ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೩೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೬೦ | ಕುಕ್ಕಿಲ ಸಂಪುಟ
ಅಸಾಧಾರಣ. ಸಂಗೀತ ಶಾಸ್ತ್ರ, ನಾಟ್ಯಶಾಸ್ತ್ರಗಳ ಸತತ ಅಧ್ಯಯನ ಮುಂದುವರಿಯಿತು. ವಿವಾಹವಾಗಿ, ಕುಕ್ಕಿಲದಲ್ಲಿ ನೆಲೆಸಿ, ಸ್ವಂತ ಕೃಷಿ ದುಡಿಮೆಯಲ್ಲಿ ನಿರತರಾದುದರಿಂದ, ಓದುವಿಕೆ ತುಸು ದೂರವಾದರೂ, ಕಾವ್ಯವಾಚನ, ತಾಳಮದ್ದಲೆಗಳ ಭಾಗವತಿಕೆಗಳಲ್ಲಿ ಭಾಗವಹಿಸುತ್ತಿದ್ದರು.
ಕೃಷಿ ಅಭಿವೃದ್ಧಿ ಹೊಂದಿ, ಮಂಗಳೂರಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಬಿಡಾರ ಮಾಡಿದ್ದರಿಂದ, ಅಧ್ಯಯನಕ್ಕೆ ಪುನಃ ಚಾಲನೆ ದೊರೆಯಿತು. ನಾಟ್ಯಶಾಸ್ತ್ರಕ್ಕೂ, ಯಕ್ಷಗಾನಕ್ಕೂ ಇರುವ ಸಂಬಂಧ, ಪಾರ್ತಿಸುಬ್ಬನ ಪ್ರಸಂಗ ಸಾಹಿತ್ಯ-ಇವು ಕುಕ್ಕಿಲರ ವಿಶೇಷ ಆಸಕ್ತಿಗಳಾದುವು. ಲೇಖನ ಕಾರ್ಯವೂ ಆರಂಭವಾಯಿತು. ಇವರ ಪ್ರಸಿದ್ಧ ಲೇಖನ “ಬೆದಂಡೆ-ಚತ್ತಾಣ' ಬಂದುದು ಈ ಅವಧಿಯಲ್ಲಿ.
೧೯೫೭ರಲ್ಲಿ ಡಾ| ಶಿವರಾಮ ಕಾರಂತರ, ಯಕ್ಷಗಾನ ಬಯಲಾಟ' ಪ್ರಕಟ ವಾದದ್ದು, ಕುಕ್ಕಿಲರ ಯಕ್ಷಗಾನ ಸಂಶೋಧನ ಕಾರ್ಯಕ್ಕೆ ದೊಡ್ಡ ಪ್ರೇರಣೆಯನ್ನ ಬಹುದು. ಪಾರ್ತಿಸುಬ್ಬನ ಕಾಲ ದೇಶ ವಿಚಾರದಲ್ಲಿ ಕಾರಂತರ ವಾದವನ್ನೊಪ್ಪದ ಕುಕ್ಕಿಲರು, ತಮ್ಮ ಅಭಿಪ್ರಾಯಗಳನ್ನು ವಿಸ್ತಾರವಾಗಿ ಮಂಡಿಸಿದರು. ಸುಬ್ಬನ ಪ್ರಸಂಗಗಳಿಗೂ, ಕಥಕಳಿ ರಾಮಾಯಣಕ್ಕೂ ಇರುವ ಸಾಮ್ಯವನ್ನು ಆಧರಿಸಿ, ತುಂಬ ಮಹತ್ತ್ವದ ಸಂಗತಿಗಳನ್ನು ಅವರು ಬೆಳಕಿಗೆ ತಂದರು.
