ಹರಿಕಥಾಮೃತಸಾರ/ಸ್ವಗತಸ್ವಾತಂತ್ರ್ಯ ಸಂಧಿ (ಸ್ವಗತಸ್ವಾತಂತ್ರ್ಯ ದಾನ)

ವಿಕಿಸೋರ್ಸ್ದಿಂದ

ಸ್ವಗತಸ್ವಾತಂತ್ರ್ಯ ಗುಣವ ಹರಿ ತೆಗೆದು ಬ್ರಹ್ಮಾದ್ಯರಿಗೆ ಕೊಟ್ಟದು

ಭೃಗು ಮುನಿಪ ಪೇಳಿದನು ಇಂದ್ರದ್ಯುಮ್ನ ಕ್ಷಿತಿಪನಿಗೆ//


ಪರಮ ವಿಷ್ಣು ಸ್ವತಂತ್ರ ಮಾಯಾ ತರುಣಿ ವಕ್ಷಸ್ಥಳ ನಿವಾಸಿ

ಸರಸಿಜೋದ್ಭವ ಪ್ರಾಣರೀರ್ವರು ಸಚಿವರು ಎನಿಸುವರು

ಸರ್ವ ಕರ್ಮಗಳಲ್ಲಿ ತತ್ಪ್ರಿಯರು ಉರಗ ಭೂಷಣ ಅಹಂಕೃತಿತ್ರಯ

ಕರೆಸುವ ಅಮರೇಂದ್ರ ಅರ್ಕ ಮುಖರು ಇಂದ್ರಿಯಪರು ಎನಿಸುವರು//1//


ಈ ದಿವೌಕಸರ ಅಂತೆ ಕಲಿ ಮೊದಲಾದ ದೈತ್ಯರು ಸರ್ವ ದೇಹದಿ ತೋದಕರು ತಾವಾಗಿ

ವ್ಯಾಪಾರಗಳ ಮಾಡುವರು

ವೇಧನಾಂದದಿ ಕಲಿಯು ಅಹಂಕಾರಾಧಿಪ ಅಧಮ ಮಧುಕುಕೈಟಭ

ಕ್ರೋಧಿಶಂಭರ ಮುಖರು ಮನಸಿಗೆ ಸ್ವಾಮಿಯೆನಿಸುವರು//2//


ದೇವತೆಗಳ ಉಪಾಧಿ ನಿತ್ಯದಿ ಏವಮಾದಿ ನಾಮದಿಂದಲಿ

ಯಾವದಿಂದ್ರಿಯಗಳಲಿ ವ್ಯಾಪಾರಗಳ ಮಾಡುವರು

ಸೇವಕರ ಸೇವ ಅನುಗುಣ ಫಲವೀವ ನ್ರುಪನಂದದಲಿ

ತನ್ನ ಸ್ವಭಾವ ಸ್ವಾತಂತ್ರ್ಯ ವಿಭಾಗವ ಮಾಡಿಕೊಟ್ಟ ಹರಿ//3//


ಅಗಣಿತ ಸ್ವಾತಂತ್ರ್ಯವ ನಾಲ್ಬಗೆ ವಿಭಾಗವ ಮಾಡಿ

ಒಂದನುತೆಗೆದು ದಶವಿಧಗೈಸಿ ಪಾದರೆ ಪಂಚ ಪ್ರಾಣನಲಿ

ಮೊಗ ಚತುಷ್ಟಯನೊಳು ಸಪಾದೈದು ಗುಣವಿರಸಿದ

ಮತ್ತೆ ದಶ ವಿಧಯುಗಳ ಗುಣವನ್ನು ಮಾಡಿ ಎರಡು ಸದಾ ಶಿವನೊಳಿಟ್ಟ//4//


ಪಾಕಶಾಸನ ಕಾಮರೊಳು ಸಾರ್ಧೈಕವಿಟ್ಟ ದಶ ಇಂದ್ರಿಯರ

