವಂತೆ, ಭಟ್ಟನು ಬಟ್ಟಲನ್ನು ಅಲ್ಲಿಯೇ ಇಟ್ಟು ಓಡಿಬಿಡುತ್ತಿದ್ದನು. ಅವನ ಉತ್ಸಾಹವನ್ನು ನೋಡಿ ನಾನು ಭಟ್ಟನ ಬಸ್ ಸರ್ವಿಸ್ ಪ್ರಾರಂಭವಾದರೂ ಆಗಬಹುದೆಂದು ಯೋಚಿಸಿದೆ.

ಒಂದು ದಿವಸ ನಾನು ಗದ್ದೆಯ ಹಸುರು ಬಯಲ ಬದುವಿನಲ್ಲಿ ಕುಳಿತು "ಸಣ್ಣ ಕತೆಗಳನ್ನು” ಓದುತಲಿದ್ದೆ. ಆ ಸಮಯಕ್ಕೆ ಭಟ್ಟನು ಅಲ್ಲಿಗೆ ಬಂದನು. ಅವನ ಮುಖವನ್ನು ನೋಡಿದ ಕೂಡಲೇ ಏನೋ ವಿಷಯ ವಿರಬೇಕೆಂದು ನನಗೆ ಗೊತ್ತಾಯಿತು. ಅವನು ನನ್ನನ್ನು ಕುರಿತು,

“ನೀವೆಲ್ಲಾ ಶುದ್ಧ ಮೈಗಳ್ಳರು ಕಣೋ, ಅಪ್ಪ ಕೂಡಿಹಾಕಿದ ಗಂಟಿದೆ ಅಂತ ತಿಂದು ತಿಂದು ಕರಗಿಸ್ತೀರಿ. ದುಡ್ಡು ಸಂಪಾದನೆಯಾಗೋ ಒಂದು ಕೆಲಸಾನೂ ಪ್ರಾರಂಭಿಸೋಲ್ಲ, ನಿಮ್ಮ ಮೆದುಳೊ-”

ನಾನು “ಮಹಾ ನೀನು ಮಾಡಿದ್ದೇನು" ಎಂದೆ.

ಭಟ್ಟನ ಮುಖದ ಮೇಲೆ ನನ್ನ ಮಾತಿನಿಂದ ಜಿಗುಪ್ಪೆಯ ಚಿಹ್ನೆಯು ತೋರಿತು. ಆದರೂ ಅವನು ಸಂತೋಷದಿಂದ ಪ್ರಾರಂಭಿಸಿದನು.

“ಈಗ ಇನ್ನೊಂದು ದೊಡ್ಡ ಯೋಚನೆ ಮಾಡಿದ್ದೇನೆ. ಶ್ರೀನಿವಾಸ. ಕೋ-ಆಪರೇಟಿವ್ ಸೊಸೈಟಿ 'ಸೆಕ್ರೆಟರಿಷಿಪ್' ನನಗೆ ಕೊಡುವಂತೆ ಮಾಡಿದೆ."

“ಅವನು ಯಾಕೆ ಬಿಟ್ಟ.”

"ಬಿಡಲಿಲ್ಲ. ನಾನೇ ಬಲಾತ್ಕಾರವಾಗಿ ಕಸಿದುಕೊಂಡೆ.”

“ಅವನಿಗೆ ಏನು ಕೊಟ್ಟೆ.”

"ಹೂ! ಕೊಟ್ಟೆ, ೧೦೦ ರೂಪಾಯಿ.” “ನೀನು ಮಾಡುವ ಸಂಪಾದನೆಯ ವಿಚಾರ ಹೀಗೆಯೋ?” ಎಂದೆ.

ಭಟ್ಟನು “ನೋಡಿದೆಯಾ? ನಿನ್ನ ದೃಷ್ಟಿ ಬಹಳ ಸಂಕುಚಿತ. ನಿನಗೆ ವಿಶಾಲವಾದ ದೃಷ್ಟಿಯುಳ್ಳವನಾಗೆಂದು ಎಷ್ಟೋಸಲ ಹೇಳಿದರೂ ಪ್ರಯೋಜನವಾಗಲಿಲ್ಲ. ನಾನು ಹಾಗೆಲ್ಲಾ ಗುಂಡಿಗೆ ಬೀಳುತ್ತೇನೆಯೆ? ಈಗ ನೋಡು, ಸೊಸೈಟಿ ಅಂಗಡಿಗೆ ಅಕ್ಕಿ ಬೇಳೆ ಮುಂತಾದ ಸಾಮಾನುಗಳೆಲ್ಲಾ ಬೇಕು. ಅದನ್ನೆಲ್ಲಾ ತರುವುದಕ್ಕೆ 'ಭಟ್ಟನ ಬಸ್ ಸರ್ವಿಸ್' ಪ್ರಾರಂಭವಾಗುವುದರಿಂದ ಎಷ್ಟು ಸುಲಭ! ಒಂದು ಕಾಸೂ ಬಾಡಿಗೆ ಕೊಡಬೇಕಾದುದಿಲ್ಲ. ಆ ದುಡ್ಡೆಲ್ಲಾ ನನಗೇ ಉಳಿಯುತ್ತೆ, ಬಸ್ಸನ್ನು ದುದ್ದಕ್ಕೆ ಹೊಡೆದುಕೊಂಡು ಹೋಗಿ ಅಲ್ಲಿಯ ಸಂತೆಯಿಂದ ತೆಂಗಿನಕಾಯಿ ಮೆಣಸಿನಕಾಯಿ ಹೇರಿಕೊಂಡು ಬಂದು, ಎಲ್ಲಾ ಕಡೆಗೂ ಕಳುಹಿಸಬಹುದು. ದುದ್ದದಲ್ಲಿ ಮಾರುವುದಕ್ಕಿಂತ ಇಲ್ಲಿ ಕಡಿಮೆ ಬೆಲೆಗೆ ಮಾರಬಹುದು. ನಮ್ಮ ಸೊಸೈಟಿಯೇ ಒಂದು ದೊಡ್ಡ ಮಂಡಿಯಾಗುತ್ತದೆ. ಇದರಲ್ಲಿ ತಿಂಗಳಿಗೆ ಸಾವಿರಾರು ರೂಪಾಯಿ ಲಾಭ ಬರುವುದರಲ್ಲಿ ಸಂದೇಹವಿಲ್ಲ-”

“ಸ್ವಲ್ಪ ತಡಿ, ಆ ಲಾಭ ಸೊಸೈಟಿಗೆ ಬರುತ್ತದೆ. ನಿನಗೆ ಬಂದದ್ದೇನು?”

"ನನಗೆ ಬಂದದ್ದೇನೆ. ತೋರಿಸುತ್ತೇನೆ ಕೇಳು. ಯಾವಾಗ ಹೀಗೆ ನನ್ನ ಬುದ್ಧಿಶಕ್ತಿಯಿಂದಲೂ, ಏಕಾಗ್ರತೆಯಿಂದಲೂ, ನಾನು ವಿಧವಿಧವಾದ ವ್ಯಾಪಾರಗಳನ್ನು ಮಾಡಿ ಲಾಭವನ್ನು ಸಂಪಾದಿಸಿ ಸೊಸೈಟಿಗೆ ಕೊಡುತ್ತೇನೊ, ಆಗ ಅವರು ನನಗೆ ತಿಂಗಳಿಗೆ ನೂರಾರು ರೂಪಾಯಿಗಳನ್ನು 'ಬೋನಸ್ಸು' ಕೊಡಲೇ ಬೇಕು.”

ಆ ಮೇಧಾವಿಯ ಬುದ್ಧಿಶಕ್ತಿಯನ್ನು ನೋಡಿ ನನಗೆ ಆಶ್ಚಯ್ಯ ವಾಯಿತು. 'ಬಸ್ ಸರ್ವೀಸನ್ನೂ, ಇದನ್ನೂ ನೀನೊಬ್ಬನೇ ಹೇಗೆ ನಿರ್ವಹಿಸುತ್ತೀಯೆ?” ಎಂದೆ.

ಭಟ್ಟನು, “ಓ ಅದೇನು ಮಹಾ ಕಷ್ಟ, ೭-೮ ಗುಮಾಸ್ತರುಗಳನ್ನಿಟ್ಟುಬಿಡುತ್ತೇನೆ. ಇಂತಹ ಸಾವಿರ ಕೆಲಸಗಳನ್ನಾದರೂ ನಿರ್ವಹಿಸಬಲ್ಲ ಶಕ್ತಿಯು ನನ್ನ ಮೆದುಳಿನಲ್ಲಿದೆ" ಎಂದನು.

ಒಂದೆರಡು ತಿಂಗಳಾಗಿರಬಹುದು. ಒಂದು ದಿವಸ ಭಟ್ಟನು ಕೋ-ಆಪರೇಟಿವ್ ಸೊಸೈಟಿಯ ಕಾರ್‍ಯದರ್ಶಿಯಾಗಿ ಕೆಲಸಮಾಡುತ್ತಾ ಪೆಟ್ಟಿಗೆಯ ಮುಂದೆ ಕುಳಿತುಕೊಂಡು ಲೆಕ್ಕಗಳನ್ನು ಬರೆಯುತ್ತಿದ್ದನು. ಪಾಲುಗಾರನೊಬ್ಬನು ೭೫ ರೂಪಾಯಿಗಳನ್ನು ಸೊಸೈಟಿಯಿಂದ ಸಾಲವಾಗಿ ಪಡೆದು ತೀರಿಸದೆ ಮೃತನಾಗಿದ್ದನು. ಅವನ ಪತ್ರವು ವಾಯಿದೆ ಮೀರುವ ಅವಸ್ಥೆಗೆ ಬಂದಿತ್ತು. ಅದನ್ನು ಕೋರ್ಟಿಗೆ ಕಳುಹಿಸಬೇಕೆಂದು ತೀರ್ಮಾನವಾಗಿದ್ದುದರಿಂದ, ಭಟ್ಟನು ಪತ್ರಕ್ಕೆ ೨೦ ರೂಪಾಯಿಗಳ ನೋಟನ್ನು ಗುಂಡುಸೂಜಿಯಿಂದ ಚುಚ್ಚಿ ಬಸ್ಸಿನಲ್ಲಿ ಹಾಸನಕ್ಕೆ ಲಾಯರಲ್ಲಿಗೆ ಕಳುಹಿಸಲು ಪೆಟ್ಟಿಗೆಯ ಮಗ್ಗುಲಲ್ಲಿ ಇಟ್ಟುಕೊಂಡಿದ್ದನು. ಆ ವೇಳೆಗೆ ಬಸ್ ಸದ್ದಾಯಿತು. ಭಟ್ಟನು ಕೂಡಲೆ ಗಡಿಬಿಡಿಯಿಂದ ಪೆಟ್ಟಿಗೆಯ ಬಾಗಿಲನ್ನು ಮುಚ್ಚಿ ಬಸ್ಸನ್ನು ವಿಚಾರಿಸಲು ಹೊರಟುಹೋದನು. ಹೋಗುವಾಗ ಅವಸರದಲ್ಲಿ ಪತ್ರವನ್ನೂ ಅದಕ್ಕೆ ಸೇರಿಸಿದ್ದ ನೋಟನ್ನೂ ಪೆಟ್ಟಿಗೆಯ ಮಗ್ಗುಲಲ್ಲಿಯೇ ಮರೆತುಬಿಟ್ಟನು.

ಬಸ್ಸನ್ನು ಕಳುಹಿಸಿದನಂತರ, ತಾನು ಪತ್ರವನ್ನೂ ದುಡ್ಡನ್ನೂ ಪೆಟ್ಟಿಗೆಗೆ ಹಾಕಿದುದೇ ಜ್ಞಾಪಕಬರಲಿಲ್ಲವಲ್ಲಾ ಎಂದುಕೊಂಡು ಭಟ್ಟನು ಅವಸರದಿಂದ ಮನೆಗೆ ಓಡಿಬಂದನು, ಪೆಟ್ಟಿಗೆಯ ಕಾಗದ ಪತ್ರಗಳನ್ನೆಲ್ಲಾ ನೆಲದ ಮೇಲೆ ಹರಡಿ ೧೦-೨೦ ಸಲ ಚೆನ್ನಾಗಿ ಹುಡುಕಿದನು. ಏನೂ ಪ್ರಯೋಜನವಾಗಲಿಲ್ಲ. ಅಲ್ಲಿಯೇ ನಿಂತಿದ್ದ ಅವನ ಮನೆಯ ಎಮ್ಮೆಯ ಎಳೆಗರುವು ಪತ್ರವನ್ನೂ ನೋಟನ್ನೂ ತಿಂದುಹಾಕಿಬಿಟ್ಟಿದ್ದಿತು. ಪತ್ರವನ್ನು ಬರೆದುಕೊಟ್ಟು ಹಣವನ್ನು ತೆಗೆದುಕೊಂಡವನನ್ನು ಕಾಣಬೇಕಾದರೆ ಯಮ ಲೋಕಕ್ಕೆ ಹೋಗಬೇಕಾಗಿತ್ತು. ಸೊಸೈಟಿಯ ಚಾಲಕರು ಭಟ್ಟನನ್ನು ಅವನ ಕೆಲಸಗಳಿಗಾಗಿ ವಂದಿಸಿ, ಕಳೆದುಹೋದ ಪತ್ರದ ಹಣವನ್ನು ಅವನಿಂದ ವಸೂಲ್ಮಾಡಿಕೊಂಡು ರಾಜೀನಾಮೆಯನ್ನು ಬರೆಸಿಕೊಂಡರು.

ಆ ಪ್ರಚಂಡನು ಇದಾವುದರಿಂದಲೂ ಹೆದರಲಿಲ್ಲ. “ಶ್ರೇಯಾಂಸಿ ಬಹು ವಿಘ್ನಾನಿ” ಎಂದು ಹೇಳುತ್ತಾ ಬಸ್ಸು ನಡೆಸುವುದನ್ನು ಕಲಿಯಲು ಪ್ರಾರಂಭಿಸಿದನು. ಪ್ರತಿದಿನವೂ ಅರ್ಧಗಂಟೆ ಪ್ರಯತ್ನಪಡುತ್ತಿದ್ದುದರಿಂದ ೬ ತಿಂಗಳಲ್ಲಿ ಸ್ವಲ್ಪಮಟ್ಟಿಗೆ ಬಸ್ಸನ್ನು ನಡೆಸುವುದು ಅಭ್ಯಾಸವಾಯಿತು. ಭಟ್ಟನ ಯೋಚನೆಯೆಲ್ಲವೂ ಹಳೆಯ ಬಸ್ಸನ್ನು ಕೊಂಡುಕೊಂಡು ಅದನ್ನು ಸರಿಮಾಡಿ ಲಾಭಹೊಡೆಯುವುದರ ಕಡೆಗೆ ಇದ್ದಿತು. ಒಂದು ದಿವಸ ನಾನೂ ಭಟ್ಟನೂ ಹಾಸನಕ್ಕೆ ಹೋಗಿ ಹಿಂದಿರುಗುವಾಗ ಹೊಸೂರಿನ ಬಳಿಗೆ ಬರುವ ವೇಳೆಗೆ ಸ್ವಲ್ಪ ಕತ್ತಲೆಯಾಯಿತು. ಭಟ್ಟನು ತಾನೇ ಬಸ್ಸನ್ನು ನಡೆಸುವುದಾಗಿ ಡ್ರೈವರಿಗೆ ಹೇಳಿ ಮುಂದುಗಡೆ ಬಂದು ಕುಳಿತನು. ನನಗಂತೂ ಜೀವದಲ್ಲಿ ಜೀವವಿಲ್ಲದಂತಾಯಿತು. ಬದುಕಿ ಬಸ್ಸಿನಿಂದ ಕೆಳಕ್ಕೆ ಇಳಿದ ಕಾಲಕ್ಕೆ ನೋಡೋಣ ಎಂದುಕೊಂಡೆ. ಭಟ್ಟನು ಪದೇ ಪದೇ ನನ್ನ ಕಡೆಗೆ ತಿರುಗಿ ಬಸ್ಸನ್ನು ಹೀಗೆ ನಡೆಸಬೇಕು ಹಾಗೆ ನಡೆಸಬೇಕು ಎಂದು ಹೇಳುತ್ತಿದ್ದನು. ಅವನ ಮಾತಿನ ಕಡೆಗೆ ನನ್ನ ಮನಸ್ಸಿರಲಿಲ್ಲ. ಹೇಗಾದರೂ ಮಾಡಿ ಬಸ್ಸಿನಿಂದ ಇಳಿದರೆ ಸಾಕು ಎಂದು ನಾನು ಯೋಚಿಸುತ್ತಲಿದ್ದೆ. ಎದುರಿಗೆ ಮುನಿಸಿಪಾಲಿಟಿಯ ದೀಪದ ಕಂಬವು ಮಂಕಾಗಿ ಉರಿಯುತ್ತಿತ್ತು. ಭಟ್ಟನಿಗೆ ಬಸ್ಸು ನಡೆಸುವಾಗ ಉಂಟಾದ ಸಂತೋಷಕ್ಕೆ ಮಿತಿಯೇ ಇರಲಿಲ್ಲ. ಅವನು ಮನಸ್ಸಿಗೆ ಬಂದ ಹಾಡುಗಳನ್ನು ಹಾಡುತ್ತಾ ಬಸ್ಸನ್ನು ದೀಪದ ಕಂಬಕ್ಕೆ ಹೊಡಿಸಿಬಿಟ್ಟನು. ಅದು ಕೆಳಕ್ಕೆ ಉರುಳಿಹೋಯಿತು. ಅದರ ತುದಿಯ ಗಾಜೂ ದೀಪವೂ ಚಿಮಣಿಯ ಪುಡಿಪುಡಿಯಾದುವು. ಪೋಲೀಸಿನವನು ಬಂದು ಭಟ್ಟನ ಲೈಸನ್ಸನ್ನು ಕೇಳಿದನು. ಭಟ್ಟನಿಗೆ ಲೈಸನ್ಸ್ ಇರಲಿಲ್ಲ. ಬಸ್ಸನ್ನು ಮುಂದಕ್ಕೆ ನಡೆಸಕೂಡದೆಂದು ಕಟ್ಟಾಜ್ಞೆಯಾಯಿತು. ನನಗೇನೋ ಅಷ್ಟೇ ಬೇಕಾಗಿತ್ತು. ಆದರೆ ಭಟ್ಟನಿಗೆ ಮಾತ್ರ ತನ್ನ ಪ್ರಥಮ ಪ್ರಯತ್ನಕ್ಕೆ ಉಂಟಾದ ಈ ವಿಘ್ನದಿಂದ ಸಂತೋಷವಾಗಲಿಲ್ಲ.

