ಹರಿಕಥಾಮೃತಸಾರ/ಬೃಹತ್ತಾರತಮ್ಯ ಸಂಧಿ (ಆವೇಶಾವತಾರ, ಅಂಶಾವತರಣ)

ವಿಕಿಸೋರ್ಸ್ದಿಂದ

ಹರಿ ಸಿರಿ ವಿರಂಚೀರ ಮುಖ ನಿರ್ಜನರ ಆವೇಶಾವತಾರಗಳ

ಸ್ಮರಿಸು ಗುಣಗಳ ಸರ್ವ ಕಾಲದಿ ಭಕ್ತಿ ಪೂರ್ವಕದಿ//


ಮೀನ ಕೂರ್ಮ ಕ್ರೋಡ ನರಹರಿ ಮಾಣವಕ ಭೃಗುರಾಮ ದಶರಥ ಸೂನು

ಯಾದವ ಬುದ್ಧ ಕಲ್ಕೀ ಕಪಿಲ ವೈಕುಂಠ

ಶ್ರೀನಿವಾಸ ವ್ಯಾಸ ಋಷಭ ಹಯಾನನಾ ನಾರಾಯಣೀ ಹಂಸ ಅನಿರುದ್ಧ

ತ್ರಿವಿಕ್ರಮ ಶ್ರೀಧರ ಹೃಷೀಕೇಶ//1//


ಹರಿಯು ನಾರಾಯಣನು ಕೃಷ್ಣ ಅಸುರ ಕುಲಾಂತಕ ಸೂರ್ಯ ಸಮಪ್ರಭ

ಕರೆಸುವನು ನಿರ್ದುಷ್ಟ ಸುಖ ಪರಿಪೂರ್ಣ ತಾನೆಂದು

ಸರ್ವದೇವೋತ್ತಮನು ಸರ್ವಗ ಪರಮ ಪುರುಷ ಪುರಾತನ

ಜರಾಮರಣ ವರ್ಜಿತ ವಾಸುದೇವಾದಿ ಅಮಿತ ರೂಪಾತ್ಮ//2//


ಈ ನಳಿನಭವ ಜನನಿ ಲಕ್ಷ್ಮೀ ಜ್ಞಾನ ಬಲ ಭಕ್ತಾದಿ ಗುಣ ಸಂಪೂರ್ಣಳು ಎನಿಪಳು

ಸರ್ವ ಕಾಲದಿ ಹರಿ ಕೃಪಾ ಬಲದಿ

ಹೀನಳು ಎನಿಪಳು ಅನಂತ ಗುಣದಿ ಪುರಾಣ ಪುರುಷಗೆ

ಪ್ರಕೃತಿಗಿನ್ನು ಸಮಾನರು ಎನಿಸುವರಿಲ್ಲ ಮುಕ್ತಾಮುಕ್ತ ಸುರರೊಳಗೆ//3//


ಗುಣಗಳ ತ್ರಯಮಾನಿ ಶ್ರೀ ಕುಂಭಿಣಿ ಮಹಾ ದುರ್ಗ ಅಂಭ್ರಣೀ ರುಗ್ಮಿಣಿಯು

ಸತ್ಯಾಶಾಂತಿಕೃತಿ ಜಯ ಮಾಯ ಮಹಲಕುಮಿ ಜನಕಜಾಕಮಲ ಆಲಯಾ

ದಕ್ಷಿಣೆ ಸುಪದ್ಮಾ ತ್ರಿಲೋಕ ಈಶ್ವರಿ

ಅಣು ಮಹತ್ತಿನೊಳಿದ್ದು ಉಪಮಾರಹಿತಳು ಎನಿಸುವಳು//4//


ಘೋಟಕಾಸ್ಯನ ಮಡದಿಗಿಂತಲಿ ಹಾಟಕ ಉದರಪವನರು ಈರ್ವರು

ಕೋಟಿ ಗುಣದಿಂದ ಅಧಮರು ಎನಿಪರು ಆವಕಾಲದಲಿ

ಖೇಟಪತಿ ಶೇಷ ಅಮರೇಂದ್ರರ ಪಾಟಿಮಾಡದೆ

ಶ್ರೀಶನ ಕೃಪಾ ನೋಟದಿಂದಲಿ ಸರ್ವರೊಳು ವ್ಯಾಪಾರ ಮಾಡುವರು//5//


ಪುರುಷ ಬ್ರಹ್ಮ ವಿರಿಂಚಿ ಮಹಾನ್ ಮರುತ ಮುಖ್ಯಪ್ರಾಣ ಧೃತಿ ಸ್ಮೃತಿ

ಗುರುವರ ಮಹಾಧ್ಯಾತ ಬಲ ವಿಜ್ಞಾತ ವಿಖ್ಯಾತ ಗರಳಭುಗ್

ಭವರೋಗ ಭೇಷಜ ಸ್ವರವರಣ ವೇದಸ್ಥ ಜೀವೇಶ್ವರ

ವಿಭೀಷಣ ವಿಶ್ವ ಚೇಷ್ಟಕ ವೀತಭಯ ಭೀಮ//6//


ಅನಿಲಸ್ಥಿತಿ ವೈರಾಗ್ಯ ನಿಧಿ ರೋಚನ ವಿಮುಕ್ತಿಗಾನಂದ ದಶಮತಿ

ಅನಿಮಿಶೇಷ ಅನಿದ್ರ ಶುಚಿ ಸತ್ವಾತ್ಮಕ ಶರೀರ

