ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಂತರತ್ರಯ

ವಿಕಿಸೋರ್ಸ್ದಿಂದ

ಅಂತರತ್ರಯ[ಸಂಪಾದಿಸಿ]

ಸಾಹಿತ್ಯಕ್ಕೆ ಅನ್ವಯಿಸುವ ಗಂಭೀರವೂ ಅರ್ಥಪುರ್ಣವೂ ವೈವಿಧ್ಯಮಯವೂ ವಿಶಾಲವೂ ಆದ ಈ ತತ್ವವನ್ನು (ದಿ ತ್ರಿ ಡಿಸ್ಟೆನ್ಸಸ್) ಮೂರು ಹಿನ್ನೆಲೆಗಳು ಎನ್ನಬಹುದು; ಮೂರು ಆಳಗಳು, ಮೂರು ವ್ಯಾಪ್ತಿಗಳು ಎಂದರೂ ಸಲ್ಲುತ್ತದೆ. 19ನೆಯ ಶತಮಾನದಲ್ಲಿ ಕಾದಂಬರಿ ತಾನೇ ತಾನಾಗಿತ್ತು; 20ನೆಯ ಶತಮಾನದಲ್ಲಿ ನಾಟಕ ಅದರೊಂದಿಗೆ ಸ್ಪರ್ಧೆ ಹೂಡಿ, ಸ್ವಲ್ಪಮಟ್ಟಿಗೆ ಗಮನೀಯವಾಯಿತು. ಆದರೂ ಕಾದಂಬರಿಯ ಅಧಿಕಾರವಾಗಲಿ ಪ್ರಭಾವವಾಗಲಿ ಶಕ್ತಿಯಾಗಲಿ ಪ್ರಗತಿಯಾಗಲಿ ಕೊಂಚವೂ ಕುಗ್ಗಲಿಲ್ಲ. ಆದರೆ ಕಾದಂಬರಿ ಮೇಲಣ ವಿಮರ್ಶೆ ಅದಕ್ಕೆ ಯುಕ್ತವಾದಷ್ಟು ಬೆಳೆದುಬಂದಿಲ್ಲ; ಆಗಾಗ ಅಲ್ಲಲ್ಲಿ ಅದೊ ಇದೊ ಸೂತ್ರವೊ ಸಿದ್ಧಾಂತವೊ ಎದ್ದುಬಂದು ಕಾದಂಬರಿಯ ಸಂಕೀರ್ಣ ಕಲೆಗಾರಿಕೆಯ ಮೇಲೆ ಬೆಳಕನ್ನು ಚೆಲ್ಲುತ್ತದೆ. ಅಷ್ಟಿಷ್ಟು ಕಥೆಯನ್ನು ನಡೆಸುವ ಪಾತ್ರಗಳಿಗೆ ಸನ್ನಿವೇಶ ಸಾಮಾನು ಸರಂಜಾಮು ಮುಂತಾದ ಭೌತ ಪದಾರ್ಥಗಳು ಬೇಕೇಬೇಕು. ಅವುಗಳನ್ನು ನಿಯಂತ್ರಿಸುವಾಗ ಕಾದಂಬರಿಕಾರ ಒಂದು ಪದಾರ್ಥದಿಂದ ಮೂರು ಸೂಚನೆಗಳನ್ನು ಹಿಂಡಿಕೊಳ್ಳಬಹುದು. ಹಳ್ಳಿಯ ದೇವಾಲಯವನ್ನು ತೆಗೆದುಕೊಳ್ಳೋಣ; ಅದೂ ಅದರ ಸರಹದ್ದೂ ಕಥಾನಾಯಕ ನಾಯಕಿಯರ ಕಾರ್ಯಕ್ಷೇತ್ರವೆನ್ನೋಣ. ಅದು ಮೊದಲನೆಯ ಹಿನ್ನೆಲೆ. ಎರಡನೆಯ ಹಿನ್ನೆಲೆ, ನಾಡಿನ ಇತರ ಪ್ರದೇಶಗಳಲ್ಲಿ ಸ್ಥಾಪಿತವಾಗಿರುವ ದೇವಾಲಯಗಳ ನೆನಪು. ಇನ್ನೂ ಮುಂದೆ ಹೋಗಿ ಲೇಖಕ ಜಗತ್ತಿನ ಇತರ ಭೂಭಾಗಗಳ ದೇವಸ್ಥಾನಗಳೊಡನೆ ಸಾದೃಶ್ಯ-ವೈದೃಶ್ಯಗಳನ್ನು ಸೂಚಿಸಬಹುದು. ಎಂದರೆ ಇಂಥ ಪುಷ್ಟಿಯನ್ನು ಔಚಿತ್ಯ ಭಂಗವಾಗದಂತೆ ಬರಹಕ್ಕೆ ತಂದು ಕೊಡಬೇಕಾದರೆ ಉತ್ಕೃಷ್ಟಪ್ರತಿಭೆ ಲೇಖಕನ ಅಂತರ್ಯದಲ್ಲಿರಬೇಕು.

