ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಂಗೋಲ

ವಿಕಿಸೋರ್ಸ್ದಿಂದ

ಅಂಗೋಲ[ಸಂಪಾದಿಸಿ]

ದಕ್ಷಿಣ ಆಫ್ರಿಕದಲ್ಲಿರುವ ಒಂದು ಸ್ವತಂತ್ರ ಗಣರಾಜ್ಯ (ಸ್ವಾತಂತ್ರ್ಯ ಪಡೆದ ದಿನ 11 ನವೆಂಬರ್ 1975). ಸಮಭಾಜಕ ವೃತ್ತದ ದಕ್ಷಿಣಕ್ಕೆ ಕಾಂಗೋ ಮತ್ತು ಕ್ಯೂನೀನ್ ನದಿಗಳ ನಡುವೆ ಇರುವ ಅಟ್ಲಾಂಟಿಕ್ ತೀರಪ್ರದೇಶ; (12º ಮತ್ತು 18º ದಕ್ಷಿಣ ಅಕ್ಷಾಂಶ. 12º 30' ಮತ್ತು 25º ಪೂರ್ವ ರೇಖಾಂಶ) ಈ ದೇಶದ ಪಶ್ಚಿಮದಲ್ಲಿ ದಕ್ಷಿಣ ಅಟ್ಲಾಂಟಿಕ್ ಸಾಗರ, ಉತ್ತರದಲ್ಲಿ ಕಾಂಗೊ, ದಕ್ಷಿಣದಲ್ಲಿ ನಮೀಬಿಯ ಪುರ್ವದಲ್ಲಿ ಕಾಂಗೋ ಮತ್ತು ಜಾಂಬಿóಯ ಗಣರಾಜ್ಯಗಳಿವೆ. ಉತ್ತರ-ದಕ್ಷಿಣವಾಗಿ 1,368 ಕಿಮಿ. ಪುರ್ವ-ಪಶ್ಚಿಮವಾಗಿ 1,287 ಕಿಮಿ. ಇದ್ದು 1,493 ಕಿಮೀ. ಉದ್ದದ ಸಮುದ್ರ ತೀರವಿರುವ ಈ ದೇಶದ ಒಟ್ಟು ವಿಸ್ತೀರ್ಣ 12,46,700 ಚ.ಕಿಮೀ. ಒಟ್ಟು ಜನಸಂಖ್ಯೆ 12,531,357 (2000). ರಾಜಧಾನಿ ಸಾಓ ಪೌಲೋದ ಲುವಾಂಡ; ಜನಸಂಖ್ಯೆ 12,00,000 (2000) ಸಾಕ್ಷರತೆ ಶೇ.67.4 ಭಾಷೆಗಳು ಪೋರ್ಚುಗೀಸ್ ಮತ್ತು ಬಂಟು.

ಅಂಗೋಲವನ್ನು ಎರಡು ಮುಖ್ಯ ವಲಯಗಳನ್ನಾಗಿ ವಿಂಗಡಿಸಬಹುದು : 1. ಕಡಲತೀರ, 2.ಪ್ರಸ್ಥಭೂಮಿ. ತೀರಪ್ರದೇಶ ಹಿತಕರವಾದ ವಾಯುಗುಣವನ್ನು ಹೊಂದಿಲ್ಲ; ಆದರೆ 4000' ದಿಂದ 6000' ಎತ್ತರದ ಪ್ರಸ್ಥಭೂಮಿ ಶ್ವೇತವರ್ಣೀಯರ ವಾಸಕ್ಕೆ ಅನುಕೂಲವಾದ ವಾಯುಗುಣವನ್ನು ಹೊಂದಿದೆ. ತೀರಪ್ರದೇಶದಲ್ಲಿ ಸುಮಾರು 15' ಮಳೆ ಬೀಳುತ್ತದೆ; ಆದರೆ ಒಳ್ಳೆಯ ವಾಯುಗುಣವನ್ನು ಹೊಂದಿರುವ ಪ್ರಸ್ಥಭೂಮಿಯ ಮೇಲೆ ಸುಮಾರು 60 ಮಳೆ. ಇಲ್ಲಿ ಅತ್ಯಂತ ಉಪಯುಕ್ತವಾದ ಮರಗಳಿರುವ ದಟ್ಟವಾದ ಕಾಡುಗಳಿವೆ; ಆದರೆ ಇವುಗಳಿಂದ ಪ್ರಯೋಜನವನ್ನು ಪಡೆಯಲು ಸಾಕಷ್ಟು ಪ್ರಯತ್ನಗಳು ನಡೆದಿಲ್ಲ.