ಅಣು ಮಹದ್ರೂಪಾತ್ಮಕ ಅಮೃತ ಹನುಮದಾದಿ ಅವತಾರ

ಪದ್ಮಾಸನ ಪದವಿ ಸಂಪ್ರಾಪ್ತ ಪರಿಸರಾಖಣ ಆಶ್ಮಸಮ//7//


ಮಾತರಿಶ್ವ ಬ್ರಹ್ಮರು ಜಗನ್ಮಾತೆಗೆ ಅಧಮ ಅಧೀನರೆನಿಪರು

ಶ್ರೀ ತರುಣಿ ವಲ್ಲಭನು ಈರ್ವರೊಳು ಆವ ಕಾಲದಲಿ

ನೀತ ಭಕ್ತಿ ಜ್ಞಾನ ಬಲ ರೂಪ ಅತಿಶಯದಿಂದಿದ್ದು

ಚೇತನಾಚೇತನಗಳೊಳು ವ್ಯಾಪ್ತರೆನಿಪರು ತತ್ತದಾಹ್ವಯದಿ//8//


ಸರಸ್ವತೀ ವೇದ ಆತ್ಮಿಕಾ ಭುಜಿ ನರಹರೀ ಗುರುಭಕ್ತಿ ಬ್ರಾಹ್ಮೀ

ಪರಮ ಸುಖ ಬಲ ಪೂರ್ಣೆ ಶ್ರದ್ಧಾ ಪ್ರೀತಿ ಗಾಯತ್ರೀ

ಗರುಡ ಶೇಷರ ಜನನಿ ಶ್ರೀ ಸಂಕರುಷಣನ ಜಯ ತನುಜೆ

ವಾಣೀ ಕರಣ ನಿಯಾಮಕೆ ಚತುರ್ದಶ ಭುವನ ಸನ್ಮಾನ್ಯೇ//9//


ಕಾಳಿಕಾಶಿಜೆ ವಿಪ್ರಜೆ ಪಾಂಚಾಲಿ ಶಿವಕನ್ಯ ಇಂದ್ರಸೇನಾ

ಕಾಲಮಾನೀ ಚಂದ್ರದ್ಯುಸಭಾ ನಾಮ ಭಾರತಿಗೆ

ಘಾಳಿಬ್ರಹ್ಮರ ಯುವತಿಯರು ಏಳೇಳು ಐವತ್ತೊಂದು ಗುಣದಿಂ ಕೀಳರೆನಿಪರು

ತಮ್ಮ ಪತಿಗಳಿಂದಲಿ ಆವಾಗ//10//


ಹರಿ ಸಮೀರ ಆವೇಶ ನರ ಸಂಕರುಷಣ ಆವೇಶ ಯುತ ಲಕ್ಷ್ಮಣ

ಪರಮ ಪುರುಷನ ಶುಕ್ಲ ಕೇಶ ಆವೇಶ ಬಲರಾಮ

ಹರ ಸದಾಶಿವ ತಪಾಹಂಕೃತು ಮೃತ ಯುಕ್ತ ಶುಕ ಊರ್ಧ್ವಾಪಟು

ತತ್ಪುರುಷ ಜೈಗೀಶೌರ್ವ ದ್ರೌಣೀ ವ್ಯಾಧ ದೂರ್ವಾಸ//11//


ಗರುಡ ಶೇಷ ಶಶಿ ಅಂಕದಳ ಶೇಖರರು ತಮ್ಮೊಳು ಸಮರು

ಭಾರತಿ ಸರಸಿಜಾಸನ ಪತ್ನಿಗೆ ಅಧಮರು ನೂರು ಗುಣದಿಂದ

ಹರಿ ಮಡದಿ ಜಾಂಬವತಿಯೊಳು ಶ್ರೀ ತರುಣಿಯ ಆವೇಶವಿಹುದು ಎಂದಿಗೂ

ಕೊರತೆಯೆನಿಪರು ಗರುಡ ಶೇಷರಿಗೆ ಐವರು ಐದುಗುಣ//12//


ನೀಲಭದ್ರಾ ಮಿತ್ರವಿಂದಾ ಮೇಲೆನಿಪ ಕಾಳಿಂದಿ ಲಕ್ಷ್ಮಣ

ಬಾಲೆಯರಿಗಿಂದ ಅಧಮ ವಾರುಣಿ ಸೌಪರಣಿ ಗಿರಿಜಾ

ಶ್ರೀ ಲಕುಮಿಯುತ ರೇವತೀ ಶ್ರೀ ಮೂಲ ರೂಪದಿ ಪೇಯಳು ಎನಿಪಳು

ಶೈಲಜಾದ್ಯರು ದಶಗುಣ ಅಧಮ ತಮ್ಮ ಪತಿಗಳಿಗೆ//13//


ನರಹರಿ ಈರ ಆವೇಶ ಸಂಯುತ ನರಪುರಂದರಗಾಧಿ ಕುಶ

ಮಂದರದ್ಯುಮ್ನ ವಿಕುಕ್ಷಿ ವಾಲೀ ಇಂದ್ರನ ಅವತಾರ

ಭರತ ಬ್ರಹ್ಮಾವಿಷ್ಟ ಸಾಂಬ ಸುದರ್ಶನ ಪ್ರದ್ಯುಮ್ನ

ಸನಕಾದ್ಯರೊಳಗಿಪ್ಪ ಸನತ್ಕುಮಾರನು ಷನ್ಮುಕನು ಕಾಮ//14//


