ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಒಡೆಯರ ಕಾಲದ ಕನ್ನಡ ಸಾಹಿತ್ಯ

ವಿಕಿಸೋರ್ಸ್ದಿಂದ

ಒಡೆಯರ ಕಾಲದ ಕನ್ನಡ ಸಾಹಿತ್ಯ: - ಒಂದನೆಯ ರಾಜ ಒಡೆಯರು ವಿಜಯನಗರದ ರಾಜ್ಯದ ಪರಮಾಧಿಕಾರವನ್ನು ಅಲ್ಲಗಳೆದು ಸ್ವತಂತ್ರವಾದಾಗಿನಿಂದ ಮೈಸೂರು ಒಡೆಯರ ಕಾಲ ಆರಂಭವಾಯಿತೆಂದು ತಿಳಿಯಬೇಕು. ಅಲ್ಲಿಂದ ಮೊದಲುಗೊಂಡು ಜಯಚಾಮರಾಜ ಒಡೆಯರ ಕಾಲದವರೆಗೂ ಕನ್ನಡ ಸಾಹಿತ್ಯದ ಸರ್ವತೋಮುಖವಾದ ಅಭಿವೃದ್ದಿಗೆ ರಾಜಮಹಾರಾಜರಿಂದ ದೊರೆತ ಪ್ರೋತ್ಸಾಹದ ವಿಷಯವನ್ನಿಲ್ಲಿ ಸಂಗ್ರಹವಾಗಿ ನಿರೂಪಿಸಿದೆ. ಚಿಕ್ಕದೇವರಾಯನ ವಂಶಾವಳಿಯೂ ರಾಜನೃಪಚರಿತ್ರೆಯಿಂದಲೇ ಆರಂಭವಾಗಿದೆ. ಈ ದೊರೆ ಶ್ರೀವೈಷ್ಣವ ಧರ್ಮವನ್ನು ಸ್ವೀಕರಿಸಿದ. ಈತನ ಪ್ರಧಾನಮಂತ್ರಿ ಯಾಗಿದ್ದ 'ತಿರುಮಲಾರ್ಯ'ನೆಂಬ ಶ್ರೀವೈಷ್ಣವ ಕವಿ "ಕರ್ಣವೃತ್ತಾಂತಕಥೆ "ಎಂಬ ಸಾಂಗತ್ಯಕಾವ್ಯವನ್ನು ರಚಿಸಿದ್ದಾನೆ. ಇದು ಅಪೂರ್ವವಾದ ಕಾವ್ಯ. ಈಗ ದೊರೆತಿರುವ ಗ್ರಂಥದಲ್ಲಿ ಹನ್ನೊಂದು ಸಂಧಿಗಳೂ ಹನ್ನೆರಡನೆಯದರಲ್ಲಿ ಕೆಲವು ಪದ್ಯಗಳೂ ಇವೆ. ಮಹಾಭಾರತದ ಶಾಂತಿಪರ್ವದಲ್ಲಿ ಬಂದಿರುವ ಕರ್ಣನ ಚರಿತ್ರೆಯೇ ಈ ಗ್ರಂಥದ ವಸ್ತು.

ರಾಜ ಒಡೆಯನ ತರುವಾಯ ಪಟ್ಟಕ್ಕೆ ಬಂದ ಆರನೆ ಚಾಮರಾಜ ಒಡೆಯ ಚಾಮರಾಜೋಕ್ತಿವಿಲಾಸ" ಎಂಬ ಹೆಸರಿನಲ್ಲಿ ವಾಲ್ಮೀಕಿ ರಾಮಾಯಣವನ್ನು ಸರಳಗನ್ನಡ ಗದ್ಯಕಾವ್ಯವಾಗಿ ಬರೆದಿದ್ದಾನೆ. ಇದು ಮೂಲ ಗ್ರಂಥಕ್ಕೆ ಅನುಸಾರವಾದ ಗದ್ಯಾನುವಾದ. ಈ ಗ್ರಂಥವನ್ನು ಲೋಕೋಪಕಾರಕ್ಕಾಗಿ ಧೀಮಂತ ವಿದ್ವಾಂಸನಾದ ವಿರೂಪಾಕ್ಷನಿಂದ ಅರಸ ಬರೆಯಿಸಿದನೆಂಬ ಅರ್ಥಬರುವ ಒಂದು ಸಂಸ್ಕೃತ ಶ್ಲೋಕ ಗ್ರಂಥದ ಆರಂಭದಲ್ಲಿಯೇ ಬಂದಿದೆ. ಆದ್ದರಿಂದ ಇದು ಅರಸನ ಹೆಸರಿನಲ್ಲಿ ಅವನ ಆಶ್ರಿತನಾದ ವಿದ್ವಾಂಸನೊಬ್ಬ ಬರೆದದ್ದಾಗಿರಬಹುದೆಂದು ತೋರುತ್ತದೆ. ಚಾಮರಾಜ ಮಗೆಪ್ರಕಾಶವೆಂಬ ಇನ್ನೊಂದು ಗ್ರಂಥವನ್ನೂ ರಚಿಸಿರುವನೆಂಬ ಪ್ರತೀತಿ ಇದೆ. ಆದರೆ ಅದು ಬ್ರಹ್ಮೋತ್ತರಖಂಡದ ಕನ್ನಡ ಟೀಕೆಯೇ ಹೊರತು ಕಾವ್ಯವಲ್ಲ. ಈ ಎರಡು ಕೃತಿಗಳೂ ಆ ಕಾಲಕ್ಕೆ ರಾಜ ಮತ್ತು ಪ್ರಜೆಗಳಿಬ್ಬರಿಗೂ ಸಂಸ್ಕೃತದಲ್ಲಿದ್ದ ವೈದಿಕ ಸಾಹಿತ್ಯವನ್ನು ಸಾಮಾನ್ಯ ಜನರಿಗೂ ಅರ್ಥವಾಗುವಂತೆ ಕನ್ನಡದಲ್ಲಿ ಬರೆಯುವ, ಬರೆಯಿಸುವ ಶ್ರದ್ದೆ ಹೆಚ್ಚಿದ್ದಿತೆಂಬುದನ್ನು ಸ್ಪಷ್ಟಪಡಿಸುತ್ತವೆ. ಈ ರಾಜನ ಆಶ್ರಯದಲ್ಲಿದ್ದ ರಾಮಚಂದ್ರನೆಂಬ ವಿದ್ವಾಂಸ ಒಂದು "ಅಶ್ವಶಾಸ್ತ್ರ"ವನ್ನು ರಚಿಸಿದ್ದಾನೆ. ಶಾಲಿಹೋತ್ರಕೃತವಾದ ಸಂಸ್ಕೃತ ಗ್ರಂಥವನ್ನು ಬಾಲಕರಿರುವಂತೆ ಸಾಮಗೋಪಾಂಗವಾಗಿ ಕನ್ನಡಿಸಿ ಬರೆದ ಅನುವಾದವಿದು. ಪದ್ಮಣಪಂಡಿತ ಈ ರಾಜನ ಆಣತಿಯಂತೆ "ಹಯಸಾರಸಮುಚ್ಚಯ" ಎಂಬ ಪದ್ಯಗ್ರಂಥವನ್ನು ರಚಿಸಿದ್ದಾನೆ. ತಾನು ವಿದ್ವಜ್ಜನಮಂಡನನೆಂದೂ ವೈದ್ಯಸುವಂಶಾಂಬರ ಸೂರ್ಯನೆಂದೂ ಕವಿ ಹೊಗಳಿಕೊಂಡಿದ್ದಾನೆ.

ಚಾಮರಾಜನ ಅನಂತರ ಪ್ರಭುಪಟ್ಟಕ್ಕೆ ಬಂದ ಕಂಠೀರವ ನರಸರಾಜ ಒಡೆಯ ಮೈಸೂರಿನ ರಾಜ್ಯವನ್ನು ವಿಸ್ತರಿಸಿ ಅಂತ್ಯಶ್ಶತ್ರುಗಳನ್ನೂ ಅಡಗಿಸಿ ಮೈಸೂರು ರಾಜ್ಯದ ಅಭ್ಯುದಯವನ್ನು ಸಾಧಿಸಿದ. ಈತನ ಆಸ್ಥಾನಕವಿಯಾದ ಗೋವಿಂದ ವೈದ್ಯ "ಕಂಠೀರವನರಸರಾಜವಿಜಯಂ" ಎಂಬ ವಿಸ್ತಾರವಾದ ಒಂದು ಸಾಂಗತ್ಯಗ್ರಂಥವನ್ನು ರಚಿಸಿದ್ದಾನೆ. ಇದರಲ್ಲಿ ತನ್ನ ಅರಸನ ಯುದ್ಧವಿಜಯಗಳನ್ನು ಹೊಗಳಿದ್ದಾನೆ. ರಣದುಲ್ಲಾಖಾನನೆಂಬ ಬಿಜಾಪುರದ ಮುಸಲ್ಮಾನ ಸರದಾರನ ಮೇಲೆ ಕಂಠೀರವ ನರಸರಾಜ ಗಳಿಸಿದ ಯುದ್ಧವಿಜಯ ಇಲ್ಲಿ ಪ್ರಧಾನವಾಗಿದೆ. ಇಪ್ಪತ್ತಾರು ಸಂಧಿಗಳುಳ್ಳ ಈ ಗ್ರಂಥದಲ್ಲಿ ರಾಜನ ವಂಶವರ್ಣನೆಯಿಂದ ತೊಡಗಿ ಅವನು ನಡೆಸಿದ ದಿಗ್ವಾಜಯ ಕಥೆಗಳನ್ನೆಲ್ಲ ವಿವರವಾಗಿ ನಿರೂಪಿಸಲಾಗಿದೆ. ಅನುಷಂಗಿಕವಾಗಿ ಶ್ರೀರಂಗಪಟ್ಟಣದ ವರ್ಣನೆ, ರಂಗನಾಥಸ್ವಾಮಿಯ ಮಹಿಮಾ ವರ್ಣನೆ, ಸ್ವಾಮಿಯ ರಥೋತ್ಸವ ವರ್ಣನೆ, ರಾಜಸಭೆಯ ವರ್ಣನೆ, ಜಂಬೂ ಸವಾರಿಯ ವರ್ಣನೆ-ಮೊದಲಾದ ಹಲವು ಸ್ವಾರಸ್ಯವಾದ ವರ್ಣನಾಭಾಗಗಳು ಈ ಕಾವ್ಯಕ್ಕೆ ಮೆರುಗನ್ನು ಕೊಟ್ಟಿವೆ. ಮುಖ್ಯಕಥೆಗೆ ಸಂಬಂಧಿಸಿದ ಮದನಮೋಹಿನಿಯ ಕಥೆ ಶೃಂಗಾರಭರಿತವಾಗಿದ್ದು ಓದುಗರಿಗೆ ಆಕರ್ಷಕವೆನಿಸಿದರೂ ಗ್ರಂಥದ ಮೂಲ ವಸ್ತುವಿನ ಏಕತೆಗೆ ಭಂಗ ತಂದಿದೆ. ಆದರೆ ತನ್ನ ಕಾವ್ಯದಲ್ಲಿ ಶೃಂಗಾರರಸ ನಿರೂಪಣೆಗೆ ಒಂದು ಅವಕಾಶ ಕಲ್ಪಿಸಿಕೊಳ್ಳುವ ಹವಣಿಕೆ ಕವಿಯದು.

ದೇವತಾಸ್ತುತಿಯಲ್ಲ ಕೇಳ್ವೊಡೆ, ನರಸ್ತುತಿ
ಯಾವ ವೆಗ್ಗಳವೆನಬೇಡ
ನಾವಿಷ್ಣುಃ ಪೃಥಿವೀಪತಿಯೆಂದು ವೇ
ದಾವಳಿಗಳು ಸಾರುತಿವೆ ಕೊ


ಎಂದು ಹೇಳಿ ಮಾನವ ಚರಿತ್ರೆಯನ್ನು ಬರೆಯಹೊರಟುದರ ಔಚಿತ್ಯವನ್ನು ಕವಿ ಸಮರ್ಥಿಸಿಕೊಂಡಿದ್ದಾನೆ. ಅಷ್ಟೇ ಅಲ್ಲದೆ ಇದು ಅಂದಿನ ನರಸಿಂಹಸ್ವಾಮಿ ಕಲಿಯುಗದ ಮನುಜರನ್ನು ಸಂಹರಿಸುವ ಸಲುವಾಗಿ ನರಜನ್ಮದಲ್ಲಿ ಬಂದು ಕಂಠೀರವ ನರಸರಾಜನಾದನಂತೆ. ನರಸಿಂಹಸ್ವಾಮಿ ಅವತರಿಸಿದ ತಿಂಗಳು, ತಿಥಿವಾರ ಮುಹೂರ್ತಗಳಲ್ಲಿಯೇ ಈ ದೊರೆ ಹುಟ್ಟಿದನೆಂದು ಹೇಳಿ ತನ್ನ ಅರಸ ನರಸಿಂಹನ ಅವತಾರವೇ ಆಗಿರಬೇಕೆಂದು ಕವಿ ಸ್ವಾರಸ್ಯವಾಗಿ ತರ್ಕಿಸುತ್ತಾನೆ.

ಈ ಕೃತಿಯನ್ನು ರಚಿಸಿದ ಗೋವಿಂದವೈದ್ಯ ಶ್ರೀನಿವಾಸಪಂಡಿತನ ಮಗ. ವೇದಾಧ್ಯಯನಸಂಪನ್ನನೂ ಮಂತ್ರಶಾಸ್ತ್ರವೇತ್ತನೂ ಆದ ಗೋವಿಂದವೈದ್ಯ ಕಾವ್ಯ ನಾಟಕಾಲಂಕಾರಗಳನ್ನೂ ಚೆನ್ನಾಗಿ ಅಭ್ಯಾಸಮಾಡಿದ್ದ. ಇವನ ಹೆಸರಿನಲ್ಲಿಯೇ ವೈದ್ಯಶಬ್ದ ಸೇರಿಕೊಂಡಿದೆ. ಈತನ ತಂದೆಯೂ ಪಂಡಿತ. ಬಹುಶಃ ಇವರು ವೈದ್ಯವೃತ್ತಿಯವರೂ ಆಗಿರಬಹುದು. ಅರಸನ ದಳವಾಯಿಯಾದ ನಂಜರಾಜೇಂದ್ರನ ಪ್ರೇರಣೆಯಂತೆ ಈ ಕಾವ್ಯವನ್ನು ರಚಿಸಿದುದಾಗಿ ಕವಿ ಪೀಠಿಕಾಸಂಧಿಯ ಕೊನೆಯಲ್ಲಿ ಹೇಳಿಕೊಂಡಿದ್ದಾನೆ.

ಗೋವಿಂದವೈದ್ಯ ತನ್ನ ಅರಸನ ಈ ಪುಣ್ಯಚರಿತ್ರೆಯನ್ನು ಬರೆದು ಭಾರತಿನಂಜ ಎಂಬ ಗಮಕಿಯಿಂದ ರಾಜಸಭೆಯಲ್ಲಿ ಓದಿಸಿದ. ಪೀಠಿಕಾಸಂಧಿಯಲ್ಲಿ ದೊರೆರಾಯ ನರಸರಾಜೇಂದ್ರನ ಚರಿತೆಯ ನೊರೆದ ಭಾರತಿ ನಂಜನೊಲಿದು

-ಎಂಬ ಹೇಳಿಕೆ ಇರುವುದರಿಂದ ಈ ಕೃತಿಯನ್ನು ಭಾರತಿನಂಜನೇ ರಚಿಸಿದನೆಂಬ ಭಾವನೆ ಬರಲು ಕಾರಣವಾಯಿತು. ಆದರೆ ಗ್ರಂಥಾಂತ್ಯದ ಗದ್ಯದಲ್ಲಿ ಗೋವಿಂದವೈದ್ಯ ಕಂಠೀರವನರಸರಾಜವಿಜಯವನ್ನು ವಿರಚಿಸಿ ಆಚಂದ್ರಾರ್ಕವಾಗಿ ಭೂಮಿಯೊಳಿರಲಿಯೆಂದು ಭಾರತಿನಂಜನ ಮುಖದಿಂದ ವಾಚಿಸಿ ರಾಜಾಸ್ಥಾನದಲ್ಲಿ ವಿಸ್ತಾರ ಪಡಿಸಿದುದು ಎಂಬ ಸ್ಪಷ್ಟವಾದ ಹೇಳಿಕೆಯಿದೆ.

ಪಂಪರನ್ನರು ಪೌರಾಣಿಕ ಕಥೆ ಹೇಳುತ್ತ ಹಿಂದಿನ ವೀರರೊಡನೆ ತಮ್ಮ ಅರಸರನ್ನು ಹೋಲಿಸಿ ಕವಿತೆ ಕಟ್ಟಿದರೆ ಈ ಕವಿ ಅಂಥ ತೊಡಕು ಏನೂ ಇಲ್ಲದೆ ನೇರವಾಗಿ ತನ್ನ ದೊರೆಯ ಕಥೆಯನ್ನೇ ವಸ್ತುವನ್ನಾಗಿ ಆರಿಸಿಕೊಂಡು ಸಮಕಾಲೀನ ಇತಿಹಾಸವನ್ನು ಬರೆದು ಕೃತಕೃತ್ಯನಾಗಿದ್ದಾನೆ. ಕವಿಯ ಕಾಲದ ಜನಜೀವನದ ಒಂದು ನೈಜ ಚಿತ್ರ ಇಲ್ಲಿ ಕಾಣಸಿಕ್ಕುತ್ತದೆ. ಕಾವ್ಯದ ಭಾಷೆಯೂ ಆಡುಮಾತಿಗೆ ಹೆಚ್ಚು ಹತ್ತಿರವಾಗಿದೆ. ಅಂದಿನ ಕಾಲಕ್ಕೆ ಕನ್ನಡದಲ್ಲಿ ಬಳಕೆಗೆ ಬಂದಿದ್ದ ಹಲವು ಉರ್ದು ಪದಗಳನ್ನು ಕವಿ ಬಳಸಲು ಹಿಂತೆಗೆದಿಲ್ಲ, ಪಾತ್ಸ್ಯಾವು, ದರವೇಸಿ, ಸಲಾಮು ಮೊದಲಾದ ಹಲವು ಶಬ್ದಗಳು ಅಲ್ಲಲ್ಲಿ ಕಾಣಿಸುತ್ತವೆ. ಇಡೀ ಪದ್ಯಗಳನ್ನೇ ಉರ್ದು ಪದಗಳಿಂದಲೇ ನಿರ್ವಹಿಸಿರುವ ನಿದರ್ಶನಗಳೂ ಇವೆ.

ಕಂಠೀರವ ನರಸರಾಜರ ತರುವಾಯ ಪಟ್ಟಕ್ಕೆ ಬಂದ ಶ್ರೀ ಚಿಕ್ಕದೇವರಾಜ ಒಡೆಯ ಈ ಕಾಲದ ಕನ್ನಡ ಸಾಹಿತ್ಯ ಪ್ರಪಂಚದಲ್ಲಿ ಅತ್ಯಂತ ಪ್ರಧಾನನೆಂದು ಹೇಳಬಹುದು. ಈ ರಾಜ ಮೈಸೂರಿನ ಸರಹದ್ದುಗಳನ್ನು ವಿಸ್ತರಿಸಿ ರಾಜ್ಯದ ಶ್ರೀಮಂತಿಕೆಯನ್ನು ಹೆಚ್ಚಿಸಿದ. ಹಲವಾರು ಶತ್ರುಗಳನ್ನು ನಿಗ್ರಹಿಸಿ ತನ್ನ ಯುದ್ಧ ಪರಾಕ್ರಮವನ್ನು ಮೆರೆದ. ಅದಕ್ಕಿಂತ ಹೆಚ್ಚಾಗಿ ಈ ದೊರೆ ಸ್ವಹಸ್ತ-ಪರಹಸ್ತಗಳಿಂದ ಸಾಹಿತ್ಯ ಕೈಂಕರ್ಯವನ್ನು ನಡೆಯಿಸಿ ಕೀರ್ತಿವಂತನಾದ. ಈತ ಸ್ವಯಂ ಕವಿ. ಚಿಕದೇವರಾಜಬಿನ್ನಪಂ, ಗೀತಗೋಪಾಲ, ಭಾಗವತ, ಶೇಷಧರ್ಮ, ಭಾರತ-ಎಂಬ ಗ್ರಂಥಗಳನ್ನು ರಚಿಸಿದನೆಂದು ತಿಳಿದುಬಂದಿದೆ. ಗೀತಗೋಪಾಲದಲ್ಲಿ ತಿರುಮಲಾರ್ಯನೆಂಬ ಆಸ್ಥಾನಕವಿಯಿಂದ ರಚಿತವಾದ ಕೆಲವು ಪದ್ಯಗಳೂ ಸೇರಿವೆಯಾದ್ದರಿಂದ ಅದನ್ನು ಅರಸನೇ ಬರೆದನೆ, ಎಂಬ ವಿಷಯದಲ್ಲಿ ಸಂಶಯ ಮೂಡಿದೆ.

ಗೀತಗೋಪಾಲ ಜಯದೇವನ ಗೀತಗೋವಿಂದವೆಂಬ ಸಂಸ್ಕೃತ ಗ್ರಂಥದ ಮಾದರಿಯಲ್ಲಿ ರಚಿತವಾದ ಉತ್ತಮ ಹಾಡುಗಳ ಸಂಕಲನ. ಮೋಕ್ಷೋಪಾಯವನ್ನು ಸಾಧಿಸುವುದಕ್ಕೆ ಉಪಾಯವಾದ ಪ್ರಪತ್ತಿಸ್ವರೂಪವನ್ನು ಕೀರ್ತನೆಗಳ ಮುಖಾಂತರ ಪ್ರಚಾರ ಮಾಡುವುದೇ ಇಲ್ಲಿ ಕವಿಯ ಧ್ಯೇಯ. ಗೋಪಿಕಾವೃತ್ತಾಂತವನ್ನು ವರ್ಣಿಸುವ ವ್ಯಾಜದಲ್ಲಿ ಕವಿ ಭಗವಂತನ ಗುಣಾತಿಶಯಗಳನ್ನು ಕೊಂಡಾಡಿದ್ದಾನೆ. ಈ ಕೀರ್ತನೆಗಳು ಸಂಗೀತಕ್ಕೆ ಬಹಳ ಚೆನ್ನಾಗಿ ಹೊಂದಿಕೊಳ್ಳುತ್ತವೆ. ಚಿಕ್ಕದೇವರಾಯ ಸಂಗೀತ ರಸಿಕನಾಗಿದ್ದನೆಂಬುದರಲ್ಲಿ ಸಂಶಯವಿಲ್ಲ. ಸಾಹಿತ್ಯ, ಸಂಗೀತ, ಸಮರಾಂಗಣಗಳಲ್ಲಿ ಈ ದೊರೆಗೆ ಸಮಾನವಾದ ಪ್ರಭುತ್ವ ಸಿದ್ದಿಸಿತ್ತು. ಭಾಗವತವೇ ಮೊದಲಾದ ಪುರಾಣಗಳಲ್ಲಿನ ಭಕ್ತ ಭಾಗವತೋತ್ತಮರು ಉಪದೇಶಿಸಿದ ತತ್ತ್ವಗಳನ್ನೂ ತಮಿಳುನಾಡಿನ ಆಳ್ವಾರರ ತತ್ವ್ತಗಳನ್ನೂ ಆಳವಾಗಿ ಅಭ್ಯಾಸಮಾಡಿ ಅವುಗಳ ಸಾರವತ್ತಾದ ಅಂಶವನ್ನು ಈ ಕೀರ್ತನೆಗಳಲ್ಲಿ ಬಹಳ ಸರಳವಾದ ರೀತಿಯಲ್ಲಿ ದೊರೆ ನಿರೂಪಿಸಿದ್ದಾನೆ. ಕವಿ ಮೊದಲು ತಾನು ಹೇಳಬೇಕಾದ ತತ್ತ್ವವನ್ನು ವಚನದಲ್ಲಿ ಹೇಳಿ ಆಮೇಲೆ ಅದಕ್ಕೆ ಹೊಂದಿಕೆಯಾಗುವ ಕೀರ್ತನೆಯನ್ನು ಹೇಳಿದ್ದಾನೆ. ಮಹತ್ತ್ವದ ಸಂಗತಿಗಳನ್ನು ಸುಲಭ ಭಾಷೆಯಲ್ಲಿ, ಲಯಬದ್ದವಾದ ಸಂಗೀತದ ಭಾಷೆಯಲ್ಲಿ ಹೇಳಿರುವುದು ಈ ರಾಜಕವಿಯ ಹಿರಿಮೆ.

ಚಿಕದೇವರಾಜಬಿನ್ನಪ ಒಂದು ಗದ್ಯಕಾವ್ಯ. ಮೇಲುಕೋಟೆಯ ಚೆಲುವನಾರಾಯಣ ಸ್ವಾಮಿಯ ತಿರುವಡಿಗಳಲ್ಲಿ ಅರಸ ಮಾಡಿಕೊಂಡ ಮೂವತ್ತು ಭಕ್ತಿಯ ಬಿನ್ನಪಗಳು ಇಲ್ಲಿ ಇವೆ. ಶ್ರೀವಿಶಿಷ್ಟಾದ್ವೈತ ತತ್ತ್ವಗಳ ನಿರೂಪಣೆ ಇಲ್ಲಿ ಕಾವ್ಯ ಶೈಲಿಯಲ್ಲಿ ರೂಪುಗೊಂಡಿದೆ. ಅರಸನಿಗೆ ವೈಷ್ಣವಧರ್ಮದಲ್ಲಿದ್ದ ವಿಶೇಷವಾದ ನಿಷ್ಠೆ, ಯದುಗಿರಿ ನಾರಾಯಣಸ್ವಾಮಿಯಲ್ಲಿದ್ದ ದೃಢಭಕ್ತಿ ಇಲ್ಲಿ ಸುವ್ಯಕ್ತವಾಗಿವೆ. ಈತನ ಹೆಸರಿನಲ್ಲಿ ಪ್ರಸಿದ್ದವಾಗಿರುವ ಭಾಗವತಕ್ಕೆ ಚಿಕ್ಕದೇವರಾಜ ಸೂಕ್ತಿವಿಲಾಸ ಎಂಬ ಹೆಸರೂ ಇದೆ. ಸಂಸ್ಕೃತ ಭಾಗವತಕ್ಕೆ ಇದು ಒಂದು ಕನ್ನಡ ಟೀಕೆ. ಇವನ ಭಾರತವೂ ಅಷ್ಟೇ. ಶಾಂತಿಪರ್ವದಿಂದ ಮುಂದಿನ ಪರ್ವಗಳಿಗೆ ಮಾತ್ರ ಇದರಲ್ಲಿ ಕನ್ನಡ ಟೀಕೆಯಿದೆ. ಶೇಷಧರ್ಮ ಅದೇ ಹೆಸರಿನ ಸಂಸ್ಕೃತ ಗ್ರಂಥಕ್ಕೆ ಕನ್ನಡ ಟೀಕೆ. ಈ ಕಾಲದಲ್ಲಿ ಶ್ರೀವೈಷ್ಣವರೂ ಇತರ ಬ್ರಾಹ್ಮಣಕವಿಗಳೂ ಸಂಸ್ಕೃತದ ಗ್ರಂಥಗಳನೇಕಕ್ಕೆ ಕನ್ನಡದಲ್ಲಿ ವ್ಯಾಖ್ಯಾನ ಬರೆಯುವ ಕೆಲಸದಲ್ಲಿ ತೊಡಗಿದರು. ಶ್ರೀವೈಷ್ಣವಧರ್ಮ ಪ್ರಚಾರ ಅವರ ಗುರಿಯಾಗಿತ್ತು.

