ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕರ್ನಾಟಕ ವಿಶ್ವವಿದ್ಯಾಲಯ

ವಿಕಿಸೋರ್ಸ್ದಿಂದ

ಕರ್ನಾಟಕ ವಿಶ್ವವಿದ್ಯಾಲಯ : ಕರ್ನಾಟಕ ರಾಜ್ಯದ ವಿಶ್ವವಿದ್ಯಾಲಯಗಳಲ್ಲೊಂದು. ಧಾರವಾಡದಲ್ಲಿ ಆಡಳಿತ ಕೇಂದ್ರ ಮತ್ತು ಮುಖ್ಯ ಕಾಲೇಜುಗಳನ್ನು ಹೊಂದಿದೆ. ಧಾರವಾಡ, ಗದಗ, ಹಾವೇರಿ, ಬಾಗಲಕೋಟೆ, ಬೆಳಗಾಂವಿ, ಬಿಜಾಪುರ, ಉತ್ತರ ಕನ್ನಡ ಇದರ ಪ್ರಾದೇಶಿಕ ವ್ಯಾಪ್ತಿಯಲ್ಲಿವೆ. ಈ ವಿಶ್ವವಿದ್ಯಾಲಯ ಮುಂಬಯಿ ರಾಜ್ಯದ ೧೯೪೯ನೆಯ ಕರ್ನಾಟಕ ವಿಶ್ವವಿದ್ಯಾಲಯ ಕಾಯಿದೆ ಪ್ರಕಾರ ೧೯೫೦ ಮಾರ್ಚ್ ೧ರಂದು ಧಾರವಾಡದಲ್ಲಿ ಸ್ಥಾಪಿತವಾಯಿತು. ೧೯೫೬ರಲ್ಲಿ ನೂತನ ಮೈಸೂರು ರಾಜ್ಯದ ಆಡಳಿತದಲ್ಲಿ ಸಮಾವೇಶಗೊಂಡಿತು. ಧಾರವಾಡ, ಬೆಳಗಾಂವಿ, ಬಿಜಾಪುರ ಹಾಗೂ ಉತ್ತರ ಕನ್ನಡ ಜಿಲ್ಲೆಗಳಿಗೆ ಸೀಮಿತವಾಗಿದ್ದ ವಿಶ್ವವಿದ್ಯಾಲಯದ ಕಕ್ಷೆ ೧೯೫೭ರಲ್ಲಿ ಬಿದರೆ, ಗುಲ್ಬರ್ಗ, ರಾಯಚೂರು ಜಿಲ್ಲೆಗಳಿಗೂ ೧೯೬೫ರಲ್ಲಿ ಬಳ್ಳಾರಿ ಜಿಲ್ಲೆಗೂ ವಿಸ್ತರಿಸಿತು. ಪ್ರಾರಂಭವಾದಾಗ ಕೇವಲ ಹನ್ನೊಂದು ಕಾಲೇಜುಗಳನ್ನು ಪಡೆದಿದ್ದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಇಂದು ೧೯ ಸರ್ಕಾರಿ ಕಾಲೇಜುಗಳು, ೧೦೦ ಸರ್ಕಾರಿ ಅನುದಾನಿತ ಕಾಲೇಜುಗಳು, ೧೦೦ ಅನುದಾನ ರಹಿತ ಕಾಲೇಜುಗಳಿವೆ. ಇದಲ್ಲದೆ ೧೮ ಕಾನೂನು ಕಾಲೇಜುಗಳು ಹೆಚ್ಚಿನ ವಿದ್ಯಾರ್ಥಿಗಳನ್ನೂ ಪಡೆದಿವೆ.