ಈರೈದು ಗುಣ ಕಡಿಮೆ ಪಾರ್ವತಿ ವಾರುಣೀಯರಿಗೆ ಇಂದ್ರ ಕಾಮ

ಶರೀರಮಾನಿ ಪ್ರಾಣ ದಶ ಗುಣ ಅವರ ಶಕ್ರನಿಗೆ

ಮಾರಜಾ ರತಿ ದಕ್ಷ ಗುರುವೃತ್ತ ಅರಿ ಜಾಯಾ ಶಚಿ ಸ್ವಯಂಭುವರು

ಆರು ಜನ ಸಮ ಪ್ರಾಣಗೆ ಅವರರು ಹತ್ತು ಗುಣದಿಂದ//15//


ಕಾಮ ಪುತ್ರ ಅನಿರುದ್ಧ ಸೀತಾರಾಮನ ಅನುಜ ಶತ್ರುಹನ ಬಲರಾಮನನುಜ

ಪೌತ್ರ ಅನಿರುದ್ಧನೊಳಗೆ ಅನಿರುದ್ಧ

ಕಾಮ ಭಾರ್ಯಾ ರುಗ್ಮವತಿ ಸನ್ನ್ನಾಮ ಲಕ್ಷ್ಮಣಳು ಎನಿಸುವಳು

ಪೌಲೋಮಿ ಚಿತ್ರಾಂಗದೆಯು ತಾರಾ ಎರಡು ಪೆಸರುಗಳು//16//


ತಾರ ನಾಮಕ ತ್ರೈತೆಯೊಳು ಸೀತಾ ರಮಣನ ಆರಾಧಿಸಿದನು

ಸಮೀರಯುಕ್ತ ಉದ್ಧವನು ಕೃಷ್ಣಗೆ ಪ್ರೀಯನೆನಿಸಿದನು

ವಾರಿಜಾಸನ ಯುಕ್ತ ದ್ರೋಣನು ಮೂರಿಳೆಯೊಳು ಬೃಹಸ್ಪತಿಗೆ ಅವತಾರವೆಂಬರು

ಮಹಾಭಾರತ ತಾತ್ಪರ್ಯದೊಳಗೆ//17//


ಮನು ಮುಖಾದ್ಯರಿಗಿಂತ ಪ್ರವಹಾ ಗುಣದಿ ಪಂಚಕ ನೀಚನೆನಿಸುವ

ಿನ ಶಶಾಂಕರು ಧರ್ಮ ಮಾನವಿ ಎರಡು ಗುಣದಿಂದ ಕನಿಯರೆನಿಪರು ಪ್ರವಹಗಿಂತಲಿ

ದಿನಪ ಶಶಿ ಯಮ ಧರ್ಮ ರೂಪಗಳು

ಅನುದಿನದಿ ಚಿಂತಿಪುದು ಸಂತರು ಸರ್ವ ಕಾಲದಲಿ//18//


ಮರುತನ ಆವೇಶಯುತ ಧರ್ಮಜ ಕರಡಿ ವಿದುರನು ಸತ್ಯಜಿತು

ಈರೆರೆಡು ಧರ್ಮನ ರೂಪ

ಬ್ರಹ್ಮಾವಿಷ್ಟ ಸುಗ್ರೀವ ಹರಿಯ ರೂಪಾವಿಷ್ಟ ಕರ್ಣನು ತರಣಿಗೆ ಎರಡು ಅವತಾರ

ಚಂದ್ರಮ ಸುರಪನ ಆವೇಶಯುತನು ಅಂಗದನು ಎನಿಸಿಕೊಳುತಿಪ್ಪ//19//


ತರಣಿಗಿಂತಲಿ ಪಾದ ಪಾದರೆ ವರುಣ ನೀಚನು

ಮಹಭಿಷಕು ದುರ್ದರ ಸುಶೇಷಣನು ಶಂತನೂ ನಾಲ್ವರು ವರುಣ ರೂಪ

ಸುರಮುನೀ ನಾರದನು ಕಿಂಚಿತ್ ಕೊರತೆ ವರುಣಗೆ

ಅಗ್ನಿ ಭೃಗು ಅಜ ಗೊರಳ ಪತ್ನಿ ಪ್ರಸೂತಿ ಮೂವರು ನಾರದನಿಗೆ ಅಧಮ//20//


ನೀಲ ದುಷ್ಟದ್ಯುಮ್ನ ಲವ ಈ ಲೇಲಿಹಾನನ ರೂಪಗಳು

ಭೃಗು ಕಾಲಿಲಿ ಒದ್ದದರಿಂದ ಹರಿಯ ವ್ಯಾಧನೆನಿಸಿದನು

ಏಳು ಋಷಿಗಳಿಗೆ ಉತ್ತಮರು ಮುನಿ ಮೌಳಿ ನಾರದಗೆ ಅಧಮ ಮೂವರು

ಘಾಳಿಯುತ ಪ್ರಹ್ಲಾದ ಬಾಹ್ಲಿಕರಾಯನು ಎನಿಸಿದನು//21//


ಜನಪ ಕರ್ಮಜರೊಳಗೆ ನಾರದ ಮುನಿ ಅನುಗ್ರಹ ಬಲದಿ

