ವಿಷಯಕ್ಕೆ ಹೋಗು

ಪುಟ:ಮುಡಿ.pdf/೧೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಮುಡಿ
143


ಕಸುಬುದಾರರಿಗೆ ಭದ್ರತೆ ಮುಖ್ಯ. ಅದನ್ನು ಯಾರು ಹೇಗೆ ಮಾಡಬೇಕು, ಎಂಬುದು ಸಂಬಂಧಪಟ್ಟ ಎಲ್ಲರೂ ಯೋಚಿಸಬೇಕಾದ ವಿಷಯ.

ಯಕ್ಷ ನಿಧಿ

ಈ ಅರಿವಿನಿಂದ ಮೂಡಿದ ಕಲಾವಿದನ ಕ್ಷೇಮ ಚಿಂತನ ವ್ಯವಸ್ಥೆ -ಕಲಾರಂಗದ ಅಂಗವಾದ ಪ್ರೊ ಬಿ. ವಿ. ಆಚಾರ್ಯ ಯಕ್ಷನಿಧಿ. ಕಲಾವಿದರ ಒಳಿತಿನ ಬಗೆಗೆ, ಬಹುವಾದ ಚಿಂತನೆ, ಸ್ವಂತ ಕೊಡುಗೆ ನೀಡುತ್ತಿದ್ದ ಮೂವರು ಈ ಮಹತ್ಕಾರ್ಯದ ಹಿಂದಿನ ಸ್ಫೂರ್ತಿ ಚೇತನಗಳು - ದಿ. ಪ್ರೊ. ವಿ. ಬಿ. ಆಚಾರ್ಯ, ದಿ. ಡಾ. ಬಿ. ಬಿ. ಶೆಟ್ಟಿ, ದಿ. ಸುಂದರ ಶೆಟ್ಟಿ ಇವರು. ಅವರು ವೈಯಕ್ತಿಕವಾಗಿ ಕಲಾವಿದರ ಸಮಸ್ಯೆಗಳಿಗೆ ನೀಡುತ್ತಿದ್ದ ಗಮನ, ಸಕ್ರಿಯ ಸಹಾಯ -ಅಸಾಧಾರಣ, ಸದಾ ಸ್ಮರಣೀಯ. ಅದರ ಸಾಂಸ್ಥಿಕ ರೂಪವೇ ಯಕ್ಷನಿಧಿ. ಕಳೆದ ಐದು ವರ್ಷಗಳಲ್ಲಿ ಈ ಸಂಸ್ಥೆ ಪ್ರಶಂಸನೀಯ ಸಾಧನೆ ಮಾಡಿದೆ.

ಈ ಯಕ್ಷನಿಧಿ ಎಂಬುದು ಕಲಾವಿದರ ಮತ್ತು ಮೇಳಗಳ ನಡುವಿನ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯುವ ಸಂಘಟನೆ ಅಲ್ಲ. ಇದು ಸ್ವತಂತ್ರವಾಗಿ, ಕಲಾವಿದರ ಕ್ಷೇಮ ಚಿಂತನೆಗಾಗಿ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಲೆತ್ನಿಸುವ ಸಂಸ್ಥೆ, ಈ ವಿಚಾರ ವನ್ನು ಮನದಟ್ಟು ಮಾಡುವುದು ಆರಂಭದಲ್ಲಿ ಸಮಸ್ಯೆಯಾಗಿತ್ತು. ಕಲಾವಿದರ ವಿಶ್ವಾಸಗಳಿಸಿ, ಇದು ತಮಗಾಗಿ ದುಡಿಯುವ ವ್ಯವಸ್ಥೆ, ಇದರಲ್ಲಿ ತಾವು ಪಾಲ್ಗೊಂಡು ಕೆಲಸ ಮಾಡಬೇಕು ಎಂಬ ಭಾವನೆಯನ್ನು ರೂಪಿಸುವ ಕೆಲಸವೂ ಸುಲಭವಲ್ಲ. ಬಹಳಷ್ಟು ತಾಳ್ಮೆ, ಜಾಣ್ಮೆ ಮತ್ತು ಯತ್ನಗಳಿಂದ, ಯಕ್ಷನಿಧಿಯ ನೇತೃತ್ವವು ಈ ಎರಡು ಕೆಲಸಗಳನ್ನು ಮಾಡಿ, ಮುಂದಿನ ಹಂತಕ್ಕೆ ಸಜ್ಜುಗೊಳಿಸಿದೆ. ಇದು ಸಾಮಾನ್ಯ ಸಾಧನೆಯಲ್ಲ.

ಯೋಜನೆಗಳು

ಮುಂದಿನ ಹಂತದಲ್ಲಿ ಕಲಾವಿದರಿಗೆ ಮೆಡಿಕ್ಲೈಮ್, ಹೆಲ್ತ್ ಕಾರ್ಡ್, ಗುಂಪು ವಿಮೆ ಯೋಜನೆಗಳನ್ನು ಪ್ರಾಯೋಜಕತ್ವ ಮೂಲಕ ನಿಧಿಯು ಜಾರಿಗೊಳಿಸಿದೆ. ಕಲಾವಿದರ ತಿರುಗಾಟದ ಅನುಕೂಲಕ್ಕಾಗಿ, ಖಾಸಗಿ ಬಸ್ಸುಗಳಲ್ಲಿ ರಿಯಾಯ್ತಿ ದರದಲ್ಲಿ ಸೌಲಭ್ಯ ನೀಡಿಕೆಗೆ ನಡೆದ ಯತ್ನ ಸಫಲ ನೀಡಿದ್ದು, ಹೆಚ್ಚಿನ ಖಾಸಗಿ ಬಸ್ಸು ಮಾಲಿಕರು ಈ ಹೇಳಿಕೆಯನ್ನು ಒಪ್ಪಿ

• ಡಾ. ಎಂ. ಪ್ರಭಾಕರ ಜೋಶಿ