ಘಟನಾವಳಿಗೂ ಅದೇ ಬಗೆಯ ಹೆಚ್ಚುವರಿಕೆ ಸಾಧ್ಯ. ತಂದೆಗೆ ಎದುರುಬಿದ್ದು, ಬಹಿಷ್ಕೃತನಾಗಿ, ಮಗ ಮನೆಯಿಂದಾಚೆ ಹೋಗುತ್ತಾನೆ ಎನ್ನೋಣ, ಕಾರ್ಯದ ಪ್ರಥಮ ಆಕಾರ ಅದು. ದ್ವಿತೀಯ ಆಕಾರವಾವುದೆಂದರೆ, ದೇಶದ ಇತರ ಕಡೆಗಳಲ್ಲೂ ಕಾಣಬರುವ ಪಿತ-ಪುತ್ರ ವಿವಾದದ ಪರಿಚಯ, ಧರಿತ್ರಿಯನ್ನು ಆಕ್ರಮಿಸಿರುವ ಮಾನವರಲ್ಲಿ ತೋರಿಬರುವ ಜನಕ-ತನೂಜರ ಸಂಬಂಧ ಛಾಯಾಚಿತ್ರವಾಗಿ ಸುಳಿದಾಡಬಹುದು. ತೃತೀಯ ಆಕೃತಿಯಾಗಿ. ಎಲ್ಲಕ್ಕೂ ಮಿಗಿಲಾದ ಅಂಗ ಮನುಜಪಾತ್ರ ವರ್ಗ. ನಾಯಕನೊ ಇತರ ಪಾತ್ರವೊ ಮೊಟ್ಟಮೊದಲಾಗಿ ಅದು ಒಂದು ಊರಿನಲ್ಲಿ, ಒಬ್ಬ ದಂಪತಿಗಳಿಂದ ಜನಿಸಿ, ಒಂದು ನಾಮಧೇಯವನ್ನು ಪಡೆದು, ಬೆಳೆದು, ಒಂದು ವ್ಯಕ್ತಿವರ್ಚಸ್ಸಿನಿಂದ ಶೋಭಿಸುವ ಪುರುಷ. ಇದು ಅದರ ಮೊದಲನೆಯ ಆಳ. ತರುವಾಯ, ಅದರ ವೃತ್ತಿ ಹವ್ಯಾಸ ಆಕಾಂಕ್ಷೆಗಳಿಗೆ ಅನುಗುಣವಾದ ಚಲನೆವಲನೆ, ಮಾತುಗಾರಿಕೆ, ಸ್ವಭಾವ ಪ್ರಕಾಶನವೆಲ್ಲವೂ ಕೂಡಿಕೊಂಡು ಎರಡನೆಯ ಆಳ ಎನ್ನಿಸಿಕೊಳ್ಳುತ್ತದೆ. ಮೂರನೆಯ ಆಳ, ಆ ಪಾತ್ರದ ಅತ್ಯಂತ ಒಳಗಡೆಯಿಂದ ಆಗಾಗ ಇಣುಕಿ ನೋಡುವ ಸಾಮಾನ್ಯ ಮಾನವಧರ್ಮ.

ಕೆಲವು ವಿಮರ್ಶಕರು, ಹಿನ್ನೆಲೆ ವ್ಯಾಪ್ತಿ ಅಥವಾ ಆಳ ಎನ್ನುವುದನ್ನು ಮೂರಕ್ಕೇ ಪರಿಮಿತ ಮಾಡಬೇಕಾದ್ದಿಲ್ಲ, ನಾಲ್ಕನೆಯ ಅತೀವತತ್ವವನ್ನೂ ಒಡಗೂಡಿಸಬೇಕು ಎಂದಿದ್ದಾರೆ. ಅವರ ಅಭಿಮತದಂತೆ, ದೇವಗುಡಿಯ ಕಟ್ಟಡ ಆರಾಧನೆ ಭಕ್ತಿಗಳ ನಾನಾ ರೂಪಗಳನ್ನೂ ಮೀರಿ ಮುಂದೆ ಹೋಗಿ ಮನುಷ್ಯನ ಅಮರವಾದ ಹಂಬಲಿಕೆಗೆ ಸಂಜ್ಞೆಯಾಗಬಹುದು. ಹಾಗೆಯೇ ಒಬ್ಬ ನರನ ಒಂದು ಓಡಾಟ ಇಡೀ ವಿಶ್ವದ ಗಡಿಬಿಡಿಗೆ ಸಾಕ್ಷ್ಯವಾಗಬಹುದು, ಒಬ್ಬ ಪುರುಷ ಸಮಸ್ತ ಮಾನವರ ಪ್ರತಿನಿಧಿಯಾಗಿ ನಿಲ್ಲಬಹುದು.