ಪುಟ:ಕರ್ನಾಟಕ ಗತವೈಭವ.djvu/೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೪೦

ಕರ್ನಾಟಕ ಗತವೈಭವ


ಕೊಂಡು, ಸಾವಿರಾರು ಇತಿಹಾಸ-ಸಂಶೋಧಕರು ನಿರಪೇಕ್ಷ ಬುದ್ಧಿಯಿಂದಲೂ ಯಾವುದೊಂದು ಮೂರ್ತ ಪರಿಣಾಮವನ್ನು ತಾವೇ ನೋಡಬೇಕೆಂದು ಅಪೇಕ್ಷಿಸದೆಯೂ ಹೆಣಗಿದರೆ ಮಾತ್ರ ಭೂತಕಾಲ ಮತ್ತು ವರ್ತಮಾನಕಾಲ ಇವುಗಳ ನಡುವಿನ ಈ ಸೇತುಬಂಧನವು ಸಿದ್ಧವಾಗಿ ಅದರ ಮೇಲಿಂದ ಭವಿಷ್ಯ ಕಾಲಕ್ಕೆ ಹೋಗುವುದಕ್ಕೂ ನಮಗೆ ಮಾರ್ಗವಾಗುವುದು.
ಸಾರಾಂಶ:- ಇತಿಹಾಸ-ಸಂಶೋಧನ ಕಾರ್ಯವು ಅವಸರದಿಂದಾಗತಕ್ಕ ಕಾರ್ಯವಲ್ಲ. ಇದು ಸಾವಧಾನದಿಂದಲೂ, ಪ್ರಯತ್ನ ಸಾತತ್ಯದಿಂದಲೂ, ಕ್ರಮದಿಂದಲೂ ಸಾಧ್ಯವಾಗತಕ್ಕ ಕಾರ್ಯವು. ಹಿಂದೆ ಹೇಳಿದಂತೆ, ಇಲ್ಲಿ ಅಧಿಕಾರ ಲೋಲುಪರಿಗೆ ಆಸ್ಪದವಿಲ್ಲ, ಹಣದಾಶೆಯವರಿಗೆ ಆಸರವಿಲ್ಲ, ಕೀರ್ತಿಕಾಂಕ್ಷಿಗಳಿಗೆ ಇಂಬಿಲ್ಲ; ಇಂಥವರು ಇತ್ತ ಇಣಿಕಿ ಸಹ ನೋಡಕೂಡದು. ಯಾರಿಗೆ ಕರುಳು ಕರಗಿಸಿದರೂ, ನೆತ್ತರೊಣಗಿದರೂ, ಮೈ ಮುರಿದರೂ ಹಿಂಜರಿಯದೆ ದುಡಿಯುವಷ್ಟು ಅಪಾರವಾದ ಉತ್ಸಾಹ ಶಕ್ತಿಯಿರುವುದೋ, ಯಾರು ರಾಷ್ಟ್ರದ ಸೇವೆ ಮಾಡುವವೆಂಬುದೊಂದೇ ಸಂತೋಷದಿಂದ ಕೈಹಾಕುವರೋ ಅವರು ಮಾತ್ರ ಈ ಕ್ಷೇತ್ರದಲ್ಲಿ ಕಾಲಿಡಲು ಅರ್ಹರು. ರಾಷ್ಟ್ರದಲ್ಲಿ ಈಗ ನವಜೀವನವು ಸಂಚರಿಸುತ್ತಿರುವುದರಿಂದ, ಇಂಥ ಸ್ವಾರ್ಥ ತ್ಯಾಗಿಗಳ ಸಂಖ್ಯೆಯು ಕರ್ನಾಟಕದೊಳಗೆ ನೂರ್ಮಡಿಯಾಗಿ ಬೇಗನೆ ಬೆಳೆಯಲೆಂದು ಹರಕೆಯಿಟ್ಟು ಮುಂದೆ ಸಾಗುವೆವು.