ಮರುದಿವಸ ಲೈಸನ್ಸ್ ಇಲ್ಲದೆ ಬಸ್ ನಡೆಸಿದನೆಂಬ ಆಪಾದನೆಯ ಮೇಲೆ ನ್ಯಾಯಸ್ಥಾನದಲ್ಲಿ ವಿಚಾರಣೆಯಾಗಿ ಭಟ್ಟನಿಗೆ ೫೦ ರೂಪಾಯಿಗಳು ದಂಡ ಬಿದ್ದಿತು. ಹೊಸೂರಿನ ಮುನಿಸಿಪಾಲಿಟಿಯವರು ಕಂಬದ ವೆಚ್ಚಕ್ಕಾಗಿ ಅವನಿಂದ ೩೫ ರೂಪಾಯಿಗಳನ್ನು ವಸೂಲ್ಮಾಡಿಕೊಂಡರು.

ನಮ್ಮೂರ ಬಸ್ಸಿಗೆ ಈಗಲೂ ಭಟ್ಟನೇ ಏಜೆಂಟು. ಆದರೆ ಇನ್ನೂ ಭಟ್ಟನ ಬಸ್ ಸರ್ವಿಸ್ ಮೈಸೂರು ಸೀಮೆಯಲ್ಲಿ ಹರಡಲಿಲ್ಲ. ಯಾವತ್ತು ಹರಡುತ್ತೋ ಎಂದು ಗಾಬರಿಯಾಗಿದೆ.


ಕಾಳಿಯ ಹೃದಯ


ನಮ್ಮ ಊರು ಪೇಟೆಯಲ್ಲಿ ಕಾಳಮ್ಮನೆಂಬ ಐವತ್ತು ವಯಸ್ಸಿನ ಹೆಂಗಸೊಬ್ಬಳಿದ್ದಳು. ಅವಳ ಬಣ್ಣವು ಹೆಸರಿಗೆ ತಕ್ಕಂತೆ ಕರಿಯಮೋಡದ ಬಣ್ಣವಾಗಿದ್ದಿತು. ಅವಳ ಸ್ವಭಾವವೂ ಕೂಡ ಬಹಳ ದುಡುಕಾದುದು ಮತ್ತು ಕಠಿಣವಾದುದು. ಅವಳ ಬಾಯಿನಿಂದ ಒಂದೇ ಒಂದು ಒಳ್ಳೆಯ ಮಾತನ್ನು ಕೇಳಿದವರು ನಮ್ಮ ಊರಿನಲ್ಲಿ ಯಾರೂ ಇಲ್ಲ. ಅವಳಿಗೆ ಮದುವೆಯಾಗಿದ್ದಿತೋ ಇಲ್ಲವೊ ನನಗೆ ತಿಳಿಯದು. ಅವಳು ಯಾವ ಜಾತಿಯೋ ನಾನು ಕಾಣೆ. ನಮ್ಮ ಊರಿನಲ್ಲಿ ಯಾರೂ ಅವಳ ಹತ್ತಿರ ಮಾತುಕಥೆಗಳನ್ನಾಡಿ ಅವಳಿಗೆ ಗೆಳತಿಯರಾಗಿದ್ದಂತೆ ನನಗೆ ತೋರಲಿಲ್ಲ. ಅವಳ ಮನೆಯ ಬಾಗಲಿನಲ್ಲಿ ನಿಂತುಕೊಳ್ಳಲು ಎಲ್ಲರಿಗೂ ಹೆದರಿಕೆ. ಕಾಳಮ್ಮ ಬಂದಳು ಎಂದರೆ ಮಕ್ಕಳು ಅಳುವುದನ್ನು ನಿಲ್ಲಿಸಿಬಿಡುತ್ತವೆ. ಅವಳ ಹೊಲಕ್ಕಾಗಲಿ ಹಿತ್ತಲಿಗಾಗಲಿ ದನಕರುಗಳನ್ನು ಯಾರಾದರೂ ಬಿಟ್ಟರೆ ದೇವರೇ ಗತಿ. ತನ್ನ ಕೂಗಿನಿಂದಲೇ ಅವರನ್ನು ಕೊಂದುಬಿಡುತ್ತಿದ್ದಳು. ಹುಡುಗರು ತನ್ನ ಹೊಲದಲ್ಲಿ ತಗರಿಕಾಯಿ ಮುಂತಾದುವನ್ನು ಕುಯ್ಯುತ್ತಿದ್ದರೆ ಅವರನ್ನು ಓಡಿಸಿಕೊಂಡು ಹೋಗಿ ಜುಟ್ಟು ಹಿಡಿದುಕೊಂಡು ಗುದ್ದಿ ಒದ್ದು ಅವರು ಪ್ರಾಣವಿರುವವರೆಗೆ ತನ್ನ ಹೊಲದ ಕಡೆ ತಿರುಗಿಕೂಡ ನೋಡದಂತೆ ಮಾಡಿಬಿಡುತ್ತಿದ್ದಳು. ಇದರಿಂದ ಅವಳ ಹತ್ತಿರಕ್ಕೆ ಯಾರೂ ಸುಳಿಯುತ್ತಿರಲಿಲ್ಲ. ಹೆಂಗಸಿನ ಕೋಮಲತೆಯಂತೂ ಅವಳಿಗೆ ಇರಲೇ ಇಲ್ಲ. ನಮ್ಮ ಊರಿನಲ್ಲಿ ಕೆಲವರು ಅವಳನ್ನು “ಶೂರ್ಪಣಖಿ" ಎಂದು ಕರೆಯುತ್ತಿದ್ದರು. ಮತ್ತೆ ಕೆಲವರು "ಲಂಕಿಣಿ, ಪೂತನಿ" ಎನ್ನುತ್ತಿದ್ದರು. ಆದರೆ ಇದೆಲ್ಲಾ ಅವಳ ಹಿಂದುಗಡೆ. ಅವಳ ಎದುರಿಗೆ ಮಾತನಾಡಲು ಯಾವ ಗಂಡಸಿಗೂ ಹೆಂಗಸಿಗೂ ಧೈರ್‍ಯವಿರಲಿಲ್ಲ.

ಕಾಳಿಯ ನೆರೆಮನೆಯೇ ಚಿಕ್ಕನದು. ಚಿಕ್ಕನ ಹೆಂಡತಿ ಕುರೂಪಿ. ಚಿಕ್ಕನಿಗೆ, ಈ ಕತೆಯಲ್ಲಿ ನಡೆದ ವಿಷಯವನ್ನು ಹೇಳುವ ಕಾಲಕ್ಕೆ ಎರಡು ಮಕ್ಕಳಿದ್ದುವು. ಚಿಕ್ಕನಿಗೂ ಕಾಳಮ್ಮನಿಗೂ ನಿತ್ಯ ವಾಗ್ವಾದ ನಡೆಯು ತ್ತಲೇ ಇದ್ದಿತು. ಒಂದು ದಿವಸ ಚಿಕ್ಕನ ಹೆಂಡತಿಯು ಮನೆಯ ಕಸವನ್ನು, ಕಾಳಮ್ಮನ ಮನೆಯ ಮುಂದೆ ಹಾಕಿಬಿಟ್ಟಳು. ಕಾಳಮ್ಮನು ಪದ್ಧತಿಯಂತೆ ಅವಳನ್ನು ಚೆನ್ನಾಗಿ ಬೈದಳು. ಚಿಕ್ಕನ ಹೆಂಡತಿಯೂ ಬೈದಳು. ಕಾಳಮ್ಮನು ಕೋಪದಿಂದ ಅವಳನ್ನು ಹಿಡಿದುಕೊಂಡು ಬೆನ್ನಿನಮೇಲೆ ನಾಲ್ಕು ಗುದ್ದು ಗುದ್ದಿದಳು. ಚಿಕ್ಕನು ಸಮೀಪದಲ್ಲಿದ್ದಿದ್ದರೆ ಬಂದು ಸಹಾಯಮಾಡುತ್ತಿದ್ದನೇನೊ? ಆದರೆ ಅವನು ಹೊಲದ ಕಡೆಗೆ ಹೋಗಿದ್ದುದರಿಂದ ಚಿಕ್ಕನ ಹೆಂಡತಿಯು ನಿರುಪಾಯಳಾಗಿ ತಾನು ಮಾಡಿದ ತಪ್ಪನ್ನು ಒಪ್ಪಿಕೊಂಡು "ದಮ್ಮಯ್ಯ ಹೊಡೀಬೇಡ, ಇನ್ಮೇಲೆ ನಿನ್ನ ಬಾಗಲ್ಗೆ ಕಸಾ ಹಾಕೋದಿಲ್ಲ" ಎಂಬುದಾಗಿ ಬೇಡಿಕೊಂಡಳು.

ಇದು ನಡೆದ ಮೂರು ತಿಂಗಳ ನಂತರ ಚಿಕ್ಕನ ಹೆಂಡತಿಯು ಒಂದು ಹೆಣ್ಣು ಮಗುವನ್ನು ಪ್ರಸವಿಸಿದಳು. ಅದು ಕಪಿಯ ಮರಿಯಂತೆ ಕುರೂಪಿಯಾಗಿದ್ದಿತಲ್ಲದೆ ಅದರ ಒಂದು ಕಣ್ಣೂ ಸ್ವಲ್ಪ ಕುರುಡಾಗಿದ್ದಿತು. ಹೆಣ್ಣನ್ನು ನೋಡುವುದಕ್ಕೆ ಬಂದವರಲ್ಲಿ ಕೆಲವರು “ಹೆಗ್ಗಣದ ಮರಿಯಂತಿದೆ ಕೂಸು" ಎಂದರು. ಇನ್ನು ಕೆಲವರು ಇದು ಹುಟ್ಟದೆ ಹೋಗಿದ್ದರೆ ಏನು ಉಳಿದು, ಹೋಗುತ್ತಿತ್ತೋ" ಎಂದರು.

ಹರೆಯದ ಹುಡುಗಿಯರು ಕೆಲವರು "ಇಂತಹ ಮಗುವಿನ ತಾಯಿ.ಯಾಗುವುದಕ್ಕಿಂತ ಬಂಜೆಯಾಗಿರುವುದೇ ಲೇಸು” ಎಂದರು. ಮತ್ತೊಬ್ಬಳು "ಈಗಲೆ ಇದು ಸತ್ತಾದರೂ ಹೋಗಬಾರದೆ?” ಎಂದಳು.

ಅಷ್ಟುಹೊತ್ತಿಗೆ ಕಾಳಮ್ಮನು ಅಲ್ಲಿಗೆ ಬಂದಳು. ಅವಳ ಕೈಯಲ್ಲಿ ಒಂದು ಚಿಕ್ಕ ಗಂಟಿದ್ದಿತು. ಕಾಳಮ್ಮನು ಬಂದುದನ್ನು ಕಂಡು ಉಳಿದವರು ಗಾಬರಿಯಿಂದ ತಮ್ಮ ಮಾತುಗಳನ್ನು ನಿಲ್ಲಿಸಿದರು. ಕಾಳಮ್ಮನು ತಾನು ತಂದಿದ್ದ ಗಂಟನ್ನು ಬಿಚ್ಚಿದಳು. ಅದರಲ್ಲಿ ಒಂದು ತಿಂಗಳು ಮಗುವಿನ ಅಳತೆಯ ಎರಡು ಜರತಾರಿ ಅಂಗಿಗಳಿದ್ದವು. ಅದೇ ಅಳತೆಯ ಎರಡು ಚಿನ್ನದ ಕೈಬಳೆಗಳಿದ್ದುವು. ಎರಡು ಕಿವಿಯ ಕಡಕು, ಕಾಲುಬಳೆ, ಸರಪಣಿ ಇದ್ದುವು. ಕಾಳಮ್ಮನು ಅವುಗಳನ್ನೆಲ್ಲಾ ತೆಗೆದು ಚಿಕ್ಕನ ಹೆಂಡತಿಯ ಕೈಗೆ ಕೊಟ್ಟು ಮಗುವನ್ನು ಎತ್ತಿ ಮುದ್ದಾಡಿದಳು. ಅವಳ ಕಣ್ಣುಗಳಲ್ಲಿ ಅವಳು ತಡಿಯಬೇಕೆಂದು ಪ್ರಯತ್ನಿಸಿದರೂ ಎರಡು ತೊಟ್ಟು ನೀರು ಬಿದ್ದಿತು. ಅಲ್ಲಿದ್ದವರಿಗೆಲ್ಲಾ ಅದನ್ನು ಕಂಡು ಆಶ್ಚರವಾಯಿತು. "ಕಾಳಿಯು ಮಗುವನ್ನು ಮುದ್ದಾಡುವುದೆಂದರೇನು? ಅದನ್ನು ಕಂಡು ಕಣ್ಣೀರು ಸುರಿಸುವುದೆಂದರೇನು? ಈ ಶೂರ್ಪಣಖಿಗೆ ಈ ಕೋಮಲ ಹೃದಯವೆಲ್ಲಿಂದ ಬಂತು?" ಎಂದುಕೊಂಡರವರು. ಇದು ನಡೆದ ನಾಲ್ಕು ತಿಂಗಳಿಗೆ ಕಾಳಮ್ಮನು ಸ್ವರ್ಗಸ್ಠಳಾದಳು. ಅವಳಿಗೆ ಮಕ್ಕಳಿಲ್ಲದುದರಿಂದ ಯಾರೋ ದೂರದ ನೆಂಟನೊಬ್ಬನು ಹೊಸೂರಿಂದ ಬಂದು ಅವಳ ಆಸ್ತಿಯನ್ನೆಲ್ಲ ವಶಪಡಿಸಿಕೊಂಡನು. ಆಗ ಕಾಳಮ್ಮನ ಮನೆಯಲ್ಲಿ ಅವಳು ಚಿಕ್ಕನ ಹುಡುಗಿಗೆ ಕೊಟ್ಟ ಅಳತೆಯ ೩-೪ ಅಂಗಿಗಳು ದೊರೆತವು. ಕ್ರಮೇಣ ಗೊತ್ತಾಯಿತು. ಕಾಳಿಗೆ ಅನೇಕ ವರ್ಷಗಳ ಕೆಳಗೆ ಕುರೂಪಿಯಾದ ಒಂದು ಹೆಣ್ಣು ಮಗುವು ಹುಟ್ಟಿ ಒಂದು ತಿಂಗಳೊಳಗಾಗಿಯೇ ಸತ್ತುಹೋಯಿತಂತೆ ಎಂದು ಯಾರೋ ಹೇಳಿದರು. ಕಾಳಿಯು ಚಿಕ್ಕನ ಹುಡುಗಿಯ ವಿಷಯದಲ್ಲಿ ತೋರಿಸಿದ ಕರುಣೆಯು, ಒಗಟೆಯಾಗಿದ್ದವರೆಲ್ಲಾ, ಇದನ್ನು ಕೇಳಿ "ಓಹೊ” ಎಂದರು.




