ಪುಟ:ಕರ್ನಾಟಕ ಗತವೈಭವ.djvu/೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೫ನೆಯ ಪ್ರಕರಣ - ಸಾಧನ-ಸಾಮಗ್ರಿ

೩೯


ವಿಚಾರಗಳನ್ನೂ ಪರೀಕ್ಷಿಸಿ, ಅವುಗಳಲ್ಲಿರುವ ಹೊಟ್ಟನ್ನು ಹಾರಹೊಡೆದರೆ, ಒಳಗೆ ಒಂದೆರಡು ಗಟ್ಟಿ ಕಾಳುಗಳು ಹೊರಟೇ ಹೊರಡುವುವು.
ಸಾರಾಂಶ:- ಈ ಸಾಧನ ಸಾಮಗ್ರಿಯನ್ನು ಕೂಡಿಹಾಕುವುದೇ ಇತಿಹಾಸ ಸಂಶೋಧಕರ ಮೊದಲನೆಯ ಕೆಲಸವು. ಈ ಸಾಧನ ಸಾಮಗ್ರಿಯನ್ನಲ್ಲ ಕಲೆ ಹಾಕಿ ಕಡೆದರೆ ಬೆಣ್ಣೆ ಹೊರಡದೇ ಇರುವುದೇ ? ಆದರೆ ಮನೆಯ ಕೆಲಸವನ್ನು ಬದಿಗಿರಿಸಿ, ಇದನ್ನು ಕಣ್ಣೆರೆದು ನೋಡುವರಾರು ! ಇದು ರುಕ್ಷವಾದ ವಿಷಯವೆಂದು ಕಲಿತವರೂ ಇದನ್ನು ಹಳಿಯುತ್ತಾರೆ; ಏಕೆಂದರೆ, ಇದರಿಂದ ಹಣ ಪ್ರಾಪ್ತಿಯಿಲ್ಲ, ಗೌರವ ಪ್ರಾಪ್ತಿಯಿಲ್ಲ, ಅಧಿಕಾರ ಪ್ರಾಪ್ತಿಯಿಲ್ಲ. ಮೇಲಾಗಿ ಶಾಲೆಯಲ್ಲಿ ಈಗ ಕಲಿಯುವ ವಿದ್ಯೆಯು ಇಲ್ಲಿ ಬಹಳಮಟ್ಟಿಗೆ ಉಪಯೋಗವಾಗುವುದಿಲ್ಲ. ಇಷ್ಟೇ ಅಲ್ಲ; ಈಗ ನನಗೆ ಶಾಲೆಯಲ್ಲಿ ಸಿಕ್ಕುವ ವಿದ್ಯೆಯಿಂದ ಸಂಶೋಧನಕ್ಕೆ ದಾರಿಯಾವುದೆಂಬುದೂ ತಿಳಿಯುವುದಿಲ್ಲ. ಈ ಬಗೆಯಾಗಿ ಈ ವಿಷಯವು ರುಕ್ಷವಾಗಿರುವುದಲ್ಲದೆ ಕಠಿಣವೂ ಆಗಿದೆ. ಅನೇಕ ಸಾಮಗ್ರಿಗಳನ್ನು ಓದಿ, ಅಣಿಮಾಡಿಟ್ಟು ಕೊಂಡರೂ ಒಮ್ಮೊಮ್ಮೆ ಇತಿಹಾಸದ ಒಂದು ಕಣವು ಕೂಡ ಕಾಣದೆ ಹೋಗಬಹುದು! ಹೀಗೆ ಎಲ್ಲೆಡೆಯಲ್ಲಿಯೂ ನಿರಾಶೆಯೇ ಬಲಿತುಕೊಂಡಿರುವ ಇಂತಹ ಸ್ಥಿತಿಯಲ್ಲಿ ಕೇವಲ ಸ್ವದೇಶಭಕ್ತಿಯಿಂದ ಪ್ರೇರಿತರಾಗಿ, ಯಾವುದೊಂದು ಮೂರ್ತ ಪರಿಣಾಮವನ್ನು ಪಡೆಯುವವೆಂಬ ಆಶೆ ಹಿಡಿಯದೆ, ದುಡಿಯುವಂತವರೇ ಮೊದಲು ಮುಂದಾಳುಗಳಾಗಿ ಇತಿಹಾಸ ಮಂದಿರಕ್ಕೆ ತಳಹದಿಯನ್ನು ಹಾಕಲಿಕ್ಕೆ ಬೇಕು. ಅದರ ಮೇಲೆ ಕಟ್ಟಡವನ್ನೇರಿಸುವ ಕಾರ್ಯವನ್ನು ಮುಂದೆ ಯಾರಾದರೂ ಕೈಕೊಳ್ಳಬಹುದು. ಈ ತಳಹದಿಯನ್ನು ಹಾಕುವ ಕಾರ್ಯದ ಮಹತ್ವವು ಎಂದರೆ ಸಂಶೋಧನ ಕಾರ್ಯದ ಮಹತ್ವವು ಸಾಮಾನ್ಯ ಜನರಿಗೆ ಬೇಗನೆ ತಿಳಿಯುವುದಿಲ್ಲ ವಾದುದರಿಂದ, ಬಲ್ಲವರು ಅದನ್ನು ತಿಳಿಯ ಹೇಳಿ ಕಾರ್ಯಕ್ಕೆ ಪ್ರಾರಂಭಿಸಬೇಕು. ಈಗಿನ ಸಂಶೋಧಕರ ಅದೃಶ್ಯವಾದ ಅಸ್ತಿವಾರದ ಮೇಲೆಯೇ, ಮುಂದೆ ಭವ್ಯ ವಾಗಿ ಕಾಣಿಸುವ ಸುಂದರವಾದ ಮಂದಿರವು ಕಾಣತಕ್ಕುದಿರುತ್ತದೆ, ಸೇತು ಬಂಧನದ ಕಾರ್ಯವೇನು ಚಿಕ್ಕದೋ? ಆದರೆ ರಾಮಭಕ್ತಿಯಿಂದ ಪ್ರೇರಿತವಾದ ಅಳಿಲುಗಳು ಒಂದೊಂದೇ ಮಳಲ ಕಣವನ್ನು ತಂದುಹಾಕಿ ಆ ಪ್ರಚಂಡ ಕಾರ್ಯಕ್ಕೆ ನೆರವಾಗಲಿಲ್ಲವೆ? ಆ 'ಅಳಿಲು ಭಕ್ತಿ'ಯನ್ನು ನೆನಪಿಗೆ ತಂದು