ಪ್ರಹ್ಲಾದನಳ ಭೃಗು ದಾಕ್ಷಾಯಣಿಯರಿಗೆ ಸಮನು ಎನಿಸಿಕೊಂಬ

ಮನು ವಿವಸ್ವಾನ್ ಗಾಧಿಜ ಈರ್ವರು ಅನಳಗಿಂತಲಿ ಕಿಂಚಿತು ಅಧಮ

ಎಣೆಯೆನಿಸುವರು ಸಪ್ತರ್ಷಿಗಳಿಗೆ ಎಲ್ಲ ಕಾಲದಲಿ//22//


ಕಮಲಸಂಭವ ಭವರೆನಿಪ ಸಂಯಮಿ ಮರೀಚೀ ಅತ್ರಿ ಅಂಗಿರಸುಮತಿ

ಪುಲಹಾಕ್ರುತು ವಸಿಷ್ಠ ಪುಲಸ್ತ್ಯ ಮುನಿ ಸ್ವಾಹಾ ರಮಣಗೆ ಅಧಮರು

ಮಿತ್ರನಾಮಕ ದ್ಯುಮಣಿ ರಾಹುಯುಕ್ತ ಭೀಷ್ಮಕ ಯಮಳರೂಪನು

ತಾರನಾಮಕನು ಎನಿಸಿ ತ್ರೈತೆಯೊಳು//23//


ನಿರ್ಋತಿಗೆ ಎರಡವತಾರ ದುರ್ಮುಖ ಹರಯುತ ಘಟೋತ್ಕಚನು

ಪ್ರಾವಹಿ ಗುರು ಮಡದಿ ತಾರಾ ಸಮರು ಪರ್ಜನ್ಯಗೆ ಉತ್ತಮರು

ಕರಿಗೊರಳ ಸಂಯುಕ್ತ ಭಗದತ್ತರಸು ಕತ್ಥನ ಧನಪ ರೂಪಗಳೆರೆಡು

ವಿಘ್ನಪ ಚಾರುದೇಷ್ಣನು ಅಶ್ವಿನಿಗಳು ಸಮ//24//


ಡೋನಾ ಧ್ರುವ ದೋಷಾರ್ಕ ಅಗ್ನಿ ಪ್ರಾಣ ದ್ಯುವಿಭಾವಸುಗಳು ಎಂಟು

ಕೃಶಾನು ಶ್ರೇಷ್ಠ ದ್ಯುನಾಮ ವಸು ಭೀಷ್ಮಾರ್ಯ ಬ್ರಹ್ಮ ಯುತ

ದ್ರೋಣ ನಾಮಕ ನಂದ ಗೋಪ ಪ್ರಧಾನ ಅಗ್ನಿಯನು ಉಳಿದು ಏಳು ಸಮಾನರೆನಿಪರು

ತಮ್ಮೊಳಗೆ ಜ್ಞಾನಾದಿ ಗುಣದಿಂದ//25//


ಭೀಮರೈವತ ಓಜ ಅಜೈಕಪದ ಆ ಮಹನ್ಬಹು ರೂಪಕನು ಭವ

ವಾಮ ಉಗ್ರ ವೃಶಾಕಪೀ ಅಹಿರ್ ಬುಧ್ನಿಯೆನಿಸುತಿಹ ಈ ಮಹಾತ್ಮರ ಮಧ್ಯದಲಿ

ಉಮಾ ಮನೋಹರೋತ್ತಮನು

ದಶನಾಮಕರು ಸಮರೆನಿಸಿಕೊಂಬರು ತಮ್ಮೊಳು ಎಂದೆಂದು//26//


ಭೂರಿ ಅಜೈಕಪ ಪದಾಹ್ವ ಅಹಿರ್ ಬುಧ್ನಿ ಈರೈದು ರುದ್ರಗಣ ಸಂಯುತ

ಭೂರಿಶ್ರವನು ಎಂದೆನಿಪ ಶಲ ವಿರುಪಾಕ್ಷ ನಾಮಕನು

ಸೂರಿ ಕೃಪ ವಿಷ್ಕಂಭ ಸಹದೇವಾ ರಣಾಗ್ರಣಿ

ಸೋಮದತ್ತನು ತಾ ರಚಿಸಿದ ದ್ವಿರೂಪ ಧರೆಯೊಳು ಪತ್ರತಾಪಕನು//27//


ದೇವ ಶಕ್ರ ಉರುಕ್ರಮನು ಮಿತ್ರಾ ವರುಣ ಪರ್ಜನ್ಯ ಭಗ

ಪೂಷಾ ವಿವಸ್ವಾನ್ ಸವಿತೃ ಧಾತಾ ಆರ್ಯಮ ತ್ವಷ್ಟ್ರು

ದೇವಕೀ ಸುತನಲ್ಲಿ ಸವಿತೃ ವಿಭಾವಸೂ ಸುತ ಭಾನುಯೆನಿಸುವ

ಜ್ಯಾವನಪಯುತ ವೀರಸೇನನು ತ್ವಷ್ಟ್ರು ನಾಮಕನು//28//


ಎರಡಧಿಕ ದಶ ಸೂರ್ಯರೊಳು ಮೂರೆರೆಡು ಜನರು ಉತ್ತಮ