ಚಿಕ್ಕದೇವರಾಯನಿಗೆ ಸಾಹಿತ್ಯವಿದ್ಯಾನಿಕಷಪ್ರಸ್ತರಂ, ರಸಿಕಜನಕರ್ಣರಸಾಯನೀಕೃತ ಸಂಗೀತವಿಸ್ತರಂ ಎಂಬ ಸಾರ್ಥಕವಾದ ಬಿರುದುಗಳಿದ್ದುವು. ಈತನ ವಿಷಯವಾಗಿ ಚಿಕದೇವರಾಜವಿಜಯಂ, ಚಿಕದೇವರಾಯವಂಶಾವಳಿ, ಚಿಕದೇವರಾಜಯಶೋ ಭೂಷಣಂ, ಚಿಕದೇವರಾಜವಂಶಪ್ರಭಾವ-ಮೊದಲಾದ ಹಲವು ಗ್ರಂಥಗಳು ಹುಟ್ಟಿವೆ. ಚಿಕದೇವರಾಯನ ಪರಾಕ್ರಮ, ಶರಣಾಗತ ರಕ್ಷಣೆ, ಔದಾರ್ಯ ಮೊದಲಾದ ಗುಣಗಳನ್ನು ಹೊಗಳುವ ಕೆಲವು ತೆಲಗು ಚಾಟುಪದ್ಯಗಳೂ ಪ್ರಸಿದ್ದವಾಗಿವೆ.

ಸ್ವಯಂ ಕವಿಯೂ ಸಂಗೀತಜ್ಞನೂ ಆದ ಚಿಕ್ಕದೇವರಾಜ ಅನೇಕ ಕವಿಗಳನ್ನು ತನ್ನ ಆಸ್ಥಾನದಲ್ಲಿ ಆದರಿಸಿ ಅವರಿಂದ ಕಾವ್ಯರಚನೆ ಮಾಡಿಸಿದ. ತಿರುಮಲಾರ್ಯ ಚಿಕುಪಾಧ್ಯಾಯ, ಸಿಂಗರಾರ್ಯ, ತಿಮ್ಮಕವಿ, ಮಲ್ಲರಸ, ಚಿದಾನಂದಕವಿ, ವೇಣುಗೋಪಾಲ ವರಪ್ರಸಾದ,ಮಹಲಿಂಗರಂಗ ,ವಿಶಾಲಾಕ್ಷಪಂಡಿತ -ಮೊದಲಾದ ಅನೇಕರು ಇವನ ಆಶ್ರಿತರಾಗಿದ್ದರು. ಶೃಂಗಾರಮ್ಮ, ಹೊನ್ನಮ್ಮ ಎಂಬ ಇಬ್ಬರು ಕವಯಿತ್ರಿಯರೂ ರಾಜಾಶ್ರಯದಲ್ಲಿ ಇದ್ದು ಕೃತಿರಚನೆ ಮಾಡಿದರು. ಲೋಕಪ್ರಸಿದ್ದನಾದ ವಿಜಯನಗರದ ಶ್ರೀಕೃಷ್ಣದೇವರಾಯನ ಹಾಗೆಯೇ ಚಿಕ್ಕದೇವರಾಯ ಒಡೆಯನೂ ಸಾಹಿತ್ಯಸಂಗೀತ ಸಮರಾಂಗಣ ಸಾರ್ವಭೌಮನೆನಿಸಿಕೊಂಡು; ಕವಿಜನರಿಗೆ ಆಶ್ರಯದಾತನಾಗಿ ಮೈಸೂರು ಒಡೆಯರ ಪರಂಪರೆಯಲ್ಲಿ ಅತ್ಯಂತ ಮಹಿಮಾನ್ವಿತನಾಗಿ ರಾರಾಜಿಸಿದ.

ತಿರುಮಲಾರ್ಯ ಚಿಕ್ಕದೇವರಾಯನ ಮಂತ್ರಿ. ಈತ ಅಪ್ರತಿಮವೀರ ಚರಿತ್ರೆ ಎಂಬ ಅಲಂಕಾರಗ್ರಂಥವನ್ನೂ ಚಿಕ್ಕದೇವರಾಯ ವಂಶಾವಳಿ ಎಂಬ ಗದ್ಯಕಾವ್ಯವನ್ನೂ ಚಿಕದೇವರಾಜವಿಜಯಂ ಎಂಬ ಒಂದು ಚಂಪುಕಾವ್ಯವನ್ನೂ ಚಿಕದೇವರಾಜ ಶತಕವನ್ನೂ ರಚಿಸಿದ್ದಾನೆ. ಇವುಗಳಲ್ಲಿ ಶತಕ ಇನ್ನೂ ಸಿಕ್ಕಿಲ್ಲ. ಚಿಕದೇವರಾಯ ವಂಶಾವಳಿ ಅಪುರ್ಣವಾಗಿದೆ. ಇದರಲ್ಲಿ ರಾಜನೃಪನಿಂದ ಹಿಡಿದು ದೊಡ್ಡದೇವರಾಜನವರೆಗಿನ ಮೈಸೂರು ಅರಸರ ಚರಿತ್ರೆಯನ್ನು ಕವಿ ಹೇಳಿದ್ದಾನೆ. ಯುವರಾಜ ಚಿಕ್ಕದೇವರಾಯನ ವಿಜಯಯಾತ್ರೆಯ ಕಥೆಯ ನಡುವೆ ಗ್ರಂಥ ನಿಂತುಹೋಗಿದೆ. ತಿರುಮಲಾರ್ಯ ಬರೆದುದೇ ಇಷ್ಟುಮಾತ್ರವೊ ಅಥವಾ ಉಳಿದ ಗ್ರಂಥಭಾಗ ನಷ್ಟವಾಗಿ ಹೋಯಿತೋ ತಿಳಿಯದು. ಇದು ಹಳಗನ್ನಡದಲ್ಲಿ ರಚಿತವಾದ ಗದ್ಯಗ್ರಂಥ. ತಿರುಮಲಾರ್ಯನಿಗೆ ಇದ್ದ ಹಳಗನ್ನಡ ಪಾಂಡಿತ್ಯ ಇದರಲ್ಲಿ ಎದ್ದು ತೋರುತ್ತದೆ. ಅಲ್ಲಲ್ಲಿ ಶ್ರೀವೈಷ್ಣವಸಿದ್ದಾಂತ ನಿರೂಪಣೆ ಬಂದಿದೆ. ಅಳಹಿಯ ಸಿಂಗರಾರ್ಯ ದೊಡ್ಡ ದೇವರಾಜನಿಗೆ ಉಪದೇಶಿಸಿದ ಗೀತಾರ್ಥವಿಚಾರ ಈ ಗ್ರಂಥಗಳಲ್ಲಿ ಅಡಕವಾಗಿದೆ. ಕನ್ನಡದಲ್ಲಿ ವಿರಳವಾದ ಗದ್ಯಗ್ರಂಥಗಳಲ್ಲಿ ಇದೂ ಒಂದು. ಕಥೆಗಿಂತ ವರ್ಣನೆಯೇ ಹೆಚ್ಚಾಗಿರುವುದರಿಂದ ಈ ಗದ್ಯಶೈಲಿ ಅಷ್ಟೇನೂ ರಮಣೀಯವೆನಿಸುವುದಿಲ್ಲ.

ತಿರುಮಲಾರ್ಯ ಚಿಕ್ಕದೇವರಾಯನ ಬಾಲ್ಯಸ್ನೇಹಿತನಾಗಿದ್ದು ಸಹಾಧ್ಯಾಯಿಯಾಗಿ ಕೊನೆಗೆ ಮಂತ್ರಿಯಾದವ. ಇವನಿಗೆ ತನ್ನ ಸ್ನೇಹಿತನಾದ ಅರಸನ ಮೇಲೆ ಅತ್ಯಂತ ಪ್ರೀತಿ. ಅವನ ಪರಾಕ್ರಮ, ಆಡಳಿತವಿಚಕ್ಷಣೆ, ನ್ಯಾಯನಿಷ್ಠೆ, ಧರ್ಮಶ್ರದ್ದೆ ಮತ್ತು ಔದಾರ್ಯಗಳನ್ನು ಹತ್ತಿರದಿಂದ ನೋಡಿ ಬಲ್ಲ ಈ ಕವಿ ಅರಸನನ್ನು ಮೆಚ್ಚಿ ಮನಃಪುರ್ವಕವಾಗಿ ಹೊಗಳಿ ಕಾವ್ಯ ಕಟ್ಟಿರುವುದು ಆಶ್ಚರ್ಯವಲ್ಲ. ಕನ್ನಡದ ಮೊದಲ ಕವಿಯೆನಿಸಿದ ಪಂಪ ತನ್ನ ಅರಸ ಅರಿಕೇಸರಿಯನ್ನು ಹಾರ್ದಿಕವಾಗಿ ಮೆಚ್ಚಿದಂತೆ ತಿರುಮಲಾರ್ಯ ಚಿಕ್ಕದೇವರಾಯನನ್ನು ಮೆಚ್ಚಿಕೊಂಡು ಚಿಕದೇವರಾಯವಿಜಯಂ ಎಂಬ ಚಂಪುಕಾವ್ಯವನ್ನೇ ರಚಿಸಿದ್ದಾನೆ. ಈ ಕವಿಯ ಕಾಲಕ್ಕೆ ಚಂಪು ಸಂಪ್ರದಾಯ ಖಿಲವಾಗಿ ಷಟ್ಪದೀ ಸಾಂಗತ್ಯಗಳ ರಚನೆ ಹೆಚ್ಚು ಜನಪ್ರಿಯವಾಗಿತ್ತು. ಆದರೂ ಈ ಪಂಡಿತಕವಿ ಚಂಪು ಪುನರುಜ್ಜೀವನಕ್ಕೆ ಹವಣಿಸಿದಂತೆ ತೋರುತ್ತದೆ. ಬಹುಶಃ ಈ ವಿಷಯದಲ್ಲಿ ಇನ್ನೂ ಹೆಚ್ಚಿನ ಕೃಷಿಮಾಡಿದವ ಷಡಕ್ಷರದೇವ. ಆತ ತನ್ನ ಮೂರು ಕೃತಿಗಳನ್ನೂ ಚಂಪುಕಾವ್ಯಗಳಾಗಿಯೇ ರಚಿಸಿದ. ಚಿಕದೇವರಾಜ ವಿಜಯಂ ಅಸಮಗ್ರವಾದ ಚಂಪುಕಾವ್ಯ. ಆರು ಆಶ್ವಾಸಗಳು ಮಾತ್ರ ಸಿಕ್ಕಿವೆ. ಅಲ್ಲಲ್ಲಿ ತ್ರಿಪದಿ, ಸಾಂಗತ್ಯ ಮತ್ತು ಹಾಡುಗಳೂ ಬಂದಿವೆ. ಕವಿ ಅರಸನ ಬಾಲ್ಯದ ವಿದ್ಯಾಭ್ಯಾಸ ವೃತ್ತಾಂತವನ್ನೂ ಪರಾಕ್ರಮವನ್ನೂ ಈ ಕಾವ್ಯದಲ್ಲಿ ಹೊಗಳಿದ್ದಾನೆ. ಚಿಕ್ಕದೇವರಾಯನ ವೀಣಾವಾದಕನಕೌಶಲವನ್ನು ಅನೇಕ ಕಡೆ ಚೆನ್ನಾಗಿ ಬಣ್ಣಿಸಿದ್ದಾನೆ. ಈ ಕಾವ್ಯದಲ್ಲಿ ಕವಿಯ ವರ್ಣನಾವಿಲಾಸ ಮೆರುಗು ಕಂಡಿದೆ. ಇವನ ಚಂದ್ರವರ್ಣನೆ ಮೋಹಕವಾಗಿದೆ. ಚಂದ್ರನನ್ನು ಫಿರಂಗಿ ಗುಂಡಿಗೆ ಹೋಲಿಸುವುದಕ್ಕೂ ಕವಿ ಹಿಂತೆಗೆದಿಲ್ಲ! ಬಲಿ ಚಕ್ರವರ್ತಿಯನ್ನು ತುಳಿಯಲು ತ್ರಿವಿಕ್ರಮಸ್ವಾಮಿ ಎತ್ತಿದ ಪಾದದ ಉಂಗುಷ್ಠದ ವೃತ್ತಾಕಾರದ ಉಗುರೇ ಚಂದ್ರನೆಂದು ಕವಿಯ ಇನ್ನೊಂದು ಕಲ್ಪನೆ.