ಒಲುಮೆಯ ಒರೆಗಲ್ಲು



ಅವನನ್ನು ಬಾಲ್ಯದಲ್ಲಿ ನೋಡಿದವರು ಅವನ ಕೊನೆ ಹೀಗಾಗುತ್ತದೆಂದು ಎಂದಿಗೂ ತಿಳಿದಿರಲಿಲ್ಲ. ಅವನ ಬುದ್ದಿಯೇನೊ ಬಹಳ ಚುರುಕಾಗಿರಲಿಲ್ಲ. ಅಕ್ಷರಗಳನ್ನು ಮಾತ್ರ ಚೆನ್ನಾಗಿ ಬರೆಯುತ್ತಿದ್ದ. ಅದರೆ ಅವನ ಗುಣಗಳು ಎಲ್ಲರನ್ನೂ ಮುಗ್ಧರನ್ನಾಗಿ ಮಾಡಿದ್ದುವು. ನಾವಿಬ್ಬರೂ ಒಂದೇ ತರಗತಿಯಲ್ಲಿ ಹೈಸ್ಕೂಲಿನಲ್ಲಿ ಓದುತ್ತಿದ್ದೆವು. ಅವನು ವೀರಶೈವರವನು; ನಾನು ಥೇಟ್ ಹದಿನಾರಾಣೆಯ ಗೊಡ್ಡು ವೈದಿಕ ಬ್ರಾಹ್ಮಣ. ನಾನು ಊರಿನಿಂದ ಬಂದು ಸ್ಕೂಲನ್ನು ಸೇರಿದಾಗ ಹನ್ನೆರಡು ಜನಕ್ಕೆ ಆಗುವಷ್ಟು ನಾಮವನ್ನು ಒಬ್ಬನೇ ಬಳಿದುಕೊಂಡುಬಿಡುತ್ತಿದ್ದೆನು. ಅವನು ಅದನ್ನು ನೋಡಿ ಸುಮ್ಮನೆ ಹಾಸ್ಯ ಮಾಡುತ್ತಿದ್ದನು. "ಬೀದಿಯ ಮಣ್ಣೆಲ್ಲ ನಿನ್ನ ಹಣೆಯ ಮೇಲೆ ಅಯ್ಯಂಗಾರಿ" ಎನ್ನುತ್ತಿದ್ದನು. ನಾನು “ಬೀದಿಯ ಕಲ್ಲೆಲ್ಲ ನಿನ್ನ ಎದೆಯಮೇಲೆ" ಎನ್ನುತ್ತಿದ್ದೆ. ವರ್ತಮಾನಪತ್ರಿಕೆಗಳನ್ನು ಓದುವ ಅಭಿಲಾಷೆಯನ್ನು ನನಗೆ ಮೊದಲು ಹುಟ್ಟಿಸಿದವನು ಅವನೆ.

ಅವನು ಬಹಳ ಸರಳವಾದ ಹುಡುಗ. ಉಡುಪಿನ ಆಡಂಬರವಿಲ್ಲ. ಎಲ್ಲ ಕೆಲಸಗಳನ್ನೂ ಕಾಲಕ್ಕೆ ಸರಿಯಾಗಿ ಕ್ರಮವಾಗಿ ಮಾಡುತ್ತಿದ್ದನು. ವಾರಕ್ಕೆ ಎಲ್ಲೊ ಒಂದೋ ಎರಡೋ ಕಾಗದ ಬರೆಯುತ್ತಿದ್ದರೂ ಇಂದಾ-ಗೆ ರಿಜಸ್ಟರ್ ಬೇರೆ ಇಟ್ಟುಬಿಟ್ಟಿದ್ದನು. ನಾನು ಅವನನ್ನು ಪದೇಪದೆ "ನೀನು ಬಹಳ ದೊಡ್ಡ ಅಧಿಕಾರಿಕಣೋ. ಇಂದಾ-ಗೆ ರಿಜಸ್ಟರ್‌ ಇಲ್ಲದೆ ಆಗುವುದಿಲ್ಲವೇನೋ" ಎಂದು ಹಾಸ್ಯ ಮಾಡುತ್ತಿದ್ದೆನು. ಪ್ರಪಂಚದಲ್ಲಿರುವ ಎಲ್ಲಾ ವಿಷಯಗಳಮೇಲೂ ನಾವು ಚರ್ಚೆಮಾಡುತ್ತಿದ್ದೆವು. ಒಂದು ದಿವಸ ವಿವಾಹದ ಚರ್ಚೆ ಬಂದಿತು. ನಾವು ಇಂಟರ್ ಕ್ಯಾಸ್ಟ್ (ಅಂತರ ಜಾತಿಯ) ವಿವಾಹವನ್ನು ಪ್ರಚಾರಕ್ಕೆ ತರಬೇಕೆಂದು ಯೋಚನೆಮಾಡಿ ನಿಶ್ಚಯಿಸಿದೆವು. ಅವನು "ನನಗೆ ಒಂದು ಅಯ್ಯಂಗಾರು ಹೆಣ್ಣನ್ನು ಮದುವೆಮಾಡಿಸಿಬಿಡು. ನಿನಗೆ ಒಂದು ವೀರಶೈವರ ಹೆಣ್ಣನ್ನು ಮದುವೆಮಾಡಿಸಿಬಿಡುತ್ತೇನೆ. ಇಂಟರ್ ಮ್ಯಾರೇಜ್ ಮೇಲುಪಙ್ಕ್ತಿ ಹಾಕಿಬಿಡೋಣ” ಎಂದನು. ಆಗಲಿ ಎಂದೆ.

ಅವನೊಂದಿಗೆ ನಾನು ಮಾಡುತ್ತಿದ್ದ ಹುಡುಗಾಟವನ್ನು ನೆನೆಸಿಕೊಂಡರೆ ಈಗಲೂ ನಗು ಬರುತ್ತದೆ. ಅವನ ಸಹನೆಯನ್ನು ನೆನೆಸಿಕೊಂಡರೆ ಮಿತಿಯಿಲ್ಲದ ದುಃಖವುಂಟಾಗುತ್ತದೆ. ಅವನನ್ನು ಒಂದು ಸಲ ನಮ್ಮ ಹಳ್ಳಿಗೆ ಕರೆದುಕೊಂಡು ಹೋದೆ. ಮನೆಯಲ್ಲಿ ವೀರಶೈವನೆಂದು ಹೇಳಲಿಲ್ಲ. ಸ್ಮಾರ್ತ ಬ್ರಾಹ್ಮಣನೆಂದೆ. ಅಲ್ಲದೆ ಅವನೇನು ಕೋಣೆಗೆ ಹೋಗಿ ಪಾತ್ರೆ ಪದಾರ್ಥ ಮುಟ್ಟಬೇಕೆ? ಒಂದು ದಿವಸ ನದಿಗೆ ಸ್ನಾನ ಮಾಡುವುದಕ್ಕೆ ಹೋದೆವು. ನದಿಯಲ್ಲಿ ಮತ್ತಾರೂ ಇರಲಿಲ್ಲ. ನಾನು ವಿನೋದಕ್ಕಾಗಿ ಅವನ ಬಟ್ಟೆಗಳನ್ನೆಲ್ಲಾ ನೀರಿನಲ್ಲಿ ನೆನೆಸಿಬಿಟ್ಟೆ, ಪುಣ್ಯಾತ್ಮ ಒಂದು ಮಾತನ್ನೂ ಕೂಡ ಆಡಲಿಲ್ಲ. ಎಲ್ಲವನ್ನೂ ನದಿಯ ತೀರದಲ್ಲಿ ಹರಡಿ, ಸ್ವಸ್ಥವಾಗಿ ಬಿಸಿಲು ಕಾಸುತ್ತ ಕುಳಿತುಬಿಟ್ಟ. ಮತ್ತೊಂದು ಸಲ 'ಸ್ಕೌಟ್ ಕ್ಯಾಂಪ್' ಹೋಗಿದ್ದೆವು. ರಾತ್ರಿ ಎಲ್ಲರೂ ಒಟ್ಟಿಗೆ ಬಯಲಿನಲ್ಲಿ ಮಲಗಿದ್ದೆವು. ಅವನಿಗೆ ನಿದ್ರೆ ಹೆಚ್ಚು. ಗೊರಕೆ ಹೊಡೆಯುತ್ತಿದ್ದ. ನನ್ನ ಜೇಬಿನಲ್ಲಿ ಸೂಜಿ ದಾರ ಇದ್ದಿತು. ಕತ್ತಿನ ಬಳಿ ಮಾತ್ರ ಬಿಟ್ಟು ಉಳಿದ ಕಡೆ ಸುತ್ತಾ ಅವನು ಹಾಸಿಕೊಂಡಿದ್ದ ಜಮಖಾನವನ್ನೂ ಹೊದ್ದಿದ್ದ ಕಂಬಳಿಯನ್ನೂ ಸೇರಿಸಿ ಹೊಲಿದುಬಿಟ್ಟೆ. ಬೆಳಿಗ್ಗೆ ಅವನು ಎದ್ದ ಕೂಡಲೆ ಕತ್ತಿನವರೆಗೆ ಕರಡಿಯಂತೆಯೂ ಮೇಲಕ್ಕೆ ಮನುಷ್ಯನಂತೆಯೂ ಕಾಣುತ್ತಿದ್ದನು. ಆಗ ನಮ್ಮ ಮತ್ತೊಬ್ಬ ಸ್ನೇಹಿತನು ಅವನ ಭಾವಚಿತ್ರವನ್ನು ತೆಗೆದುಬಿಟ್ಟನು. ಈಚೆಗೆ ಆ ಚಿತ್ರವನ್ನು ಅವನಿಗೆ ತೋರಿಸಿದರೆ ಸರಿ, ನಕ್ಕು ನಕ್ಕು ಹೊಟ್ಟೆ ಹುಣ್ಣಾ ಗುತ್ತಿದ್ದಿತು.

