ಅಯ್ಯಾ, ಸಾಧಕ ಸಿದ್ಧ
ಗೋಚರ
ಲೇಖಕರು: ಚೆನ್ನಬಸವಣ್ಣ
ಶೀರ್ಷಿಕೆ: vachana saahitya
ವರ್ಷ: 1144-1168 AD
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ಅಯ್ಯಾ
ಸಾಧಕ ಸಿದ್ಧ ಅವತಾರಿಕರೆಂಬ ಗುರುಗಳು ಲೋಕದ ಮಾನವರನುದ್ಧರಿಸುವ ಪರಿ ಎಂತೆಂದಡೆ : ತಾನು ಪರಿಪೂರ್ಣತತ್ವವನರಿವ ಸಾಧನದಲ್ಲಿಹನಾಗಿ ಭವಿಯ ಭವಿತ್ವವ ಕಳೆದು ಭಕ್ತನ ಮಾಡುವ ಸಾಮಥ್ರ್ಯವು ಆ ಸಾಧಕ ಗುರುವಿನಿಂದ ಸಾಧ್ಯವಾಗದು ನೋಡಾ. ಷಟ್ಸ್ಥಲಜ್ಞಾನದಲ್ಲಿ ಸಿದ್ಧನಾದ ಸದ್ಗುರು ತಾನು ನಿತ್ಯನಿರ್ಮಲನಾದಡೆಯೂ ವೀರಶೈವ ಕ್ರಮಾಚರಣೆಯನಾಚರಿಸುತ್ತ
ತನ್ನ ಶಿವಭಕ್ತಿಯ ಶಕ್ತಿಯನ್ನು ಬಿತ್ತರಿಸಲು ಆಕಸ್ಮಾತ್ ತನ್ನ ದಿವ್ಯದೃಷ್ಟಿಯಿಂದ ಪರೀಕ್ಷಿಸಿ ಭವಿಯ ಭವಿತ್ವವ ಕಳೆದು ಭಕ್ತನ ಮಾಡುತ್ತಿಹನು ನೋಡಾ. ಶಿವನು ಮತ್ತು ಶಿವನಾಣತಿಯಂ ಪಡೆದ ಪ್ರಮಥರು ಗುರುರೂಪದಿಂದ ಧರೆಗವತರಿಸಿ ಬಂದು
ಭವಿ-ಭಕ್ತರೆಂಬ ಭೇದವನೆಣಿಸದೆ ಕ್ರಮಾಚಾರಮಂ ಮೀರಿದ ದಿವ್ಯಲೀಲೆಯಿಂದ ತಮ್ಮಡಿಗೆರಗಿದ ನರರೆಲ್ಲರ ಭಕ್ತರ ಮಾಡುತ್ತಿಹರು ನೋಡಾ. ಇದು ಕಾರಣ
ಕೂಡಲಚೆನ್ನಸಂಗಮದೇವನ ಶರಣರು ಈ ಕ್ರಮವನರಿದು ಗುರುಸೇವೆಗೈದರು.