ಅಪ್ರತಿಮವೀರ ಎಂಬುದು ಚಿಕ್ಕದೇವರಾಯನ ಬಿರುದಾವಳಿಯಲ್ಲಿ ಒಂದು. ತಿರುಮಲಾರ್ಯ ರಚಿಸಿದ ಅಲಂಕಾರ ಗ್ರಂಥವಾದ ಅಪ್ರತಿಮವೀರಚರಿತೆಯಲ್ಲಿ ಕೊಟ್ಟಿರುವ ದೃಷ್ಟಾಂತ ಪದ್ಯಗಳೆಲ್ಲ ಚಿಕ್ಕದೇವರಾಯನ ಸ್ತೋತ್ರರೂಪವಾದುವು. ಹೀಗೆ ಆ ಗ್ರಂಥಕ್ಕೆ ಅದು ಸಾರ್ಥಕ ನಾಮಧೇಯವಾಗಿದೆ. ಇದರಲ್ಲಿ ಕವಿ ಪ್ರಸಿದ್ಧವಾದ ಸಂಸ್ಕೃತ ಸೂತ್ರಗಳನ್ನು ಹೇಳಿ ಕನ್ನಡದಲ್ಲಿ ಸಂಗ್ರಹವಾಗಿ ಅರ್ಥಬರೆದು ಕನ್ನಡ ಉದಾಹರಣೆಗಳನ್ನು ಕೊಟ್ಟಿದ್ದಾನೆ. ಶಬ್ದಾಲಂಕಾರ ಅರ್ಥಾಲಂಕಾರಗಳನ್ನೂ ರಸಾಲಂಕಾರಗಳನ್ನೂ ಹೇಳಿ ಧ್ವನಿಮೀಮಾಂಸೆ ಯನ್ನು ಕೈಬಿಟ್ಟಿದ್ದಾನೆ, ಚಿಕ್ಕದೇವರಾಯನ ಹೊಗಳಿಕೆಯೊಂದರ ಹೊರತು ಇದರಲ್ಲಿ ಹೊಸದೇನೂ ಇಲ್ಲವೆಂದೇ ಹೇಳಬೇಕು. ಅದುವರೆಗೆ ಪ್ರಸಿದ್ಧರಾಗಿದ್ದ ಸಂಸ್ಕೃತ ಲಾಕ್ಷಣಿಕರಲ್ಲಿ ಕೆಲವರ ಅಭಿಪ್ರಾಯಗಳೇ ಇಲ್ಲಿ ಬಂದಿವೆ. ತಿರುಮಲಾರ್ಯನ ಕೃತಿಗಳು ಸಮಕಾಲೀನ ಚರಿತ್ರೆಯನ್ನು ತಿಳಿಯಲು ಸ್ವಲ್ಪ ಮಟ್ಟಿಗೆ ಸಹಾಯ ಮಾಡುತ್ತವೆ. ಆತ ಬರೆದ ಗದ್ಯಕಾವ್ಯ, ಅಲಂಕಾರಶಾಸ್ತ್ರ, ಚಂಪು, ಶತಕ-ಇವಿಷ್ಟರಲ್ಲಿಯೂ ಅರಸನ ಗುಣಕಥನವಿದ್ದು ಅವನ ಶೌರ್ಯ, ಔದಾರ್ಯ ಮತ್ತು ವೈದುಷ್ಯಗಳ ಪ್ರಶಂಸೆಯಿದೆ. ಈತ ಸ್ವತಃ ಕೃತಿರಚನೆ ಮಾಡಿದುದೇ ಅಲ್ಲದೆ ತನ್ನ ಅರಸನ ಕಾವ್ಯಸೃಷ್ಟಿಗೂ ನೆರವಾಗಿದ್ದಾನೆ. ಅರಸನ ಅತ್ಯಂತ ಸ್ನೇಹಾಭಿಮಾನಗಳಿಗೆ ಪಾತ್ರನಾದ ಈತ ‘ಅವನೊಲ್ಮೆ ಪುಮಾ ಕೃತಿವೆತ್ತ ವೊಲೆಸೆವ ಸುಕೃತಿ’ ಎಂಬ ಪ್ರಶಂಸೆಯನ್ನು ಹೊಂದಿದ್ದಾನೆ. ಚಿಕ್ಕದೇವರಾಯನ ಆಸ್ಥಾನದ ಇನೊಬ್ಬ ಮುಖ್ಯ ಕವಿ ಚಿಕುಪಾಧ್ಯಾಯ, ಇವನ ನಿಜವಾದ ಹೆಸರು ಲಕ್ಷ್ಮೀಪತಿ. ಈತ ಇಪ್ಪಂತ್ತೆಂಟಕ್ಕೂ ಹೆಚ್ಚಿನ ಕೃತಿಗಳನ್ನು ಬರೆದಿದ್ದಾನೆ. ಅವುಗಳಲ್ಲಿ ಅನೇಕ ಮಾಹಾತ್ಮ್ಯಗ್ರಂಥಗಳು. ಯದುಗಿರಿ ಮಾಹಾತ್ಮ್ಯೆ, ವೆಂಕಟಗಿರಿ ಮಾಹಾತ್ಮ್ಯೆ, ಶ್ರೀರಂಗ ಮಹಾತ್ಮ್ಯೆ, ಹಸ್ತಿಗಿರಿ ಮಾಹಾತ್ಮ್ಯೆ, ಕಮಲಾಚಲ ಮಾಹಾತ್ಮ್ಯೆ-ಹೀಗೆ ಇವುಗಳಲ್ಲಿ ಕೆಲವು ಚಂಪುಕಾವ್ಯಗಳು, ಇನ್ನು ಕೆಲವು ಸಾಂಗತ್ಯಗಳು. ಉಳಿದುವು ಗದ್ಯ ಗ್ರಂಥಗಳು. ಇವು ಸ್ಥಳಪುರಾಣಗಳಾಗಿದ್ದು ಶ್ರೀವೈಷ್ಣವಮತ ಸಿದ್ಧಾಂತ ನಿರೂಪಣೆಗೆ ಅನುಕೂಲವಾಗಿವೆ. ನೀತಿಪ್ರಚಾರ ಮತ್ತು ಭಗವದ್ಗುಣ ಗಾನಗಳೇ ಕಾವ್ಯೋದ್ದೇಶ. ಆ ಉದ್ದೇಶವನ್ನು ಚಿಕುಪಾಧ್ಯಾಯ ಸಾಧಿಸಿಕೊಂಡಿದ್ದಾನೆ.

ವಿಷ್ಣು ಪುರಾಣವನ್ನು ಈ ಕವಿ ಚಂಪುರೂಪದಲ್ಲಿಯೂ ಗದ್ಯರೂಪದಲ್ಲಿಯೂ ಬರೆದಿದ್ದಾನೆ. ರುಕ್ಮಾಂಗದ ಚರಿತ್ರೆ, ಸಾತ್ತ್ವಿಕ ಬ್ರಹ್ಮವಿದ್ಯಾವಿಲಾಸ ಮತ್ತು ದಿವ್ಯಸೂರಿಚರಿತೆ ಎಂಬ ಚಂಪುಕೃತಿಗಳೂ ಇವನವೇ. ಕೊನೆಯ ಎರಡು ಗ್ರಂಥಗಳೂ ಶ್ರೀವೈಷ್ಣವ ಸಿದ್ಧಾಂತವನ್ನು ನಿರೂಪಿಸುತ್ತವೆ. ತಮಿಳುನಾಡಿನ ವೈಷ್ಣವ ಆಳ್ವಾರುಗಳ ಕಥೆಗಳನ್ನೇ ದಿವ್ಯ ಸೂರಿಚರಿತೆಯಲ್ಲಿ ಕವಿ ಹೇಳಿದ್ದಾನೆ. ಕಥೆ, ತತ್ತ್ವಗಳ ದೃಷ್ಟಿಯಿಂದ ಇವಕ್ಕೆ ಪ್ರಾಶಸ್ತ್ಯ ಸಲ್ಲಬಹುದು. ಆದರೆ ಇವುಗಳಲ್ಲಿ ಕಾವ್ಯಕ್ಕೆ ಜೀವಸ್ವರೂಪವಾದ ರಸಾನುಭವದ ದೃಷ್ಟಿಯಿಂದ ಮೆಚ್ಚುಗೆ ಸಲ್ಲಲಾರದು. ತಮಿಳಿನಿಂದ ಶ್ರೀವೈಷ್ಣವ ಗುರುಗಳ ಕಥೆಗಳನ್ನು ಕನ್ನಡಕ್ಕೆ ತಂದ ಉಪಕಾರ ಚಿಕುಪಾಧ್ಯಾಯನದು. ಕವಿ ತನ್ನ ಗ್ರಂಥಗಳಲ್ಲಿ ಕನ್ನಡನಾಡನ್ನು ಬಹಳ ಹೃದ್ಯವಾಗಿ ವರ್ಣಿಸಿದ್ದಾನೆ.

ಆ ಕಾಲದ ಗದ್ಯಶೈಲಿಯನ್ನು ತಿಳಿಯಲು ಚಿಕುಪಾಧ್ಯಾಯನ ಕೃತಿಗಳು ಉಪಯುಕ್ತವಾಗಿವೆ. ಚಿಕ್ಕುಪಾಧ್ಯಾಯನಷ್ಟು ಕೃತಿಗಳನ್ನು ಅದುವರೆಗಿನ ಕನ್ನಡಕವಿಗಳು ಯಾರೂ ರಚಿಸಿಲ್ಲ. ಈತ ಪುರಾಣ ಪುಣ್ಯಕಥೆಗಳನ್ನೇ ಅಲ್ಲದೆ ವರ್ಣನಾಪ್ರಧಾನವಾದ ಕೆಲವು ಕೃತಿಗಳನ್ನೂ ಕಟ್ಟಿದ್ದಾನೆ. ರಂಗಧಾಮಸ್ತುತಿ ಸಾಂಗತ್ಯ ಶ್ರೀರಂಗನಾಥಸ್ವಾಮಿಯನ್ನು ಅಡಿಯಿಂದ ಮುಡಿಯವರೆಗೆ ವರ್ಣಿಸುತ್ತದೆ. ಶ್ರೀಕೃಷ್ಣ ರೂಪವನ್ನು ಈಕ್ಷಿಸಿದ ಸ್ತ್ರೀಯರ ಸರಸಸಲ್ಲಾಪದ ಇರವನ್ನು ವಿವರಿಸಿ ಬರೆಯುವುದೇ ಶೃಂಗಾರಶತಕ ಸಾಂಗತ್ಯದ ಧ್ಯೇಯ. ಈ ಕವಿ ಚಿತ್ರಕವಿತೆಯ ಕ್ಷೇತ್ರವನ್ನೂ ಬಿಟ್ಟಿಲ್ಲ. ಅಕ್ಷರ ಮಾಲಿಕಾಸಾಂಗತ್ಯ ಎಂಬ ಕಾವ್ಯ ರಂಗನಾಥ ದೇವರ ಮೇಲೆ ಕಕಾರದಿಂದ ಕ್ಷಕಾರ ಪರ್ಯಂತ ಅಕ್ಷರ ಮೊದಲಾಗಿಯೂ ಗುಣಿತದಿಂದಲೂ ಕಲ್ಪಿಸಿ ಹೇಳಿದ ಸಾಂಗತ್ಯ. ಚಿತ್ರಶತಕ ಸಾಂಗತ್ಯ ಎಂಬ ಹೆಸರಿನಿಂದಲೇ ಚಿಕುಪಾಧ್ಯಾಯ ಒಂದು ಗ್ರಂಥವನ್ನು ರಚಿಸಿದ್ದಾನೆ. ಇದರಲ್ಲಿ ಕನ್ನಡ ಭಾಷೆಯನ್ನು ಕುರಿತು ಹೇಳಿರುವ ಕೆಲವು ಮಾತುಗಳು ಚಮತ್ಕಾರವಾಗಿವೆ.

ಈತನ ಕಾಮಂದಕನೀತಿ ಎಂಬುದು ಸಂಸ್ಕೃತದ ಕೃತಿಗೆ ಕನ್ನಡ ಟೀಕೆ. ಕವಿ ಇದಕ್ಕೆ ಉಪಾಧ್ಯಾಯನಿರಪೇಕ್ಷಾ ಎಂಬ ಹೆಸರು ಕೊಟ್ಟಿದ್ದಾನೆ. ಇದು ಆಧುನಿಕ ಯುಗದ ಅನೇಕ ಸ್ವಯಂಬೋಧಿನಿಗಳ ಮುನ್ಸೂಚನೆಯಂತೆ ತೋರುತ್ತದೆ.