೧೯೨೧ನೇ ವರ್ಷ ನಾವಿಬ್ಬರೂ ಓದುವುದನ್ನು (ಸ್ಕೂಲನ್ನು) ಬಿಟ್ಟೆವು. ನಾನು ಹಳ್ಳಿಗೆ ಹೋಗಿ ವ್ಯವಸಾಯಕ್ಕೆ ಪ್ರಾರಂಭಿಸಿದೆ. ಅವನು ಮಲೆನಾಡಿನ.... ಹಳ್ಳಿಗೆ ಹೋಗಿ ಒಂದು ಅಂಗಡಿಯನ್ನು ಪ್ರಾರಂಭಿಸಿದನು. ಈಗ ೩ ವರ್ಷದ ಕೆಳಗೆ ಅವನನ್ನು ಒಂದು ಸಲ ನೋಡಿದೆ. “ಏನೋ ಇಂಟರ್ ಮ್ಯಾರೇಜ್ ಬೇಡವೇನೊ? ಐಂಗಾರ್‍ರ್ ಹೆಣ್ಣನ್ನ ಮದುವೆಯಾಗ್ತೀಯ?" ಎಂದು ಕೇಳಿದೆ. “ಅವನು ಬೇಡ. ನಮ್ಮಲ್ಲಿ ಒಂದು ಹೆಣ್ಣಿದೆ. ಅದನ್ನು ನೀನು ನೋಡಿದರೆ ಸಾಕು. ನನಗೆ ಇಂಟರ್ ಮ್ಯಾರೇಜ್ ಆವಶ್ಯಕವಿಲ್ಲವೆನ್ನುವೆ ಅಥವ ನಿನಗೇ ಇಂಟರ್ ಮ್ಯಾರೇಜ್ ಬೇಕೆನ್ನುವೆ. ಮಲೆನಾಡಿನ ವನಸುಮದಂತೆ ಅವಳೂ ಮಲೆನಾಡಿನಲ್ಲಿ ಬೆಳೆದು ಸ್ವಾಭಾವಿಕವಾದ ಸೌಂದರವುಳ್ಳವಳಾಗಿದ್ದಾಳೆ. ನಿನ್ನ ಕಣ್ಣೆದುರಿಗೆ ಈಗ ತೋರಿಸಿಬಿಡುತ್ತೇನೆ ನೋಡು. ಅವಳಿಗೆ ವಯಸ್ಸು ೧೬ ಇರಬಹುದು. ಆಳು ಎತ್ತರವೂ ಅಲ್ಲ ಕುಳ್ಳೂ ಅಲ್ಲ. ಚಿಗುರಿನಂತೆ ಮೈ ಬಣ್ಣ. ತಾಂಬೂಲಕ್ಕೆ ರಂಗನ್ನು ಕೊಡುವ ಕೆಂಪು ಅಧರ; ಕೆಂಪು ಅಂಚಿನ ನೀಲಿಯ ಸೆರಗಿನ ಸೀರೆಯನ್ನು ಉಟ್ಟಿದ್ದಾಳೆ. ಸಂಧ್ಯಾಕಾಲ ಸೂರ್‍ಯನ ಹೊಂಬಣ್ಣದ ಕಿರಣಗಳು ಮಲೆನಾಡ ಹಸರು ಬಯಲಿನಮೇಲೆ ಬಿದ್ದು ಪೈರಿನ ಪಚ್ಚೆಯನ್ನು ಹೊನ್ನಾಗಿ ಮಾಡುವಾಗ ಅವಳು ಒಂದು ಬಂಡೆಯಮೇಲೆ ಕುಳಿತು ಲಾವಣಿಗಳನ್ನು ಹಾಡುತ್ತಿರುವಳು. ಇರುಳಲ್ಲಿ ಕತ್ತಲೆಯಂತಹ ಕರಿಯ ಸೀರೆಯನ್ನುಟ್ಟು ಕತ್ತಲೆಗಿಂತಲೂ ಕಪ್ಪಾದ ಮುಡಿಯಲ್ಲಿ ಒಂದೇ ಜಡೆಬಿಲ್ಲೆಯನ್ನು ಮಿಂಚು ಹುಳುವಿನಂತೆ ಹೊಳಿಸುತ್ತಾ, ಕಾಡಿನಲ್ಲಿ ಆಯ್ದ ಸುಮಗಳನ್ನು ಮಾಲೆ ಕಟ್ಟಿ ಮನೆಗೆ ತಂದು ತನ್ನ ಪ್ರೀತಿಯ ಹಸುವಿನ ಕೋಡಿಗೆ ಅದನ್ನು ಸುತ್ತುವಾಗ, ಅವಳೂ ನಿಶ್ಶಬ್ದವಾದ ಕರಿಯ ಬೆಡಗಿನ ಇರುಳಿನಂತೆಯೇ ತೋರುತ್ತಾಳೆ. ಮಲೆನಾಡಿನ ಲತೆ ಗಿಡಗಳ ನಡುವೆ ಅಲೆದಾಡುತ್ತಾ ದನಕರುಗಳೊಂದಿಗೆ ಮಾತನಾಡುತ್ತಾ, ಹಸುರು ಹುಲ್ಲಿನ ಮೇಲೆ ಮರದ ಶೀತಳವಾದ ನೆರಳಿನಲ್ಲಿ ಅವಳು ಅರ್ಧ ಒರಗಿ ಕುಳಿತಿರುವಾಗ ವನದೇವತೆಯಂತೆ ತೋರುತ್ತಾಳೆ. ಹೂವುಗಳಿಂದ ಕೂಡಿದ ಲತೆ"-

“ಸಾಕಯ್ಯ ಏನು ಕವಿಯಾಗಿಬಿಟ್ಟೆಯೆಲ್ಲ! ಯಾರೂ ಕಾಣದ ಮಲೆನಾಡ ಹುಡುಗಿಯೆ ನಿನ್ನವಳು.”

