ಹರಿಕಥಾಮೃತಸಾರ/ಫಲಸ್ತುತಿ

ವಿಕಿಸೋರ್ಸ್ದಿಂದ

ಹರಿಕಥಾಮೃತಸಾರ ಶ್ರೀಮದ್ಗುರುವರ

ಜಗನ್ನಾಥ ದಾಸರ ಕರತಲಾಮಲಕವನೆ

ಪೇಳಿದ ಸಕಲ ಸಂಧಿಗಳ

ಪರಮ ಪಂಡಿತ ಮಾನಿಗಳು

ಮತ್ಸರಿಸಲೆದೆಗಿಚ್ಚಾಗಿ ತೋರುವುದರಿಸಕರಿಗಿದು

ತೋರಿ ಪೇಳುವದಲ್ಲ ಧರೆಯೊಳಗೆ//1//


ಭಾಮಿನೀ ಷಟ್ಪದಿಯ ರೂಪದಲೀ

ಮಹಾದ್ಭುತ ಕಾವ್ಯದಾದಿಯೊಳಾ

ಮನೋಹರ ತರತರಾತ್ಮಕ ನಾಂದಿ ಪದ್ಯಗಳ

ಯಾಮಯಾಮಕೆ ಪಠಿಸುವವರ

ಸುಧಾಮಸ ಕೈಪಿಡಿಯಲೋಸುಗ

ಪ್ರೇಮದಿಂದಲಿ ಪೇಳ್ದ ಗುರು ಕಾರುಣ್ಯಕೇನೆಂಬೆ//2//


ಸಾರವೆಂದರೆ ಹರಿಕಥಾಮೃತ

ಸಾರವೆಂಬುದೆಮ್ಮ ಗುರುವರ

ಸಾರಿದಲ್ಲದೆ ತಿಳಿಯದೆನುತ ಮಹೇಂದ್ರ ನಂದನನ

ಸಾರಥಿಯ ಬಲಗೊಂಡು ಸಾರಾ

ಸಾರಗಳ ನಿರ್ಣೈಸಿ ಪೇಳ್ದನು

ಸಾರ ನಡೆವ ಮಹಾತ್ಮರಿಗೆ ಸಂಸಾರವೆಲ್ಲಿಹುದೋ//3//


ದಾಸವರ್ಯರ ಮುಖದಿ ನಿಂದು

ರಮೇಶನನು ಕೀರ್ತಿಸುವ ಮನದಭಿಲಾಷೆಯಲಿ

ವರ್ಣಾಭಿಮಾನಿಗಳೊಲಿದು ಪೇಳಿಸಿದ

ಈ ಸುಲಕ್ಷಣ ಕಾವ್ಯದೊಳಗ್ಯತಿ

ಪ್ರಾಸಗಳಿಗೆ ಪ್ರಯತ್ನವಿಲ್ಲದೆ

ಲೇಸುಲೇಸನೆ ಶ್ರಾವ್ಯ ಮಾಡುದೆ ಕುರುಹು ಕವಿಗಳಿಗೆ//4//


ಪ್ರಾಕೃತೋಕ್ತಿಗಳೆಂದು ಬರಿದೆ

ಮಹಾಕೃತಘ್ನರು ಜರಿವರಲ್ಲದೆ

ಸ್ವೀಕೃತವ ಮಾಡದಲೆ ಬಿಡುವರೇ ಸುಜನರಾದವರು

ಶ್ರೀಕೃತೀಪತಿ ಅಮಲ ಗುಣಗಳು

ಈ ಕೃತಿಯೊಳುoಟಾದ ಬಳಿಕ

ಪ್ರಾಕೃತವೆ ಸಂಸ್ಕೃತದ ಸಡಗರವೇನು ಸುಜನರಿಗೆ//5//


ಶ್ರುತಿಗೆ ಶೋಭನಮಾಗದಡೆ

ಜಡಮತಿಗೆ ಮಂಗಳವೀಯದಡೆ

ಶ್ರುತಿಸ್ಮ್ರುತಿಗೆ ಸಮ್ಮತವಾಗದಿದ್ದಡೆ ನಮ್ಮ ಗುರುರಾಯ

ಮಥಿಸಿ ಮಧ್ವಾಗಮ ಪಯೋಬ್ಧಿಯ

ಕ್ಷಿತಿಗೆ ತೋರಿದ ಬ್ರಹ್ಮ ವಿದ್ಯಾ