ವಿವಸ್ವಾನ್ ವರುಣ ಶಕ್ರ ಉರುಕ್ರಮನು ಪರ್ಜನ್ಯ ಮಿತ್ರಾಖ್ಯ

ಮರುತನ ಆವೇಶಯುತ ಪಾಂಡೂವರ ಪರಾವಹನು ಎಂದೆನಿಪ

ಕೇಸರಿ ಮೃಗಪ ಸಂಪಾತಿ ಶ್ವೇತತ್ರಯರು ಮರುದಂಶ//29//


ಪ್ರತಿಭವಾತನು ಚೇಕಿತನು ವಿಪ್ರುಥುವು ಎನಿಸುವನು ಸೌಮ್ಯ ಮಾರುತ

ವಿತತ ಸರ್ವೋತ್ತುಂಗ ಗಜನಾಮಕರು ಪ್ರಾಣ ಅಂಶ

ದ್ವಿತೀಯ ಪಾನ ಗವಾಕ್ಷ ಗವಯ ತೃತೀಯ ವ್ಯಾನ

ಉದಾನ ವೃಷಪರ್ವ ಅತುಳ ಶರ್ವತ್ರಾತ ಗಂಧ ಸುಮಾದನರು ಸಮಾನ//30//


ಐವರೊಳಗೆ ಈ ಕುಂತಿಭೋಜನು ಆವಿ ನಾಮಕ ನಾಗಕೃಕಲನು

ದೇವದತ್ತ ಧನಂಜಯರು ಅವತಾರ ವರ್ಜಿತರು

ಆವಹೋದ್ವಹ ವಿವಹ ಸಂವಹ ಪ್ರಾವಹೀ ಪತಿ ಮರುತ ಪ್ರವಹನಿಗೆ

ಆವಕಾಲಕು ಕಿಂಚಿತು ಅಧಮರು ಮರುದ್ಗಣರೆಲ್ಲ//31//


ಪ್ರಾಣಾಪಾನ ವ್ಯಾನೋದಾನ ಸಮಾನರ ಐವರನು ಉಳಿದು ಮರುತರು ಊನರೆನಿಪರು

ಹತ್ತು ವಿಶ್ವೇದೇವರು ಇವರಿಂದ ಸೂನುಗಳುಯೆನಿಸುವನು

ಐವರ ಮಾನಿನೀ ದ್ರೌಪತಿಗೆ

ಕೆಲವರು ಕ್ಷೋಣಿಯೊಳು ಕೈಕೇಯರು ಎನಿಪರು ಎಲ್ಲ ಕಾಲದಲಿ//32//


ಪ್ರತಿವಿಂದ್ಯ ಶ್ರುತ ಸೋಮಶ್ರುತ ಕೀರ್ತಿ ಶತಾನಿಕ ಶ್ರುತಕರ್ಮ

ದ್ರೌಪತಿ ಕುವರರು ಇವರೊಳಗೆ ಅಭಿತಾಮ್ರ ಪ್ರಮುಖ ಚಿತ್ರರಥನು ಗೋಪ ಕಿಶೋರ

ಬಲರೆಂಬ ಅತುಲರು ಐ ಗಂಧರ್ವರಿಂದಲಿ ಯುತರು

ಧರ್ಮ ವೃಕೋದರ ಆದಿಜರು ಎಂದು ಕರೆಸುವರು//33//


ವಿವಿದಮೈಂದರು ನಕುಲ ಸಹದೇವ ವಿಭು ತ್ರಿಶಿಖ ಅಶ್ವಿನಿಗಳು ಇವರೊಳು

ದಿವಿಪನ ಆವೇಶವು ಇಹುದು ಎಂದಿಗು

ದ್ಯಾವಾ ಪೃಥ್ವಿ ಋಭು ಪವನ ಸುತ ವಿಶ್ವಕ್ಸೇನನು ಉಮಾ ಕುವರ ವಿಘ್ನಪ

ಧನಪ ಮೊದಲಾದವರು ಮಿತ್ರಗೆ ಕಿಂಚಿತು ಅಧಮರು ಎನಿಸಿಕೊಳುತಿಹರು//34//


ಪಾವಕಾಗ್ನಿ ಕುಮಾರನು ಎನಿಸುವ ಚಾವನೋಚಿಥ್ಯ ಮುನಿ

ಚಾಕ್ಶುಷ ರೈವತ ಸ್ವಾವರೋಚಿಷ ಉತ್ತಮ ಬ್ರಹ್ಮ ರುದ್ರ ಇಂದ್ರ

ದೇವಧರ್ಮನು ದಕ್ಷನಾಮಕ ಸಾವರ್ಣಿ ಶಶಿಬಿಂದು ಪ್ರುಥು

ಪ್ರೀಯವ್ರತನು ಮಾಂಧಾತ ಗಯನು ಕಕುಸ್ಥ ದೌಷ್ಯಂತಿ//35//


ಭರತ ಋಷಭಜ ಹರಿಣಿಜ ದ್ವಿಜ ಭರತ ಮೊದಲಾದ ಅಖಿಳರಾಯರೊಳಿರುತಿಹುದು

ಶ್ರೀ ವಿಷ್ಣು ಪ್ರಾಣಾವೇಶ ಪ್ರತಿದಿನದಿ