ತನ್ನ ವರ್ಣನೆಯಲ್ಲಿ ಈ ರೀತಿ ಮಧ್ಯೆ ವಿಘ್ನವುಂಟಾದುದರಿಂದ ನನ್ನ ಸ್ನೇಹಿತನಿಗೆ ಅಷ್ಟೇನೂ ಸಮಾಧಾನವಾಗಲಿಲ್ಲ. ಆದರೂ

“ಹೌದೊ ಕವಿಯಾಗಿಬಿಟ್ಟೆ. ಪ್ರೇಮವು ಎಲ್ಲರನ್ನೂ ಕವಿಗಳನ್ನು ಮಾಡುವುದು. ಇವಳು ನನ್ನಲ್ಲಿ ಪ್ರಸನ್ನಳಾದಮೇಲೆ ಕವಿತೆಯು ಪ್ರಸನ್ನಳಾಗುವುದೇನು ಹೆಚ್ಚು?" ಎಂದನು. ನಾನು “ಇದೆಲ್ಲಾ ಸರಿಕಣೋ. ಅವಳಿಗೆ ನಿನ್ನಲ್ಲಿ ಮನಸ್ಸಿದೆಯೆ? ನೀನು ಈಕಡೆ ಗಾಳಿಗೋಪರ ಕಟ್ಟುತ್ತಿರುವುದು. ಆಕಡೆ ಅವಳು ಇನ್ನಾರನ್ನಾದರೂ ಪ್ರೀತಿಸುವುದು, ಅಥವ ಅವಳ ತಂದೆ ಅವಳನ್ನು ಮತ್ತಾರಾದರೂ ಧನಿಕನಿಗೆ ವಿವಾಹ ಮಾಡಿಕೊಡುವುದು. ಆಗ?"

ನನ್ನ ಸ್ನೇಹಿತನು ನನ್ನ ಮಾತನ್ನು ಕೇಳಿ ಹಾಸ್ಯ ಮಾಡುತ್ತಾ "ಅಯ್ಯೋ! ನೀನು ಅವಳನ್ನು ಒಂದು ಸಲ ನೋಡಿಬಿಟ್ಟರೆ ಸಾಕು. ನಿನ್ನ ಅನುಮಾನವೆಲ್ಲಾ ಮಾಯವಾಗಿಬಿಡುವುದು. ಇನ್ನು ಅವಳ ಅಪ್ಪ? ಅವನೂ ಒಪ್ಪಲೇಬೇಕು. ನೀನು ಮದುವೆಗೆ ಬರಬೇಕೊ, ಬೇಕಾದರೆ ಅಯ್ಯಂಗಾರ್‍ರ ಅಡಿಗೆಯವರನ್ನೇ ಕರಸಿಬಿಡುತ್ತೇನೆ" ಎಂದನು.

ನನಗೆ ಬಹಳ ಸಂತೋಷವಾಯಿತೆಂದು ಹೇಳಬೇಕಾದುದಿಲ್ಲ. ಹಾಗಾದರೆ “ಇಂಟರ್ ಮ್ಯಾರೇಜ್ ಬೇಡವೊ?" ಎಂದೆ. ಅವನು ನಗುತ್ತಾ "ಪುಣ್ಯಾತ್ಮ ಇಗೋ ನಿನ್ನ ಇಂಟರ್ ಮ್ಯಾರೇಜ್‍ಗೆ ನಮಸ್ಕಾರ ತಕೊ" ಎಂದನು.

* * * *

ಮೂರು ವರ್ಷ ಕಳೆದುಹೋಯಿತು. ಅವನ ಸುದ್ದಿಯೇ ತಿಳಿಯಲಿಲ್ಲ. ಆಮೇಲೆ ಒಂದು ದಿವಸ ನಮ್ಮಿಬ್ಬರಿಗೂ ಗುರುತಿದ್ದ ಮತ್ತೊಬ್ಬ ಸಹಪಾಟಿ ಸಿಕ್ಕಿದೆ.

“ನಾನು-ಗೆ ಮದುವೆ ಆಯಿತೇನೊ?” ಎಂದೆ.

ಅವನ ಮುಖವು ಪೆಚ್ಚಾಯಿತು. ಅವನು ತಕ್ಷಣ ಪ್ರತ್ಯುತ್ತರ ಕೊಡಲಿಲ್ಲ. “ಯಾಕೆ ಮದುವೆ ಆಗಲಿಲ್ಲವೊ? ಹೋಗಲಿ ಆ ಹೆಣ್ಣು ಇಲ್ಲದಿದ್ದರೆ ಇನ್ನೊಂದು ಬರುತ್ತದೆ" ಎಂದೆ. ಸಹಪಾಟಿಯು ಮೆಲ್ಲನೆ "ಅವನು ಸತ್ತುಹೋದ" ಎಂದನು. ಆಕಾಶವೇ ನನ್ನ ತಲೆಯಮೇಲೆ ಕಳಚಿಬಿದ್ದಂತಾಯಿತು. ಇಬ್ಬರೂ ಯಾವ ಮಾತನ್ನೂ ಆಡದೆ ನೀರವವಾಗಿ ಸತ್ತವನಿಗೆ ನಮ್ಮ ಗೌರವವನ್ನು ಸಲ್ಲಿಸಿದೆವು. ದುಃಖದ ಮೊದಲ ಆವೇಗವು ಕಡಮೆಯಾದಮೇಲೆ "ಏನಾಗಿತ್ತು?” ಎಂದೆ.

ನನ್ನ ಸ್ನೇಹಿತನು "ಸಾಯುವ ಹಾಗೆ ಆಗಿತ್ತು" ಎಂದನು.

ಅವನ ಮಾತನ್ನು ಕೇಳಿ ಆ ದುಃಖದಲ್ಲಿಯೂ ಸ್ವಲ್ಪ ನಗು ಬಂದಿತು. "ಅಂದರೆ?” ಎಂದು ಕೇಳಿದೆ. "ಬಂದೂಕವನ್ನು ಎದೆಗೆ ಹೊಡೆದುಕೊಂಡು ಸತ್ತ."

ನನಗೆ ಏನೋ ಹೊಳೆಯಿತು. "ಹುಡುಗಿಯೋ?” ಎಂದೆ.

“ಅವಳೂ ಆ ದಿವಸವೇ ಭಾವಿಗೆ ಬಿದ್ದು ಸತ್ತಳು.".

ನನಗೆ ನಿಶ್ಚಯವು ಸ್ಪಷ್ಟವಾಗಿ ಹೊಳೆಯಿತು. ನನ್ನ ಸ್ನೇಹಿತನು "ತಿಳಿದೂ ತಿಳಿದೂ ಹುಡುಗಿಯ ತಂದೆಯು ಅವಳನ್ನು ಮತ್ತೊಬ್ಬ ಕಾಫಿ 'ಪ್ಲಾಂಟರ್'ಗೆ ಮದುವೆ ಮಾಡಲು ಲಗ್ನವನ್ನಿಟ್ಟನು. ಲಗ್ನಕ್ಕೆ ಮೊದಲ ದಿವಸ ರಾತ್ರಿ ಈ ಎರಡು ಆತ್ಮಹತ್ಯಗಳೂ ನಡೆದುಹೋದುವು" ಎಂದನು.

ನನಗೆ ಮಂಕು ಹಿಡಿದಂತಾಯಿತು. ಮನಸ್ಸು ಆ ದಿನವೆಲ್ಲಾ ನನ್ನ ಸ್ವಾಧೀನಕ್ಕೆ ಬರಲಿಲ್ಲ.




ಅಂದು, ಇಂದು


ನಾನು ಕಮಲೆ ಇಬ್ಬರೂ ಬಾಲ್ಯವನ್ನು ಒಟ್ಟಿಗೆ ಕಳೆದೆವು. ನಾವಿಬೃರೂ ಹೋಗುತ್ತಿದ್ದುದು ಒಂದೇ ಶಾಲೆಗೆ. ನಮ್ಮ ಹಳ್ಳಿಯಲ್ಲಿ ಆಗ ಈಗಿನ ಹಾಗೆ ಹೆಣ್ಣುಹುಡುಗಿಯರಿಗೆ ಪ್ರತ್ಯೇಕವಾದ ಶಾಲೆ ಇರಲಿಲ್ಲ. ನಾನು ನಿತ್ಯ ಹೋಗುವಾಗ ಕಮಲೆಯನ್ನು ಜತೆಯಲ್ಲಿ ಕರೆದುಕೊಂಡೇ ಹೋಗುತ್ತಲಿದ್ದೆ. ಶಾಲೆಗೆ ಹೊತ್ತುಮೀರಿ ಹೋದ ದಿವಸ ತಪ್ಪನ್ನು ಕಮಲೆಯ ಮೇಲೆ ಹಾಕಿಬಿಡುತ್ತಿದ್ದೆ. ಉಪಾಧ್ಯಾಯರು ಕೋಪದಿಂದ ನನ್ನನ್ನು ಹೊಡೆಯಲು ಎತ್ತಿದ್ದ ದೊಣ್ಣೆಯು, ಕಮಲೆಯಮೇಲೆ ತಪ್ಪನ್ನು ಹಾಕಿಬಿಟ್ಟ ಕೂಡಲೆ ಕೆಳಕ್ಕೆ ಬಿದ್ದು ಹೋಗುತ್ತಲಿದ್ದಿತು. ಶಾಲೆಯಲ್ಲಿ ಕಮಲೆಯೇ ರಾಣಿಯೆಂದು ನಿರ್ವಿವಾದವಾಗಿ ತೀರ್ಮಾನವಾಗಿಬಿಟ್ಟಿದ್ದಿತು. ಅವಳ ಮಾತನ್ನು ಹುಡುಗರಾಗಲಿ ಹುಡುಗಿಯರಾಗಲಿ ಮೀರುತ್ತಿರಲಿಲ್ಲ.