ಧಾರವಾಡದಲ್ಲಿ ೩೬೫ ಎಕರೆಗಳ ವಿಸ್ತಾರವಾದ ರಮಣೀಯ ನಿವೇಶನ, ಸುವ್ಯವಸ್ಥಿತವಾದ ರಸ್ತೆಗಳು, ಉದ್ಯಾನಗಳು, ಭವ್ಯವಾದ ಶೈಕ್ಷಣಿಕಸೌಧ, ಆಡಳಿತ ಭವನ, ವಿಶ್ವಚೇತನ, ವಿದ್ಯಾರ್ಥಿನಿಲಯಗಳು, ಅತಿಥಿಭವನ, ಗಾಂಧೀಭವನ ಮುಂತಾದ ಕಟ್ಟಡಗಳು, ಪ್ರಾಧ್ಯಾಪಕರ ಹಾಗೂ ಅಧಿಕಾರಿಗಳ ವಸತಿಗಳು, ಬಾಲೋದ್ಯಾನ, ಕ್ರೀಡಾಂಗಣ, ಈಜುಕೊಳ, ಜಂಖಾನ ಮುಂತಾದವುಗಳಿಂದ ತುಂಬಿದ ವಿಶ್ವವಿದ್ಯಾಲಯದ ಆವರಣ ಅತ್ಯಂತ ಸುಂದರವಾದುದೆಂದು ಪ್ರಸಿದ್ಧವಾಗಿದೆ. ಎತ್ತರದ ಗುಡ್ಡದ ತಪ್ಪಲಿನಲ್ಲಿರುವುದರಿಂದ ಸಮಶೀತೋಷ್ಣ ಹವೆಯನ್ನು ಪಡೆದಿದ್ದು, ಈ ಬಡಾವಣೆಗೆ bsೆÆೕಟಾ ಮಹಾಬಲೇಶ್ವರ ಎಂಬ ಹೆಸರು ಬಂದಿದೆ.

ಸ್ನಾತಕೋತ್ತರ ಶಿಕ್ಷಣ ಹಾಗೂ ಸಂಶೋಧನೆ, ಪೂರಕ ಹಾಗೂ ಸಂಯೋಜಿತ ಕಾಲೇಜುಗಳ ಅಂಗೀಕಾರ ಹಾಗೂ ಶಿಕ್ಷಣ ಆಡಳಿತ, ಪರೀಕ್ಷೆಗಳ ಮೇಲ್ವಿಚಾರಣೆಯ ಕಾರ್ಯ, ಜನಸಾಮಾನ್ಯರಿಗೆ ಜ್ಞಾನಪ್ರಸಾರಮಾಡುವ ವ್ಯಾಸಂಗ ವಿಸ್ತರಣಯೋಜನೆ ಹಾಗೂ ವಿಶೇಷ ತರಬೇತಿ ಕಾರ್ಯಕ್ರಮಗಳ ಮೂಲಕ ಕರ್ನಾಟಕ ವಿಶ್ವವಿದ್ಯಾಲಯ ಈ ಭಾಗದ ಜನತೆಯ ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಚಟುವಟಿಕೆಗಳ ಮಾತೃಸಂಸ್ಥೆಯಾಗಿದೆ.

