ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಂಶುಮಂತ

ವಿಕಿಸೋರ್ಸ್ದಿಂದ

ಅಂಶುಮಂತ[ಸಂಪಾದಿಸಿ]

ಅಯೋಧ್ಯೆಯ ಸಗರ ಚಕ್ರವರ್ತಿಯ ಮೊಮ್ಮಗ. ಸಗರ ಅಶ್ವಮೇಧಯಾಗ ಪ್ರಾರಂಭಿಸಿದಾಗ ಯಾಗಾಶ್ವವನ್ನು ದೇವೇಂದ್ರ ಅಪಹರಿಸಿ ಪಾತಾಳಲೋಕದಲ್ಲಿಟ್ಟನು. ಆ ಅಶ್ವವನ್ನು ತರುವುದಕ್ಕಾಗಿ ಸಗರನ 60,000 ಮಕ್ಕಳು ಪಾತಾಳಕ್ಕೆ ಹೋಗಿ ಅಲ್ಲಿ ಕಪಿಲಮಹರ್ಷಿಯನ್ನು ಕೆಣಕಿ ಅವನ ಕೋಪಾಗ್ನಿಯಲ್ಲಿ ಬೆಂದು ಭಸ್ಮವಾದರು. ಪ್ರಾಜ್ಞನೂ ಸದ್ಗುಣಿಯೂ ಆದ ಅಂಶುಮಂತ ಹೋಗಿ ಆ ಕುದುರೆಯನ್ನು ತಂದು ಯಾಗ ಪುರ್ಣಗೊಳ್ಳುವಂತೆ ಮಾಡಿದ. ಸಗರ ಸ್ವರ್ಗಸ್ಥನಾದ ಮೇಲೆ ಅಂಶುಮಂತ ಪಟ್ಟಾಭಿಷಿಕ್ತನಾದ. ಇವನ ಅನಂತರ ದಿಲೀಪ, ಭಗೀರಥ ಮುಂತಾದವರು ರಾಜ್ಯವನ್ನು ಆಳಿದರು.