ಚಿಕ್ಕುಪಾಧ್ಯಾಯ ಗ್ರಂಥಕರ್ತನಷ್ಟೇ ಅಲ್ಲ; ಅರಸನ ಕರಣಿಕಾಗ್ರೇಸರನಾಗಿಯೂ ಆಮೇಲೆ ಮಂತ್ರಿಯಾಗಿಯೂ ಇದ್ದು ಆಶ್ರಿತಕಲ್ಪತರುವಾಗಿ ಉನ್ನತ ಧ್ಯೇಯ ಜೀವನವನ್ನು ನಡೆಸಿದ ಶ್ರೀವೈಷ್ಣವ ಬ್ರಾಹ್ಮಣಕವಿ, ಪಂಡಿತ. ಈತ ತನ್ನ ಕೃತಿಗಳ ಆರಂಭದಲ್ಲಿ ತನ್ನ ಅರಸನನ್ನು ಕುರಿತು ಹೇಳಿರುವ ಸಂಗತಿಗಳನ್ನೆಲ್ಲ ಒಟ್ಟುಗೂಡಿಸಿದರೆ ಚಿಕ್ಕದೇವರಾಯನ ವ್ಯಕ್ತಿತ್ವ ಚಿತ್ರ ಲಭಿಸುತ್ತದೆ.

ಈ ಕಾಲದ ಇನ್ನೊಬ್ಬ ಮುಖ್ಯ ಕವಿ ಸಿಂಗರಾರ್ಯ, ಈತ ತಿರುಮಾಲರ್ಯನ ತಮ್ಮ. ಮಿತ್ರವಿಂದಾಗೋವಿಂದ ಎಂಬ ಕನ್ನಡದ ಮೊದಲ ನಾಟಕವನ್ನು ರಚಿಸಿದ ಕೀರ್ತಿ ಇವನಿಗೆ ಸಂದಿದೆ. ಶ್ರೀಹರ್ಷನ ರತ್ನಾವಳಿ ನಾಟಕದ ಭಾಷಾಂತರವಿದು. ಆದರೆ ವತ್ಸರಾಜನಿಗೆ ಪ್ರತಿಯಾಗಿ ಶ್ರೀಕೃಷ್ಣನೇ ಇಲ್ಲಿ ಕಥಾನಾಯಕ; ರತ್ನಾವಳಿಯ ಪ್ರತಿಯಾಗಿ ಕೃಷ್ಣನ ಅಷ್ಟಮಹಿಷಿಯರಲ್ಲೊಬ್ಬಳಾದ ಮಿತ್ರವಿಂದೆಯೇ ಕಥಾನಾಯಿಕೆ. ಇವರ ಪ್ರಣಯಕಥೆ ಈ ನಾಟಕದ ವಸ್ತು. ಇದು ಸಂಸ್ಕೃತ ನಾಟಕವನ್ನೇ ಬಹಳ ಮಟ್ಟಿಗೆ ಅನುಸರಿಸಿದ್ದರೂ ಮಕ್ಕೀಕಾಮಕ್ಕಿ ಎನ್ನುವಂಥ ಅನುವಾದವಲ್ಲ. ಕವಿ ಕೆಲವು ವ್ಯತ್ಯಾಸಗಳನ್ನು ಮಾಡಿದ್ದಾನೆ. ನಾಯಕ ನಾಯಿಕೆಯರಿಗಷ್ಟೇ ಅಲ್ಲದೆ ಉಳಿದ ಪಾತ್ರಗಳಿಗೂ ಸೂಕ್ತವಾದ ನಾಮಾಂತರಗಳನ್ನು ಕಲ್ಪಿಸಿದ್ದಾನೆ.

ಚಿಕ್ಕದೇವರಾಯನ ಆಸ್ಥಾನಕವಿಗಳೇ ಅಲ್ಲದೆ ಅವನ ಪರಿವಾರಕ್ಕೆ ಸೇರಿದವರೂ ಕನ್ನಡದಲ್ಲಿ ಕೃತಿರಚನೆ ಮಾಡಿದ್ದಾರೆ. ಅವರಲ್ಲಿ ಹೊನ್ನಮ್ಮನೆಂಬ ಕಬ್ಬಿಗಿತಿ ಪ್ರಧಾನಳು, ಇವಳು ಚಿಕ್ಕದೇವರಾಯನ ಅಂತಃಪುರದ ಊಳಿಗಕ್ಕೆ ಸೇರಿದವಳು, ಸಂಚಿಯ ಹೊನ್ನಿ ಎಂದೇ ಇವಳ ಹೆಸರು. ಇವಳ ಗ್ರಂಥ ಹದಿಬದೆಯ ಧರ್ಮ ಎಂಬ ಸಾಂಗತ್ಯಕಾವ್ಯ. ಅಕ್ಕಮಹಾದೇವಿಯಾದ ಮೇಲೆ ಕನ್ನಡದಲ್ಲಿ ಶ್ರೇಷ್ಠ ಕಬ್ಬಿಗಿತಿ ಈಕೆಯೇ. ಹೊನ್ನಮ್ಮ ಆರಿಸಿಕೊಂಡಿರುವ ವಿಷಯ ಸ್ತ್ರೀಯರಿಗೆ ನೇರವಾಗಿ ಸಂಬಂಧಿಸಿದ್ದು. ಅದನ್ನು ಬರೆದಿರುವ ಛಂದಸ್ಸು ಕೂಡ ಸ್ತ್ರೀಯರಿಗೆ ಹಿತವಾದ ಸಾಂಗತ್ಯ. ಒಂಬತ್ತು ಸಂಧಿಗಳುಳ್ಳ ಈ ಗ್ರಂಥದಲ್ಲಿ ಹೊನ್ನಮ್ಮ ಮನ್ವಾದಿ ಧರ್ಮಶಾಸ್ತ್ರಗಳಲ್ಲಿಯೂ ರಾಮಾಯಣ ಮಹಾಭಾರತಗಳಲ್ಲಿಯೂ ಹೇಳಿರುವ ಅಂಶಗಳನ್ನೇ ಸಂಗ್ರಹಿಸಿ ಹೇಳಿರುವೆನೆಂದು ತಿಳಿಸಿದ್ದಾಳೆ. ಇಲ್ಲಿ ವರ್ಣಿತವಾಗಿರುವ ಸತೀಧರ್ಮ ಸಂಪ್ರದಾಯಾನುಸಾರವಾದುದು. ಆದರೆ ಅದನ್ನು ಹೊನ್ನಮ್ಮ ಹೇಳಿರುವ ರೀತಿ ಮನಮೋಹಕವಾಗಿದೆ. ಆಕೆ ಕೊಡುವ ಉಪಮೆಗಳು ಅವಳ ರಸಜ್ಞತೆ ಔಚಿತ್ಯಜ್ಞಾನಗಳಿಗೆ ಸಾಕ್ಷಿಯಾಗಿವೆ.

ಊಳಿಗದ ಹೆಣ್ಣೊಬ್ಬಳ ಕವಿತಾಪ್ರತಿಭೆಯನ್ನು ಕಂಡುಕೊಂಡು ಅವಳನ್ನು ಪ್ರೋತ್ಸಾಹಿಸಿ ಕಾವ್ಯರಚನೆಗೆ ಹುರಿದುಂಬಿಸಿದ ರಾಣಿ ದೇವಾಜಮ್ಮಣ್ಣಿ, ರಾಜ ಚಿಕ್ಕದೇವರಾಯ ಪ್ರಶಂಸೆಗೆ ಪಾತ್ರರು. ಅರಸ ಅವಳನ್ನು ಸರಸಸಾಹಿತ್ಯದ ವರದೇವತೆಯೆಂದು ಹೊಗಳಿದನಂತೆ. ಈ ಹೊಗಳಿಕೆ ಅಭಿಮಾನಪ್ರೇರಿತವಾಗಿದ್ದರೂ ತೀರ ನಿರರ್ಥಕವಲ್ಲ. ಹೊನ್ನಮ್ಮನ ಕವಿತಾರಚನೆ ಮಧುರವಾಗಿದೆ. ಹೆಣ್ಣಿನ ಸ್ಥಾನಮಾನಗಳನ್ನು ಸ್ಪಷ್ಟೋಕ್ತಿಯಿಂದ ವಿವರಿಸಿ ‘'ಪೆಣ್ಣು ಪೆಣ್ಣೆಂದೇತಕೆ ಬೀಳುಗಳವರು, ಕಣ್ಣುಕಾಣದ ಗಾವಿಲರು’' ಎಂದು ಕಟುವಾಗಿ ಟೀಕಿಸುವ ಧೀರೆಯಾಗಿದ್ದಾಳೆ, ಹೊನ್ನಮ್ಮ.

"ಪದ್ಮಿನೀಕಲ್ಯಾಣದಲ್ಲಿ ತಿರುಪತಿ ಶ್ರೀನಿವಾಸನಿಗೂ ಪದ್ಮಾವತಿಗೂ ನಡೆದ ವಿವಾಹ ವೈಭವವನ್ನು ಬಣ್ಣಿಸಿದ ಕಬ್ಬಿಗಿತಿ ಶೃಂಗಾರಮ್ಮನೂ ಚಿಕ್ಕದೇವರಾಯನ ಪೋಷ್ಯವರ್ಗಕ್ಕೆ ಸೇರಿದವಳೇ. ಇವಳ ಕೃತಿ ನೂರತೊಂಬತ್ತು ಪದ್ಯಗಳುಳ್ಳ ಪುಟ್ಟ ಸಾಂಗತ್ಯಕಾವ್ಯ. ತಿಮ್ಮಕವಿ ಚಿಕ್ಕದೇವರಾಯನ ಆಶ್ರಿತನಾಗಿದ್ದು ಅವನ ಸೂಚನೆ ಹಾಗೂ ಚಿಕುಪಾಧ್ಯಾಯನ ಪ್ರೋತ್ಸಾಹಗಳಿಂದ ಯಾದವಗಿರಿ ಮಾಹಾತ್ಮ್ಯ, ವೆಂಕಟಗಿರಿ ಮಾಹಾತ್ಮ್ಯ, ಪಶ್ಚಿಮರಂಗ ಮಾಹಾತ್ಮ್ಯ ಎಂಬ ಮೂರು ಚಂಪುಕಾವ್ಯಗಳನ್ನು ರಚಿಸಿದ್ದಾನೆ. ಈ ಕಾವ್ಯಗಳ ವಸ್ತುವನ್ನು ಚಿಕುಪಾಧ್ಯಾಯನೇ ಸಾಂಗತ್ಯರೂಪದಲ್ಲಿಯೂ ಗದ್ಯರೂಪದಲ್ಲಿಯೂ ಹೇಳಿದ್ದನಾದರೂ ಅದನ್ನೇ ಚಂಪುಕಾವ್ಯವಾಗಿ ಹೇಳುವ ಉತ್ಸಾಹ, ಈ ಕವಿಗೆ. ಇದು ಚಂಪುರೂಪದ ಪುನರುಜ್ಜೀವನದಂತೆ ತೋರಬಹುದು. ಅದಕ್ಕಿಂತ ಮಿಗಿಲಾಗಿ ಆ ಕಾಲದಲ್ಲಿ ಶ್ರೀವೈಷ್ಣವಧರ್ಮ ರಾಜಮನ್ನಣೆಯನ್ನೂ ಜನಾದರಣೆಯನ್ನೂ ಗಳಿಸಿದ್ದುದರಿಂದ ಅದಕ್ಕೆ ಸಂಬಂಧಿಸಿದ ಕೃತಿಗಳನ್ನು ಮತ್ತೆ ಮತ್ತೆ ರಚಿಸುವ ಉತ್ಸಾಹ ಶ್ರದ್ದೆಗಳೂ ವಿಶೇಷವಾಗಿದ್ದುದು ವ್ಯಕ್ತವಾಗುತ್ತದೆ. ಮಲ್ಲಿಕಾರ್ಜುನನೆಂಬ ಇನ್ನೊಬ್ಬ ಕವಿ ಹನ್ನೆರಡು ಆಶ್ವಾಸನೆಗಳುಳ್ಳ "ಶ್ರೀರಂಗಮಹಾತ್ಮ್ಯ"ವೆಂಬ ಇನ್ನೊಂದು ಚಂಪುಕಾವ್ಯವನ್ನು ಕಟ್ಟಿದ್ದಾನೆ. ಅದರಲ್ಲಿ ಬ್ರಹ್ಮಾಂಡ ಪುರಾಣೋಕ್ತವಾದ ಶ್ರೀರಂಗಕ್ಷೇತ್ರದ ಮಹಿಮೆಯ ವರ್ಣನೆಯಿದೆ. ವೇಣುಗೋಪಾಲ ವರಪ್ರಸಾದನೆಂಬ ಹೆಸರಿನ ಕವಿಯೊಬ್ಬ "ಚಿಕದೇವ ರಾಜವಂಶಾವಳಿ" ಎಂಬ ಒಂದು ಪುಟ್ಟ ಚಂಪು ಕಾವ್ಯವನ್ನು ಕಟ್ಟಿ ಚಿಕ್ಕದೇವರಾಜನ ಪೂರ್ವಿಕರ ಕಥೆಯನ್ನು ಸಂಗ್ರಹವಾಗಿ ಹೇಳಿದ್ದಾನೆ. ನೂರಮೂವತ್ತೆಂಟು ಪದ್ಯಗಳು ಮಾತ್ರವಿರುವ ಈ ಚಿಕ್ಕ ಕಾವ್ಯದಲ್ಲಿ ಕಥೆಗಿಂತ ವರ್ಣನೆಯೇ ಹೆಚ್ಚಾಗಿದ್ದು ಸಂಸ್ಕೃತ ಸಮಾಸವಿಲಸಿತವಾದ ಪ್ರೌಢಶೈಲಿ ಎದ್ದುಕಾಣುತ್ತದೆ. ದಶಾವತಾರಚರಿತೆಯೆಂಬ ಚಂಪುಕಾವ್ಯವೂ ಈ ಕಾಲದ್ದೇ. ಅದು ಕವಿಗಳ ಕರ್ಣ ರಸಾಯನ, ನವರಸಿಕರ ಜಿಹ್ವಾಮೃತ. ಇದರ ಕರ್ತೃ ಮಲ್ಲರಸನೂ ಚಿಕುಪಾಧ್ಯಾಯನ ಶಿಷ್ಯವರ್ಗಕ್ಕೆ ಸೇರಿದ್ದು ಅವನ ಆಜ್ಞಾನುಸಾರವಾಗಿ ಕೃತಿರಚನೆ ಮಾಡಿದ್ದಾನೆ.

