ಮುನ್ನಿನವರು ನಡೆದ ಪರಿಯಲ್ಲಿ

ವಿಕಿಸೋರ್ಸ್ದಿಂದ



Pages   (key to Page Status)   


ಮುನ್ನಿನವರು ನಡೆದ ಪರಿಯಲ್ಲಿ ಇನ್ನು ನಡೆದರಾಗದೆಂಬ ಭಿನ್ನ ನುಡಿಯ ಕೇಳಲಾಗದು
ಹೇಳಲಾಗದು. ಅದೆಂತೆಂದಡೆ: ಶ್ರೀಗುರು ಕಾರುಣ್ಯವಂ ಪಡೆದು ಜ್ಞಾನಪ್ರತಿಷೆ*ಯಂ ತೋರಿದನಾಗಿ ಅನ್ಯಾಯದ ಗೊಡವೆಯಂ ಬಿಟ್ಟು ಚೆನ್ನಾಗಿ ಶಿವಭಕ್ತರಭಾವವ ಲಾಲಿಸಿ ಕೇಳಿಹೆನೆಂದಡೆ ಹೇಳುವೆ ಕೇಳಿರಣ್ಣಾ: ಶಿವಕಾರುಣ್ಯೇನ ಸಾಧ್ಯಾಹಿ ಗಾರುಡಂ ಚಾಷ್ಟಸಿದ್ಧಯಃ ಸ್ವರ್ಗಪಾತಾಳಸಾಧ್ಯಾಸ್ತು ಅಂಜನಂ ಘಟಿಕಾಸ್ತಥಾ ಎಂದುದಾಗಿ ಮಲಗಿದ್ದಲ್ಲಿ ಕನಸ ಕಂಡೆಹೆನೆಂಬರು
ಆ ಜೀವನು ಈ ಕಾಯ ನಾಶವ ಮಾಡಿ
ಆ ದ್ವೀಪಕ್ಕೆ ಹೋಗಿ ಕಂಡುಬಂದಿತ್ತೆ ? ಆ ದ್ವೀಪಕ್ಕೆ ಹೋದವು ಈ ಕಾಲೆ ? ಆ ದ್ವೀಪಕ್ಕೆ ಹೋದವು ಈ ಕಣ್ಣೆ ? ಅದು ಹುಸಿ
ದಿಟವೆಂದಡೆ : ಆ ದ್ವೀಪ ತನ್ನ ಹೃದಯಕಮಲ ಮಧ್ಯದಲುಂಟು
ಮತ್ತು ಸರ್ವಜಗವುಂಟು. ಅದೆಂತೆಂದಡೆ : ನಿದ್ರೆಗೈದಲ್ಲಿ ಕಣ್ಣಿನ ಜ್ಯೋತಿ ಹೃದಯಕಮಲ ಮಧ್ಯಕ್ಕಿಳಿದಲ್ಲಿ ಜ್ಯೋತಿ ಮನ ಒಂದಾಯಿತ್ತು; ಒಂದಾದಲ್ಲಿ ಶಿವನುಂಟು. ಆ ಶಿವನ ಹೃದಯದಲ್ಲಿ ಸಕಲ ಭುವನಾದಿ ಭುವನಂಗಳೆಲ್ಲ ಉಂಟು
ಅಲ್ಲಿ ಈ ವಾಯು ತಿರುಗುತ್ತಿದ್ದುದು
ಅಲ್ಲಿ ಕಂಡುದ ಕನಸೆಂದೆಂಬರು ತಲೆಯೊಳಗಣ ಸಹಸ್ರದಳಕಮಲ ಮಧ್ಯದಲ್ಲಿ ಸಕಲಾತ್ಮನು ಸುಖದಿಂದಿರುತ್ತಿಹನು ಅದೆಂತೆಂದಡೆ: ಅಂತಹ ಆತ್ಮನಿಲ್ಲದಿರ್ದಡೆ ನೀರಬೊಬ್ಬುಳಿಕೆಯ ಕಣ್ಣು ಕಾಣಬಲ್ಲುದೆ ? ಅಂತಹ ಆತ್ಮನಿಲ್ಲದಿರ್ದಡೆ ತೊಗಲ ಛಿದ್ರದ ಕಿವಿಗಳು ಕೇಳಬಲ್ಲುವೆ ? ಅಂತಹ ಆತ್ಮನಿಲ್ಲದಿರ್ದಡೆ ಹಡಿಕೆ ಮಲಿನ ಮೂಗು ಪರಿಮಳಂಗಳ ಕೊಳಬಲ್ಲುದೆ ? ಅಂತಹ ಆತ್ಮನಿಲ್ಲದಿರ್ದಡೆ ಮತಿಯು ಮನದೊಳಗಿರಬಲ್ಲುದೆ ? ಅದು ಹುಸಿ ಎಂದಡೆ
ಅಂಗುಷ್ಟದೊಳಗೆ ವಿಷವುಂಟು; ನಾಭಿಯಲ್ಲಿ ಅಗ್ನಿಯುಂಟು
ಕಂಕುಳಲ್ಲಿ ನಗೆಯುಂಟು
ಕಂಗಳಲ್ಲಿ ದುಃಖವುಂಟು; ಹುಬ್ಬಿನಲ್ಲಿ ಅಮೃತವುಂಟು
ಕೋಪವೆಂಬಾ ಕಿಚ್ಚು ಕೆದರಿ ಅಂಗುಷ್ಟದ ಮೇಲೆ ಬೀಳಲಿಕೆ
ಆ ವಿಷವು ಭುಗಿಲೆಂದೆದ್ದು ಸರ್ವಾಂಗಮಂ ಸುಡುತ್ತ ಬಪ್ಪಲ್ಲಿ ಜ್ಞಾನವೆಂಬ ಜ್ಯೋತಿ ಹೋಗಿ ತಲೆಯೊಳಡಗಿತ್ತು. ಅಂತಹ ಕೋಪವೆಂಬ ಹೊಲೆಯು ಶತಸಹಸ್ರ ಹೊನ್ನ ಕೊಟ್ಟಡೆ ತಿದ್ದುವುದೆ ? ತಿದ್ದದು. ಹಣೆಯ ಅಮೃತ ಬಂದು ಅಂಗುಷ್ಟದ ವಿಷದ ಮೇಲೆ ಬೀಳಲಿಕೆ ಪರುಷ ಬಂದು ಲೋಹಮಂ ಮುಟ್ಟಿದಂತಾಯಿತ್ತು. ಸರ್ವಮಂ ಕೊಂದ ಹಗೆಯಾದಡೆಯೂ ಹೋಹುದು. ಇಂತಪ್ಪ ಸರ್ವಾಂಗಲಿಂಗಾಂಗಿಗಳು ನಿಮ್ಮ ಶರಣರು. ಕೂಡಲಚೆನ್ನಸಂಗಮದೇವಾ