ಸ್ನಾತಕೋತ್ತರ ಶಿಕ್ಷಣಕ್ಕಾಗಿ ಧಾರವಾಡ, ಬಿಜಾಪುರ ಮತ್ತು ಕಾರವಾರಗಳಲ್ಲಿ ಕೇಂದ್ರಗಳಿವೆ. ಅಲ್ಲದೆ ಇದರ ಪ್ರಾದೇಶಿಕ ವ್ಯಾಪ್ತಿಗೊಳಪಡುವ ಹಲವು ಕಾಲೇಜುಗಳು ಪದವಿ ಪೂರ್ವ ಶಿಕ್ಷಣವನ್ನು ನೀಡುತ್ತಿದ್ದು ವಿಶ್ವವಿದ್ಯಾಲಯ ಪದವಿ ಪರೀಕ್ಷೆಗಳನ್ನೂ ನಡೆಸುತ್ತದೆ. ಕರ್ನಾಟಕ ಆಟ್ರ್ಸ್‌ ಮತ್ತು ಸೈನ್ಸ್‌ ಕಾಲೇಜು, ವಿಶ್ವವಿದ್ಯಾಲಯದ ಲಾ ಕಾಲೇಜು, ವಿಶ್ವವಿದ್ಯಾಲಯದ ಶಿಕ್ಷಣ ಕಾಲೇಜು-ಇವು ವಿಶ್ವವಿದ್ಯಾಲಯದ ಆಂಗಿಕ ಸಂಸ್ಥೆಗಳಾಗಿ ಕಾರ್ಯನಿರ್ವಹಿಸುತ್ತವೆ. ಸ್ನಾತಕೋತ್ತರ ಶಿಕ್ಷಣವನ್ನು ನೆರವೇರಿಸಲು ಕನ್ನಡ,ಇಂಗ್ಲಿಷ್, ಸಂಸ್ಕೃತ, ಭೌತವಿಜ್ಞಾನ, ರಸಾಯನವಿಜ್ಞಾನ, ಭೂಗರ್ಭಶಾಸ್ತ್ರ, ಪ್ರಾಣಿವಿಜ್ಞಾನ, ಸಸ್ಯವಿಜ್ಞಾನ, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ, ತತ್ತ್ವಶಾಸ್ತ್ರ, ವಾಣಿಜ್ಯಶಾಸ್ತ್ರ ಮುಂತಾದ ವಿಭಾಗಗಳನ್ನು ತೆರೆಯಲಾಗಿದೆ. ಈ ಎಲ್ಲ ವಿಭಾಗಗಳಲ್ಲಿ ಎಂ.ಎ. ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವುದರ ಜೊತೆಗೆ, ಸಂಶೋಧನ ಕಾರ್ಯ ವ್ಯವಸ್ಥಿತವಾಗಿ ಸಾಗುತ್ತಿದೆ. ವಿದೇಶಿಯ ಭಾಷಾಭ್ಯಾಸ ವಿಭಾಗದಲ್ಲಿ ಫ್ರೆಂಚ್, ಜರ್ಮನ್ ಮತ್ತು ರಷ್ಯನ್ ಭಾಷೆಗಳ ಅಭ್ಯಾಸಕ್ಕೆ ಅವಕಾಶ ಒದಗಿಸಿದೆ. ಈ ಭಾಷೆಗಳಲ್ಲಿ ಡಿಪ್ಲೊಮ, ಹಾಗೂ ಪದವಿ ಮಟ್ಟದ ಅಭ್ಯಾಸಕ್ಕೆ ವ್ಯವಸ್ಥೆಯಿದೆ. ಪ್ರಾಚೀನ ಭಾರತದ ಇತಿಹಾಸ ಮತ್ತು ಸಂಸ್ಕೃತಿ ವಿಭಾಗದಲ್ಲಿ ಲಿಪಿಶಾಸ್ತ್ರದ ಬಗ್ಗೆ ಒಂದು ಸರ್ಟಿಪಿsಕೇಟ್ ಕೋರ್ಸ್ ನಡೆಸಲಾಗುತ್ತಿದೆ. ಕನ್ನಡ ವಿಭಾಗದಲ್ಲಿ ಭಾಷಾಶಾಸ್ತ್ರ, ಭಾಷಾಂತರ ವಿಷಯಗಳಲ್ಲಿ ಡಿಪ್ಲೊಮ ತರಗತಿಗಳನ್ನು ತೆರೆಯಲಾಗಿದೆ. ಪದವಿ ಹಾಗೂ ಪದವಿಪೂರ್ವ ಶಿಕ್ಷಣಮಟ್ಟದಲ್ಲಿ ಅಪರಾಧಶಾಸ್ತ್ರ ಮತ್ತು ಫೋರೆನ್ಸಿಕ್ ಸೈನ್ಸ್‌ ಅಭ್ಯಾಸದ ವ್ಯವಸ್ಥೆ ಮಾಡಲಾಗಿದೆ. ೧೯೭೦ರಿಂದ ಗುಲ್ಬರ್ಗದಲ್ಲಿ ಸ್ನಾತಕೋತ್ತರ ಶಿಕ್ಷಣ ಕೇಂದ್ರವನ್ನು ತೆರೆಯಲಾಯಿತು. ಈ ಕೇಂದ್ರ ೧೯೮೦ರಲ್ಲಿ ಪ್ರತ್ಯೇಕ ವಿಶ್ವವಿದ್ಯಾಲಯವಾಗಿ ರೂಪುಗೊಂಡಿತು. ಅಖಿಲ ಭಾರತ ಸ್ಪರ್ಧಾತ್ಮಕ ಪರೀಕ್ಷೆಗಳಾದ ಐ.ಎ.ಎಸ್., ಐ.ಪಿ.ಎಸ್., ಐ.ಎಫ್.ಎಸ್.ಗಳಿಗೆ ವಿದ್ಯಾರ್ಥಿಗಳನ್ನು ಸಿದ್ಧಗೊಳಿಸುವ ವ್ಯವಸ್ಥೆ ಸಹ ಧಾರವಾಡದಲ್ಲಿ ಇದೆ. ಅಭ್ಯಾಸ, ಸಂಶೋಧನೆಗಳಿಗಾಗಿ ದೇಶವಿದೇಶದ ವಿಶ್ವವಿದ್ಯಾಲಯಗಳಲ್ಲಿ ಅಧ್ಯಾಪಕ ಹಾಗೂ ಸಂಶೋಧಕರ ವಿನಿಮಯಕ್ಕೆ ವಿಶೇಷ ಅವಕಾಶಗಳಿವೆ. ಶಿಕ್ಷಣವೇತನ, ವಿದ್ಯಾರ್ಥಿವೇತನ ಹಾಗೂ ಪಾರಿತೋಷಿಕಗಳ ವಿಶಿಷ್ಟ ಸೌಕರ್ಯಗಳೂ ಉಂಟು.

ಸ್ವಾತಕೋತ್ತರ ವಿಭಾಗಗಳು ಸಂಶೋಧನೆಯನ್ನೂ ಕೈಗೊಳ್ಳುತ್ತವೆ. ಅಲ್ಲದೆ, ಇತರ ಸಂಸ್ಥೆಗಳು ಮತ್ತು ವಿಶೇಷ ಯೋಜನೆಗಳು ಸಹ ಇವೆ. ಪ್ರಾಚೀನ ಇತಿಹಾಸ, ಭೂಗರ್ಭ ಸಂಶೋಧನೆ ಹಾಗೂ ಗ್ರಂಥ ಪ್ರಕಟನೆಯ ಕಾರ್ಯವನ್ನು ನೆರವೇರಿಸುತ್ತಿರುವ ಕನ್ನಡ ಸಂಶೋಧನ ಸಂಸ್ಥೆ (ನೋಡಿ- ಕನ್ನಡ ಸಂಶೋಧನ ಸಂಸ್ಥೆ) ಇಲ್ಲಿನ ಒಂದು ವಿಶೇಷ. ಈ ಸಂಸ್ಥೆಯಲ್ಲಿ ಒಂದು ವಸ್ತು ಸಂಗ್ರಹಾಲಯವೂ ಇದ್ದು ಬೆಲೆಯುಳ್ಳ ಹಾಗೂ ಮಹತ್ತ್ವದ ಶಿಲ್ಪಕೃತಿಗಳೂ ವರ್ಣಚಿತ್ರಗಳೂ ಹಸ್ತಪ್ರತಿಗಳೂ ಪುರಾತನ ಸಂಸ್ಕೃತಿಯ ಅವಶೇಷಗಳೂ ನಾಣ್ಯಗಳೂ ಇವೆ. ಅಲ್ಲದೆ, ಚಾರಿತ್ರಿಕ ಸ್ಥಳಗಳ ಉತ್ಖನನ ಈ ವಿಭಾಗದ ಒಂದು ವಿಶೇಷ ಕಾರ್ಯಕ್ರಮ. ಇತ್ತೀಚಿನ ಉತ್ಖನನಗಳಿಂದ ಕರ್ನಾಟಕ ಹಾಗೂ ಭಾರತದ ಗತ ಇತಿಹಾಸದ ಮೇಲೆ ವಿಶೇಷ ಬೆಳಕು ಬಿದ್ದಿದೆ. ಅನೇಕ ಶಾಸನ ಸಂಪುಟಗಳನ್ನೂ ಇತಿಹಾಸದ ಗ್ರಂಥಗಳನ್ನೂ ಈ ಸಂಸ್ಥೆ ಪ್ರಕಟಿಸಿದೆ. ಸಮಗ್ರ ವಚನ ವಾಙ್ಮಯ ಸಂಶೋಧನ ಹಾಗೂ ಪ್ರಕಟನೆಯ ಯೋಜನೆಯನ್ನು ಕನ್ನಡ ವಿಭಾಗ ಕೈಗೊಂಡು ಸಾವಿರಾರು ಓಲೆಗ್ರಂಥಗಳನ್ನು ಸಂಗ್ರಹಿಸಿ ಪರಿಷ್ಕರಿಸಿ ಈಗಾಗಲೇ ಗ್ರಂಥಗಳನ್ನು ಪ್ರಕಟಿಸಲಾಗಿದೆ. ಶೂನ್ಯ ಸಂಪಾದನೆ ಎಂಬ ಆಧ್ಯಾತ್ಮಿಕ ಗ್ರಂಥವನ್ನು ಆರು ಸಂಪುಟಗಳಲ್ಲಿ ಇಂಗ್ಲಿಷಿಗೆ ಭಾಷಾಂತರಿಸುವ ಯೋಜನೆ ಮುಕ್ತಾಯ ಘಟ್ಟ ತಲುಪಿದೆ. ಇಷ್ಟಲ್ಲದೆ ಜೈನ ಹಾಗೂ ಬ್ರಾಹ್ಮಣ ಸಾಹಿತ್ಯ ಸಂಶೋಧನ ಕಾರ್ಯವೂ ಕನ್ನಡ ವಿಭಾಗದಲ್ಲಿ ನಡೆಯುತ್ತಿದೆ. ಭಾಷಾವಿಜ್ಞಾನ, ಜಾನಪದ, ತೌಲನಿಕ ತತ್ತ್ವಶಾಸ್ತ್ರಗಳ ಅಧ್ಯಯನ ಈ ವಿಭಾಗದ ಒಂದು ವಿಶೇಷ ಅಂಶವಾಗಿದೆ. ಕನ್ನಡ ವಿಭಾಗವನ್ನು ಆರ್.ಸಿ.ಹಿರೇಮಠ ಕನ್ನಡ ಅಧ್ಯಯನ ಪೀಠವೆಂದು ಕರೆಯಲಾಗಿದೆ.

