ಜಂಗಮಭಕ್ತನು, ಚಿನ್ನದಂತೆ ಕಬ್ಬಿನಂತೆ

ವಿಕಿಸೋರ್ಸ್ದಿಂದ



Pages   (key to Page Status)   


ಜಂಗಮಭಕ್ತನು
ಚಿನ್ನದಂತೆ ಕಬ್ಬಿನಂತೆ ಶ್ರೀಗಂಧದಂತೆ ಇರಬೇಕು. ಅದು ಹೇಂಗೆ ? ಆ ಚಿನ್ನವ ಕಾಸಿದಡೆ ಕರಗಿಸಿದಡೆ ಕಡಿದಡೆ ನಿಗುಚಿದಡೆ ಬಣ್ಣ ಅಧಿಕವಲ್ಲದೆ ಕಿರಿದಾಗದು
ಇವರು ನನ್ನನೇಕೆ ಘಾಸಿ ಮಾಡಿದರೆನ್ನದು. ಆ ಕಬ್ಬ ಕಡಿದಡೆ ಖಂಡಿಸಿದಡೆ ಗಾಣದಲಿಕ್ಕಿ ಹಿಂಡಿ
ಹಿಳಿದು
ಬಂದ ರಸವನಟ್ಟಡೆ
ನಾನಾ ಪ್ರಕಾರದಲ್ಲಿ ಸಾಯಸಗೊಳಿಸಿದಡೆಯೂ ಮಿಗೆ ಮಿಗೆ ಮಧುರವಾಗಿಪ್ಪುದಲ್ಲದೆ ವಿಷವಾಗದು
ನನ್ನನೇಕೆ ನೋಯಿಸಿದರೆಂದೆನ್ನದು. ಆ ಶ್ರೀಗಂಧವು ಕೊರೆದಡೆ ತೇದಡೆ ಹೂಸಿದಡೆ ಬೆಂಕಿಯೊಳಗೆ ಹಾಯಿಕಿದಡೆ ಪರಿಮಳ ಘನವಾಯಿತ್ತಲ್ಲದೆ ದುರ್ಗಂಧವಾಗದು
ತನ್ನಲ್ಲಿ ದುಃಖಗೊಳ್ಳದು. ಈ ತ್ರಿವಿಧದ ಗುಣದ ಪರಿಯಲ್ಲಿ; ಭಕ್ತನು ತನ್ನ ಸುಗುಣವ ಬಿಡದ ಕಾರಣ ಸದ್ಭಕ್ತನಹ ಮಾಹೇಶ್ವರನಹ ಪ್ರಸಾದಿಯಹ ಪ್ರಾಣಲಿಂಗಿಯಹ ಶರಣನಹ ಐಕ್ಯನಹ. ಇಂತು ಷಟ್‍ಸ್ಥಲದಲ್ಲಿ ಸಂಪನ್ನನಹಡೆ ಇಂತಪ್ಪ ಜಂಗಮಭಕ್ತಿಯೆ ಮೂಲವಯ್ಯ ಕೂಡಲಚೆನ್ನಸಂಗಮದೇವಾ