ರತರಿಗೀಪ್ಸಿತ ಹರಿಕಥಾಮೃತಸಾರವೆನಿಸುವುದು//6//


ಭಕ್ತಿವಾದದಿ ಪೇಳ್ದನೆಂಬ

ಪ್ರಸಕ್ತಿ ಸಲ್ಲದು ಕಾವ್ಯದೊಳು ಪುನರುಕ್ತಿ

ಶುಷ್ಕ ಸಮಾನ ಪದ ವ್ಯತ್ಯಾಸ ಮೊದಲಾದ

ಯುಕ್ತಿ ಶಾಸ್ತ್ರ ವಿರುದ್ಧ ಶಬ್ದ

ವಿಭಕ್ತಿ ವಿಷಮಗಳಿರಲು

ಜೀವನ್ಮುಕ್ತ ಭೋಗ್ಯವಿದೆಂದು ಸಿರಿಮದನಂದ ಮೆಚ್ಚುವನೆ?//7//


ಆಶುಕವಿಕುಲ ಕಲ್ಪತರು

ದಿಗ್ದೇಶವರಿಯಲು ರಂಗನೊಲುಮೆಯ

ದಾಸಕೂಟಸ್ಥರಿಗೆರಗಿ ನಾ ಬೇಡಿಕೊಂಬೆನು

ಈ ಸುಲಕ್ಷಣ ಹರಿಕಥಾಮೃತ

ಮೀಸಲರಿಯದೆ ಸಾರದೀರ್ಘ

ದ್ವೇಷಿಗಳಿಗೆರೆಯದಲೆ ಸಲಿಸುವದೆನ್ನ ಬಿನ್ನಪವ//8//


ಪ್ರಾಸಗಳ ಪೊಂದಿಸದೆ ಶಬ್ದ

ಶ್ಲೇಷಗಳ ಶೋಧಿಸದೆ ದೀರ್ಘ

ಹ್ರಾಸಗಳ ಸಲ್ಲಿಸದೆ ಷಟ್ಪದಿಗತಿಗೆ ನಿಲ್ಲಿಸದೆ

ದೂಷಕರು ದಿನದಿನದಿ ಮಾಡುವ

ದೂಷಣೆಯೆ ಭೂಷಣಗಳೆಂದುಪ

ದೇಶಗಮ್ಯವು ಹರಿಕಥಾಮೃತಸಾರ ಸಾಧ್ಯರಿಗೆ//9//


ಅಶ್ರುತಾಗಮ ಇದರ ಭಾವ

ಪರಿಶ್ರಮವು ಬಲ್ಲವರಿಗಾನಂದಾಶ್ರುಗಳ

ಮಳೆಗರೆಸಿ ಮರೆಸುವ ಚಮತ್ಕ್ರುತಿಯ

ಮಿಶ್ರರಿಗೆ ಮರೆ ಮಾಡಿ ದಿವಿಜರ

ಜಸ್ರದಲಿ ಕಾಯ್ದಿಪ್ಪರಿದರೊಳು

ಪಃಶ್ರುತಿಗಳೈತಪ್ಪವೇ ನಿಜ ಭಕ್ತಿ ಉಳ್ಳವರಿಗೆ//10//


ನಿಚ್ಚ ನಿಜಜನ ನೆಚ್ಚ ನೆಲೆಗೊಂಡಚ್ಚ

ಭಾಗ್ಯವು ಪೆಚ್ಚ ಪೇರ್ಮೆಯು

ಕೆಚ್ಚ ಕೇಳ್ವನು ಮೆಚ್ಚ ಮಲಮರ ಮುಚ್ಚಲೆಂದೆನುತ

ಉಚ್ಚವಿಗಳಿಗೆ ಪೊಚ್ಚ ಪೊಸೆದನ

ಲುಚ್ಚರಿಸದೀ ಸಚ್ಚರಿತ್ರೆಯನುಚ್ಚರಿಸೆ

ಸಿರಿವತ್ಸ ಲಾಂಛನ ಮೆಚ್ಚಲೇನರಿದು//11//


ಸಾಧು ಸಭೆಯೊಳು ಮೆರೆಯೆ ತತ್ವ

ಸುಬೋಧ ವೃಷ್ಟಿಯಗರೆಯೆ ಕಾಮಕ್ರೋಧ

ಬೀಜವು ಹುರಿಯೆ ಖಳರದೆ ಬಿರಿಯೆ ಕರಕರಿಯ

ವಾದಿಗಳ ಪಲ್ಮುರಿಯೆ ಪರಮ

ವಿನೋದಿಗಳ ಮೈಮರೆಯಲೋಸುಗ