ವರ ದಿವಸ್ಪತಿ ಶಂಭು: ಅದ್ಭುತ ಕರೆಸುವನು ಬಲಿ ವಿಧೃತ ಧೃತ

ಶುಚಿ ನೆರೆಖಲೂ ಕೃತಧಾಮ ಮೊದಲಾದ ಅಷ್ಟ ಗಂಧರ್ವ//36//


ಅರಸುಗಳು ಕರ್ಮಜರು ವೈಶ್ವಾನರಗೆ ಅಧಮ ಶತಗುಣದಿ

ವಿಘ್ನೇಶ್ವರಗೆ ಕಿಂಚಿದ್ ಗುಣ ಕಡಿಮೆ ಬಲಿ ಮುಖ್ಯ ಪಾವಕರು

ಶರಭ ಪರ್ಜನ್ಯಾಖ್ಯ ಮೇಘಪ ತರಣಿ ಭಾರ್ಯಾ ಸಂಜ್ಞೆ

ಶಾರ್ವರೀಕರನ ಪತ್ನೀ ರೋಹಿಣೀ ಶಾಮಲಾ ದೇವಕಿಯು//37//


ಅರಸಿಯೆನಿಪಳು ಧರ್ಮರಾಜಗೆ ವರುಣ ಭಾರ್ಯ ಉಷಾದಿ ಷಟ್ಕರು

ಕೊರತೆಯೆನಿಪರು ಪಾವಕಾದ್ಯರಿಗೆ ಎರಡು ಗುಣದಿಂದ

ಎರಡು ಮೂರ್ಜನರಿಂದ ಅಧಮ ಸ್ವಹ ಕರೆಸುವಳು

ಉಷಾದೇವಿ ವೈಶ್ವಾನರನ ಮಡದಿಗೆ ದಶ ಗುಣ ಅವರಳು ಅಶ್ವಿನೀ ಭಾರ್ಯಾ//38//


ಸುದರ್ಶನ ಶಕ್ರಾದಿ ಸುರಯುತ ಬುಧನು ತಾನು ಅಭಿಮನ್ಯುವು ಎನಿಸುವ

ಬುಧನಿಗಿಂತ ಅಶ್ವಿನೀ ಭಾರ್ಯ ಶಲ್ಯ ಮಾಗಧರ ಉದರಜ

ಉಷಾ ದೇವಿಗಿಂತಲಿ ಅಧಮನೆನಿಪ ಶನೈಶ್ಚರನು

ಶನಿಗೆ ಅಧಮ ಪುಷ್ಕರ ಕರ್ಮಪನೆನಿಸುವನು ಬುಧರಿಂದ//39//


ಉದ್ವಹಾ ಮರುತಾನ್ವಿತ ವಿರಾಧ ದ್ವಿತೀಯ ಸಂಜಯನು ತುಂಬುರ

ವಿದ್ವದೋತ್ತಮ ಜನ್ಮೇಜಯ ತ್ವಷ್ಟ್ರುಯುತ ಚಿತ್ರರಥ

ಸದ್ವಿನುತ ದಮ ಘೋಷಕ ಕಬಂಧದ್ವಯರು ಗಂಧರ್ವದನು

ಮನುಪದ್ಮಸಂಭವಯುತ ಅಕ್ರೂರ ಕಿಶೋರನೆನಿಸುವನು//40//


ವಾಯುಯುತ ಧೃತರಾಷ್ಟ್ರ ದಿವಿಜರ ಗಾಯಕನು ಧೃತರಾಷ್ಟ್ರ

ನಕ್ರನುರಾಯ ದ್ರುಪದನು ವಹ ವಿಶಿಷ್ಟ ಹೂಹು ಗಂಧರ್ವ

ನಾಯಕ ವಿರಾಟ್ ವಿವಹ ಹಾಹಾಜ್ಞೆಯ

ವಿದ್ಯಾಧರನೆ ಅಜಗರ ತಾ ಯೆನಿಸುವನು ಉಗ್ರಸೇನನೆ ಉಗ್ರಸೇನಾಖ್ಯ//41//


ಬಿಸಜ ಸಂಭವ ಯುಕ್ತ ವಿಶ್ವಾವಸು ಯುಧಾಮನ್ಯು

ಉತ್ತ ಮೌಜಸ ಬಿಸಜ ಮಿತ್ರಾರ್ಯಮ ಯುತ ಪರಾವಸುಯೆನಿಸುತಿಪ್ಪ

ಅಸಮ ಮಿತ್ರಾನ್ವಿತನು ಸತ್ಯಜಿತು ವಸುಧಿಯೊಳು ಚಿತ್ರಸೇನ

ಅಮೃತಾಂಧಸರು ಗಾಯಕರೆಂದು ಕರೆಸುವರು ಆವ ಕಾಲದಲಿ//42//


ಉಳಿದ ಗಂಧರ್ವರುಗಳು ಎಲ್ಲರು ಬಲಿ ಮೊದಲು ಗೋಪಾಲರೆನಿಪರು

ಇಳೆಯೊಳಗೆ ಸೈರೆಂಧ್ರಿ ಪಿಂಗಳೆ ಅಪ್ಸರ ಸ್ತ್ರೀಯಳು