15ನೆಯ ಶತಮಾನದ ಉತ್ತರಾರ್ಧದಲ್ಲಿ ಭಾರತಕ್ಕೆ ಸಮುದ್ರ ಮಾರ್ಗವನ್ನು ಅರಸುತ್ತ ಹೊರಟ ಪೋರ್ಚುಗೀಸ್ ನಾವಿಕರು 1482ರಲ್ಲಿ ಅಂಗೋಲ ತೀರಪ್ರದೇಶವನ್ನು ತಲುಪಿದರು. ಕೊಂಚಕೊಂಚವಾಗಿ ದೇಶದ ಒಳಭಾಗದ ಪರಿಚಯ ಮಾಡಿಕೊಂಡರು. 1575ರಲ್ಲಿ ಪಾವ್ಲೋ ಡಯಸ್ ದ ನೋವೇ ಎಂಬ ಪೋರ್ಚುಗೀಸನು ಅಂಗೋಲಕ್ಕೆ ಹೋಗಿ ಲುವಾಂಡ ನಗರವನ್ನು ಸ್ಥಾಪಿಸಿದನು. ಪೋರ್ಚುಗೀಸರ ಆಕ್ರಮಣ ಹೀಗೆ ಮುಂದುವರಿಯಿತು. 1617ರಲ್ಲಿ ಬೆನ್ಗೂಲ ನಗರ ಸ್ಥಾಪಿತವಾಯಿತು. ಪ್ರಸ್ಥಭೂಮಿ ಪ್ರದೇಶವನ್ನಾಕ್ರಮಿಸಿ ಸ್ವಾಧೀನಕ್ಕೆ ತಂದುಕೊಳ್ಳುವ ಕೆಲಸ ಬಹುಕಾಲ ಹಿಡಿಯಿತು. ಈ ಮಧ್ಯೆ 19ನೆಯ ಶತಮಾನದ 8ನೆಯ ದಶಕದಲ್ಲಿ ಯುರೋಪಿನ ಪ್ರಬಲ ರಾಷ್ಟ್ರಗಳಲ್ಲಿ ಏರ್ಪಟ್ಟಿದ್ದ ಮೇಲಾಟ ಕಚ್ಚಾಟಗಳನ್ನು ನೋಡಿ ಪೋರ್ಚುಗಲ್ ಸರ್ಕಾರ ಅಂಗೋಲದಲ್ಲಿ ತನ್ನ ಸ್ವಾಮ್ಯವನ್ನು ಸ್ಥಿರಪಡಿಸಿಕೊಳ್ಳುವುದಕ್ಕಾಗಿ ಸಾಧ್ಯವಾದಷ್ಟು ಹೆಚ್ಚು ಪ್ರಾಂತಗಳನ್ನು ಆಕ್ರಮಿಸಿಕೊಂಡಿತು. ಈ ಗೊಂದಲದ ಮಧ್ಯೆ ದೇಶದ ಸಂಪನ್ಮೂಲಗಳನ್ನು ಸದುಪಯೋಗಪಡಿಸಿಕೊಳ್ಳುವುದಕ್ಕೆ ಪೋರ್ಚುಗಲ್ ಸರ್ಕಾರಕ್ಕೆ ಸಾಧ್ಯವಾಗಲೇ ಇಲ್ಲ; ಅಲ್ಲದೆ ಸಣ್ಣ ದೇಶವಾದ್ದರಿಂದ ಅದಕ್ಕೆ ಹೆಚ್ಚಾದ ಸೌಕರ್ಯಗಳೂ ಇರಲಿಲ್ಲ. ಆದ್ದರಿಂದ ಅಂಗೋಲದ ದೊಡ್ಡ ದೊಡ್ಡ ಕೈಗಾರಿಕೆ ಮತ್ತು ಇತರ ಉದ್ಯಮಗಳು ಪರಕೀಯರ ಸ್ವಾಧೀನದಲ್ಲಿವೆ. ಇತ್ತೀಚೆಗೆ, ಹೆಚ್ಚಾಗಿ ಸಾಲ್ಸಾóರ್ನ ಆಡಳಿತದಲ್ಲಿ, ಅಂಗೋಲದ ಆರ್ಥಿಕ ಪ್ರಗತಿಯನ್ನು ಕ್ರಮಗೊಳಿಸಿ ದೇಶದ ಪ್ರಗತಿಯನ್ನು ಸಾಧಿಸುವ ಕೆಲಸ ಮಾಡಿತು.