ಈ ಕಾಲದ ಚಂಪುಕವಿಗಳಲ್ಲೆಲ್ಲ ಶ್ರೇಷ್ಠನಾದವ ಪಡಕ್ಷರದೇವ. ಈತ ಅರಸನ ಆಸ್ಥಾನಕವಿಯಾಗಿರದಿದ್ದರೂ ಅರಸನ ತಾಯಿ ಅಮೃತಾಂಬೆಯ ಆಶ್ರಯ ಹೊಂದಿದ್ದನೆಂದು ತೋರುತ್ತದೆ. ರಾಜಶೇಖರವಿಲಾಸ, ಶಬರಶಂಕರವಿಲಾಸ, ವೃಷಭೇಂದ್ರವಿಜಯ ಎಂಬ ಮೂರು ಪ್ರೌಢ ಚಂಪುಕಾವ್ಯಗಳನ್ನು ರಚಿಸಿ ಈತ ಕೀರ್ತಿವಂತನಾಗಿದ್ದಾನೆ. ರಾಜಶೇಖರವಿಲಾಸ ಚೋಳದೇಶದ ಅರಸನಾದ ಸತ್ಯೇಂದ್ರನ ಮಗ ಮಂತ್ರಲಕ್ಷ ಅಥವಾ ರಾಜಶೇಖರನ ಭಕ್ತಿಪರೀಕ್ಷೆಯ ಕಥೆ. ಇದನ್ನು ತಮಿಳಿನಿಂದ ಕನ್ನಡಕ್ಕೆ ಮೊದಲು ತಂದವ ಗುಬ್ಬಿಯ ಮಲ್ಲಣಾರ್ಯನೆಂಬ ಷಟ್ಪದಿ ಕವಿ. ಭಾವಚಿಂತಾರತ್ನವೇ ಮಲ್ಲಣಾರ್ಯನ ಕೃತಿ. ಆ ಕಥೆಯನ್ನೇ ಷಡಕ್ಷರಿ ಚಂಪು ರೂಪದಲ್ಲಿ ರಚಿಸಿದ್ದಾನೆ. ಹದಿನಾಲ್ಕು ಆಶ್ವಾಸಗಳಿಂದ ಕೂಡಿದ ಈ ದೊಡ್ಡ ಕಾವ್ಯ ಷಡಕ್ಷರಿಯ ಪ್ರೌಢಭಾಷೆ, ಕವಿತಾಚಾತುರ್ಯ ಮತ್ತು ವರ್ಣನಾಸಕ್ತಿಗಳಿಗೆ ಸಾಕ್ಷಿಯಾಗಿದೆ. ಕಥೆ ಸ್ವಲ್ಪ, ವರ್ಣನೆ ಬಹಳ. ಬಸವರಾಜವಿಜಯ ಅಥವಾ ವೃಷಭೇಂದ್ರವಿಜಯ ಶಿವಶರಣ ಬಸವಣ್ಣನ ಅವತಾರಕಥೆಯನ್ನು ಹೇಳುವ ಕಾವ್ಯ. ಕೊನೆಯಲ್ಲಿ ಆತ ಬರೆದದ್ದು ಶಬರಶಂಕರವಿಲಾಸ. ಇಂದ್ರಕೀಲದಲ್ಲಿ ತನ್ನನ್ನು ಕುರಿತು ತಪಸ್ಸು ಮಾಡಿದ ಅರ್ಜುನನಿಗೆ ವರ ಕೊಡಲು ಕಿರಾತ ವೇಷ ಧರಿಸಿ ಬಂದ ಶಂಕರನ ಲೀಲೆಯ ಕಥನವೇ ಇಲ್ಲಿನ ವಸ್ತು. ಶಿವನ ಪಂಚವಿಂಶತಿ ಲೀಲೆಗಳಲ್ಲಿ ಒಂದಾದ ಶಬರಿಲೀಲೆ ಕವಿಯ ಮನಸ್ಸನ್ನು ವಿಶೇಷವಾಗಿ ಆಕರ್ಷಿಸಿದೆ. ಷಡಕ್ಷರಿ ಮಹಾ ಶಿವಭಕ್ತ, ಪ್ರೌಢಪಂಡಿತ ಕವಿ. ಸಂಸ್ಕೃತ ಕನ್ನಡಗಳೆರಡರಲ್ಲಿಯೂ ಇವನಿಗೆ ಸಮಾನವಾದ ಪಾಂಡಿತ್ಯವಿದೆ. ಇವನ ವಾಗ್ವೈಭವ ಮೆಚ್ಚತಕ್ಕದ್ದು. ಹಂಪೆಯ ಹರಿಹರನಂತೆ ಶಿವ, ಶಿವಭಕ್ತರನ್ನಲ್ಲದೆ ಅನ್ಯರನ್ನು ಹೊಗಳಬಾರದೆಂಬ ವ್ರತ ಪಡಕ್ಷರದೇವನಿಗೆ. ಚಮತ್ಕಾರವಾದ ವರ್ಣನೆಗಳು, ನಿರರ್ಗಳವಾದ ಶೈಲಿ ಈ ಕವಿಯ ವಿಶಿಷ್ಟ ಲಕ್ಷಣಗಳು.

ಚಿಕ್ಕದೇವರಾಯನ ಕಾಲದ ಕವಿಗಳು ಹೆಚ್ಚಾಗಿ ಸಾಂಗತ್ಯ, ಗದ್ಯ ಮತ್ತು ಚಂಪುಕ್ಷೇತ್ರಗಳಲ್ಲಿ ಕೃಷಿಮಾಡಿದವರು. ಹೊನ್ನಮ್ಮ ಶೃಂಗಾರಮ್ಮರನ್ನು ಉಳಿದ ಮಿಕ್ಕೆಲ್ಲ ಕವಿಗಳೂ ಸಂಸ್ಕೃತ ಭಾಷಾ ಸಾಹಿತ್ಯಗಳ ಪರಿಚಯವಿದ್ದವರು. ಹಲವರು ದೊಡ್ಡ ಪಂಡಿತರೇ ಆಗಿದ್ದರು. ಶ್ರೀವೈಷ್ಣವ ಧರ್ಮಪ್ರಚಾರ ಪ್ರಬಲವಾಗಿ ನಡೆದಿದ್ದರೂ ಬೇರೆ ಮತಪಂಥಗಳಿಗೆ ಸೇರಿದವರೂ ಕೃತಿರಚನೆ ಮಾಡಿದ್ದಾರೆ. ಒಡೆಯರ ಕಾಲದ ಸಾಹಿತ್ಯೇತಿಹಾಸದಲ್ಲಿ ಚಿಕ್ಕದೇವರಾಯನ ಕಾಲ ವೈಭವೋಪೇತವಾದ ಅವಧಿ. ರಾಜ್ಯ, ಮಂತ್ರಿ, ಊಳಿಗದವರು, ವಿದ್ವಾಂಸರು, ಸನ್ಯಾಸಿಗಳು, ಸ್ತ್ರೀಯರು-ಎಲ್ಲ ಬಗೆಯ ಜನರೂ ಕನ್ನಡ ಕಾವ್ಯದೇವಿಯ ಕೈಂಕರ್ಯವನ್ನು ಕೈಕೊಂಡು ಕೃತಿರಚನೆ ಮಾಡಿದ ಸುವರ್ಣಯುಗವೆಂದು ಅದನ್ನು ಹೇಳಬೇಕು. ಕನ್ನಡ ಈ ಕಾಲದಲ್ಲಿ ರಾಜಪುಜ್ಯವೂ ಆಗಿತ್ತು, ಲೋಕಮಾನ್ಯವೂ ಆಗಿತ್ತು. ಈ ಕಾಲದ ಕನ್ನಡ ಸಾಹಿತ್ಯ ಪಂಡಿತ ಪಾಮರರಿಬ್ಬರಿಗೂ ರಂಜನೆಯನ್ನು ಕೊಡಬಲ್ಲ ಉತ್ತಮ ಸಾಹಿತ್ಯ.

ರಂಗಾವಧೂತ ಅಥವಾ ಮಹಲಿಂಗರಂಗನೆಂಬ ಈ ಕಾಲದ ಷಟ್ಪದಿ ಕವಿಯೊಬ್ಬ ಸ್ಮರಣಾರ್ಹನಾಗಿದ್ದಾನೆ. ಅವನ ಕೃತಿ ಅನುಭವಾಮೃತ. ಹನ್ನೊಂದು ಅಧ್ಯಾಯಗಳುಳ್ಳ ಈ ಭಾಮಿನೀಷಟ್ಪದಿಯ ಕಾವ್ಯದಲ್ಲಿ ಕವಿ ‘ಅಖಿಳವೇದಾಂತಾರ್ಥವನ್ನು ಸಂಗ್ರಹಿಸಿ ಪೇಳುವೆ ಸಕಲರಿಗೆ ತಿಳಿವಂತೆ’ ಎಂದು ಪ್ರತಿಜ್ಞೆ ಮಾಡಿದ್ದಾನೆ. ತಿಳಿಯ ಬೇಕಾದ ಧರ್ಮರಹಸ್ಯವನ್ನು ಕನ್ನಡದಿಂದಲೇ ತಿಳಿದುಕೊಳ್ಳುವುದು ಶಕ್ಯವಾದರೆ ಸಂಸ್ಕೃತದ ಅಗತ್ಯವೇನು? ಎಂದು ಮಹಲಿಂಗರಂಗನು ಪ್ರಶ್ನಿಸುವ ಸಾಹಸಮಾಡಿರುವುದು ಮೆಚ್ಚತಕ್ಕ ವಿಚಾರ. ಕನ್ನಡದ ಉಪಯುಕ್ತತೆ ಮತ್ತು ಪ್ರಾಶಸ್ತ್ಯಗಳನ್ನು ನಿರೂಪಿಸಿ ಈ ಕವಿ ಹೇಳುವ ಮಾತುಗಳನ್ನು ಸಂಸ್ಕೃತದ ದೂಷಣೆಯೆಂದು ತಿಳಿಯುವುದು ಅನುಚಿತ. ಇವನು ಅದ್ವೈತತತ್ತ್ವವನ್ನು ಬಹಳ ಸುಲಭಶೈಲಿಯ ತಿಳಿಗನ್ನಡದಲ್ಲಿ ವಿವರಿಸಿದ್ದಾನೆ. ಈ ಕೃತಿ ಸಂಸ್ಕೃತಕ್ಕೆ ಅನುವಾದವಾಗಿರುವಂತೆ ತಿಳಿದು ಬಂದಿದೆ. ವಿಷಯ, ಭಾಷೆ ಎರಡೂ ರಂಗನಾಥನಿಗೆ ಕರಗತವಾಗಿವೆ. ಆದ್ದರಿಂದಲೇ ಇವನ ಈ ತತ್ತ್ವಗ್ರಂಥ ಲೋಕಪ್ರಿಯವಾಗಿದೆ. ""ಕನ್ನಡ ಸುಲಿದ ಬಾಳೆಯ ಹಣ್ಣಿನಂತೆ, ಸಿಗುರು ಕಳೆದ ಕಬ್ಬಿನಂತೆ, ಕಾದು ಆರಿದ ಹಾಲಿನಂತೆ, ಸುಲಭವಾಗಿರುವುದೆಂದು ಹೇಳಿದ ಕವಿಇವನೇ."" ಸು. 1680ರಲ್ಲಿದ್ದ ಚಿದಾನಂದನೆಂಬ ಜೈನಕವಿ ಮುನಿವಂಶಾಭ್ಯುದಯವನ್ನು ರಚಿಸಿ ಜೈನಯತಿ ಪರಂಪರೆಯನ್ನು ವರ್ಣಿಸಿದ್ದಾನೆ. ಶ್ರುತಕೇವಲಿಯಾದ ಬಾಹುಬಲಿ ಮತ್ತು ಚಂದ್ರಗುಪ್ತರ ವೃತ್ತಾಂತ ಇಲ್ಲಿ ವರ್ಣಿತವಾಗಿದೆ. ಅದಕ್ಕಿಂತ ಹೆಚ್ಚಾಗಿ ಈ ಸಾಂಗತ್ಯಕಾವ್ಯ ಚಿಕ್ಕದೇವರಾಯನ ವಂಶಾವಳಿಯನ್ನು ಹೊಗಳಿದೆ. ಮೈಸೂರಿನ ಅರಸರು ಶ್ರವಣಬೆಳಗೊಳದ ಜೈನಯತಿಗಳಿಗೆ ಮಾಡಿದ ಸಹಾಯದ ವರ್ಣನೆ ಈ ಕಾವ್ಯದಲ್ಲಿ ಬಂದಿದೆ. ಈ ಕಾವ್ಯ ಚಿಕ್ಕದೇವರಾಜನಿಗೆ ಸಂಬೋಧಿಸಿದಂತೆ ತೋರುತ್ತದೆ.