ತಿಲೋತ್ತಮೆಯು ಪೂರ್ವದಲಿ ನಕುಲನ ಲಲನೆ ಪಾರ್ವತಿಯೆನಿಸುವಳು

ಗೋಕುಲದ ಗೋಪಿಯರು ಎಲ್ಲ ಶಬರೀ ಮುಖ್ಯ ಅಪ್ಸರರು//43//


ಕೃಷ್ಣವರ್ತ್ಮನ ಸುತರೊಳಗೆ ಶತದ್ವಾಷ್ಟ ಸಾವಿರ ಸ್ತ್ರೀಯರಲ್ಲಿ

ಪ್ರವಿಷ್ಟಳು ಆಗಿ ರಮಾಂಬ ತತ್ತನ್ನಾಮ ರೂಪದಲಿ ಕೃಷ್ಣ ಮಹಿಷಿಯರೊಳಗಿಪ್ಪಳು

ತ್ವಷ್ಟ್ರು ಪುತ್ರಿ ಕಶೇರು ಇವರೊಳು ಶ್ರೇಷ್ಠಳು ಎನಿಪಳು

ಉಳಿದ ಋಷಿ ಗಣ ಗೋಪಿಕಾ ಸಮರು//44//


ಸೂನುಗಳೆನಿಸುವರು ದೇವ ಕೃಷಾನುವಿಗೆ ಕ್ರಥು ಸಿಂಧು ಶುಚಿ ಪವಮಾನ

ಕೌಶಿಕರೈದು ತುಂಬುರು ಊರ್ವಶೀ ಶತರು ಮೇನಕೀ ಋಷಿ ರಾಯರುಗಳು

ಆಜಾನು ಸುರರಿಗೆ ಸಮರೆನಿಪರು

ಸುರಾಣಕರು ಅನಾಖ್ಯಾತ ದಿವಿಜರ ಜನಕರು ಎನಿಸುವರು//45//


ಪಾವಕರಿಗಿಂತ ಅಧಮರು ಎನಿಸುವ ದೇವ ಕುಲಜ ಆನಾಖ್ಯ ಸುರಗಣ ಕೋವಿದರು

ನಾನಾ ಸುವಿದ್ಯದಿ ಸೋತ್ತಮರ ನಿತ್ಯ ಸೇವಿಪರು ಸದ್ಭಕ್ತಿ ಪೂರ್ವಕ

ಸ್ವವರರಿಗೆ ಉಪದೇಶಿಸುವರು

ನಿರಾವಲಂಬನ ವಿಮಲ ಗುಣಗಳ ಪ್ರತಿ ದಿವಸದಲ್ಲಿ//46//


ಸುರರೊಳಗೆ ವರ್ಣಾಶ್ರಮಗಳೆಂಬ ಎರಡು ಧರ್ಮಗಳಿಲ್ಲ

ತಮ್ಮೊಳು ನಿರುಪಮರೆಂದೆನಿಸಿ ಕೊಂಬರು ತಾರತಮ್ಯದಲಿ

ಗುರು ಸುಶಿಷ್ಯತ್ವವು ಈ ಋಷಿಗಳೊಳಗೆ ಇರುತಿಹುದು

ಆಜಾನ ಸುರರಿಗೆ ಚಿರ ಪಿತೃ ಶತಾಧಮರು ಎನಿಸುವರು ಏಳು ಜನರುಳಿದು//47//


ಚಿರ ಪಿತ್ರುಗಳಿಂದ ಅಧಮ ಗಂಧರ್ವರುಗಳು ಎನಿಪರು

ದೇವನಾಮಕ ಕೊರತೆಯೆನಿಸುವ ಚಕ್ರವರ್ತಿಗಳಿಂದ ಗಂಧರ್ವ

ನರರೊಳು ಉತ್ತಮರೆನಿಸುವರು ಹನ್ನೆರೆಡು ಎಂಭತ್ತೆಂಟು ಗುಣದಲಿ

ಹಿರಿಯರೆನಿಪರು ಕ್ರಮದಿ ದೇವಾವೇಶ ಬಲದಿಂದ//48//


ದೇವತೆಗಳಿಂ ಪ್ರೇಷ್ಯರೆನಿಪರು ದೇವ ಗಂಧರ್ವರುಗಳು

ಇವರಿಂದ ಆವ ಕಾಲಕು ಶಿಕ್ಷಿತರು ನರನಾಮ ಗಂಧರ್ವ

ಕೇವಲ ಅತಿ ಸದ್ಭಕ್ತಿಪೂರ್ವಕ ಯಾವದಿಂದ್ರಿಯಗಳ ನಿಯಾಮಕ

ಶ್ರೀವರನೆಂದರಿದು ಭಜಿಪರು ಮಾನುಷೋತ್ತಮರು//49//


ಬಾದರಾಯಣ ಭಾಗವತ ಮೊದಲಾದ ಶಾಸ್ತ್ರಗಳಲಿ ಬಹುವಿಧ

ದ್ವಾದಶ ದಶ ಸುಪಂಚ ವಿಂಶತಿ ಶತ ಸಹಸ್ರಯುತ ಭೇದಗಳ ಪೇಳಿದನು

ಸೋತ್ತಮ ಆದಿತೇಯ ಆವೇಶ ಬಲದಿ ವಿರೋಧ ಚಿಂತಿಸಬಾರದು