ಅಂಗೋಲದಲ್ಲಿ ಕ್ರಮಬದ್ಧವಾದ ಆಡಳಿತ 1953ರಲ್ಲಿ ಹೊರಡಿಸಿದ ಸಾಗರೋತ್ತರ ಪ್ರಾಂತಗಳ ಶಾಸನ ಮತ್ತು 1955ರ ನಿಬಂಧನೆಗಳಿಗೆ ಅನುಸಾರವಾಗಿ ಪೋರ್ಚುಗಲ್ ಸರ್ಕಾರದಿಂದ ನಿಯಮಿತವಾದ ಒಬ್ಬ ಪ್ರಾಂತಾಧಿಪತಿ (ಗವರ್ನರ್) ಆಡಳಿತವನ್ನು ನಡೆಸುವಂತಾಯಿತು. ಕೇಂದ್ರ ಸರ್ಕಾರದ ಸಾಗರೋತ್ತರ ಪ್ರಾಂತಸಚಿವನಿಗೆ ಈತ ಜವಾಬ್ದಾರ. ಕಾನೂನು ರಚನೆಯಲ್ಲಿ ಆಡಳಿತ ನಿರ್ವಹಣೆಯಲ್ಲಿ, ಈತನಿಗೆ ವ್ಯಾಪಕ ಅಧಿಕಾರವನ್ನು ನೀಡಲಾಗಿತ್ತು. ಅವನಿಗೆ ಸೂಕ್ತ ಸಲಹೆಗಳನ್ನು ಕೊಡುವುದಕ್ಕೆ, 26 ಸದಸ್ಯರನ್ನೊಳಗೊಂಡ ಶಾಸನಸಭೆಯೊಂದಿತ್ತು. ಅದರಲ್ಲಿ 18 ಮಂದಿ ನೇರವಾಗಿಯಾಗಲಿ ಸಂಸ್ಥೆಗಳ ಮೂಲಕವಾಗಲಿ ಚುನಾಯಿತ ಸದಸ್ಯರು. 8 ಮಂದಿ ನಿಯಮಿತ ಸದಸ್ಯರು. ಸಾಮಾನ್ಯ ಸಂದರ್ಭಗಳಲ್ಲಿ ಶಾಸನ ರಚನೆಗೆ ಪ್ರಾಂತಾಧಿಪತಿ ಈ ಸಭೆಯ ಒಪ್ಪಿಗೆ ಪಡೆಯಬೇಕಾಗಿತ್ತು. ದೇಶವನ್ನು 15 ಜಿಲ್ಲೆಗಳಾಗಿ ವಿಭಾಗಿಸಿದ್ದರು; ಪ್ರತಿ ಜಿಲ್ಲೆಯನ್ನೂ ಉಪಜಿಲ್ಲೆಗಳನ್ನಾಗಿಯೂ ಮತ್ತೆ ಇವುಗಳನ್ನು ಪೌರಸಂಸ್ಥೆಗಳನ್ನಾಗಿಯೂ ವಿಂಗಡಿಸಿದ್ದರು.

ಅಂಗೋಲದ ಸ್ವಾತಂತ್ರ್ಯ ಹೋರಾಟ ಬಹಳ ವರ್ಷಗಳ ಕಾಲ ನಡೆದು ಲಕ್ಷಾಂತರ ಮಂದಿಯ ಬಲಿದಾನದೊಂದಿಗೆ ರಕ್ತಪಾತ ನಡೆದು 1975ರಲ್ಲಿ ಸ್ವತಂತ್ರಗೊಂಡಿತು. ಈಗ ಕ್ಷೇಮಾಭಿವೃದ್ಧಿ ಕಾರ್ಯಗಳು ತ್ವರಿತಗತಿಯಿಂದ ಮುಂದುವರಿಯುತ್ತಿರುತ್ತವೆ. ಎಲ್ಲ ಕಡೆ ಹರಡಿದ್ದ ಭಯಂಕರ ನಿದ್ರಾವಾತರೋಗವನ್ನು (ಸ್ಲೀಪಿಂಗ್ ಸಿಕ್ನೆಸ್) ತಡೆಗಟ್ಟಲಾಗಿದೆ. ಸಿಡುಬು, ಕಾಲರ, ಪ್ಲೇಗು ಮುಂತಾದ ರೋಗಗಳನ್ನು ತಡೆಗಟ್ಟಲು ಬೇಕಾದ ಏರ್ಪಾಟುಗಳಾಗಿವೆ. ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು, ಗ್ರಾಮ ಚಿಕಿತ್ಸಾಲಯಗಳು, ಕುಷ್ಠರೋಗಚಿಕಿತ್ಸಾ ಕೇಂದ್ರಗಳು ಇವೆ. ವಿದ್ಯಾಭ್ಯಾಸಕ್ಕೂ ಹೆಚ್ಚು ಹೆಚ್ಚಾಗಿ ಗಮನ ಕೊಡಲಾಗುತ್ತಿದೆ; ದೇಶದ ಆವಶ್ಯಕತೆಗೆ ಬೇಕಾದ, ಕೈಗಾರಿಕೆ ಕಲೆಗಳ ಶಿಕ್ಷಣವೂ ಮುಂದುವರಿಯುತ್ತಿದೆ. 2002ರಲ್ಲಿ ಕೊನೆಗೊಂಡ ಸಿವಿಲ್ ಯುದ್ಧದ ನಂತರ ಅಂಗೋಲ ತನ್ನ ದೇಶವನ್ನು ಪುನರ್ನಿಮಾಣ ಮಾಡುತ್ತಿದೆ.