ಶಾಲೆಯ ಮುಂದುಗಡೆಯೇ ಕಾಲುವೆ ಹರಿಯುತ್ತಿದೆ. ಕಾಲುವೆ ಏರಿಯ ಕೆಳಗೆ ವಿಶಾಲವಾದ ಭತ್ತದ ಬಯಲು. ಕಾಲುವೆಯ ಮೆಟ್ಟಿಲುಗಳ ಮೇಲೆ ಕಾಲುಗಳನ್ನು ನೀರಿನಲ್ಲಿ ಇಳಿಯಬಿಟ್ಟುಕೊಂಡು ನಾನೂ ಕಮಲೆಯೂ ಮುಳುಗುವ ಸೂರ್ಯನ ಕಿರಣಗಳಿಂದ ಹೊನ್ನಾದ ಪೈರಿನ ಬಯಲನ್ನು ನೋಡುತ್ತಿದ್ದೆವು. ಕಮಲೆಯು ಕೈಯಲ್ಲಿ ನೀರನ್ನು ಎತ್ತಿ ಮೇಲಕ್ಕೆ ಎಸೆದು ಅದು ಮುತ್ತಾಗುವುದನ್ನು ಕಂಡು “ನೋಡು, ನೋಡು, ಅದ. ನಿನಗೆ” ಎನ್ನುತ್ತಿದ್ದಳು. ಚೀರು ಕೊಳವೆಯಲ್ಲಿ ನೀರನ್ನು ತುಂಬಿ ನನ್ನ ಮೇಲೆ ಚಿಮ್ಮುತ್ತಿದ್ದಳು.

ನಮ್ಮ ತಂದೆಯವರಿಗೆ ಒಂದು ತೋಟವಿದೆ. ಶಾಲೆ ಮುಗಿದನಂತರ ನಾವು ತೋಟಕ್ಕೆ ಹೋಗುತ್ತಿದ್ದೆವು. ಅಲ್ಲಿ ಕಮಲೆಯ ಎದುರಿಗೆ ನಾನೆ ಧೀರ: ಸೀಬೆಮರ, ಚಕ್ಕೋತದ ಮರ, ಕಿತ್ತಲೆ ಮರ ಮೊದಲಾದುವುಗಳನ್ನೆಲ್ಲಾ ಹತ್ತಿ ಹಣ್ಣುಗಳನ್ನು ಕೊಯ್ಯುತ್ತಿದ್ದೆ. ಕಮಲೆಯು ಅವುಗಳನ್ನೆಲ್ಲಾ ಸುಲಿಯುತ್ತಿದ್ದಳು. ಇಬ್ಬರೂ ತಿನ್ನುತ್ತಿದ್ದೆವು. ಒಂದು ದಿವಸ ನಾನು ತೋಟದಲ್ಲಿ ಅನೇಕ ಹೂವುಗಳನ್ನು ಕೊಯ್ದು ತಂದು ಕಮಲೆಗೆ ಕೊಟ್ಟೆ. ಅವಳು ಮಧ್ಯೆ ಮಧ್ಯೆ ಮರುಗವನ್ನೂ ಗುಲಾಬಿಯ ಎಸಳನ್ನೂ ಸಂಪಿಗೆಯ ದಳವನ್ನೂ ಸೇರಿಸಿ ಅತ್ಯಂತ ಅಲಂಕಾರವಾದ ಹಾರವನ್ನು ಕಟ್ಟಿದಳು. ಅವಳ ಕೈ ಚುರುಕನ್ನು ನೋಡಿ ನಾನು ಬೆರಗಾದೆ. ಹೆಂಗಸರಿಗೆ ಕಲೆಯು ಕಲಿಸದೆ ಬರುವುದೇನೋ ಎಂದುಕೊಂಡೆ. ಕಮಲೆಯು ಸುಂದರವಾದ ಆ ಮಾಲೆಯನ್ನು ನನ್ನ ಮೇಲೆ ಎಸೆದಳು. ಆ ಬಾಲ್ಯದಲ್ಲಿಯೂ ನನಗೆ ಅದರಿಂದ ಬಹಳ ಆನಂದವಾಯಿತು. ನಾನು “ಕಮಲೆ ನೀನೆ ಲಕ್ಷ್ಮಿ; ನಾನು ನಿನ್ನ ಭಕ್ತನೆಂದು ಈ ಮಾಲೆಯನ್ನು ನನಗೆ ಕೊಟ್ಟೆಯಾ” ಎಂದೆ. ಕಮಲೆಯು “ಲಕ್ಷ್ಮಿ ಯಾರು? ಭಕ್ತನಾರು? ಏನೋ ಎಸೆದೆ” ಎಂದಳು.

ಆ ಬಾಲ್ಯದಲ್ಲಿ ನಾವು ಆಡಿದ ಆಟಗಳಿಗೆ ಮೇರೆಯುಂಟೆ? ಅವಳು ಹುಡುಗಿ, ನಾನು ಹುಡುಗ, “ನೀನು ದಮಯಂತಿ ನಾನು ನಳ” ಎಂದೆ. ಕಮಲೆಯು “ಅಲ್ಲ ನಾನು ಭಾಮೆ, ನೀನು ಕೃಷ್ಣ” ಎಂದಳು. ಹೀಗೆಲ್ಲಾ ಆಟವಾಡುತ್ತಾ ಮನೆಗೆ ಬಂದಮೇಲೆ ಸ್ವಲ್ಪ ಬೈಗಳವಾಗುತ್ತಿತ್ತು,

ಇದು ಅಂದಿನ ವಿಷಯವಾಯಿತು. ಈಚೆಗೆ ನಾನು ವಿದ್ಯಾರ್ಜನೆಗಾಗಿ ನಮ್ಮ ಹಳ್ಳಿಯನ್ನು ಬಿಟ್ಟು, ಮೈಸೂರು, ಬೊಂಬಾಯಿ ಕಡೆಗೆ ಹೋದೆ. ಕಮಲೆಗೂ ಆಗಲೇ ಮದುವೆಯಾಗಿ ಅವಳೂ ಗಂಡನ ಮನೆಗೆ ಹೊರಟುಹೋದಳು.

ವಿದ್ಯಾಭ್ಯಾಸವು ಮುಗಿದ ನಂತರ ನಮ್ಮ ಹಳ್ಳಿಗೆ ಹೋದೆ. ಕರ್ಣಕಠೋರವಾದ ನುಡಿಯನ್ನು ಕೇಳಿದೆ. ಕಮಲೆ ವಿಧವೆ ಎಂದು ತಿಳಿಯಿತು. ದುಃಖದಿಂದ ಹೃದಯವು ವಿದೀರ್ಣವಾಯಿತು. ನಾನು ಹುಚ್ಚನಂತೆ ಧೂಳಿನಲ್ಲಿ ಬಿದ್ದು ಹೊರಳಿ ಅತ್ತೆ, ಶಾಲೆಯ ಆಟಗಳೆಲ್ಲಾ ನೆನ್ನೆಯವೋ ಎಂಬಂತೆ ತೋರಿತು. ವಿಧಿಯು ಶುದ್ದ ಕುರುಡ, ರಸಿಕನಲ್ಲ; ಕಲೆಯ ತಿರುಳನ್ನು ತಿಳಿಯನು; ಸೌಂದರ್ಯದ ಆಕರವನ್ನೇ ಹಾಳುಮಾಡಿದ; ಬೆಳೆಯುವ ಮುನ್ನ ಗಿಡವನ್ನು ಕುಯಿದ; ಹೂತು ಕಾತು ಫಲ ಬಿಡುವ ಮುನ್ನ ಲತೆಯನ್ನು ಒಣಗಿಸಿದ. ಅಯ್ಯೋ ಕಮಲೆಯಂತಹ ಹುಡುಗಿಗೆ ಇಂತಹ ಗತಿಯೇ ಎಂದುಕೊಂಡೆ.