ಹಾದಿತೋರಿದ ಹಿರಿಯ ಬಹುಚಾತುರ್ಯ ಹೊಸಪರಿಯ//12//


ವ್ಯಾಸತೀರ್ಥರೊಲವೆಯೊ ವಿಠಲೋಪಾಸಕ

ಪ್ರಭುವರ್ಯ ಪುರಂದರದಾಸರಾಯರ

ದಯವೋ ತಿಳಿಯದು ಓದಿ ಕೇಳದಲೆ

ಕೇಶವನ ಗುಣಮಣಿಗಳನು

ಪ್ರಾಣೇಶಗರ್ಪಿಸಿ ವಾದಿರಾಜರ

ಕೋಶಕೊಪ್ಪುವ ಹರಿಕಥಾಮೃತಸಾರ ಪೇಳಿದರು//13//


ಹರಿಕಥಾಮೃತಸಾರ ನವರಸಭರಿತ

ಬಹು ಗಂಭೀರ ರತ್ನಾಕರ

ರುಚಿರ ಶೃಂಗಾರ ಸಾಲಂಕಾರ ವಿಸ್ತಾರ

ಸರಸ ನರ ಕಂಠೀರವಾಖ್ಯಾರ್ಯರ

ಜನಿತ ಸುಕುಮಾರ ಸಾತ್ವೀಕರಿಗೆ

ಪರಮೋದಾರ ಮಾಡಿದ ಮರೆಯದುಪಕಾರ//14//


ಅವನಿಯೊಳು ಜ್ಯೋತಿಷ್ಮತೀ ತೈಲವನು

ಪಾಮರನುಂಡು ಜೀರ್ಣಿಸಲವನೆ

ಪಂಡಿತನೋಕರಿಪವಿವೇಕಿಯಪ್ಪಂತೆ

ಶ್ರವಣ ಮಂಗಳ ಹರಿಕಥಾಮೃತ

ಸವಿದು ನಿರ್ಗುಣಸಾರ ಮಕ್ಕಿಸಲವ

ನಿಪುಣನೈ ಯೋಗ್ಯಗಲ್ಲದೆ ದಕ್ಕಲರಿಯದಿದು//15//


ಅಕ್ಕರದೊಳೀ ಕಾವ್ಯದೊಳೊಂದಕ್ಕರವ

ಬರೆದೋದಿದವ ದೇವರ್ಕಳಿಂ

ದುಸ್ತಜ್ಯನೆನಿಸಿ ಧರ್ಮಾರ್ಥಕಾಮಗಳ

ಲೆಕ್ಕಿಸದೆ ಲೋಕೈಕನಾಥನ

ಭಕ್ತಿ ಭಾಗ್ಯವ ಪಡೆವ ಜೀವನ್ಮುಕ್ತಗಲ್ಲದೆ

ಹರಿಕಥಾಮೃತಸಾರ ಸೊಗಸುವದೆ//16//


ವತ್ತಿಬಹ ವಿಘ್ನಗಳ ತಡೆದಪ

ಮೃತ್ಯುವಿಗೆ ಮರೆಮಾಡಿ ಕಾಲನ

ಭೃತ್ಯರಿಗೆ ಭೀಕರವ ಪುಟ್ಟಿಸಿ ಸಕಲ ಸಿದ್ಧಿಗಳ

ಎತ್ತಿಗೊಳ್ಳಿಸಿ ವನರುಹೇಕ್ಷಣ

ನ್ರುತ್ಯಮಾಡುವವನ ಮನೆಯೊಳು

ನಿತ್ಯಮಂಗಳ ಹರಿಕಥಾಮೃತಸಾರ ಪಠಿಸುವರ//17//


ಆಯುರಾರೋಗ್ಯೈಶ್ವರ್ಯ ಮಾಹಾಯಶೋ

ಧೈರ್ಯ ಬಲ ಸಮ ಸಹಾಯ

ಶೌರ್ಯೋದಾರ್ಯ ಗುಣಗಾಂಭೀರ್ಯ ಮೊದಲಾದ

ಆಯುತಗಳುಂಟಾಗಲೊಂದಧ್ಯಾಯ

ಪಠಿಸಿದ ಮಾತ್ರದಿಂ ಶ್ರವಣೀಯವಲ್ಲದೆ

ಹರಿಕಥಾಮೃತಸಾರ ಸುಜನರಿಗೆ//18//