ಸುದಿವೌಕಸಾದ್ಯರೊಳೊಂದು ಯಾವಜ್ಜೀವರೊಳಗೊಂದು

ನಾಲ್ಕೂವರೆ ಕಲ್ಯಾದಿ ದೈತ್ಯಾನೀಕಕಿತ್ತನು

ಎರಡು ತ್ರಿವಿಧ ವಿವೇಕಗೈಸಿ ಇಂದಿರಗೊಂದು ಎರಡು ಆತ್ಮ ತನ್ನೊಳಗೆ//5//


ಈ ವಿಧದಿ ಸ್ವಾತಂತ್ರ್ಯವ ದೇವ ಮಾನವ ದಾನವರೊಳು

ರಮಾ ವಿನೋದಿ ವಿಭಾಗ ಮಾಡಿಟ್ಟು ಅಲ್ಲೇ ರಮಿಸುವನು

ಮೂವರೊಳಗಿದ್ದು ಅವರ ಕರ್ಮವ ತಾ ವಿಕಾರವಗೈಸದಲೆ

ಕಲ್ಪವಸಾನಕೆ ಕೊಡುವನು ಅನಾಯಾಸ ಅವರ ಗತಿಯ//6//


ಆಲಯಗಳೊಳಿಪ್ಪ ದೀಪ ಜ್ವಾಲೆ ವರ್ತಿಗಳನುಸರಿಸಿ ಜನರ ಆಲಿಗೊಪ್ಪುವ ತೆರದಿ

ಹರಿ ತಾ ತೋರ್ಪ ಸರ್ವತ್ರ

ಕಾಲ ಕಾಲದಿ ಶ್ರೀಧರಾ ದುರ್ಗಾ ಲಲನೆಯರ ಕೂಡಿ ಸುಖಮಯ ಲೀಲೆಗೈಯಲು

ತ್ರಿಗುಣ ಕಾರ್ಯಗಳಿಹವು ಜೀವರಿಗೆ//7//


ಇಂದ್ರಿಯಗಳಿಂ ಮಾಳ್ಪ ಕರ್ಮ ದ್ವಂದ್ವಗಳ ತನಗರ್ಪಿಸಲು

ಗೋವಿಂದ ಪುಣ್ಯವ ಕೊಂಡು ಪಾಪವ ಭಸ್ಮವನೆ ಮಾಳ್ಪ

ಇಂದಿರೇಶನು ಭಕ್ತ ಜನರನು ನಿಂದಿಸುವರೊಳಗಿಪ್ಪ

ಪುಣ್ಯವ ತಂದು ತನ್ನವಗೀವ ಪಾಪಗಳ ಅವರಿಗುಣಿಸುವನು//8//


ಹೊತ್ತು ಒಟ್ಟಿಗೆ ಪಾಪ ಕರ್ಮ ಪ್ರವರ್ತಕರ ನಿಂದಿಸದೆ

ತನಗಿಂದ ಉತ್ತಮರ ಗುಣ ಕರ್ಮಗಳ ಕೊಂಡಾಡದಲಿಪ್ಪ ಮರ್ತ್ಯರಿಗೆ

ಗೋಬ್ರಾಹ್ಮಣ ಸ್ತ್ರೀ ಹತ್ಯ ಮೊದಲಾದ ಅಖಿಳ ದೋಷಗಳಿತ್ತಪನು

ಸಂದೇಹ ಪಡಸಲ್ಲ ಅಖಿಳ ಶಾಸ್ತ್ರಮತ//9//


ತನ್ನ ಸ್ವಾತಂತ್ರ್ಯ ಗುಣಗಳ ಹಿರಣ್ಯ ಗರ್ಭಾದ್ಯರಿಗೆ

ಕಲಿಮುಖ ದಾನವರ ಸಂತತಿಗೆ ಅವರಧಿಕಾರವ ಅನುಸರಿಸಿ

ಪುಣ್ಯ ಪಾಪಗಳೀವ ಬಹು ಕಾರುಣ್ಯ ಸಾಗರನು