ಚಿಕ್ಕದೇವರಾಯನ ಕಾಲದಲ್ಲಿ ವಿಶೇಷವಾಗಿ ನಡೆದ ಸಾಂಗತ್ಯಕಾವ್ಯ ಮತ್ತು ಮಾಹಾತ್ಮ್ಯ ಗ್ರಂಥಗಳ ರಚನೆ ಮುಂದಿನ ಅರಸರ ಕಾಲಕ್ಕೂ ಮುಂದುವರಿಯಿತು. ದೊಡ್ಡ ಕೃಷ್ಣರಾಜನ ಧರ್ಮಪತ್ನಿಯಾದ ಚೆಲುವಾಂಬೆ ಎಂಬ ಕಬ್ಬಿಗಿತಿ "ವರನಂದೀ ಕಲ್ಯಾಣ", ವೆಂಕಟಾಚಲಮಹಾತ್ಮೆ ಎಂಬ ಕಾವ್ಯಗಳನ್ನೂ ಕೆಲವು ಲಾಲಿ ಹಾಡುಗಳನ್ನೂ ರಚಿಸಿದ್ದಾಳೆ. ಕಳಲೆ ನಂಜರಾಜನೆಂಬ ಒಬ್ಬ ದಳವಾಯಿ (1740) ಅನೇಕ ಕನ್ನಡ ಕೃತಿಗಳನ್ನು ಬರೆದಿದ್ದಾನೆ. ಇವುಗಳಲ್ಲಿ ಹಲವು ಸ್ಥಳಪುರಾಣಗಳಂತಿರುವ ಮಹಾತ್ಮೆಗಳು. ಗರಳಪುರಿ, ಕಾಶಿ, ಭದ್ರಗಿರಿ, ಕಕ್ಕುದ್ಗಿರಿ ಮೊದಲಾದ ಪುಣ್ಯಸ್ಥಳಗಳ ಮಹಿಮೆಯನ್ನು ಪ್ರಶಂಸಿಸುವ ಕಾವ್ಯಗಳು ಈ ಸೇನಾನಿಯ ಹೆಸರಿನಲ್ಲಿ ಪ್ರಸಿದ್ದವಾಗಿವೆ. ಈತ ರಚಿಸಿರುವ "ಹಾಲಾಸ್ಯಮಹಾತ್ಮೆ "ಎಪ್ಪತ್ತೊಂದು ಅಧ್ಯಾಯಗಳನ್ನೊಳಗೊಂಡ ವಿಸ್ತಾರವಾದ ಗ್ರಂಥ. ಇದಕ್ಕೆ ನಂಜರಾಜವಾಣೀವಿಲಾಸ ಎಂಬ ಇನ್ನೊಂದು ಹೆಸರೂ ಇದೆ. ಇದರಲ್ಲಿ ಮಧುರೆಯ ಸುಂದರೇಶ್ವರಸ್ವಾಮಿಯ ಲೀಲಾಕಥನ ವಿಸ್ತಾರವಾಗಿ ಮೂಡಿಬಂದಿದೆ.

ನಂಜರಾಜ ಅನೇಕ ಕವಿಗಳಿಗೆ ಆಶ್ರಯ ಕೊಟ್ಟಿದ್ದನೆಂದು ದೇವಚಂದ್ರ ತನ್ನ ರಾಜಾವಳೀಕಥೆಯಲ್ಲಿ ನಿರೂಪಿಸಿದ್ದಾನೆ. ಈತ ಇಮ್ಮಡಿ ಕೃಷ್ಣರಾಜನಲ್ಲಿ ಸಂಧಿವಿಗ್ರಹಿಯಾಗಿದ್ದು ಸೇನಾಪತಿತ್ವವನ್ನೂ ನಿರ್ವಹಿಸಿದ. ಚಿಕುಪಾಧ್ಯಾಯನಂತೆಯೇ ಇವನೂ ಅನೇಕ ಗ್ರಂಥಗಳನ್ನು ಬರೆದಿದ್ದಾನೆ, ಅನ್ಯರ ಕೈಲಿ ಬರೆಯಿಸಿದ್ದಾನೆ.

ಶಾಲ್ಯದ ಕೃಷ್ಣರಾಜನೆಂಬ ಇನ್ನೊಬ್ಬ ಕವಿ ಸಂಸ್ಕೃತ ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಪಂಡಿತ. ಈತ ಚಿಕುಪಾಧ್ಯಾಯನಂತೆಯೇ ಹಲವು ಕಾವ್ಯಗಳನ್ನು ರಚಿಸಿದ್ದಾನೆ. ವಿವೇಕಾಭರಣ, ಯಯಾತಿ ಕಾವ್ಯ, ಸದಾಶಿವ ಶತಕ, ಅಪ್ರಸ್ತುತ ಪ್ರಶಂಸಾಶತಕ, ಅನುಭವರಸಾಯನ-ಮೊದಲಾದುವು ಇವನ ಮುಖ್ಯ ಕೃತಿಗಳು. ವಿವೇಕಾಭರಣ ಭಾಮಿನೀಷಟ್ಪದಿಯಲ್ಲಿದೆ. ಶತಕಗಳೆಲ್ಲ ವೃತ್ತಗಳನ್ನು ಒಳಗೊಂಡಿವೆ. ಅನುಭವರಸಾಯನ ಗದ್ಯಗ್ರಂಥ. ವೇದಾಂತಬೋಧನೆಯೇ ಪ್ರಧಾನ ಉದ್ದೇಶವಾದ ನಿಜದೀಪಿಕಾರತ್ನ, ಟೀಕಿನ ಕೀರ್ತನೆ ಎಂಬ ಗ್ರಂಥಗಳಲ್ಲಿ ಪದಗಳೂ ಅವಕ್ಕೆ ಟೀಕೆಯೂ ಇದ್ದು ಹಾಡು ವಚನ, ಸಾಂಗತ್ಯಗಳ ಬಳಕೆ ಕಂಡುಬರುತ್ತದೆ.

ಈ ಕಾಲದ ಸ್ಮರಣಾರ್ಹನಾದ ಇನ್ನೊಬ್ಬ ಕವಿ ವೆಂಕಾಮಾತ್ಯ. ಈತ ಹೈದರಲಿಯ ಪ್ರಧಾನ ಮಂತ್ರಿಯಾಗಿದ್ದ. ಅಲಂಕಾರಮಣಿದರ್ಪಣ, ಇಂದಿರಾಭ್ಯುದಯ, ಹನುಮಾದ್ವಿಲಾಸ ಮತ್ತು ರಾಮಾಯಣಗಳನ್ನು ಈತ ರಚಿಸಿದ್ದಾನೆ. ಆಂಜನೇಯನ ಅನುಗ್ರಹ ವಿಶೇಷದಿಂದ ಸರಸಸಾಹಿತ್ಯ ರಚನಸಾಮಥರ್ಯ್‌ವನ್ನು ಪಡೆದೆನೆಂದು ಹೇಳಿಕೊಂಡಿದ್ದಾನೆ. ಪುರ್ವಕವಿ ಸ್ಮರಣೆ ಮಾಡುತ್ತ ಭಾಸನ ಹೆಸರನ್ನು ಹೇಳಿದ್ದಾನೆ. ಬೇರೆ ಯಾವ ಕನ್ನಡ ಕವಿಯೂ ಭಾಸನನ್ನು ಸ್ಮರಿಸಿಲ್ಲವೆನ್ನಬೇಕು. ಈತನ ರಾಮಾಯಣ ವಾರ್ಧಕ ಷಟ್ಪದಿಯಲ್ಲಿ ರಚಿತವಾಗಿದ್ದು ಪ್ರೌಢ ಶೈಲಿಯಿಂದ ಕೂಡಿದೆ. ಇಂದಿರಾಭ್ಯುದಯ ಚಂಪು ಕಾವ್ಯ.

ಮುಮ್ಮಡಿ ಕೃಷ್ಣರಾಜ ಒಡೆಯ ಪ್ರಭುತ್ವವನ್ನು ಪಡೆದಮೇಲೆ ಕನ್ನಡಕ್ಕೆ ಹೆಚ್ಚಿನ ಪೋಷಣೆ ಲಭಿಸಿತು. ರಾಜಾಶ್ರಯದಲ್ಲಿ ಅನೇಕ ವಿದ್ವಜ್ಜನ ಕೃತಿರಚನೆ ಮಾಡಿದರು. ಆಡಳಿತ ಕೈತಪ್ಪಿದಾಗಲೂ ಕವಿ, ವಿದ್ವಾಂಸರನ್ನು ರಾಜ ಅನಾದರಣೆ ಮಾಡಲಿಲ್ಲ. ಕೃಷ್ಣರಾಜ ಒಡೆಯನೇ ಸ್ವಯಂ ಪಂಡಿತನೂ ಗ್ರಂಥಕರ್ತನೂ ಆಗಿದ್ದ. ಅವನ ಹೆಸರಿನಲ್ಲಿ ಸುಮಾರು ಐವತ್ತು ಗ್ರಂಥಗಳು ಪ್ರಸಿದ್ದವಾಗಿವೆ. ಸಂಸ್ಕೃತದಲ್ಲಿನ ಪುರಾಣೇತಿಹಾಸ ನಾಟಕಾದಿಗಳನ್ನು ಕನ್ನಡದಲ್ಲಿ ಬರೆಯಿಸಿದ ಯಶಸ್ಸು ಮುಮ್ಮಡಿ ಕೃಷ್ಣರಾಜನದು. ಶ್ರೀ ಕೃಷ್ಣರಾಜ ವಾಣಿವಿಲಾಸ ಎಂಬ ಹೆಸರಿನಿಂದ ಪ್ರಸಿದ್ದವಾಗಿರುವ ಭಾರತ ಟೀಕೆಯನ್ನು ಈತ ಬರೆಯಿಸಿದುದಲ್ಲದೆ ಸೌಗಂಧಿಕಾಪರಿಣಯ ಎಂಬ ವಿಸ್ತಾರವಾದ ಕಾವ್ಯವನ್ನು ಗದ್ಯಪದ್ಯಾತ್ಮಕವಾಗಿ ತಾನೇ ರಚಿಸಿದ್ದಾನೆ. ದೂರ್ವಾಸಮುನಿಯ ಶಾಪದ ದೆಸೆಯಿಂದ ತನ್ನ ಪದವಿಯನ್ನು ಕಳೆದುಕೊಂಡ ದೇವೇಂದ್ರ ಸುಗಂಧರಾಯನೆಂಬ ಹೆಸರಿನಿಂದ ಹುಟ್ಟಿ ಸೌಗಂಧಿಕೆ ಎಂಬ ಹೆಸರಿನಿಂದ ಭೂಲೋಕದಲ್ಲಿ ಅವತರಿಸಿದ ಶಚೀದೇವಿಯನ್ನು ಮದುವೆಯಾದನೆಂಬುದೇ ಈ ಗ್ರಂಥದ ಕಥಾಸಾರ. ಇದನ್ನೇ ಕವಿ ಮೂವತ್ತಾರು ಆಶ್ವಾಸಗಳಾಗಿ ಬೆಳೆಸಿ ಆರು ಸಾವಿರಕ್ಕೂ ಹೆಚ್ಚಿನ ಪದ್ಯಗಳಿಂದ ಕೂಡಿದ ಮಹಾಕಾವ್ಯವನ್ನಾಗಿ ಮಾಡಿದ್ದಾನೆ.

ಅಧ್ಯಾತ್ಮ ರಾಮಾಯಣದ ಕನ್ನಡ ಟೀಕೆಯಲ್ಲಿ ಮೊದಲಿಗೆ ಮೈಸೂರು ಅರಸರ ಚರಿತ್ರೆಯನ್ನು ಸಂಗ್ರಹವಾಗಿ ಹೇಳಿದೆ. ಇದಲ್ಲದೆ ನಂಜುಂಡ ಶತಕ, ದೇವೀ ಮಹಾತ್ಮ್ಯ, ಶಂಕರಸಂಹಿತೆ, ಸಂಖ್ಯಾರತ್ನ ಮಾಲಾಟೀಕೆ ಎಂಬ ಗ್ರಂಥಗಳು ಜನಪ್ರಿಯವಾಗಿವೆ. ಶ್ರೀಧರೀಯ ವ್ಯಾಖ್ಯಾನವನ್ನು ಅನುಸರಿಸಿ ಭಾಗವತಕ್ಕೆ ಯಥಾತಥದಿಂದ ಕನ್ನಡ ಟೀಕೆಯನ್ನು ಕೃಷ್ಣದೇವರಾಯ ಬರೆದಿದ್ದಾನೆ. ಶಾಕುಂತಲ ನಾಟಕನವೀನಟೀಕೆ ಈತನ ಕೃತಿಗಳಲ್ಲಿ ಮುಖ್ಯವಾದದ್ದು. ಪುರಾಣ ಪುಣ್ಯಕಥೆಗಳಷ್ಟಕ್ಕೇ ಗಮನವನ್ನು ಮೀಸಲಾಗಿಡದೆ ನಾಟಕಗಳನ್ನೂ ಓದಿ ಸ್ವಾರಸ್ಯಾನುಭವ ಮಾಡಿ ಅವುಗಳ ಸಾರವನ್ನು ಕನ್ನಡಕ್ಕೆ ತರುವ ಪ್ರಯತ್ನವನ್ನಿಲ್ಲಿ ಮಾಡಲಾಗಿದೆ.