೧೯೬೧ರಿಂದ ಹದಿನೈದು ವರ್ಷಗಳ ಕಾಲ ಅಧ್ಯಯನಕ್ಕಾಗಿಯೇ ಮೈಸೂರಲ್ಲಿ ನೆಲೆಸಿದರು. ಈ ಕಾಲವು ಲೇಖನಗಳಲ್ಲಿ ಅವರ ಅತ್ಯುತ್ತಮ ಅವಧಿಯೆನಿಸಿತು. ಅವರ ಹಲವು ಲೇಖನಗಳೂ, ಸಂಶೋಧನ- ಸಂಪಾದನ ಕ್ಷೇತ್ರದ ಆಚಾರ್ಯ ಕೃತಿಗಳೆನಿಸಿದ “ಛಂದೋಂಬುಧಿ' ಪಾರ್ತಿಸುಬ್ಬನ ಯಕ್ಷಗಾನಗಳು ಭಾರತೀಯ ಸಂಗೀತಶಾಸ್ತ್ರ" ಪುಸ್ತಕಗಳು ಈ ಕಾಲದಲ್ಲಿ ರಚಿತವಾದವು. ಮೈಸೂರಿನ ಓರಿಯೆಂಟಲ್ ರಿಸರ್ಚ್ ಇನ್‌ಸ್ಟಿಟ್ಯೂಟ್, ಮೈಸೂರು ವಿಶ್ವವಿದ್ಯಾಲಯಗಳ ಸಂಪರ್ಕ ಪಡೆದ ಕುಕ್ಕಿಲರಿಗೆ, ಗ್ರಂಥಗಳ ಅಧ್ಯಯನ, ಹಸ್ತಪ್ರತಿಗಳ ಪರಿಶೀಲನೆಗೆ ಬೇಕಾದ ಸೌಕರ್ಯ ಲಭಿಸಿತು. ಕೆಲಕಾಲ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಛಂದಸ್ಸಿನ ಪಾಠ ಹೇಳಿದ ಕುಕ್ಕಿಲರಿಗೆ, ಪದವೀಧರನಾಗದ ಪ್ರಾಧ್ಯಾಪಕನಾಗುವ ವಿಶಿಷ್ಟ ಸಂದರ್ಭ ಒದಗಿತ್ತು. ನಾನು ಡಿಗ್ರಿ ಇಲ್ಲದ ಪ್ರೊಫೆಸರ್' ಎಂದವರು ವಿನೋದವಾಡುವುದಿತ್ತು. ೧೯೭೬ರಲ್ಲಿ ಅವರು ಊರಿಗೆ ಮರಳಿದರು. ಅಧ್ಯಯನವನ್ನು ಮುಂದುವರಿಸಿದರು. ಹಲವು ಗೋಷ್ಠಿ, ಕಮ್ಮಟಗಳಲ್ಲಿ ಮಹತ್ತ್ವದ ಪ್ರಬಂಧಗಳನ್ನು ಮಂಡಿಸಿದರು.
ಕುಕ್ಕಿಲರು ಬರೆದಿರುವುದು, ಅವರ ಪಾಂಡಿತ್ಯದ ಪ್ರಮಾಣದಿಂದ, ಕಡಿಮೆಯೇ, ಆದರೆ, ಬರೆದಿರುವ ಎಲ್ಲವೂ ಅಷ್ಟು ತೂಕವಾದ, ಅಚ್ಚುಕಟ್ಟಾದ ಬರಹ.
ಮೂಲಭೂತ ಸಂಶೋಧನೆ, ತಲಸ್ಪರ್ಶಿ ಮತ್ತು ಛೇದಕ ಅಧ್ಯಯನಗಳಿಂದ ಪುಟಗೊಂಡ ಅವರ ಎಲ್ಲ ಪ್ರಬಂಧಗಳೂ ಕನ್ನಡದ ಸಂಶೋಧನ ಸಾಹಿತ್ಯದ ಮೊದಲ ಪಂಕ್ತಿಯಲ್ಲಿ ನಿಲ್ಲತಕ್ಕ ಯೋಗ್ಯತೆಯವು.
ಅವರು ಸಂಪಾದಿಸಿದ ಛಂದೋಂಬುಧಿ' (ಪ್ರಕಾಶನ: ಡಿ. ಪಿ. ಕೆ. ಮೂರ್ತಿ) ಗ್ರಂಥ ಸಂಪಾದನೆಯಲ್ಲಿ ಒಂದು ಮಾದರಿ ಕೃತಿ, ವಿವರಣೆಗಳು, ಟಿಪ್ಪಣಿಗಳು ಮೌಲಿಕ ವಾಗಿದ್ದು, ಛಂದಸ್ಸಿನ ಮೂಲತತ್ವಗಳ ವಿವೇಚನೆ ಇಲ್ಲಿ ತುಂಬ ಸೊಗಸಾಗಿ ಬಂದಿದೆ.