ಕುರುಡ ಕಂಗಳ ಪಡೆವ ಬಧಿರನಿಗೆರೆಡು

ಕಿವಿ ಕೇಳ್ಬಹವು ಬೆಳೆಯದ

ಮುರುಡ ಮದನಾಕೃತಿಯ ತಾಳ್ವನು ಕೇಳ್ದ ಮಾತ್ರದಲಿ

ಬರಡು ಹೈನಾಗುವದು ಪೇಳ್ದರೆ

ಕೊರಡು ಪಲ್ಲೈಸುವದು ಪ್ರತಿದಿನ

ಹುರುಡಿಲಾದರು ಹರಿಕಥಾಮೃತಸಾರವನು ಪಠಿಸೆ//19//


ನಿರ್ಜರ ತರಂಗಿಣಿಯೊಳನುದಿನ

ಮಜ್ಜನಾದಿ ಸಮಸ್ತ ಕರ್ಮ

ವಿವರ್ಜಿತಾಶಾಪಾಶದಿಂದಲಿ ಮಾಡಿದಧಿಕ ಫಲ

ಹೆಜ್ಜೆಹೆಜ್ಜೆಗೆ ದೊರೆಯದಿಪ್ಪವೆ

ಸಜ್ಜನರು ಶಿರತೂಗುವಂದದಿ

ಘರ್ಜಿಸುತಲೀ ಹರಿಕಥಾಮೃತಸಾರ ಪಠಿಸುವರ//20//


ಸತಿಯರಿಗೆ ಪತಿಭಕುತಿ ಪತ್ನೀವ್ರತ

ಪುರುಷರಿಗೆ ಹರುಷ ನೆಲೆಗೊಂಡತಿ

ಮನೋಹರರಾಗಿ ಗುರು ಹಿರಿಯರಿಗೆ ಜಗದೊಳಗೆ

ಸತತ ಮಂಗಳವೀವ ಬಹು

ಸುಕೃತಿಗಳೆನಿಸುತ ಸುಲಭದಿಂ ಸದ್ಗತಿಯ

ಪಡೆವರು ಹರಿಕಥಾಮೃತಸಾರವನು ಪಠಿಸೆ//21//


ಎಂತು ಬಣ್ಣಿಸಲೆನ್ನಳವೆ

ಭಗವಂತನಮಲ ಗುಣಾನುವಾದಗಳೆಂತು

ಪರಿಯಲಿ ಪೂರ್ಣಬೋಧರ ಮತವ ಪೊಂದಿದರ

ಚಿಂತನಗೆ ಬಪ್ಪಂತೆ ಬಹು ದೃಷ್ಟಾಂತ

ಪೂರ್ವಕವಾಗಿ ಪೇಳ್ದ ಮಹಂತರಿಗೆ

ನರರೆಂದು ಬಗೆವರೆ ನಿರಯ ಭಾಗಿಗಳು//22//


ಮಣಿಖಚಿತ ಹರಿವಾಣದೊಳು ವಾರಣ

ಸುಭೋಜ್ಯ ಪದಾರ್ಥ ಕೃಷ್ಣಾರ್ಪಣವೆನುತ

ಪಸಿದವರಿಗೋಸುಗ ನೀಡುವಂದದಲಿ

ಪ್ರಣತರಿಗೆ ಪೊಂಗನಡ ವರ

ವಾನ್ಗ್ಮಣಿಗಳಿಂ ವಿರಚಿಸಿದ ಕೃತಿಯೊಳುಣಿಸಿ

ನೋಡುವ ಹರಿಕಥಾಮೃತಸಾರ ವನುದಾರ//23//


ದುಷ್ಟರೆನ್ನದೆ ದುರ್ವಿಷಯದಿಂ

ಪುಷ್ಟರೆನ್ನದೆ ಪೂತಕರ್ಮ

ಭ್ರಷ್ಟರೆನ್ನದೆ ಶ್ರೀದವಿಠಲ ವೇಣುಗೋಪಾಲ

ಕೃಷ್ಣ ಕೈಪಿಡಿವನು ಸುಸತ್ಯ

ವಿಶಿಷ್ಟ ದಾಸತ್ವವನು ಪಾಲಿಸಿ

ನಿಷ್ಠೆಯಿಂದಲಿ ಹರಿಕಥಾಮೃತಸಾರ ಪಠಿಸುವರ//24//