ಅಂಗೋಲ ಕೃಷಿಪ್ರಧಾನವಾದ ದೇಶ; ಉಷ್ಣವಲಯದ ಬೆಳೆಗಳಿಗೆ ಪ್ರಸ್ಥಭೂಮಿ ಭಾಗದಲ್ಲಿ, ಅವಕಾಶವಿದೆ. ಉಪಯುಕ್ತ ಮರಗಳು, ಕಾಫಿ, ಮುಸುಕಿನ ಜೋಳ, ಕತ್ತಾಳೆ ನಾರು, ಸಕ್ಕರೆ ಮುಂತಾದವು ರಫ್ತಾಗುತ್ತವೆ. ಹತ್ತಿಯನ್ನು ಬೆಳೆದು ಎಲ್ಲವನ್ನೂ ಹೊರದೇಶಗಳಿಗೆ ರಫ್ತು ಮಾಡುತ್ತಾರೆ. ಉತ್ತಮವಾದ ಹುಲ್ಲುಗಾವಲುಗಳಿರುವುದರಿಂದ ದನಕರುಗಳು, ಆಡು, ಮೇಕೆ, ಕುದುರೆ, ಕುರಿ ಮುಂತಾದ ಪ್ರಾಣಿಗಳನ್ನು ಸಾಕುತ್ತಾರೆ. ಇವುಗಳಿಗೆ ಮಾರಕವಾಗಿರುವ ಟ್ಸೆಟ್ಸೆ ಎಂಬ ನೊಣ ಕೆಲವು ಕಡೆ ಇರುವುದರಿಂದ ಅವುಗಳಿಂದಾಗುವ ಹಾನಿ ಹೆಚ್ಚು. ಕಬ್ಬಿಣ ಮತ್ತು ತಾಮ್ರ ಅಧಿಕ ಪ್ರಮಾಣದಲ್ಲಿ ದೊರಕುತ್ತವೆ. ಕಲ್ಲೆಣ್ಣೆ ದೊರಕುತ್ತದೆಂಬುದು 1955ರಲ್ಲಿ ತಿಳಿದುಬಂದು, 1958ರಲ್ಲಿ ಉತ್ಪಾದನೆ ಪ್ರಾರಂಭವಾಯಿತು. ವರ್ಷಕ್ಕೆ ಏಳು ಲಕ್ಷ ಟನ್ಗಳಷ್ಟು ಶುದ್ಧಿ ಮಾಡಿದ ಎಣ್ಣೆ ದೊರಕುತ್ತಿದೆ. ಅಂಗೋಲ ಆಫ್ರಿಕವೇ ಹೆಚ್ಚು ತೈಲೋತ್ಪಾದನೆ ಮಾಡುವ ದೇಶ. ಚಿನ್ನ, ಸೀಸ, ಕಲ್ಲಿದ್ದಲು, ಅಲ್ಲಲ್ಲೇ ದೊರಕುತ್ತವೆ. ಲುಂಡಾ ಎಂಬ ಜಿಲ್ಲೆಯಲ್ಲಿ ವಜ್ರದ ಗಣಿಗಳಿವೆ. ಕೈಗಾರಿಕೋದ್ಯಮಗಳಿಗೆ ಬೇಕಾದ ಅನುಕೂಲತೆಗೆ ಪ್ರಸ್ಥಭೂಮಿ ಪ್ರದೇಶದಲ್ಲಿ ವಿದ್ಯದುತ್ಪಾದನೆ ಭರದಿಂದ ಸಾಗಿದೆ. ಇದು ಪ್ರಾರಂಭವಾದದ್ದು ಇತ್ತೀಚೆಗೆ. ರೈಲ್ವೆ, ಉತ್ತಮ ಭೂಮಾರ್ಗಗಳು ಮತ್ತು ಸಾಧಾರಣ ರಸ್ತೆಗಳಿದ್ದರೂ ದೇಶದ ಕೈಗಾರಿಕೆ ಬೆಳೆಯಬೇಕಾದರೆ ಇನ್ನೂ ಹೆಚ್ಚಿಗೆ ಸಾರಿಗೆ ಸಂಪರ್ಕಾನುಕೂಲಗಳು ಆವಶ್ಯಕ.