ಈ ರಾಜನ ಕಾಲದಲ್ಲಿನ ಇಬ್ಬರು ಗದ್ಯಕವಿಗಳು ಬಹಳ ಮುಖ್ಯರಾದವರು; ಒಬ್ಬ ರಾಜಾವಳೀ ಕಥೆಯನ್ನು ರಚಿಸಿದ ದೇವಚಂದ್ರ. ಇನ್ನೊಬ್ಬ ಮುದ್ರಾಮಂಜೂಷವನ್ನು ರಚಿಸಿದ ಕೆಂಪುನಾರಾಯಣ. ದೇವಚಂದ್ರ ಜೈನಕವಿ; ರಾಮ ಕಥಾವತಾರ ಮತ್ತು ರಾಜಾವಳೀ ಕಥೆ ಎಂಬ ಎರಡು ಗ್ರಂಥಗಳನ್ನು ಬರೆದಿದ್ದಾನೆ. ರಾಮಕಥಾವತಾರ ಜೈನ ಸಂಪ್ರದಾಯಾನುಸಾರವಾದ ರಾಮಾಯಣ. ವಿಶೇಷವಾಗಿ ನಾಗಚಂದ್ರ ವಿರಚಿತವಾದ ರಾಮಚಂದ್ರ ಚರಿತ ಪುರಾಣದ ಅನುಸರಣೆಯಾಗಿದೆ. ಅದರಲ್ಲಿನ ಹಲವು ಪದ್ಯಗಳನ್ನು ದೇವಚಂದ್ರ ಅನುವಾದ ಮಾಡಿದ್ದಾನೆ. ಇದಕ್ಕಿಂತ ಇವನ ರಾಜಾವಳೀ ಕಥೆ ಸಾಹಿತ್ಯ ಚರಿತ್ರೆಯ ದೃಷ್ಟಿಯಿಂದ ಮುಖ್ಯವಾಗಿದೆ. ಇದು ಬಹಳ ಮಟ್ಟಿಗೆ ಗದ್ಯದಲ್ಲಿದೆ. ಕೆಲವು ಶ್ಲೋಕಗಳೂ ಪದ್ಯಗಳೂ ಮಧ್ಯೆ ಮಧ್ಯೆ ಬಂದಿವೆ. ಇದರಲ್ಲಿ ದೇವಚಂದ್ರ ಜೈನಮತಕ್ಕೆ ಸಂಬಂಧಿಸಿದ ಹಲವು ಕಥೆಗಳನ್ನೂ ಅನೇಕ ರಾಜರ ಚರಿತ್ರೆಯನ್ನೂ ಹೇಳಿದ್ದಾನೆ. ಮೈಸೂರು ಒಡೆಯರ ವಂಶಾವಳಿಯ ಕಥೆಯೂ ಇದರಲ್ಲಿ ಸಂಕ್ಷೇಪವಾಗಿ ಬಂದಿದೆ. ಈ ಕವಿ ಮುಮ್ಮಡಿ ಕೃಷ್ಣರಾಜ ಒಡೆಯರ ಆಶ್ರಿತನಾದ ವೈದ್ಯಸೂರಿಪಂಡಿತನ ಪ್ರೋತ್ಸಾಹದಿಂದ ಸು. 1838ರಲ್ಲಿ ಗ್ರಂಥರಚನೆ ಮಾಡಿದಂತೆ ತಿಳಿಸಿದ್ದಾನೆ.

ಕೆಂಪುನಾರಾಯಣ ಹೊಯಿಸಣೆಗ ಕುಲದ ಬ್ರಾಹ್ಮಣ ಕವಿ (1823). ಇವನ ಗ್ರಂಥ ಮುದ್ರಾಮಂಜೂಷ. ಈ ಗದ್ಯಗ್ರಂಥ ಹಲವು ದೃಷ್ಟಿಗಳಿಂದ ಮುಖ್ಯವಾಗಿದೆ. ಆಧುನಿಕ ಗದ್ಯಶೈಲಿ ಈ ಗ್ರಂಥದಿಂದ ಆರಂಭವಾಯಿತೆಂದು ಹೇಳಿದರೆ ತಪ್ಪಲ್ಲ. ಸುಲಲಿತವಾದ ಸರಳಗನ್ನಡದ ವಚನರಚನೆಯನ್ನು ಇಲ್ಲಿ ಕಾಣಬಹುದು. ಚಾಣಕ್ಯ ಚಂದ್ರಗುಪ್ತರು ನಂದರ ವಿನಾಶವನ್ನು ಸಾಧಿಸಿ ಪಾಟಲೀಪುರದ ಸಿಂಹಾಸನವನ್ನು ವಶಪಡಿಸಿಕೊಂಡ ಕಥೆ ಈ ಗ್ರಂಥದ ಕಥಾವಸ್ತು. ಇದರ ಉತ್ತರಾರ್ಧಕ್ಕೆ ಸಂಸ್ಕೃತದ ಮುದ್ರಾರಾಕ್ಷಸವೆಂಬ ವಿಶಾಖದತ್ತನ ನಾಟಕ ಸ್ಫೂರ್ತಿಯನ್ನು ಒದಗಿಸಿದೆ. ಪುರ್ವಾರ್ಧದ ಕಥೆಯನ್ನು ಕವಿ ಬೇರೆ ಆಧಾರಗಳಿಂದ ಪಡೆದುಕೊಂಡಿದ್ದಾನೆ. ಈ ಕೃತಿ ಓದುಗರ ಮನಸ್ಸನ್ನು ಒಲಿಸಿ ನಲಿಸುವಂಥ ಕಥಾಸ್ವಾರಸ್ಯ, ಸನ್ನಿವೇಶ ರಚನಚಾತುರ್ಯ ಮತ್ತು ಪದಲಾಲಿತ್ಯಗಳಿಂದ ಕೂಡಿ ಅತ್ಯಂತ ಜನಪ್ರಿಯವಾಗಿದೆ.

ಮುಮ್ಮಡಿ ಕೃಷ್ಣರಾಜನ ಪೋಷಣೆಯಲ್ಲಿದ್ದು ಕೃತಿರಚನೆ ಮಾಡಿದ ಇನ್ನೊಬ್ಬ ಕವಿ ಅಳಿಯ ಲಿಂಗರಾಜ (1823-74) ಅನೇಕ ಗ್ರಂಥಗಳನ್ನು ರಚಿಸಿದ್ದಾನೆ. ಅವುಗಳಲ್ಲಿ ಚಂಪು ರೂಪದಲ್ಲಿರುವ ನರಪತಿಚರಿತವೆಂಬ ಅಲಂಕಾರಗ್ರಂಥ ಮುಖ್ಯವಾದದ್ದು. ಇದರ ಉದಾಹರಣಪದ್ಯಗಳೆಲ್ಲ ಮುಮ್ಮಡಿ ಕೃಷ್ಣರಾಜನ ಸ್ತುತಿರೂಪವಾಗಿವೆ. ತಿರುಮಲಾರ್ಯ ತನ್ನ ಅಲಂಕಾರ ಗ್ರಂಥದಲ್ಲಿ ಚಿಕ್ಕದೇವರಾಯನನ್ನು ಹೊಗಳಿದ ಮಾದರಿಯನ್ನು ಈ ಕವಿ ಅನುಕರಿಸಿದಂತೆ ತೋರುತ್ತದೆ. ಈತ ಚಂಪು, ಷಟ್ಪದಿ, ಸಾಂಗತ್ಯಗಳಲ್ಲಿ ಕೃತಿರಚನೆಮಾಡಿ ತನ್ನ ಕವಿತಾ ಪ್ರೌಢಿಮೆಯನ್ನು ಮೆರೆದಿದ್ದಾನೆ. ಪುತ್ರಕಾಮೇಷ್ಟಿಯೆಂಬ ಒಂದು ಯಕ್ಷಗಾನವನ್ನು ಮಹಲಿಂಗಶತಕ ಮತ್ತು ವೀರಭದ್ರಶತಕಗಳೆಂಬ ಎರಡು ಶತಕ ಗ್ರಂಥಗಳನ್ನು ಈತ ರಚಿಸಿದ್ದಾನೆ.

ಮುಮ್ಮಡಿ ಕೃಷ್ಣಭೂಪಾಲನ ತರುವಾಯ ರಾಜಪಟ್ಟವನ್ನೇರಿದ ಶ್ರೀ ಚಾಮರಾಜ ಒಡೆಯರು ಹಿರಿಯರ ಸಂಪ್ರದಾಯವನ್ನು ಅನುಸರಿಸಿ ವಿದ್ವತ್ಕವಿಪೋಷಕರಾಗಿ ಕೀರ್ತಿಗಳಿಸಿದರು. ಇವರ ಆಸ್ಥಾನ ಕವಿ ಬಸವಪ್ಪಶಾಸ್ತ್ರಿಗಳು ರಚಿಸಿದ ಕರ್ಣಾಟಕ ಅಭಿಜ್ಞಾನಶಾಕುಂತಲ ನಾಟಕ ಇಂದಿಗೂ ಪ್ರಸಿದ್ದವಾಗಿದೆ. ಚಂಡಕೌಶಿಕ ಮತ್ತು ಉತ್ತರ ರಾಮಚರಿತೆ ಎಂಬ ಬೇರೆ ಎರಡು ಸಂಸ್ಕೃತನಾಟಕಗಳನ್ನೂ ಈ ಕವಿ ಕನ್ನಡಕ್ಕೆ ಅನುವಾದ ಮಾಡಿದ್ದಾನೆ. ಇವಲ್ಲದೆ ದಮಯಂತೀ ಸ್ವಯಂವರ, ಸಾವಿತ್ರೀ ಚರಿತ್ರೆ ಎಂಬ ಎರಡು ಕಾವ್ಯಗಳನ್ನೂ ರಚಿಸಿದ್ದಾನೆ. ಮೊದಲನೆಯದು ಚಂಪು ಎರಡನೆಯದು ಷಟ್ಪದಿ. ಒಥೆಲೋ ಎಂಬ ಇಂಗ್ಲಿಷ್ ನಾಟಕವನ್ನು ಪರಿವರ್ತಿಸಿ ಶೂರಸೇನಚರಿತ್ರೆ ಎಂಬ ನಾಟಕವನ್ನು ರಚಿಸಿದುದಲ್ಲದೆ ಬಸವಪ್ಪ ಶಾಸ್ತ್ರಿಗಳು ಭರ್ತೃಹರಿ ಸುಭಾಷಿತವನ್ನೂ ಕನ್ನಡಿಸಿದ್ದಾರೆ.

ಶತಮಾನದಲ್ಲಿ ಕನ್ನಡಕ್ಕೆ ಒಡೆಯರ ವಂಶಜರು ನೀಡಿದ ದೊಡ್ಡ ಕಾಣಿಕೆ ಶ್ರೀಜಯಚಾಮರಾಜೇಂದ್ರ ಗ್ರಂಥಮಾಲೆ. ಶ್ರೀ ಜಯಚಾಮರಾಜ ಒಡೆಯರು ಋಗ್ವೇದವನ್ನೂ ಅನೇಕ ಪುರಾಣಗಳನ್ನೂ ಕನ್ನಡದಲ್ಲಿ ಅರ್ಥಸಮೇತವಾಗಿ ಪ್ರಕಟಣೆ ಮಾಡಿಸಿ ಕನ್ನಡ ಜನಕ್ಕೆ ಮಹೋಪಕಾರ ಮಾಡಿದ್ದಾರೆ. ವೈದಿಕ ಧರ್ಮದ ಮೂಲಾಧಾರಗಳಿಂದ ಈ ಪವಿತ್ರ ಗ್ರಂಥಗಳನ್ನು ಕನ್ನಡ ಲಿಪಿಯಲ್ಲಿ ಅಚ್ಚುಮಾಡಿಸಿ ಯಥಾರ್ಥವಾದ ಕನ್ನಡ ಅನುವಾದವನ್ನೂ ಕೊಟ್ಟಿರುವುದು ಸಂಸ್ಕೃತ ಪಾಂಡಿತ್ಯವಿಲ್ಲದ ಕನ್ನಡಿಗರಿಗೂ ಜ್ಞಾನಭಂಡಾರದ ಬಾಗಿಲುಗಳನ್ನು ತೆರೆದಂತಾಗಿದೆ. ಹೀಗೆ ರಾಜ ಒಡೆಯನ ಕಾಲದಿಂದಲೂ ಒಡೆಯರ ಅರಸುಮನೆತನ ಸಾಹಿತ್ಯ, ಸಂಗೀತಾದಿ ಲಲಿತಕಲೆಗಳಿಗೆ ಅಪಾರ ಪ್ರೋತ್ಸಾಹವನ್ನು ಕೊಡುತ್ತ ಬಂದಿದೆ. (ಕೆ.ವಿ.ಇ.)