ಅಲ್ಪಶಕ್ತಿಗಳ ಉಣ್ಣಲರಿಯದಿರಲು ಉಣ ಕಲಿಸಿದನು ಜೀವರಿಗೆ//10//


ಸತ್ಯ ವಿಕ್ರಮ ಪುಣ್ಯ ಪಾಪ ಸಮಸ್ತರಿಗೆ ಕೊಡಲೋಸುಗದಿ

ನಾಲ್ವತ್ತು ಭಾಗವ ಮಾಡಿ ಲೇಶಾಂಶವನು ಜನಕೀವ

ಅತ್ಯಲ್ಪ ಪರಮಾಣು ಜೀವಗೆ ಸಾಮರ್ಥ್ಯವನು ತಾ ಕೊಟ್ಟು

ಸ್ಥೂಲ ಪದಾರ್ಥಗಳ ಉಂಡು ಉಣಿಪ ಸರ್ವದಾಸರ್ವ ಜೀವರಿಗೆ//11//


ತಿಮಿರ ತರಣಿಗಳು ಏಕ ದೇಶದಿ ಸಮನಿಸಿಪ್ಪವೆ ಎಂದಿಗಾದರು?

ಭ್ರಮಣ ಛಳಿ ಬಿಸಲು ಅಂಜಿಕೆಗಳುಂಟೇನೋ ಪರ್ವತಕೆ?

ಅಮಿತ ಜೀವರೊಳಿದ್ದು ಲಕ್ಷ್ಮೀ ರಮಣ ವ್ಯಾಪಾರಗಳ ಮಾಡುವ

ಕಮಲಪತ್ರ ಸರೋವರಗಳೊಳಗಿಪ್ಪ ತೆರದಂತೆ//12//


ಅಂಬುಜೋದ್ಭವ ಮುಖ್ಯ ಸುರಾ ಕಲಿ ಶಂಬರಾದಿ ಸಮಸ್ತ ದೈತ್ಯ ಕದಂಬಕೆ

ಅನುದಿನ ಪುಣ್ಯ ಪಾಪ ವಿಭಾಗವನೆ ಮಾಡಿ

ಅಂಬುಧಿಯ ಜಲವನು ಮಹದ್ಘಟ ದಿಂಬನಿತು ತುಂಬುವ ತೆರದಿ

ಪ್ರತಿ ಬಿಂಬರೊಳು ತಾನಿದ್ದು ಯೋಗ್ಯತೆಯಂತೆ ಫಲವೀವ//13//


ಇನಿತು ವಿಷ್ಣು ರಹಸ್ಯದೊಳು ಭ್ರುಮು ಮುನಿಪ ಇಂದ್ರದ್ಯುಮ್ನಗೆ ಅರುಪಿದದನು

ಬುಧರು ಕೇಳುವುದು ನಿತ್ಯದಿ ಮತ್ಸರವ ಬಿಟ್ಟು

ಅನುಚಿತೋಕ್ತಿಗಳಿದ್ದರೆಯು ಸರಿಯೆ ಗಣನೆ ಮಾಡದಿರೆಂದು

ವಿದ್ವದ್ ಜನಕೆ ವಿಜ್ಞಾಪನೆಯ ಮಾಡುವೆ ವಿನಯ ಪೂರ್ವಕದಿ//13//


ವೇತ ಭಯ ವಿಶ್ವೇಶ ವಿಧಿ ಪಿತ ಮಾತುಳಾಂತಕ ಮಧ್ವ ವಲ್ಲಭ

ಭೂತ ಭಾವನ ಅನಂತ ಭಾಸ್ಕರ ತೇಜ ಮಹಾರಾಜ

ಗೌತಮನ ಮಡದಿಯನು ಕಾಯ್ದ ಅನಾಥ ರಕ್ಷಕ

ಗುರುತಮ ಜಗನ್ನಾಥ ವಿಠಲ ತನ್ನ ನಂಬಿದ ಭಕುತರನು ಪೊರೆವ//14//