ವಿಶ್ವವಿದ್ಯಾಲಯ ಸಂಗ್ರಹಿಸಿದ ಹಾಗೂ ಸಂಶೋಧಿಸಿದ ವಿಶೇಷ ಜ್ಞಾನವನ್ನು ಜನಸಾಮಾನ್ಯರಿಗೆ ಮುಟ್ಟಿಸುವ ಕಾರ್ಯ ನೆರವೇರಿಸಲು ವ್ಯಾಸಂಗ ವಿಸ್ತರಣ ವಿಭಾಗವನ್ನು ತೆರೆಯಲಾಗಿದೆ. ಹಳ್ಳಿಗಳಲ್ಲಿ ಉಪನ್ಯಾಸಗಳನ್ನು ಏರ್ಪಡಿಸಿ ಆ ಉಪನ್ಯಾಸಗಳನ್ನು ಕಿರುಹೊತ್ತಗೆಗಳಾಗಿ ಪ್ರಕಟಿಸಲಾಗುತ್ತಿದೆ. ಲಕ್ಷÁಂತರ ಪ್ರತಿಗಳು ಮಾರಾಟವಾಗಿರುವುದು ಈ ಯೋಜನೆಯ ಜನಪ್ರಿಯತೆಯನ್ನು ಸೂಚಿಸುತ್ತದೆ. ಪ್ರೌಢ ವ್ಯಾಸಂಗ ಹಾಗೂ ಸಂಶೋಧನೆಗೆ ನೆರವಾಗಲು ಸಂಶೋಧನ ಗ್ರಂಥಮಾಲೆ, ವಿಶೇಷೋಪನ್ಯಾಸ ಗ್ರಂಥಮಾಲೆ, ಕನ್ನಡ ಕಾವ್ಯಮಾಲೆ, ಅರ್ಥಶಾಸ್ತ್ರ ಗ್ರಂಥಮಾಲೆ ಮುಂತಾದುವುಗಳ ಮೂಲಕ ಕನ್ನಡದಲ್ಲಿ, ಇಂಗ್ಲಿಷಿನಲ್ಲಿ ನೂರಾರು ಸಂಶೋಧನ ಗ್ರಂಥಗಳೂ ಈ ವಿಭಾಗದ ಪ್ರಕಟಣೆಗಳಾಗಿವೆ. ವಿಜ್ಞಾನ, ಮಾನವಿಕ ವಿಜ್ಞಾನ ಹಾಗೂ ಸಾಮಾಜಿಕ ವಿಜ್ಞಾನ ಕ್ಷೇತ್ರದ ಸಂಶೋಧನೆಗಳನ್ನು ಬೆಳಕಿಗೆ ತರುವ ನಿಯತಕಾಲಿಕಗಳನ್ನು ನಡೆಸಿಕೊಂಡು ಬರಲಾಗಿದೆ. ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಗೆ ಮೀಸಲಾದ ಕರ್ನಾಟಕ ಭಾರತಿ (ನೋಡಿ- ಕರ್ನಾಟಕ ಭಾರತಿ) ಎಂಬ ತ್ರೈಮಾಸಿಕವೂ ವಿಶ್ವವಿದ್ಯಾಲಯದ ಬುಲೆಟಿನ್ ಎಂಬ ಮಾಸಿಕ ಪತ್ರಿಕೆಯೂ ಪ್ರಕಟವಾಗುತ್ತಿವೆ.

ದೇಶೀಯ ಭಾಷೆಗಳು ಉನ್ನತ ವ್ಯಾಸಂಗದ ಶಿಕ್ಷಣ ಮಾಧ್ಯಮವಾಗಲು ಬೇಕಾದ ಎಲ್ಲ ಪಠ್ಯ ಹಾಗೂ ಪೂರಕ ಗ್ರಂಥಗಳ ರಚನೆ ಹಾಗೂ ಪ್ರಕಟನ ಕಾರ್ಯ ವಿಶ್ವವಿದ್ಯಾಲಯದ ಪಠ್ಯಪುಸ್ತಕ ಡೈರಕ್ಟೊರೇಟಿನಿಂದ ನೆರವೇರುತ್ತಿದೆ. ಪದವಿ ಹಾಗೂ ಸ್ನಾತಕೋತ್ತರ ತರಗತಿಗಳಿಗೆ ಬೇಕಾಗುವ ಪಠ್ಯಪುಸ್ತಕ, ಪೂರಕ ಗ್ರಂಥ, ಭಾಷಾಂತರ ಕೃತಿಗಳನ್ನು ಪ್ರಕಟಿಸುವ ಯೋಜನೆಯ ಕಾರ್ಯ ಮುಂದುವರಿದಿದೆ. ತಜ್ಞ ಪ್ರಾಧ್ಯಾಪಕರಿಂದ ವಿವಿಧ ವಿಷಯಗಳಲ್ಲಿ ಮೂಲಗ್ರಂಥ ರಚನೆಯ ಹಾಗೂ ತಾಂತ್ರಿಕ ಶಬ್ದಕೋಶಗಳ ರಚನೆಯ ಕಾರ್ಯ ಸಾಗುತ್ತಿದೆ. ಎಂಜಿನಿಯರಿಂಗ್, ಕಾಯಿದೆ ಹಾಗೂ ವೈದ್ಯವಿಷಯಗಳನ್ನು ಜನಪ್ರಿಯಗೊಳಿಸುವ ಸಲುವಾಗಿ ಜನಪ್ರಿಯವಿಜ್ಞಾನ ಗ್ರಂಥಮಾಲೆಯನ್ನು ತೆರೆಯಲಾಗಿದೆ. ಸಂಶೋಧನೆ ಮತ್ತು ಅಧ್ಯಯನಕ್ಕೆ ಸಹಕಾರಿಯಾಗಿ ವಿಶ್ವವಿದ್ಯಾಲಯದ ಗ್ರಂಥಾಲಯವಿದೆ. ಇಲ್ಲಿ ಲಿಂಗ್ವಾಫೋನ್, ಮೈಕ್ರೋ ಪಿsಲ್ಮ್‌, ಮೈಕ್ರೋ ಕಾರ್ಡುಗಳ ವ್ಯವಸ್ಥೆಯಂಥ ವಿಶೇಷ ಸೌಕರ್ಯಗಳಿವೆ.

ಚುನಾಯಿತ ಹಾಗೂ ನೇಮಿತ ಸದಸ್ಯರನ್ನುಳ್ಳ ಸೆನೆಟ್ ಮತ್ತು ಅಕೆಡಮಿಕ್ ಕೌನ್ಸಿಲ್ಗಳ ನಿರ್ದೇಶನದ ಮೇರೆಗೆ, ಈ ಎರಡು ಅಂಗಗಳಿಂದ ಆರಿಸಲ್ಪಟ್ಟ ವಿಶ್ವವಿದ್ಯಾಲಯದ ಪರಮಾಧಿಕಾರಿ ಸಂಸ್ಥೆಯಾದ ಸಿಂಡಿಕೇಟ್ ವ್ಯವಹಾರ ನಡೆಸುತ್ತಿತ್ತು. ಕರ್ನಾಟಕ ವಿಶ್ವವಿದ್ಯಾಲಯ ಅಧಿನಿಯಮಕ್ಕೆ ತಿದ್ದುಪಡಿ ಮಾಡಿರುವುದರಿಂದ ಸೆನೆಟ್ ರದ್ದಾಗಿದೆ. ಶಿಕ್ಷಣ ಮಂಡಳಿಯ ಸ್ವರೂಪ ಬದಲಾಗಿದೆ. ಸಿಂಡಿಕೇಟ್ ಪ್ರಮುಖ ಕಾರ್ಯನೀತಿ ನಿರ್ದೇಶನ ಸಮಿತಿಯಾಗಿದೆ. ಕುಲಾಧಿಪತಿಗಳಿಂದ ನೇಮಕವಾಗುವ ಕುಲಪತಿ, ವಿಶ್ವವಿದ್ಯಾಲಯದ ಸರ್ವೋಚ್ಚ ಕಾರ್ಯ ನಿರ್ವಹಣಾಧಿಕಾರಿ. ವಿಶ್ವವಿದ್ಯಾಲಯದ ಆಡಳಿತದ ಮುಖ್ಯಾಧಿಕಾರಿಯಾದ ಕುಲಸಚಿವರು ತಮ್ಮ ಅಧಿಕಾರದಲ್ಲಿರುವ ಸಹಾಯಕ ಕುಲಸಚಿವರುಗಳ, ಲೆಕ್ಕಪತ್ರಾಧಿಕಾರಿಗಳ, ಆಡಳಿತ ವಿಭಾಗಾಧಿಕಾರಿಗಳ ಸಹಕಾರದಿಂದ ವಿಶ್ವವಿದ್ಯಾಲಯದ ಎಲ್ಲ ಆಡಳಿತವನ್ನೂ ನಿರ್ವಹಿಸುವರು. ಪರೀಕ್ಷÁ ವಿಭಾಗದ ಕಾರ್ಯಗಳನ್ನು ಪರೀಕ್ಷÁ ನಿಯಂತ್ರಣಾಧಿಕಾರಿಗಳು, ತಮ್ಮ ಸಹಾಯಕ ಅಧಿಕಾರಿಗಳ ನೆರವಿನಿಂದ ನೆರವೇರಿಸುವರು. ಸ್ಥಾನಿಕ ಎಂಜಿನಿಯರನ್ನೊಳಗೊಂಡ ಕಟ್ಟಡ ವಿಭಾಗದವರು ವಿಶ್ವವಿದ್ಯಾಲಯದ ಕಟ್ಟಡಗಳ, ರಸ್ತೆಗಳ ನಿರ್ಮಾಣ ಹಾಗೂ ರಕ್ಷಣೆಯ ಕೆಲಸವನ್ನು ನಿರ್ವಹಿಸುವರು. ಉದ್ಯಾನವನ, ಸಸ್ಯಶಾಸ್ತ್ರಕ ಉದ್ಯಾನಗಳ ರಕ್ಷಣೆಯನ್ನು ಉದ್ಯಾನಾಧಿಕಾರಿಗಳೂ ಸಂಶೋಧನ ಸಲಕರಣೆಗಳನ್ನು ಸಿದ್ಧಗೊಳಿಸುವ ಹಾಗೂ ರಿಪೇರಿ ಮಾಡುವ ಕಾರ್ಯಗಳನ್ನು ಕಾರ್ಯಾಗಾರದ ಅಧಿಕಾರಿಗಳೂ ನೋಡಿಕೊಳ್ಳುತ್ತಾರೆ. ವಿದ್ಯಾರ್ಥಿವಿದ್ಯಾರ್ಥಿನಿಯರ ವಸತಿ ಗೃಹಗಳ ಆಡಳಿತ ಹಾಗೂ ಮೇಲ್ವಿಚಾರಣೆಗೆ ವಿಶೇಷಾಧಿಕಾರಿಗಳು ನಿಯಮಿತರಾಗಿದ್ದಾರೆ. ವಿವಿಧ ಕ್ರೀಡೆಗಳು ಹಾಗೂ ಯುವಜನ ಕಾರ್ಯಕ್ರಮ ಹಾಗೂ ಯೋಜನಾಕಾರ್ಯಗಳ ಮೇಲ್ವಿಚಾರಣೆಗೂ ವಿಶೇಷಾಧಿಕಾರಿಗಳು ಇದ್ದಾರೆ.

ಆರ್.ಎ.ಜಹಗೀರ್ದಾರ್, ಸಿ.ಸಿ.ಹುಲಕೋಟಿ, ಡಿ.ಸಿ.ಪಾವಟೆ, ಎ.ಎಸ್.ಅಡಕೆ, ಎಂ.ಜಯಲಕ್ಷ್ಮಮ್ಮಣ್ಣಿ, ಆರ್.ಸಿ.ಹಿರೇಮಠ, ಡಿ.ಎಂ.ನಂಜುಂಡಪ್ಪ, ಎಸ್.ಎಸ್.ಒಡೆಯರ್, ಎ.ಎಂ.ಪಠಾಣ್, ಎಸ್.ರಾಮೇಗೌಡ, ಎಸ್.ಜಿ.ದೇಸಾಯಿ, ಜಿ.ಕೆ.ನಾರಾಯಣರೆಡ್ಡಿ, ಎಂ. ಖಾಜಪೀರ್ ಇವರು ಕ್ರಮವಾಗಿ ಇದರ ಕುಲಪತಿಗಳಾಗಿದ್ದರು. ವಾಲೀಕಾರ್ ಇಂದಿನ ಕುಲಪತಿಗಳು (೨೦೧೨). *