ಇದು ಸಾಧು ಜನ ಸಮ್ಮತವು//50//


ಇವರು ಮುಕ್ತಿ ಯೋಗ್ಯರೆಂಬರು ಶ್ರವಣ ಮನನಾದಿಗಳ

ಪರಮೋತ್ಸವದಿ ಮಾಡುತ ಕೇಳಿ ನಲಿಯುತ

ಧರ್ಮ ಕಾಮಾರ್ಥ ತ್ರಿವಿಧ ಫಲವ ಅಪೇಕ್ಷಿಸದೆ ಶ್ರೀಪವನ ಮುಖ ದೇವಾಂತರಾತ್ಮಕ

ಪ್ರವರತಮ ಶಿಷ್ಟೇಷ್ಟ ದಾಯಕನೆಂದು ಸ್ಮರಿಸುವರು//51//


ನಿತ್ಯ ಸಂಸಾರಿಗಳು ಗುಣ ದೋಷಾತ್ಮಕರು

ಬ್ರಹ್ಮಾದಿ ಜೀವರ ಭೃತ್ಯರೆಂಬರು ರಾಜನ ಉಪಾದಿಯಲಿ ಹರಿಯೆಂಬ

ಕೃತ್ತಿವಾಸನು ಬ್ರಹ್ಮ ಶ್ರೀ ವಿಷ್ಣುತ್ರಯರು ಸಮ

ದುಃಖ ಸುಖೋತ್ಪತ್ತಿ ಮೃತಿ ಭವ ಪೇಳುವರು ಅವತಾರಗಳಿಗೆ ಸದಾ//52//


ತಾರತಮ್ಯ ಜ್ಞಾನವಿಲ್ಲದೆ ಸೂರಿಗಳ ನಿಂದಿಸುತ ನಿತ್ಯದಿ

ತೋರುತಿಪ್ಪರು ಸುಜನರ ಉಪಾದಿಯಲಿ ನರರೊಳಗೆ

ಕ್ರೂರ ಕರ್ಮಾಸಕ್ತರಾಗಿ ಶರೀರ ಪೋಷಣೆ ಗೋಸುಗದಿ

ಸಂಚಾರ ಮಾಳ್ಪರು ಅನ್ಯ ದೇವತೆ ನೀಚರ ಆಲಯದಿ//53//


ದಶ ಪ್ರಮತಿ ಮತಾಬ್ಧಿಯೊಳು ಸುಮನಸರೆನಿಪ ರತ್ನಗಳನು

ಅವಲೋಕಿಸಿ ತೆಗೆದು ಪ್ರಾಕೃತ ಸುಭಾಷಾ ತಂತುಗಳ ರಚಿಸಿ

ಅಸುಪತಿ ಶ್ರೀ ರಮಣನಿಗೆ ಸಮರ್ಪಿಸಿದೆ ಸತ್ಜನರು ಇದನು ಸಂತೋಷಿಸಲಿ

ದೋಷಗಳ ಎಣಿಸದಲೆ ಕಾರುಣ್ಯದಲಿ ನಿತ್ಯ//54//


ನಿರುಪಮನು ಶ್ರೀವಿಷ್ಣು ಲಕ್ಷ್ಮೀ ಸರಸಿಜೋದ್ಭವ ವಾಯು ವಾಣೀ

ಗರುಡ ಷಣ್ಮಹಿಷಿಯರು ಪಾರ್ವತಿ ಶಕ್ರ ಸ್ಮರ ಪ್ರಾಣ ಗುರು

ಬೃಹಸ್ಪತಿ ಪ್ರವಹ ಸೂರ್ಯನು ವರುಣ ನಾರದ ವಹ್ನಿ ಸಪ್ತ ಅಂಗಿರರು

ಮಿತ್ರ ಗಣೇಶ ಪೃಥು ಗಂಗಾ ಸ್ವಾಹಾ ಬುಧನು//55//


ತರಣಿ ತನಯ ಶನೈಶ್ಚರನು ಪುಷ್ಕರನು ಆಜಾನಜ ಚಿರಪಿತರು

ಗಂಧರ್ವರೀರ್ವರು ದೇವ ಮಾನುಷ ಚಕ್ರವರ್ತಿಗಳು

ನರರೊಳುತ್ತಮ ಮಧ್ಯಮ ಅಧಮ ಕರೆಸುವರು ಮಧ್ಯ ಉತ್ತಮರು

ಈರೆರೆಡು ಜನ ಕೈವಲ್ಯ ಮಾರ್ಗಸ್ಥರಿಗೆ ಅನಮಿಪೆ//56//


ಸಾರ ಭಕ್ತಿ ಜ್ಞಾನದಿಂ ಬೃಹತ್ತಾರತಮ್ಯವನು ಅರಿತು ಪಠಿಸುವ

ಸೂರಿಗಳಿಗೆ ಅನುದಿನದಿ ಪುರುಷಾರ್ಥಗಳ ಪೂರೈಸಿ

ಕಾರುಣಿಕ ಮರುತಾಂತರಾತ್ಮಕ ಮಾರಮಣ ಜಗನ್ನಾಥ ವಿಠಲ

ತೋರಿಕೊಂಬನು ಹೃತ್ಕಮಲದೊಳು ಯೋಗ್ಯತೆಯನರಿತು//57//